Monday, May 6, 2013

||ಶ್ರೀಗುರುಚರಿತ್ರೆ - ಮುವ್ವತ್ತೈದನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

ನಾಮಧಾರಕ ವಿನಯದಿಂದ ಸಿದ್ಧಮುನಿಯನ್ನು ಕೇಳಿದನು. "ಶ್ರೀಗುರುವು ಹಿಂದೆ ಯುವ ದಂಪತಿಗಳಿಗೆ ಹೇಳಿದ ರುದ್ರಾಧ್ಯಾಯವನ್ನು ತಿಳಿಸಿದರಲ್ಲವೇ? ಆ ನಂತರದ ಕಥೆಯನ್ನು ಹೇಳಬೇಕೆಂದು ಕೋರುತ್ತೇನೆ" ಅದಕ್ಕೆ ಸಿದ್ಧಮುನಿ ಹೇಳಿದರು.

"ಅಯ್ಯಾ, ನಾಮಧಾರಕ, ಕೇಳು. ಆ ಪತಿವ್ರತಾ ಯುವತಿ ಶ್ರೀಗುರುವಿನ ಮುಂದೆ ಕೈಜೋಡಿಸಿ ನಿಂತು, "ಗುರುದೇವ ಮುಂದೆ ನಮ್ಮ ಗತಿ ಏನು? ಇನ್ನು ಮುಂದೆ ನಾವು ಹೇಗಿರಬೇಕು? ಹೇ ಭಗವಾನ್, ನನಗೊಂದು ಮಂತ್ರವನ್ನು ಉಪದೇಶ ಮಾಡಿ. ಅದರೊಡನೆ ನಿಮ್ಮ ಈ ಸನಾತನವಾದ ಚರಣಗಳನ್ನು ಸ್ಮರಿಸಿಕೊಂಡಿರುತ್ತೇನೆ" ಎಂದು ಕೋರಿದಳು. ಅದಕ್ಕೆ ಶ್ರೀಗುರುವು, "ಸ್ತ್ರೀಯರಿಗೆ ಪತಿ ಸೇವೆಯೊಂದೇ ಸಾಧನವು. ಮಂತ್ರೋಪದೇಶ ಮಾಡಿದರೆ ಸ್ತ್ರೀಯರಿಗೆ ಹಾನಿಯೇ! ಮಂತ್ರ ದಾತನಿಗೂ, ಆ ಮಂತ್ರದ ಮಹಿಮೆಗೂ ಕೂಡ ಹಾನಿಯುಂಟಾಗುತ್ತದೆ. ಅಮ್ಮ, ಪತಿವ್ರತೆ, ಪೂರ್ವದಲ್ಲಿ ಶುಕ್ರಾಚಾರ್ಯನಿಗೆ ಹಾಗಾಯಿತು" ಎಂದು ಹೇಳಿದರು. ಅದಕ್ಕೆ ಅವಳು, "ಸ್ವಾಮಿ, ಸ್ತ್ರೀಯರಿಗೆ ಏಕೆ ಮಂತ್ರೋಪದೇಶ ಮಾಡಬಾರದು? ಶುಕ್ರನಿಗೆ ಏನಾಯಿತು?" ಎಂದು ಶ್ರೀಗುರು ಚರಣಗಳನ್ನು ಹಿಡಿದು ಕೇಳಿದಳು.

ಅದಕ್ಕೆ ಶ್ರೀಗುರುವು ಹೇಳಿದರು, "ಅಮ್ಮ, ಹಿಂದೆ ನಡೆದ ಕಥೆಯನ್ನು ಕೇಳು. ಒಮ್ಮೆ ಸುರಾಸುರರಿಗೆ ಯುದ್ಧ ಸಂಭವಿಸಿತು. ಸುರರು ಅಸುರ ಸೇನೆಯನ್ನು ಸಂಹರಿಸುತ್ತಾ ಹೋದರು. ಆದರೆ ಶುಕ್ರಾಚಾರ್ಯನು ಹಾಗೆ ಸತ್ತ ದೈತ್ಯ ಸೈನಿಕರನ್ನು ಮಂತ್ರ ಪ್ರಭಾವದಿಂದ ಪುನರ್ಜೀವಿತರನ್ನಾಗಿ ಮಾಡಿ ಮತ್ತೆ ಮತ್ತೆ ರಣಭೂಮಿಗೆ ಕಳುಹಿಸುತ್ತಿದ್ದನು. ಹಾಗೆ ನಡೆಯುತ್ತಿದ್ದುದರಿಂದ ದೇವೇಂದ್ರನು ಅಸಹಾಯನಾಗಿ ಕೈಲಾಸಕ್ಕೆ ಹೋಗಿ ಪರಮೇಶ್ವರನಿಗೆ ಶುಕ್ರ ಮಂತ್ರ ಪ್ರಭಾವವನ್ನು ವಿವರಿಸಿದನು. ಈಶ್ವರನು ಕೋಪಗೊಂಡು ನಂದಿಯನ್ನು ಕರೆದು, "ನೀನು ಈಗಲೇ ಹೋಗಿ, ಶುಕ್ರನನ್ನು ಹಿಡಿದುಕೊಂಡು ಬಾ" ಎಂದು ಆಜ್ಞಾಪಿಸಿದನು. ತನ್ನ ಸ್ವಾಮಿಯ ಆಜ್ಞೆಯನ್ನು ಕೇಳಿದ ನಂದಿ, ತಕ್ಷಣವೇ ಹೋಗಿ ಧ್ಯಾನಸ್ಥನಾಗಿದ್ದ ಶುಕ್ರಾಚಾರ್ಯನನ್ನು ಹಿಡಿದು ಶಿವನ ಬಳಿಗೆ ಕರೆತಂದನು. ಅಸುರ ಗಣದಲ್ಲಿ ಕೋಲಾಹಲ ವುಂಟಾಯಿತು. ಅಗಸ್ತ್ಯನು ಸಮುದ್ರವನ್ನು ನುಂಗಿದಂತೆ ಪರಮಶಿವನು ಶುಕ್ರಾಚಾರ್ಯನನ್ನು ನುಂಗಿಬಿಟ್ಟನು. ಕೆಲವು ಕಾಲ ಶುಕ್ರನು ಶಿವನ ಜಠರದಲ್ಲೇ ಇದ್ದನು. ಒಂದು ಸಲ ಶಿವನು ಅನ್ಯಮನಸ್ಕನಾಗಿದ್ದಾಗ ಶುಕ್ರನು ಶಿವನ ಮೂತ್ರ ದ್ವಾರದಿಂದ ಹೊರ ಬಿದ್ದನು. ಹಿಂದೆ ಅವನಿಗೆ ಭಾರ್ಗವನೆಂಬ ಹೆಸರಿದ್ದರೂ ಶಿವನ ಶುಕ್ರ ಸಂಪರ್ಕದಿಂದ ಅವನಿಗೆ ಶುಕ್ರನೆಂದೇ ಹೆಸರಾಯಿತು. ಹಾಗೆ ಈಚೆಗೆ ಬಂದ ಶುಕ್ರನು ಮತ್ತೆ ಅಸುರರನ್ನು ಮಂತ್ರದಿಂದ ಪುನರ್ಜೀವಿತರಾಗುವಂತೆ ಮಾಡುತ್ತಿದ್ದನು. ಆಗ ದೇವೇಂದ್ರನು ಪುರೋಹಿತನಾದ ಬೃಹಸ್ಪತಿಯನ್ನು ಕರೆಸಿ, "ಹೇ ಬೃಹಸ್ಪತಿ, ನೀನು ನಮ್ಮ ಪುರೋಹಿತನು. ನೀನು ನಿನ್ನ ಬುದ್ಧಿಯಿಂದ ಯೋಚಿಸಿ ಆ ಶುಕ್ರನ ಕಾರ್ಯಕ್ಕೆ ವಿಘ್ನವನ್ನು ಉಂಟು ಮಾಡು. ಆ ಶುಕ್ರನಿಗಿಂತಲೂ ನೀನು ಬುದ್ಧಿ ವಿವೇಕಗಳಲ್ಲಿ ಅಧಿಕನು. ರಾಕ್ಷಸರ ಭಾಗ್ಯವನ್ನು ನೋಡು. ಅವರಿಗೆ ಶುಕ್ರನು ಹಿತಕರವಾದ ಗುರುವಾಗಿದ್ದಾನೆ. ಸತ್ತವರೂ ಮತ್ತೆ (ಹುಟ್ಟಿ) ನಮ್ಮ ಮೇಲೆ ಯುದ್ಧಕ್ಕೆ ಬರುತ್ತಿದ್ದಾರೆ. ನೀನು ನಮ್ಮನ್ನೇಕೆ ಉಪೇಕ್ಷಿಸುತ್ತಿದ್ದೀಯೆ? ತ್ವರೆಯಾಗಿ ಏನಾದರೂ ಉಪಾಯ ಮಾಡು. ದೇವತೆಗಳಿಗೆಲ್ಲ ನೀನು ಪೂಜ್ಯನು. ನೀನು ದಯೆ ತೋರಿ ಯಾವುದಾದರೂ ಉಪಾಯವನ್ನು ಕಲ್ಪಿಸು" ಎಂದು ಬೃಹಸ್ಪತಿಯನ್ನು ಪ್ರಶಂಸೆ ಮಾಡಿ, ಉಪಚಾರಾದಿಗಳಿಂದ ಸಂತೋಷಗೊಳಿಸಿದನು. ಬೃಹಸ್ಪತಿಯು ಕರುಣೆಯಿಂದ ದೇವೇಂದ್ರನಿಗೆ, "ವಜ್ರಪಾಣಿ, ಮಂತ್ರವು ಆರು ಕಿವಿಗಳಲ್ಲಿ ಪ್ರವೇಶಿಸಿದರೆ (ಬಿದ್ದರೆ) ಅದರ ಸಾಮರ್ಥ್ಯವು ನಾಶವಾಗುವುದು. ಶುಕ್ರನ ಬಳಿಗೆ ಯಾರಾದರೂ ಒಬ್ಬ ಧೂರ್ತನನ್ನು ಕಳುಹಿಸ ಬೇಕು. ಅವನು ವಿದ್ಯಾರ್ಥಿ ರೂಪದಿಂದ ಶುಕ್ರನನ್ನು ಸೇರಿ ಮಂತ್ರಕ್ಕೆ ವಿಘ್ನವನ್ನುಂಟು ಮಾಡಬೇಕು. ವಿದ್ಯಾರ್ಥಿಯಾಗಿ ನನ್ನ ಮಗ ಕಚನನ್ನು ಕಳುಹಿಸುತ್ತೇನೆ. ಅವನು ಆ ಮಂತ್ರವನ್ನು ಪಡೆಯುತ್ತಾನೆ" ಎಂದು ಹೇಳಿ, ಕಚನನ್ನು ಕರೆದು ಅವನಿಗೆ, "ನೀನು ವಿದ್ಯಾರ್ಥಿ ರೂಪದಲ್ಲಿ ಶುಕ್ರನ ಬಳಿಗೆ ಹೋಗು. ಅಲ್ಲಿ ನಮ್ಮನ್ನು ನಿಂದಿಸಿಯಾದರೂ ಅವನನ್ನು ಸೇವಿಸುತ್ತಾ ಸಂಜೀವನಿ ವಿದ್ಯೆಯನ್ನು ಸಾಧಿಸಿಕೊಂಡು ಬಾ" ಎಂದು ಆದೇಶಕೊಟ್ಟನು. ಇಂದ್ರಾದಿಗಳ ಅನುಮತಿಯನ್ನು ಪಡೆದು ಕಚನು ಶುಕ್ರಾಚಾರ್ಯನನ್ನು ಸೇರಿ ಕೊಂಡನು.

ಕಚನು ಶುಕ್ರಾಚಾರ್ಯನಿಗೆ ನಮಸ್ಕರಿಸಿ, "ನಾನೊಬ್ಬ ಬ್ರಾಹ್ಮಣನ ಮಗ. ನಿಮ್ಮ ಅಪಾರವಾದ ಕೀರ್ತಿಯನ್ನು ಕೇಳಿದ್ದೇನೆ. ನಿಮ್ಮಲ್ಲಿ ವಿದ್ಯಾರ್ಥಿಯಾಗಿದ್ದು ಕೊಂಡು ನಿಮ್ಮ ಸೇವೆ ಮಾಡಿಕೊಂಡಿರಬೇಕೆಂದು ಬಂದಿದ್ದೇನೆ. ಭಕ್ತ ಚಿಂತಾಮಣಿಯಾದ ನೀವು ಅನಾಥ ಪರಿಪಾಲಕರು" ಎಂದು ಕರುಣೆ ಹುಟ್ಟುವಂತೆ ಮಾತನಾಡುತ್ತಾ ವಿನಯ ವಿಧೇಯತೆಗಳಿಂದ ಕೋರಿಕೊಂಡನು. ಅಲ್ಲಿಯೇ ಇದ್ದ ಶುಕ್ರನ ಮಗಳು, ದೇವಯಾನಿ, ತನ್ನ ತಂದೆಗೆ, "ಇವನು ಬ್ರಾಹ್ಮಣನಾಗಿಯೇ ಕಾಣಿಸುತ್ತಿದ್ದಾನೆ. ತಂದೆ ಇವನನ್ನು ಶಿಷ್ಯನನ್ನಾಗಿ ಸ್ವೀಕರಿಸು" ಎಂದು ಹೇಳಿದಳು. ತನ್ನಲ್ಲಿ ತಾನು ಅವಳು, "ಈ ಕಚನು ಅಂದವಾಗಿದ್ದಾನೆ. ನನ್ನ ಗಂಡನಾದರೆ ಚೆನ್ನಾಗಿರುತ್ತದೆ" ಎಂದು ಯೋಚಿಸಿದಳು. ಅಂತಹ ಯೋಚನೆ ಬಂದ ಕೂಡಲೇ ಅವಳು ತನ್ನ ತಂದೆಯನ್ನು ಮತ್ತೊಮ್ಮೆ ಪ್ರಾರ್ಥಿಸಿದಳು. ಮಗಳ ಮೇಲಿನ ವಾತ್ಸಲ್ಯದಿಂದ ಶುಕ್ರಾಚಾರ್ಯನು ಕಚನನ್ನು ಶಿಷ್ಯನನ್ನಾಗಿ ಸ್ವೀಕರಿಸಿದನು.

ವಿದ್ಯಾಭ್ಯಾಸ ನಿರತನಾದ ಕಚನನ್ನು ರಾಕ್ಷಸರು ಧೂರ್ತನೆಂದು ತಿಳಿದು, "ಇವನು ದೇವತೆಗಳ ಪಕ್ಷಕ್ಕೆ ಸೇರಿದವನು. ಕಪಟದಿಂದ ವಿದ್ಯೆಯನ್ನು ಕಲಿತು ಅದನ್ನು ದೇವತೆಗಳಿಗೆ ಹೇಳುತ್ತಾನೆ. ಅದರಿಂದ ನಮಗೆ ಕೇಡುಂಟಾಗುತ್ತದೆ" ಎಂದು ಯೋಚಿಸಿದರು. ಒಂದುದಿನ ಕಚನು ಸಮಿತ್ತುಗಳನ್ನು ತರಲು ಕಾಡಿಗೆ ಹೋದನು. ದುಷ್ಟ ಬುದ್ಧಿಯಿಂದ ದೈತ್ಯರೂ ಅವನೊಡನೆ ಕಾಡಿಗೆ ಹೋಗಿ, ಅಲ್ಲಿ ಅವನನ್ನು ಕೊಂದು, ಸಮಿತ್ತುಗಳನ್ನು ತೆಗೆದು ಕೊಂಡು ಮನೆಗೆ ಹಿಂತಿರುಗಿದರು. ಕಚನು ಹಿಂತಿರುಗಿ ಬರಲಿಲ್ಲವೆಂಬುದನ್ನು ಕಂಡ ದೇವಯಾನಿ, ತನ್ನ ತಂದೆಗೆ, "ಇನ್ನೂ ನಿನ್ನ ಪ್ರಿಯ ಶಿಷ್ಯ ಮನೆಗೆ ಹಿಂತಿರುಗಲಿಲ್ಲ. ಅವನು ಬರುವವರೆಗೂ ನಾನು ಊಟಮಾಡುವುದಿಲ್ಲ" ಎಂದು ಹೇಳಿದಳು. ಅವಳ ಮಾತನ್ನು ಕೇಳಿದ ಭಾರ್ಗವನು ಚಿಂತೆಗೊಂಡು ಧ್ಯಾನ ಮಗ್ನನಾಗಿ ಕಚನು ಕಾಡಿನಲ್ಲಿ ಮೃತನಾಗಿದ್ದಾನೆಂದು ತಿಳಿದು ಕೊಂಡು, ಸಂಜೀವನಿ ಮಂತ್ರದಿಂದ ಅವನನ್ನು ಬದುಕಿಸಿ ಮನೆಗೆ ತಂದನು. ಸ್ವಲ್ಪಕಾಲವಾದ ಮೇಲೆ ಮತ್ತೆ ಆ ದುಷ್ಟಬುದ್ಧಿ ರಾಕ್ಷಸರು ಕಚನನ್ನು ಕೊಂದು, ಶುಕ್ರಾಚಾರ್ಯನು ಅವನನ್ನು ಮತ್ತೆ ಬದುಕಿಸುತ್ತಾನೆಂಬ ಭಯದಿಂದ ಅವನ ಶವವನ್ನು ಚೂರ್ಣ ಮಾಡಿ ಹತ್ತು ದಿಕ್ಕುಗಳಲ್ಲೂ ಚೆಲ್ಲಿ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು. ಸೂರ್ಯಾಸ್ತವಾದರೂ ಕಚನು ಮನೆಗೆ ಬರದಿದ್ದುದರಿಂದ ದೇವಯಾನಿ ಮತ್ತೆ ತಂದೆಗೆ, "ತಂದೆ, ನನ್ನ ಪ್ರಿಯನು ಇನ್ನೂ ಏಕೆ ಮನೆಗೆ ಬರಲಿಲ್ಲ? ಕಚನು ನನ್ನ ಪ್ರಾಣ ಸಖ. ಅವನು ಬರದಿದ್ದರೆ ನಾನು ವಿಷ ಕುಡಿಯುತ್ತೇನೆ. ಆದ್ದರಿಂದ ತಂದೆ ಕಚ ಮನೆಗೆ ಬರುವಂತೆ ಮಾಡು" ಎಂದು ಹೇಳಿದಳು. ಅವಳ ಮೇಲಿನ ವಾತ್ಸಲ್ಯದಿಂದ ಶುಕ್ರನು ಮತ್ತೆ ಧ್ಯಾನಸ್ಥನಾಗಿ, ಕಚನು ಮೃತನಾಗಿ ಚೂರ್ಣ ರೂಪದಲ್ಲಿ ಭಿನ್ನಾವಯವಗಳಿಂದ ಕೂಡಿ ಬಿದ್ದಿರುವುದನ್ನು ತಿಳಿದು, ಮತ್ತೊಮ್ಮೆ ಮಂತ್ರ ಜಪದಿಂದ ಅವನನ್ನು ಬದುಕಿಸಿ ಮನೆಗೆ ಬರುವಂತೆ ಮಾಡಿದನು. ದೇವಯಾನಿ ಸಂತೋಷಗೊಂಡಳು.

ರಾಕ್ಷಸರು ಮತ್ತೆ ತಮ್ಮಲ್ಲೇ ವಿಚಾರ ಮಡುತ್ತಾ ಶುಕ್ರನು ಮಗಳ ಮೇಲಿನ ಪ್ರೀತಿಯಿಂದ ಕಚನನ್ನು ಮತ್ತೆ ಮತ್ತೆ ಬದುಕಿಸುತ್ತಿದ್ದಾನೆ. ನಾವು ಇದಕ್ಕೆ ತಕ್ಕ ಉಪಾಯ ಮಾಡಬೇಕು. ಕಚನನ್ನು ಕೊಂದು ಅವನನ್ನು ಸುಟ್ಟು ಬೂದಿ ಮಾಡಿ ಆ ಬೂದಿಯನ್ನು ಪಾನೀಯಗಳಲ್ಲಿ ಕಲಸಿ ಶುಕ್ರನು ಕುಡಿಯುವಂತೆ ಮಾಡ ಬೇಕು" ಎಂದು ನಿರ್ಧರಿಸಿಕೊಂಡು, ಮಾರನೆಯ ದಿನ, ಏಕಾದಶಿ ತಿಥಿಯಂದು, ಕಚನನ್ನು ಕೊಂದು, ಅವನ ಶರೀರವನ್ನು ಸುಟ್ಟು, ಅ ಬೂದಿಯನ್ನು ಪಾನೀಯದಲ್ಲಿ ಕಲಸಿ, ಅದು ಶುದ್ಧ ಪಾನೀಯವೆಂದು ಶುಕ್ರನನ್ನು ನಂಬಿಸಿ, ಅವನಿಗೆ ಕೊಟ್ಟರು. ಅದನ್ನು ಶುಕ್ರನು ಕುಡಿದು ಬಿಟ್ಟನು. ದೇವಯಾನಿಯು ಕಚನನ್ನು ಕಾಣದೆ, ಮತ್ತೆ ತಂದೆಗೆ, "ತಂದೆ, ನನ್ನ ಮಿತ್ರನು ಎಲ್ಲಿದ್ದಾನೆ?" ಎಂದು ಅಳುತ್ತಾ ಕೇಳಿದಳು. ಶುಕ್ರನು ಮತ್ತೆ ಧ್ಯಾನಸ್ಥನಾಗಿ, ತನ್ನ ದಿವ್ಯ ದೃಷ್ಟಿಯಿಂದ ನೋಡಲು, ಕಚನು ಎಲ್ಲಿಯೂ ಕಾಣಲಿಲ್ಲ. ದೇವಯಾನಿ ಬಹು ದುಃಖಿತಳಾದಳು. ಅವಳ ದುಃಖವನ್ನು ಕಂಡು ಶುಕ್ರನೂ ದುಃಖಿತನಾದನು. ಮತ್ತೊಮ್ಮೆ ಶುಕ್ರನು ತನ್ನ ದಿವ್ಯ ದೃಷ್ಟಿಯನ್ನು ಪ್ರಸರಿಸಿ, ತನ್ನ ಹೊಟ್ಟೆಯಲ್ಲಿಯೇ ಇದ್ದ ಕಚನನ್ನು ಕಂಡನು. ತನ್ನ ಮಗಳಿಗೆ, "ಅಮ್ಮ ದೇವಯಾನಿ, ಕಚನು ನನ್ನ ಹೊಟ್ಟೆಯಲ್ಲಿದ್ದಾನೆ. ಈ ರಾಕ್ಷಸರು ಅವನನ್ನು ನನ್ನ ಹೊಟ್ಟೆಯೊಳಕ್ಕೆ ಸೇರಿಸಿ ಬಿಟ್ಟಿದ್ದಾರೆ. ಅವನನ್ನು ನನ್ನ ಹೊಟ್ಟೆಯಿಂದ ಹೇಗೆ ಹೊರಕ್ಕೆ ತರಬೇಕು? ಅವನು ಹೊರಗೆ ಬರಬೇಕೆಂದರೆ ನಾನು ಸಾಯ ಬೇಕು. ಹೇ ಕಲ್ಯಾಣಿ, ಅದರಿಂದ ನಿನಗೇನು ಪ್ರಯೋಜನ ಹೇಳು?" ಎಂದನು. ಅದನ್ನು ಕೇಳಿದ ದೇವಯಾನಿ, "ಅವನೇ ನನ್ನ ಗಂಡನಾಗಬೇಕೆಂದು ನನ್ನ ಸಂಕಲ್ಪ. ತಂದೆ, ನೀನು ಅವನನ್ನು ಬದುಕಿಸದಿದ್ದರೆ ನಾನಿ ನಿಮ್ಮೆದುರಿಗೇ ಪ್ರಾಣ ಬಿಡುತ್ತೇನೆ" ಎಂದು ಹೇಳಿದಳು. ಅವಳ ಮಾತಿನಿಂದ ಸಂದಿಗ್ಧದಲ್ಲಿ ಬಿದ್ದ ಶುಕ್ರನು ಮತ್ತೆ ಮಗಳಿಗೆ, "ಅಮ್ಮ, ಅವನನ್ನು ಈಚೆಗೆ ಬರುವಂತೆ ಮಾಡಿದರೆ ನಿನ್ನ ತಂದೆಯಾದ ನಾನು ಸಾಯುವುದು ಖಂಡಿತ" ಎಂದು ಹೇಳಿದನು. ಅದಕ್ಕೆ ದೇವಯಾನಿ, "ತಂದೆ, ಎಲ್ಲರನ್ನೂ ನೀನೇ ಬದುಕಿಸುತ್ತೀಯಲ್ಲವೇ? ಹಾಗಿರುವಾಗ ನಿನ್ನ ಪ್ರಾಣ ಹೇಗೆ ಹೋಗುವುದು ಎಂಬುದು ನನಗೆ ವಿಚಿತ್ರವಾಗಿ ತೋರುತ್ತಿದೆ" ಎಂದಳು. ಅದಕ್ಕೆ ಶುಕ್ರನು, "ಮಗಳೇ, ಕಚನು ನನ್ನ ಹೊಟ್ಟೆಯನ್ನು ಸೀಳಿ ಕೊಂಡು ಬಂದಮೇಲೆ ನನ್ನನ್ನು ಬದುಕಿಸುವವರು ಯಾರು? ಈ ಮಂತ್ರವನ್ನು ಇನ್ನಾರಿಗೂ ಹೇಳಬಾರದು. ಅದು ಆರು ಕಿವಿಗಳಲ್ಲಿ ಬಿದ್ದ ಕೂಡಲೇ ನಿಸ್ಸಾರವಾಗಿ ಹೋಗುತ್ತದೆ. ಕಚನಿಂದ ನನ್ನ ಮರಣ ಸಂಭವಿಸುತ್ತದೆ" ಎಂದನು. ಅದಕ್ಕೆ ಅವಳು, "ತಂದೆ, ಆ ಮಂತ್ರವನ್ನು ನೀನು ನನಗೆ ಉಪದೇಶಿಸು. ನಂತರ ಕಚನನ್ನು ಬದುಕಿಸು. ನೀನು ಮರಣಿಸಿದರೆ ನಾನು ನಿನ್ನನ್ನು ಬದುಕಿಸುತ್ತೇನೆ" ಎಂದು ತಂದೆಯ ಪಾದಗಳನ್ನು ಹಿಡಿದು ಪ್ರಾರ್ಥಿಸಿದಳು.

ಶುಕ್ರನು, "ಅಮ್ಮ, ಸ್ತ್ರೀಯರಿಗೆ ಮಂತ್ರೋಪದೇಶ ಮಾಡಬಾರದು. ಹಾಗೆ ಸ್ತ್ರೀಯರಿಗೆ ಮಂತ್ರ ದಾನ ಮಾಡಿದರೆ ಮಂತ್ರ ದಾತನಿಗೆ ಮಂತ್ರಶಕ್ತಿ ನಾಶವಾಗುವುದು" ಎಂದು ಶುಕ್ರನು ಮಗಳಿಗೆ ವಿವರಿಸಿದನು. ದೇವಯಾನಿ ಅದನ್ನು ಕೇಳಿ, "ಹಾಗಾದರೆ ನಾನು ಪ್ರಾಣ ಬಿಡುತ್ತೇನೆ" ಎಂದು ಹೇಳುತ್ತಾ ಮೂರ್ಛಿತಳಾಗಿ ಬಿದ್ದು ಹೋದಳು. ಶುಕ್ರನು ಪುತ್ರಿಕಾ ವಾತ್ಸಲ್ಯದಿಂದ, ಅವಳನ್ನೆಬ್ಬಿಸಿ, ಓದಾರಿಸಿ, ಅವಳಿಗೆ ಮಂತ್ರದಾನ ಮಾಡಿದನು. ದೈವ ವಶದಿಂದಾಗಿ ಶುಕ್ರನ ಹೊಟ್ಟೆಯಲ್ಲಿದ್ದ ಕಚನೂ ಕೂಡಾ ಪುನರ್ಜೀವಿತನಾಗಿ, ಆ ಮಂತ್ರವನ್ನು ಕೇಳಿದನು. ಹಾಗೆ ಆ ಸಂಜೀವನಿ ಮಂತ್ರ ಆರು ಕಿವಿಗಳಲ್ಲಿ ಬಿತ್ತು. ಹೀಗೆ ಕಚ ದೇವಯಾನಿಗಳಿಗೆ, ಶುಕ್ರನಿಗೆ ತಿಳಿಯದಂತೆಯೇ, ಮಂತ್ರವು ತಿಳಿದು, ಮುವ್ವರು -ಆರುಕಿವಿಗಳು- ಮಂತ್ರವನ್ನು ಕೇಳಿದಂತಾಯಿತು. ಅಂದರೆ ಆ ಮಂತ್ರವು ಷಟ್ಕರ್ಣವಾಯಿತು. ಶುಕ್ರನ ಹೊಟ್ಟೆಯನ್ನು ಸೀಳಿ ಕೊಂಡು ಕಚನು ಹೊರ ಬಿದ್ದನು. ಶುಕ್ರನು ಮರಣಿಸಿದನು. ದೇವಯಾನಿ ಮಂತ್ರ ಜಪದಿಂದ ಶುಕ್ರನನ್ನು ಬದುಕಿಸಿದಳು. ಮೇಧಾವಿಯಾದ ಆ ಕಚನು, ಮಂತ್ರವನ್ನು ಮೂರು ಸಲ ಕೇಳಿದ್ದರಿಂದ, ಅದನ್ನು ಅವನು ಧಾರಣ ಮಾಡಿದನು. ಬಂದ ಕಾರ್ಯ ಸಿದ್ಧಿಸಿತು ಎಂದು ಕಚನು ಸಂತೋಷ ಗೊಂಡನು. ನಂತರ ಕಚನು ಶುಕ್ರನಿಗೆ ಪ್ರಣಾಮ ಮಾಡಿ, ಕೈಜೋಡಿಸಿ ನಿಂತು, "ಗುರುದೇವ, ಅಸುರರು ದ್ವೇಷದಿಂದ ನನ್ನನ್ನು ಸಂಹರಿಸುತ್ತಿದ್ದಾರೆ. ಅದರಿಂದ ನನಗೆ ಅನುಮತಿ ಕೊಡಿ. ನಿಮ್ಮ ಅನುಗ್ರಹದಿಂದ ನನಗೆ ವಿದ್ಯೆ ಲಭ್ಯವಾಯಿತು" ಎಂದು ಅವರ ಚರಣಗಳನ್ನು ಹಿಡಿದನು. ಶುಕ್ರನು, ಅವನ ಮಾತುಗಳಿಗೆ ಸಂತುಷ್ಟನಾಗಿ, ಅವನಿಗೆ ಹೊರಡಲು ಅನುಮತಿ ಕೊಟ್ಟನು. ದೇವಯಾನಿ, ತನ್ನ ಗಂಡನಾಗುವಂತೆ ಕಚನನ್ನು ಕೋರಿದಳು. "ನಿನ್ನನ್ನು ಮೂರುಸಲ ರಾಕ್ಷಸರು ಸಾಯಿಸಿದರು. ನಾನು ನಿನ್ನ ಪ್ರಾಣ ಕಾಪಾಡಿದೆ. ನನ್ನ ತಂದೆಯಿಂದ ನಿನಗೆ ವಿದ್ಯೆಯನ್ನು ಕೊಡಿಸಿದೆ. ಆದ್ದರಿಂದ ನೀನು ತಪ್ಪದೇ ನನ್ನನ್ನು ಮದುವೆ ಮಾಡಿಕೊಳ್ಳಬೇಕು" ಎಂದು ಅವನನ್ನು ಪ್ರಾರ್ಥಿಸಿದಳು. ಅದಕ್ಕೆ ಕಚನು, "ಹೇ ಬಾಲೆ, ನೀನು ನನ್ನ ಗುರುಪುತ್ರಿ. ಆದ್ದರಿಂದ ನನಗೆ ಸಹೋದರಿ. ನನ್ನ ಪ್ರಾಣಗಳನ್ನು ರಕ್ಷಿಸಿದೆ. ಆದ್ದರಿಂದ ತಾಯಿಯಾದೆ. ಹೇ ಸುವ್ರತೆ, ಹಾಗೆ ನೀನು ನನಗೆ ತಾಯಿಯೂ, ಸೋದರಿಯೂ ಆದೆ. ಆದ್ದರಿಂದ ನಿನ್ನನ್ನು ನಾನು ಮದುವೆಯಾಗುವುದು ಮಹಾ ದೋಷವು" ಎಂದು ದೇವಯಾನಿಯನ್ನು ಬೇಡಿ ಕೊಂಡನು. ಅವಳು ಅವನ ಮಾತುಗಳಿಂದ ಕೋಪ ಗೊಂಡು, "ನಿನ್ನ ಈ ವಿದ್ಯಾ ಶ್ರಮವೆಲ್ಲವೂ ವ್ಯರ್ಥವಾಗಲಿ. ನಿನಗೆ ವಿದ್ಯಾಲೇಶವೂ ಕೈಗೂಡದಂತಾಗಲಿ" ಎಂದು ವಿಲಪಿಸುತ್ತಾ, ಅವನಿಗೆ ಶಾಪ ಕೊಟ್ಟಳು. ಅವಳ ಮಾತುಗಳಿಗೆ ಅಸಹ್ಯಗೊಂಡ ಕಚನು, " ಹೇ ಅಂಜುಕುಳಿ, ಅನವಶ್ಯವಾಗಿ ನೀನು ನನ್ನನ್ನು ಶಪಿಸಿದೆ. ಆದ್ದರಿಂದ ನನ್ನ ಮಾತಿನಂತೆ ನಿನಗೆ ಬ್ರಾಹ್ಮಣೇತರನೇ ಗಂಡನಾಗುತ್ತಾನೆ. ಬ್ರಹ್ಮಜ್ಞಾನಿಯಾದ ನಿನ್ನ ತಂದೆ ನಿನಗೂ ಮೃತ ಸಂಜೀವನಿ ವಿದ್ಯೆಯನ್ನು ಕೊಟ್ಟಿದ್ದಾನಲ್ಲವೇ? ಇನ್ನು ಮುಂದೆ ನಿನ್ನ ಆ ವಿದ್ಯೆಯು ನಾಶವಾಗಲಿ" ಎಂದು ಕಚನು ದೇವಯಾನಿಯನ್ನು ಶಪಿಸಿ ತನ್ನ ಮನೆಗೆ ಹೊರಟು ಹೋದನು. ಅದಾದನಂತರ ರಾಕ್ಷಸರು ಯಾರೂ ಪುನರ್ಜೀವಿತರಾಗಲಿಲ್ಲ. ದೇವತೆಗಳು ಸಂತೋಷಗೊಂಡರು. ಅಪಾತ್ರದಾನದಿಂದಾಗಿ ಮಂತ್ರವು ನಿಸ್ಸಾರವಾಯಿತು.

ಆದ್ದರಿಂದ ಅಮ್ಮಾ, ಸಾಧ್ವಿ, ಸ್ತ್ರೀಯರಿಗೆ ಮಂತ್ರೋಪದೇಶ ಮಾಡಬಾರದು. ಸ್ತ್ರೀಯರಿಗೆ ಪತಿ ಸೇವೆಯೊಂದೇ ಧರ್ಮವು. ಇನ್ನು ಮಂತ್ರಗಳೇಕೆ? ಗುರುಗಳ(?) (ಪತಿಯ?) ಅನುಮತಿಯಿಂದ ವ್ರತೋಪವಾಸಗಳನ್ನು ಮಾಡಬೇಕು" ಎಂದು ಶ್ರೀಗುರುವು ಹೇಳಲು, ಆ ಯುವ ಪತಿವ್ರತೆ, "ಶ್ರೀಗುರುವೇ, ನೀವು ಹೇಳಿದ ಮಾತುಗಳು ನನಗೆ ಸಮ್ಮತವೇ! ನಿಮ್ಮ ಪಾದ ಪದ್ಮಗಳನ್ನು ಸದಾ ಸ್ಮರಿಸಿಕೊಳ್ಳುತ್ತಿರುವುದಕ್ಕೆ ಅನುಕೂಲವಾಗುವಂತಹ ವ್ರತವೊಂದನ್ನು ಉಪದೇಶಿಸಿ. ನಿಮ್ಮ ಪಾದ ಸೇವೆಯೇ ನನ್ನ ವ್ರತವು. ಆದರೂ ನಿಮ್ಮ ಪಾದ ಪಂಕಜಗಳಲ್ಲಿ ನನ್ನ ಭಕ್ತಿ ಧೃಢವಾಗಿರುವುದಕ್ಕೆ ನನಗೆ ಅನುಮತಿ ಕೊಡಿ" ಎಂದು ಶ್ರೀಗುರುವಿನ ಪಾದಗಳಲ್ಲಿ ಬಿದ್ದು ‘ದಯೆತೋರಿಸಿ’ ಎಂದು ಪ್ರಾರ್ಥಿಸಿದಳು. ಶ್ರೀಗುರುವು ಅದನ್ನು ಕೇಳಿ ಸಂತೋಷಗೊಂಡು, "ನಿನಗೆ ಒಂದು ವ್ರತವನ್ನು ಹೇಳುತ್ತೇವೆ. ಅದು ನಿನ್ನ ಸೌಭಾಗ್ಯವನ್ನು ಸ್ಥಿರವಾಗಿ ನಿಲ್ಲಿಸುವುದು. ನಿನಗೂ ನಿನ್ನ ಗಂಡನಿಗೂ ಆ ವ್ರತವು ರಾಜ ಸುಖಗಳನ್ನು ಕೊಡುವುದು" ಎಂದು ಹೇಳಿದರು. ಆ ದಂಪತಿಗಳು, "ಸ್ವಾಮಿ, ಗುರು ವಾಕ್ಯಗಳನ್ನು ಪಾಲಿಸದ ನರನು ಘೋರ ನರಕಕ್ಕೆ ಹೋಗುವನು. ನಿಮ್ಮ ಮಾತೇ ನಮಗೆ ಪ್ರಮಾಣವು" ಎಂದು ಹೇಳಿ, ಗುರು ಪಾದಗಳನ್ನು ಆಶ್ರಯಿಸಿದರು. ಆಗ ಶ್ರೀಗುರುವು, ವಿಶ್ವತಾರಕ ವಾದಂತಹ ವ್ರತವೊಂದನ್ನು ಸಂತೋಷದಿಂದ ಆ ದಂಪತಿಗಳಿಗೆ ಅನುಗ್ರಹಿಸಿ, ಈ ರೀತಿಯಲ್ಲಿ ಉಪದೇಶಿಸಿದರು.

ಹಿಂದೆ ಋಷಿಗಳು ಸೂತರನ್ನು ಪ್ರಶ್ನಿಸಲು, ಸೂತರು ಮುನೀಶ್ವರರಿಗೆ ತಿಳಿಸಿದ ವ್ರತವನ್ನು ನಾನು ನಿಮಗೆ ಹೇಳುತ್ತೇನೆ. ಸ್ತ್ರೀ ಪುರುಷರಿಬ್ಬರಿಗೂ ಈ ವ್ರತವು ಪರಮ ಪಾವನವಾದದ್ದು. ಈಶ್ವರನನ್ನು ಅರ್ಚಿಸಿದ ನರನು ಸರ್ವಾಭೀಷ್ಟಗಳನ್ನು ಪಡೆಯ ಬಲ್ಲನು. ವಿರಕ್ತನಾದರೂ, ಕಾಮ ಯುಕ್ತನಾದರೂ, ವಿಷಯಾಸಕ್ತ ನಾದರೂ ಮಾನವನು ಭಕ್ತಿಯಿಂದ ಈಶ್ವರನನ್ನು ಪೂಜಿಸಿದರೆ, ಈಶ್ವರನು ಅನುಗ್ರಹಿಸುತ್ತಾನೆ. ದಂಪತಿಗಳು ಈ ಶಿವವ್ರತವನ್ನು ಸೋಮವಾರ ವ್ರತವೆನ್ನುವ ಹೆಸರಿನಲ್ಲಿ ಮಾಡಬೇಕು. ವೇದಶಾಸನವಾದದ್ದರಿಂದ ಈ ವ್ರತವನ್ನು ಮಾಡಿದವರು ಪರಮ ಪದವನ್ನು ಸೇರಬಲ್ಲರು. ಈಶ್ವರಾರ್ಚನೆಯಿಂದ ಸಕಲಾಭೀಷ್ಟಗಳೂ ಸಿದ್ಧಿಯಾಗುತ್ತವೆ. ಇದು ಪುಣ್ಯಪ್ರದವಾದ ಸೋಮವಾರವ್ರತವು. ವ್ರತಗಳಲ್ಲಿ ಉತ್ತಮವಾದದ್ದು. ಸಕಲಾಭೀಷ್ಟ ಸಾಧಕವಾದ ಈಶ್ವರಾರ್ಚನೆಯೇ ಈ ವ್ರತರೂಪವು. ವ್ರತ ಮಾಡುವವರು ಜಿತೇಂದ್ರಿಯರಾಗಿ, ಉಪವಾಸದಿಂದ ಇರುತ್ತಾ, ಇಲ್ಲದಿದ್ದರೆ ರಾತ್ರಿಯ ಹೊತ್ತು ಮಾತ್ರ ಭುಜಿಸುತ್ತಾ, ಯಥಾವಿಧಿಯಗಿ ಮಾಡಬೇಕು. ಬ್ರಹ್ಮಚಾರಿಯಾಗಲೀ, ಗೃಹಸ್ಥನಾಗಲೀ, ಪುಣ್ಯಸ್ತ್ರೀಯಾಗಲೀ, ಕನ್ಯೆಯಾಗಲೀ, ಭರ್ತೃಹೀನಳಾದ ವಿಧವೆಯಾಗಲೀ ಈ ವ್ರತವನ್ನು ಮಾಡಬಹುದು. ನಿಮಗೆ ಪ್ರಾಚೀನವಾದ ಕಥೆಯೊಂದನ್ನು ಹೇಳುತ್ತೇನೆ. ಈ ಕಥೆ ಸ್ಕಾಂದಪುರಾಣದಲ್ಲಿದೆ. ಈ ಕಥೆಯನ್ನು ಕೇಳಿದರೂ ಅಭೀಷ್ಟ ಸಿದ್ಧಿಯಾಗುತ್ತದೆ.

ಹಿಂದೆ ಆರ್ಯಾವರ್ತದಲ್ಲಿ ಚಿತ್ರವರ್ಮನೆಂಬ ರಾಜನೊಬ್ಬನಿದ್ದನು. ಅವನು ಧರ್ಮಾತ್ಮನು. ಪುಣ್ಯರಾಶಿ. ಧಾರ್ಮಿಕರಿಗೆ ರಕ್ಷಕ. ಅಧಾರ್ಮಿಕರಿಗೆ ಶಿಕ್ಷಕ. ಆ ರಾಜ ಶೂರ. ಪರಾಕ್ರಮವಂತ. ಅವನು ತನ್ನ ಧರ್ಮಪತ್ನಿಯೊಡನೆ ಪುತ್ರಾರ್ಥಿಯಾಗಿ ಬಹಳಕಾಲ ಶಿವನನ್ನು ಪೂಜಿಸುತ್ತಿದ್ದನು. ದೈವವಶಾತ್ ಅವನಿಗೆ ಮಗಳೊಬ್ಬಳು ಹುಟ್ಟಿದಳು. ಆ ಮಗು ರೂಪ ಲಕ್ಷಣ ಸಂಪನ್ನೆ. ಸುಂದರಿ. ರಾಜ ಅವಳ ಜಾತಕವನ್ನು ತಿಳಿಯಲು ಜ್ಯೋತಿಶ್ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿದ ಜ್ಯೋತಿಷ್ಕರನ್ನು ಕರೆಯಿಸಿ, ಅವಳ ಜಾತಕವನ್ನು ಪರಿಶೀಲಿಸಲು ಹೇಳಿದ. ಅವಳ ಜಾತಕವನ್ನು ಪರಿಶೀಲಿಸಿದ ಅವರು ರಾಜನಿಗೆ, "ಈ ಕನ್ಯೆ ಸುಲಕ್ಷಣೆಯಾಗಿ, ಸೀಮಂತಿನಿ ಎಂಬ ಹೆಸರಿನಿಂದ ಬೆಳೆಯುತ್ತಾಳೆ. ಗಂಡನೊಡನೆ ಕೂಡಿ ಹತ್ತು ಸಾವಿರ ವರ್ಷಗಳು ರಾಜ್ಯ ಭೋಗಗಳನ್ನನುಭವಿಸುತ್ತಾಳೆ" ಎಂದು ಅವಳ ಜಾತಕ ಫಲವನ್ನು ಹೇಳಿದರು. ಅದನ್ನು ಕೇಳಿ ಸಂತೋಷ ಗೊಂಡ ರಾಜ ಬ್ರಾಹ್ಮಣರಿಗೆ ಅಪಾರವಾದ ಧನ ದಾನ ಮಾಡಿದನು.
          

||ಶ್ರೀಗುರುಚರಿತ್ರೆ - ಮೂವತ್ತುನಾಲ್ಕನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

ಸಂತೋಷಗೊಂಡ ಮಹಾರಾಜ ಮಹರ್ಷಿಯ ಪಾದಗಳಿಗೆ ನಮಸ್ಕರಿಸಿ, ಅವರ ಎದುರು ಕೈಜೋಡಿಸಿ ನಿಂತು, " ಸ್ವಾಮಿ, ಇವರು ಪೂರ್ವ ಜನ್ಮದಲ್ಲಿ ತಿಳಿಯದೆಯೇ ರುದ್ರಾಕ್ಷಿಗಳನ್ನು ಧರಿಸಿದರೂ ಆ ಪುಣ್ಯ ವಿಶೇಷದಿಂದ ರಾಜಕುಮಾರರಾದರು. ಈಗ ಜ್ಞಾನ ಯುಕ್ತರಾಗಿ ರುದ್ರಾಕ್ಷ ಧಾರಣೆ ಮಾಡುತ್ತಿದ್ದಾರೆಯಲ್ಲವೇ? ಭವಿಷ್ಯದಲ್ಲಿ ಇವರಿಗೇನಾಗುತ್ತದೆಯೋ ತಿಳಿಸ ಬೇಕೆಂದು ಕೋರುತ್ತಿದ್ದೇನೆ. ನೀವು ತ್ರಿಕಾಲಜ್ಞರು. ಈ ಕುಮಾರರ ಭವಿಷ್ಯತ್ತು ಹೇಗಿದೆಯೋ ತಿಳಿಸಿ" ಎಂದು ಕೇಳಿದನು. ಅವನ ಪ್ರಶ್ನೆಯನ್ನು ಕೇಳಿದ ಮಹರ್ಷಿಯು, "ರಾಜ, ಇವರ ಭವಿಷ್ಯತ್ತು ಚೆನ್ನಾಗಿಯೇ ಇದೆ. ಆದರೆ ನಿನ್ನ ಕುಮಾರನ ಭವಿಷ್ಯವು ಮಾತ್ರ ದುಃಖಕಾರಕವು. ಅದನ್ನು ಕೇಳಿದರೆ ನೀನು ದುಃಖ ಪಡುತ್ತೀಯೆ" ಎಂದು ಹೇಳಿದನು. ಅದನ್ನು ಕೇಳಿದ ರಾಜ ಮತ್ತೆ ವಿನೀತನಾಗಿ, "ಸ್ವಾಮಿ, ಎಲ್ಲವನ್ನೂ ಹೇಳಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಉಂಟಾಗುವ ದುಃಖಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂಬುದನ್ನೂ ನೀವೇ ಬಲ್ಲಿರಿ" ಎಂದು ಪ್ರಾರ್ಥಿಸಿದನು. ಅದಕ್ಕೆ ಆ ಮಹರ್ಷಿಯು, "ಮಹಾತ್ಮರಿಗೆ ಹೇಳಲಾರದ್ದೇನಿದೆ. ರಾಜ, ಕೇಳು. ನಿನ್ನ ಮಗನಿಗೆ ಆಯುಸ್ಸು ಹನ್ನೆರಡು ವರ್ಷ ಮಾತ್ರವೇ! ಅದರಲ್ಲೂ ಈಗ ಇನ್ನು ಏಳು ದಿನಗಳು ಮಾತ್ರ ಮಿಕ್ಕಿವೆ! ಎಂಟನೆಯ ದಿನ ನಿನ್ನ ಮಗನಿಗೆ ಮೃತ್ಯುವು ಬರುವುದು" ಎಂದು ಹೇಳಲು, ರಾಜನು ಅದನ್ನು ಕೇಳಿದ ತಕ್ಷಣವೇ ಕ್ಷಣಕಾಲ ಮೂರ್ಛಿತನಾಗಿ, ಮತ್ತೆ ಎದ್ದು ದುಃಖಿಸುತ್ತಾ, ಪರಾಶರ ಮಹರ್ಷಿಯ ಚರಣಗಳಲ್ಲಿ ಬಿದ್ದು, "ಹೇ ತಪಸ್ವಿ, ನನ್ನನ್ನು ರಕ್ಷಿಸು. ನಾನು ನಿನ್ನನ್ನೇ ಶರಣು ಹೊಂದಿದ್ದೇನೆ. ನಾವು ಈಗ ಏನು ಮಾಡಬೇಕು?" ಎಂದು ಭಾರ್ಯಾ ಸಮೇತನಾಗಿ ಅವನ ಚರಣಗಳನ್ನು ಹಿಡಿದು ಬೇಡಿ ಕೊಂಡನು. ಅದಕ್ಕೆ ಆ ದಯಾಸಮುದ್ರನಾದ ಮಹರ್ಷಿಯು, ರಾಜನನ್ನು ಸಾಂತ್ವನ ಗೊಳಿಸುತ್ತಾ, "ಜಗದ್ಗುರುವಾದ ಆ ಪಾರ್ವತೀಪತಿಯನ್ನು ಶರಣು ಹೋಗು. ಭಕ್ತಿ ಶ್ರದ್ಧೆಗಳಿಂದ ಅವನನ್ನು ಆರಾಧಿಸು. ಆ ಶೂಲಪಾಣಿಯೇ ನಿನ್ನನ್ನು ರಕ್ಷಿಸುತ್ತಾನೆ. ಅಜೇಯನಾದ ಕಾಲನನ್ನು ಜಯಿಸಲು ಒಳ್ಳೆಯ ಉಪಾಯ ಇದೊಂದೇ! ಆ ವ್ಯೋಮಕೇಶನೊಬ್ಬನೇ ದೇವನು. ಸ್ವರ್ಗ ಮರ್ತ್ಯ ಪಾತಾಳ ಲೋಕಗಳಲ್ಲಿ ಭಗವಂತನಾದ ಸಚ್ಚಿದಾನಂದ ಸ್ವರೂಪನು ಆ ಶಿವನೊಬ್ಬನೇ! ಅವನು ಮಾಯಾ ಗುಣರಹಿತನು. ಆ ದೇವನೇ ಮೂರ್ತಿಮಂತನಾದ ಬ್ರಹ್ಮನನ್ನು ತನ್ನ ರಜೋ ಗುಣದಿಂದ ಸೃಷ್ಟಿಸಿದನು. ನಂತರ ಸೃಷ್ಟಿ ಕ್ರಮವನ್ನು ತಿಳಿಸುವುದಕ್ಕೋಸ್ಕರ ಚತುರ್ವೇದಗಳನ್ನು ಸೃಜಿಸಿದನು. ಆ ವೇದಗಳನ್ನು ಬ್ರಹ್ಮನಿಗೆ ಕೊಟ್ಟನು. ಆ ವೇದಗಳಲ್ಲಿರುವ ಉಪನಿಷತ್ತುಗಳಿಂದಲೇ ಆ ಮಹಾತ್ಮನು ಆತ್ಮ ತತ್ತ್ವವನ್ನು ಸಂಗ್ರಹ ಮಾಡಿ ವ್ಯಾಖ್ಯಾನಿಸಿದನು. ಸರ್ವೇಶ್ವರನು ರುದ್ರಾಧ್ಯಾಯವೆಂದು ಹೆಸರಿರುವ ವೇದ ಸಾರವಾಗಿ ಪ್ರಸಿದ್ಧವಾಗಿರುವ ಉಪನಿಷತ್ತನ್ನು ಕೂಡಾ ಬ್ರಹ್ಮ ದೇವನಿಗೆ ಸಂತೋಷದಿಂದ ಕೊಟ್ಟನು. ಆ ರುದ್ರಾಧ್ಯಾಯಕ್ಕಿರುವ ಮಹಿಮೆ ಅಪಾರವಾದದ್ದು. ಅನುಪಮವಾದದ್ದು. ರುದ್ರನು ಅವ್ಯಯನಾಗಿ ಪ್ರಸಿದ್ಧನು. ಶ್ರೀರುದ್ರನಿಗೆ ಎಂದಿಗೂ ನಾಶವೆನ್ನುವುದು ಇಲ್ಲ. ರುದ್ರಾಧ್ಯಾಯವು ಪರತತ್ತ್ವವೇ! ಅದಕ್ಕೆ ಶಿವಾಖ್ಯಾನವೂ ಉಂಟು. ಬ್ರಹ್ಮ ಚತುರ್ಮುಖಗಳಿಂದ ಚತುರ್ವೇದಗಳನ್ನು ಪ್ರಕಟ ಗೊಳಿಸಿದನು. ಪೂರ್ವ ದಿಕ್ಕಿನ ಮುಖದಿಂದ ಮೊದಲುಗೊಂಡು ನಾಲ್ಕು ವೇದಗಳೂ ಕ್ರಮವಾಗಿ ಬ್ರಹ್ಮನಿಂದ ಹೊರಬಿದ್ದವು. ಅದರಲ್ಲಿ ದಕ್ಷಿಣ ಮುಖದಿಂದ ಯಜುರ್ವೇದವು ಈಚೆಗೆ ಬಂತು. ರುದ್ರಾಧ್ಯಾಯ ಉಪನಿಷತ್ತುಗಳಿಗೆ ಸಾರಭೂತವು. ಕಾಮದವು. ಬ್ರಹ್ಮದೇವನು ಯಜುರ್ವೇದಾಂತರ್ಗತವಾದ ಈ ರುದ್ರಾಧ್ಯಾಯವನ್ನು ಮುನಿ ಶ್ರೇಷ್ಠರಾದ ಮರೀಚಿ, ಅತ್ರಿ ಮೊದಲಾದವರಿಗೆ ಯಥಾ ವಿಧಿಯಾಗಿ ಉಪದೇಶಿಸಿದನು. ಆ ದೇವರ್ಷಿಗಳು ರುದ್ರಾಧ್ಯಾಯವನ್ನು ಅನುಕ್ರಮವಾಗಿ ಋಷಿಗಳಿಗೆ ಉಪದೇಶಿಸಿದರು. ಈ ವಿಧವಾಗಿ ರುದ್ರಾಧ್ಯಾಯವು ಭೂಮಿಯಲ್ಲಿ ಪ್ರಸಾರವಾಯಿತು. ಶೀಘ್ರವಾಗಿ ಸಿದ್ಧಿ ಪ್ರದವಾಗುವಂತಹ ಮಂತ್ರವು ಶ್ರೀ ರುದ್ರವನ್ನು ಬಿಟ್ಟರೆ ಬೇರೊಂದಿಲ್ಲ. ಅದು ಚತುರ್ವಿಧ ಪುರುಷಾರ್ಥಗಳನ್ನು ಕೊಡ ತಕ್ಕಂತಹುದು. ಮಹಾ ದೋಷಗಳಿಂದ ಕೂಡಿದ್ದರೂ, ಮಹಾ ಪಾತಕಿಯಾಗಿದ್ದರೂ ಮನುಷ್ಯನು ಶ್ರೀರುದ್ರ ಜಪದಿಂದ ಪರಿಶುದ್ಧನಾಗಿ ಪರಮ ಪದವನ್ನು ಸೇರುತ್ತಾನೆ. ಬ್ರಹ್ಮದೇವನು ಸೃಷ್ಟಿಸಿದ ರುದ್ರದೇವ ತೀರ್ಥವೇ ಅದ್ಭುತವಾದದ್ದು. ಅದರಲ್ಲಿ ಸ್ನಾನ, ಆ ತೀರ್ಥವನ್ನು ಸೇವಿಸುವುದು ಕೂಡಾ ಮಾನವನನ್ನು ತರಿಸ ಬಲ್ಲುದು. ಶ್ರೀಗುರುಗಳು ಬೋಧಿಸಿದ ರೀತಿಯಲ್ಲಿ ಸೇವಿಸಿದರೆ ಭವ ಸಾಗರದಿಂದ ಮಾನವನು ಪಾರಾಗಬಲ್ಲನು. ಪೂರ್ವ ಜನ್ಮದಲ್ಲಿ ಮಾಡಿದ ಸುಕೃತ ದುಷ್ಕೃತಗಳ ಫಲವು ಈ ಜನ್ಮದಲ್ಲಿ ಉಂಟಾಗುತ್ತದೆ.

ಹಿಂದೆ ಬ್ರಹ್ಮದೇವನು ಸೃಷ್ಟಿ ಪ್ರವೃತ್ತಿಗೆ ತನ್ನ ವಕ್ಷ ಸ್ಥಲದಿಂದ ಧರ್ಮ, ಪ್ರುಷ್ಟದಿಂದ ಅಧರ್ಮವನ್ನು ನಿರ್ಮಿಸಿದನು. ಅದರಲ್ಲಿ ಧರ್ಮವನ್ನು ಸೇವಿಸುವವರಿಗೆ ಇಹ-ಪರಗಳಲ್ಲಿ ಸೌಖ್ಯ-ಸದ್ಗತಿಗಳು ಲಭ್ಯವಾಗುತ್ತವೆ. ಅಧರ್ಮ ಸೇವಕನು ಪಾಪಿಯಾಗಿ ಇಹ-ಪರಗಳಲ್ಲಿ ದುಃಖವನ್ನನುಭವಿಸುತ್ತಾನೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಮುಂತಾದ ಮಹಾ ಭಯಕಾರಕರು ಅಧರ್ಮಕ್ಕೆ ಸುತರು. ಇವರೆಲ್ಲರೂ ನರಕಕ್ಕೆ ನಾಯಕರು. ಗುರು ತಲ್ಪಗಮನ, ಜಾರ ಕರ್ಮ ಮುಂತಾದವು ಕೂಡಾ ನರಕ ನಾಯಕರೇ! ಕಾಮುಕರು, ಪಾತಕಿಗಳು ಕಾಮನ ಪುತ್ರರು. ಕಾಮದಿಂದ ಸಂಭವಿಸಿದ್ದು ಕಾಮ ಸುತರೆಂದು ಪ್ರಸಿದ್ಧವು. ಕ್ರೋಧದಿಂದ ಸಂಭವಿಸಿದ್ದು ಕ್ರೋಧ ಸುತರಾಗುತ್ತಾರೆ. ಮಾತಾ ಪಿತರ ವಧೆ, ಬ್ರಹ್ಮಹತ್ಯೆ ಮಾಡಿದಂತಹವರು ಕ್ರೋಧ ಸುತರು. ಇಂತಹವರ ತಾಪವು ಹೆಚ್ಚಾಗಿರುತ್ತದೆ. ದೇವ ಬ್ರಾಹ್ಮಣ ದ್ರವ್ಯವನ್ನು ಅಪಹರಿಸುವುದು, ಸ್ವರ್ಣಚೌರ್ಯ, ಕನ್ಯಾವಿಕ್ರಯ, ಪ್ರಾಪ್ತಿಯಾದ ಧನವನ್ನು ಮುಚ್ಚಿಡುವುದು ಮುಂತಾದುವನ್ನು ಮಾಡುವವರು ಲೋಭಿ ಪುತ್ರರಾಗಿ ಪರಿಗಣಿಸಲ್ಪಡುತ್ತಾರೆ. ಇವರೆಲ್ಲರಿಗೆ ಯಮನು, "ಭೂತಲವನ್ನು ಸೇರಿ ಜನರನ್ನು ನಿಮ್ಮ ನಿಮ್ಮ ಗುಣಗಳಿಂದ ಕೂಡಿದವರನ್ನಾಗಿ ಮಾಡಿ. ಆಲಸ್ಯ ಮಾಡಬೇಡಿ" ಎಂದು ಹೇಳುತ್ತಾ ಉಪಪಾಪಗಳು, ಪಾಪಿಗಳನ್ನು ಅವರಿಗೆ ಸೇವಕರಾಗಿ ಕಳುಹಿಸಿ, ‘ನೀವೆಲ್ಲರೂ ಭೂಮಿಯಲ್ಲಿ ಸಂಸಾರಮಾಡುತ್ತಿರಿ’ ಎಂದು ಆಜ್ಞೆಮಾಡಿದನು. ಯಮನ ಆಜ್ಞೆಯಂತೆ, ಆ ಪಾಪ ಜಾತರೆಲ್ಲರೂ ಭೂಲೋಕಕ್ಕೆ ಬಂದು ಇಲ್ಲಿ ರುದ್ರವನ್ನು ಜಪಿಸುವವರನ್ನು ಕಂಡು, ಭಯಪಟ್ಟು ಓಡಿ ಹೋಗಿ ಯಮನ ಬಳಿ ಸೇರಿ, ಭೀತರಾದ ಅವರು, "ಸ್ವಾಮಿ ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ ನಾವು ಭೂಲೋಕಕ್ಕೆ ಹೋದೆವು. ನಾವು ನಿನ್ನ ಕಿಂಕರರು. ಆದರೂ ಭೂತಲವು ನಮಗೆ ಭಯವನ್ನುಂಟು ಮಾಡುತ್ತಿದೆ. ಅದರ ಸುತ್ತ ಮುತ್ತಲೆಲ್ಲವೂ ಅಗ್ನಿಯಿಂದ ಆವರಿಸಿದಂತಿದೆ. ರುದ್ರಾಗ್ನಿಯಲ್ಲಿ ನಾವು ದಹಿಸಲ್ಪಟ್ಟೆವು. ಆ ರುದ್ರಜಪ ಮಾಡುವವರನ್ನು ನೋಡಿದ ಕೂಡಲೇ ನಮಗೆ ಉರಿಯ ಮಧ್ಯೆ ಇರುವ ಹಾಗಾಗುತ್ತದೆ. ಸ್ವಾಮಿ, ನಾವು ರುದ್ರಾಗ್ನಿ ದಗ್ಧರು. ನಮ್ಮ ಶಕ್ತಿಯೆಲ್ಲಾ ಉಡುಗಿ ಹೋಗಿದೆ. ನಮ್ಮ ಗತಿ ಏನು? ನಮಗೆ ಭೂಮಿಯನ್ನು ಸೇರುವ ಶಕ್ತಿಯೇ ಇಲ್ಲ. ಶ್ರೀ ರುದ್ರ ಜಪದಿಂದ ವಿಪ್ರರೆಲ್ಲರೂ ಪುಣ್ಯಾತ್ಮರಾಗುತ್ತಿದ್ದಾರೆ. ಭಕ್ತಿಯಿಂದ ಯಾವಾಗಲೋ ಒಂದು ಸಲ ರುದ್ರಾಧ್ಯಾಯವನ್ನು ಓದಿದವನೂ ಕೂಡಾ ಪುಣ್ಯಾತ್ಮನಾಗುತ್ತಿದ್ದಾನೆ. ಘೋರ ಪಾಪಗಳನ್ನು ಮಾಡಿದವರೂ ಕೂಡಾ ಈ ರುದ್ರದಿಂದ ಪುಣ್ಯಾತ್ಮರಾಗಿ ಹೋಗುತ್ತಿದ್ದಾರೆ. ನಮಗೆ ಭೂಸಂಚಾರ ಹೇಗೆ? ಎಷ್ಟೇ ಕಷ್ಟ ಪಟ್ಟರೂ ನಮಗೆ ಭೂಲೋಕ ಗತಿ ಇರದೇ ಹೋಗುತ್ತಿದೆ. ಹೇ ಯಮರಾಜ, ರುದ್ರನು ಕಾಲಕೂಟ ವಿಷದಂತೆ ಇದ್ದಾನೆ. ಬ್ರಹ್ಮ ಕೊಟ್ಟ ಮಹಾರುದ್ರವೆನ್ನುವ ವಿಷವನ್ನು ಶಾಂತಿಗೊಳಿಸು. ನಮ್ಮನ್ನು ರಕ್ಷಿಸು" ಎಂದು ಯಮಕಿಂಕರರು ಬಾಧಾಪೀಡಿತರಾಗಿ ಕಳಕಳಿಯಿಂದ ಯಮನನ್ನು ಪ್ರಾರ್ಥಿಸಿದರು.

ಹಾಗೆ ತನ್ನ ಭೃತ್ಯರು ಪ್ರಾರ್ಥಿಸಲು, ಅವರೊಡನೆ ಯಮರಾಜ ಬ್ರಹ್ಮಲೋಕಕ್ಕೆ ಹೋಗಿ, ವಿನಯದಿಂದ, "ಹೇ ಚತುರ್ಮುಖ, ಪದ್ಮಾಸನ, ನಾವೀಗ ನಿನ್ನಲ್ಲಿ ಶರಣು ಬಂದಿದ್ದೇವೆ. ಇದುವರೆಗೂ ನಾನು ಪಾಪಿಗಳನ್ನು ನರಕಕ್ಕೆ ತೆಗೆದು ಕೊಂಡು ಹೋಗುತ್ತಿದ್ದೆ. ಈ ಸಲ ಪಾಪಾತ್ಮರನ್ನು ಕರೆತರಲು ಸೇವಕರನ್ನು ಭೂಲೋಕಕ್ಕೆ ಕಳುಹಿಸಲು ನಮ್ಮವರು ರುದ್ರನಿಂದ ಪರಾಜಿತರಾದರು. ಮಹಾ ಪಾಪಿಯಾದವನೂ ಕೂಡಾ ರುದ್ರದಿಂದ ಪವಿತ್ರನಾಗಿ ಸ್ವರ್ಗ ಸೇರುತ್ತಿದ್ದಾನೆ. ನರಕವು ಇಂದು ಶೂನ್ಯವಾಗಿದೆ. ನನ್ನ ರಾಜ್ಯವೇ ನಿರರ್ಥಕವಾಯಿತು. ಎಲ್ಲರೂ ಮೋಕ್ಷವನ್ನೇ ಸೇರಿದರೆ ಸೃಷ್ಟಿ ಕಾರ್ಯ ಹೇಗೆ ನಡೆಯುತ್ತದೆ? ದೇವಾ, ಇದಕ್ಕೆ ಏನಾದರೂ ಉಪಾಯವನ್ನು ಆಲೋಚಿಸು. ನಮ್ಮನ್ನು, ಕ್ರಮಸೃಷ್ಟಿಯನ್ನು ರಕ್ಷಿಸು. ನಮ್ಮ ರಾಜ್ಯವು ಹೇಗೂ ನಾಶವಾಯಿತು. ಸ್ವಾಮಿ, ಈ ರುದ್ರಾಧ್ಯಾಯವೆನ್ನುವ ನಿಧಿಯನ್ನು ಮಾನವರಿಗೆ ಹೇಗೆ ದಯಪಾಲಿಸಿದೆ?" ಎಂದೆಲ್ಲ ಯಮನು ಪ್ರಾರ್ಥಿಸಲು, ಆ ಚತುರ್ಮುಖನು ಸ್ವಲ್ಪ ಹೊತ್ತು ಆಲೋಚನೆ ಮಾಡಿ, "ಮದಾಂಧರು, ಭಕ್ತಿಹೀನರು, ಅಜ್ಞಾನಿಗಳು, ತಾಮಸಿಗಳು, ಮಲಗಿರುವವರು, ನಿಂತಿರುವವರು, ನಡೆಯುತ್ತಿರುವವರು, ಅಪರಿಶುದ್ಧರಾಗಿ ಶ್ರೀ ರುದ್ರಾಧ್ಯಾಯವನ್ನು ಜಪಿಸುವವರೆಲ್ಲರೂ ನಿನ್ನ ದಂಡನೆಗೆ ತಗುನಾದವರೇ! ಯಥಾ ವಿಧಿಯಾಗಿ, ಉಪವಿಷ್ಟರಾಗಿ, ಭಕ್ತಿಯಿಂದ ಶ್ರೀ ರುದ್ರವನ್ನು ಜಪಿಸುವವರು ನಿನಗೆ ವಂದ್ಯರು. ಅವರು ಪಾಪ ರಹಿತರು. ನಿನ್ನ ದೂತರಿಗೆ ಈ ಮಾತುಗಳನ್ನು ಸ್ಪಷ್ಟವಾಗಿ ತಿಳಿಸು. ಅಲ್ಪಾಯುವು, ಪಾಪಿಯಾದ ಮಾನವನು ಭಕ್ತಿಯಿಂದ ಶ್ರೀ ರುದ್ರಾಧ್ಯಾಯವನ್ನು ಜಪಿಸಿದರೆ ಸರ್ವ ಪಾಪಗಳಿಂದ ಬಿಡುಗಡೆ ಹೊಂದಿ, ದೀರ್ಘಾಯುಷ್ಮಂತನಾಗಿ ಸುಖವಾಗಿ ಇರಬಲ್ಲನು. ಧರ್ಮರಾಜ, ಕೇಳು. ಸಂಪತ್ತಿ, ಜ್ಞಾನ, ಆರೋಗ್ಯ, ತೇಜಸ್ಸು, ವರ್ಚಸ್ಸು, ಬಲ, ಧೈರ್ಯ, ಈ ರುದ್ರ ಜಪದಿಂದ ವೃದ್ಧಿಯಾಗುತ್ತದೆ. ಭಕ್ತಿಯಿಂದ ರುದ್ರ ತೀರ್ಥವನ್ನು ಶ್ರೀರುದ್ರದಿಂದ ಈಶ್ವರನಿಗೆ ಅಭಿಷೇಕ ಮಾಡಿ, ಆ ರುದ್ರ ತೀರ್ಥವನ್ನು ಸೇವಿಸಿದ ಮಾನವರು, ಸ್ನಾನ ಮಾಡಿದವರು ಪವಿತ್ರರಾಗಬಲ್ಲರು. ಅಂತಹವರಿಗೆ ಮೃತ್ಯು ಭಯವಿರುವುದಿಲ್ಲ. ಶ್ರೀರುದ್ರದಿಂದ ಅಭಿಮಂತ್ರಿಸಿದ ಜಲದಿಂದ ಸ್ನಾನ ಮಾಡಿದ ನರನು ಮೃತ್ಯು ಭೀತಿಯನ್ನು ಕಳೆದುಕೊಂಡು ಭವಸಾಗರವನ್ನು ದಾಟಬಲ್ಲನು. ಶತರುದ್ರೀಯದಿಂದ ಶಿವನಿಗೆ ಅಭಿಷೇಕ ಮಾಡಿದ ಮಾನವರು ಪಾಪ ನಿರ್ಮುಕ್ತರಾಗಿ ಶತಾಯುಷಿಗಳಾಗುತ್ತಾರೆ" ಎಂದು ಬ್ರಹ್ಮ ಮಾಡಿದ ಉಪದೇಶವನ್ನು ಕೇಳಿದ ಯಮನು ತನ್ನ ಸ್ವಸ್ಥಾನಕ್ಕೆ ಹಿಂತಿರುಗಿ, ತನ್ನವರಿಗೆಲ್ಲರಿಗೂ ಅದೇ ರೀತಿ ಆದೇಶವನ್ನು ಕೊಟ್ಟನು" ಎಂದು ಪರಾಶರ ಮಹರ್ಷಿ ರಾಜನಿಗೆ ಹೇಳಿದನು.

ಮತ್ತೆ, "ಹೇ ರಾಜ, ನಿನ್ನ ಮಗನ ಆಯು ವೃದ್ಧಿಗಾಗಿ ನಿನಗೆ ಉಪಾಯವನ್ನು ಹೇಳುತ್ತೇನೆ ಕೇಳು. ಶಿವನನ್ನು ರುದ್ರ ಸೂಕ್ತಗಳಿಂದ ಕ್ಷೀರ ಧಾರೆಗಳೊಡನೆ ಅಭಿಷೇಕ ಮಾಡು. ಅದರಿಂದ ನಿನ್ನ ಮಗ ನೂರು ಸಾವಿರ ವರ್ಷ ಜೀವಿಸುತ್ತಾನೆ. ದೇವ ಲೋಕದಲ್ಲಿನ ದೇವನಾಥನಂತೆ ಆತನು ರಾಜ್ಯವನ್ನಾಳುತ್ತಾ ಭೂಲೋಕದಲ್ಲಿರುತ್ತಾನೆ. ಕಾಮ ಕ್ರೋಧ ಲೋಭಗಳನ್ನು ವರ್ಜಿಸಿದ ಬ್ರಾಹ್ಮಣರನ್ನು ನೂರು ನೂರು ಸಂಖ್ಯೆಯಲ್ಲಿ ಕರೆಸಿ, ಅವರಿಂದ ಶಿವಾಭಿಷೇಕವನ್ನು ಯಥಾ ವಿಧಿಯಾಗಿ ಮಾಡಿಸು. ನೀನು ಕರೆಸುವ ವಿಪ್ರರು ವಿದ್ವಾಂಸರು, ಜ್ಞಾನತತ್ಪರರು, ಸ್ವಧರ್ಮಾಚರಣ ನಿರತರು ಆಗಿರಬೇಕು. ಹಾಗೆ ಮಾಡಿದರೆ ನಿನ್ನ ಮಗನಿಗೆ ತಕ್ಷಣವೇ ಆಯುವೃದ್ಧಿ-ಶ್ರೇಯಸ್ಸು ಉಂಟಾಗುತ್ತದೆ" ಎಂದು ಹೇಳಿದನು.

ಪರಾಶರ ಮಹರ್ಷಿಯ ಮಾತುಗಳನ್ನು ಆಲಿಸಿದ ರಾಜ, ಸಂತೋಷಗೊಂಡು, ಅಭಿಷೇಕಕ್ಕೆ ಬೇಕಾದ ಪದಾರ್ಥಗಳನ್ನೆಲ್ಲಾ ಕೂಡಿಸಿ, ಯಥೋಕ್ತವಾಗಿ ಸಾವಿರಾರು ಸಂಖ್ಯೆಯಲ್ಲಿ ಬ್ರಾಹ್ಮಣರನ್ನು ಕರೆಸಿ, ಪರಾಶರ ಮಹರ್ಷಿ ಆದೇಶಿಸಿದ್ದಂತೆ ಅಭಿಷೇಕವನ್ನು ಆರಂಭಿಸಿದನು. ನೂರಾರು ಕಲಶಗಳಲ್ಲಿ ಹಾಲು, ಕಬ್ಬಿನರಸ, ನೀರು ತುಂಬಿ, ಶಿವಾಭಿಷೇಕವನ್ನು ಯಥಾ ವಿಧಿಯಾಗಿ ಭಕ್ತಿ ಪೂರ್ವಕವಾಗಿ ಆರಂಭಿಸಿದನು. ಆ ತೀರ್ಥೋದಕದಿಂದ ಮಗನಿಗೆ ಸ್ನಾನ ಮಾಡಿಸಿದನು. ಹೀಗೆ ಏಳು ದಿನಗಳು ಆ ರಾಜ ಶಿವನನ್ನು ಆರಾಧಿಸಿದನು. ಏಳನೆಯ ದಿನದ ಕೊನೆಯಲ್ಲಿ ಆ ರಾಜಕುಮಾರನು ಮೂರ್ಛೆಗೊಂಡು ಒಂದು ಕ್ಷಣ ಭೂಮಿಯ ಮೇಲೆ ಬಿದ್ದನು. ತಕ್ಷಣವೇ ಪರಾಶರ ಮಹರ್ಷಿ ಅವನನ್ನು ರಕ್ಷಿಸಿದನು. ಅಷ್ಟರಲ್ಲಿ ಯಮದೂತರು ಅಲ್ಲಿಗೆ ಬಂದರು. ಅವರು ನೋಡುತ್ತಿರುವಂತೆಯೇ ರುದ್ರಜಪವನ್ನು ಮಾಡುತ್ತಿದ್ದ ಬ್ರಾಹ್ಮಣರು ಆ ರಾಜಕುಮಾರನಿಗೆ ಮಂತ್ರಾಕ್ಷತೆಗಳನ್ನು ಕೊಟ್ಟರು. ಅದರಿಂದ ಆ ಯಮಕಿಂಕರರು ಆ ರಾಜಕುಮಾರನ ಬಳಿಗೆ ಹೋಗಲಾರದೆ ದೂರವಾಗಿ ನಿಂತಿದ್ದರು. ಹಾಗೆ ದೂರ ನಿಂತೇ ಅವರು ಪಾಶಗಳನ್ನು ರಾಜಕುಮಾರನ ಮೇಲೆ ಬೀಸಿದರು. ಆ ಕ್ಷಣದಲ್ಲಿ ಶಿವದೂತರು ಆ ಯಮ ಭಟರನ್ನು ಹೊಡೆಯಲು ಬಂದು, ಅವರ ಹಿಂದೆ ಬಿದ್ದು ಅವರನ್ನು ಹೊರಗಟ್ಟಿದರು. ಹೀಗೆ ಆ ರಾಜಕುಮಾರ ವಿಪ್ರರಿಂದ ರಕ್ಷಣೆ ಪಡೆದನು. ರಾಜನು ಆನಂದ ಭರಿತನಾಗಿ ಮಹೋತ್ಸವವನ್ನು ಮಾಡಿಸಿದನು. ಪರಾಶರ ಮಹರ್ಷಿಯನ್ನು ಪೂಜೆ ಮಾಡಿ, ಬಂದಿದ್ದ ವಿಪ್ರರೆಲ್ಲರನ್ನೂ ಸಂತೋಷ ಗೊಳಿಸಿದನು. ಮಹಾಸಭೆಯೊಂದನ್ನು ನಡೆಸಿ, ಆ ಮಹಾರಾಜ, ಪರಾಶರ ಮಹರ್ಷಿಯನ್ನು ಸಿಂಹಾಸನದ ಮೇಲೆ ಕೂಡಿಸಿ, ಮಿಕ್ಕ ಬ್ರಾಹ್ಮಣರನ್ನು ಯಥಾ ಯೋಗ್ಯವಾಗಿ ಕೂಡಿಸಿ, ತಾನೂ ಮಹದಾನಂದ ಭರಿತನಾಗಿ ಮಹಾಸಭೆಯಲ್ಲಿ ಆಸೀನನಾದನು. ಆ ಸಮಯದಲ್ಲಿ ಆ ಮಹಾಸಭೆಗೆ ಬ್ರಹ್ಮಪುತ್ರನಾದ ನಾರದ ಮಹಾಮುನಿಯು ಬಂದನು. ನಾರದನನ್ನು ನೋಡುತ್ತಲೇ, ಹೋದ ಪ್ರಾಣ ಬಂದಂತವನಂತಾಗಿ, ಆ ರಾಜ ಅವನನ್ನು ಎದುರ್ಗೊಂಡು, ಕರೆತಂದು, ಪೂಜಿಸಿ, ಎರಡೂ ಕೈಗಳನ್ನು ಜೋಡಿಸಿ, ನಮಸ್ಕರಿಸಿದನು. ನಂತರ ನಾರದನನ್ನುದ್ದೇಶಿಸಿ, " ಹೇ ಮಹಾಮುನಿ, ನೀನು ನೋಡಿದ ಅಪೂರ್ವವಾದ ವಿಷಯವೇನು? ಎಂಬುದನ್ನು ತಿಳಿಸು" ಎಂದು ಕೇಳಿದನು.

ಅದಕ್ಕೆ ನಾರದನು ರಾಜನಿಗೆ, "ಹೇ ರಾಜ, ನಾನೀಗ ಕೈಲಾಸದಿಂದ ಬರುತ್ತಿದ್ದೇನೆ. ಮಾರ್ಗ ಮಧ್ಯದಲ್ಲಿ ನಾನೊಂದು ವಿಚಿತ್ರವನ್ನು ಕಂಡೆ. ಕೇಳು. ಮಹಾ ಮೃತ್ಯುವು ದೂತರೊಡನೆ ನಿನ್ನ ಕುಮಾರನನ್ನು ಅಪಹರಿಸಲು ಬಂದನು. ಆ ಕ್ಷಣದಲ್ಲೇ ಅಲ್ಲಿಗೆ ಬಂದ ಶಿವ ದೂತರಿಂದ ಆ ಮಹಾ ಮೃತ್ಯುವು ಪರಾಭವ ಹೊಂದಿದನು. ಹಾಗೆ ಪರಾಭವಗೊಂಡ ಯಮದೂತರು ಯಮನ ಬಳಿಗೆ ಹೋಗಿ ಅವನಲ್ಲಿ ಮೊರೆಯಿಟ್ಟುಕೊಂಡರು. ಕೋಪಗೊಂಡ ಯಮನು ವೀರಭದ್ರನ ಬಳಿಗೆ ಹೋಗಿ, "ನನ್ನ ಕಿಂಕರರನ್ನು ನಿನ್ನ ಸೇವಕರು ಏಕೆ ಹೊಡೆಯುತ್ತಿದ್ದಾರೆ? ಕರ್ಮಾನುಸಾರವಾಗಿ ಗತಾಯುಷ್ಯನಾದ ರಾಜಕುಮಾರನನ್ನು ತೆಗೆದುಕೊಂಡು ಬರಲು ಹೋದ ನನ್ನ ದೂತರನ್ನು ನಿನ್ನವರು ಹೊಡೆಯುವುದೇತಕ್ಕೆ? ಹೇಳು" ಎಂದು ಕೇಳಲು, ವೀರಭದ್ರನು ಕ್ರುದ್ಧನಾಗಿ, "ಯಮರಾಜ, ಕೇಳು. ಆ ರಾಜಕುಮಾರನ ಆಯುಸ್ಸು ಹತ್ತು ಸಾವಿರ ವರ್ಷಗಳೆಂದು ನಿಶ್ಚಿತವಾಗಿದೆ. ಚಿತ್ರಗುಪ್ತನನ್ನು ಕೇಳದೆಯೇ ನೀನು ನಿನ್ನ ದೂತರನ್ನು ಏಕೆ ಕಳುಹಿಸಿದೆ?" ಎಂದು ಕೇಳಿದನು. ಯಮನು ಚಿತ್ರಗುಪ್ತನನ್ನು ಕರೆಸಿ ಕೇಳಿದನು. ಚಿತ್ರಗುಪ್ತನು ತನ್ನಲ್ಲಿದ್ದ ಖಾತಾ ಪುಸ್ತಕವನ್ನು ತೆಗೆದು ನೋಡಿದನು. ಅದರಲ್ಲಿ ರಾಜಕುಮಾರನಿಗೆ ಹನ್ನೆರಡನೆಯ ವಯಸ್ಸಿನಲ್ಲಿ ಅಪಮೃತ್ಯುವಿರುವುದೇ ಅಲ್ಲದೆ, ಆ ಅಪಮೃತ್ಯುವು ಕಳೆದು ಅವನು ಹತ್ತುಸಾವಿರ ವರ್ಷಗಳು ಜೀವಿಸಿರುತ್ತಾನೆ ಎಂದಿತ್ತು. ಅದನ್ನು ನೋಡಿದ ಯಮನು ನಾಚಿ, "ಅಪ್ಪಾ ವೀರಭದ್ರ, ನನ್ನ ತಪ್ಪನ್ನು ಕ್ಷಮಿಸು" ಎಂದು ಹೇಳಿ, ತನ್ನ ಲೋಕಕ್ಕೆ ಹಿಂತಿರುಗಿದನು. ಈ ವಿಚಿತ್ರವನ್ನು ನಾನು ಮಾರ್ಗ ಮಧ್ಯದಲ್ಲಿ ನೋಡಿದೆ. ಮಹಾರಾಜ, ಶ್ರೀ ರುದ್ರಾನುಷ್ಠಾನದಿಂದ ದೊರೆತ ಪುಣ್ಯದಿಂದ ನಿನ್ನ ಮಗನ ಆಯುಸ್ಸು ವೃದ್ಧಿಗೊಂಡಿತು. ಪರಾಶ ಮಹರ್ಷಿ ಮೃತ್ಯು ದೇವತೆಯನ್ನು ಜಯಿಸಿದನು" ಎಂದು ಹೇಳಿ ರಾಜನಿಂದ ಬೀಳ್ಕೊಂಡು ನಾರದ ಮುನಿಯು ಸ್ವರ್ಗಲೋಕಕ್ಕೆ ಹೊರಟು ಹೋದನು. ಪರಾಶರ ಮಹರ್ಷಿಯೂ ತನ್ನ ಆಶ್ರಮಕ್ಕೆ ಹಿಂತಿರುಗಿದನು. ಆ ರಾಜಪುತ್ರ ನಿಷ್ಕಂಟಕವಾಗಿ ಹತ್ತುಸಾವಿರ ವರ್ಷಗಳು ರಾಜ್ಯವನ್ನು ಪರಿಪಾಲಿಸಿದನು. ರುದ್ರ ಮಹಿಮೆ ಅಂತಹುದು. ಎಂದು ಶ್ರೀಗುರುವು ಆ ದಂಪತಿಗಳಿಗೆ ರುದ್ರಾಧ್ಯಾಯ ಮಹಿಮೆಯನ್ನು ವಿಸ್ತಾರವಾಗಿ ತಿಳಿಸಿದರು. ಹೇ ನಾಮಧಾರಕ, ರುದ್ರಾಧ್ಯಾಯಕ್ಕೆ ಅಂತಹ ಮಾಹಾತ್ಮ್ಯೆಯಿದೆ. ಆದ್ದರಿಂದಲೇ ಶ್ರೀಗುರುವು ರುದ್ರಾಧ್ಯಾಯವನ್ನು ಬಹುವಾಗಿ ಪ್ರೀತಿಸುತ್ತಾರೆ. ಆದ್ದರಿಂದ ನೀನೂ ಸದಾ ರುದ್ರಾಧ್ಯಾಯದಿಂದ ಶ್ರೀಗುರುವನ್ನು ಪೂಜಿಸಬೇಕು" ಎಂದು ನಾಮಧಾರಕನಿಗೆ ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಮುವ್ವತ್ತ ನಾಲ್ಕನೆಯ ಅಧ್ಯಾಯ ಮುಗಿಯಿತು.   

||ಶ್ರೀಗುರು ಚರಿತ್ರೆ - ಮೂವತ್ತುಮೂರನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||