Thursday, February 14, 2013

||ಶ್ರೀ ಗುರು ಚರಿತ್ರೆ - ಹದಿಮೂರನೆಯ ಅಧ್ಯಾಯ||

ನಾಮಧಾರಕ ವಿನಯದಿಂದ ಕೈಜೋಡಿಸಿ ಸಿದ್ಧಮುನಿಯನ್ನು, "ಯೋಗೀಶ್ವರ, ಭವಾರ್ಣವ ತಾರಕರು ನೀವು. ನೀವು ಹೇಳುತ್ತಿರುವ ಗುರುಕಥಾಮೃತವನ್ನು ಕೇಳಿದಷ್ಟೂ, ಇನ್ನೂ ಇನ್ನೂ ಕೇಳಬೇಕೆಂಬ ಅಭಿಲಾಷೆ ಉಂಟಾಗುತ್ತಿದೆ. ಗುರುಚರಿತ್ರೆ ಎನ್ನುವುದು ಕಾಮಧೇನುವು. ಹಸುವಿಗೆ ಹುಲ್ಲು ಕೊಟ್ಟಷ್ಟೂ ಅದರ ಹಸಿವು ಹೆಚ್ಚಾಗುವ ಹಾಗೆ, ನನಗೆ ಗುರುಕಥೆಗಳನ್ನು ಕೇಳುವುದರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಕನಸಿನಲ್ಲೂ ಮಜ್ಜಿಗೆ ಸಿಕ್ಕದಿದ್ದವನಿಗೆ ಎಚ್ಚರದಲ್ಲಿ ಹಾಲಿನಸಮುದ್ರ ದೊರೆತರೆ ಅವನು ಅದನ್ನು ಬಿಟ್ಟು ಹೋಗುತ್ತಾನೆಯೇ? ಹಾಗೆಯೇ ಅಲ್ಪಜ್ಞನಾದ ನನಗೆ ಗುರುಕೀರ್ತಿ ಇದುವರೆಗೆ ತಿಳಿದಿರಲಿಲ್ಲ. ಅವಿದ್ಯೆಯಿಂದ ಭ್ರಷ್ಟನಾದ ನಾನು ಕಷ್ಟಗಳಿಗೀಡಾಗಿದ್ದೆ. ಮೋಹಾಂಧಕಾರದಲ್ಲಿ ಮುಳುಗಿ ಅಜ್ಞನಾಗಿದ್ದ ನನಗೆ ನೀವು ಶ್ರೀಗುರುವೆಂಬ ಆತ್ಮಜ್ಯೋತಿಯನ್ನು ತೋರಿಸಿದಿರಿ. ನೀವು ಮಾಡಿರುವ ಉಪಕಾರಕ್ಕೆ ನಾನು ಎಂತಹ ಪ್ರತ್ಯುಪಕಾರ ಮಾಡಬೇಕೆಂದು ತಿಳಿಯದ ಮೂಢ ನಾನು. ಕಲ್ಪವೃಕ್ಷವನ್ನು ಕೊಟ್ಟವನಿಗೆ ಭೂದಾನ ಮಾಡಿದರೆ ಅದು ಪ್ರತ್ಯುಪಕಾರವಾಗುವುದೇ? ಚಿಂತಾಮಣಿಯನ್ನು ಕೊಟ್ಟವನಿಗೆ ಬದಲಾಗಿ ಏನನ್ನು ತಾನೇ ಕೊಡಬಲ್ಲೆವು? ಅಂತಹ ಕೃಪಾಮೂರ್ತಿಯಾದ ನಿಮಗೆ ನಾನೇನು ಕೊಡಬಲ್ಲೆ? ಭವತಾಪವನ್ನು ಹರಿಸಿದಿರಿ. ನೀವು ಹೇಳಿದ ಧರ್ಮ ನನ್ನನ್ನು ಉದ್ಧರಿಸುತ್ತದೆ. ಸರ್ವಾರ್ಥಗಳನ್ನೂ ಕೊಡಬಲ್ಲ ಗುರುಭಕ್ತಿ ನನ್ನಲ್ಲಿ ನೆಲೆಯಾಯಿತು. ಶ್ರೀಗುರುವು ಪ್ರಯಾಗದಲ್ಲಿ ಮಾಧವನಿಗೆ ದೀಕ್ಷೆ ಕೊಟ್ಟ ಮೇಲೆ ನಡೆದ ವಿಷಯಗಳನ್ನು ವಿವರಿಸಬೇಕೆಂದು ಕೋರುತ್ತೇನೆ" ಎಂದು ವಿನಮ್ರನಾಗಿ ಬಿನ್ನವಿಸಿಕೊಂಡನು.

ಅವನ ಮಾತುಗಳನ್ನು ಕೇಳಿದ ಸಿದ್ಧಮುನಿ, ಅವನ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಹೇಳಿದರು. "ಶಿಷ್ಯೋತ್ತಮ. ನಿನಗೆ ಗುರುಪದ ಲಭ್ಯವಾಯಿತು. ಧನ್ಯನಾದೆ. ಸಂಸಾರಸಾಗರದಿಂದ ಪಾರಾಗುವೆ. ಗುರುವೆಂದರೇನೆಂಬುದು ನಿನಗೆ ತಿಳಿಯಿತು. ಪುಣ್ಯಶ್ರವಣವಾದ ಗುರುಚರಿತ್ರೆಯನ್ನು ಹೇಳುತ್ತೇನೆ. ಮನಸ್ಸಿಟ್ಟು ಕೇಳು.

ಸ್ವಲ್ಪಕಾಲ ಶ್ರೀಗುರುವು ಪ್ರಯಾಗದಲ್ಲಿದ್ದು, ಅಲ್ಲಿ ಲೋಕೋದ್ಧಾರ ಕಾರ್ಯಗಳನ್ನು ಮಾಡಿದರು. ಮಾಧವನಿಗೆ ದೀಕ್ಷೆ ಕೊಟ್ಟು ಪ್ರಸಿದ್ಧರಾಗಿದ್ದ ಗುರುವಿನ ಬಳಿಗೆ ಅನೇಕರು ಬಂದು, ಅವರಿಗೆ ಶಿಷ್ಯರಾಗಿ, ಅವರ ಸೇವೆಯಲ್ಲಿ ನಿಂತರು. ಅವರಲ್ಲೆಲ್ಲಾ ಮಾಧವನು ಮುಖ್ಯನು. ಅವರಲ್ಲಿ ಪ್ರಮುಖರಾದ ಏಳುಜನ ಶಿಷ್ಯರ ಹೆಸರನ್ನು ಮಾತ್ರ ಹೇಳುತ್ತೇನೆ. ಮೊದಲನೆಯವನು ಬಾಲಸರಸ್ವತಿ. ನಂತರ ಕೃಷ್ಣ ಸರಸ್ವತಿ, ಉಪೇಂದ್ರ, ಮಾಧವ ಸರಸ್ವತಿ, ಸದಾನಂದ, ಆರನೆಯವನು ಜ್ಞಾನಜ್ಯೋತಿ ಸರಸ್ವತಿ. ಸಿದ್ಧನಾದ ನಾನು ಏಳನೆಯವನು. ನಮ್ಮೆಲ್ಲರನ್ನೂ ಹಿಂದಿಟ್ಟುಕೊಂಡು ಶ್ರೀಗುರುವು ದಕ್ಷಿಣ ದೇಶದಲ್ಲಿನ ತೀರ್ಥಗಳನ್ನು ಪವಿತ್ರ ಮಾಡುತ್ತಾ, ಕಾರಂಜಿ ನಗರವನ್ನು ಸೇರಿದರು.

ಅಲ್ಲಿ ತಮ್ಮ ಪೂರ್ವಾಶ್ರಮದ ತಂದೆತಾಯಿಗಳನ್ನು ಸಂತುಷ್ಟರನ್ನಾಗಿ ಮಾಡಿ, ತಮ್ಮ ತಮ್ಮಂದಿರನ್ನು ಆದರಿಸಿದರು. ಪುರಜನರು ಶ್ರೀಗುರುವನ್ನು ಕಂಡು ಬಹಳ ಆನಂದದಿಂದ ಅವರ ಪೂಜಾರ್ಚನೆಗಳನ್ನು ಮಾಡಿದರು. ಅಲ್ಲಿನ ವಿಪ್ರರೆಲ್ಲರೂ ಅವರವರ ಮನೆಗಳಿಗೆ ಭಿಕ್ಷೆಗೆಂದು ಅಹ್ವಾನಿಸಿದರೆ, ಶ್ರೀಗುರುವು ಬಹುರೂಪಿಯಾಗಿ ಎಲ್ಲರ ಮನೆಗಳಿಗೂ ಒಂದೇಕಾಲದಲ್ಲಿ ಹೋಗಿ ಭಿಕ್ಷೆ ಸ್ವೀಕರಿಸಿದರು. ಅದನ್ನು ಕೇಳಿದವರೆಲ್ಲರೂ ವಿಸ್ಮಿತರಾಗಿ ತ್ರಿಮೂರ್ತಿಗಳೇ ಈ ಯತಿಯ ವೇಷದಲ್ಲಿ ಬಂದಿದ್ದಾನೆಂದುಕೊಂಡರು. ಶ್ರೀಗುರುವು ತಮ್ಮ ಮಾತಾಪಿತರಿಗೆ ಪೂರ್ವಸ್ಮರಣೆಯುಂಟಾಗುವಂತೆ ಶ್ರೀಪಾದಶ್ರೀವಲ್ಲಭರೂಪದಲ್ಲಿ ದರ್ಶನವಿತ್ತರು. ತಾಯಿ ಆ ಶ್ರೀಪಾದರೂಪವನ್ನು ಕಂಡು, ಅವರ ಪಾದಗಳಲ್ಲಿ ತಲೆಯಿಟ್ಟು, "ನನ್ನ ಪ್ರದೋಷಪೂಜೆ ಫಲಕೊಟ್ಟಿತು. ಚಂದ್ರಮೌಳಿ ಸತ್ಯಸಂಕಲ್ಪನು" ಎಂಬ ಭಾವನೆಯಿಂದ, ತನ್ನ ಗಂಡನಿಗೆ ತನ್ನ ಗತ ಜನ್ಮದ ವೃತ್ತಾಂತವನ್ನೆಲ್ಲ ಹೇಳಿ, "ಗತಜನ್ಮದಲ್ಲಿ ಶ್ರೀಪಾದರಾಗಿದ್ದ ಈ ವಿಶ್ವವಂದ್ಯನನ್ನು ಮಗನಾಗಿ ಪಡೆಯಲು ನಾನು ಮಹಾದೇವನನ್ನು ಆರಾಧಿಸಿದೆ. ಈ ಜನ್ಮದಲ್ಲಿ ನನ್ನ ಅಂದಿನ ಕೋರಿಕೆ ಸಫಲವಾಯಿತು" ಎಂದು ಆನಂದದಿಂದ ಹೇಳಿದಳು. ಅವರಿಬ್ಬರೂ ಶ್ರೀಗುರುವಿಗೆ ಶರಣಾಗಿ, "ಯತಿರಾಜ, ಜಗನ್ನಾಥ, ನಮ್ಮನ್ನು ಈ ಸಂಸಾರಸಾಗರದಿಂದ ಉದ್ಧರಿಸು" ಎಂದು ಬೇಡಿಕೊಂಡರು. ಅದಕ್ಕೆ ಶ್ರೀಗುರುವು, ಸನ್ಯಾಸಿಯಾದವನು ತನ್ನ ನಲವತ್ತೆರಡು ತಲೆಮಾರುಗಳನ್ನು ಉದ್ಧರಿಸುತ್ತಾನೆ. ಅವನ ವಂಶಕ್ಕೆ ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗುವುದು. ಆ ಕುಲದಲ್ಲಿ ಜನಿಸಿದವರೆಲ್ಲರೂ ಶಾಶ್ವತವಾದ ಬ್ರಹ್ಮಪದ ಪಡೆಯುವರು. ಅವರ ಸಂತತಿಗೆ ಯಮನಿಂದಲೂ ಸಹ ಭಯ ದುಃಖಗಳುಂಟಾಗಲಾರವು. ಅವರ ಕುಲದಲ್ಲಿ ಅದಕ್ಕೆ ಮುಂಚೆ ನರಕಕ್ಕೆ ಹೋದವರೂ ಕೂಡಾ ಬ್ರಹ್ಮಲೋಕವನ್ನು ಸೇರಿಕೊಳ್ಳುತ್ತಾರೆ. ಇದಕ್ಕಿಂತ ಹೆಚ್ಚಾಗಿ ನಿಮಗೇನು ಹೇಳಲಿ? ನಿಮ್ಮಿಬ್ಬರಿಗೂ ಅಂತಕನ ಭಯವಿರುವುದಿಲ್ಲ. ಬ್ರಹ್ಮಪದವನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳು ಶತಾಯುಷಿಗಳಾಗಿ, ಅಷ್ಟೈಶ್ವರ್ಯದಿಂದ ಕೂಡಿ, ಪುತ್ರಪೌತ್ರಾದಿಗಳೊಡನೆ ನಿಮ್ಮೊಡನೆ ಇದ್ದುಕೊಂಡು ನಿಮ್ಮನ್ನು ಸಂತೋಷಗೊಳಿಸುತ್ತಾರೆ. ನಿಮಗೆ ನಿಮ್ಮ ಅಂತ್ಯಕಾಲದಲ್ಲಿ ಕಾಶಿಕ್ಷೇತ್ರ ನಿವಾಸ ಲಭಿಸುವುದು. ಕಾಶಿಕ್ಷೇತ್ರ ಮೋಕ್ಷಸ್ಥಾನವೆಂದು ವೇದಾದಿಗಳಲ್ಲಿ ಪ್ರಸಿದ್ಧವಾಗಿದೆ. ಇನ್ನು ಮುಂದೆ ನೀವು ನಿಮ್ಮ ಚಿಂತೆಗಳನ್ನೆಲ್ಲಾ ಬಿಟ್ಟು ಸಂತೋಷದಿಂದ ಬಾಳ್ವೆ ಮಾಡಿ" ಎಂದು ಹೇಳಿದರು.

ಅದೇ ಸಮಯಕ್ಕೆ ಅವರ ಪೂರ್ವಾಶ್ರಮದ ತಂಗಿಯಾದ ರತ್ನ ಅಲ್ಲಿಗೆ ಬಂದು, ಶ್ರೀಗುರುವಿಗೆ ನಮಸ್ಕರಿಸಿ, ವಿನೀತಳಾಗಿ, "ಸ್ವಾಮಿ, ನನ್ನನ್ನು ಉದ್ಧರಿಸಬೇಕು. ಸಂಸಾರಸಾಗರದಲ್ಲಿ ಮುಳುಗಿಹೋಗಿದ್ದೇನೆ. ತಾಪತ್ರಯಗಳೆಂಬ ಬಡಬಾಗ್ನಿ ನನ್ನನ್ನು ದಹಿಸುತ್ತಿದೆ. ಕಾಮಾದಿಗಳೆಂಬ ಮೊಸಳೆಗಳು ನನ್ನನ್ನು ಭಯಪಡಿಸುತ್ತಿವೆ. ಈ ದುರ್ಭರವಾದ ಸಂಸಾರಸಾಗರದಿಂದ ನನ್ನನ್ನು ಉದ್ಧರಿಸಿ" ಎಂದು ಕಳಕಳಿಯಿಂದ ಬೇಡಿಕೊಂಡಳು. ಅದಕ್ಕೆ ಶ್ರೀಗುರುವು, "ಅಮ್ಮಾ, ಸ್ತ್ರೀಯರಿಗೆ ಪತಿಸೇವೆಯೇ ತಪಸ್ಸು. ಬೇರೆ ತಪಸ್ಸೇಕೆ? ಅವರನ್ನು ಭವಾರ್ಣವದಿಂದ ಉದ್ಧರಿಸಬಲ್ಲವನು ಆ ಶಿವನೊಬ್ಬನೇ! ಅವನೇ ಪತಿವ್ರತೆಯರಿಗೆ ಸರ್ವಾಭೀಷ್ಟಗಳನ್ನೂ ದಯಪಾಲಿಸುವವನು. ಇದರಲ್ಲಿ ಸಂಶಯವಿಲ್ಲ. ಭವಸಾಗರವನ್ನು ದಾಟಲು ಪತಿಯೇ ದೈವವೆಂದು ಸ್ಮೃತಿಗಳು ಘೋಷಿಸುತ್ತಿವೆ. ಆದ್ದರಿಂದ ನೀನು ನಿನ್ನ ಮನಸ್ಸನ್ನು ಸ್ಥಿರಗೊಳಿಸಿ ಶಿವಸಮಾನನಾದ ನಿನ್ನ ಪತಿಯನ್ನು ಶ್ರದ್ಧಾಭಕ್ತಿಗಳಿಂದ ಸೇವಿಸು. ವೇದೋಕ್ತಿಗಳು ಹೇಳುವಂತೆ ಅವನೇ ನಿನಗೆ ಗತಿ. ನಿನ್ನನ್ನುದ್ಧರಿಸಬಲ್ಲವನು ಅವನೇ! ನಿನ್ನ ಅಂತಃಕರಣದಲ್ಲಿ ದುಃಖಬೇಡ" ಎಂದು ಅವಳಿಗೆ ಶ್ರೀಗುರುವು ಉಪದೇಶಿಸಿದರು. ರತ್ನಾದೇವಿ ಮತ್ತ್ತೊಮ್ಮೆ ಶ್ರೀಗುರುವಿಗೆ ನಮಸ್ಕರಿಸಿ, "ಸ್ವಾಮಿ, ಗುರುಮೂರ್ತಿಯಾದ ನಿಮಗೆ ನಮಸ್ಕಾರಗಳು. ನೀವು ಬ್ರಹ್ಮಜ್ಞಾನಿಗಳು. ಭೂತಭವಿಷ್ಯತ್ತುಗಳನ್ನರಿತವರು. ನನ್ನ ಪ್ರಾರಬ್ಧ ಹೇಗಿದೆಯೋ ತಿಳಿಸಿ. ನನ್ನ ಗತಿ ಎಂತಹುದು ಎಂಬುದನ್ನು ಹೇಳಿ" ಎಂದು ಕೇಳಿದಳು. ಅವಳ ಪ್ರಾರ್ಥನೆಯನ್ನು ಕೇಳಿ ಶ್ರೀಗುರುವು, "ರತ್ನ, ನಿನ್ನ ಮಾತುಗಳು ತಾಮಸಗುಣದಿಂದ ಕೂಡಿದ್ದು. ನೀನು ಪಾಪಗಳನ್ನು ಸಂಚಯಮಾಡಿದ್ದೀಯೆ. ಅನುಭವಿಸದೇ ಅವು ತೀರುವವಲ್ಲ. ಹಿಂದಿನ ಜನ್ಮದಲ್ಲಿ ನೀನು ಗೋವೊಂದನ್ನು ಕೋಲಿನಿಂದ ಹೊಡೆದಿದ್ದೀಯೆ. ನಿನಗೆ ಹತ್ತಿರವಾಗಿದ್ದ ದಂಪತಿಗಳಲ್ಲಿ ವಿರಸವನ್ನುಂಟು ಮಾಡಿದ್ದೀಯೆ. ಹೀಗೆ ನೀನು ಮಾಡಿರುವ ದೋಷಗಳು ಈ ಜನ್ಮದಲ್ಲಿ ಪರಿಪಾಕಗೊಳ್ಳುತ್ತವೆ. ಹಸುವನ್ನು ಹೊಡೆದ ಪಾಪಕ್ಕೆ ನೀನು ಕುಷ್ಠುರೋಗ ಅನುಭವಿಸಬೇಕು. ದಂಪತಿಗಳ ನಡುವೆ ವಿರಹ ಉಂಟುಮಾಡಿದ್ದಕ್ಕೆ ನಿನ್ನ ಗಂಡ ಸನ್ಯಾಸಿಯಾಗಿ ನಿನ್ನನ್ನು ಬಿಟ್ಟುಹೋಗುತ್ತಾನೆ. ನಿನ್ನ ಪೂರ್ವ ದೋಷಗಳಿಂದ ನಿನಗೆ ಇಂತಹ ಫಲಗಳು ದೊರೆಯಲಿವೆ" ಎಂದು ಹೇಳಿದರು. ಅದನ್ನು ಕೇಳಿ, ಆಕೆ ಅತ್ಯಂತ ದುಃಖಿತಳಾಗಿ, "ಗುರುನಾಥ, ನೀನೇ ನನ್ನನ್ನುದ್ಧರಿಸಬೇಕು" ಎಂದು ಅವರ ಪಾದಗಳನ್ನು ಹಿಡಿದು ಬೇಡಿಕೊಂಡಳು. ಅದಕ್ಕೆ ಅವರು, "ಮಗು, ಸ್ವಲ್ಪ ಕಾಲ ಸುಖವನ್ನನುಭವಿಸು. ನಿನ್ನ ಗಂಡ ವಯಸ್ಸಾದಮೇಲೆಯೇ ಸನ್ಯಾಸಿಯಾಗುತ್ತಾನೆ. ಆ ನಂತರದಲ್ಲಿಯೇ ನಿನಗೆ ಕುಷ್ಠುರೋಗ ಪ್ರಾಪ್ತಿಯಾಗುತ್ತದೆ. ಪಾಪಫಲಗಳನ್ನನುಭವಿಸಿದ ಮೇಲೆ ನಿನಗೆ ಸದ್ಗತಿಯಾಗುತ್ತದೆ. ಕುಷ್ಠುರೋಗವು ಆರಂಭವಾದ ಮೇಲೆ ನಿನಗೆ ನನ್ನ ದರ್ಶನವಾಗುತ್ತದೆ. ನಿನ್ನ ಪಾಪ ಪರಿಹಾರಕ್ಕಾಗಿ ಅನುಗುಣವಾದ ಕ್ಷೇತ್ರವು ಭೀಮಾತಟದ ದಕ್ಷಿಣಕ್ಕಿರುವ ಪಾಪವಿನಾಶನವೆಂಬ ತೀರ್ಥವು. ಕುಷ್ಠುರೋಗ ಬಂದೊಡನೆ ನೀನು ಆ ಕ್ಷೇತ್ರಕ್ಕೆ ಹೋಗು. ಗಂಧರ್ವನಗರವು ಭೀಮಾ-ಅಮರಜಾ ನದಿಗಳ ಸಂಗಮದಲ್ಲಿದೆ. ಅದು ಭೂಮಂಡಲದಲ್ಲಿಯೇ ಅತಿ ಪ್ರಸಿದ್ಧವಾದದ್ದು" ಎಂದು ಆದೇಶ ಕೊಟ್ಟು, ಶಿಷ್ಯರೊಡನೆ ಶ್ರೀಗುರುವು ಅಲ್ಲಿಂದ ಹೊರಟು ತ್ರ್ಯಂಬಕ ಕ್ಷೇತ್ರಕ್ಕೆ ಬಂದರು. ಅದು ಗೌತಮಿ ನದಿಯ ಉಗಮ ಸ್ಥಾನ. ತ್ರ್ಯಂಬಕದಿಂದ ಶ್ರೀಗುರುವು ನಾಸಿಕಕ್ಕೆ ಬಂದರು. ಅಲ್ಲಿ ಪುರಾಣೋಕ್ತವಾದ ಅನೇಕ ಪುಣ್ಯ ಕ್ಷೇತ್ರಗಳಿವೆ. ಅವುಗಳೆಲ್ಲದರ ಮಹಿಮೆಯನ್ನು ವಿಸ್ತರಿಸಿ ಹೇಳಲು ಸಾಧ್ಯವಿಲ್ಲ. ಸಂಕ್ಷೇಪವಾಗಿ ಹೇಳುತ್ತೇನೆ ಕೇಳು. ಗೋದಾವರಿ ಲೋಕದಲ್ಲಿ ಅಪಾರವಾದ ಮಹಿಮೆಯುಳ್ಳ ನದಿ. ಅದನ್ನು ವೃದ್ಧಗಂಗಾ ಎಂದೂ ಕರೆಯುತ್ತಾರೆ. ಅದರಲ್ಲಿ ಅನೇಕ ತೀರ್ಥಗಳಿವೆ. ಆ ನದಿ ಮಹೇಶ್ವರನ ಜಟೆಯಿಂದ ಅವತರಿಸಿದ ನದಿ. ಹಿಂದೆ ಋಷೀಶ್ವರನಾದ ಗೌತಮ ಮಹರ್ಷಿಯು ಪ್ರತಿದಿನವೂ ಧಾನ್ಯವನ್ನು ಹರಡಿ, ತಪಸ್ಸು ಮಾಡುತ್ತಿದ್ದನು. ಅಂದುಹರಡಿದ ಧಾನ್ಯ ಅಂದೇ ಮೊಳೆತು ಫಲಕೊಡುತ್ತಿತ್ತು. ಗೌತಮ ಮಹರ್ಷಿಯ ತಪೋ ಮಹಿಮೆ ಅಂತಹುದು. ಒಂದುಸಲ ಅಲ್ಲಿದ್ದ ಇತರ ಋಷಿಗಳೆಲ್ಲರೂ ಕೂಡಿ, "ಈ ಗೌತಮ ಮಹರ್ಷಿ ಶಿವಭಕ್ತ. ಈತ ಗಂಗೆಯನ್ನು ಇಲ್ಲಿಯ ಭೂಮಿಗೆ ತಂದರೆ ನಮಗೆ ಇಲ್ಲೇ ಗಂಗಾಸ್ನಾನವಾಗುತ್ತದೆ. ಯೋಗಯುಕ್ತರು, ಊರ್ಧ್ವರೇತಸ್ಸು ಗಳಾದ ಮುನಿಗಳಿಗೆ ಲಭಿಸುವ ಸದ್ಗತಿ ಈ ನದಿಯ ತೀರಗಳಲ್ಲಿ ವಾಸಿಸುವ ತಿರ್ಯಗ್ಜಂತುಗಳಿಗೂ ಲಭಿಸುತ್ತದೆ. ಮಹಾಮುನಿಗಳು ಕೋಟಿ ವರ್ಷಗಳು ತಪಸ್ಸು ಮಾಡಿ ಪಡೆಯುವ ತಪೋಫಲಕ್ಕೆ ಸಮನಾದ ಫಲ ಗಂಗಾಸ್ನಾನದಿಂದ ಸಿದ್ಧಿಸುತ್ತದೆ. ಈ ಗೌತಮ ಮುನಿ ಗಂಗೆಯನ್ನು ಭೂಮಿಗೆ ತರುವಂತಹ ಪ್ರಯತ್ನ ಮಾಡಬಹುದಾದ ಪ್ರಯತ್ನಶೀಲನು. ಆದ್ದರಿಂದ ಅವನಿಗೆ ಯಾವುದಾದರೂ ಸಂಕಟವನ್ನುಂಟು ಮಾಡಿದರೆ ನಮಗೆ ಗಂಗಾ ಸ್ನಾನ ಲಭ್ಯವಾಗುತ್ತದೆ" ಎಂದು ಯೋಚಿಸಿ, ದರ್ಭೆಗಳಿಂದ ಒಂದು ಗೋವು ಕರುವನ್ನು ಸೃಷ್ಟಿಸಿ ಅವನ್ನು ಗೌತಮ ಮಹರ್ಷಿ ಧಾನ್ಯ ಹರಡುತ್ತಿದ್ದ ಭೂಮಿಯಲ್ಲಿ ಬಿಟ್ಟರು. ಅವನ್ನು ಕಂಡ ಅ ಮುನಿ ಅವುಗಳನ್ನು ಒಂದು ಧರ್ಭೆಯಿಂದ ಅಟ್ಟಿದನು. ಆ ಧರ್ಭೆಯೇ ವಜ್ರಾಯುಧದಂತೆ ಆ ಪಶುಗಳನ್ನು ಮುಟ್ಟಿತು. ತಕ್ಷಣವೇ ಆ ಗೋವು ಕರುಗಳು ಅಲ್ಲಿಯೇ ಸತ್ತು ಬಿದ್ದವು. ಗೌತಮನಿಗೆ ಗೋಹತ್ಯಾ ಪಾಪ ಉಂಟಾಯಿತು. ಋಷಿಗಳೆಲ್ಲರೂ ಸೇರಿ, ಆ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಗಂಗೆಯನ್ನು ಭೂಮಿಗೆ ತಂದು, ಅದನ್ನು ಆ ಪಶುಗಳ ಮೇಲೆ ಹರಿಯುವಂತೆ ಮಾಡಿದರೆ ಅವನು ಪಾಪರಹಿತನಾಗುತ್ತಾನೆ ಎಂದು ಹೇಳಿದರು. ಹಾಗೇ ಆಗಲೆಂದು ಒಪ್ಪಿ, ಗೌತಮ ಮುನಿಯು, ಸಾವಿರ ವರ್ಷಗಳು ತಪಸ್ಸು ಮಾಡಿದನು. ಸದಾಶಿವನು ಪ್ರತ್ಯಕ್ಷನಾಗಿ, ವರ ಕೇಳೆಂದು ಹೇಳಲು, ಗೌತಮನು, " ಸ್ವಾಮಿ ನೀನು ನನ್ನಲ್ಲಿ ಪ್ರಸನ್ನನಾಗಿದ್ದರೆ ಚರಾಚರಗಳನ್ನೆಲ್ಲ ಉದ್ಧರಿಸಲು ಗಂಗೆಯನ್ನು ಲೋಕಕ್ಕೆ ಕಳುಹಿಸು" ಎಂದನು. ಅವನ ಮಾತಿಗೆ ಒಪ್ಪಿ ಮಹೇಶ್ವರನು ಗಂಗೆಯನ್ನು ಬಿಟ್ಟನು. ಭೂಲೋಕದಲ್ಲಿ ಸರ್ವಹಿತಕ್ಕಾಗಿ, ಗಂಗೆ, ಉತ್ತರದಲ್ಲಿನ ಭಾಗೀರಥಿಯಂತೆ, ದಕ್ಷಿಣದಲ್ಲಿ ಹರಿದು ಬಂದಳು. ಅದೇ ಗೌತಮಿ ನದಿ. ಗೋದಾವರಿ ಎಂಬ ಹೆಸರಿನಿಂದ ಪ್ರಸಿದ್ಧವಾದದ್ದು. ಅದರ ಮಹಿಮೆ ವರ್ಣಿಸಲಸಾಧ್ಯವಾದದ್ದು. ಅದರಿಂದಲೇ, ನಾಮಧಾರಕ, ಶ್ರೀಗುರುವು ಅಲ್ಲಿಗೆ ಬಂದರು. ಅಲ್ಲಿಂದ ಸರ್ವತೀರ್ಥಗಳನ್ನು ಪರ್ಯಟಿಸುತ್ತಾ ಅವರು ಮಂಜರೀ ಕ್ಷೇತ್ರಕ್ಕೆ ಬಂದರು.

ಅಲ್ಲಿ ಮಾಧವಾರಣ್ಯನೆಂಬ ನರಸಿಂಹ ಸ್ವಾಮಿಯ ಅರ್ಚಕನೊಬ್ಬನು ತನ್ನ ಮಾನಸ ಪೂಜೆಯಲ್ಲಿ ಶ್ರೀಗುರುವಿನ ದರ್ಶನಮಾಡುತ್ತಿದ್ದನು. ತಾನು ಮನಸ್ಸಿನಲ್ಲಿ ಧ್ಯಾನಿಸುವ ಶ್ರೀಗುರುವನ್ನು ಪ್ರತ್ಯಕ್ಷವಾಗಿ ಕಂಡ ಆ ಅರ್ಚಕನು ಆಶ್ಚರ್ಯಪಟ್ಟು, ಶ್ರೀಗುರುವನ್ನು ಸ್ತ್ರೋತ್ರಗಳಿಂದ ಸ್ತುತಿಸುತ್ತಾ, "ಶ್ರೀಪಾದರ ಪಾದಯುಗ್ಮಗಳು ದಿವ್ಯನದೀ ತೀರದಲ್ಲಿ ಸ್ಥಾಪಿತವಾಗಿವೆ. ಉತ್ತರ ತೀರ ನಿವಾಸಿಯಾದ ಶ್ರೀನರಸಿಂಹನು ಲಕ್ಷ್ಮೀಸಮೇತನಾಗಿ ಅಲ್ಲಿ ನೆಲೆಸಿದ್ದಾನೆ" ಎಂದು ಹೇಳುತ್ತಾ, ಬಹಳ ಸಂತೋಷದಿಂದ ಶ್ರೀಗುರುವಿಗೆ ನಮಸ್ಕರಿಸಿದನು. ಅದಕ್ಕೆ ಶ್ರೀಗುರುವು, "ಸೇವಾ ಮಾರ್ಗವನ್ನು ಹಿಡಿದು ನೀನು ಸನ್ಮಾರ್ಗದಲ್ಲಿ ಹೆಜ್ಜೆಯಿಟ್ಟಿದ್ದೀಯೆ. ನನ್ನ ದರ್ಶನದಿಂದ ನೀನು ಸಂಸಾರಮಾರ್ಗವನ್ನು ಬಿಟ್ಟು ನನ್ನ ರೂಪವನ್ನು ದರ್ಶನ ಮಾಡಿಕೊಂಡಿರು" ಎಂದು ಹೇಳಿ, ಹರ್ಷಪೂರ್ಣರಾಗಿ ಆ ಅರ್ಚಕನಿಗೆ ತಮ್ಮ ನಿಜ ರೂಪವನ್ನು ತೋರಿಸಲು, ಆ ಅರ್ಚಕನು ಆನಂದ ತುಂಬಿದವನಾಗಿ, ಅವರನ್ನು ಮತ್ತೆ ಮತ್ತೆ ಅನೇಕ ಸ್ತೋತ್ರಗಳಿಂದ ಸ್ತುತಿಸಿದನು.

"ಜಗದ್ಗುರು, ಲೋಕದೃಷ್ಟಿಯಲ್ಲಿ ಮಾನವರಾದರೂ, ನೀವು ಆ ತ್ರಿಮೂರ್ತ್ಯವತಾರವಾದ ಜಗಜ್ಜ್ಯೋತಿಯೇ! ಪರಮಪುರುಷನು. ವಿಶ್ವವನ್ನೇ ಉದ್ಧರಿಸುವಂತಹವನು. ಭೂಲೋಕದಲ್ಲಿ ಅವತರಿಸಿದ ದತ್ತದೇವರು. ನನ್ನನ್ನು ಕೃತಾರ್ಥರನ್ನಾಗಿ ಮಾಡಿ ನಿಮ್ಮ ಚರಣ ದರ್ಶನ ಭಾಗ್ಯವನ್ನು ಕೊಟ್ಟಿರಿ." ಎಂದು ಅನೇಕ ರೀತಿಯಲ್ಲಿ ಸ್ತುತಿಸಿದ, ಅವನ ಸ್ತೋತ್ರಕ್ಕೆ ಹರ್ಷಿತರಾದ ಶ್ರೀಗುರುವು ಅವನಿಗೆ, "ಮಾಧವಾರಣ್ಯ, ನಿನಗೆ ಮಂತ್ರ ಸಿದ್ಧಿಯಾಗಿದೆ. ಅದರಲ್ಲಿ ಸಂಶಯವಿಲ್ಲ. ಸದ್ಗತಿ ಪಡೆದು ಬ್ರಹ್ಮಲೋಕವನ್ನು ಸೇರುತ್ತೀಯೆ. ದಿನವೂ ನೃಸಿಂಹಮೂರ್ತಿರೂಪದಲ್ಲಿ ನಮ್ಮನ್ನೇ ಮನಸಾ ಪೂಜೆಮಾಡಿದೆ. ಅದರಿಂದಲೇ ನಿನಗೆ ಪ್ರತ್ಯಕ್ಷ ದರ್ಶನ ಕೊಟ್ಟೆವು" ಎಂದು ಹೇಳಿ, ಅವನಿಂದ ಬೀಳ್ಕೊಂಡು, ಶ್ರೀಗುರುವು ಅಲ್ಲಿಂದ ಹೊರಟು ವಾಸರ ಬ್ರಹ್ಮಕ್ಷೇತ್ರವನ್ನು ಸೇರಿದರು. ಅಲ್ಲಿ ಶಿಷ್ಯರೊಡನೆ ಸ್ನಾನಕ್ಕೆಂದು ನದಿಗೆ ಬಂದಾಗ, ಸಾಯಲು ಸಿದ್ಧನಾಗಿ ಬಂದಿದ್ದ ಬ್ರಾಹ್ಮಣನೊಬ್ಬನನ್ನು ಕಂಡರು. ಅವನು ಹೊಟ್ಟೆನೋವಿನಿಂದ ಬಹಳವಾಗಿ ನರಳುತ್ತಾ, ಆ ವೇದನೆಯನ್ನು ಸಹಿಸಲಾರದೆ ಪ್ರಾಣಬಿಡಬೇಕೆಂದು ಬಂದಿದ್ದನು. ಅವನಿಗೆ ಊಟ ಮಾಡಿದರೆ ಪ್ರಾಣಾಂತಿಕವಾದ ನೋವುಂಟಾಗುತ್ತಿತ್ತು. ಆ ನೋವನ್ನು ಸಹಿಸಲಾಗದೆ ಅವನು ಊಟ ಮಾಡುವುದನ್ನೇ ಬಿಟ್ಟಿದ್ದನು. ಅನ್ನ ದ್ವೇಷವಾಗಿದ್ದುದರಿಂದ ಅವನು ಪಕ್ಷಕ್ಕೋ, ತಿಂಗಳಿಗೋ ಒಂದುಸಲ ಊಟ ಮಾಡುತ್ತಿದ್ದನು. ಹೀಗೆ, ಕಷ್ಟವನ್ನನುಭವಿಸುತ್ತಾ ಅವನು ಮಹಾನವಮಿಗೆ ಮುಂಚಿನ ದಿನ ಊಟ ಮಾಡಿದನು. ಅದರಿಂದುಂಟಾದ ನೋವನ್ನು ಭರಿಸಲಾರದೆ ಪ್ರಾಣತ್ಯಾಗಮಾಡಲುದ್ಯುಕ್ತನಾಗಿ, "ಈ ಪ್ರಪಂಚದಲ್ಲಿ ನನ್ನಂತಹ ಪಾಪಾತ್ಮ ಬದುಕಿರಬಾರದು. ಅನ್ನವಿಲ್ಲದೆ ಬದುಕುವುದಾದರೂ ಹೇಗೆ ಸಾಧ್ಯ? ಅನ್ನಕ್ಕೆ ನಾನು ದ್ವೇಷಿಯಾದೆ. ಅದಕ್ಕಿಂತ ಮರಣವೇ ಲೇಸು" ಎಂದು ನಿಶ್ಚಯ ಮಾಡಿಕೊಂಡು, ಕತ್ತಿಗೆ ದೊಡ್ಡ ಕಲ್ಲೊಂದನ್ನು ಕಟ್ಟಿಕೊಂಡು ನದಿಯಲ್ಲಿ ಮುಳುಗಿ ಸಾಯಲು ಬಂದಿದ್ದ ಆ ಬ್ರಾಹ್ಮಣ, ಶಿವ ಸ್ಮರಣೆ ಮಾಡುತ್ತಾ, "ಹಿಂದಿನ ಜನ್ಮದಲ್ಲಿ ನಾನು ಅನ್ನದಾನವೇ ಮುಂತಾದ ಪುಣ್ಯಕಾರ್ಯಗಳನ್ನು ಮಾಡಲಿಲ್ಲವೆಂದು ತೋರುತ್ತದೆ. ಅಥವಾ ಬ್ರಾಹ್ಮಣನ ಭೋಜನವನ್ನೋ ಇಲ್ಲ ಗೋಗ್ರಾಸವನ್ನೋ ಅಪಹರಿಸಿದ್ದಿರಬೇಕು. ಇಲ್ಲವೇ ವಿಶ್ವಾಸಘಾತ ಮಾಡಿದ್ದೆನೋ ಏನೋ? ಅದಕ್ಕೇ ಇಂತಹ ಫಲ ಉಂಟಾಗಿದೆ. ಸದ್ಗುರುವನ್ನು ನಿಂದಿಸಿದ್ದೆನೇನೋ? ಅತಿಥಿಗಳನ್ನು ಆದರಿಸಿ ಭೋಜನವಿಡಲಿಲ್ಲವೇನೋ? ಮಾತಾಪಿತರನ್ನು ಆದರದಿಂದ ಕಾಣದೆ, ಅವರನ್ನು ಹಸಿವಿಟ್ಟು ನಾನು ಮೃಷ್ಟಾನ್ನ ಭೋಜನಮಾಡಿ, ಅವಮಾನಿಸಿದ್ದೆನೇನೋ? ಅಂತಹ ಯಾವುದೋ ಅಕಾರ್ಯ ಮಾಡಿದ್ದಿದುದರಿಂದಲೇ ಈ ಜನ್ಮದಲ್ಲಿ ನಾನು ಇಂತಹ ಯಾತನೆಯನ್ನನುಭವಿಸುತ್ತಿದ್ದೇನೆ" ಎಂದು ವ್ಯಥೆಪಡುತ್ತಾ ನದಿಯಲ್ಲಿ ಪ್ರವೇಶಮಾಡಿದನು. ಅದನ್ನು ಕಂಡ ಶ್ರೀಗುರುವು ಶಿಷ್ಯರನ್ನು ಕರೆದು ತಕ್ಷಣವೇ ಅವನನ್ನು ಕರೆತರಲು ಹೇಳಿದರು. ಶಿಷ್ಯರು ಬೇಗನೇ ಹೋಗಿ ನೀರಿನಲ್ಲಿಳಿದಿದ್ದ ಆ ಬ್ರಾಹ್ಮಣನನ್ನು ಗುರುವಿನ ಬಳಿಗೆ ಕರೆದುತಂದರು. ದುಃಖಿತರಿಗೆ ದಯಾಳುವಾದ ಆ ಗುರುವು, "ಹೇ ಬ್ರಾಹ್ಮಣ, ನೀನೇಕೆ ಪ್ರಾಣತ್ಯಾಗ ಮಾಡಲು ಹೊರಟಿದ್ದೀಯೆ? ಆತ್ಮಹತ್ಯೆ ಮಹಾಪಾಪವಲ್ಲವೇ?" ಎಂದು ಕೇಳಲು, ಆ ಬ್ರಾಹ್ಮಣ, "ಯತೀಶ್ವರ, ನಾನು ಹೇಳಿದ್ದನ್ನು ಕೇಳಿ ನೀವೇನು ಮಾಡಬಲ್ಲಿರಿ? ನನ್ನ ಜನ್ಮವೇ ವ್ಯರ್ಥವಾಗಿದೆ. ಪಕ್ಷಕ್ಕೊಂದುಸಲವೋ ಮಾಸಕ್ಕೊಂದುಸಲವೋ ಊಟಮಾಡಿದರೂ ತಡೆಯಲಾಗದ ಉದರ ಶೂಲೆಯುಂಟಾಗುತ್ತದೆ. ಅದನ್ನು ಸಹಿಸಲಾಗದೆ ಪ್ರಾಣತ್ಯಾಗಮಾಡಲು ನಿಶ್ಚಯಿಸಿದೆ. ಶರೀರವು ಅನ್ನಮಯವು. ಅಂತಹ ಅನ್ನವೇ ನನಗೆ ವೈರಿಯಾಗಿದೆ. ಗುರುನಾಥ, ಅನ್ನವಿಲ್ಲದೆ ಜೀವಿಸುವ ರೀತಿಯನ್ನು ನೀವೇ ತಿಳಿಸಿ" ಎಂದನು. ಅದನ್ನು ಕೇಳಿದ ಶ್ರೀಗುರುವು, "ನಿನ್ನ ಬಾಧೆಯನ್ನು ಒಂದು ನಿಮಿಷದಲ್ಲಿ ಹೊರಗಟ್ಟುವಂತಹ ಔಷಧವನ್ನು ಹೇಳುತ್ತೇನೆ. ಸಂಶಯಪಡಬೇಡ. ನಿನ್ನ ವ್ಯಾಧಿ ಭೂಮಿಯಲ್ಲಿ ಕಲೆತುಹೋಯಿತೆಂದು ತಿಳಿ. ನಿನಗಿಷ್ಟವಾದ ಮೃಷ್ಟಾನ್ನ ಭೋಜನ ಮಾಡು" ಎಂದರು. ಅವರ ಮಾತನ್ನು ಕೇಳಿದ ಆ ಬ್ರಾಹ್ಮಣ ದಿಕ್ಕು ತೋರದೆ, ಮೌನವಾಗಿ ಶ್ರೀಗುರುವಿನ ಪಾದಗಳಲ್ಲಿ ಶಿರವಿಟ್ಟು ನಮಸ್ಕರಿಸಿದನು.

ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಅಲ್ಲಿನ ಗ್ರಾಮಾಧಿಕಾರಿ ಸ್ನಾನಕ್ಕೆ ಬಂದನು. ಶ್ರೀಗುರುವನ್ನು ನೋಡಿದ ತಕ್ಷಣವೇ ಅ ಬ್ರಾಹ್ಮಣ. ಅವರ ಬಳಿಗೆ ಬಂದು ಶ್ರೀಗುರುವಿನ ಪಾದಗಳಿಗೆ ನಮಸ್ಕಾರ ಮಾಡಿ, ಭಕ್ತಿಯುಕ್ತನಾಗಿ ಅವರನ್ನು ಪ್ರಾರ್ಥಿಸುತ್ತಾ ನಿಂತನು. ಅವನನ್ನು ಕಂಡು ಶ್ರೀಗುರುವು ಆದರದಿಂದ, "ಅಯ್ಯಾ, ನೀನು ಎಲ್ಲಿಯವನು? ನಿನ್ನ ಹೆಸರೇನು? ಎಲ್ಲವನ್ನು ತಿಳಿಸು" ಎಂದರು. ಅದಕ್ಕೆ ಅವನು, "ನಾನು ಆಪಸ್ತಂಭ ಶಾಖೀಯನು. ಕೌಂಡಿನ್ಯಸ ಗೋತ್ರದವನು. ನನ್ನನ್ನು ಸಾಯಂದೇವನೆನ್ನುವರು. ಕಾಂಚಿಪುರ ನನ್ನ ನಿವಾಸಸ್ಥಾನ. ಉದರಭರಣಕ್ಕಾಗಿ ಯವನೇಶ್ವರನಿಗೆ ಸೇವಕನಾಗಿ, ಇಲ್ಲಿ ಗ್ರಾಮಾಧಿಕಾರಿಯಾಗಿ ಒಂದು ವರ್ಷದಿಂದ ಇದ್ದೇನೆ. ಇಂದು ನಾನು ಧನ್ಯನಾದೆ. ನಿಮ್ಮ ದರ್ಶನವನ್ನು ಮಾಡಿದವನಾದೆ. ಕೃತಾರ್ಥನಾದೆ. ನೀವು ವಿಶ್ವೋದ್ಧಾರಕರು. ಜನ್ಮಜನ್ಮಾಂತರಗಳಲ್ಲಿ ನಾನು ಮಾಡಿದ ಪಾಪಫಲಗಳೆಲ್ಲವೂ ಇಂದು ನಾಶವಾದವು. ನಿಮ್ಮ ಅನುಗ್ರಹ ಪಡೆದವನು ಭವಸಾಗರವನ್ನು ದಾಟುತ್ತಾನೆ. ಅಪ್ರಯತ್ನವಾಗಿ ನಿಮ್ಮ ದರ್ಶನ ನನಗೆ ಲಭ್ಯವಾಯಿತು. ಗಂಗೆ ಪಾಪಗಳನ್ನು, ಚಂದ್ರ ತಾಪವನ್ನು, ಕಲ್ಪವೃಕ್ಷ ದೈನ್ಯವನ್ನು ಹೋಗಲಾಡಿಸುತ್ತವೆ. ಆದರೆ ಶ್ರೀಗುರು ದರ್ಶನವು ಪಾಪ ತಾಪ ದೈನ್ಯಗಳನ್ನು ತಕ್ಷಣವೇ ಪರಿಹರಿಸುತ್ತದೆ. ಗಂಗೆಯಲ್ಲಿ ಸ್ನಾನಮಾಡಿದರೇನೇ ಪಾಪ ಪರಿಹಾರವಾಗುತ್ತದೆ. ಚಂದ್ರನು ರಾತ್ರಿಹೊತ್ತಿನಲ್ಲಿ ಮಾತ್ರ ತಾಪವನ್ನು ಕಳೆಯುತ್ತಾನೆ. ಕಲ್ಪವೃಕ್ಷ ತನ್ನ ನೆರಳಿಗೆ ಬಂದವನಿಗೆ ಮಾತ್ರವೇ ದೈನ್ಯ ಪರಿಹಾರಕವಾಗುತ್ತದೆ. ಹಾಗಲ್ಲದೆ ನಿಮ್ಮ ದರ್ಶನ ಮಾತ್ರದಿಂದಲೇ ಪಾಪ, ತಾಪ, ದೈನ್ಯಗಳು ನಶಿಸಿಹೋಗುತ್ತವೆ. ಚತುರ್ವರ್ಗಫಲಪ್ರದವಾದ ನಿಮ್ಮ ದರ್ಶನವಂತಹದು" ಎಂದು ಸ್ತೋತ್ರಮಾಡುತ್ತಾ ಮತ್ತೆ ಅವರ ಕಾಲಿಗೆರಗಿದನು.

ಶ್ರೀಗುರುವು ಅವನನ್ನು ಮೇಲಕ್ಕೆತ್ತಿ, ಪಕ್ಕದಲ್ಲಿ ಕೂಡಿಸಿಕೊಂಡು, "ಅಯ್ಯಾ, ನನ್ನ ಮಾತು ಕೇಳು. ಈ ಬ್ರಾಹ್ಮಣ ಉದರಶೂಲೆಯಿಂದ ನರಳುತ್ತಿದ್ದಾನೆ. ವ್ಯಾಧಿ ಉಪಶಮನವಾಗಲು ಇವನಿಗೆ ಒಂದು ಔಷಧವನ್ನು ಹೇಳಿದ್ದೇನೆ. ಇವನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗಿ ಅವನಿಗೆ ಬಹು ಇಷ್ಟವಾದ ಭೋಜನವನ್ನು ನೀಡು. ಅನ್ನ ಊಟಮಾಡುವುದರಿಂದ ಅವನ ವ್ಯಾಧಿಪೀಡೆ ನಾಶವಾಗಿಹೋಗುವುದು. ಇವನು ಹಸಿದುಗೊಂಡಿದ್ದಾನೆ. ಆದ್ದರಿಂದ ತ್ವರೆಯಾಗಿ ಅವನನ್ನು ಕರೆದುಕೊಂಡುಹೋಗಿ ಊಟಮಾಡಿಸು" ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿದ ಸಾಯಂದೇವ, ವಿನಯದಿಂದ, "ಸ್ವಾಮಿ, ಇವನು ಊಟಮಾಡಿ ಪ್ರಾಣ ಬಿಡುತ್ತಾನೇನೋ? ತಿಂಗಳಿಗೊಂದು ಸಲದಂತೆ ನಿನ್ನೆ ಊಟಮಾಡಿ ಆ ಬಾಧೆ ತಡೆಯಲಾರದೆ ಪ್ರಾಣ ತ್ಯಾಗಕ್ಕೆ ಸಿದ್ಧನಾದನು. ಇವನಿಗೆ ಅನ್ನ ದಾನಮಾಡಿದರೆ ನನಗೆ ಬ್ರಹ್ಮಹತ್ಯಾ ಪಾಪ ಬರುವುದು" ಎಂದು ಸಂದೇಹ ಪೂರ್ವಕವಾಗಿ ಹೇಳಿದನು. ಅದಕ್ಕೆ ಶ್ರೀಗುರುವು, "ಅಯ್ಯಾ, ಇವನಿಗೆ ಔಷಧವನ್ನು ಹೇಳುತ್ತೇನೆ. ಮಾಷಾನ್ನ, ಪರಮಾನ್ನ, ಕಜ್ಜಾಯಗಳು ಇವನಿಗೆ ಪರಮೌಷಧ. ಅವನ್ನು ತಿಂದರೆ ಇವನ ವ್ಯಾಧಿ ನಾಶವಾಗುತ್ತದೆ. ಸಂದೇಹಪಡದೆ ತಕ್ಷಣವೇ ಕರೆದುಕೊಂಡು ಹೋಗಿ, ಅತಿತ್ವರೆಯಾಗಿ ಇವನಿಗೆ ಭೋಜನ ಮಾಡಿಸು" ಎಂದು ಆದೇಶಕೊಟ್ಟರು. ಸಾಯಂದೇವನು ಓಂ ಎಂದು ಹೇಳುತ್ತಾ, ಶ್ರೀಗುರುವನ್ನೂ ಶಿಷ್ಯರೊಡನೆ ತನ್ನ ಮನೆಗೆ ಭಿಕ್ಷೆಗೆ ಬರಬೇಕೆಂದು ಪ್ರಾರ್ಥಿಸಿಕೊಂಡನು. ಶ್ರೀಗುರುವು ಅವನ ಪ್ರಾರ್ಥನೆಯನ್ನು ಮನ್ನಿಸಿದರು. ಸಾಯಂದೇವನು ಬಹಳ ಸಂತೋಷಗೊಂಡನು. ನಾನು, ಇತರಶಿಷ್ಯರು, ಅ ರೋಗಿಯಾಗಿದ್ದ ಬ್ರಾಹ್ಮಣ, ಎಲ್ಲರೂ ಶ್ರೀಗುರುವಿನೊಡನೆ ಸಾಯಂದೇವನ ಮನೆಗೆ ಹೋದೆವು. ಪತಿವ್ರತೆಯಾದ ಅವನ ಪತ್ನಿ, ಬಹಳ ಸಂತೋಷದಿಂದ ನಮ್ಮನ್ನು ಸ್ವಾಗತಿಸಿದಳು. ಶಿಷ್ಯರ ಸಹಿತ, ಆ ದಂಪತಿಗಳು, ಗುರುವಿಗೆ ಷೋಡಶೋಪಚಾರಗಳಿಂದ ಸತ್ಕರಿಸಿದರು. ಅವರು ಮಾಡಿದ ಗುರುಪೂಜಾ ವಿಧಾನವೇ ನನಗೆ ವಿಚಿತ್ರವಾಗಿ ತೋರಿತು. ರಂಗವಲ್ಲಿಯಿಂದ ಒಂದು ಮಂಟಪವನ್ನು ರಚಿಸಿ, ನಾನಾ ವರ್ಣಗಳಿಂದ ಅಷ್ಟದಳಪದ್ಮಗಳನ್ನು ಬರೆದು, ಐದು ಬಣ್ಣಗಳಿಂದ ಚಿತ್ರಚಿತ್ರವಾಗಿ ಆ ಸ್ಥಳವನ್ನು ಅಲಂಕರಿಸಿ, ನಂತರ ಸಂಕಲ್ಪ ಮಾಡಿ, ಸಾಷ್ಟಾಂಗ ನಮಸ್ಕಾರ ಮಾಡಿ, ಸಾಯಂದೇವ ವಿನಯದಿಂದ, ಶಾಸ್ತ್ರೀಯವಾಗಿ ಚಿತ್ರಾಸನದಲ್ಲಿ ಶ್ರೀಗುರುವನ್ನೂ, ಶಿಷ್ಯರನ್ನೂ ಒಂದೊಂದು ಮಂಡಲದಲ್ಲಿ ಕೂಡಿಸಿ, ಕ್ರಮವಾಗಿ ಉಪಚಾರಗಳನ್ನು ಮಾಡಿ, ಪಂಚಾಮೃತವೇ ಮುಂತಾದುವುಗಳಿಂದ, ರುದ್ರಸೂಕ್ತಗಳನ್ನು ಹೇಳುತ್ತಾ ಅವರೆಲ್ಲರ ಪಾದಗಳಿಗೆ ಅಭಿಷೇಕ ಮಾಡಿದರು. ಭಕ್ತಿಯಿಂದ ಮಾಲ್ಯಾದಿಗಳನ್ನು ಶ್ರೀಗುರುವಿಗೆ ಅರ್ಪಿಸಿ, ಜ್ಞಾನಿಯಾದ ಸಾಯಂದೇವನು ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಸ್ವೀಕರಿಸಿದನು. ಅ ಪಾದೋದಕಕ್ಕೆ ಮತ್ತೆ ಪೂಜಾದಿಗಳನ್ನು ಮಾಡಿ, ಸದ್ಗುರುವಿಗೆ ನೀರಾಜನ ಕೊಟ್ಟು, ಗೀತವಾದ್ಯಗಳಿಂದ ಸಂತಸಗೊಳಿಸಿದನು. ನಂತರ ಶಿಷ್ಯರಿಗೂ ಅದೇವಿಧದಲ್ಲಿ ಷೋಡಶೋಪಚಾರ ಪೂಜಾದಿಗಳನ್ನು ಮಾಡಿದರು. ವೇದಮಂತ್ರಘೋಷಗಳಿಂದ ಪುಷ್ಪಾಂಜಲಿಯನ್ನು ಕೊಟ್ಟು ಶ್ರೀಗುರುವನ್ನು ಗೀತೋಪಚಾರ ನಮಸ್ಕಾರಗಳಿಂದ ಸಂತೋಷಗೊಳಿಸಿದರು. ಪತಿವ್ರತೆಯಾದ ಪತ್ನಿಯೊಡನೆ ಸಾಯಂದೇವನು ಈ ರೀತಿಯಾಗಿ ಗುರುವನ್ನು ಪೂಜಿಸಿ, ಪರಮಾದರದಿಂದ ಎಲ್ಲರಿಗೂ ನಮಸ್ಕರಿಸಿದನು. ಅವನ ಪೂಜಾದಿಗಳಿಂದ ಸಂತುಷ್ಟನಾದ ಶ್ರೀಗುರುವು, "ನಿನ್ನ ಸಂತತಿಯೆಲ್ಲವೂ ನನ್ನಲ್ಲಿ ಭಕ್ತಿಯಿಂದಿದ್ದು ನಿನ್ನ ಕುಲವನ್ನು ವೃದ್ಧಿಗೊಳಿಸುತ್ತಾರೆ. ನಿನಗೆ ಗುರುಮಹಿಮೆಯ ಅರಿವಾಗಿದೆ. ಪುತ್ರಪೌತ್ರಾದಿಗಳಿಂದ ಕೂಡಿ ನಿನ್ನ ವಂಶವು ವೃದ್ಧಿಯಾಗಲಿ" ಎಂದು ಅವನನ್ನು ಅನುಗ್ರಹಿಸಿದರು. ಆ ನಂತರ ಸಾಯಂದೇವನು ಮಂಡಲಗಳನ್ನು ರಚಿಸಿ, ಪಾತ್ರೆಗಳನ್ನಿಟ್ಟು, ಕ್ರಮವಾಗಿ ಪಾಯಸಾನ್ನ, ಪಕ್ವಾನ್ನ, ಮಾಷಾನ್ನ, ವಿಧವಿಧವಾದ ಭಕ್ಷ್ಯಗಳು, ಸಿಹಿಪದಾರ್ಥಗಳು, ನಾನಾ ವಿಧವಾದ ಪಲ್ಯಗಳು, ಉತ್ತಮವಾಗಿ ತಯಾರಿಸಿದ ವ್ಯಂಜನಗಳು ಮುಂತಾದುವೆಲ್ಲವನ್ನೂ ಬಡಿಸಿ, ಎಲ್ಲರಿಗೂ ಸಾದರವಾಗಿ ಭೋಜನ ಮಾಡಿಸಿದನು. ಉದರಶೂಲೆಯಿಂದ ನರಳುತ್ತಿದ್ದ ಬ್ರಾಹ್ಮಣನು ಯಥೇಷ್ಟವಾಗಿ ಊಟಮಾಡಿದನು. ಆಗ ಒಂದು ವಿಚಿತ್ರವಾಯಿತು. ಸದ್ಗುರು ಕೃಪಾದೃಷ್ಟಿಯಿಂದ ಅವನ ರೋಗವು ಆ ಕ್ಷಣದಲ್ಲೇ ಮಾಯವಾಗಿ ಹೋಯಿತು. ಚಿಂತಾಮಣಿಯ ಸ್ಪರ್ಶಮಾತ್ರದಿಂದ ಕಬ್ಬಿಣ ಚಿನ್ನವಾಗುವಂತೆ ಆ ಉದರಶೂಲಾ ಬಾಧಿತನಾದ ಬ್ರಾಹ್ಮಣ ರೋಗವಿಹೀನನಾದನು. ಸೂರ್ಯೋದಯದಿಂದ ಅಂಧಕಾರವು ತೊಲಗಿ ಹೋಗುವಂತೆ, ಶ್ರೀಗುರುವಿನ ಕೃಪೆಯಿದ್ದರೆ ದೈನ್ಯವೇಕುಂಟಾಗುವುದು? ಶ್ರೀಗುರು, ಅವರ ಶಿಷ್ಯರೊಡನೆ ಸಹಪಂಕ್ತಿ ಭೋಜನ ಮಾಡಿದ ಆ ವಿಪ್ರ ಬಹು ಸಂತುಷ್ಟನಾದನು. ಆ ವಿಚಿತ್ರವನ್ನು ಕಂಡ ಎಲ್ಲರೂ ವಿಸ್ಮಿತರಾದರು. ಆಹಾ! ಅವನಿಗೆ ಶತ್ರುವಾಗಿದ್ದ ಆನ್ನವೇ ಅವನಿಗೆ ದಿವ್ಯೌಷಧವಾಗಿ ಅವನ ರೋಗವು ನಾಶವಾಯಿತು!

ನಾಮಧಾರಕ, ಏನು ಹೇಳಲಿ? ಗುರುಕೃಪೆಯಿಂದ ಜನ್ಮಾಂತರ ಪಾಪಗಳೂ ಕೂಡಾ ನಾಶವಾಗಬಲ್ಲವು. ಇದೊಂದು ವ್ಯಾಧಿಯ ವಿಷಯವೇನು ದೊಡ್ಡದು? ಗುರುಚರಿತ್ರೆಯಲ್ಲಿನ ಈ ಪವಿತ್ರವಾದ ಆಖ್ಯಾನವನ್ನು ಭಕ್ತಿಯಿಂದ ಪಠಿಸಿದವನು, ಕೇಳುವವನು ಇಬ್ಬರಿಗೂ, ಅವರವರ ಮನೆಗಳಲ್ಲಿ ರೋಗ ಭಯವಿರುವುದಿಲ್ಲ." 

ಇಲ್ಲಿಗೆ ಹದಿಮೂರನೆಯ ಅಧ್ಯಾಯ ಮುಗಿಯಿತು.



No comments:

Post a Comment