Sunday, February 10, 2013

||ಶ್ರೀ ಗುರು ಚರಿತ್ರೆ - ಒಂಭತ್ತನೆಯ ಅಧ್ಯಾಯ||

ನಾಮಧಾರಕನು ಮತ್ತೆ ಪ್ರಣಾಮ ಮಾಡಿ, ಸಿದ್ಧಮುನಿಯನ್ನು, "ಶ್ರೀಪಾದರು ಕುರುವರಪುರದಲ್ಲಿದ್ದಾಗ ನಡೆದ ಕಥೆಯೊಂದನ್ನು ವಿಸ್ತಾರವಾಗಿ ಕೇಳಬೇಕೆಂದಿದ್ದೇನೆ" ಎನ್ನಲು, ಸಿದ್ಧರು ಹೇಳಿದರು. "ನಾಮಧಾರಕ, ಶ್ರೀಪಾದರು ಕುರುವರಪುರದಲ್ಲಿದ್ದಾಗ ನಡೆದ ಕಥೆಯೊಂದನ್ನು ಹೇಳುತ್ತೇನೆ. ಕೇಳು.

ಕುರುವರಪುರದಲ್ಲಿ ರಜಕನೊಬ್ಬನಿದ್ದನು. ಶ್ರೀಪಾದರ ಸೇವಕನಾಗಿದ್ದ ಅವನು ತ್ರಿಕಾಲದಲ್ಲೂ ಭಕ್ತಿಯಿಂದ ಶ್ರೀಪಾದರಿಗೆ ನಮಸ್ಕಾರ ಮಾಡುತ್ತಿದ್ದನು. ಮನೋವಾಕ್ಕಾಯಗಳಲ್ಲಿ ಶ್ರದ್ಧೆಭಕ್ತಿ ತುಂಬಿ ಅವನು ಮಾಡುತ್ತಿದ್ದ ಸೇವೆ ಬಹಳಕಾಲದಿಂದ ನಡೆಯುತ್ತಿತ್ತು. ಕೃತಾರ್ಥರಾಗಿದ್ದರೂ, ಲೋಕಾನುಗ್ರಹಕ್ಕಾಗಿ ಶ್ರೀಪಾದರು ಪ್ರತಿದಿನವೂ ಕೃಷ್ಣಾನದಿಗೆ ಸ್ನಾನಕ್ಕೆ ಹೋಗುತ್ತಿದ್ದರು. ಒಂದು ದಿನ ಶ್ರೀಪಾದರು ಸ್ನಾನಮಾಡುತ್ತಿದ್ದಾಗ ಆ ರಜಕನು ಅಲ್ಲಿ ಬಟ್ಟೆ ಒಗೆಯುತ್ತಿದ್ದನು. ಅವನಲ್ಲಿ ಪ್ರಸನ್ನರಾಗಿದ್ದ ಶ್ರೀಪಾದರು, "ಅಯ್ಯಾ ರಜಕ, ಪ್ರತಿದಿನವೂ ನೀನು ನನಗೆ ನಮಸ್ಕಾರ ಮಾಡಿಕೊಳ್ಳುತ್ತಿದ್ದೀಯೆ. ಅದರಿಂದ ನನಗೆ ಸಂತೋಷವಾಗಿದೆ. ಅದರಿಂದ ನಿನಗೆ ರಾಜ್ಯವನ್ನು ದಯಪಾಲಿಸುತ್ತಿದ್ದೇನೆ" ಎಂದರು. ಅವರ ಮಾತಿನಿಂದ ಚಕಿತನಾದ ಆ ರಜಕ, ಮುಸಿನಕ್ಕು, ಕೈಜೋಡಿಸಿ, "ಸ್ವಾಮಿ, ನೀವು ಈಶ್ವರನು. ಸತ್ಸಂಕಲ್ಪರು" ಎಂದು ಉತ್ತರ ಕೊಟ್ಟ. ಅಂದಿನಿಂದ ಅವನಿಗೆ ಸಂಸಾರ ಚಿಂತೆ ಬಿಟ್ಟುಹೋಗಿ ಶ್ರೀಪಾದರ ಸೇವೆಯಲ್ಲೇ ನಿರತನಾಗಿ ಹೋದ. ಪ್ರತಿದಿನವೂ ಗುರುವಿನ ಗುಡಿಸಿಲಿನ ಮುಂದೆ ಗುಡಿಸಿ, ನೀರು ಚೆಲ್ಲಿ, ಶುದ್ಧಿಮಾಡುತ್ತಿದ್ದನು. ಹೀಗೇ ಬಹಳಕಾಲ ಕಳೆಯಿತು.

ಒಂದು ಸಲ ವಸಂತ ಋತು, ವೈಶಾಖಮಾಸದಲ್ಲಿ, ಒಬ್ಬ ಯವನರಾಜ, ಸರ್ವಾಭರಣಾಲಂಕೃತನಾಗಿ, ತನ್ನ ಸಖೀಜನರೊಡನೆ, ನದಿಗೆ ಜಲಕ್ರೀಡೆಗೆಂದು ಬಂದನು. ಆ ರಾಜ, ನೌಕೆಯೊಂದರಲ್ಲಿ ತನ್ನ ಸ್ತ್ರೀಜನರೊಡನೆ, ವಾದ್ಯವೃಂದಗಳು ಸುಶ್ರಾವ್ಯವಾಗಿ ನುಡಿಯುತ್ತಿರಲು, ಸಂತೋಷದಿಂದ, ಉನ್ಮತ್ತನಾಗಿ ವಿಹರಿಸುತ್ತಿದ್ದನು. ಅವನನ್ನು ರಕ್ಷಿಸಲು ನದಿಯ ಎರಡೂ ತೀರಗಳಲ್ಲಿ ಅವನ ಸೈನಿಕರು ಕಾವಲು ಕಾಯುತ್ತಿದ್ದರು. ಅದನ್ನು ಕಂಡ ರಜಕ, ತಾನು ಸತತವಾಗಿ ಮಾಡಿಕೊಳ್ಳುತ್ತಿದ್ದ ಶ್ರೀಗುರುವಿನ ನಾಮಜಪವನ್ನೂ ಮರೆತು, ಆ ವಿಹಾರ ಲೀಲೆಯನ್ನು ನೋಡುತ್ತಾ ನಿಂತನು. "ಈ ಸಂಸಾರದಲ್ಲಿ ಜನಿಸಿ ಇಂತಹ ವೈಭವ ಸುಖಗಳನ್ನು ಪಡೆಯದಿದ್ದರೆ ಜನ್ಮವೇ ವ್ಯರ್ಥ. ಅಲಂಕಾರ ಶೋಭಿತರಾದ ಆ ಸ್ತ್ರೀಜನರು ಅವನ ಸೇವೆಯನ್ನು ಮಾಡುತ್ತಿದ್ದಾರೆ. ಆಹಾ! ಆ ರಾಜ ಅದೆಂತಹ ಪುಣ್ಯ ಮಾಡಿದ್ದನೋ! ಅವನು ಗುರುಸೇವೆಯನ್ನು ಹೇಗೆ ಮಾಡಿದ್ದನೋ! ಇಂತಹ ಮಹಾದೆಶೆ ಅವನಿಗೆ ಹೇಗೆ ಉಂಟಾಯಿತೋ!" ಎಂದು ಮನಸ್ಸಿನಲ್ಲಿ ಚಿಂತಿಸುತ್ತಾ, ಹಿಂದಿರುಗಿ ಬಂದು ತನ್ನ ಗುರುವನ್ನು ಕಂಡು ದಂಡ ಪ್ರಣಾಮ ಮಾಡಿ ಅವರೆದುರಿಗೆ ನಿಂತನು. ಅವನ ಮನಸ್ಸಿನ ಆಸೆಯನ್ನರಿತ ಶ್ರೀಪಾದರು, ಅವನನ್ನು ಕರೆದು,"ಏನು ಯೋಚನೆಮಾಡುತ್ತಿದ್ದೀಯೆ?" ಎಂದು ಕೇಳಿದರು. ಅದಕ್ಕೆ ಅವನು, "ಸ್ವಾಮಿ, ಆ ರಾಜನ ವೈಭವವನ್ನು ನೋಡಿದೆ. ಆ ರಾಜ ಶ್ರೀಗುರುವಿಗೆ ದಾಸನಾಗಿ, ಗುರುಸೇವೆಯನ್ನು ಏಕಾಗ್ರಚಿತ್ತನಾಗಿ ಮಾಡಿ ಇಂತಹ ಮಹಾದೆಶೆಯನ್ನು ಪಡೆದಿದ್ದಾನೆ ಎಂದು ಮನಸ್ಸಿಗೆ ತೋಚಿ, ಬಹಳ ಸಂತೋಷವಾಯಿತು" ಎಂದು ವಿನಮ್ರನಾಗಿ ಹೇಳಿದನು. ಮತ್ತೆ ಅವನೇ, "ಹೇ ಗುರುವರ, ಅವಿದ್ಯಾವಶದಿಂದ ಇಂತಹ ವಾಸನೆಗಳು ಹುಟ್ಟುತ್ತವೆ. ಈ ಇಂದ್ರಿಯ ಸುಖಗಳು ನನಗೆ ಬೇಕಾಗಿಲ್ಲ. ನಿಮ್ಮ ಪಾದಗಳಲ್ಲಿಯೇ ನನಗೆ ಹೆಚ್ಚಿನ ಸುಖವಿದೆ ಎಂದು ನನಗೆ ಈಗ ತೋರುತ್ತಿದೆ" ಎಂದು ಹೇಳಿದನು. ಅದಕ್ಕೆ ಶ್ರೀಗುರುವು, "ಜನ್ಮಾರಭ್ಯ ನೀನು ಕಷ್ಟದಲ್ಲೇ ಜೀವಿಸುತ್ತಿದ್ದೀಯೆ. ಅದರಿಂದಲೇ ನಿನಗೆ ರಾಜ್ಯಭೋಗದಲ್ಲಿ ಆಸೆಯುಂಟಾಗಿದೆ. ಇಂದ್ರಿಯಗಳು ತೃಪ್ತಿಹೊಂದದೆ ಮನಸ್ಸು ನಿರ್ಮಲವಾಗುವುದಿಲ್ಲ. ವಾಸನೆಗಳು ತೀರದಿದ್ದರೆ ಜನ್ಮಾಂತರಗಳಲ್ಲಿ ಅವು ನಿನ್ನನ್ನು ಕಷ್ಟಕ್ಕೀಡು ಮಾಡಬಲ್ಲವು" ಎಂದು ಶ್ರೀಪಾದರು ಹೇಳಿದರು. ಅದಕ್ಕೆ ಆ ರಜಕನು ಕೈಜೋಡಿಸಿ, "ಸ್ವಾಮಿ, ದಯಾನಿಧಿ, ದಯೆತೋರಿಸಿ. ನನ್ನನ್ನು ಉಪೇಕ್ಷಿಸಬೇಡಿ" ಎಂದು ಕೇಳಿಕೊಂಡನು. "ನಿನಗೆ ರಾಜ್ಯಭೋಗಗಳಲ್ಲಿ ಕಾಂಕ್ಷೆಯುಂಟಾಗಿದೆ. ಆದ್ದರಿಂದ ಇಂದ್ರಿಯ ತೃಪ್ತಿಗೋಸ್ಕರ ತ್ವರೆಯಲ್ಲೇ ನೀನು ಮ್ಲೇಚ್ಛನಾಗಿ ಜನಿಸಿ ರಾಜನಾಗುತ್ತೀಯೆ. ಆದರೆ, ಅಯ್ಯಾ ರಜಕ, ನಿನ್ನ ಆಸೆಯನ್ನು ಈ ಜನ್ಮದಲ್ಲೇ ತೀರಿಸಿಕೊಳ್ಳಲು ಇಷ್ಟಪಡುತ್ತೀಯೋ, ಇಲ್ಲ ಮತ್ತೊಂದು ಜನ್ಮದಲ್ಲಿ ಇದನ್ನು ಅನುಭವಿಸುತ್ತೀಯೋ ಹೇಳು" ಎಂದು ಕೇಳಿದರು. ಅದಕ್ಕೆ ರಜಕನು, "ಗುರುವೇ, ಈಗ ನಾನು ವೃದ್ಧನಾದೆ. ಶರೀರವು ಶಿಥಿಲವಾಗಿದೆ. ಇಂತಹ ಭೊಗಗಳನ್ನು ಈಗ ಅನುಭವಿಸಲಾರೆ. ಇನ್ನೊಂದು ಜನ್ಮದಲ್ಲಿ ಅವುಗಳನ್ನು ಅನುಭವಿಸುತ್ತೇನೆ" ಎಂದು ಬಿನ್ನವಿಸಿಕೊಂಡನು. ಅದಕ್ಕೆ ಶ್ರೀಪಾದರು, "ಹಾಗಾದರೆ ಶೀಘ್ರದಲ್ಲೇ ಮತ್ತೊಂದು ಜನ್ಮವೆತ್ತಿ ನಿಷ್ಕಂಟಕವಾಗಿ ರಾಜ್ಯಸುಖಗಳನ್ನು ಅನುಭವಿಸು" ಎಂದು ಹೇಳಿದರು. ಅದಕ್ಕೆ ಆ ರಜಕನು, "ಸ್ವಾಮಿ, ನಿಮ್ಮ ಚರಣ ವಿಯೋಗ ಸಹಿಸಲಸಾಧ್ಯವಾದದ್ದು. ನಿಮ್ಮ ಪುನರ್ದರ್ಶನವಾಗುವಂತೆ ಅನುಗ್ರಹಿಸಿ" ಎಂದು ಬೇಡಿಕೊಂಡನು. ಅದಕ್ಕೆ ಶ್ರೀಪಾದರು, "ನೀನು ವೈಡೂರ್ಯನಗರದಲ್ಲಿ ರಾಜನಾಗಿ ಜನಿಸುತ್ತೀಯೆ. ಅಂತ್ಯಕಾಲದಲ್ಲಿ ನಿನಗೆ ಮತ್ತೆ ನಮ್ಮ ದರ್ಶನವಾಗಿ, ನಿನಗೆ ಜ್ಞಾನೋದಯವಾಗುತ್ತದೆ. ಚಿಂತಿಸಬೇಡ. ನಾನು ಆಗ ನೃಸಿಂಹ ಸರಸ್ವತಿ ಎಂಬ ಹೆಸರಿನಿಂದ ಯತಿಯಾಗಿ ಅವತರಿಸಿರುತ್ತೇನೆ" ಎಂದು ಹೇಳಿದರು. ಗುರುವಿನ ಅನುಗ್ರಹ ಪಡೆದು ಹೊರಟ ರಜಕನು ಸ್ವಲ್ಪ ದೂರಹೋಗುವುದರಲ್ಲಿಯೇ ಕೆಳಗೆ ಬಿದ್ದು ಮರಣ ಹೊಂದಿದನು.

ನಾಮಧಾರಕ, ಆ ರಜಕನ ಕಥೆ ವಿಚಿತ್ರವಾದದ್ದು. ಮುಂದೆ ಪ್ರಸಂಗವಶಾತ್ ಆ ಕಥೆಯನ್ನು ವಿಸ್ತರಿಸಿ ಹೇಳುತ್ತೇನೆ. ಶ್ರಿಗುರುವು ಕುರುವರಪುರದಲ್ಲಿ ಶ್ರೀಪಾದ ಮಹಿಮೆಯನ್ನು ಲೋಕದಲ್ಲಿ ಪ್ರಸರಿಸಲೋ ಎಂಬಂತೆ ಸ್ವಲ್ಪಕಾಲ ಪ್ರತ್ಯಕ್ಷವಾಗಿ ನೆಲೆಸಿದ್ದರು. ಅವರ ಎಲ್ಲ ಮಹಿಮೆಗಳನ್ನೂ ಹೇಳಬೇಕೆಂದರೆ ಗ್ರಂಥ ಬಹಳ ದೊಡ್ಡದಾಗುತ್ತದೆ. ಅದರಿಂದ ಶ್ರೀಪಾದರ ಅವತಾರವನ್ನು ಸಂಕ್ಷೇಪವಾಗಿ ಹೇಳುತ್ತೇನೆ. ಅಮೃತದೃಷ್ಟಿಯ ಆ ಸ್ವಾಮಿ ನೆಲೆಯಾಗಿದ್ದ ಆ ಸ್ಥಾನದ ಮಹಿಮೆ ಯಾರು ತಾನೇ ವರ್ಣಿಸಬಲ್ಲರು? ಅಲ್ಲಿ ಅವರು ನೆಲಸಿದ್ದರು ಎನ್ನುವುದರಿಂದಲೇ, ಅವರ ಭಕ್ತವಾತ್ಸಲ್ಯಕ್ಕೆ ಗುರುತಾಗಿ, ಈಗಲೂ ಜನರ ಸರ್ವ ಕಾಮನೆಗಳೂ ತ್ವರೆಯಾಗಿ ನೆರವೇರುತ್ತವೆ. 

ಶ್ರೀಪಾದರು ಕುರುವರಪುರದಲ್ಲಿ ಸ್ವಲ್ಪಕಾಲವಿದ್ದು, ಲೋಕಾನುಗ್ರಹದೃಷ್ಟಿಯಿಂದ ಇನ್ನೊಂದೆಡೆಯಲ್ಲಿ ಅವತರಿಸಲು ನಿರ್ಧರಿಸಿ, ಆಶ್ವಯುಜ, ಕೃಷ್ಣ ದ್ವಾದಶಿಯಂದು, ಹಸ್ತಾನಕ್ಷತ್ರದಲ್ಲಿ ಕೃಷ್ಣಾನದಿಯಲ್ಲಿ ಮುಳುಗಿ ಅಂತರ್ಧಾನರಾದರು. ಅವರು ಈಗ ಅಲ್ಲಿ ಪ್ರತ್ಯಕ್ಷವಾಗಿ ಇಲ್ಲದಿದ್ದರೂ, ಇಂದಿಗೂ ಭಕ್ತರ ವಾಂಚಿತಾರ್ಥಗಳನ್ನು ಪೂರಯಿಸುತ್ತಾ ಅದೃಶ್ಯರಾಗಿ ನೆಲಸಿದ್ದಾರೆ. ಅವರು ಅಲ್ಲಿ ಹಾಗೆ ಅಪ್ರತ್ಯಕ್ಷವಾಗಿ ಇದ್ದಾರೆ ಎಂಬುದಕ್ಕೆ ನಿದರ್ಶನಗಳು ಬಹಳವಾಗಿವೆ. ಭಕ್ತಿಯಿಂದ ಅಲ್ಲಿಗೆ ಹೋಗಿ ಅವರನ್ನು ಧ್ಯಾನಿಸಿದವರಿಗೆ ಅವರು ತಪ್ಪದೇ ಪ್ರತ್ಯಕ್ಷರಾಗುತ್ತಾರೆ. ಅದರಿಂದಲೇ ಕುರುವರಪುರ ಭೂತಲದಲ್ಲಿ ಪ್ರಸಿದ್ಧಿಯಾಗಿದೆ. 

ಇಲ್ಲಿಗೆ ಒಂಭತ್ತನೆಯ ಅಧ್ಯಾಯ ಮುಗಿಯಿತು. 



No comments:

Post a Comment