Wednesday, February 20, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತಾರನೆಯ ಅಧ್ಯಾಯ||

ಶ್ರೀಗುರುವು ಆ ಬ್ರಾಹ್ಮಣರಿಗೆ ಹೇಳಿದರು. "ಅಯ್ಯಾ ವಿಪ್ರರೇ, ವೇದಗಳು ಅನಂತವಾದವು. ಸ್ವಯಂ ನಾರಾಯಣನೇ ವೇದವ್ಯಾಸನಾಗಿ ಅವತರಿಸಿ ಅವುಗಳನ್ನು ವಿಭಾಗಿಸಿದನು. ಅದನ್ನು ‘ವ್ಯಾಸ’ ಮಾಡಿದನು ಎಂಬುದರಿಂದಲೇ ಅವನಿಗೆ ವ್ಯಾಸನೆಂದು ಹೆಸರಾಯಿತು. ಅವನಲ್ಲಿ, ಪೈಲ, ವೈಶಂಪಾಯನ, ಜೈಮಿನಿ, ಸುಮಂತರೆಂಬ ನಾಲ್ಕು ಜನ ಶಿಷ್ಯರು ವೇದಾಭ್ಯಾಸ ಮಾಡುತ್ತಿದ್ದರು.

ವ್ಯಾಸನು ವಿಭಜಿಸಿದ ಒಂದೊಂದು ವೇದವನ್ನು ಆದ್ಯಂತವಾಗಿ ತಿಳಿದು ಕೊಳ್ಳಲು ಕಲ್ಪಾಂತದವರೆಗೂ ಅಭ್ಯಾಸ ಮಾಡಿದರೂ ಸಾಧ್ಯವಾಗುವುದಿಲ್ಲ. ಪೂರ್ವದಲ್ಲಿ ಮಹಾಮಹಾ ಋಷಿಗಳೂ ಅವುಗಳನ್ನು ಸಂಪೂರ್ಣವಾಗಿ ತಿಳಿಯಲಾರದಾಗಿದ್ದರು. ಅಂತಹ ವೇದಗಳನ್ನು ನೀವು ಆದ್ಯಂತವಾಗಿ ಬಲ್ಲೆವು ಎಂದು ಹೇಳಿಕೊಳ್ಳುವುದು ಎಂಥ ವಿಪರ್ಯಾಸ!

ಹಿಂದೆ ಭಾರದ್ವಾಜ ಮುನಿ ವೇದಗಳನ್ನು ಅಶೇಷವಾಗಿ ತಿಳಿದುಕೊಳ್ಳಬೇಕೆಂದು ಬಹಳ ಕಾಲ ಬ್ರಹ್ಮಚರ್ಯದಲ್ಲಿದ್ದುಕೊಂಡು ಅವುಗಳನ್ನು ಅಭ್ಯಾಸ ಮಾಡಿದರೂ ಅವನು ಅವುಗಳನ್ನು ಪೂರ್ಣವಾಗಿ ತಿಳಿಯಲಾರದೇ ಹೋದನು. ಅದರಿಂದ ಅವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬ್ರಹ್ಮ ಪ್ರತ್ಯಕ್ಷನಾದಾಗ ಅವನನ್ನು, "ನಾನು ಬ್ರಹ್ಮಚರ್ಯದಲ್ಲಿದ್ದುಕೊಂಡು, ವೇದಗಳನ್ನೆಲ್ಲವನ್ನೂ ಸಂಪೂರ್ಣವಾಗಿ ತಿಳಿದು, ವೇದ ಪಾರಂಗತನಾಗುವಂತೆ ನನಗೆ ವರವನ್ನು ಕೊಡು" ಎಂದು ಪ್ರಾರ್ಥಿಸಿದನು. ಅದಕ್ಕೆ ಬ್ರಹ್ಮ, "ಭಾರದ್ವಾಜ, ವೇದಗಳು ಅಪಾರ, ಅನಂತ, ಅಪರಿಮಿತವಾದವು. ನನಗೇ ಎಲ್ಲವೂ ಸಂಪೂರ್ಣವಾಗಿ ತಿಳಿಯದು. ಇನ್ನು ನೀನು ಅವುಗಳನ್ನು ಹೇಗೆ ತಿಳಿಯಬಲ್ಲೆ?" ಎಂದು ಮೇರು ಸಮಾನವಾದ ವೇದ ರಾಶಿಗಳನ್ನು ಅವನಿಗೆ ತೋರಿಸಿದನು. ಆ ವೇದ ರಾಶಿಗಳನ್ನು ಕಂಡ ಭಾರದ್ವಾಜ ಭಯಪಟ್ಟು, "ಪರ್ವತಗಳಂತೆ ರಾಶಿಯಾಗಿರುವ ಇವುಗಳನ್ನು ನಾನು ಹೇಗೆ ತಿಳಿಯಬಲ್ಲೆ? ನಾನಿದುವರೆಗೂ ತಿಳಿದಿರುವುದು ಇದಕ್ಕೆ ಹೋಲಿಸಿದರೆ ಅತ್ಯಲ್ಪ! ಇನ್ನು ಇವುಗಳೆಲ್ಲವನ್ನು ಹೇಗೆ ಅಭ್ಯಾಸಮಾಡಬಲ್ಲೆ?" ಎಂದು ಭೀತನಾಗಿ ಬ್ರಹ್ಮ ಚರಣಕ್ಕೆರಗಿ, "ಪ್ರಭು, ಇವಿಷ್ಟನ್ನು ಅಭ್ಯಸಿಸಿ ಅವುಗಳನ್ನು ತಿಳಿಯುವ ಶಕ್ತಿ ನನಗಿಲ್ಲ. ಅವುಗಳನ್ನು ಆದ್ಯಂತವಾಗಿ ನೋಡುವ ಶಕ್ತಿಯೂ ನನಗಿಲ್ಲ. ನೀನೇ ಕೃಪೆಮಾಡಿ, ಅಂತಹ ಆಸೆಯನ್ನಿಟ್ಟುಕೊಂಡು ಬಂದ ನನಗೆ, ಏನು ಸಾಧ್ಯವೋ ಅದನ್ನು ದಯಪಾಲಿಸು" ಎಂದು ಪ್ರಾರ್ಥಿಸಿಕೊಂಡನು.

ಭಾರದ್ವಾಜನ ಮಾತುಗಳನ್ನು ಆಲಿಸಿದ ಬ್ರಹ್ಮ, ಆ ವೇದ ರಾಶಿಗಳಿಂದ ಮೂರು ಹಿಡಿಯಷ್ಟು ವೇದಗಳನ್ನು ತೆಗೆದು ಭಾರದ್ವಾಜನಿಗೆ ಕೊಟ್ಟು, "ಇವೆಲ್ಲವನ್ನೂ ಸಂಪೂರ್ಣವಾಗಿ ತಿಳಿಯುವವರೆಗೂ ಜೀವಿಸಿರು" ಎಂದು ಆಶೀರ್ವದಿಸಿದನು. ಭಾರದ್ವಾಜನು ಈವರೆಗೂ ಅವುಗಳೆಲ್ಲವನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗಿಲ್ಲ. ಹಾಗಿರುವಾಗ ನೀವು ‘ನಾವು ಚತುರ್ವೇದ ಪಾರಂಗತರು’ ಎಂದು ಹೇಗೆ ಹೇಳಿಕೊಳ್ಳುತ್ತಿದ್ದೀರಿ?

"ವೇದಗಳಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳು. ಅವುಗಳಲ್ಲಿ ಅನೇಕ ಶಾಖೆ, ಉಪಶಾಖೆಗಳಿವೆ" ಎಂದು ಹೇಳಿದ ವ್ಯಾಸನ ಮಾತುಗಳನ್ನು ಕೇಳಿದ ಅವನ ಶಿಷ್ಯರು, "ಹೇ ಮುನಿವರ್ಯ, ಅವನ್ನು ನಮಗೆ ಬೋಧಿಸು. ನಾವು ನಮ್ಮ ಶಕ್ತ್ಯಾನುಸಾರ ಅವುಗಳನ್ನು ಅಭ್ಯಸಿಸುತ್ತೇವೆ" ಎಂದು ಕೇಳಿಕೊಂಡರು.

ವ್ಯಾಸನು ಮೊದಲ ಶಿಷ್ಯನಾದ ಪೈಲನನ್ನು ಕರೆದು, "ಪೈಲ, ಋಗ್ವೇದಕ್ಕೆ ಆಯುರ್ವೇದ ಉಪವೇದ. ಆತ್ರೇಯಸ ಗೋತ್ರ. ಬ್ರಹ್ಮ ದೇವತೆ. ಗಾಯತ್ರಿ ಛಂದಸ್ಸು. ರಕ್ತ ವರ್ಣ. ಪದ್ಮ ಪತ್ರದಂತೆ ಅಗಲವಾದ ಕಣ್ಣುಗಳು. ಎರಡು ಮೊಳದುದ್ದ ದೇಹ. ಪೊದೆಯಂತಹ ಕೂದಲು, ಗಡ್ಡ. ಈ ಸ್ವರೂಪದಲ್ಲಿ ಋಗ್ವೇದವನ್ನು ನೀನು ಏಕಾಗ್ರ ಚಿತ್ತನಾಗಿ ಧ್ಯಾನಮಾಡು. ಋಗ್ವೇದಕ್ಕೆ ಚರ್ಚ, ಶ್ರಾವಕ, ಚರ್ಚಕ, ಶ್ರವಣೀಯ ಪಾಠ, ಕ್ರಮ ಪಾಠ, ಜಟಾ, ರಥಕ್ರಮ, ದಂಡಕ್ರಮ ಎಂಬ ಎಂಟು ಬೇಧಗಳು. ಇವುಗಳ ಪಾರಾಯಣವು ಪುಣ್ಯ ಪ್ರದವಾದದ್ದು. ಇದಕ್ಕೆ ಸಂಬಂಧಿಸಿದಂತೆ ಆಶ್ವಲಾಯನಿ, ಸಾಂಖ್ಯಾಯನಿ, ಶಾಕಲ, ಬಾಷ್ಕಲ, ಮಾಂಡುಕೇಯ ಎಂಬ ಐದು ಶಾಖೆಗಳಿವೆ" ಎಂದು ಪೈಲನಿಗೆ ಋಗ್ವೇದವನ್ನು ಬೋಧಿಸಿದನು.

ಮತ್ತೆ ವ್ಯಾಸನು ವೈಶಂಪಾಯನನನ್ನು ಕರೆದು ಅವನಿಗೆ ಯಜುರ್ವೇದವನ್ನು ಬೋಧಿಸಿದನು. "ಯಜುರ್ವೇದಕ್ಕೆ ಧನುರ್ವೇದವು ಉಪವೇದ. ಭಾರದ್ವಾಜ ಗೋತ್ರ. ರುದ್ರ ಅಧಿದೇವತೆ. ತ್ರಿಷ್ಟುಪ್ ಛಂದಸ್ಸು. ಸಣ್ಣಗೆ ನೀಳವಾದ ದೇಹ. ಕೈಯಲ್ಲಿ ಕಪಾಲ. ಕಮಲದೆಲೆಯಂತೆ ವಿಶಾಲವಾಗಿರುವ, ಸ್ವರ್ಣ ವರ್ಣದ ಕಣ್ಣುಗಳು, ಐದು ಮೊಳದ ದೇಹ, ತಾಮ್ರ ಬಣ್ಣದಿಂದ ಕೂಡಿದ ಯಜುರ್ವೇದವನ್ನು ಏಕಾಗ್ರ ಚಿತ್ತನಾಗಿ ಧ್ಯಾನಿಸು. ಯಜುರ್ವೇದದಲ್ಲಿ ೮೬ ಶಾಖೆಗಳಿವೆ. ಅವುಗಳಲ್ಲಿ ಚರಕ, ಆಹ್ಯಾರ್ಕ, ಕಠ, ಪ್ರಾಪ್ಯಕತ, ಕಪಿಷ್ಠಲ, ಶಾರಾಯಣೀಯ, ನಾರಾಯಣೀಯ, ವರ್ತಾಂತವೇಯ, ಶ್ವೇತತರ, ಮೈತ್ರಾಯಣೀಯ, ಎನ್ನುವ ಹತ್ತು ಶಾಖೆಗಳು ಪ್ರಸಿದ್ಧವಾದವು. ಅದರಲ್ಲಿ ಮೈತ್ರಾಯಣೀಯದಲ್ಲಿ, ಮಾನವ, ದುಂದುಭ, ಐಷೇಯ, ವಾರಾಹ, ಹರಿದ್ರವೇಯ, ಶ್ಯಾಮ, ಶ್ಯಾಮಾಯಣಿ, ಎಂಬ ಹತ್ತು ಉಪಶಾಖೆಗಳಿವೆ. ಹೀಗೆಯೇ ವಾಜಸನೇಯದಲ್ಲೂ ವಾಜಸನೇಯದ ಜೊತೆಗೆ, ಬೋಧೇಯ, ಜಾಬಾಲಕ, ಕಾಣ್ವ, ಮಾಧ್ಯಂದಿನ, ಶಾಪೇಯ, ತಾಪನೀಯ, ಕಾಪಾಲ, ಪೌಂಡ್ರ, ವತ್ಸ, ಅವಟಿಕ, ಪರಮಾವಟಿಕ, ಪಾರಾಶರ್ಯ, ವೈನೇಯ, ಮೈಥೇಯ, ಔಧೇಯ, ಗಾಲವ, ಬೈಜವ, ಕಾತ್ಯಾಯನೀಯ, ಎಂದು, ಹದಿನೆಂಟು ಉಪಶಾಖೆಗಳಿವೆ.

ತೈತ್ತರೀಯದಲ್ಲಿ ಔಖ್ಯ, ಕಾಂಡಿಕೇಯ ಎಂದು ಎರಡು ಶಾಖೆಗಳಿವೆ. ಕಾಂಡಿಕೇಯದಲ್ಲಿ ಮತ್ತೆ ಐದು ಉಪಶಾಖೆಗಳಿವೆ, ಅದರಲ್ಲಿ ಆಪಸ್ತಂಭ ಶಾಖೆ ಪ್ರಸಿದ್ಧವಾದುದು. ಇದರಲ್ಲಿ ಸಕಲ ಯಜ್ಞ ವಿಧಾನಗಳು ವಿಸ್ತಾರವಾಗಿ ಹೇಳಲ್ಪಟ್ಟಿವೆ. ಆ ನಂತರ ಬೋಧಾಯನ, ಸತ್ಯಾಷಾಢಿ, ಹಿರಣ್ಯಕೇಶಿ, ಔಧೇಯ ಎಂಬ ಶಾಖೆಗಳು ಕೂಡಾ ಪ್ರಸಿದ್ಧವು. ಹೀಗೆ ಪ್ರತಿಯೊಂದರ ವಿಶೇಷವನ್ನೂ ತಿಳಿದುಕೋ ಎಂದು ವ್ಯಾಸರು ವೈಶಂಪಾಯನಿಗೆ ಹೇಳಿದರು.

ಮೇಲೆ ಹೇಳಿದ ವೇದಾಂಗಗಳಿಗೆಲ್ಲಾ ಪ್ರತಿಪದ, ಅನುಪದ, ಛಂದಸ್ಸು, ಭಾಷೆ, ಧರ್ಮ, ಮೀಮಾಂಸ, ನ್ಯಾಯ, ತರ್ಕ ಎನ್ನುವ ಎಂಟು ಉಪಾಂಗಗಳಿವೆ. ವೇದಗಳಿಗೆ ಜ್ಯೋತಿಷ, ವ್ಯಾಕರಣ, ಶಿಕ್ಷ, ಕಲ್ಪ, ಛಂದಸ್ಸು, ನಿರುಕ್ತ ಎನ್ನುವ ಷಡಂಗಗಳು. ಪರಿಶಿಷ್ಟಗಳು ಹದಿನೆಂಟು. ಮಾನವರು ವೇದಗಳನ್ನು ಸಂಪೂರ್ಣವಾಗಿ ತಿಳಿದು ಕೊಳ್ಳಲಾರರು. ಮಂದ ಬುದ್ಧಿಗಳೂ ತಿಳಿದು ಕೊಳ್ಳಲು ಅನುಕೂಲವಾಗುವಂತೆ, ಅವರವರ ಶಕ್ತ್ಯಾನುಸಾರವಾಗಿ, ಅವರವರ ಇಷ್ಟದಂತೆ ಅವುಗಳನ್ನು ಅಧ್ಯಯನ ಮಾಡಿಕೊಳ್ಳಲು, ಪ್ರಮಾಣಸಿದ್ಧವಾಗಿ ಅವುಗಳನ್ನು ಶಾಖೆಗಳಾಗಿ ವಿಂಗಡಿಸಿದ್ದಾರೆ" ಎಂದು ವ್ಯಾಸನು ವೈಶಂಪಾಯನಿಗೆ ಹೇಳಲು, ಅವನು, ವಿನಯದಿಂದ, "ಸ್ವಾಮಿ, ಯಜುರ್ವೇದವನ್ನು ಶಾಖಾ ಬೇಧಗಳ ಕ್ರಮದಂತೆ ನೀವು ನನಗೆ ವಿಸ್ತಾರವಾಗಿ ಹೇಳಿದಿರಿ. ಆದರೆ ನನಗೊಂದು ಸಂದೇಹವಿದೆ. ಇದರ ಮೂಲಶಾಖೆ ಯಾವುದು? ಅದನ್ನು ವಿಸ್ತರಿಸಿ ಹೇಳಿ" ಎಂದು ಕೇಳಿದನು. ಅದಕ್ಕೆ ವ್ಯಾಸಮುನಿ, "ಮಗು, ನಿನ್ನ ಪ್ರಶ್ನೆ ಬಹು ಯುಕ್ತವಾಗಿದೆ. ಯಜುರ್ವೇದಕ್ಕೆ ಮೂಲ ಬ್ರಾಹ್ಮಣ ಸಂಹಿತೆಗಳು ಎಂದು ಋಷಿಗಳು ಹೇಳುತ್ತಾರೆ. ಇದು ನಿಶ್ಚಿತವಾದದ್ದು. ಬ್ರಾಹ್ಮಣ ಕಾಂಡದಲ್ಲಿ ಅಂತರ್ಗತವಾದದ್ದು ಅರಣ್ಯಕವು. ಈ ಮೂಲವೇ ಯಜ್ಞಾದಿಗಳಲ್ಲಿ ಉಪಯೋಗಿಸುವಂತಹವು. ಅವನ್ನು ಹೆಚ್ಚಿನ ಪ್ರಯತ್ನದಿಂದ ಅಭ್ಯಾಸ ಮಾಡಬೇಕು" ಎಂದು ವ್ಯಾಸಮುನಿ ಹೇಳಲು, ವೈಶಂಪಾಯನು ಅವರನ್ನು ಮತ್ತೊಮ್ಮೆ ಅವೆಲ್ಲವನ್ನೂ ವಿಸ್ತರಿಸಿ ಹೇಳ ಬೇಕೆಂದು ಕೇಳಿಕೊಳ್ಳಲು ವ್ಯಾಸರು ಅವನಿಗೆ ಅದೆಲ್ಲವನ್ನೂ ವಿಸ್ತರಿಸಿ ಹೇಳಿದರು.

"ಈ ಕಲಿಯುಗದಲ್ಲಿ ಚತುರ್ವೇದಗಳನ್ನು ಅಧ್ಯಯನ ಮಾಡುವಂತಹರು ಯಾರಿದ್ದಾರೆ? ಸಾಂಗವಾಗಿ ಒಂದು ವೇದವನ್ನು ಅಧ್ಯಯನ ಮಾಡಿರುವಂತಹ ಒಬ್ಬನೂ ಇಲ್ಲ. ಅಂತಹುದರಲ್ಲಿ ನೀವು ನಾಲ್ಕೂ ವೇದಗಳನ್ನು ಹೇಗೆ ಅಧ್ಯಯನ ಮಾಡಬಲ್ಲವರಾದಿರಿ? ನಾರಾಯಣಾವತಾರನಾದ ವ್ಯಾಸ ಮುನಿಯನ್ನು ಬಿಟ್ಟರೆ ಮಿಕ್ಕವರು ಯಾರಿಗೂ ಎಲ್ಲ ವೇದಗಳೂ ತಿಳಿಯವು" ಎಂದು ಶ್ರೀಗುರುವು ಆ ಬ್ರಾಹ್ಮಣರಿಗೆ ಮತ್ತೆ ಹೇಳಿದರು.

ನಂತರ ವ್ಯಾಸಮುನಿ ತನ್ನ ಶಿಷ್ಯನಾದ ಜೈಮಿನಿಯನ್ನು ಕರೆದು, ಅವನಿಗೆ ಸಾಮವೇದವನ್ನು ಉಪದೇಶಿಸಿದರು. "ಸಾಮ ವೇದಕ್ಕೆ ಗಾಂಧರ್ವ ಉಪವೇದ. ವಿಷ್ಣು ದೇವತೆ. ಜಗತಿ ಛಂದಸ್ಸು. ಕಾಶ್ಯಪ ಗೋತ್ರ. ಪುಷ್ಪಮಾಲಾಧರ. ಕ್ಷಮಾಶಾಲಿ. ಶುದ್ಧವಸ್ತ್ರವನ್ನು ಉತ್ತರೀಯವಾಗಿ ಹೊದ್ದು ಕೊಂಡು, ಶುಚಿರ್ಭೂತನಾಗಿ. ದಾಂತನಾಗಿ, ಚರ್ಮ ದಂಡವನ್ನು ಹಿಡಿದು, ಸ್ವರ್ಣ ವರ್ಣ ನೇತ್ರಗಳಿಂದ ಕೂಡಿದ ರೂಪವುಳ್ಳ, ಆರು ಮೊಳ ಉದ್ದ, ಶ್ವೇತ ವರ್ಣ ದೇಹವುಳ್ಳ ಸಾಮ ರೂಪವನ್ನು ಧ್ಯಾನಿಸು. ಇದರಲ್ಲಿ ಸಹಸ್ರ ಶಾಖೆಗಳಿವೆ. ಅದೆಲ್ಲವನೂ ತಿಳಿದು ಕೊಳ್ಳುವ ಸಾಮರ್ಥ್ಯವುಳ್ಳವನು ಯಾರೂ ಇಲ್ಲ. ನಾರಾಯಣನೊಬ್ಬನೇ ಅದೆಲ್ಲವನ್ನೂ ತಿಳಿದವನು" ಎಂದು ವ್ಯಾಸನು ಜೈಮಿನಿಗೆ ಹೇಳಿದನು.

ಸಾಮ ವೇದದಲ್ಲಿ ಆಸುರಾಯಣೀಯ, ವಾರ್ತಾಂತವೇಯ, ವಾಸುರಾಯಣೀಯ, ಪ್ರಾಂಜಲ, ಋಗ್ವಿಧಾನ, ಪ್ರಾಚೀನಯೋಗ್ಯ, ಜ್ಞಾನಯೋಗ್ಯ ಎಂದು ಏಳು ಬೇಧಗಳು. ನಂತರ ರಾಣಾಯನೀಯದಲ್ಲಿ ರಾಣಾಯನೀಯ, ಶಾಟ್ಯಾಯನೀಯ, ಶಾಟ್ಯ, ಮುದ್ಗಲ, ಖಲ್ವಲ, ಮಹಾ ಖಲ್ವಲ, ಲಾಂಗಲ, ಕೌಥುಮ, ಗೌತುಮ, ಜೈಮಿನೀಯ ಎಂದು ಪ್ರಮುಖವಾದ ಒಂಭತ್ತು ಬೇಧಗಳು" ಎಂದು ವ್ಯಾಸನು ಹೇಳಿದ್ದನ್ನು, ಶ್ರೀಗುರುವು ಆ ಇಬ್ಬರು ವಿಪ್ರರಿಗೆ ಹೇಳಿ, ಭೂಮಂಡಲದಲ್ಲಿ ಯಾವ ಬ್ರಾಹ್ಮಣನಿಗೂ ಸಾಮ ವೇದವು ಆರಂಭದಿಂದ ತಿಳಿಯದು. ಆದರೂ ನೀವು ವೇದಜ್ಞರು ಎಂದು ಹೇಗೆ ಹೇಳಿಕೊಳ್ಳುತ್ತಿದ್ದೀರಿ! ಹಾಗೆ ಹೇಳಿ ಕೊಳ್ಳುವುದು ನಿಮ್ಮ ಹುಚ್ಚು ಪ್ರಲಾಪವೇ ಹೊರತು ಮತ್ತಿನ್ನೇನೂ ಅಲ್ಲ" ಎಂದು ಹೇಳಿ, ಶ್ರೀಗುರುವು ಮುಂದುವರೆಸಿದರು.

ನಂತರ ವ್ಯಾಸಮುನಿ, ತನ್ನ ನಾಲ್ಕನೆಯ ಶಿಷ್ಯನಾದ ಸುಮಂತನನ್ನು ಕರೆದು ಅವನಿಗೆ, "ಅಥರ್ವ ವೇದಕ್ಕೆ ಧನುರ್ವೇದ ಉಪವೇದ. ಇಂದ್ರ ದೇವತೆ. ಬೈಜಾನಗೋತ್ರ. ತ್ರಿಷ್ಟುಪ್ ಛಂದಸ್ಸು. ಕೃಷ್ಣವರ್ಣ. ಕಾಮ ರೂಪಿ. ಕ್ಷುದ್ರ ಕರ್ಮಿ. ಏಳುಮೊಳ ಉದ್ದ ದೇಹ. ಅಥರ್ವ ವೇದದಲ್ಲಿ, ಪೈಪ್ಪಲ, ದಾಂತ, ಪ್ರದಾಂತ, ಸ್ತೋತ, ಔತ, ಬ್ರಹ್ಮದಾವಲ, ಶೌನಕೀಯ, ದೇವರ್ಷ, ಚರಣವಿದ್ಯ ಎನ್ನುವ ಒಂಭತ್ತು ಶಾಖೆಗಳು. ಇವುಗಳಲ್ಲಿ ವಿಧಾನ ಕಲ್ಪ, ನಕ್ಷತ್ರ ಕಲ್ಪ, ಸಂಹಿತಾ ಕಲ್ಪ, ಶಾಂತಿ ಕಲ್ಪ, ವಿಧಿವಿಧಾನ ಕಲ್ಪ ಎಂಬುವ ಐದು ಕಲ್ಪಗಳಿವೆ" ಎಂದು ಅಥರ್ವ ವೇದವನ್ನು ಉಪದೇಶಿಸಿದನು.

ಹಿಂದೆ ಭರತ ಖಂಡದಲ್ಲಿ ವರ್ಣಾಶ್ರಮ ಆಚಾರಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ ಪುಣ್ಯ ಪುರುಷರಿಂದ ವೇದಗಳು ಸುಪ್ರತಿಷ್ಠವಾಗಿದ್ದವು. ಈ ಕಲಿಯುಗದಲ್ಲಿ ಬ್ರಾಹ್ಮಣರು ತಮ್ಮ ಕರ್ಮ, ಕರ್ತವ್ಯಗಳನ್ನು ಪರಿತ್ಯಜಿಸಿದರು. ಅದರಿಂದ ವೇದಗಳು ಲುಪ್ತವಾದವು. ಕರ್ಮ ಭ್ರಷ್ಟರಾದ ದ್ವಿಜರು ಮ್ಲೇಚ್ಛರೆದುರಿಗೆ ವೇದಗಳ ಪಠನದಿಂದ ಜಾತಿ ಭ್ರಷ್ಟರೂ ಆದರು. ಅಂತಹವರಿಂದ ವೇದಮಂತ್ರಗಳ ಬಲವೂ ನಾಶವಾಯಿತು. ಹಿಂದೆ ಬ್ರಾಹ್ಮಣರಿಗೆ ದೇವತ್ವ, ಮಹತ್ವಗಳಿದ್ದುದರಿಂದಲೇ ಅವರು ಭೂಸುರರಾಗಿ, ಮಾನ್ಯರಾಗಿದ್ದರು. ರಾಜ ಮಹಾರಾಜರು ಬ್ರಾಹ್ಮಣರನ್ನು ಪೂಜಿಸಿ, ತಮ್ಮ ಸರ್ವಸ್ವವನ್ನೂ ಅವರಿಗೆ ಅರ್ಪಿಸುತ್ತಿದ್ದರು. ಆದರೆ ಆ ಬ್ರಾಹ್ಮಣರು ಧನ ಸಂಪಾದನೆಯಲ್ಲಿ ಆಸಕ್ತಿಯಿಲ್ಲದೆ ರಾಜರು ಕೊಟ್ಟ, ಅರ್ಪಿಸಿದ ಧನ ಕನಕಾದಿಗಳನ್ನು ನಿರಾಕರಿಸುತ್ತಿದ್ದರು. ಅವರಲ್ಲಿದ್ದ ವೇದ ಮಂತ್ರಗಳ ಬಲದಿಂದಲೇ ತ್ರಿಮೂರ್ತಿಗಳೂ ಅವರ ವಶರಾಗಿದ್ದರು. ಅವರನ್ನು ಕಂಡು ಇಂದ್ರಾದಿ ದೇವತೆಗಳೂ ಭೀತರಾಗಿ ಅವರಿಗೆ ನಮಸ್ಕರಿಸುತ್ತಿದ್ದರು. ಅಂತಹವರ ಆಶೀರ್ವಚನಗಳಿಂದಲೇ ಇಷ್ಟಾರ್ಥಗಳು ಸಿದ್ಧಿಸುತ್ತಿದ್ದವು. ಅಂತಹ ದ್ವಿಜರು ಬೆಟ್ಟವನ್ನು ಹುಲ್ಲಾಗಿ, ಹುಲ್ಲನ್ನು ಬೆಟ್ಟವಾಗಿ ಪರಿವರ್ತಿಸ ಬಲ್ಲವರಾಗಿದ್ದರು. ವೇದ ಪ್ರಭಾವಿತರಾದ ವಿಪ್ರರನ್ನು ವಿಷ್ಣು ಸಹಿತರಾದ ದೇವತೆಗಳು ದೈವವೆಂದು ಪೂಜಿಸುತ್ತಿದ್ದರು. ಜಗತ್ತೆಲ್ಲವೂ ದೈವಾಧೀನವು. ದೇವತೆಗಳು ಮಂತ್ರಾಧೀನರು. ಮಂತ್ರಗಳು ಬ್ರಾಹ್ಮಣರ ಅಧೀನವು. ಅದರಿಂದಲೇ ವಿಪ್ರರನ್ನು ದೈವವೆಂದು ವಿಷ್ಣುವು ಹೇಳಿದನು. ಆದರೆ ಇಂದು, ಬ್ರಾಹ್ಮಣರು ವೇದ ಮಾರ್ಗಗಳನ್ನತಿಕ್ರಮಿಸಿ, ದುಷ್ಟ ಮಾರ್ಗಗಳಲ್ಲಿ ಹೋಗುತ್ತಿದ್ದಾರೆ. ಅದರಿಂದಲೇ ಅವರು ಸತ್ವ ಹೀನರಾಗಿ, ಹೀನ ಜಾತಿಯವರ ಸೇವೆ ಮಾಡುತ್ತಿದ್ದಾರೆ. ವೇದ ವಿಕ್ರಯವನ್ನು ಮಾಡುತ್ತಿರುವುದಲ್ಲದೆ, ಹೀನ ಜಾತಿಯವರ ಮುಂದೆಯೂ ವೇದ ಪಠನ ಮಾಡುತ್ತಿದ್ದಾರೆ. ಅಂತಹ ಬ್ರಾಹ್ಮಣಾಧಮರ ಮುಖವನ್ನೂ ನೋಡಬಾರದು. ಅವರು ಬ್ರಹ್ಮ ರಾಕ್ಷಸರಾಗುವುದರಲ್ಲಿ ಸಂಶಯವಿಲ್ಲ.

ಚತುರ್ವೇದಗಳು ಬಹು ವಿಸ್ತಾರವಾದವು. ಎಲ್ಲವನ್ನೂ ತಿಳಿದವನು ಭೂಮಂಡಲದಲ್ಲಿ ಒಬ್ಬನೂ ಇಲ್ಲ. ಸಾಮಾನ್ಯವಾಗಿ ಅವು ಗೋಪ್ಯವಾದವು. ಸಾಮಾನ್ಯರಿಗೆ ಅವು ದೊರಕುವಂತಹುವವಲ್ಲ. ಹಾಗಿರುವಾಗ ನೀವು ಚತುರ್ವೇದ ಪಾರಂಗತರು ಹೇಗಾದಿರಿ? ಮಿಕ್ಕ ಬ್ರಾಹ್ಮಣರನ್ನು ಅವಮಾನಿಸುವುದರಿಂದ ನಿಮಗೆ ಆಗುವ ಲಾಭವೇನು? ನಿಮ್ಮನ್ನು ನೀವೇ ಹೊಗಳಿ ಕೊಳ್ಳುತ್ತಾ, ಜಯಪತ್ರಗಳ ಪ್ರದರ್ಶನ ಮಾಡುತ್ತಾ, ತ್ರಿವಿಕ್ರಮನನ್ನು ಜಯಪತ್ರ ಕೊಡು ಎಂದು ಕೇಳುವುದರಲ್ಲಿ ಅರ್ಥವೇನಿದೆ? ನನ್ನ ಮಾತು ಕೇಳಿ ಈ ದುರಾಗ್ರಹವನ್ನು ಬಿಡಿ. ಇಂತಹ ಭ್ರಮೆಯಲ್ಲಿ ಬಿದ್ದು ನೀವು ಪ್ರಾಣ ಕಳೆದು ಕೊಳ್ಳುತ್ತೀರಿ" ಎಂದು ಆ ಬ್ರಾಹ್ಮಣರಿಬ್ಬರಿಗೆ ಶ್ರೀಗುರುವು ಹಿತ ವಚನಗಳನ್ನು ಹೇಳಿದರು.

ಆದರೆ ಆ ತಾಮಸಿಗಳಿಬ್ಬರೂ ಶ್ರೀಗುರುವಿನ ಮಾತುಗಳಿಗೆ ಇಂಬು ಕೊಡದೆ, "ನಿಮ್ಮಿಬ್ಬರಲ್ಲಿ ಯಾರಾದರೂ ನಮ್ಮೊಡನೆ ವಾದ ಮಾಡಿ. ಇಲ್ಲದಿದ್ದರೆ ಜಯಪತ್ರವನ್ನಾದರೂ ಕೊಡಿ. ವಾದ ಮಾಡದಿದ್ದರೆ ಜಯಪತ್ರವನ್ನಾದರೂ ತೋರಿಸದಿದ್ದರೆ ರಾಜನೆದುರಿಗೆ ನಾವು ಹೇಗೆ ಶ್ರೇಷ್ಠರಾಗುತ್ತೀವಿ?" ಎಂದು ಆಗ್ರಹ ಮಾಡಿ ಸ್ವಹಿತವನ್ನು ಅರಿಯದೆ ಮೃತ್ಯುವನ್ನು ಆಹ್ವಾನಿಸಿಕೊಂಡರು" ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಇಪ್ಪತ್ತಾರನೆಯ ಅಧ್ಯಾಯ ಮುಗಿಯಿತು.


No comments:

Post a Comment