Saturday, February 9, 2013

||ಶ್ರೀ ಗುರು ಚರಿತ್ರೆ - ಎಂಟನೆಯ ಅಧ್ಯಾಯ||

ಸಿದ್ಧರು ಹೇಳಿದ ಗೋಕರ್ಣ ಕ್ಷೇತ್ರದ ಮಹಿಮೆಯನ್ನು ಕೇಳಿದ ನಾಮಧಾರಕ, "ಸ್ವಾಮಿ, ಶ್ರೀಪಾದರು ಗೋಕರ್ಣದಲ್ಲಿ ಎಷ್ಟುಕಾಲ ಇದ್ದರು? ಅವರ ಚರಿತ್ರೆಯನ್ನು ಕೇಳುವುದು ಆನಂದಕರವಾಗಿದೆ." ಎಂದು ಕೇಳಿದನು. ಆಗ ಸಿದ್ಧರು ಮತ್ತೆ ಹೇಳಿದರು.
ಗೋಕರ್ಣ ಕ್ಷೇತ್ರದಲ್ಲಿ ಶ್ರೀಪಾದ ಶ್ರೀವಲ್ಲಭರು ಮೂರು ವರ್ಷಗಳಿದ್ದರು. ಮತ್ತೆ ಲೋಕಾನುಗ್ರಹಕ್ಕಾಗಿ ಅವರು ಅಲ್ಲಿಂದ ಹೊರಟು ಶ್ರೀಶೈಲಕ್ಷೇತ್ರವನ್ನು ಸೇರಿದರು. ಶ್ರೀಪಾದರ ಚರಣ ದರ್ಶನದಿಂದ ಜನಸಾಮಾನ್ಯರಿಗೆ ಸರ್ವತೀರ್ಥ ದರ್ಶನ ಫಲ ದೊರೆಯುತ್ತದೆ. "ಚರಣಂ ಪವಿತ್ರಂ ವಿತತಂ" ಎಂದು ಶೃತಿ ಅವರ ಚರಣ ಮಹಿಮೆಯನ್ನು ವಿವರಿಸುತ್ತದೆ. ಅವರ ಪಾದಗಳಲ್ಲಿ ಸರ್ವ ತೀರ್ಥಗಳೂ ನೆಲೆಸಿವೆ. ಮಹಾತ್ಮರು ಪರ್ಯಟನೆಮಾಡುವುದು ಲೋಕಾನುಗ್ರಹಕ್ಕಾಗಿಯೇ!

ಶ್ರೀಶೈಲ ಪರ್ವತವನ್ನು ಸೇರಿದ ಶ್ರೀಪಾದರು, ಅಲ್ಲಿ ನಾಲ್ಕು ತಿಂಗಳಿದ್ದು, ಭಕ್ತರಿಗೆ ತಮ್ಮ ದರ್ಶನಭಾಗ್ಯವನ್ನೊದಗಿಸಿ, ನಿವೃತ್ತಿಸಂಗಮದಲ್ಲಿ ಸ್ನಾನವಾಚರಿಸಿ ಕುರುಪುರವನ್ನು ಸೇರಿದರು. ಅಲ್ಲಿ ಕೃಷ್ಣಾನದಿ ವೇಣಿನದಿಯೊಡನೆ ಕಲೆತು ಹರಿಯುತ್ತದೆ. ಭೂತಲದಲ್ಲಿ ಅದರಂತಹ ಇನ್ನೊಂದು ಮಹಿಮಾನ್ವಿತ ಪ್ರದೇಶ ದುರ್ಲಭ. ಆ ಮಹಿಮೆಯನ್ನು ವರ್ಣಿಸಬೇಕೆಂದರೆ ಗ್ರಂಥಬಾಹುಳ್ಯವಾಗುತ್ತದೆ. ಅದರಿಂದ ಸ್ವಲ್ಪವಾಗಿ ತಿಳಿಸುತ್ತೇನೆ. ಭೂಮಿಯಮೇಲೆ ಶ್ರೀಪಾದಶ್ರೀವಲ್ಲಭರಿಗೆ ಅಧಿಷ್ಠಾನ ಸ್ಥಾನವಾಗಿ ಖ್ಯಾತಿಗೊಂಡ ’ಕುರುಗಡ್ಡ’ ಎನ್ನುವ ಪ್ರದೇಶ, ಈಗಲೂ ಇದೆ. ಅಲ್ಲಿ ಶ್ರೀಪಾದರನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ ಅರ್ಚಿಸಿ ಭಜಿಸಿದವರು ಪುತ್ರಪೌತ್ರಾದಿಯಾದ ಸಕಲ ಸಂಪತ್ತುಗಳನ್ನು ಪಡೆಯುವರು. ಶ್ರೀಪಾದರ ಮಹಿಮೆ ಅಶೇಷವಾದದ್ದರಿಂದ ಅದನ್ನು ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ. ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ಶ್ರೀಪಾದಶ್ರೀವಲ್ಲಭರು ಕುರುಪುರದಲ್ಲಿ ರಹಸ್ಯವಾಗಿದ್ದುಕೊಂಡು ತಮ್ಮ ಎರಡನೆಯ ಅವತಾರವೆತ್ತಲು ಉದ್ಯುಕ್ತರಾದರು.

ಕುರುಗಡ್ದ ಗ್ರಾಮದಲ್ಲಿ ವೇದಶಾಸ್ತ್ರಪಾರಂಗತನಾದ ಬ್ರಾಹ್ಮಣನೊಬ್ಬನಿದ್ದನು. ಅವನ ಹೆಂಡತಿ ಅಂಬಿಕ. ಪತಿಯೇ ದೈವವೆಂದು ತಿಳಿದ, ಆ ಸದಾಚಾರ ತತ್ಪರಳಾದ ಪತಿವ್ರತೆ, ಸುಶೀಲೆ. ಪತಿಸೇವಾಪರಾಯಣಳು. ಆಕೆಗೆ ಅನೇಕ ಮಕ್ಕಳಾಗಿ ಎಲ್ಲರೂ ಅತ್ಯಲ್ಪ ವಯಸ್ಸಿನಲ್ಲೇ ಮರಣಿಸಿದರು. ಆಕೆ ಅನೇಕ ತೀರ್ಥಗಳನ್ನು ದರ್ಶಿಸುತ್ತಾ, ಅಲ್ಲಿನ ದೇವರುಗಳ ಸೇವೆಮಾಡುತ್ತಾ, ಕೊನೆಗೆ ದೈವ ಕೃಪೆಯಿಂದ ಒಬ್ಬ ಮಗನನ್ನು ಪಡೆದಳು. ದುರದೃಷ್ಟದಿಂದ ಅವನು ಮಂದಮತಿಯಾದನು. ಅನೇಕ ಮಕ್ಕಳನ್ನು ಹೆತ್ತು, ಎಲ್ಲರನ್ನೂ ಕಳೆದುಕೊಂಡು, ಉಳಿದವನು ಇವನೊಬ್ಬನೇ ಎಂಬ ಅತಿಶಯ ಪ್ರೀತಿಯಿಂದ ಅವನನ್ನು ಬೆಳೆಸಿದಳು. ಅವನು ಬೆಳೆದು ಉಪನಯನದ ವಯಸ್ಸು ಬಂತು. ತಂದೆ ಅವನಿಗೆ ಉಪನಯನ ಮಾಡಿದರೂ, ಮೂಢನಾಗಿದ್ದುದರಿಂದ ಅವನಿಗೆ ಉಪದೇಶಮಾಡಿದ ಯಾವ ಮಂತ್ರವೂ ಕೈಗೂಡಲಿಲ್ಲ. ಅದರಿಂದ ಚಿಂತಾಕುಲನಾಗಿ, ಶ್ರೋತ್ರೀಯನಾದ ಅವನ ತಂದೆ ಬಹು ದುಃಖಿತನಾದನು. "ದೈವಾರಾಧನೆಯಿಂದ ಹುಟ್ಟಿದ ಇವನು ಹೀಗೆ ಮತಿಹೀನನಾಗಿ ಕುಲನಾಶಕನಾದನು. ಹಿಂದೆ ಮಾಡಿದ ಕರ್ಮಫಲವು ತಪ್ಪುವುದಿಲ್ಲವಲ್ಲ!" ಎಂದು ಯೋಚಿಸುತ್ತಾ, ಆ ಬ್ರಾಹ್ಮಣ ತನ್ನ ಮಗನನ್ನು ಹೊಡೆಯುತ್ತಿದ್ದನು. ಹಾಗೆ ಹೊಡೆಯುತ್ತಿದ್ದ ಗಂಡನನ್ನು, ದುಃಖಿತಳಾದ ಅಂಬಿಕ ಒಂದುಸಲ ತಡೆದು, "ಸ್ವಾಮಿ, ಅವನನ್ನು ಹೊಡೆಯಬೇಡ. ದಯೆಯಿಂದ ಕಾಣು. ಮಹಾಕಷ್ಟಗಳನ್ನನುಭವಿಸಿದ ನಮಗೆ ಕೊನೆಗೆ ಉಳಿದವನು ಈ ಮಗನೊಬ್ಬನೇ! ಅವನಿಗೆ ವಿದ್ಯೆ ಬರುವುದಿಲ್ಲ. ಹುಟ್ಟಿಸಿದ ಆ ದೈವವೇ ಇವನನ್ನು ಕಾಪಾಡುವುದು. ಅವನ ಹಿಂದಿನ ಕರ್ಮಗಳನ್ನು ನಾವು ಹೇಗೆ ತಪ್ಪಿಸಬಲ್ಲೆವು? ಇಷ್ಟಾದರೂ ನೀನು ಅವನನ್ನು ಹೊಡೆದರೆ ನಾನು ನಿನ್ನ ಮುಂದೆಯೇ ಪ್ರಾಣಕಳೆದುಕೊಳ್ಳುತ್ತೇನೆ" ಎಂದು ನಿಶ್ಚಿತವಾಗಿ ಹೇಳಿದಳು. ಅವಳ ಮಾತುಗಳನ್ನು ಕೇಳಿದ ಆ ಬ್ರಾಹ್ಮಣ, ’ನನ್ನ ಅದೃಷ್ಟವೇ ಹೀನವಾದರೆ ನಾನಾದರೂ ಮಾಡುವುದೇನು? ಆದದ್ದಾಗಲಿ’ ಎಂದು ಉದಾಸೀನನಾಗಿ ಸುಮ್ಮನಾದನು.

ಸ್ವಲ್ಪಕಾಲದಲ್ಲೇ ಆ ಬ್ರಾಹ್ಮಣ, ಆ ದುಃಖದಿಂದಲೇ ಮರಣಿಸಿದನು. ವಿಧವೆಯಾದ ಅಂಬಿಕ ತನ್ನ ಮೂರ್ಖ ಮಗನೊಡನೆ ದುಃಖದಿಂದ ಜೀವಿಸುತ್ತಿದ್ದಳು. ವಿವಾಹವಯಸ್ಕನಾದರೂ ಆ ಮತಿಹೀನನಿಗೆ ಯಾರೂ ಹೆಣ್ಣು ಕೊಡದೆ, "ತಾಯಿ ತಂದ ಭಿಕ್ಷೆ ತಿಂದು ಬದುಕುತ್ತಿದ್ದಾನೆ" ಎಂದು ಹೀಯಾಳಿಸುತ್ತಿದ್ದರು. ಕೆಲವರು ಅವನನ್ನು, " ಮೂರ್ಖ ಶಿಖಾಮಣಿ, ತಲೆಯಮೇಲೆ ಮಡಕೆಯನ್ನಿಟ್ಟುಕೊಂಡು ಮನೆಗಳಿಗೆ ನದಿಯಿಂದ ನೀರು ತಂದುಹಾಕು. ಕಲ್ಲಿನಂತೆ ನಿನ್ನ ಜನ್ಮವೂ ವ್ಯರ್ಥ. ಕುಲಕಂಟಕ. ನಿನ್ನ ಜನ್ಮದಿಂದ ಕುಲಕ್ಕೇ ಕಲಂಕ ತಂದೆ. ನಿನ್ನ ತಂದೆ ಶಾಸ್ತ್ರಜ್ಞನಾಗಿ, ಸದಾಚಾರ ಪ್ರವೃತ್ತನಾಗಿ ಪ್ರಸಿದ್ಧಿಯಾಗಿದ್ದವನು. ನಿನ್ನ ಹುಟ್ಟಿನಿಂದ ಅವನು ಕಲಂಕಿತನಾದನು. ನೀನು ನಿನ್ನ ತಾಯಿ ಭಿಕ್ಷೆ ಬೇಡಿ ತಂದ ಅನ್ನದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೀಯೆ. ನಾಚಿಕೆಯಾಗುವುದಿಲ್ಲವೇ? ನಿನ್ನಿಂದಾಗಿ ನಿನ್ನ ಪಿತೃದೇವತೆಗಳೂ ಅಧೋಗತಿಗೆ ಹೋಗಿದ್ದಾರೆ. ಪಶುಪ್ರಾಯನಾದ ನಿನಗೆ ಈ ವ್ಯರ್ಥಜನ್ಮವೇತಕ್ಕೆ? ಹೋಗಿ ನದಿಯಲ್ಲಿ ಮುಳುಗಿ ಸಾಯಬಾರದೇ? " ಎಂದು ಅನೇಕ ರೀತಿಗಳಲ್ಲಿ ಅವನನ್ನು ನಿಂದಿಸುತ್ತಿದ್ದರು.

ಜನರ ಮಾತುಗಳನ್ನು ಕೇಳಿದ ಅ ಹುಡುಗ ಬಹು ದುಃಖಪಟ್ಟು, "ಅಮ್ಮ, ಎಲ್ಲರೂ ನನ್ನನ್ನು ಮೂರ್ಖ, ಮೂಢ ಎಂದು ಹೀಯಾಳಿಸುತ್ತಿದ್ದಾರೆ. ಇನ್ನು ನಾನು ಅಂತಹ ಮಾತುಗಳನ್ನು ಕೇಳಲಾರೆ. ನನ್ನನ್ನು ಪೋಷಿಸಲು ನೀನು ಕಷ್ಟಪಡುತ್ತಿದ್ದೀಯೆ. ಇಂತಹ ಈ ಜನ್ಮದಿಂದ ಪ್ರಯೋಜನವಾದರೂ ಏನು? ಅದರಿಂದ ನಾನು ಪ್ರಾಣ ಬಿಡಲು ನಿರ್ಧರಿಸಿ ಹೋಗುತ್ತಿದ್ದೇನೆ." ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಅಂಬಿಕ, ಅತಿದುಃಖಿತಳಾಗಿ, ಕಣ್ಣೀರು ಕೋಡಿ ಹರಿಸುತ್ತಾ, ಅವನ ಜೊತೆಯಲ್ಲಿಯೇ ತಾನೂ ಕೃಷ್ಣಾ ನದಿಯಲ್ಲಿ ಮುಳುಗಿ ಸಾಯಲು ಹೊರಟಳು. ಅವರು ನದಿಯ ತೀರಕ್ಕೆ ಬಂದಾಗ, ಅಲ್ಲಿಗೆ ಸರ್ವಾಪತ್ತುಗಳನ್ನು ಹರಿಸುವ, ಸ್ನಾನಕ್ಕೆಂದು ಬಂದ, ಶ್ರೀಪಾದ ಶ್ರೀವಲ್ಲಭರನ್ನು ಕಂಡರು. ಆ ತಾಯಿ, ಮಗ ಇಬ್ಬರೂ ಶ್ರೀಪಾದರನ್ನು ಕಂಡು ಅವರ ಚರಣಗಳಿಗೆ ನಮಸ್ಕರಿಸಿ, "ನಾವು ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ. ನಮಗೆ ನಿಮ್ಮ ಅನುಜ್ಞೆ ಕೊಡಿ. ಆತ್ಮಹತ್ಯೆ ಎನ್ನುವುದು ಮಹಾಪಾಪವಾದದ್ದು. ನಿಮ್ಮ ಅಪ್ಪಣೆ ಬೇಡುತ್ತಿದ್ದೇವೆ. ಅದರಿಂದ ನಮಗೆ ಸದ್ಗತಿಯಾಗುವುದು" ಎಂದು ಬೇಡಿಕೊಂಡರು.

ದಯಾರ್ದ್ರಹೃದಯರಾದ ಶ್ರೀಪಾದರು, ಅವರ ಪ್ರಾರ್ಥನೆಯನ್ನು ಆಲಿಸಿ, " ನಿಮಗೆ ಪ್ರಾಣತ್ಯಾಗ ಮಾಡುವಂತಹ ಆಪತ್ತೇನು ಬಂದಿದೆ?" ಎಂದು ಕೇಳಲು, ಆ ಬ್ರಾಹ್ಮಣ ಸ್ತ್ರೀ, ತಮಗೆ ಉಂಟಾಗಿರುವ ದುಃಖವನ್ನೆಲ್ಲಾ ಅವರೊಡನೆ ಹೇಳಿಕೊಂಡು, "ಹೇ ಭಕ್ತವತ್ಸಲ, ನಮ್ಮನ್ನು ಈ ಕಷ್ಟದಿಂದ ಪಾರುಮಾಡು. ಅನೇಕ ತೀರ್ಥಯಾತ್ರೆಗಳನ್ನೂ, ಉಪವಾಸ ವ್ರತಗಳನ್ನೂ, ದೇವತಾರ್ಚನೆಗಳನ್ನೂ ಮಾಡಿದ ಮೇಲೆ ಹುಟ್ಟಿದ ಈ ಮಗನೊಬ್ಬನು ಬದುಕುಳಿದ. ಆದರೆ ಇವನು ಮಂದಮತಿಯಾಗಿ ಜನರ ನಿಂದೆಗೆ ಗುರಿಯಾಗಿದ್ದಾನೆ. ನನ್ನ ಗಂಡ ವೇದಶಾಸ್ತ್ರಪಾರಂಗತನಾದ ಬ್ರಾಹ್ಮಣೋತ್ತಮನಾಗಿದ್ದವನು. ಆದರೆ ನಮಗೆ ಇಂತಹ ಮೂರ್ಖ ಮಗನಾಗಿ ಹುಟ್ಟಿದ. ಹೇ ಸ್ವಾಮಿ, ಇಂತಹ ಮಗ ಜನ್ಮಜನ್ಮಾಂತರಗಳಲ್ಲೂ ಬೇಡ. ಹಾಗಾಗುವಂತೆ ಏನಾದರೂ ಉಪಾಯವನ್ನು ಸೂಚಿಸು. ಹೇ ದಯಾಸಮುದ್ರ. ದೈನ್ಯಹರ. ನಿಮ್ಮ ಚರಣಗಳಲ್ಲಿ ಬಿದ್ದಿದ್ದೇನೆ. ನನ್ನನ್ನು ಅನುಗ್ರಹಿಸು. ನನ್ನ ಸೌಭಾಗ್ಯದಿಂದಲೇ ನಿಮ್ಮ ದರ್ಶನವಾಯಿತು. ಶರಣಾಗತರನ್ನು ನಿಮ್ಮ ಚರಣಗಳೇ ರಕ್ಷಿಸುತ್ತವೆ. ಈ ಜನ್ಮದಲ್ಲಿ ಹುಟ್ಟಿ ನಾನು ಬಹು ಕಷ್ಟಗಳನ್ನು ಅನುಭವಿಸಿದೆ. ಈ ಮೂರ್ಖನಿಂದ ನನ್ನ ಕಷ್ಟಗಳು ಇನ್ನೂ ಹೆಚ್ಚಿವೆ. ಅಜಾಗಳಸ್ತನನಂತೆ ಇವನು ಇನ್ನೂ ಬದುಕಿದ್ದಾನೆ. ಇವನ ಜನ್ಮ ವ್ಯರ್ಥ. ಗುರುವೇ ನನ್ನ ಬೇಡಿಕೆಯನ್ನು ಕೇಳು. ಮುಂದಿನ ಜನ್ಮದಲ್ಲಾದರೂ ನನಗೆ ನಿನ್ನಂತಹ ಪುತ್ರ ಹುಟ್ಟುವಂತೆ ಆಶೀರ್ವದಿಸು. ಎಲ್ಲರಿಂದ ಪಾದಾಭಿವಂದನೆಗಳನ್ನು ಪಡೆಯುವಂತಹ ಪುತ್ರನಾಗಲೆಂದು ನನ್ನನ್ನು ಹರಸು" ಎಂದು ಆರ್ತಳಾಗಿ ಪ್ರಾರ್ಥಿಸುತ್ತಾ, ಶ್ರೀಪಾದರ ಚರಣಗಳಲ್ಲಿ ಬಿದ್ದಳು. "ಹೇ ಕರುಣಾಸಿಂಧು, ಮುಂದಿನ ಜನ್ಮದಲ್ಲಿ ನನಗಾಗುವ ಪುತ್ರನಿಂದ ನಮಗೆ ಜನ್ಮರಾಹಿತ್ಯವೂ, ಅವನ ಪಿತೃದೇವತೆಗಳಿಗೆ ಶಾಶ್ವತ ಸ್ವರ್ಗಲೋಕ ವಾಸವೂ, ಆಗುವಂತೆ ಅನುಗ್ರಹಿಸು" ಎಂದು ಮತ್ತೆ ಮತ್ತೆ ಬೇಡಿಕೊಂಡಳು. "ಯುವಕನಾಗಿರುವಾಗಲೇ ಅವನು ಬ್ರಹ್ಮಜ್ಞಾನಿಯಾಗಿ, ನಿಮ್ಮಂತೆ ಸರ್ವತ್ರ ಪೂಜನೀಯನಾಗುವ ಪುತ್ರನನ್ನು ಪ್ರಸಾದಿಸು" ಎಂದು ಇನ್ನೊಮ್ಮೆ ಕೇಳಿಕೊಂಡಳು. ಆ ಸ್ತ್ರೀಯ ಮಾತನ್ನು ಕೇಳಿದ ಶ್ರೀಪಾದರು, "ಈಶ್ವರಾರಾಧನೆ ಮಾಡು. ಶ್ರೀಹರಿಯಂತಹ ಪುತ್ರ ನಿನಗೆ ಜನಿಸುತ್ತಾನೆ. ಹಿಂದೆ ಗೋಪಿಕಾವ್ರತ ಮಾಡಿದ್ದರಿಂದಲೇ ಗೋಪಗೃಹದಲ್ಲಿ ಕೃಷ್ಣನು ದಯಾಕರಿಸಿದನು. ಹಾಗೆ ನೀನು ಶಿವಾರಾಧನೆ ಮಾಡುವುದರಿಂದ ನಿನಗೆ ಸುಪುತ್ರನು ಜನಿಸುತ್ತಾನೆ. ನಿನ್ನ ಮುಂದಿನ ಜನ್ಮದಲ್ಲಿ ಶಿವಪ್ರಸಾದದಿಂದ ಪ್ರಾಜ್ಞನಾದ ಪುತ್ರನಾಗುತ್ತಾನೆ" ಎಂದು ಅಭಯಕೊಟ್ಟರು.

ಶ್ರೀಪಾದರ ಆದೇಶವನ್ನು ಕೇಳಿದ ಆ ಬ್ರಾಹ್ಮಣ ಸ್ತ್ರೀ, "ಸ್ವಾಮಿ, ಗೋಪಿಕ ಯಾವ ವ್ರತವನ್ನು ಆಚರಿಸಿದಳು. ಚಂದ್ರಮೌಳಿಯನ್ನು ಹೇಗೆ ಪೂಜಿಸಿದಳು ಎಂಬುದನ್ನು ವಿವರಿಸಿ ಹೇಳಿ. ಅದರಂತೆ ನಾನು ವ್ರತಾಚರಣೆ ಮಾಡುತ್ತೇನೆ" ಎಂದು ಪ್ರಾರ್ಥಿಸಿದಳು. ಅದಕ್ಕೆ ಆ ಕೃಪಾಮೂರ್ತಿ ಶ್ರೀಪಾದರು, "ಶನಿವಾರದಂದು ಭಕ್ತಿಪುರಸ್ಸರವಾಗಿಮಾಡುತ್ತಿದ್ದ ಪೂಜೆಯನ್ನು ಗೋಪಿಕೆ ವೀಕ್ಷಿಸಿದಳು" ಎಂದು ಸ್ಕಾಂದಪುರಾಣದಲ್ಲಿ ಸ್ಪಷ್ಟವಾಗಿ ಹೇಳಿರುವ ಸಗುಣರೂಪನಾದ ಶಿವನ ಕಥೆಯನ್ನು ಅಂಬಿಕೆಗೆ ಹೇಳಿದರು. ಶ್ರೀಗುರುವಿನ ಮಾತುಗಳನ್ನು ಕೇಳಿ ಸಂತುಷ್ಟಳಾದ ಅಂಬಿಕ ಗುರುಚರಣಗಳಿಗೆ ನಮಸ್ಕರಿಸಿ, "ಹೇ ಗುರುವೇ, ರಮ್ಯವಾದ ಕಥೆಯನ್ನು ಹೇಳಿದಿರಿ. ಪ್ರದೋಷಸಮಯದಲ್ಲಿ ಈಶ್ವರಾರ್ಚನೆಯನ್ನು ನೋಡಿದ ಮಾತ್ರಕ್ಕೇ ಕೃಷ್ಣನನ್ನು ಮಗನಾಗಿ ಪಡೆದ ಗೋಪಿಯ ಜನ್ಮ ಧನ್ಯ. ಅಂತಹ ಶಿವಪೂಜಾ ವಿಶೇಷಗಳನ್ನು ತಿಳಿಸಿ" ಎಂದು ಮತ್ತೆ ಕೇಳಿಕೊಂಡಳು. ಶ್ರೀಪಾದರು ಹೇಳಿದರು. "ಅದೂ ಸ್ಕಾಂದಪುರಾಣದಲ್ಲಿರುವ ಕಥೆಯೇ! ಉಜ್ಜಯಿನಿ ಎಂಬ ಸುಂದರವಾದ ನಗರವೊಂದಿತ್ತು. ಅಲ್ಲಿ ಬಹು ಧಾರ್ಮಿಕನಾದ ಚಿತ್ರಸೇನನೆಂಬುವ ರಾಜನಿದ್ದನು. ಅವನಿಗೆ ಮಣಿಭದ್ರನೆಂಬ, ಈಶ್ವರ ಭಕ್ತಿಸಂಪನ್ನನಾದ ಮಿತ್ರನಿದ್ದನು. ಮಣಿಭದ್ರ ಈಶ್ವರ ಪೂಜಾಪರಾಯಣನು. ಶಿವನನ್ನು ಪ್ರಸನ್ನಮಾಡಿಕೊಂಡ ಅವನಿಗೆ ಈಶ್ವರ, ಚಿಂತಾಮಣಿಯೆಂಬ ರತ್ನವೊಂದನ್ನು ಕೊಟ್ಟಿದ್ದನು. ಆ ಮಣಿ, ಕೋಟಿಸೂರ್ಯಪ್ರಭೆಯಿಂದ ಮೆರೆಯುತ್ತಿತ್ತು. ಮಣಿಭದ್ರನು ಅದನ್ನು ಸದಾಕಾಲ ಧರಿಸಿರುತ್ತಿದ್ದನು. ಅ ಮಣಿಯ ತೇಜಸ್ಸು ತಗುಲಿದ ಲೋಹಗಳು ಚಿನ್ನವಾಗಿ ಪರಿವರ್ತಿತವಾಗುತ್ತಿದ್ದವು. ಆ ಮಣಿಯನ್ನು ಹಿಡಿದು ಸ್ಮರಿಸಿದ ಮಾತ್ರಕ್ಕೇ ಕೋರಿದವರಿಗೆ ಕೋರಿದ ವಸ್ತು ದೊರೆಯುತ್ತಿತ್ತು. ಆ ಮಣಿಯ ಖ್ಯಾತಿಯನ್ನು ಕೇಳಿದ ಅನೇಕ ರಾಜಮಹಾರಾಜರು ಅದನ್ನು ಪಡೆಯಬೇಕೆಂಬ ಆಸೆಯಿಂದ ಬಲಾನ್ವಿತರಾಗಿ ಉಜ್ಜಯನಿಯನ್ನು ಸುತ್ತುಗಟ್ಟಿದರು. ಒಂದು ತ್ರಯೋದಶಿ ಶನಿವಾರ ಪ್ರದೋಷದಲ್ಲಿ ರಾಜನು ಶಾಸ್ತ್ರೋಕ್ತವಾಗಿ ಶಿವಪೂಜೆಮಾಡಲು ಕುಳಿತಿದ್ದನು. ಅವನು ಪೂಜೆ ಮಾಡುತ್ತಿದ್ದ ಸಮಯದಲ್ಲಿ ಕೆಲವರು ಗೋಪಬಾಲಕರು ಅಲ್ಲಿಗೆ ಬಂದು ರಾಜನ ಪೂಜಾವಿಧಾನವನ್ನು ನೋಡಿದರು. ತಾವೂ ಲಿಂಗಪೂಜೆ ಮಾಡಬೇಕೆಂಬ ಮನಸ್ಸಿನಿಂದ, ತಮ್ಮ ತಮ್ಮ ಮನೆಗಳಿಗೆ ಹೋಗಿ ಅಲ್ಲಿ ಲಿಂಗವೊಂದನ್ನು ಮಾಡಿ, ಅದನ್ನು ಭಕ್ತಿಶ್ರದ್ಧೆಗಳಿಂದ, ತಮಗೆ ದೊರೆತ ಪತ್ರಪುಷ್ಪಗಳನ್ನು ತಂದು ಕಲ್ಪಿತೋಪಚಾರಗಳಿಂದ ಅರ್ಚಿಸಿದರು. ಅವರು ಪೂಜೆ ಮಾಡುತ್ತಿದ್ದ ಸಮಯದಲ್ಲಿ, ಗೋಪಸ್ತ್ರೀಯರು ಅಲ್ಲಿಗೆ ಬಂದು ತಮ್ಮ ಮಕ್ಕಳನ್ನು ಊಟಕ್ಕೆಂದು ಕರೆದುಕೊಂಡು ಹೋದರು. ಒಬ್ಬ ಹುಡುಗ ಮಾತ್ರ ಪೂಜೆಯಲ್ಲಿ ಬಹಳ ಆಸಕ್ತನಾಗಿ ಮನೆಗೆ ಹೋಗಲು ಇಷ್ಟಪಡಲಿಲ್ಲ. ಅವನ ತಾಯಿ ಅವನನ್ನು ಹೊಡೆಯುತ್ತಾ, "ಇದು ಊಟದ ಸಮಯ. ರಾತ್ರಿ ಕತ್ತಲಿನಲ್ಲಿ ನೀನೇನು ಮಾಡುತ್ತಿದ್ದೀಯೆ?" ಎಂದು ಕೇಳಲು, ಆ ಹುಡುಗ ಏನೂ ಉತ್ತರ ಕೊಡಲಿಲ್ಲ. ಅದರಿಂದ ಕೋಪಗೊಂಡ ಗೋಪಿಕ, ಅಲ್ಲಿ ನಡೆಯುತ್ತಿದ್ದ ಪೂಜೆಯನ್ನೆಲ್ಲಾ ಹಾಳುಮಾಡಿ ಆ ಲಿಂಗವನ್ನು ತೆಗೆದು ಬಿಸುಟು, ಮನೆಗೆ ಹೊರಟು ಹೋದಳು. ತನ್ನ ಪೂಜೆ ಹಾಳಾಗಿದ್ದಕ್ಕೆ ಬಹಳ ದುಃಖಿತನಾಗಿ, ಮನಸ್ಸಿನಲ್ಲೇ ಲಿಂಗ ಧ್ಯಾನವನ್ನು ಮಾಡುತ್ತಾ ಪ್ರಾಣ ಬಿಡಲು ಉದ್ಯುಕ್ತನಾದ ಆ ಹುಡುಗನಿಗೆ ಸದಾಶಿವನು ಪ್ರತ್ಯಕ್ಷನಾದನು.

ಆ ಪೂಜಾಸ್ಥಳವೇ ಶಿವಾಲಯವಾಯಿತು. ಅ ಲಿಂಗ ರತ್ನಮಯವಾಗಿ, ಸೂರ್ಯತೇಜಸ್ಸನ್ನು ಪಡೆದು ಪ್ರಕಾಶಿಸಿತು. ಎಚ್ಚೆತ್ತ ಬಾಲಕನನ್ನು ಪಾರ್ವತಿಪತಿಯು ಮೇಲೆತ್ತಿ, "ನಿನ್ನ ಅಭೀಷ್ಟವೇನು ಕೇಳಿಕೋ" ಎಂದನು. ಅದಕ್ಕೆ ಆ ಬಾಲಕ, "ಶಂಭೋ, ನನ್ನ ತಾಯಿ ಪೂಜೆಯನ್ನು ಹಾಳುಮಾಡಿದಳು. ಅವಳನ್ನು ಕ್ಷಮಿಸಿ ದಯೆತೋರು" ಎಂದು ಕೇಳಲು, ದಯಾಮೂರ್ತಿಯಾದ ಆ ಸಾಂಬಶಿವನು ಪ್ರೀತಿಯಿಂದ, "ಪ್ರದೋಷ ಸಮಯದಲ್ಲಿ ಅವಳು ನನ್ನ ಪೂಜೆಯನ್ನು ನೋಡಿದ್ದಾಳೆ. ಆದ್ದರಿಂದ ಅವಳು ದೇವಮಾತೆಯಾಗುತ್ತಾಳೆ. ಜನ್ಮಾಂತರದಲ್ಲಿ ಆಕೆಗೆ ವಿಷ್ಣುವು ಕುಮಾರನಾಗಿ, ಕೃಷ್ಣನಾಗಿ, ಬರುತ್ತಾನೆ" ಎಂದು ಹೇಳಿ, ಮತ್ತೆ "ಹೇ ಬಾಲಕ ನೀನು ಕೋರಿದ್ದೆಲ್ಲವೂ ನಿನಗೆ ಲಭಿಸುತ್ತದೆ. ಸರ್ವ ಸುಖಗಳನ್ನೂ ಅನುಭವಿಸುತ್ತೀಯೆ. ನಿನ್ನ ವಂಶವೆಲ್ಲವೂ ನಿನ್ನಂತೆಯೇ ಆಗುತ್ತದೆ" ಎಂದು ಆ ಬಾಲಕನಿಗೆ ವರಗಳನ್ನನುಗ್ರಹಿಸಿ ಅವನು ತನ್ನ ಚರಣಗಳಲ್ಲಿ ನಮಸ್ಕರಿಸುತ್ತಿದ್ದಂತೆಯೇ ಅಂತರ್ಧಾನನಾದನು.

ಆ ಬಾಲನು ಸ್ಥಾಪಿಸಿದ್ದ ಲಿಂಗವು ರತ್ನಮಯವಾಗಿ ಕೋಟಿಸೂರ್ಯಪ್ರಭೆಯಿಂದ ಬೆಳಗುತ್ತಿತ್ತು. ಜನರೆಲ್ಲರೂ ಅಲ್ಲಿ ಸೂರ್ಯನೇ ಉದಯಿಸಿದ್ದಾನೆ ಎಂದುಕೊಂಡರು. ಯುದ್ಧಸಿದ್ಧರಾಗಿ ಬಂದಿದ್ದ ರಾಜರೆಲ್ಲರೂ, ಸಂದೇಹಗ್ರಸ್ತರಾಗಿ, "ಇಲ್ಲಿನ ರಾಜ ಪವಿತ್ರನು. ಈ ನಗರದಲ್ಲಿ ರಾತ್ರಿವೇಳೆಯೂ ಸೂರ್ಯ ಉದಯಿಸುತ್ತಾನೆ. ಇಂತಹ ರಾಜನ ಮೇಲೆ ದ್ವೇಷದಿಂದ ಯುದ್ಧಮಾಡುವುದು ತರವಲ್ಲ. ಅವನೊಡನೆ ದ್ವೇಷ ಮಾಡಬಾರದು. ಬದಲಾಗಿ ಅವನಲ್ಲಿ ಸ್ನೇಹವಿರಬೇಕು" ಎಂದು ಯೋಚಿಸುತ್ತಾ ಅವರೆಲ್ಲರೂ ರಾಜನನ್ನು ಕಾಣಲು ಹೋಗಿ, ರಾಜನ ದರ್ಶನ ಮಾಡಲು ಬಂದೆವೆಂದು ಹೇಳಿಕಳುಹಿಸಿದರು. ಅದರಿಂದ ಸಂತೋಷಗೊಂಡ ರಾಜನು ತಾನೇ ಸ್ವತಃ ಬಂದು ಅವರೆಲ್ಲರನ್ನೂ ಒಳಕ್ಕೆ ಕರೆದೊಯ್ದನು. ಅವರು ಆ ರಾಜನನ್ನು, "ನಿಮ್ಮ ರಾಜ್ಯದಲ್ಲಿ ರಾತ್ರಿಯೂ ಸೂರ್ಯ ಹೇಗೆ ಉದಯಿಸುತ್ತಾನೆ?" ಎಂದು ಕೇಳಲಾಗಿ, ರಾಜನು ಆಶ್ಚರ್ಯಗೊಂಡು, ಅವರೊಡನೆ ರತ್ನಮಯವಾಗಿದ್ದ ಲಿಂಗವಿದ್ದ ಶಿವಾಲಯಕ್ಕೆ ಹೋದನು. ಅಲ್ಲಿದ್ದ ಹುಡುಗನಿಂದ ನಡೆದ ಕಥೆಯನ್ನೆಲ್ಲ ಕೇಳಿ, ಬಹು ಸಂತೋಷಪಟ್ಟು, ಅ ಹುಡುಗನಿಗೆ ಗೋಪಾಲಕ ಆಧಿಪತ್ಯವನ್ನೂ, ಸಂಪತ್ತನ್ನೂ ಕೊಟ್ಟರು. ನಂತರ ಅಲ್ಲಿಗೆ ಬಂದು ಸೇರಿದ್ದ ರಾಜರೆಲ್ಲರೂ ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದರು. ಆ ರೀತಿಯಲ್ಲಿ ಚಿತ್ರಸೇನನಿಗೆ ಬಂದಿದ್ದ ಯುದ್ಧದ ಭಯ ನಿವಾರಣೆಯಾಯಿತು.

ಶನಿಪ್ರದೋಷ ವೇಳೆಯಲ್ಲಿ ಮಾಡಿದ ಶಿವಪೂಜಾ ಫಲವಂತಹುದು. ಶಿವಾರಾಧಕನಾದ ಆ ಬಾಲಕ ತನ್ನ ಮನೆಗೆ ಹಿಂತಿರುಗಿ, "ಪ್ರದೋಷ ಸಮಯದಲ್ಲಿ ನೀನು ಶಿವನ ಪೂಜೆಯನ್ನು ನೋಡಿದ್ದರಿಂದ ಶಿವನು ನಿನ್ನಲ್ಲಿ ಪ್ರಸನ್ನನಾದನು. ಸಂತುಷ್ಟನಾದ ಸದಾಶಿವನು, ಜನ್ಮಾಂತರದಲ್ಲಿ ನೀನು ವಿಷ್ಣುವಿಗೆ ತಾಯಿಯಾಗುತ್ತೀಯೆ, ಎಂಬ ವರವನ್ನು ನಿನಗೆ ದಯಪಾಲಿಸಿದನು. ಶಿವಪೂಜೆಗೆ ಅಡ್ಡಮಾಡಿದ ನಿನ್ನನ್ನು ಕ್ಷಮಿಸುವಂತೆ ನಾನು ಶಿವನನ್ನು ಬೇಡಿಕೊಂಡೆನು. ಆ ಪರಮೇಶ್ವರನು ನಿನ್ನನ್ನು ಕ್ಷಮಿಸಿ, ನನಗೂ ವರಗಳನ್ನು ಕೊಟ್ಟನು" ಎಂದು ತನ್ನ ತಾಯಿಗೆ ನಡೆದ ವೃತ್ತಾಂತವೆಲ್ಲವನ್ನೂ ಹೇಳಿದನು. ಈಶ್ವರನು ಪ್ರಸನ್ನನಾದರೆ ಯಾರಿಗೆ ಯಾವುದು ದುರ್ಲಭ? 

"ಅಂಬಿಕ, ನಿನ್ನ ಮನಸ್ಸಿನಲ್ಲಿ ಸತ್ಪುತ್ರನಾಗಬೇಕೆಂಬ ಆಸೆಯಿದೆ. ಆದ್ದರಿಂದ ನೀನು ಪ್ರದೋಷ ಸಮಯದಲ್ಲಿ ಶಿವನ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಮಾಡು. ನಿಶ್ಚಯವಾಗಿಯೂ ನಿನಗೆ ಜನ್ಮಾಂತರದಲ್ಲಿ ನನ್ನಂತಹ ಪುತ್ರನೇ ಜನಿಸುತ್ತಾನೆ" ಎಂದು ಶ್ರೀಪಾದರು ಅಂಬಿಕೆಗೆ ಅಭಯ ಕೊಟ್ಟರು. ಆದರೂ ಅವಳ ದುಃಖ ತೀರಲಿಲ್ಲವೆಂಬುದನ್ನು ಗಮನಿಸಿದ ಭಕ್ತವತ್ಸಲನಾದ ಶ್ರೀಗುರುವು, ಅವಳ ಮಗನನ್ನು ಕರೆದು, ಅವನ ತಲೆಯಮೇಲೆ ಕೈಯಿಟ್ಟು ಅವನನ್ನು ಆಶೀರ್ವದಿಸಿದರು. ತಕ್ಷಣವೇ ಆ ಹುಡುಗ ಜ್ಞಾನಿಯಾಗಿ, ಮೂರುವೇದಗಳನ್ನು ಬಲ್ಲವನಾದನು. ಅಲ್ಲಿಯವರೆಗೂ ಮತಿಹೀನನಾಗಿದ್ದ ಅವನು ಆ ಕ್ಷಣದಲ್ಲಿ ವೇದಶಾಸ್ತ್ರಪಾರಂಗತನಾಗಿ, ವೇದಪಠನ ಮಾಡುವುದನ್ನು ಕಂಡ ಆ ತಾಯಿ, ಆಶ್ಚರ್ಯಚಕಿತಳಾದಳು.

ಅದರಿಂದಲೇ ಶ್ರೀಪಾದರು ನಿಸ್ಸಂದೇಹವಾಗಿ ಈಶ್ವರನೇ! ಲೋಕ ಕಾರ್ಯಾರ್ಥವಾಗಿ ಮಾನವರೂಪದಲ್ಲಿ ಅವತರಿಸಿದ್ದಾರೆ. ತನ್ನ ಪೂರ್ವಕೃತ ಪುಣ್ಯಫಲವಾಗಿ ಅಂಬಿಕ, ಆ ಗುರುನಾಥನನ್ನು ಕಾಣಬಲ್ಲವಳಾದೆನೆಂದು ಅತ್ಯಂತ ಸಂತೋಷಪಟ್ಟವಳಾಗಿ, ಮತ್ತೆ ಮತ್ತೆ ಶ್ರೀಗುರುವಿನ ಚರಣಗಳಲ್ಲಿ ನಮಸ್ಕರಿಸುತ್ತಾ, "ಸ್ವಾಮಿ, ನೀವೇ ಶಿವ. ಪ್ರದೋಷದಲ್ಲಿ ನಿಮ್ಮನ್ನೇ ಅರ್ಚಿಸುತ್ತೇನೆ. ನಿಮ್ಮ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ನನಗೆ ನಿಮ್ಮಂತಹ ಮಗನೇ ಹುಟ್ಟುತ್ತಾನೆ" ಎಂದು ಅವರನ್ನು ಪೂಜಿಸಿ ತನ್ನ ಊರಿಗೆ ಹಿಂತಿರುಗಿದಳು. ಅಂದಿನಿಂದ ತಪ್ಪದೇ ಅವಳು ಶಿವಪ್ರದೋಷ ಪೂಜೆ ಮಾಡಲಾರಂಭಿಸಿದಳು. ಶ್ರೀಗುರುವಿನಿಂದ ಅನುಗ್ರಹೀತನಾದ ಅವಳ ಮಗ, ವೇದಶಾಸ್ತ್ರ, ಪುರಾಣ, ಪಾರಂಗತನಾಗಿ, ವಿನಯವಂತನಾಗಿ, ಎಲ್ಲರಿಂದಲೂ, ಎಲ್ಲೆಡೆಯಲ್ಲಿಯೂ ಪೂಜೆಗೊಳ್ಳುವವನಾಗಿ, ಸ್ವಾಮಿಯ ಅನುಗ್ರಹದಿಂದ ವಿವಾಹಿತನಾಗಿ ಪುತ್ರಪೌತ್ರಾದಿಗಳಿಂದ ಕೂಡಿ, ಸ್ವಗ್ರಾಮದಲ್ಲಿ ಸಂತೋಷದಿಂದ ಬಾಳಿದನು.

ಗುರುಕೃಪೆ ಭಕ್ತಜನರಿಗೆ ಸರ್ವಾರ್ಥಗಳನ್ನು ತಂದುಕೊಡಬಲ್ಲದು. ಕೃಪಾಸಿಂಧುವಾದ ಶ್ರೀಗುರುವು ಭಕ್ತರಿಗೆ ಸದಾನಂದಕಾರಕನಾಗಿ, ಸುಖ ಸಂಪತ್ತುಗಳನ್ನು ನೀಡುವನು" ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಎಂಟನೆಯ ಅಧ್ಯಾಯ ಮುಗಿಯಿತು.

No comments:

Post a Comment