Wednesday, February 20, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತಾರನೆಯ ಅಧ್ಯಾಯ||

ಶ್ರೀಗುರುವು ಆ ಬ್ರಾಹ್ಮಣರಿಗೆ ಹೇಳಿದರು. "ಅಯ್ಯಾ ವಿಪ್ರರೇ, ವೇದಗಳು ಅನಂತವಾದವು. ಸ್ವಯಂ ನಾರಾಯಣನೇ ವೇದವ್ಯಾಸನಾಗಿ ಅವತರಿಸಿ ಅವುಗಳನ್ನು ವಿಭಾಗಿಸಿದನು. ಅದನ್ನು ‘ವ್ಯಾಸ’ ಮಾಡಿದನು ಎಂಬುದರಿಂದಲೇ ಅವನಿಗೆ ವ್ಯಾಸನೆಂದು ಹೆಸರಾಯಿತು. ಅವನಲ್ಲಿ, ಪೈಲ, ವೈಶಂಪಾಯನ, ಜೈಮಿನಿ, ಸುಮಂತರೆಂಬ ನಾಲ್ಕು ಜನ ಶಿಷ್ಯರು ವೇದಾಭ್ಯಾಸ ಮಾಡುತ್ತಿದ್ದರು.

ವ್ಯಾಸನು ವಿಭಜಿಸಿದ ಒಂದೊಂದು ವೇದವನ್ನು ಆದ್ಯಂತವಾಗಿ ತಿಳಿದು ಕೊಳ್ಳಲು ಕಲ್ಪಾಂತದವರೆಗೂ ಅಭ್ಯಾಸ ಮಾಡಿದರೂ ಸಾಧ್ಯವಾಗುವುದಿಲ್ಲ. ಪೂರ್ವದಲ್ಲಿ ಮಹಾಮಹಾ ಋಷಿಗಳೂ ಅವುಗಳನ್ನು ಸಂಪೂರ್ಣವಾಗಿ ತಿಳಿಯಲಾರದಾಗಿದ್ದರು. ಅಂತಹ ವೇದಗಳನ್ನು ನೀವು ಆದ್ಯಂತವಾಗಿ ಬಲ್ಲೆವು ಎಂದು ಹೇಳಿಕೊಳ್ಳುವುದು ಎಂಥ ವಿಪರ್ಯಾಸ!

ಹಿಂದೆ ಭಾರದ್ವಾಜ ಮುನಿ ವೇದಗಳನ್ನು ಅಶೇಷವಾಗಿ ತಿಳಿದುಕೊಳ್ಳಬೇಕೆಂದು ಬಹಳ ಕಾಲ ಬ್ರಹ್ಮಚರ್ಯದಲ್ಲಿದ್ದುಕೊಂಡು ಅವುಗಳನ್ನು ಅಭ್ಯಾಸ ಮಾಡಿದರೂ ಅವನು ಅವುಗಳನ್ನು ಪೂರ್ಣವಾಗಿ ತಿಳಿಯಲಾರದೇ ಹೋದನು. ಅದರಿಂದ ಅವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬ್ರಹ್ಮ ಪ್ರತ್ಯಕ್ಷನಾದಾಗ ಅವನನ್ನು, "ನಾನು ಬ್ರಹ್ಮಚರ್ಯದಲ್ಲಿದ್ದುಕೊಂಡು, ವೇದಗಳನ್ನೆಲ್ಲವನ್ನೂ ಸಂಪೂರ್ಣವಾಗಿ ತಿಳಿದು, ವೇದ ಪಾರಂಗತನಾಗುವಂತೆ ನನಗೆ ವರವನ್ನು ಕೊಡು" ಎಂದು ಪ್ರಾರ್ಥಿಸಿದನು. ಅದಕ್ಕೆ ಬ್ರಹ್ಮ, "ಭಾರದ್ವಾಜ, ವೇದಗಳು ಅಪಾರ, ಅನಂತ, ಅಪರಿಮಿತವಾದವು. ನನಗೇ ಎಲ್ಲವೂ ಸಂಪೂರ್ಣವಾಗಿ ತಿಳಿಯದು. ಇನ್ನು ನೀನು ಅವುಗಳನ್ನು ಹೇಗೆ ತಿಳಿಯಬಲ್ಲೆ?" ಎಂದು ಮೇರು ಸಮಾನವಾದ ವೇದ ರಾಶಿಗಳನ್ನು ಅವನಿಗೆ ತೋರಿಸಿದನು. ಆ ವೇದ ರಾಶಿಗಳನ್ನು ಕಂಡ ಭಾರದ್ವಾಜ ಭಯಪಟ್ಟು, "ಪರ್ವತಗಳಂತೆ ರಾಶಿಯಾಗಿರುವ ಇವುಗಳನ್ನು ನಾನು ಹೇಗೆ ತಿಳಿಯಬಲ್ಲೆ? ನಾನಿದುವರೆಗೂ ತಿಳಿದಿರುವುದು ಇದಕ್ಕೆ ಹೋಲಿಸಿದರೆ ಅತ್ಯಲ್ಪ! ಇನ್ನು ಇವುಗಳೆಲ್ಲವನ್ನು ಹೇಗೆ ಅಭ್ಯಾಸಮಾಡಬಲ್ಲೆ?" ಎಂದು ಭೀತನಾಗಿ ಬ್ರಹ್ಮ ಚರಣಕ್ಕೆರಗಿ, "ಪ್ರಭು, ಇವಿಷ್ಟನ್ನು ಅಭ್ಯಸಿಸಿ ಅವುಗಳನ್ನು ತಿಳಿಯುವ ಶಕ್ತಿ ನನಗಿಲ್ಲ. ಅವುಗಳನ್ನು ಆದ್ಯಂತವಾಗಿ ನೋಡುವ ಶಕ್ತಿಯೂ ನನಗಿಲ್ಲ. ನೀನೇ ಕೃಪೆಮಾಡಿ, ಅಂತಹ ಆಸೆಯನ್ನಿಟ್ಟುಕೊಂಡು ಬಂದ ನನಗೆ, ಏನು ಸಾಧ್ಯವೋ ಅದನ್ನು ದಯಪಾಲಿಸು" ಎಂದು ಪ್ರಾರ್ಥಿಸಿಕೊಂಡನು.

ಭಾರದ್ವಾಜನ ಮಾತುಗಳನ್ನು ಆಲಿಸಿದ ಬ್ರಹ್ಮ, ಆ ವೇದ ರಾಶಿಗಳಿಂದ ಮೂರು ಹಿಡಿಯಷ್ಟು ವೇದಗಳನ್ನು ತೆಗೆದು ಭಾರದ್ವಾಜನಿಗೆ ಕೊಟ್ಟು, "ಇವೆಲ್ಲವನ್ನೂ ಸಂಪೂರ್ಣವಾಗಿ ತಿಳಿಯುವವರೆಗೂ ಜೀವಿಸಿರು" ಎಂದು ಆಶೀರ್ವದಿಸಿದನು. ಭಾರದ್ವಾಜನು ಈವರೆಗೂ ಅವುಗಳೆಲ್ಲವನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗಿಲ್ಲ. ಹಾಗಿರುವಾಗ ನೀವು ‘ನಾವು ಚತುರ್ವೇದ ಪಾರಂಗತರು’ ಎಂದು ಹೇಗೆ ಹೇಳಿಕೊಳ್ಳುತ್ತಿದ್ದೀರಿ?

"ವೇದಗಳಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳು. ಅವುಗಳಲ್ಲಿ ಅನೇಕ ಶಾಖೆ, ಉಪಶಾಖೆಗಳಿವೆ" ಎಂದು ಹೇಳಿದ ವ್ಯಾಸನ ಮಾತುಗಳನ್ನು ಕೇಳಿದ ಅವನ ಶಿಷ್ಯರು, "ಹೇ ಮುನಿವರ್ಯ, ಅವನ್ನು ನಮಗೆ ಬೋಧಿಸು. ನಾವು ನಮ್ಮ ಶಕ್ತ್ಯಾನುಸಾರ ಅವುಗಳನ್ನು ಅಭ್ಯಸಿಸುತ್ತೇವೆ" ಎಂದು ಕೇಳಿಕೊಂಡರು.

ವ್ಯಾಸನು ಮೊದಲ ಶಿಷ್ಯನಾದ ಪೈಲನನ್ನು ಕರೆದು, "ಪೈಲ, ಋಗ್ವೇದಕ್ಕೆ ಆಯುರ್ವೇದ ಉಪವೇದ. ಆತ್ರೇಯಸ ಗೋತ್ರ. ಬ್ರಹ್ಮ ದೇವತೆ. ಗಾಯತ್ರಿ ಛಂದಸ್ಸು. ರಕ್ತ ವರ್ಣ. ಪದ್ಮ ಪತ್ರದಂತೆ ಅಗಲವಾದ ಕಣ್ಣುಗಳು. ಎರಡು ಮೊಳದುದ್ದ ದೇಹ. ಪೊದೆಯಂತಹ ಕೂದಲು, ಗಡ್ಡ. ಈ ಸ್ವರೂಪದಲ್ಲಿ ಋಗ್ವೇದವನ್ನು ನೀನು ಏಕಾಗ್ರ ಚಿತ್ತನಾಗಿ ಧ್ಯಾನಮಾಡು. ಋಗ್ವೇದಕ್ಕೆ ಚರ್ಚ, ಶ್ರಾವಕ, ಚರ್ಚಕ, ಶ್ರವಣೀಯ ಪಾಠ, ಕ್ರಮ ಪಾಠ, ಜಟಾ, ರಥಕ್ರಮ, ದಂಡಕ್ರಮ ಎಂಬ ಎಂಟು ಬೇಧಗಳು. ಇವುಗಳ ಪಾರಾಯಣವು ಪುಣ್ಯ ಪ್ರದವಾದದ್ದು. ಇದಕ್ಕೆ ಸಂಬಂಧಿಸಿದಂತೆ ಆಶ್ವಲಾಯನಿ, ಸಾಂಖ್ಯಾಯನಿ, ಶಾಕಲ, ಬಾಷ್ಕಲ, ಮಾಂಡುಕೇಯ ಎಂಬ ಐದು ಶಾಖೆಗಳಿವೆ" ಎಂದು ಪೈಲನಿಗೆ ಋಗ್ವೇದವನ್ನು ಬೋಧಿಸಿದನು.

ಮತ್ತೆ ವ್ಯಾಸನು ವೈಶಂಪಾಯನನನ್ನು ಕರೆದು ಅವನಿಗೆ ಯಜುರ್ವೇದವನ್ನು ಬೋಧಿಸಿದನು. "ಯಜುರ್ವೇದಕ್ಕೆ ಧನುರ್ವೇದವು ಉಪವೇದ. ಭಾರದ್ವಾಜ ಗೋತ್ರ. ರುದ್ರ ಅಧಿದೇವತೆ. ತ್ರಿಷ್ಟುಪ್ ಛಂದಸ್ಸು. ಸಣ್ಣಗೆ ನೀಳವಾದ ದೇಹ. ಕೈಯಲ್ಲಿ ಕಪಾಲ. ಕಮಲದೆಲೆಯಂತೆ ವಿಶಾಲವಾಗಿರುವ, ಸ್ವರ್ಣ ವರ್ಣದ ಕಣ್ಣುಗಳು, ಐದು ಮೊಳದ ದೇಹ, ತಾಮ್ರ ಬಣ್ಣದಿಂದ ಕೂಡಿದ ಯಜುರ್ವೇದವನ್ನು ಏಕಾಗ್ರ ಚಿತ್ತನಾಗಿ ಧ್ಯಾನಿಸು. ಯಜುರ್ವೇದದಲ್ಲಿ ೮೬ ಶಾಖೆಗಳಿವೆ. ಅವುಗಳಲ್ಲಿ ಚರಕ, ಆಹ್ಯಾರ್ಕ, ಕಠ, ಪ್ರಾಪ್ಯಕತ, ಕಪಿಷ್ಠಲ, ಶಾರಾಯಣೀಯ, ನಾರಾಯಣೀಯ, ವರ್ತಾಂತವೇಯ, ಶ್ವೇತತರ, ಮೈತ್ರಾಯಣೀಯ, ಎನ್ನುವ ಹತ್ತು ಶಾಖೆಗಳು ಪ್ರಸಿದ್ಧವಾದವು. ಅದರಲ್ಲಿ ಮೈತ್ರಾಯಣೀಯದಲ್ಲಿ, ಮಾನವ, ದುಂದುಭ, ಐಷೇಯ, ವಾರಾಹ, ಹರಿದ್ರವೇಯ, ಶ್ಯಾಮ, ಶ್ಯಾಮಾಯಣಿ, ಎಂಬ ಹತ್ತು ಉಪಶಾಖೆಗಳಿವೆ. ಹೀಗೆಯೇ ವಾಜಸನೇಯದಲ್ಲೂ ವಾಜಸನೇಯದ ಜೊತೆಗೆ, ಬೋಧೇಯ, ಜಾಬಾಲಕ, ಕಾಣ್ವ, ಮಾಧ್ಯಂದಿನ, ಶಾಪೇಯ, ತಾಪನೀಯ, ಕಾಪಾಲ, ಪೌಂಡ್ರ, ವತ್ಸ, ಅವಟಿಕ, ಪರಮಾವಟಿಕ, ಪಾರಾಶರ್ಯ, ವೈನೇಯ, ಮೈಥೇಯ, ಔಧೇಯ, ಗಾಲವ, ಬೈಜವ, ಕಾತ್ಯಾಯನೀಯ, ಎಂದು, ಹದಿನೆಂಟು ಉಪಶಾಖೆಗಳಿವೆ.

ತೈತ್ತರೀಯದಲ್ಲಿ ಔಖ್ಯ, ಕಾಂಡಿಕೇಯ ಎಂದು ಎರಡು ಶಾಖೆಗಳಿವೆ. ಕಾಂಡಿಕೇಯದಲ್ಲಿ ಮತ್ತೆ ಐದು ಉಪಶಾಖೆಗಳಿವೆ, ಅದರಲ್ಲಿ ಆಪಸ್ತಂಭ ಶಾಖೆ ಪ್ರಸಿದ್ಧವಾದುದು. ಇದರಲ್ಲಿ ಸಕಲ ಯಜ್ಞ ವಿಧಾನಗಳು ವಿಸ್ತಾರವಾಗಿ ಹೇಳಲ್ಪಟ್ಟಿವೆ. ಆ ನಂತರ ಬೋಧಾಯನ, ಸತ್ಯಾಷಾಢಿ, ಹಿರಣ್ಯಕೇಶಿ, ಔಧೇಯ ಎಂಬ ಶಾಖೆಗಳು ಕೂಡಾ ಪ್ರಸಿದ್ಧವು. ಹೀಗೆ ಪ್ರತಿಯೊಂದರ ವಿಶೇಷವನ್ನೂ ತಿಳಿದುಕೋ ಎಂದು ವ್ಯಾಸರು ವೈಶಂಪಾಯನಿಗೆ ಹೇಳಿದರು.

ಮೇಲೆ ಹೇಳಿದ ವೇದಾಂಗಗಳಿಗೆಲ್ಲಾ ಪ್ರತಿಪದ, ಅನುಪದ, ಛಂದಸ್ಸು, ಭಾಷೆ, ಧರ್ಮ, ಮೀಮಾಂಸ, ನ್ಯಾಯ, ತರ್ಕ ಎನ್ನುವ ಎಂಟು ಉಪಾಂಗಗಳಿವೆ. ವೇದಗಳಿಗೆ ಜ್ಯೋತಿಷ, ವ್ಯಾಕರಣ, ಶಿಕ್ಷ, ಕಲ್ಪ, ಛಂದಸ್ಸು, ನಿರುಕ್ತ ಎನ್ನುವ ಷಡಂಗಗಳು. ಪರಿಶಿಷ್ಟಗಳು ಹದಿನೆಂಟು. ಮಾನವರು ವೇದಗಳನ್ನು ಸಂಪೂರ್ಣವಾಗಿ ತಿಳಿದು ಕೊಳ್ಳಲಾರರು. ಮಂದ ಬುದ್ಧಿಗಳೂ ತಿಳಿದು ಕೊಳ್ಳಲು ಅನುಕೂಲವಾಗುವಂತೆ, ಅವರವರ ಶಕ್ತ್ಯಾನುಸಾರವಾಗಿ, ಅವರವರ ಇಷ್ಟದಂತೆ ಅವುಗಳನ್ನು ಅಧ್ಯಯನ ಮಾಡಿಕೊಳ್ಳಲು, ಪ್ರಮಾಣಸಿದ್ಧವಾಗಿ ಅವುಗಳನ್ನು ಶಾಖೆಗಳಾಗಿ ವಿಂಗಡಿಸಿದ್ದಾರೆ" ಎಂದು ವ್ಯಾಸನು ವೈಶಂಪಾಯನಿಗೆ ಹೇಳಲು, ಅವನು, ವಿನಯದಿಂದ, "ಸ್ವಾಮಿ, ಯಜುರ್ವೇದವನ್ನು ಶಾಖಾ ಬೇಧಗಳ ಕ್ರಮದಂತೆ ನೀವು ನನಗೆ ವಿಸ್ತಾರವಾಗಿ ಹೇಳಿದಿರಿ. ಆದರೆ ನನಗೊಂದು ಸಂದೇಹವಿದೆ. ಇದರ ಮೂಲಶಾಖೆ ಯಾವುದು? ಅದನ್ನು ವಿಸ್ತರಿಸಿ ಹೇಳಿ" ಎಂದು ಕೇಳಿದನು. ಅದಕ್ಕೆ ವ್ಯಾಸಮುನಿ, "ಮಗು, ನಿನ್ನ ಪ್ರಶ್ನೆ ಬಹು ಯುಕ್ತವಾಗಿದೆ. ಯಜುರ್ವೇದಕ್ಕೆ ಮೂಲ ಬ್ರಾಹ್ಮಣ ಸಂಹಿತೆಗಳು ಎಂದು ಋಷಿಗಳು ಹೇಳುತ್ತಾರೆ. ಇದು ನಿಶ್ಚಿತವಾದದ್ದು. ಬ್ರಾಹ್ಮಣ ಕಾಂಡದಲ್ಲಿ ಅಂತರ್ಗತವಾದದ್ದು ಅರಣ್ಯಕವು. ಈ ಮೂಲವೇ ಯಜ್ಞಾದಿಗಳಲ್ಲಿ ಉಪಯೋಗಿಸುವಂತಹವು. ಅವನ್ನು ಹೆಚ್ಚಿನ ಪ್ರಯತ್ನದಿಂದ ಅಭ್ಯಾಸ ಮಾಡಬೇಕು" ಎಂದು ವ್ಯಾಸಮುನಿ ಹೇಳಲು, ವೈಶಂಪಾಯನು ಅವರನ್ನು ಮತ್ತೊಮ್ಮೆ ಅವೆಲ್ಲವನ್ನೂ ವಿಸ್ತರಿಸಿ ಹೇಳ ಬೇಕೆಂದು ಕೇಳಿಕೊಳ್ಳಲು ವ್ಯಾಸರು ಅವನಿಗೆ ಅದೆಲ್ಲವನ್ನೂ ವಿಸ್ತರಿಸಿ ಹೇಳಿದರು.

"ಈ ಕಲಿಯುಗದಲ್ಲಿ ಚತುರ್ವೇದಗಳನ್ನು ಅಧ್ಯಯನ ಮಾಡುವಂತಹರು ಯಾರಿದ್ದಾರೆ? ಸಾಂಗವಾಗಿ ಒಂದು ವೇದವನ್ನು ಅಧ್ಯಯನ ಮಾಡಿರುವಂತಹ ಒಬ್ಬನೂ ಇಲ್ಲ. ಅಂತಹುದರಲ್ಲಿ ನೀವು ನಾಲ್ಕೂ ವೇದಗಳನ್ನು ಹೇಗೆ ಅಧ್ಯಯನ ಮಾಡಬಲ್ಲವರಾದಿರಿ? ನಾರಾಯಣಾವತಾರನಾದ ವ್ಯಾಸ ಮುನಿಯನ್ನು ಬಿಟ್ಟರೆ ಮಿಕ್ಕವರು ಯಾರಿಗೂ ಎಲ್ಲ ವೇದಗಳೂ ತಿಳಿಯವು" ಎಂದು ಶ್ರೀಗುರುವು ಆ ಬ್ರಾಹ್ಮಣರಿಗೆ ಮತ್ತೆ ಹೇಳಿದರು.

ನಂತರ ವ್ಯಾಸಮುನಿ ತನ್ನ ಶಿಷ್ಯನಾದ ಜೈಮಿನಿಯನ್ನು ಕರೆದು, ಅವನಿಗೆ ಸಾಮವೇದವನ್ನು ಉಪದೇಶಿಸಿದರು. "ಸಾಮ ವೇದಕ್ಕೆ ಗಾಂಧರ್ವ ಉಪವೇದ. ವಿಷ್ಣು ದೇವತೆ. ಜಗತಿ ಛಂದಸ್ಸು. ಕಾಶ್ಯಪ ಗೋತ್ರ. ಪುಷ್ಪಮಾಲಾಧರ. ಕ್ಷಮಾಶಾಲಿ. ಶುದ್ಧವಸ್ತ್ರವನ್ನು ಉತ್ತರೀಯವಾಗಿ ಹೊದ್ದು ಕೊಂಡು, ಶುಚಿರ್ಭೂತನಾಗಿ. ದಾಂತನಾಗಿ, ಚರ್ಮ ದಂಡವನ್ನು ಹಿಡಿದು, ಸ್ವರ್ಣ ವರ್ಣ ನೇತ್ರಗಳಿಂದ ಕೂಡಿದ ರೂಪವುಳ್ಳ, ಆರು ಮೊಳ ಉದ್ದ, ಶ್ವೇತ ವರ್ಣ ದೇಹವುಳ್ಳ ಸಾಮ ರೂಪವನ್ನು ಧ್ಯಾನಿಸು. ಇದರಲ್ಲಿ ಸಹಸ್ರ ಶಾಖೆಗಳಿವೆ. ಅದೆಲ್ಲವನೂ ತಿಳಿದು ಕೊಳ್ಳುವ ಸಾಮರ್ಥ್ಯವುಳ್ಳವನು ಯಾರೂ ಇಲ್ಲ. ನಾರಾಯಣನೊಬ್ಬನೇ ಅದೆಲ್ಲವನ್ನೂ ತಿಳಿದವನು" ಎಂದು ವ್ಯಾಸನು ಜೈಮಿನಿಗೆ ಹೇಳಿದನು.

ಸಾಮ ವೇದದಲ್ಲಿ ಆಸುರಾಯಣೀಯ, ವಾರ್ತಾಂತವೇಯ, ವಾಸುರಾಯಣೀಯ, ಪ್ರಾಂಜಲ, ಋಗ್ವಿಧಾನ, ಪ್ರಾಚೀನಯೋಗ್ಯ, ಜ್ಞಾನಯೋಗ್ಯ ಎಂದು ಏಳು ಬೇಧಗಳು. ನಂತರ ರಾಣಾಯನೀಯದಲ್ಲಿ ರಾಣಾಯನೀಯ, ಶಾಟ್ಯಾಯನೀಯ, ಶಾಟ್ಯ, ಮುದ್ಗಲ, ಖಲ್ವಲ, ಮಹಾ ಖಲ್ವಲ, ಲಾಂಗಲ, ಕೌಥುಮ, ಗೌತುಮ, ಜೈಮಿನೀಯ ಎಂದು ಪ್ರಮುಖವಾದ ಒಂಭತ್ತು ಬೇಧಗಳು" ಎಂದು ವ್ಯಾಸನು ಹೇಳಿದ್ದನ್ನು, ಶ್ರೀಗುರುವು ಆ ಇಬ್ಬರು ವಿಪ್ರರಿಗೆ ಹೇಳಿ, ಭೂಮಂಡಲದಲ್ಲಿ ಯಾವ ಬ್ರಾಹ್ಮಣನಿಗೂ ಸಾಮ ವೇದವು ಆರಂಭದಿಂದ ತಿಳಿಯದು. ಆದರೂ ನೀವು ವೇದಜ್ಞರು ಎಂದು ಹೇಗೆ ಹೇಳಿಕೊಳ್ಳುತ್ತಿದ್ದೀರಿ! ಹಾಗೆ ಹೇಳಿ ಕೊಳ್ಳುವುದು ನಿಮ್ಮ ಹುಚ್ಚು ಪ್ರಲಾಪವೇ ಹೊರತು ಮತ್ತಿನ್ನೇನೂ ಅಲ್ಲ" ಎಂದು ಹೇಳಿ, ಶ್ರೀಗುರುವು ಮುಂದುವರೆಸಿದರು.

ನಂತರ ವ್ಯಾಸಮುನಿ, ತನ್ನ ನಾಲ್ಕನೆಯ ಶಿಷ್ಯನಾದ ಸುಮಂತನನ್ನು ಕರೆದು ಅವನಿಗೆ, "ಅಥರ್ವ ವೇದಕ್ಕೆ ಧನುರ್ವೇದ ಉಪವೇದ. ಇಂದ್ರ ದೇವತೆ. ಬೈಜಾನಗೋತ್ರ. ತ್ರಿಷ್ಟುಪ್ ಛಂದಸ್ಸು. ಕೃಷ್ಣವರ್ಣ. ಕಾಮ ರೂಪಿ. ಕ್ಷುದ್ರ ಕರ್ಮಿ. ಏಳುಮೊಳ ಉದ್ದ ದೇಹ. ಅಥರ್ವ ವೇದದಲ್ಲಿ, ಪೈಪ್ಪಲ, ದಾಂತ, ಪ್ರದಾಂತ, ಸ್ತೋತ, ಔತ, ಬ್ರಹ್ಮದಾವಲ, ಶೌನಕೀಯ, ದೇವರ್ಷ, ಚರಣವಿದ್ಯ ಎನ್ನುವ ಒಂಭತ್ತು ಶಾಖೆಗಳು. ಇವುಗಳಲ್ಲಿ ವಿಧಾನ ಕಲ್ಪ, ನಕ್ಷತ್ರ ಕಲ್ಪ, ಸಂಹಿತಾ ಕಲ್ಪ, ಶಾಂತಿ ಕಲ್ಪ, ವಿಧಿವಿಧಾನ ಕಲ್ಪ ಎಂಬುವ ಐದು ಕಲ್ಪಗಳಿವೆ" ಎಂದು ಅಥರ್ವ ವೇದವನ್ನು ಉಪದೇಶಿಸಿದನು.

ಹಿಂದೆ ಭರತ ಖಂಡದಲ್ಲಿ ವರ್ಣಾಶ್ರಮ ಆಚಾರಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ ಪುಣ್ಯ ಪುರುಷರಿಂದ ವೇದಗಳು ಸುಪ್ರತಿಷ್ಠವಾಗಿದ್ದವು. ಈ ಕಲಿಯುಗದಲ್ಲಿ ಬ್ರಾಹ್ಮಣರು ತಮ್ಮ ಕರ್ಮ, ಕರ್ತವ್ಯಗಳನ್ನು ಪರಿತ್ಯಜಿಸಿದರು. ಅದರಿಂದ ವೇದಗಳು ಲುಪ್ತವಾದವು. ಕರ್ಮ ಭ್ರಷ್ಟರಾದ ದ್ವಿಜರು ಮ್ಲೇಚ್ಛರೆದುರಿಗೆ ವೇದಗಳ ಪಠನದಿಂದ ಜಾತಿ ಭ್ರಷ್ಟರೂ ಆದರು. ಅಂತಹವರಿಂದ ವೇದಮಂತ್ರಗಳ ಬಲವೂ ನಾಶವಾಯಿತು. ಹಿಂದೆ ಬ್ರಾಹ್ಮಣರಿಗೆ ದೇವತ್ವ, ಮಹತ್ವಗಳಿದ್ದುದರಿಂದಲೇ ಅವರು ಭೂಸುರರಾಗಿ, ಮಾನ್ಯರಾಗಿದ್ದರು. ರಾಜ ಮಹಾರಾಜರು ಬ್ರಾಹ್ಮಣರನ್ನು ಪೂಜಿಸಿ, ತಮ್ಮ ಸರ್ವಸ್ವವನ್ನೂ ಅವರಿಗೆ ಅರ್ಪಿಸುತ್ತಿದ್ದರು. ಆದರೆ ಆ ಬ್ರಾಹ್ಮಣರು ಧನ ಸಂಪಾದನೆಯಲ್ಲಿ ಆಸಕ್ತಿಯಿಲ್ಲದೆ ರಾಜರು ಕೊಟ್ಟ, ಅರ್ಪಿಸಿದ ಧನ ಕನಕಾದಿಗಳನ್ನು ನಿರಾಕರಿಸುತ್ತಿದ್ದರು. ಅವರಲ್ಲಿದ್ದ ವೇದ ಮಂತ್ರಗಳ ಬಲದಿಂದಲೇ ತ್ರಿಮೂರ್ತಿಗಳೂ ಅವರ ವಶರಾಗಿದ್ದರು. ಅವರನ್ನು ಕಂಡು ಇಂದ್ರಾದಿ ದೇವತೆಗಳೂ ಭೀತರಾಗಿ ಅವರಿಗೆ ನಮಸ್ಕರಿಸುತ್ತಿದ್ದರು. ಅಂತಹವರ ಆಶೀರ್ವಚನಗಳಿಂದಲೇ ಇಷ್ಟಾರ್ಥಗಳು ಸಿದ್ಧಿಸುತ್ತಿದ್ದವು. ಅಂತಹ ದ್ವಿಜರು ಬೆಟ್ಟವನ್ನು ಹುಲ್ಲಾಗಿ, ಹುಲ್ಲನ್ನು ಬೆಟ್ಟವಾಗಿ ಪರಿವರ್ತಿಸ ಬಲ್ಲವರಾಗಿದ್ದರು. ವೇದ ಪ್ರಭಾವಿತರಾದ ವಿಪ್ರರನ್ನು ವಿಷ್ಣು ಸಹಿತರಾದ ದೇವತೆಗಳು ದೈವವೆಂದು ಪೂಜಿಸುತ್ತಿದ್ದರು. ಜಗತ್ತೆಲ್ಲವೂ ದೈವಾಧೀನವು. ದೇವತೆಗಳು ಮಂತ್ರಾಧೀನರು. ಮಂತ್ರಗಳು ಬ್ರಾಹ್ಮಣರ ಅಧೀನವು. ಅದರಿಂದಲೇ ವಿಪ್ರರನ್ನು ದೈವವೆಂದು ವಿಷ್ಣುವು ಹೇಳಿದನು. ಆದರೆ ಇಂದು, ಬ್ರಾಹ್ಮಣರು ವೇದ ಮಾರ್ಗಗಳನ್ನತಿಕ್ರಮಿಸಿ, ದುಷ್ಟ ಮಾರ್ಗಗಳಲ್ಲಿ ಹೋಗುತ್ತಿದ್ದಾರೆ. ಅದರಿಂದಲೇ ಅವರು ಸತ್ವ ಹೀನರಾಗಿ, ಹೀನ ಜಾತಿಯವರ ಸೇವೆ ಮಾಡುತ್ತಿದ್ದಾರೆ. ವೇದ ವಿಕ್ರಯವನ್ನು ಮಾಡುತ್ತಿರುವುದಲ್ಲದೆ, ಹೀನ ಜಾತಿಯವರ ಮುಂದೆಯೂ ವೇದ ಪಠನ ಮಾಡುತ್ತಿದ್ದಾರೆ. ಅಂತಹ ಬ್ರಾಹ್ಮಣಾಧಮರ ಮುಖವನ್ನೂ ನೋಡಬಾರದು. ಅವರು ಬ್ರಹ್ಮ ರಾಕ್ಷಸರಾಗುವುದರಲ್ಲಿ ಸಂಶಯವಿಲ್ಲ.

ಚತುರ್ವೇದಗಳು ಬಹು ವಿಸ್ತಾರವಾದವು. ಎಲ್ಲವನ್ನೂ ತಿಳಿದವನು ಭೂಮಂಡಲದಲ್ಲಿ ಒಬ್ಬನೂ ಇಲ್ಲ. ಸಾಮಾನ್ಯವಾಗಿ ಅವು ಗೋಪ್ಯವಾದವು. ಸಾಮಾನ್ಯರಿಗೆ ಅವು ದೊರಕುವಂತಹುವವಲ್ಲ. ಹಾಗಿರುವಾಗ ನೀವು ಚತುರ್ವೇದ ಪಾರಂಗತರು ಹೇಗಾದಿರಿ? ಮಿಕ್ಕ ಬ್ರಾಹ್ಮಣರನ್ನು ಅವಮಾನಿಸುವುದರಿಂದ ನಿಮಗೆ ಆಗುವ ಲಾಭವೇನು? ನಿಮ್ಮನ್ನು ನೀವೇ ಹೊಗಳಿ ಕೊಳ್ಳುತ್ತಾ, ಜಯಪತ್ರಗಳ ಪ್ರದರ್ಶನ ಮಾಡುತ್ತಾ, ತ್ರಿವಿಕ್ರಮನನ್ನು ಜಯಪತ್ರ ಕೊಡು ಎಂದು ಕೇಳುವುದರಲ್ಲಿ ಅರ್ಥವೇನಿದೆ? ನನ್ನ ಮಾತು ಕೇಳಿ ಈ ದುರಾಗ್ರಹವನ್ನು ಬಿಡಿ. ಇಂತಹ ಭ್ರಮೆಯಲ್ಲಿ ಬಿದ್ದು ನೀವು ಪ್ರಾಣ ಕಳೆದು ಕೊಳ್ಳುತ್ತೀರಿ" ಎಂದು ಆ ಬ್ರಾಹ್ಮಣರಿಬ್ಬರಿಗೆ ಶ್ರೀಗುರುವು ಹಿತ ವಚನಗಳನ್ನು ಹೇಳಿದರು.

ಆದರೆ ಆ ತಾಮಸಿಗಳಿಬ್ಬರೂ ಶ್ರೀಗುರುವಿನ ಮಾತುಗಳಿಗೆ ಇಂಬು ಕೊಡದೆ, "ನಿಮ್ಮಿಬ್ಬರಲ್ಲಿ ಯಾರಾದರೂ ನಮ್ಮೊಡನೆ ವಾದ ಮಾಡಿ. ಇಲ್ಲದಿದ್ದರೆ ಜಯಪತ್ರವನ್ನಾದರೂ ಕೊಡಿ. ವಾದ ಮಾಡದಿದ್ದರೆ ಜಯಪತ್ರವನ್ನಾದರೂ ತೋರಿಸದಿದ್ದರೆ ರಾಜನೆದುರಿಗೆ ನಾವು ಹೇಗೆ ಶ್ರೇಷ್ಠರಾಗುತ್ತೀವಿ?" ಎಂದು ಆಗ್ರಹ ಮಾಡಿ ಸ್ವಹಿತವನ್ನು ಅರಿಯದೆ ಮೃತ್ಯುವನ್ನು ಆಹ್ವಾನಿಸಿಕೊಂಡರು" ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಇಪ್ಪತ್ತಾರನೆಯ ಅಧ್ಯಾಯ ಮುಗಿಯಿತು.


||ಶ್ರೀ ಗುರು ಚರಿತ್ರೆ - ಇಪ್ಪತ್ತೈದನೆಯ ಅಧ್ಯಾಯ||

||ಕರ್ಮ ಕಾಂಡ||

"ಹೇ ಯೋಗಿರಾಜ, ಸಿದ್ಧಮುನಿ, ಸದ್ಗುರುವು ಇಲ್ಲಿ ಅವತರಿಸಿದ್ದರೂ, ಜ್ಞಾನಿಗಳಿಗೆ ಮಾತ್ರ ತನ್ನ ನಿಜ ರೂಪದಲ್ಲಿ ಕಾಣಿಸಿ ಕೊಳ್ಳುತ್ತಾನೆ. ಸಾಮಾನ್ಯರಿಗೆ ಮನುಷ್ಯ ಮಾತ್ರನಾಗಿಯೇ ಕಾಣಿಸಿ ಕೊಳ್ಳುತ್ತಾನೆ. ಶ್ರೀಗುರುವು ತ್ರಿವಿಕ್ರಮನಿಗೆ ಪ್ರತ್ಯಕ್ಷ ದರ್ಶನವನ್ನು ಕೊಟ್ಟ ನಂತರ ನಡೆದ ವಿಷಯಗಳನ್ನು ಸವಿಸ್ತಾರವಾಗಿ ಹೇಳಿ" ಎಂದು ನಾಮಧಾರಕನು ಕೇಳಿದನು. ಅದಕ್ಕೆ ಸಿದ್ಧಮುನಿ, "ಶ್ರೀಗುರು ಲೀಲೆಗಳೆನ್ನುವುದು ಎಲ್ಲವೂ ನನಗೂ ತಿಳಿಯದ ವಿಷಯವೇ! ನನಗೆ ತಿಳಿದ ಮಟ್ಟಿಗೆ ಹೇಳುತ್ತೇನೆ. ಸಾವಧಾನವಾಗಿ ಕೇಳು.

ವೈಢೂರ್ಯ ನಗರವೆಂಬಲ್ಲಿ ಒಬ್ಬ ಯವನ ರಾಜನಿದ್ದನು. ಅವನು ಬ್ರಹ್ಮದ್ವೇಷಿ. ಜೀವ ಹಿಂಸೆ ಮಾಡುವವನು. ‘ವೇದಾರ್ಥಗಳನ್ನು ಹೇಳುವವರು ನನಗೆ ಅತ್ಯಂತ ಪ್ರೀತಿಪಾತ್ರರು’ ಎಂದು ಸದಾ ಹೇಳುತ್ತಿದ್ದ ಅವನು, ಬ್ರಾಹ್ಮಣರನ್ನು ಬಲಾತ್ಕಾರವಾಗಿ ತನ್ನ ಬಳಿಗೆ ಕರೆಸಿ, ಅವರು ಶ್ರುತಿಗಳನ್ನು ಅವನೆದುರಿಗೆ ಓದುವಂತೆ ಆಜ್ಞೆ ಮಾಡುತ್ತಿದ್ದನು. ವೇದ ಶಾಸ್ತ್ರಗಳನ್ನು ಬಲ್ಲವರು ಅವನ ಮುಂದೆ ವೇದಗಳನ್ನು ಓದಲಿಚ್ಚಿಸದೆ ತಾವು ಮಂದ ಬುದ್ಧಿಗಳು, ತಮಗೇನೂ ತಿಳಿಯದು ಎಂದು ಹೇಳುತ್ತಿದ್ದರು. ಆದರೆ ಧನದಾಸೆಯಿಂದ ಹಲವರು ಅವನ ಮುಂದೆ ವೇದ ಪಠನ ಮಾಡುತ್ತಿದ್ದರು. ಆ ಯವನ ರಾಜ ಅಂತಹವರಿಂದ ಯಜ್ಞ ಕಾಂಡವನ್ನು ಓದಿಸಿ ಅದರ ಅರ್ಥವನ್ನು ಕೇಳಿ ತಿಳಿದು ಕೊಂಡು, ‘ಯಜ್ಞಯಾಗಾದಿಗಳನ್ನು ಮಾಡುವವರು ಪ್ರಾಣಿಹಿಂಸೆ ಮಾಡುತ್ತಾರೆ. ಮತ್ತೆ ನಮ್ಮನ್ನು ಏಕೆ ಪಶು ಹಿಂಸಕರೆಂದು ನಿಂದಿಸುತ್ತಾರೆ?’ ಎಂದು ವೇದ ಶಾಸ್ತ್ರಗಳನ್ನು ಅವಹೇಳನ ಮಾಡುತ್ತಾ, ತನ್ನೆದುರಿಗೆ ವೇದಗಳನ್ನು ಪಠಿಸಿದವರಿಗೆ ಧನ ಕನಕಗಳನ್ನು ಕೊಟ್ಟು ಆದರಿಸುತ್ತಿದ್ದನು.

ಒಂದು ದಿನ, ವೇದ ಶಾಸ್ತ್ರ ನಿಪುಣರೆಂದು ಹೇಳಿಕೊಂಡ ಇಬ್ಬರು ಬ್ರಾಹ್ಮಣರು ಅವನ ಬಳಿಗೆ ಬಂದು, ತಮ್ಮ ಪ್ರಶಂಸೆಯನ್ನು ತಾವೇ ಮಾಡಿಕೊಳ್ಳುತ್ತಾ, "ನಾವು ಮೂರು ವೇದಗಳನ್ನು ಆಳವಾಗಿ ಅಭ್ಯಾಸಮಾಡಿದ್ದೇವೆ. ವೇದ ಶಾಸ್ತ್ರಗಳನ್ನು ಅರಿತವರಲ್ಲಿ ನಮ್ಮನ್ನು ಮೀರಿಸಿದವರಿಲ್ಲ. ವೇದ ವಾದಗಳಲ್ಲಿ ನಮ್ಮನ್ನು ಸೋಲಿಸಿದವರಿಲ್ಲ. ನಮ್ಮೊಡನೆ ವಾದ ಮಾಡಿ ಸೋತವರೆಲ್ಲರೂ ನಮಗೆ ಜಯಪತ್ರಗಳನ್ನು ನೀಡಿದ್ದಾರೆ. ನಿಮ್ಮ ದೇಶದಲ್ಲಿ ನಮ್ಮೊಡನೆ ವಾದ ಮಾಡುವ ಅರ್ಹತೆಯುಳ್ಳವರು ಯಾರಾದರೂ ಇದ್ದರೆ ಅವರೊಡನೆ ವಾದಕ್ಕೆ ಏರ್ಪಡಿಸು" ಎಂದು ಅಹಂಕಾರದಿಂದ ತುಂಬಿ ಹೇಳಿದರು. ಅವರ ಮಾತಿನಿಂದ ಸಂತೋಷಗೊಂಡ ಆ ಯವನ ರಾಜ, ಊರಿನಲ್ಲಿ ವೇದ ಶಾಸ್ತ್ರಗಳನ್ನು ತಿಳಿದವರೆಲ್ಲರೂ ಬರಬೇಕೆಂದು ಡಂಗುರ ಹೊಡೆಸಿದನು. ಅದರಂತೆ ಬಂದವರೆಲ್ಲರನ್ನೂ ಒಂದು ಕಡೆ ಸೇರಿಸಿ, "ನಿಮ್ಮಲ್ಲಿ ಯಾರಾದರೂ ಈ ಇಬ್ಬರು ಬ್ರಾಹ್ಮಣರೊಡನೆ ವಾದ ಮಾಡಿ ಅವರನ್ನು ಸೋಲಿಸಿದರೆ ವಿಫುಲವಾದ ಧನವನ್ನು ಕೊಡುತ್ತೇನೆ" ಎಂದು ಹೇಳಿದನು. ಅಲ್ಲಿ ಸೇರಿದ್ದ ಬ್ರಾಹ್ಮಣರು ಯಾರೂ ವಾದ ಮಾಡಲು ಇಚ್ಛಿಸದೆ, "ಹೇ ರಾಜ ನಮ್ಮಲ್ಲಿ ಯಾರಿಗೂ ಅಂತಹ ಯೋಗ್ಯತೆ ಇಲ್ಲ. ಇವರಿಬ್ಬರೂ ನಮಗಿಂತ ಶ್ರೇಷ್ಠರು. ಅವರಿಗೆ ಅದನ್ನು ತಿಳಿಸಿ ಅವರಿಗೆ ತಕ್ಕ ಸನ್ಮಾನವನ್ನು ಮಾಡು" ಎಂದು ಹೇಳಿ, ಆ ದ್ವಿಜರಿಗೆ ಜಯಪತ್ರ ಕೊಟ್ಟರು. ಆ ಯವನರಾಜ ಅವರನ್ನು ಆನೆಯ ಮೇಲೆ ಕೂಡಿಸಿ, ವಾದ್ಯ ಘೋಷಗಳೊಡನೆ ಅವರನ್ನು ಊರಿನಲ್ಲಿ ಮೆರವಣಿಗೆ ಮಾಡಿಸಿದನು. ಆ ರಾಜ, "ಈ ಊರಿನಲ್ಲಿರುವ ಬ್ರಾಹ್ಮಣರೆಲ್ಲರಿಗೂ ಇವರು ರಾಜರು, ಇವರಿಗೆ ನಾನು ರಾಜ" ಎಂದು ಊರಿನಲ್ಲಿ ಪ್ರಕಟಿಸಿದನು. ಅದರಿಂದ ಇನ್ನಷ್ಟು ಮತ್ತರಾದ ಆ ಬ್ರಾಹ್ಮಣರಿಬ್ಬರೂ ಊರಿನಲ್ಲಿದ್ದ ಮಿಕ್ಕ ಬ್ರಾಹ್ಮಣರೆಲ್ಲರನ್ನು ಅವಹೇಳನ ಮಾಡುತ್ತಾ ತಾವೇ ಆ ಊರಿನ ರಾಜರೋ ಎಂಬಂತೆ ವರ್ತಿಸುತ್ತಿದ್ದರು. ಹಾಗೆ ಮದಿಸಿದ ಆನೆಗಳಂತೆ ವರ್ತಿಸುತ್ತಿದ್ದ ಅವರಿಬ್ಬರೂ ಒಂದಿ ದಿನ ರಾಜನಿಗೆ, "ಇಲ್ಲಿ ನಮ್ಮೊಡನೆ ವಾದಿಸುವವರು ಯಾರೂ ಕಾಣುವುದಿಲ್ಲ. ನಾವೇನೆಂದು ಎಲ್ಲ ಕಡೆಯೂ ಪ್ರಖ್ಯಾತವಾಗಿದೆ. ನೀವು ಅನುಮತಿಸಿದರೆ, ನಾವು ಇತರ ರಾಜ್ಯಗಳಲ್ಲಿ ಪಯಣಿಸುತ್ತಾ, ಅಲ್ಲಿನವರೊಡನೆ ವಾದ ಮಾಡಿ ಅವರನ್ನು ಸೋಲಿಸಿ ಜಯಪತ್ರಗಳನ್ನು ತರುತ್ತೇವೆ" ಎಂದು ಹೇಳಿದರು. ಅವರ ಮಾತಿನಿಂದ ಸಂತಸಗೊಂಡ ರಾಜ, "ಹಾಗೇ ಆಗಲಿ. ನಿಮ್ಮಿಚ್ಚೆಯಂತೆ ಹೋಗಿ ಜಯಪತ್ರಗಳನ್ನು ತನ್ನಿ" ಎಂದು ಹೇಳಿ ಅವರನ್ನು ಆನೆಯ ಅಂಬಾರಿಯಲ್ಲಿ ಕೂಡಿಸಿ ಕಳುಹಿಸಿದನು. ಅವರು ಹಾಗೆ ಊರಿಂದೂರಿಗೆ ತಮ್ಮೊಡನೆ ವಾದ ಮಾಡುವವರನ್ನು ಹುಡುಕುತ್ತಾ ಹೊರಟು ದಕ್ಷಿಣದಲ್ಲಿರುವ ಕುಮಸಿ ಎಂಬ ಊರನ್ನು ಸೇರಿದರು. ಅಲ್ಲಿ ತ್ರಿವಿಕ್ರಮನೆಂಬ ವೇದ ಶಾಸ್ತ್ರಗಳನ್ನು ಅರಿತವನೊಬ್ಬನಿದ್ದಾನೆಂದು ಅವರಿಗೆ ತಿಳಿದುಬಂತು.

ಆ ಗರ್ವಗಂಧಿ ಬ್ರಾಹ್ಮಣರು ತ್ರಿವಿಕ್ರಮನನ್ನು ಕಂಡು, "ಅಯ್ಯಾ, ನೀವು ತ್ರಿವೇದಗಳನ್ನು ಬಲ್ಲವರೆಂದು ಎಲ್ಲರೂ ಹೇಳುತ್ತಿದ್ದಾರೆ. ನೀವು ವೇದಗಳನ್ನು ಬಲ್ಲವರೇ ಆದರೆ ನಮ್ಮೊಡನೆ ವಾದ ಮಾಡಿ. ಇಲ್ಲದಿದ್ದರೆ ನಮಗೆ ಜಯಪತ್ರವನ್ನಾದರೂ ನೀಡಿ" ಎಂದರು. ಅದಕ್ಕೆ ತ್ರಿವಿಕ್ರಮನು, "ಅಯ್ಯಾ, ನಾನೊಬ್ಬ ಮೂಢ. ವೇದಗಳನ್ನು ಅರಿತವನಲ್ಲ. ವೇದ ಶಾಸ್ತ್ರಗಳನ್ನು ಅರಿತವನಾಗಿದ್ದರೆ ಈ ಕಾಡಿನಲ್ಲೇಕೆ ವಾಸ ಮಾಡುತ್ತಿದ್ದೆ? ನಾನೂ ನಿಮ್ಮಂತೆ ರಾಜರಿಂದ ಪೂಜಿತನಾಗಿ ಭೋಗ ಭಾಗ್ಯಗಳನ್ನು ಅನುಭವಿಸುತ್ತಿದ್ದೆ. ನಾನೊಬ್ಬ ತಾಪಸಿ. ಇಲ್ಲಿ ತಪಸ್ಸು ಮಾಡುತ್ತಾ, ಭಿಕ್ಷೆ ಮಾಡಿಕೊಂಡು ಜೀವಿಸುತ್ತಿದ್ದೇನೆ. ನಿಮ್ಮೊಡನೆ ವಾದ ಮಾಡಲು ನಾನು ಸಮರ್ಥನಲ್ಲ. ನಿಮ್ಮಂತಹ ವಿದ್ವಾಂಸರೊಡನೆ ನನಗೆ ವಾದಗಳೇತಕ್ಕೆ? ಜಯಾಪಜಯಗಳಿಂದ ನನಗಾಗಬೇಕಾದ್ದೇನು?" ಎಂದನು. ಆದರೆ ಆ ಅಹಂಕಾರಿಗಳು ಅವನ ಮಾತಿಗೆ ಇಂಬು ಕೊಡದೆ, "ದೇಶಗಳನ್ನೆಲ್ಲಾ ಸುತ್ತಾಡಿದರೂ ನಮ್ಮೊಡನೆ ವಾದ ಮಾಡುವವರು ಒಬ್ಬರೂ ಸಿಕ್ಕಲಿಲ್ಲ. ನಾವು ಪಡೆದಿರುವ ಈ ಜಯಪತ್ರಗಳನ್ನು ನೋಡು. ನೀನು ನಮ್ಮೊಡನೆ ವಾದ ಮಾಡು. ಇಲ್ಲವೇ ನಮಗೆ ಜಯಪತ್ರ ಬರೆದು ಕೊಡು" ಎಂದು ಮತ್ತೆ ಗರ್ವದಿಂದ ಹೇಳಿದರು. ತ್ರಿವಿಕ್ರಮನು ತನ್ನ ಮನಸ್ಸಿನಲ್ಲಿ, "ಇವರಿಬ್ಬರೂ ಮದಾಂಧರು. ಬೇರೆಯವರನ್ನು ಅವಮಾನಿಸುವ ಅಹಂಕಾರಿಗಳು. ಇವರಿಗೆ ಸರಿಯಾಗಿ ಬುದ್ಧಿ ಹೇಳಲು ಗಂಧರ್ವ ಪುರದಲ್ಲಿರುವ ಶ್ರೀಗುರುವೇ ಸರಿಯಾದವರು. ಇವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ" ಎಂದು ಯೋಚಿಸಿ, "ಅಯ್ಯಾ, ನನಗೆ ಗಂಧರ್ವ ಪುರದಲ್ಲಿ ಗುರುಗಳೊಬ್ಬರಿದ್ದಾರೆ. ಅಲ್ಲಿಗೆ ಹೋಗೋಣ ಬನ್ನಿ. ಅವರ ಅಪ್ಪಣೆ ಪಡೆದು ನಿಮ್ಮೊಡನೆ ವಾದವೋ ಇಲ್ಲ ಜಯಪತ್ರವೋ ಕೊಡುತ್ತೇನೆ" ಎಂದು ಹೇಳಿ ಅವರಿಬ್ಬರನ್ನೂ ಕರೆದು ಕೊಂಡು ಶ್ರೀಗುರುವಿದ್ದ ಸ್ಥಳಕ್ಕೆ ಹೊರಟನು. ಆ ಮದಾಂಧರಿಬ್ಬರೂ ಆನೆ ಅಂಬಾರಿಯಲ್ಲಿ ಕೂತು ನಡೆದು ಹೋಗುತ್ತಿದ್ದ ತ್ರಿವಿಕ್ರಮನ ಹಿಂದೆ ಹೊರಟರು. ಗುರು ಸನ್ನಿಧಾನಕ್ಕೆ ಹೇಗೆ ಹೋಗಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಅವರಿಬ್ಬರೂ ಹಾಗೆ ತಮ್ಮ ಮೃತ್ಯುವನ್ನು ತಾವೇ ಆಹ್ವಾನಿಸಿಕೊಂಡರು.

ಗಂಧರ್ವ ಪುರವನ್ನು ಸೇರಿ, ಅವರೆಲ್ಲರೂ ಶ್ರೀಗುರುವಾದ ನೃಸಿಂಹ ಸರಸ್ವತಿಗಳ ಬಳಿಗೆ ಹೋದರು. ತ್ರಿವಿಕ್ರಮನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, "ಗುರುವರ, ಭಕ್ತವತ್ಸಲ. ಭವಾರ್ಣವ ತಾರಕ, ಜಯವಾಗಲಿ. ಜಯವಾಗಲಿ. ನಿಮ್ಮನ್ನು ಈಶ್ವರನೆಂದು ತಿಳಿಯದವನು ಅಧೋಗತಿಗೆ ಹೋಗುತ್ತಾನೆ" ಮುಂತಾಗಿ ಶ್ರೀಗುರುವನ್ನು ಸ್ತೋತ್ರ ಮಾಡುತ್ತಾ, ಅಶ್ರು ಪೂರ್ಣನಾಗಿ ಮತ್ತೆ ಮತ್ತೆ ನಮಸ್ಕರಿಸಿದನು. ನಮಸ್ಕರಿಸಿದ ಅವನನ್ನು ಶ್ರೀಗುರುವು ಎಬ್ಬಿಸಿ, "ಯತೀಶ್ವರ, ನೀನು ಈಗ ಇಲ್ಲಿಗೆ ಬಂದ ಕಾರಣವೇನು? ಏನು ನಿನ್ನ ಇಚ್ಚೆ?’ ಎಂದು ಕೇಳಿದರು. ಅದಕ್ಕೆ ತ್ರಿವಿಕ್ರಮನು, "ಸ್ವಾಮಿ, ಗರ್ವಿತರಾದ ಇಬ್ಬರು ಬ್ರಾಹ್ಮಣರು ನನ್ನ ಬಳಿಗೆ ಬಂದು, ನಾವು ವೇದ ಶಾಸ್ತ್ರ ಪುರಾಣಗಳನ್ನು ಆದ್ಯಂತವಾಗಿ ಬಲ್ಲವರು. ವಾದಾಭಿಲಾಷಿಗಳು. ಚತುರ್ವೇದ ಪಂಡಿತರು. ಜ್ಞಾನಿಗಳು" ಎಂದು ತಮ್ಮ ಪ್ರಶಂಸೆಯನ್ನು ತಾವೇ ಮಾಡಿ ಕೊಳ್ಳುತ್ತಾ, "ನಮ್ಮ್ನೊಡನೆ ವಾದ ಮಾಡು. ಇಲ್ಲವೇ ಜಯಪತ್ರವನ್ನು ಕೊಡು" ಎಂದು ಬಲಾತ್ಕಾರ ಮಾಡುತ್ತಿದ್ದಾರೆ. ಅವರಿಗೆ ಎಷ್ಟು ತಿಳಿಯ ಹೇಳಿದರೂ, ಅವರು ಅದನ್ನು ಗಣನೆಗೆ ತಂದುಕೊಳ್ಳದೆ ಗರ್ವಿತರಾಗಿ ಮಾತನಾಡುತ್ತಿದ್ದಾರೆ. ಅವರಿಗೆ ನಾನು, ‘ನಮ್ಮ ಗುರುಗಳ ಬಳಿಗೆ ಹೋಗೋಣ. ಅವರು ಅಪ್ಪಣೆ ಕೊಟ್ಟಂತೆ ನಾನು ಮಾಡುತ್ತೇನೆ’ ಎಂದು ಹೇಳಿ ಅವರನ್ನು ಇಲ್ಲಿಗೆ ಕರೆತಂದಿದ್ದೇನೆ" ಎಂದು ಹೇಳಿದನು. ಅವನ ಮಾತನ್ನು ಕೇಳಿದ ಶ್ರೀಗುರುವು, ಆ ಬ್ರಾಹ್ಮಣರನ್ನು ಕರೆದು, "ಅಯ್ಯಾ, ವಾದ ವಿವಾದಗಳಿಂದ ನಿಮಗಾಗುವ ಫಲವೇನು? ಇತರ ಬ್ರಾಹ್ಮಣರನ್ನು ಪರಾಭವಗೊಳಿಸಿ ಅವಮಾನಿಸುವುದರಿಂದ ನಿಮಗುಂಟಾಗುವ ಲಾಭವೇನು? ನಮಗೆ ಜಯಾಪಜಯಗಳು ಎರಡೂ ಸಮಾನವೇ! ನಾವು ತಾಪಸಿಗಳು. ನಮ್ಮನ್ನು ಜಯಿಸಿ ನಿಮಗೆ ದೊರೆಯುವ ಪುರುಷಾರ್ಥವೇನು?" ಎಂದು ಕೇಳಿದರು. ಅದಕ್ಕೆ ಅ ಬ್ರಾಹ್ಮಣರು, "ಅಯ್ಯಾ, ಸನ್ಯಾಸಿ, ನಾವು ದೇಶ ದೇಶಗಳನ್ನು ಸುತ್ತುತ್ತಾ, ವಾದಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಇದುವರೆಗೂ ನಮ್ಮನ್ನು ಜಯಿಸಿದವರು ಒಬ್ಬರೂ ಇಲ್ಲ. ವಾದ ಮಾಡದವರು ನಮಗೆ ಜಯಪತ್ರಗಳನ್ನು ನೀಡಿದ್ದಾರೆ. ಹಾಗೆ ಇವನೂ ಕೂಡ ನಮಗೆ ಜಯಪತ್ರವನ್ನು ಕೊಡದೆ, ನಮ್ಮನ್ನು ಇಲ್ಲಿಗೇಕೆ ಕರೆತಂದ? ನಾವು ಚತುರ್ವೇದ ಪಾರಂಗತರು. ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ನಮ್ಮೊಡನೆ ವಾದಮಾಡಿ, ಇಲ್ಲವೇ ಜಯಪತ್ರವನ್ನು ಕೊಡಿ"" ಎಂದು ಮದೋನ್ಮತ್ತರಾಗಿ ಹೇಳಿದರು.

ಅದಕ್ಕೆ ಶ್ರೀಗುರುವು, "ಅಯ್ಯಾ, ನಿಮಗೆ ಇಷ್ಟೊಂದು ಗರ್ವವಿರಬಾರದು. ಗರ್ವದಿಂದಲೇ ರಾಕ್ಷಸರು ಹತರಾದರು. ಗರ್ವಿತನಾದ ಬಲಿಯ ಪಾಡೇನಾಯಿತು ಎಂಬುದು ನಿಮಗೆ ತಿಳಿಯದೇ? ಬಾಣಾಸುರನ ಗತಿಯೇನಾಯಿತು ಎಂದು ಗೊತ್ತಿಲ್ಲವೇ? ಗರ್ವೋನ್ಮತ್ತನಾದ ರಾವಣನ ಗತಿ ಏನಾಯಿತು ಎಂದು ಅರಿಯರೇ? ಸಂಪೂರ್ಣವಾಗಿ ವೇದಗಳನ್ನು ಬಲ್ಲವರಾರು? ಬ್ರಹ್ಮಾದಿಗಳಿಗೇ ಈಗಲೂ ವೇದಗಳು ಏನು ಎನ್ನುವುದು ತಿಳಿಯದು. ವೇದಗಳು ಅನಂತವಾದವು. ಅದನ್ನು ಆದ್ಯಂತವಾಗಿ ಬಲ್ಲವರು ಯಾರೂ ಇಲ್ಲ. ನೀವು ವೃಥಾ ಗರ್ವಪಡುತ್ತಿದ್ದೀರಿ. ಇದು ನಿಮಗೆ ಒಳ್ಳೆಯದಲ್ಲ. ವೇದಗಳು ಅನಂತವಾಗಿರುವಾಗ ನೀವು ಚತುರ್ವೇದಗಳನ್ನು ಬಲ್ಲ ಪರಿಣತರೆಂದು ಹೇಳಿಕೊಳ್ಳುವುದು ಎಷ್ಟು ಸಮಂಜಸ?" ಎಂದು ಕೇಳಲು, ಆ ಗರ್ವಗಂಧಿಗಳು, "ನಾವು ನಾಲ್ಕೂ ವೇದಗಳನ್ನು ಸಾಂಗೋಪಾಂಗವಾಗಿ ಅಭ್ಯಾಸಮಾಡಿದ್ದೇವೆ" ಎಂದು ಉನ್ಮತ್ತರಾಗಿ ಹೇಳಿದರು. ಆಗ ಶ್ರೀಗುರುವು, ಅವರಿಗೆ ಚತುರ್ವೇದಗಳ ವಿಸ್ತಾರವನ್ನು ತಿಳಿಯಹೇಳಿದರು. 

ಇಲ್ಲಿಗೆ ಇಪ್ಪತ್ತೈದನೆಯ ಅಧ್ಯಾಯ ಮುಗಿಯಿತು.




||ಶ್ರೀ ಗುರು ಚರಿತ್ರೆ - ಇಪ್ಪತ್ತನಾಲ್ಕನೆಯ ಅಧ್ಯಾಯ||

ನಾಮಧಾರಕ, "ಸ್ವಾಮಿ, ಅಲ್ಲಿ ನಡೆದ ಘಟನೆ ಏನು? ಕೃಪೆಯಿಟ್ಟು ವಿಸ್ತಾರವಾಗಿ ಹೇಳಿ" ಎಂದು ಕಾತರನಾಗಿ ಕೇಳಿದನು.

ಅದಕ್ಕೆ ಸಿದ್ಧಮುನಿ, "ಕುಮಸಿಯಲ್ಲಿದ್ದ ತ್ರಿವಿಕ್ರಮ ಭಾರತಿ ಶ್ರೀಗುರುವನ್ನು ನಿಂದಿಸುತ್ತಿದ್ದಾನೆಂದು ರಾಜನಿಗೆ ತಿಳಿಯಿತು. ಅವನು ಆ ವಿಷಯವನ್ನು ಶ್ರೀಗುರುವಿಗೂ ಹೇಳಿ, ಅವರನ್ನು ಕುಮಸಿಗೆ ಕರೆದು ಕೊಂಡು ಹೋಗಲು ನಿರ್ಧರಿಸಿದನು. ಅವನ ನಿರ್ಧಾರದಂತೆ, ಶ್ರೀಗುರುವಿನ ಅನುಮತಿ ಪಡೆದು, ಆ ರಾಜ ಅಶ್ವ, ಗಜ, ಪದಾತಿಗಳಿಂದ ಕೂಡಿದ ಸೈನ್ಯದೊಡನೆ, ಶ್ರೀಗುರುವನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕೂಡಿಸಿ, ಕರೆದು ಕೊಂಡು ಕುಮಸಿಗೆ ಹೊರಟನು.

ಪ್ರತಿ ದಿನವೂ ನೃಸಿಂಹ ಸ್ವಾಮಿಯ ಮಾನಸಪೂಜೆ ಮಾಡಿಕೊಳ್ಳುತ್ತಿದ್ದ ತ್ರಿವಿಕ್ರಮ ಭಾರತಿಗೆ, ಶ್ರೀಗುರುವು ಕುಮಸಿಗೆ ಹೊರಟ ದಿನ, ಎಂದಿನಂತೆ ಅವನ ಮಾನಸ ಪೂಜೆಯಲ್ಲಿ ನೃಸಿಂಹ ಸ್ವಾಮಿಯ ದರ್ಶನವಾಗಲಿಲ್ಲ. ಅದರಿಂದ ಅವನು ವಿಚಲಿತ ಮನಸ್ಕನಾಗಿ, "ಹೇ ನೃಸಿಂಹ, ಬಹಳ ಕಾಲದಿಂದ ನಿನ್ನನ್ನು ಆರಾಧಿಸುತ್ತಿರುವ ನನ್ನನ್ನು ಇಂದು ಏಕೆ ಉಪೇಕ್ಷಿಸುತ್ತಿದ್ದೀಯೆ? ನನ್ನ ತಪಸ್ಸೆಲ್ಲವೂ ವ್ಯರ್ಥವಾಯಿತು. ಈಗ ನಾನೇನು ಮಾಡಲಿ?" ಎಂದು ಆರ್ತನಾಗಿ ಬೇಡಿಕೊಳ್ಳುತ್ತಿದ್ದ ಅವನ ಮನೋ ಚಕ್ಷುಗಳಿಗೆ, ನೃಸಿಂಹನ ಬದಲು ಶ್ರೀಗುರುವು ಕಾಣಿಸಿ ಕೊಂಡರು. ಅದರಿಂದ ಆಶ್ಚರ್ಯಗೊಂಡ ಅವನು, ತಕ್ಷಣವೇ ಎಚ್ಚರಗೊಂಡು, ದಂಡ ಧಾರಿಯಾಗಿ ಕುಮಸಿಗೆ ಬರುತ್ತಿದ್ದ ಶ್ರೀಗುರುವಿನ ಬಳಿಗೆ ಹೋಗಿ ಅವರಿಗೆ ನಮಸ್ಕರಿಸಿದನು. ಅವನು ನಮಸ್ಕರಿಸಿ ಏಳುತ್ತಿದ್ದಂತೆಯೇ ಅವನಿಗೆ ಶ್ರೀಗುರುವಿನೊಡನೆ ಬಂದಿದ್ದ ಪರಿವಾರವೆಲ್ಲವೂ ಶ್ರೀಗುರುವಿನ ರೂಪದಲ್ಲೇ ಕಾಣಿಸಿದರು. ಆ ಗುರು ರೂಪಿಗಳ ಸಮೂಹದಲ್ಲಿ ನಿಜವಾದ ಶ್ರೀಗುರುವು ಯಾರು ಎಂಬುದನ್ನು ತಿಳಿಯಲಾರದೇ ಹೋದ ತ್ರಿವಿಕ್ರಮ ಭಾರತಿ, ಮತ್ತೆ ದಂಡ ಪ್ರಣಾಮ ಮಾಡಿ, "ಹೇ ಸ್ವಾಮಿ, ಬ್ರಹ್ಮ, ವಿಷ್ಣು, ಮಹೇಶ್ವರ ರೂಪನಾದ ಜಗದ್ಗುರುವೇ, ಮಾಯೆ ಎಂಬ ಅಂಧಕಾರದಲ್ಲಿ ಮುಳುಗಿದ ನಾನು ನಿಮ್ಮನ್ನು ತಿಳಿಯಲಾರದೇ ಹೋದೆ. ನೀವು ಸರ್ವವ್ಯಾಪಕರು. ನೃಸಿಂಹನೇ ನಿಮ್ಮ ರೂಪದಲ್ಲಿದ್ದಾನೆ. ಇಲ್ಲಿ ಎಲ್ಲರಲ್ಲೂ ನೀವೇ ಕಾಣುತ್ತಿರುವಾಗ ನಾನು ಯಾರಿಗೆಂದು ಶರಣಾಗಲಿ? ನೀವೇ ತ್ರಿಮೂರ್ತಿ ಸ್ವರೂಪನೆಂದು ಅರಿಯಲಾರದೇ ಹೋದೆ. ನನ್ನಲ್ಲಿ ದಯೆತೋರಿ ನಿಮ್ಮ ನಿಜರೂಪವನ್ನು ತೋರಿಸುವ ಕೃಪೆಮಾಡಿ. ಇಷ್ಟು ಕಾಲದಿಂದ ನಾನು ಮಾಡಿದ ತಪಸ್ಸು ಇಂದು ಫಲವಾಯಿತು. ಹೇ ವಿಶ್ವೋದ್ಧಾರಕ, ನನ್ನನ್ನು ಉದ್ಧರಿಸಲೆಂದೇ ಮಾನವ ರೂಪದಲ್ಲಿದ್ದುಕೊಂಡೂ, ನೀವು ನಿಮ್ಮ ವಿಶ್ವ ರೂಪವನ್ನು ತೋರಿಸಿದಿರಿ" ಎಂದು ಸ್ತುತಿಸುತ್ತಾ, ಕಳಕಳಿಯಿಂದ ಬೇಡಿಕೊಂಡನು.

ಅವನ ಸ್ತುತಿಯಿಂದ ಪ್ರಸನ್ನನಾದ ಶ್ರೀಗುರುವು, ಅವನಿಗೆ ತಮ್ಮ ನಿಜರೂಪದಿಂದ ದರ್ಶನ ಕೊಟ್ಟು, "ಅಯ್ಯಾ, ನಮ್ಮನ್ನು ಡಾಂಭಿಕರೆಂದು ನಿಂದಿಸುತ್ತಿದ್ದೀಯೇಕೆ? ಅದನ್ನು ಕೇಳ ಬೇಕೆಂದೇ ನಾವು ಇಲ್ಲಿಗೆ ಬಂದೆವು. ನೀನು ನೃಸಿಂಹನ ಪೂಜೆ ಮಾಡುತ್ತಿದ್ದೀಯೆ. ಡಂಭವೆಂದರೆ ಏನು ಎಂಬುದನ್ನು ನಮಗೆ ವಿಸ್ತರಿಸಿ ಹೇಳು" ಎಂದರು. ಅದಕ್ಕೆ ತ್ರಿವಿಕ್ರಮ ಭಾರತಿ ಮತ್ತೆ ಶ್ರೀಗುರುವಿನ ಪಾದಗಳಿಗೆ ನಮಸ್ಕರಿಸಿ, "ಸ್ವಾಮಿ, ನಾನೊಬ್ಬ ಅಜ್ಞಾನಿ. ನನ್ನನ್ನು ಕ್ಷಮಿಸಿ. ಅಜ್ಞಾನಾಂಧಕಾರದಲ್ಲಿ ಮುಳುಗಿರುವ ನಾನು, ಹಗಲು ಕುರುಡಾದ ಗೂಬೆಯಂತೆ, ನಿಮ್ಮನ್ನು ತಿಳಿಯಲಾರದೇ ಹೋದೆ. ನನ್ನ ಅಪರಾಧವನ್ನು ಮನ್ನಿಸಿ, ನನ್ನನ್ನು ರಕ್ಷಿಸಿ, ಕಾಪಾಡಿ. ಪೂರ್ವ ಕೃತ ಕರ್ಮಫಲಗಳೆಂಬ ಭ್ರಮೆಯಲ್ಲಿ ಸಿಲುಕಿ ಒದ್ದಾಡುತ್ತಿರುವ ನಾನು, ನಿಮ್ಮ ನಿಜ ಸ್ವರೂಪವನ್ನು ಅರಿಯಲಾರದೇ ಹೋದೆ. ಕೃಪಾ ಸಾಗರ, ಜ್ಞಾನವೆಂಬ ನಾವೆಯಲ್ಲಿ ಕೂಡಿಸಿ, ಕೃಪೆಯೆಂಬ ಗಾಳಿಯನ್ನು ಬೀಸಿ, ನನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಿ, ಸೇರ ಬೇಕಾದ ಗುರಿಯನ್ನು ಮುಟ್ಟುವಂತೆ ಮಾಡಿ. ಹೇ ದಯಾನಿಧಿ, ನಿಮ್ಮ ಕೃಪೆಯಿದ್ದವನು ಹೇಗೆತಾನೇ ದೀನನಾಗಬಲ್ಲ? ಅಂತಹವನಲ್ಲಿ ದೈನ್ಯ, ದುಃಖಗಳು ಹೇಗೆ ತಾನೇ ಇರಬಲ್ಲವು? ಅಂದು ಶ್ರೀ ಕೃಷ್ಣ ಅರ್ಜುನನಿಗೆ ವಿಶ್ವರೂಪವನ್ನು ತೋರಿಸಿದಂತೆ, ಇಂದು ನೀವು ನನಗೆ ನಿಮ್ಮ ವಿಶ್ವರೂಪದ ದರ್ಶನ ಮಾಡಿಸಿದಿರಿ. ಭಕ್ತವತ್ಸಲ, ನಿಮ್ಮ ಮಹಿಮೆ ಅಪಾರವಾದುದು. ಹೇ ಜಗದ್ಗುರು, ಜಯವಾಗಲಿ, ಜಯವಾಗಲಿ. ನೃಸಿಂಹ ಸರಸ್ವತಿಯ ರೂಪದಲ್ಲಿ ಬಂದಿರುವ ನೀವು ಆ ತ್ರಿಮೂರ್ತ್ಯವತಾರರೇ! ನೀವೇ ನನ್ನ ಆರಾಧ್ಯದೈವ ನೃಸಿಂಹಸ್ವಾಮಿ! ನಿಮ್ಮ ಪಾದ ದರ್ಶನದಿಂದ ಇಂದು ನಾನು ಕೃತಾರ್ಥನಾದೆ. ವಿದುರನ ಮನೆಗೆ ಶ್ರೀಕೃಷ್ಣ ಹೋದಂತೆ, ಭಕ್ತವತ್ಸಲರಾದ ನೀವೇ ನನ್ನ ಬಳಿಗೆ ಬಂದಿರಿ. ನಿಮ್ಮ ಅನಂತವಾದ ಮಹಿಮೆಯನ್ನು ನನ್ನಂತಹ ಪಾಮರ ಹೇಗೆ ಬಣ್ಣಿಸಬಲ್ಲ?" ಎಂದು ಅನೇಕ ರೀತಿಗಳಲ್ಲಿ ಶ್ರೀಗುರುವಿನ ಸ್ತೋತ್ರ ಮಾಡಿದನು. ಅವನ ಸ್ತೋತ್ರದಿಂದ ಸಂಪ್ರೀತರಾದ ಶ್ರೀಗುರುವು, "ತ್ರಿವಿಕ್ರಮ, ನಿನ್ನ ಭಕ್ತಿಗೆ ಮೆಚ್ಚಿದೆ. ನೀನು ಇಲ್ಲಿಯೇ ನೃಸಿಂಹನ ಪೂಜೆಯಲ್ಲಿ ನಿರತನಾಗಿರು. ನಿನಗೆ ಪುನರ್ಜನ್ಮವಿಲ್ಲದ ಸದ್ಗತಿಯುಂಟಾಗುತ್ತದೆ. ಆ ಪರಮಾತ್ಮನಲ್ಲಿ ಲೀನವಾಗುತ್ತೀಯೆ" ಎಂದು ಆಶೀರ್ವದಿಸಿ, ತಮ್ಮ ಸ್ವಸ್ಥಾನಕ್ಕೆ ಹಿಂತಿರುಗಿದರು.

ನಾಮಧಾರಕ, ಶ್ರೀಗುರುವಿನ ಮಹಿಮೆಗಳು ಅಪರಿಮಿತವಾದವು. ಇಲ್ಲಿ ಮಾನುಷ ರೂಪದಲ್ಲಿರುವ ಶ್ರೀಗುರುವನ್ನು ತ್ರಿಮೂರ್ತಿಗಳ ಅವತಾರ ರೂಪಿಯಲ್ಲವೆಂದು ಅಲ್ಲಗಳೆದವರು, ಏಳೇಳು ಜನ್ಮಗಳಲ್ಲೂ ರೌರವಾದಿ ನರಕಗಳಲ್ಲಿ ಬಿದ್ದು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ. ಅದರಿಂದಲೇ ಶ್ರೀಗುರುವಿನ ಪಾದಗಳನ್ನು ಆಶ್ರಯಿಸಿದವರು ತ್ರಿಮೂರ್ತಿಗಳ ಅನುಗ್ರಹವನ್ನು ಪಡೆಯುತ್ತಾರೆ. ಶ್ರೀಗುರು ಕಥೆಗಳೆನ್ನುವ ಅಮೃತವನ್ನು ಸೂಸುವ ಅರವಂಟಿಗೆಗಳಿಂದ ಅಮೃತಪಾನ ಮಾಡಿ, ತರಿಸಿ" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತನಾಲ್ಕನೆಯ ಅಧ್ಯಾಯ ಮುಗಿಯಿತು. 

||ಜ್ಞಾನಕಾಂ ಸಮಾಪ್ತಿ||



||ಶ್ರೀ ಗುರು ಚರಿತ್ರೆ - ಇಪ್ಪತ್ತಮೂರನೆಯ ಅಧ್ಯಾಯ||

ನಾಮಧಾರಕ ಸಿದ್ಧಮುನಿಗೆ ನಮಸ್ಕರಿಸಿ, "ಸ್ವಾಮಿ, ಗುರು ಮಹಿಮೆಯನ್ನು ತಿಳಿಸುವಂತಹ ಇನ್ನೊಂದು ಗುರು ಕಥೆಯನ್ನು ಹೇಳಿ" ಎಂದು ಪ್ರಾರ್ಥಿಸಿಕೊಂಡನು. ಅದಕ್ಕೆ ಸಿದ್ಧಮುನಿ, "ಗುರು ಮಹಿಮೆಯನ್ನು ತಿಳಿಸುವ ಮತ್ತೊಂದು ಕಥೆಯನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಗೊಡ್ಡೆಮ್ಮೆಯಿಂದ ಹಾಲು ಕರೆಸಿ ಶ್ರೀಗುರುವು ತಮ್ಮ ಮಹಿಮೆಯನ್ನು ಪ್ರಕಟಗೊಳಿಸಿದ್ದರಲ್ಲವೇ? ಅದರ ಮಾರನೆಯ ದಿನ, ಆ ಎಮ್ಮೆಯನ್ನು ಮಣ್ಣು ಹೊರಲು ಕರೆದು ಕೊಂಡು ಹೋಗಲು ಜನ ಬಂದರು. ಆದರೆ ಅ ಬ್ರಾಹ್ಮಣ ಎಮ್ಮೆಯನ್ನು ಕಳುಹಿಸಲು ನಿರಾಕರಿಸಿ, "ಅದು ನಮಗೆ ಈಗ ಹಾಲು ಕೊಡುತ್ತಿದೆ. ಆದ್ದರಿಂದ ಅದನ್ನು ನಾವು ಕಳುಹಿಸುವುದಿಲ್ಲ" ಎಂದು ಹೇಳಿ, ಅದು ಆಂದು ಕೊಟ್ಟಿದ್ದ ಎರಡು ಪಾತ್ರೆ ಹಾಲನ್ನು ತೋರಿಸಿದನು. ಬಂದವರೆಲ್ಲರೂ ವಿಸ್ಮಿತರಾಗಿ, "ನೆನ್ನೆಯವರೆಗೂ ಈ ಎಮ್ಮೆ ಹಲ್ಲಿಲ್ಲದ ಗೋಡ್ಡಾಗಿತ್ತು. ಗರ್ಭ ಧರಿಸಿರಲಿಲ್ಲ. ಕರು ಹಾಕಲಿಲ್ಲ. ಇಂದು ಹೇಗೆ ಹಾಲು ಕೊಟ್ಟಿತು?" ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಾ ಹೊರಟು ಹೋದರು. ಗೊಡ್ಡೆಮ್ಮೆ ಹಾಲು ಕೊಟ್ಟ ವಿಷಯ ಕರ್ಣಾಕರ್ಣಿಕೆಯಾಗಿ, ಒಬ್ಬರಿಂದೊಬ್ಬರ ಕಿವಿಗೆ ಬಿದ್ದು, ಕೊನೆಗೆ ಆ ಊರಿನ ರಾಜನವರೆಗೂ ಹೋಯಿತು. ರಾಜ, ಆಶ್ಚರ್ಯಪಟ್ಟು, ನಿಜವನ್ನು ತಿಳಿಯಲು, ಆ ಬ್ರಾಹ್ಮಣನ ಮನೆಗೆ ಬಂದು, ಅವನಿಗೆ ನಮಸ್ಕರಿಸಿ, ನಿಜವಾದ ವಿಷಯ ಏನೆಂದು ವಿವರಿಸಲು ಅವನನ್ನು ಕೇಳಿಕೊಂಡನು. ಅದಕ್ಕೆ ಆ ಬ್ರಾಹ್ಮಣ, "ಗಂಗಾತಟದಲ್ಲಿ ಸನ್ಯಾಸಿಯೊಬ್ಬರಿದ್ದಾರೆ. ಅವರು ಈಶ್ವರನ ಅವತಾರವೇ! ಇದು ಅವರ ಮಹಿಮೆ. ನೆನ್ನೆಯ ದಿನ ಅವರು ನಮ್ಮ ಮನೆಗೆ ಬಂದು, ನನ್ನ ಹೆಂಡತಿಯನ್ನು ಭಿಕ್ಷೆ ಕೇಳಿ, ಆಕೆ ಸ್ವಲ್ಪ ಸಮಯ ಕಾಯಲು ವಿನಂತಿಸಿಕೊಂಡರೆ, ತಮಗೆ ಕಾಲಾವಕಾಶವಿಲ್ಲವೆಂದು ಹೇಳಿ, ಎದುರಿಗೆ ಕಾಣುತ್ತಿದ್ದ ಎಮ್ಮೆಯಿಂದ ಹಾಲು ಕರೆದು ಕೊಡಲು ಹೇಳಿದರು. ಅದು ಗೊಡ್ಡೆಮ್ಮೆ ಎಂದು ಹೇಳಿದರೂ, ಅವರು ಅದನ್ನು ಕೇಳದೆ, ಹಾಲು ಕರೆದು ತೋರಿಸುವಂತೆ ಆದೇಶ ಕೊಟ್ಟರು. ಆ ಆದೇಶವೇ ಅವರು ಕೊಟ್ಟ ವರದಂತೆ ಕೆಲಸ ಮಾಡಿ, ಆ ಗೊಡ್ಡೆಮ್ಮೆ, ಎರಡು ಪಾತ್ರೆ ತುಂಬಾ ಹಾಲು ಕೊಟ್ಟಿತು" ಎಂದು ಹೇಳಿದನು. ಅದನ್ನು ಕೇಳಿದ ರಾಜ, ತಡಮಾಡದೆ, ತನ್ನ ಪರಿವಾರದವರೊಡನೆ. ತ್ವರೆಯಾಗಿ ಶ್ರೀಗುರುವಿನ ಬಳಿಗೆ ಹೋಗಿ, ಅವರಿಗೆ ದಂಡಪ್ರಣಾಮ ಮಾಡಿ, "ಜಗದ್ಗುರು, ಜಯವಾಗಲಿ. ಜಯವಾಗಲಿ. ಮಾನವ ರೂಪ ಧರಿಸಿದ ತ್ರಿಮೂರ್ತಿಗಳೇ ನೀವು. ಮಾಯಾ ಮೋಹಿತನಾದ ನನ್ನನ್ನು ಉದ್ಧರಿಸಿ. ನಿಮ್ಮ ಚರಣಗಳನ್ನು ಆಶ್ರಯಿಸಿದ್ದೇನೆ. ಮಾನವರಂತೆ ಕಾಣುತ್ತಿರುವ ನಿಮ್ಮ ಮಹಿಮೆಯನ್ನು ನನ್ನಂತಹ ಮಂದಬುದ್ಧಿ ಹೇಗೆ ತಾನೇ ವರ್ಣಿಸಬಲ್ಲ? ನೀವೇ ನನ್ನ ರಕ್ಷಕರಾದ ಸದಾಶಿವನು. ಜಗದ್ರಕ್ಷಕರು ನೀವೇ!" ಎಂದು ಭಕ್ತಿಯಿಂದ ಅವರನ್ನು ಸ್ತುತಿಸಿದನು.

ಅವನ ಸ್ತುತಿಯಿಂದ ಸಂತುಷ್ಟರಾದ ಶ್ರೀಗುರುವು, "ಹೇ ರಾಜ, ನಾವು ತಾಪಸಿಗಳು. ಕಾಡಿನಲ್ಲಿ ವಾಸ ಮಾಡುವವರು. ಪರಿವಾರ ಸಮೇತನಾಗಿ ನಮ್ಮನ್ನು ಕಾಣಲು ನೀನು ಬಂದ ಕಾರಣವೇನು?" ಎಂದು ಕೇಳಿದರು. ಅದಕ್ಕೆ ರಾಜನು ಕೈಜೋಡಿಸಿ, "ಸ್ವಾಮಿ, ನಿಮಗೆ ಈ ಕಾಡಿನಲ್ಲಿ ವಾಸವೇತಕ್ಕೆ? ನೀವು ಭಕ್ತರನ್ನುದ್ಧರಿಸಲು ಬಂದಿರುವ ನಾರಾಯಣ ಸ್ವರೂಪಿಗಳು. ಭಕ್ತರ ಇಷ್ಟಾರ್ಥಗಳನ್ನು ಪೂರ್ಣಗೊಳಿಸಿ, ಅವರಿಗೆ ಆನಂದವನ್ನುಂಟು ಮಾಡುತ್ತೀರಿ. ಭಕ್ತವತ್ಸಲ, ನಿಮ್ಮ ಕೀರ್ತಿ ಎಣೆಯಿಲ್ಲದ್ದು. ನನ್ನ ಮಾತನ್ನು ದಯವಿಟ್ಟು ಆಲಿಸಿ, ಕೃಪೆಮಾಡಿ ಗಂಧರ್ವಪುರಕ್ಕೆ ದಯಮಾಡಿಸಿ. ಅಲ್ಲಿ ನಿಮಗೊಂದು ಮಠವನ್ನು ನಿರ್ಮಿಸಿ ಕೊಡುತ್ತೇನೆ. ನೀವು ಅಲ್ಲಿದ್ದುಕೊಂಡು, ನಿಮ್ಮ ಅನುಷ್ಠಾನಾದಿಗಳನ್ನು ನಿರ್ವಹಿಸುತ್ತಾ, ನಮ್ಮನ್ನು ಕಾಪಾಡಿ. ಅಲ್ಲಿದ್ದುಕೊಂಡು ನಮ್ಮನ್ನುದ್ಧರಿಸಿ" ಎಂದು ಶ್ರದ್ಧಾಭಕ್ತಿಗಳಿಂದ ಕೂಡಿ, ಅವರ ಪಾದಗಳಿಗೆ ನಮಸ್ಕರಿಸಿ, ಬೇಡಿಕೊಂಡನು. ಭಕ್ತ ಜನೋದ್ಧಾರಕಾಗಿ ಅವನ ಕೋರಿಕೆಯನ್ನು ಈಡೇರಿಸಬೇಕು ಎಂದು ಶ್ರೀಗುರುವು ಯೋಚಿಸಿ, "ಹೇ ರಾಜ, ನಿನ್ನ ಭಕ್ತಿಗೆ ಮೆಚ್ಚಿದ್ದೇವೆ. ನಿನ್ನ ಕೋರಿಕೆಯಂತೆ ಆಗಲಿ" ಎಂದು ಅವನ ಮಾತಿಗೆ ತಮ್ಮ ಒಪ್ಪಿಗೆ ಕೊಟ್ಟರು. ಗುರು ವಚನದಿಂದ ಸಂತೋಷಗೊಂಡ ರಾಜ, ಶ್ರೀಗುರುವನ್ನು ಪಲ್ಲಕ್ಕಿಯೊಂದರಲ್ಲಿ ಕೂಡಿಸಿ, ವಾದ್ಯಗಳೊಡನೆ, ಸುಘೋಷಗಳನ್ನು ಮಾಡುತ್ತಾ, ಮಂಗಳ ಗೀತಗಳನ್ನು ಹಾಡುತ್ತಾ, ಅವರನ್ನು ಮೆರವಣಿಗೆಯಲ್ಲಿ ಗಂಧರ್ವಪುರಕ್ಕೆ ಕರೆದು ಕೊಂಡು ಹೊರಟನು.

ಆ ದಾರಿಯಲ್ಲಿ, ಊರಿನ ಪಶ್ಚಿಮಕ್ಕೆ, ದೊಡ್ಡದಾದ ಅಶ್ವತ್ಥ ವೃಕ್ಷವೊಂದಿತ್ತು. ಅದರ ಹತ್ತಿರದಲ್ಲಿ ಇದ್ದ ಮನೆಗಳೆಲ್ಲವೂ ಪಾಳು ಬಿದ್ದಿದ್ದವು. ಆ ಅಶ್ವತ್ಥ ವೃಕ್ಷದಲ್ಲಿ, ಭಯಂಕರವಾದ, ನರಮಾಂಸ ಭಕ್ಷಕನಾದ, ಬ್ರಹ್ಮರಾಕ್ಷಸನೊಬ್ಬನಿದ್ದನು. ಅವನ ಭಯದಿಂದಾಗಿ ಅಲ್ಲಿ ಜನರು ಯಾರೂ ವಾಸ ಮಾಡುತ್ತಿರಲಿಲ್ಲ. ಮೆರವಣಿಗೆ ಆ ವೃಕ್ಷದ ಸಮೀಪಕ್ಕೆ ಬರುತ್ತಲೇ, ಆ ಬ್ರಹ್ಮರಾಕ್ಷಸ ಮರದಿಂದ ಕೆಳಗಿಳಿದು ಬಂದು, ಶ್ರೀಗುರುವಿನ ಪಾದಗಳಲ್ಲಿ ಬಿದ್ದು, ಕೈಜೋಡಿಸಿ, ಭಕ್ತಿಯಿಂದ, "ಹೇ ಸ್ವಾಮಿ, ದಯಮಾಡಿ ನನ್ನನ್ನುದ್ಧರಿಸು. ನಿಮ್ಮ ದರ್ಶನದಿಂದಲೇ ನನ್ನ ಪಾಪಗಳೆಲ್ಲಾ ನಾಶವಾಗಿ ಹೋದವು. ನನ್ನನ್ನು ಈ ಬ್ರಹ್ಮರಾಕ್ಷಸತ್ವದಿಂದ ಬಿಡುಗಡೆ ಮಾಡು" ಎಂದು ಬೇಡಿಕೊಂಡನು. ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು ಆಶೀರ್ವದಿಸಿದರು. ತಕ್ಷಣವೇ ಆ ಬ್ರಹ್ಮರಾಕ್ಷಸ ಮಾನವ ರೂಪದಿಂದ ಕಾಣಿಸಿಕೊಂಡು, ಮತ್ತೆ ಶ್ರೀಗುರುವಿನ ಚರಣಗಳಲ್ಲಿ ಬಿದ್ದನು. ಶ್ರೀಗುರುವು ಅವನಿಗೆ, "ಅಯ್ಯಾ, ತಕ್ಷಣವೇ ನೀನು ಸಂಗಮಕ್ಕೆ ಹೋಗಿ ಸ್ನಾನ ಮಾಡು. ಸ್ನಾನ ಮಾತ್ರದಿಂದಲೇ, ನಿನ್ನ ಸರ್ವ ಪಾಪಗಳೂ ನಾಶವಾಗಿ, ನೀನು ಪುನರ್ಜನ್ಮ ರಹಿತನಾಗುತ್ತೀಯೆ" ಎಂದು ಹೇಳಿದರು. ಅವನು ಗುರುವಿನ ಅಪ್ಪಣೆಯಂತೆ, ತಡಮಾಡದೆ ಸಂಗಮಕ್ಕೆ ಹೋಗಿ ಅಲ್ಲಿ ಸ್ನಾನ ಮಾಡಿ ಮುಕ್ತನಾದನು. ಅಲ್ಲಿ ಸೇರಿದ್ದ ಜನರೆಲ್ಲರೂ, "ಈ ಸನ್ಯಾಸಿ ಮನುಷ್ಯ ಮಾತ್ರನಲ್ಲ. ತ್ರಿಮೂರ್ತ್ಯವತಾರನೇ!" ಎಂದು ಮುಕ್ತ ಕಂಠದಿಂದ ಕೊಂಡಾಡಿದರು. ನಂತರ ಶ್ರೀಗುರುವು ರಾಜನಿಗೆ, "ನಾವು ಇಲ್ಲಿಯೇ ನೆಲೆಯಾಗುತ್ತೇವೆ" ಎಂದು ಹೇಳಲು, ರಾಜ ತಕ್ಷಣವೇ ಅಲ್ಲಿದ್ದ ಮನೆಯೊಂದನ್ನು ಮಠದಂತೆ ಪರಿವರ್ತಿಸಿ ಕೊಟ್ಟನು. ಅಲ್ಲಿದ್ದುಕೊಂಡು ಶ್ರೀಗುರುವು ಪ್ರತಿದಿನವೂ ಸಂಗಮಕ್ಕೆ ಹೋಗಿ ಅಲ್ಲಿ ಅನುಷ್ಠಾನಾದಿಗಳನ್ನು ಮಾಡಿಕೊಳ್ಳುತ್ತಾ, ಮಧ್ಯಾಹ್ನದ ವೇಳೆಗೆ ಮಠಕ್ಕೆ ಹಿಂತಿರುಗುತ್ತಿದ್ದರು. ಹಾಗೆ ಅವರು ಸಂಗಮಕ್ಕೆ ಹೋಗಿ ಬರುವಾಗ ರಾಜ ಸಪರಿವಾರ, ಸೈನ್ಯ ಸಮೇತನಾಗಿ ಅವರೊಡನೆ ಹೋಗಿ ಬರುತ್ತಿದ್ದನು. ಭಕ್ತವತ್ಸಲನಾದ ಶ್ರೀಗುರುವು ಅಲ್ಲಿದ್ದುಕೊಂಡೇ ತಮ್ಮ ಭಕ್ತರ ಇಷ್ಟಾರ್ಥಗಳನ್ನು ಪೂರಯಿಸುತ್ತಿದ್ದರು. ನಿತ್ಯ ಸಂತರ್ಪಣೆ ನಡೆಯುತ್ತಿದ್ದ ಆ ಮಠಕ್ಕೆ, ಶ್ರೀಗುರುವಿನ ಕೀರ್ತಿಯನ್ನು ಕೇಳಿದ ಬಹಳ ಜನ ಅವರ ದರ್ಶನಾಕಾಂಕ್ಷಿಗಳಾಗಿ ಬರುತ್ತಿದ್ದರು.

ಅವರಿದ್ದ ಮಠಕ್ಕೆ ಸ್ವಲ್ಪ ದೂರದಲ್ಲಿ ಕುಮಸಿ ಎಂಬ ಹಳ್ಳಿಯೊಂದಿತ್ತು. ಅಲ್ಲಿ ವೇದಶಾಸ್ತ್ರಗಳನ್ನು ಬಲ್ಲ ತ್ರಿವಿಕ್ರಮ ಭಾರತಿ ಎಂಬ ತಾಪಸಿಯೊಬ್ಬನಿದ್ದನು. ಅವನು ಪ್ರತಿದಿನವೂ ನೃಸಿಂಹಸ್ವಾಮಿಯ ಮಾನಸ ಪೂಜೆ ಮಾಡುತ್ತಿದ್ದನು. ಅವನು ಶ್ರೀಗುರುವಿನ ಬಗ್ಗೆ ಕೇಳಿ, "ಆ ಸನ್ಯಾಸಿ ಡಾಂಭಿಕರಬೇಕು. ಇಲ್ಲದಿದ್ದರೆ ಅವನಿಗೆ ಈ ಡಂಭಾಚಾರಗಳೆಲ್ಲಾ ಏಕೆ ಬೇಕು?" ಎಂದು ಶ್ರೀಗುರುವನ್ನು ನಿಂದಿಸುತ್ತಿದ್ದನು. ಸರ್ವಜ್ಞರಾದ ಶ್ರೀಗುರುವು ಅವನು ಮಾಡುತ್ತಿದ್ದ ನಿಂದೆಗಳನ್ನು ತಿಳಿದರು. ಆಗ ಅಲ್ಲಿ ಒಂದು ಅಪೂರ್ವವಾದ ಘಟನೆ ನಡೆಯಿತು. ನಾಮಧಾರಕ ನಿಶ್ಚಲವಾದ ಮನಸ್ಸಿನಿಂದ ನಾನು ಹೇಳುವುದನ್ನು ಕೇಳು" ಎಂದು ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಇಪ್ಪತ್ತಮೂರನೆಯ ಅಧ್ಯಾಯ ಮುಗಿಯಿತು.



Tuesday, February 19, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತೆರಡನೆಯ ಅಧ್ಯಾಯ||

ನಾಮಧಾರಕನು ಮತ್ತೆ ಸಿದ್ಧಮುನಿಗೆ ನಮಸ್ಕರಿಸಿ, ಕೈಜೋಡಿಸಿ, ವಿನಮ್ರನಾಗಿ, "ಯೋಗೀಶ್ವರ, ನನ್ನ ಅಜ್ಞಾನಾಂಧಕಾರವನ್ನು ತೊಲಗಿಸಿದ ಜ್ಯೋತಿಯು ನೀವೇ. ನಿಮ್ಮ ಪಾದ ಸ್ಪರ್ಶದಿಂದಲೇ ನನಗೆ ಜ್ಞಾನೋದಯವಾಯಿತು. ಹೇ ಸಿದ್ಧಪುರುಷ, ಕಾಮಧೇನುವಿನಂತಹ ಗುರುಚರಿತ್ರೆಯನ್ನು ವಿಸ್ತರಿಸಿ ಹೇಳಿದಿರಿ. ಆದರೂ ನನಗೆ ತೃಪ್ತಿಯಾಗಲಿಲ್ಲ. ಇನ್ನೂ ಇನ್ನೂ ಕೇಳಬೇಕೆನಿಸುತ್ತಿದೆ. ಶ್ರೀಗುರುವು ಗಂಧರ್ವಪುರವನ್ನು ಸೇರಿದರು ಎಂದು ಹೇಳಿದಿರಿ. ಅವರು ಅಲ್ಲಿ ನಡೆಸಿದ ಲೀಲಾ ವಿಶೇಷಗಳನ್ನು ವಿಸ್ತಾರವಾಗಿ ಹೇಳುವ ಕೃಪೆಮಾಡಿ" ಎಂದು ಪ್ರಾರ್ಥಿಸಿದನು.

ಅದಕ್ಕೆ ಸಿದ್ಧಮುನಿಯು, "ನಾಮಧಾರಕ, ನಿನಗೆ ಗುರುಕೃಪೆಯಾಯಿತು. ಶ್ರೀಗುರುವಿನ ಚರಿತ್ರೆಯನ್ನು ಹೇಳಲು ನನಗೂ ಬಹಳ ಸಂತಸವೇ! ಅನಂತ ಮಹಿಮೆಯುಳ್ಳ ಈ ಗುರುಚರಿತ್ರೆಯು ಅಪಾರವಾದದ್ದು. ಶ್ರೀಗುರುವು ಗಂಧರ್ವ ಪುರದಲ್ಲಿ ಗುಪ್ತರೂಪಿಗಳಾಗಿ ನಿಂತರೆಂದು ಹೇಳಿದ್ದೆನಲ್ಲವೆ? ಅಲ್ಲಿ ನಡೆದ ಪ್ರಸಂಗವೊಂದನ್ನು ತಿಳಿಸುತ್ತೇನೆ. ಸಮಾಧಾನ ಚಿತ್ತನಾಗಿ ಕೇಳು.

ಉತ್ತರ ವಾಹಿನಿಯಾಗಿರುವ, ಭೀಮಾ-ಅಮರಜಾ ನದಿಗಳ ಆ ಸಂಗಮ ಪ್ರದೇಶ ಪ್ರಯಾಗಕ್ಕೆ ಸಮಾನವಾದ ತೀರ್ಥಕ್ಷೇತ್ರ. ಅದು ಅಶ್ವತ್ಥ ವೃಕ್ಷಗಳಿಂದ ಕೂಡಿದ್ದು, ಅದರ ಮಹಿಮೆ ಅಪಾರವಾದದ್ದು. ಅಲ್ಲಿ ಎಂಟು ತೀರ್ಥಗಳಿವೆ. ಶ್ರೀಗುರುವು ಅಲ್ಲಿ ಭಕ್ತೋದ್ಧಾರಕನಾಗಿ, ತೀರ್ಥ ಮಹಿಮೆಯನ್ನು ಪ್ರಕಟಗೊಳಿಸಲು ನಿಂತರು. ಶ್ರೀಗುರುವಿನ ಪಾದಗಳೇ ಸಕಲ ತೀರ್ಥಗಳು ಎಂಬ ವೇದ ವಚನ ನಿಜವಾದರೆ ತೀರ್ಥ ಕ್ಷೇತ್ರಗಳ ಉಪಯೋಗವೇನು ಎಂದು ಕೇಳಬಹುದು. ಶ್ರೀಗುರುವು ಭಕ್ತ ಜನರ ಉದ್ಧಾರಕ್ಕೆಂದೇ ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ. ಪ್ರಜ್ವಲಿಸುವ ಸೂರ್ಯ ಗುಪ್ತನಾಗಿರಲು ಸಾಧ್ಯವೇ? ಗಂಧರ್ವ ಪುರದಲ್ಲಿ ಗುಪ್ತ ರೂಪದಲ್ಲಿದ್ದ ಶ್ರೀಗುರುವು ಪ್ರತ್ಯಕ್ಷಗೊಳ್ಳಲು ಕಾರಣವೇನು ಎಂದು ಹೇಳುತ್ತೇನೆ ಕೇಳು.

ಶ್ರೀಗುರುವು ಪ್ರತಿದಿನ ಊರೊಳಕ್ಕೆ ಮಧ್ಯಾನ್ಹ ಸಮಯದಲ್ಲಿ ಭಿಕ್ಷೆಗೆಂದು ಹೋಗುತ್ತಿದ್ದರು. ಗಂಧರ್ವ ಪುರದಲ್ಲಿ ಅನೇಕ ಬ್ರಾಹ್ಮಣರ ಮನೆಗಳುಂಟು. ಅವರಲ್ಲಿ ಬಡವನಾದ ಬ್ರಾಹ್ಮಣನೊಬ್ಬನಿದ್ದ. ಅವನ ಮನೆಯಲ್ಲಿ ಮುದಿಯಾದ ಗೊಡ್ಡೆಮ್ಮೆಯೊಂದಿತ್ತು. ಅದರ ಹಲ್ಲುಗಳು ಬಿದ್ದುಹೋಗಿದ್ದವು. ಊರಿನ ಜನ ಅದನ್ನು ಮರಳು ಹೊರುವುದಕ್ಕೆಂದು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆ ಬ್ರಾಹ್ಮಣ ದಂಪತಿಗಳು ಅದರಿಂದ ಬಂದ ಬಾಡಿಗೆಯ ಹಣದಿಂದಲೂ, ಬ್ರಾಹ್ಮಣನು ತಂದ ಭಿಕ್ಷೆಯಿಂದಲೂ ಜೀವನ ಸಾಗಿಸುತ್ತಿದ್ದರು.

ಶ್ರೀಗುರುವು ಆಗಾಗ ಆ ಬಡ ಬ್ರಾಹ್ಮಣನ ಮನೆಗೂ ಭಿಕ್ಷೆಗೆಂದು ಹೋಗುತ್ತಿದ್ದರು. ಆಗೆಲ್ಲಾ, ಇತರ ಬ್ರಾಹ್ಮಣರು, "ಶ್ರೀಗುರುವು ಆ ದರಿದ್ರನ ಮನೆಗೆ ಏಕೆ ಭಿಕ್ಷೆಗೆ ಹೋಗುತ್ತಾರೆ? ಅಲ್ಲಿ ಅವರಿಗೆ ಏನು ಸಿಗುತ್ತದೆ? ನಾವು ಶ್ರೋತ್ರೀಯರು. ನಮ್ಮ ಮನೆಗಳಲ್ಲಿ ನಿತ್ಯವೂ ಷಡ್ರಸೋಪವೇತವಾದ ಮೃಷ್ಟಾನ್ನ ಸಿಗುತ್ತದೆ. ನಮ್ಮನ್ನು ಬಿಟ್ಟು ಅವನ ಮನೆಗೆ ಹೋಗುವುದಾದರೂ ಏತಕ್ಕೆ? " ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಶ್ರೀ ಕೃಷ್ಣ ದುರ್ಯೋಧನ ರಾಜಭೊಜನವನ್ನೇ ನೀಡಿದರೂ, ಅದನ್ನು ಬಿಟ್ಟು ವಿದುರನ ಮನೆಗೆ ಹೋದನಲ್ಲವೇ? ಹಾಗೇ ಶ್ರೀಗುರುವು ಸಾತ್ವಿಕ ಬುದ್ಧಿಯುಳ್ಳವರಲ್ಲಿ ಅತಿಶಯ ಪ್ರೀತಿಯಿಟ್ಟಿದ್ದರೇ ಹೊರತು ಧನ ಮದದಿಂದ ಕೂಡಿದವರಲ್ಲಲ್ಲ. ಕ್ಷಣ ಮಾತ್ರದಲ್ಲಿ ಅಧನನನ್ನು ಧನಿಕನನ್ನಾಗಿ ಮಾಡಬಲ್ಲ ಅವರಿಗೆ ಧನ ಮದಾಂಧಕಾರಿಗಳಿಂದ ಆಗಬೇಕಾದ್ದೇನು? ಬ್ರಹ್ಮಲಿಪಿಯನ್ನೇ ಬದಲಿಸಬಲ್ಲ ಅವರಿಗೆ ಅಸಾಧ್ಯವಾದದ್ದೇನೂ ಇಲ್ಲ. ಅವರಿಗೆ ಭಿಕ್ಷೆಯನ್ನಿತ್ತ ಜನ ಪುಣ್ಯವಂತರೇ!

ಒಂದುದಿನ ಆ ಬಡ ಬ್ರಾಹ್ಮಣನ ಗೊಡ್ಡೆಮ್ಮೆಯನ್ನು ಯಾರೂ ಬಾಡಿಗೆಗೆ ಕರೆದುಕೊಂಡು ಹೋಗಲಿಲ್ಲ. ಆಗ ಬೇಸಗೆಯ ಕಾಲ. ಮಧ್ಯಾಹ್ನ ಪ್ರಖರವಾದ ಬಿಸಿಲು ತಲೆಯಮೇಲೆ ಸುಡುತ್ತಿತ್ತು. ಅಂದು ಶ್ರೀಗುರುವು ಆ ಬಡವನ ಮನೆಗೆ ಭಿಕ್ಷಕ್ಕೆಂದು ಹೋದರು. ಬ್ರಾಹ್ಮಣನ ಹೆಂಡತಿ ಅವರನ್ನು ಆದರದಿಂದ ಸ್ವಾಗತಿಸಿ, ಪೀಠವನ್ನಿತ್ತು ಕುಳಿತು ಕೊಳ್ಳಲು ಹೇಳಿ, "ನನ್ನ ಗಂಡ ಭಿಕ್ಷೆಗೆಂದು ಊರೊಳಕ್ಕೆ ಹೋಗಿದ್ದಾರೆ. ಇನ್ನೇನು ಬರುವ ಸಮಯವಾಯಿತು. ಅಲ್ಲಿಯವರೆಗೂ ವಿಶ್ರಮಿಸಿಕೊಳ್ಳಿ" ಎಂದು ವಿನಮ್ರಳಾಗಿ ಹೇಳಿದಳು. ಅದಕ್ಕೆ ಶ್ರೀಗುರುವು, "ನಿನ್ನ ಗಂಡ ಬರಲು ಇನ್ನೂ ಎಷ್ಟು ಹೊತ್ತಾಗುತ್ತದೆಯೋ? ನಮಗೆ ಭಿಕ್ಷಾನ್ನವೇ ಆಗಬೇಕೆಂದೇನೂ ಇಲ್ಲ. ನಿಮ್ಮ ಮನೆಯ ಬಾಗಿಲಿನಲ್ಲಿರುವ ಎಮ್ಮೆಯಿಂದ ಸ್ವಲ್ಪ ಹಾಲು ಕರೆದು ಕೊಟ್ಟರೂ ಸಾಕು" ಎಂದು ನಗುತ್ತಾ ಹೇಳಿದರು. ಅದಕ್ಕೆ ಆಕೆ, ವಿನಯದಿಂದ, "ಸ್ವಾಮಿ, ಆ ಎಮ್ಮೆ ಮುದಿಯಾಗಿದೆ. ಗೊಡ್ಡು. ಭೂಮಿ ಉಳುವುದಕ್ಕೆಂದು ಉಪಯೋಗಿಸುತ್ತಿದ್ದ ಅದನ್ನು ಈಗ ಮರಳು ಹೊರುವುದಕ್ಕೆಂದು ಊರಿನವರು ಕರೆದು ಕೊಂಡು ಹೋಗುತ್ತಾರೆ. ಹೇ, ಯತೀಶ್ವರ, ಅದರಿಂದ ಬರುವ ಬಾಡಿಗೆಯಿಂದ ನಾವು ಜೀವನ ನಡೆಸುತ್ತಿದ್ದೇವೆ" ಎಂದು ಹೇಳಿದಳು. ಅದಕ್ಕೆ ಶ್ರೀಗುರುವು, "ನನ್ನಲ್ಲಿ ನೀನು ಅಸತ್ಯವಾಡಬಾರದು. ಈಗಲೇ ಆ ಎಮ್ಮೆಯಿಂದ ಹಾಲು ಕರೆದು ನನಗೆ ಕೊಡು" ಎಂದರು. ಅವರ ಮಾತುಗಳನ್ನು ಕೇಳಿದ ಆ ವನಿತೆ, ನಿಜವೇನೋ ಅವರಿಗೆ ತಿಳಿಯಲಿ ಎಂದು ಯೋಚನೆ ಮಾಡುತ್ತಾ, ಪಾತ್ರೆ ಹಿಡಿದು ಹಾಲು ಕರೆಯಲು ಆರಂಭಿಸಿದಳು.

ಚಮತ್ಕಾರವೋ ಎಂಬಂತೆ ಆ ಗೊಡ್ಡೆಮ್ಮೆ ಎರಡು ಪಾತ್ರೆಗಳ ತುಂಬಾ ಹಾಲು ಕೊಟ್ಟಿತು. ಆಶ್ಚರ್ಯಗೊಂಡ ಅವಳು, "ಆಹಾ, ಈ ಯತಿ ಈಶ್ವರನೇ!" ಎಂದು ಕೊಳ್ಳುತ್ತಾ, ಮನೆಯೊಳಕ್ಕೆ ಹೋಗಿ ಹಾಲನ್ನು ಕಾಯಿಸಿ, ಅದನ್ನು ಶ್ರೀಗುರುವಿಗೆ ಭಿಕ್ಷೆಯಾಗಿ ನೀಡಲು ಹೋಗುವಷ್ಟರಲ್ಲಿ, ಶ್ರೀಗುರುವು ಮತ್ತೊಮ್ಮೆ, "ಅಮ್ಮಾ, ತಡ ಮಾಡಬೇಡ. ನಮಗೆ ಸಂಗಮಕ್ಕೆ ತ್ವರೆಯಾಗಿ ಹಿಂತಿರುಗ ಬೇಕಾಗಿದೆ" ಎಂದರು. ತಡ ಮಾಡದೆ ಅವಳು ಕಾಯಿಸಿದ ಹಾಲನ್ನು ತಂದು ಶ್ರೀಗುರುವಿಗೆ ಭಿಕ್ಷೆಯಾಗಿ ಅರ್ಪಿಸಿದಳು. ಶ್ರೀಗುರುವು ಅದನ್ನು ಸ್ವೀಕರಿಸಿ, ಬಹಳ ಸಂತೋಷಗೊಂಡು, "ನಿಮ್ಮ ಮನೆಯಲ್ಲಿ ಲಕ್ಷ್ಮಿ, ಅಖಂಡವಾಗಿ, ನಿರಂತರವಾಗಿ ನೆಲೆಸಲಿ. ನೀವು ಪುತ್ರ ಪೌತ್ರರಿಂದ ಕೂಡಿ, ಸಕಲ ಸಂಪದಗಳನ್ನು ಪಡೆದು, ಸುಖವಾಗಿ ಬಾಳಿ" ಎಂದು ಆಶೀರ್ವದಿಸಿ, ಸಂಗಮಕ್ಕೆ ಹಿಂತಿರುಗಿದರು.

ಭಿಕ್ಷೆಯಿಂದ ಹಿಂತಿರುಗಿದ ಬ್ರಾಹ್ಮಣನಿಗೆ ಅವನ ಹೆಂಡತಿ ನಡೆದ ವಿಷಯವನ್ನೆಲ್ಲಾ ಹೇಳಿದಳು. ಅವಳ ಮಾತುಗಳನ್ನು ಕೇಳಿ ಆಶ್ಚರ್ಯಗೊಂಡ ಆ ಬ್ರಾಹ್ಮಣ, "ಇದು ಬಹಳ ಆಶ್ಚರ್ಯಕರವಾದ ವಿಷಯವೇ! ಸಾಮಾನ್ಯರಂತೆ ಕಾಣುತ್ತಿರುವ ಆ ಸನ್ಯಾಸಿ ನಿಜವಾಗಲೂ ಪರಮಾತ್ಮನೇ!" ಎಂದು ಹೇಳಿ, ತನ್ನ ಹೆಂಡತಿಯೊಡನೆ ಶ್ರೀಗುರುವಿನ ದರ್ಶನಕ್ಕೆ ಹೋದನು. ಭಕ್ತಿಯಿಂದ ಶ್ರೀಗುರುವಿಗೆ ಸ್ತೋತ್ರಾದಿ ಪೂಜೆಗಳನ್ನು ಭಕ್ತಿಯಿಂದ ಅರ್ಪಿಸಿದನು. ಸಂತುಷ್ಟರಾದ ಶ್ರೀಗುರುವು ಅವರನ್ನು ಮತ್ತೊಮ್ಮೆ ಹರಸಿದರು. ಗುರುವಿನಿಂದ ಅನುಗ್ರಹೀತರಾದ ಅವರಿಬ್ಬರೂ ತಮ್ಮ ಮನೆಗೆ ಹಿಂತಿರುಗಿದರು. ಕಾಲಾನಂತರದಲ್ಲಿ ಅವರು ಸಂಪದ್ಭರಿತರಾಗಿ, ಸುಸಂತಾನವನ್ನು ಪಡೆದು, ಪೂರ್ಣಾಯುಷಿಗಳಾಗಿ, ಸುಖವಾಗಿ ಜೀವನ ಮಾಡಿದರು.

ಕೇಳಿದೆಯಾ ನಾಮಧಾರಕ, ಗುರುಕೃಪೆಯೆನ್ನುವುದು ಎಂತಹುದು ಎಂದು! ಶ್ರೀಗುರುವಿನ ದಯೆಯಿದ್ದರೆ ದೈನ್ಯವೆನ್ನುವುದು ಎಲ್ಲಿರುತ್ತದೆ?" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತೆರಡನೆಯ ಅಧ್ಯಾಯ ಮುಗಿಯಿತು.






||ಶ್ರೀ ಗುರು ಚರಿತ್ರೆ - ಇಪ್ಪತ್ತೊಂದನೆಯ ಅಧ್ಯಾಯ||

ಸಿದ್ಧಮುನಿ ಮುಂದುವರೆಸಿ ಹೇಳಿದರು. "ಆ ಬ್ರಹ್ಮಚಾರಿ ಅವಳಿಗೆ "ಅಮ್ಮಾ, ಮೂರ್ಖಳಂತೆ ದುಃಖಿಸಬೇಡ. ಕ್ಷಣಭಂಗುರವಾದ ಈ ಜೀವನದಲ್ಲಿ ಚಿರಂಜೀವಿಯಾದವನು ಯಾರಿದ್ದಾನೆ? ಹುಟ್ಟಿದವನಾರು? ಸತ್ತವನಾರು? ಜಲಬಿಂದುವಿನಂತೆ, ಹುಟ್ಟಿದ ಮಾನವರು ಅಶಾಶ್ವತರು. ಪಂಚಭೂತಗಳಿಂದಾಗಿ ವ್ಯಕ್ತವಾದ ಈ ದೇಹ, ಅವು ಬೇರೆಗೊಂಡಾಗ ಅವ್ಯಕ್ತವಾಗುತ್ತದೆ. ಅಂತಹ ಪಂಚ ಭೂತಾತ್ಮಕ ಶರೀರಗಳನ್ನು ನಾವು ಮಗ, ಮಗಳು, ಹೆಂಡತಿ, ಮಿತ್ರ ಎಂದು ನೋಡುತ್ತಿದ್ದೇವೆ. ತ್ರಿಗುಣಗಳಿಂದ ಕೂಡಿದ ಮನಸ್ಸು ನಮ್ಮನ್ನು ನಾನು, ನನ್ನದು ಮುಂತಾದ ಭ್ರಮೆಯಲ್ಲಿ ಸಿಲುಕಿಸುತ್ತದೆ. ಸತ್ವ ಗುಣದಿಂದ ದೇವತ್ವ, ರಜೋಗುಣದಿಂದ ಮಾನವತ್ವ, ತಮೋಗುಣದಿಂದ ರಾಕ್ಷಸತ್ವ, ಕರ್ಮಾನುಸಾರವಾಗಿ ಏರ್ಪಡುತ್ತದೆ. ತಮ್ಮ ಸುಕೃತ ದುಷ್ಕೃತಗಳಿಂದ ಪುಣ್ಯ ಪಾಪ ಫಲಗಳುಂಟಾಗಿ ಮಾನವರು ಆ ಫಲಗಳನ್ನು ತಾವೇ ಅನುಭವಿಸ ಬೇಕಾಗುತ್ತದೆ. ಇಂದ್ರಿಯಗಳೂ ಈ ಗುಣಗಳನ್ನನುಸರಿಸಿ ಪ್ರವರ್ತಿಸುತ್ತವೆ. ಅದರಿಂದುಂಟಾದ ಸುಖ ದುಃಖಗಳನ್ನೆಲ್ಲ ಜೀವಿಯು ಅನುಭವಿಸಲೇಬೇಕು. ಹುಟ್ಟಿದ ಮನುಷ್ಯರೆಲ್ಲರೂ ಈ ಗುಣಗಳಿಂದುಂಟಾದ ಕರ್ಮ ಫಲವಾಗಿ ಬರುವ ಸುಖ-ದುಃಖಗಳನ್ನು ಪಡೆಯುತ್ತಾರೆ. ಕಲ್ಪಾಂತದವರೆಗೂ ಆಯುಸ್ಸುಳ್ಳ ದೇವತೆಗಳೂ ಇದರಿಂದ ತಪ್ಪಿಸಿ ಕೊಳ್ಳಲಾರರು. ಇನ್ನು ಮಾನವರ ಮಾತೇನು? ದೇಹಕ್ಕೆ ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಗುವುದು, ಕ್ಷೀಣಿಸುವುದು, ನಾಶವಾಗುವುದು ಎನ್ನುವ ಆರು ವಿಕಾರಗಳು ಕ್ರಮವಾಗಿ ಉಂಟಾಗುತ್ತದೆ. ದೇಹವು ಸ್ಥಿರ ಎನ್ನುವುದು ಎಲ್ಲಿದೆ? ಅದು ನಿಶ್ಚಯವಾಗಿಯೂ ಕಾಲಾಧೀನವೇ! ಅದರಿಂದಲೇ ಜ್ಞಾನಿಗಳು ಹುಟ್ಟಿದರೆ ಸಂತೋಷಪಡುವುದಿಲ್ಲ. ಸತ್ತರೆ ದುಃಖಪಡುವುದಿಲ್ಲ. ನೀರಿನಲ್ಲಿರುವ ಗಾಳಿ ಗುಳ್ಳೆಗಳಂತೆ ಈ ದೇಹವು ನಾಶವಾಗುವಂತಹುದೇ! ಕೆಲವರು ಬಾಲ್ಯದಲ್ಲಿ, ಕೆಲವರು ಯೌವನದಲ್ಲಿ, ಕೆಲವರು ವಾರ್ಧಕ್ಯದಲ್ಲಿ ಸಾಯುವರು. ಕರ್ಮಫಲ ಇರುವವರೆಗೆ ಈ ದೇಹವು ಫಲಾನುಭವಕ್ಕಾಗಿ ಇರುತ್ತದೆ. ತಂದೆ, ತಾಯಿ, ಮಗ, ಮಗಳು, ಅಣ್ಣ, ತಂಗಿ, ಬಂಧು ಬಾಂಧವರು ಎಲ್ಲರೂ ತಮ್ಮವರು ಏಂಬ ಭ್ರಮೆಯಿಂದ ಮೂಢರು ಮಾಯಾ ಮೋಹಿತರಾಗಿ ಹಾಳಾಗುತ್ತಿದ್ದಾರೆ. ಮಾಂಸ, ಮೂಳೆ, ರಕ್ತ, ಶ್ಲೇಷ್ಮ, ಮಲ ಮೂತ್ರಾದಿಗಳಿಂದ ತುಂಬಿದೆ ಈ ದೇಹ. ದೇಹಿಯಾದವನು ಬ್ರಹ್ಮಲಿಪಿಯನ್ನನುಸರಿಸಿ ಸುಖ ದುಃಖಗಳನ್ನು ಅನುಭವಿಸುತ್ತಾನೆ. ಕಾಲ ಕರ್ಮಗಳನ್ನು ಜಯಿಸಿದವರಾರು? ಅದರಿಂದಲೇ ಈ ದೇಹ ಶಾಶ್ವತವಲ್ಲ. ಕನಸಿನಲ್ಲಿ ಕಂಡ ಗಂಟು ಎಚ್ಚರಗೊಂಡಮೇಲೆ ಎಲ್ಲಿರುತ್ತದೆ? ಸಂಬಂಧಗಳೇ ನಿಜವಾದರೆ ಹಿಂದಿನ ಜನ್ಮದಲ್ಲಿ ನೀನೇನಾಗಿದ್ದೆ ಎಂದು ಹೇಳಬಲ್ಲೆಯಾ? ನಿನ್ನ ತಂದೆ ತಾಯಿಗಳು ಯಾರಾಗಿದ್ದರು ಎಂಬುದನ್ನು ಹೇಳಬಲ್ಲೆಯಾ? ಮುಂದಿನ ಜನ್ಮದಲ್ಲಿ ನೀನೇನಾಗುತ್ತೀಯೆಂದು ಹೇಳಬಲ್ಲೆಯಾ? ಪುತ್ರ ಶೋಕದಿಂದ ನೀನು ಅನವಶ್ಯಕವಾಗಿ ವ್ಯಥೆ ಪಡುತ್ತಿದ್ದೀಯೆ. ಅಸ್ಥಿ ಚರ್ಮಗಳಿಂದಾದ ಈ ದೇಹದ ಮೇಲೆ ಮಮಕಾರವು ಸಲ್ಲದು. ಮಗನಾರು? ಸಾವೆಲ್ಲಿಂದ ಬಂತು? ನೀನು ಭ್ರಮೆಯಿಂದ ದುಃಖಿಸುತ್ತಿದ್ದೀಯೆ. ಅದನ್ನು ಬಿಟ್ಟು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಲು ಶವವನ್ನು ಅವರಿಗೆ ಕೊಡು" ಎಂದು ಆ ಬ್ರಹ್ಮಚಾರಿ ಅವಳಿಗೆ ಉಪದೇಶ ಮಾಡಿದನು.

ಅದಕ್ಕೆ ಅವಳು, "ಸ್ವಾಮಿ, ನೀವು ನನ್ನಲ್ಲಿ ಕರುಣೆ ತೋರಿ ಉಪದೇಶ ಮಾಡಿದಿರಿ. ಆದರೂ ನನ್ನ ಮನಸ್ಸು ಸಮಾಧಾನಗೊಳ್ಳುತ್ತಿಲ್ಲ. ಪ್ರಾರಬ್ಧವೇ ಪ್ರಮಾಣ ಎನ್ನುವುದಾದರೆ ಪೂಜೆ ಪುನಸ್ಕಾರಗಳೇಕೆ? ಚಿಂತಾಮಣಿಯ ಸ್ಪರ್ಶದಿಂದಲೇ ಲೋಹ ಚಿನ್ನವಾಗುತ್ತದೆಯಲ್ಲವೇ? ಅದೃಷ್ಟ ಹೀನಳೆಂದು ತಿಳಿದೇ ನಾನು ಶ್ರೀಗುರುವನ್ನು ಆಶ್ರಯಿಸಿದೆ. ಶ್ರೀಗುರುವು ನನಗೆ ಅಭಯಕೊಟ್ಟು, ಈಗ ನನ್ನನ್ನು ಏಕೆ ಹೀಗೆ ದೂರ ಮಾಡಿದ್ದಾರೆ? ಜ್ವರ ಪೀಡಿತನಿಗೆ ವೈದ್ಯ ಕೊಟ್ಟ ಔಷಧದಿಂದ ಗುಣವಾಗುತ್ತದೆ. ಹಾಗೆ ನಾನು ತ್ರಿಮೂರ್ತಿ ಸ್ವರೂಪನಾದ ಶ್ರೀಗುರುವನ್ನು ಆಶ್ರಯಿಸಿದೆ. ಅವರು ಕೊಟ್ಟ ಫಲ ವಿಫಲ ಹೇಗಾಗುತ್ತದೆ? ಅವರನ್ನು ನಂಬಿದ ನಾನು ಮೂರ್ಖಳೇ? ಅದರಿಂದಲೇ ನಾನು ಅವರ ಎದುರಿಗೇ ಪ್ರಾಣ ಬಿಡುತ್ತೇನೆ" ಎಂದು ನಿಶ್ಚಿತವಾಗಿ ಹೇಳಿದಳು. ಅವಳ ದೃಢ ನಿರ್ಧಾರವನ್ನು ಅರಿತ ಬ್ರಹ್ಮಚಾರಿ ವೇಷದ ಶ್ರೀಗುರುವು ಅವಳಿಗೆ, " ಶ್ರೀಗುರುವಿನಲ್ಲಿ ನಿನಗೆ ಅಷ್ಟು ನಂಬಿಕೆಯಿದ್ದರೆ, ನಿನ್ನ ಮಗನ ಶವವನ್ನು, ಎಲ್ಲಿ ನಿನಗೆ ಗುರುವಿನ ಅನುಗ್ರಹವಾಯಿತೋ ಅಲ್ಲಿಗೆ ತೆಗೆದುಕೊಂಡು ಹೋಗಿ, ಅಲ್ಲಿಯೇ ದಹನಮಾಡು. ಕೃಷ್ಣಾನದಿ ತಟದಲ್ಲಿರುವ ಔದುಂಬರವು ಕಲ್ಪವೃಕ್ಷವೇ!" ಎಂದು ಹೇಳಿದರು.

ಅವನ ಮಾತಿನಂತೆ ಅವಳು ತನ್ನ ಮಗನ ಶವವನ್ನು ಆತುಕೊಂಡು, ಆ ಔದುಂಬರ ವೃಕ್ಷದ ಬಳಿಗೆ ಹೋದಳು. ಅಲ್ಲಿರುವ ಶ್ರೀಗುರುವಿನ ಪಾದುಕೆಗಳಿಗೆ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತಾ, ತನ್ನ ರಕ್ತದಿಂದ ಆ ಪಾದುಕೆಗಳನ್ನು ತೋಯಿಸಿದಳು. ಎಲ್ಲ ಶೋಕಗಳಿಗಿಂತಲೂ ಪುತ್ರ ಶೋಕವೆನ್ನುವುದು ಬಹಳ ದೊಡ್ಡದು. ಆ ರೀತಿಯಲ್ಲಿ ಅವಳು ದುಃಖಿಸುತ್ತಾ, ಸೂರ್ಯಾಸ್ತವಾದರೂ ಶವವನ್ನು ದಹನಕ್ಕಾಗಿ ಕೊಡಲಿಲ್ಲ. ಬ್ರಾಹ್ಮಣರು ಸಂಸ್ಕಾರ ಮಾಡಲು ಶವವನ್ನು ಕೊಡು ಎಂದು ಎಷ್ಟು ಕೇಳಿದರೂ ಅವಳು ಒಪ್ಪದೆ ಕಣ್ಣಿರು ಸುರಿಸುತ್ತಾ ಪಾದುಕೆಗಳಮೇಲೆ ಬಿದ್ದಳು. ಬಂದಿದ್ದ ಬ್ರಾಹ್ಮಣರು, "ರಾತ್ರಿಯಾಯಿತು, ಇನ್ನು ನಾವಿಲ್ಲಿರಬಾರದು. ಇಲ್ಲಿ ಕಳ್ಳರ ಬಾಧೆಯೂ ಹೆಚ್ಚು. ನಾವು ಮನೆಗೆ ಹಿಂತಿರುಗಿ ಮತ್ತೆ ಬೆಳಗ್ಗೆ ಬರೋಣ. ಶವದಿಂದ ದುರ್ವಾಸನೆ ಬಂದಾಗಲಾದರೂ ಅವಳೇ ಶವವನ್ನು ನಮಗೆ ಒಪ್ಪಿಸುತ್ತಾಳೆ" ಎಂದು ತಮ್ಮಲ್ಲೇ ಯೋಚಿಸಿ, ಅವಳಿಗೆ, "ಅಮ್ಮಾ, ರಾತ್ರಿ ಹೊತ್ತಿನಲ್ಲಿ ಇಲ್ಲಿ ಗಂಡಸರೇ ಇರಲು ಹೆದರುತ್ತಾರೆ. ಇಲ್ಲಿ ಕಳ್ಳರ ಕಾಟವೂ ಜಾಸ್ತಿ. ನೀವು ಇಲ್ಲಿರಬಾರದು" ಎಂದು ಹೇಳಿ ಹೊರಟು ಹೋದರು. ರಾತ್ರಿ ಶವದೊಂದಿಗೆ ಅಲ್ಲಿ ತಾಯಿ ತಂದೆಗಳು ಮಾತ್ರವಿದ್ದರು.

ಎರಡು ದಿನಗಳಿಂದ ನಿದ್ರೆಯಿಲ್ಲದೆ, ಕಣ್ಣಿರು ಸುರಿಸುತ್ತಾ ಶವದೊಂದಿಗೆ ಕುಳಿತಿದ್ದ ಸುಶೀಲಳಿಗೆ ಕುಳಿತಿದ್ದ ಹಾಗೇ ನಿದ್ರೆ ಬಂದಿತು. ಕನಸಿನಲ್ಲಿ ಅವಳಿಗೆ ತೇಜಃಪುಂಜವಾದ ಆಕೃತಿಯೊಂದು ಕಾಣಿಸಿತು. ಜಟಾಧಾರಿಯಾಗಿ, ಚರ್ಮಾಂಬರ ಧರಿಸಿ, ಭಸ್ಮ ಧೂಳಿತನಾಗಿ, ರುದ್ರಾಕ್ಷಮಾಲೆ ಕಂಠದಲ್ಲಿ ಧರಿಸಿ, ಕೈಯ್ಯಲ್ಲಿ ತ್ರಿಶೂಲ ಹಿಡಿದಿದ್ದ ಆ ಆಕೃತಿ ಅವಳನ್ನು ಸಂಬೋಧಿಸಿ, "ಅಮ್ಮಾ, ನನ್ನನ್ನು ಏಕೆ ನಿಂದಿಸುತ್ತೀಯೆ? ಈಗಲೇ ನಿನ್ನ ಮಗನ ಪ್ರಾಣ ಹಿಂತಿರುಗಿಸುತ್ತೇನೆ" ಎಂದು ಹೇಳಿ, ಶವಕ್ಕೆ ಭಸ್ಮ ಹಚ್ಚಿ, ಅವನ ಮೂಗಿನಲ್ಲಿ ಗಾಳಿ ಊದಿ, "ಇವನ ಹೋಗಿದ್ದ ಪ್ರಾಣವನ್ನು ಮತ್ತೆ ಕೊಟ್ಟಿದ್ದೇನೆ. ಇನ್ನು ನಿನ್ನ ಶೋಕವನ್ನು ಬಿಟ್ಟು ಸಮಾಧಾನ ಚಿತ್ತಳಾಗು" ಎಂದು ಹೇಳಿದನು. ಆ ಕನಸಿನಿಂದ ಎಚ್ಚರಗೊಂಡ ಸುಶೀಲ, "ಇದು ನನ್ನ ಭ್ರಾಂತಿಯಿರಬೇಕು. ಸತ್ತವನು ಹೇಗೆ ಮತ್ತೆ ಬದುಕಿ ಬರುತ್ತಾನೆ? ಅದನ್ನೇ ಯೋಚಿಸುತ್ತಾ ನಿದ್ರಿಸಿದ ನನಗೆ ಅದೇ ಕನಸಿನಲ್ಲೂ ಕಾಣಿಸಿತು. ನನ್ನ ಅದೃಷ್ಟವೇ ಹಾಗಿದ್ದರೆ ದೈವವೇನು ಮಾಡಬಲ್ಲುದು? ಮೂರ್ಖಳಾಗಿ ಗುರುವಿನಲ್ಲಿ ದೋಷಾರೋಪಣೆ ಮಾಡಿದೆ" ಎಂದು ಕೊಳ್ಳುತ್ತಿರಲು, ಶವವು ಅಲುಗಾಡಿದಂತಾಯಿತು. ಇದರಲ್ಲಿ ಭೂತ ಪ್ರವೇಶವಾಯಿತೋ ಏನೋ ಎಂದು ಹೆದರಿದ ಅವಳು ಆ ಶವವನ್ನು ದೂರ ತಳ್ಳಿದಳು. ಆ ಕ್ಷಣದಲ್ಲೇ ಆ ಬಾಲಕ ಎದ್ದು ಕುಳಿತು, "ಅಮ್ಮಾ, ನನಗೆ ಹಸಿವೆಯಾಗುತ್ತಿದೆ. ಬೇಗ ಏನಾದರೂ ಕೊಡು" ಎಂದು ಕೇಳುತ್ತ, ಅವಳ ಹತ್ತಿರಕ್ಕೆ ಬಂದನು. ಅವನು ಹಾಗೆ ಹತ್ತಿರಕ್ಕೆ ಬರುತ್ತಿದ್ದ ಹಾಗೆಯೇ ಅವಳ ಸ್ತನಗಳಿಂದ ಹಾಲು ಧಾರೆಯಾಗಿ ಸುರಿಯಲು ಆರಂಭವಾಯಿತು. ವಿಸ್ಮಿತಳಾದ ಅವಳು ಅವನಿಗೆ ಸ್ತನ್ಯ ಪಾನ ಮಾಡಿಸಿ, ಸಂತೋಷದಿಂದ ಮಗನ ಜೊತೆಯಲ್ಲಿ ಗಂಡನ ಬಳಿಗೆ ಹೋಗಿ ಅವನನ್ನು ಎಬ್ಬಿಸಿ ನಡೆದ ವಿಷಯವನ್ನೆಲ್ಲಾ ವಿವರವಾಗಿ ಅವನಿಗೆ ತಿಳಿಸಿದಳು. ವಿಷಯವೆಲ್ಲಾ ತಿಳಿದ ಅವನೂ ಬಹಳ ಸಂತೋಷಗೊಂಡು, "ಇದೆಲ್ಲವೂ ಆ ಸದ್ಗುರುವಿನ ಲೀಲೆಯೇ!" ಎಂದು ಶ್ರೀಗುರುವಿನ ಗುಣಗಾನ ಮಾಡಿದನು.

ದಂಪತಿಗಳು ಬದುಕಿದ ಮಗನೊಡನೆ ಔದುಂಬರ ವೃಕ್ಷಕ್ಕೆ ಬಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ, "ಹೇ ತ್ರಿಮೂರ್ತಿ ಸ್ವರೂಪ, ಮಾನವ ರೂಪದಲ್ಲಿ ಬಂದಿರುವ ನಿನ್ನ ಲೀಲೆಗಳನ್ನು ವರ್ಣಿಸುವುದು ಅಸಾಧ್ಯ. ಹೇ ಗುರುದೇವ ನಿನಗೆ ಜಯವಾಗಲಿ. ಜಯವಾಗಲಿ. ನಿನ್ನನ್ನು ಆಶ್ರಯಿಸಿದವರ ಕೈಬಿಡದೆ ಅವರನ್ನು ಕಾಪಾಡುತ್ತೀಯೆ. ನಿನ್ನ ಸೇವೆ ಮಾಡಿದವರನ್ನು ನೀನು ಎಂದು ಉಪೇಕ್ಷಿಸುವುದಿಲ್ಲ. ನಿನ್ನ ಮಹಿಮೆಗಳನ್ನು ವರ್ಣಿಸುವವರು ಯಾರು ಸ್ವಾಮಿ? ನಮ್ಮಿಂದ ಅಪರಾಧವಾಯಿತು. ನಮ್ಮನ್ನು ಕ್ಷಮಿಸಿ, ನಮ್ಮಲ್ಲಿ ದಯೆತೋರು. ಮಕ್ಕಳು ನಿಷ್ಠೂರವಾದ ಮಾತುಗಳನ್ನಾಡಿದರೂ ಹೇಗೆ ತಾಯಿಯಾದವಳು ಅವರನ್ನು ಬಿಟ್ಟು ಬಿಡುವುದಿಲ್ಲವೋ ಹಾಗೆ ನಮ್ಮನ್ನು ಬಿಟ್ಟು ಬಿಡಬೇಡ. ನಿನ್ನ ಮಾಯೆಯಿಂದಲೇ ನಾವು ನಿನ್ನ ಬಗ್ಗೆ ಅನುಚಿತ ಮಾತುಗಳನ್ನಾಡಿದೆವು. ಶರಣಾಗತರಾಗಿ ಬಂದಿರುವ ನಮ್ಮನ್ನು ಕ್ಷಮಿಸಿ, ಉದ್ಧರಿಸು" ಎಂದು ಶ್ರೀಗುರುವನ್ನು ಮತ್ತೆ ಮತ್ತೆ ಬೇಡಿಕೊಳ್ಳುತ್ತಾ, ಶ್ರೀಗುರುವಿನ ಪಾದುಕೆಗಳಿಗೆ ನಮಸ್ಕರಿಸಿದರು. ಅಲ್ಲಿಂದ ಸಂಗಮಕ್ಕೆ ಹೋಗಿ, ಸ್ನಾನಮಾಡಿ, ನೀರು ತಂದು ರಕ್ತಸಿಕ್ತವಾಗಿದ್ದ ಶ್ರೀಗುರುವಿನ ಪಾದುಕೆಗಳನ್ನು ತೊಳೆದು, ಅದಕ್ಕೆ ಪೂಜಾದಿಗಳನ್ನು ಆಚರಿಸಿ, ಗುರುಸ್ತೋತ್ರ ಮಾಡಿದರು.

ಅಷ್ಟರಲ್ಲಿ ಬೆಳಗಾಯಿತು. ಊರಿನ ಬ್ರಾಹ್ಮಣರು ಶವ ಸಂಸ್ಕಾರ ಮಾಡಲೆಂದು ಅಲ್ಲಿಗೆ ಬಂದರು. ಅವರು ಅಲ್ಲಿ ಪುನರ್ಜೀವಿತನಾಗಿದ್ದ ಹುಡುಗನನ್ನು ನೋಡಿ ಆಶ್ಚರ್ಯಗೊಂಡು ಮೂಕರಾಗಿ ಹೋದರು. ಆ ದಂಪತಿಗಳು ಎಲ್ಲರಿಗೂ ಭೋಜನಾದಿಗಳನ್ನು ಮಾಡಿಸಿದರು. ಊಟೋಪಚಾರಗಳಾದ ಮೇಲೆ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.

ಶಿಷ್ಯ, ನಾಮಧಾರಕ, ಗುರುವಿನ ಮಹಿಮೆ ಇಂತಹುದು. ಅವರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದವರಾರು? ಆ ಔದುಂಬರ ವೃಕ್ಷ ಮೂಲದಲ್ಲಿ ಶ್ರೀಗುರುವು ಸದಾ ನೆಲಸಿರುತ್ತಾನೆ. ಅಲ್ಲಿರುವ ಗುರು ಪಾದುಕೆಗಳನ್ನು ಸ್ಥಿರ ಮನಸ್ಕರಾಗಿ, ನಂಬಿಕೆಯಿಟ್ಟು ಪೂಜಿಸಿದವರ ಇಷ್ಟಾರ್ಥಗಳು ತಪ್ಪದೇ ನೆರವೇರುತ್ತವೆ. ಅದರಲ್ಲಿ ಸಂಶಯವೇ ಇಲ್ಲ! ಅಲ್ಲಿ ಪೂಜೆ ಮಾಡಿದ ಮತಿಹೀನರು ಮತಿವಂತರಾಗುತ್ತಾರೆ. ಅಧನರು ಧನವಂತರಾಗುತ್ತಾರೆ. ಬಂಜೆಯರು ಪುತ್ರವಂತರಾಗುತ್ತಾರೆ. ರೋಗಿಗಳು ನಿರೋಗಿಗಳಾಗುತ್ತಾರೆ. ಅಂಗಹೀನರು ದೃಢ ಶರೀರಿಗಳಾಗುತ್ತಾರೆ. ಚತುರ್ವಿಧ ಪುರುಷಾರ್ಥಗಳೂ ಅಲ್ಲಿ ನಿಸ್ಸಂದೇಹವಾಗಿ ಸಿದ್ಧಿಸುತ್ತವೆ. ಶ್ರದ್ಧಾಭಕ್ತಿಗಳಿಂದ ಪೂಜಿಸುವವರಿಗೆ ಆ ಔದುಂಬರವು ಕಲ್ಪವೃಕ್ಷವೇ!" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತೊಂದನೆಯ ಅಧ್ಯಾಯ ಮುಗಿಯಿತು.



Monday, February 18, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತನೆಯ ಅಧ್ಯಾಯ||

ನಾಮಧಾರಕನು ಸಿದ್ಧಮುನಿಗೆ ನಮಸ್ಕಾರಮಾಡಿ, "ಸ್ವಾಮಿ, ಶ್ರೀಗುರುವು ಗಂಧರ್ವನಗರವನ್ನು ಸೇರಿದ್ದರೂ ಅಮರಪುರದಲ್ಲಿ ಔದುಂಬರ ಮೂಲದಲ್ಲಿ ಅದೃಶ್ಯವಾಗಿ ಇರುತ್ತೇನೆಂದು ಯೋಗಿನಿಯರಿಗೆ ಆಶ್ವಾಸನವಿತ್ತರು. ಹಾಗೆ ಅಲ್ಲಿ ಅಗೋಚರರಾದ ಶ್ರೀಗುರುವಿನ ಅನುಗ್ರಹ ಯಾರಿಗಾದರೂ ದೊರಕಿದೆಯೇ ಎಂಬುದನ್ನು ಹೇಳಿ" ಎಂದು ಕೇಳಿದನು. ಅವನ ಮಾತಿನಿಂದ ಸಂತಸಗೊಂಡ ಸಿದ್ಧಮುನಿ, ಕೃಷ್ಣಾ ತೀರದಲ್ಲಿನ ಔದುಂಬರ ಮಾಹಾತ್ಮ್ಯೆಯನ್ನು ಹೇಳರಾಂಭಿಸಿದರು.

"ನಾಮಧಾರಕ, ಔದುಂಬರದ ಮೂಲದಲ್ಲಿ ನಡೆದಿರುವ ಗುರುಲೀಲೆಗಳು ಅನೇಕವಾಗಿವೆ. ಅದು ಕಲ್ಪವೃಕ್ಷವೇ ಆದದ್ದರಿಂದ ಅದು ಕೊಡಲಾರದು ಎಂಬುದು ಯಾವುದೂ ಇಲ್ಲ. ಶ್ರೀಗುರುವೇ ಅಲ್ಲಿ ನೆಲಸಿರುವುದರಿಂದ ಯಾವ ಅಭೀಷ್ಟವಾದರೂ ಸಿದ್ಧಿಸುತ್ತದೆ. ಅಂತಹ ಒಂದು ನಿದರ್ಶನವನ್ನು ಹೇಳುತ್ತೇನೆ, ಕೇಳು.

ಶಿರೋಲವೆಂಬ ಊರಿನಲ್ಲಿ ವೇದ ಶಾಸ್ತ್ರ ಪರಾಯಣನಾದ ಗಂಗಾಧರನೆಂಬ ಬ್ರಾಹ್ಮಣನೊಬ್ಬನಿದ್ದನು. ಧರ್ಮ ಪರಾಯಣೆಯೂ, ಶಾಂತ ಚಿತ್ತಳೂ ಆದ ಅವನ ಹೆಂಡತಿ, ಸುಶೀಲ. ಅವಳಿಗೆ ಐದು ಮಕ್ಕಳಾದರೂ, ಅವರೆಲ್ಲರೂ ಹುಟ್ಟಿದ ಸ್ವಲ್ಪ ಕಾಲದಲ್ಲೇ ಮರಣಿಸಿದರು. ಅದರಿಂದ ಬಹಳ ದುಃಖಿತರಾದ ಆ ದಂಪತಿಗಳು ಅನೇಕ ದೇವತಾರಾಧನೆಗಳನ್ನು ಮಾಡಿದರು. ಆದರೂ ಅವರ ದುಃಖ ಕಡಮೆಯಾಗಲಿಲ್ಲ. ಸುಶೀಲ ಇದಕ್ಕೆ ಕಾರಣವನ್ನು ತಿಳಿಯಲು, ಅದನ್ನು ಹೇಳಬಲ್ಲ ಒಬ್ಬ ಬ್ರಾಹ್ಮಣನ ಬಳಿಗೆ ಹೋಗಿ, ಅವನನ್ನು ವಿಚಾರಿಸಿದಳು. ಅವನು ಅವಳಿಗೆ, "ನಿನ್ನ ದುಃಖಕ್ಕೆ ಕಾರಣ ನಿನ್ನ ಪೂರ್ವಜನ್ಮ ಕೃತ ಕರ್ಮಗಳು. ಗೋವು ಮುಂತಾದ ಪಶುಗಳನ್ನು ಹತ್ಯೆ ಮಾಡಿದವಳು ಬಂಜೆಯಾಗುತ್ತಾಳೆ. ಪರರ ದ್ರವ್ಯವನ್ನು ಅಪಹರಿಸಿದವಳಿಗೆ ಹುಟ್ಟಿದ ಮಕ್ಕಳು ಅನತಿ ಕಾಲದಲ್ಲೇ ಮರಣ ಹೊಂದುತ್ತಾರೆ. ನಿನ್ನ ದೋಷವನ್ನು ಹೇಳುತ್ತೇನೆ ಕೇಳು. ಶೌನಕ ಗೋತ್ರೀಯನಾದ ಬ್ರಾಹ್ಮಣನೊಬ್ಬನಿಂದ ನೀನು ೧೦೦ ವರಹಗಳನ್ನು ಪಡೆದು ಅದನ್ನು ಹಿಂತಿರುಗಿಸಲಿಲ್ಲ. ಆ ಬ್ರಾಹ್ಮಣ ನೀನು ಹಣ ಹಿಂತಿರುಗಿಸದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡು, ಪಿಶಾಚಿಯಾಗಿ, ನಿನ್ನ ಶೋಕಕ್ಕೆ ಕಾರಣನಾಗಿದ್ದಾನೆ. ಅವನೇ ನಿನಗೆ ಹುಟ್ಟಿದ ಮಕ್ಕಳನ್ನೆಲ್ಲಾ ಸಾಯಿಸುತ್ತಿದ್ದಾನೆ. ನೀನು ಮಾಡಿದ ಪೂರ್ವಜನ್ಮದ ಫಲವಿದು. ಅನುಭವಿಸಬೇಕು" ಎಂದು ಹೇಳಿದನು. ಅದನ್ನು ಕೇಳಿ, ಖಿನ್ನಳಾದ ಅವಳು ಮತ್ತೆ ಆ ಬ್ರಾಹ್ಮಣನನ್ನು, "ಅಯ್ಯಾ, ನಾನು ಈ ಪಾಪದಿಂದ ಹೇಗೆ ಬಿಡುಗಡೆ ಹೊಂದ ಬಹುದು ಎಂಬುದನ್ನು ಹೇಳು" ಎಂದು ಕೇಳಿದಳು. ಅದಕ್ಕೆ ಅವನು, "ನೀನು ಬ್ರಾಹ್ಮಣ ಧನವನ್ನು ಅಪಹರಿಸಿ ಅವನ ಸಾವಿಗೆ ಕಾರಣಳಾಗಿದ್ದೀಯೆ. ಅವನು ಆತ್ಮಹತ್ಯೆ ಮಾಡಿಕೊಂಡದ್ದರಿಂದ ಅವನಿಗೆ ಊರ್ಧ್ವಲೋಕ ಕ್ರಿಯೆಗಳಾಗಲಿಲ್ಲ. ಅದರಿಂದ ನೀನು ಅವನಿಗೆ ಅಂತ್ಯಕ್ರಿಯೆಗಳನ್ನು ಮಾಡಿ. ಅವನ ಗೋತ್ರೋದ್ಭವನಾದ ಬ್ರಾಹ್ಮಣನೊಬ್ಬನಿಗೆ ಅವನಿಗೆ ಕೊಡಬೇಕಾಗಿದ್ದ ಹಣವನ್ನು ದಾನ ಮಾಡು. ಹಾಗೆ ಮಾಡುವುದರಿಂದ ನೀನು ದೋಷ ಮುಕ್ತಳಾಗುತ್ತೀಯೆ. ಕೃಷ್ಣಾನದಿ ತೀರದಲ್ಲಿರುವ ಪಂಚ ಗಂಗಾ ಸಂಗಮದಲ್ಲಿ ಸ್ನಾನಮಾಡಿ, ಉಪವಾಸವಿರುತ್ತಾ, ಔದುಂಬರ ವೃಕ್ಷವನ್ನು ಆರಾಧಿಸು. ಪಾಪವಿನಾಶ ತೀರ್ಥದಲ್ಲಿ ಸ್ನಾನ ಮಾಡಿ ಔದುಂಬರಕ್ಕೆ ಏಳು ಸಲ ಪ್ರದಕ್ಷಿಣೆ ಮಾಡಿ ಅಭಿಷೇಕ ಮಾಡು. ಮತ್ತೆ ಕಾಮ್ಯ ತೀರ್ಥದಲ್ಲಿ ಮಿಂದು ಗುರು ಪಾದುಕೆಗಳಿಗೆ ಅಭಿಷೇಕ ಪೂಜೆಗಳನ್ನು ಅರ್ಪಿಸು. ಅದು ಶ್ರೀ ನೃಸಿಂಹ ಸರಸ್ವತಿಗಳ ಸ್ಥಾನವಾದದ್ದರಿಂದ ಪವಿತ್ರವಾದದ್ದು. ಹೀಗೆ ಒಂದು ತಿಂಗಳು ಮಾಡಿ, ನಂತರ ಪಿಶಾಚಿಯಾಗಿರುವ ಆ ಬ್ರಾಹ್ಮಣನ ಅಂತ್ಯಕ್ರಿಯೆಗಳನ್ನು ಮಾಡಿಸು. ನಂತರ ಗುರು ಪಾದುಕೆಗಳಿಗೆ ಅಭಿಷೇಕ, ಪೂಜೆಗಳನ್ನು ಅರ್ಪಿಸಿ, ನೀನು ಆ ಬ್ರಾಹ್ಮಣನಿಗೆ ಕೊಡಬೇಕಾಗಿದ್ದ ಹಣವನ್ನು, ನಾನು ಹೇಳಿದಂತೆ ದಾನ ಮಾಡು. ಹೀಗೆ ಮಾಡಿದರೆ ನಿನ್ನ ದೋಷಗಳೆಲ್ಲಾ ಕಳೆದು ನಿನಗೆ ಪೂರ್ಣಾಯುಷಿಗಳಾದ ಮಕ್ಕಳು ಹುಟ್ಟುತ್ತಾರೆ. ಶ್ರೀಗುರುವೇ ನಿನ್ನನ್ನು ಕಾಪಾಡುತ್ತಾನೆ. ಆ ಬ್ರಾಹ್ಮಣನೂ ತನ್ನ ಪಿಶಾಚತ್ವವನ್ನು ಕಳೆದುಕೊಂಡು ಉದ್ಧರಿಸಲ್ಪಡುತ್ತಾನೆ" ಎಂದು ಹೇಳಿದನು.

ಆ ಬ್ರಾಹ್ಮಣ ಹೇಳಿದ ಮಾತುಗಳನ್ನು ಕೇಳಿ ಸುಶೀಲ, "ನೀನು ಹೇಳಿದ ಶಾರೀರಿಕವಾದ ಕಷ್ಟಗಳನ್ನೆಲ್ಲಾ ಸಹಿಸಿ ಪೂಜಾದಿಗಳನ್ನು ಮಾಡಬಲ್ಲೆ. ಶ್ರದ್ಧಾಭಕ್ತಿಗಳಿಂದ ಶ್ರೀಗುರುವನ್ನು ಆರಾಧಿಸಬಲ್ಲೆ. ಆದರೆ ನೀನು ಹೇಳಿದ ನೂರು ವರಹಗಳನ್ನು ಕೊಡುವ ಶಕ್ತಿ ನನಗಿಲ್ಲ" ಎಂದಳು. ಅದಕ್ಕೆ ಆ ಬ್ರಾಹ್ಮಣ, "ನಿನಗೆ ದಾನ ಕೊಡಲು ಶಕ್ತಿಯಿಲ್ಲದಿದ್ದರೆ ನಿಶ್ಚಲ ಮನಸ್ಸಿನಿಂದ ಶ್ರೀಗುರುವನ್ನು ಪೂಜಿಸು. ಗುರುವೇ ನಿನ್ನ ಪಾಪವನ್ನು ಪರಿಹರಿಸುತ್ತಾನೆ. ಶ್ರೀಗುರುವು ದಯಾ ಸಮುದ್ರನು. ಭಕ್ತವತ್ಸಲ. ಗುರುವಿನ ಅಪ್ಪಣೆ ಪಡೆದು ನಿನಗೆ ಶಕ್ತಿಯಿದ್ದಷ್ಟು ದಾನ ಮಾಡು" ಎಂದನು. ಅವನ ಮಾತುಗಳಿಂದ ಸಮಾಧಾನಗೊಂಡ ಸುಶೀಲ, ಶ್ರೀಗುರುವು ಅಗೋಚರನಾಗಿ ನೆಲೆಸಿರುವ ಔದುಂಬರ ವೃಕ್ಷವಿರುವ ಸಂಗಮವನ್ನು ಸೇರಿದಳು. ಅಲ್ಲಿ ಬ್ರಾಹ್ಮಣನು ಹೇಳಿದಂತೆ ಸ್ನಾನಾದಿಗಳನ್ನು ಮಾಡುತ್ತಾ, ಗುರು ಪಾದುಕೆಗಳಿಗೆ ಅಭಿಷೇಕ, ಪೂಜಾದಿಗಳನ್ನು ಅರ್ಪಿಸಿದಳು. ಹಾಗೆ ಮೂರು ದಿನಗಳು ಮಾಡುವುದರಲ್ಲಿ ಆ ಪಿಶಾಚಿಯು ಅವಳ ಕನಸಿನಲ್ಲಿ ಕಾಣಿಸಿಕೊಂಡು, ಅವಳನ್ನು ಭಯಪಡಿಸುತ್ತಾ, "ನನ್ನ ಹಣವನ್ನು ಕೊಡು, ಇಲ್ಲದಿದ್ದರೆ ನಿನ್ನನ್ನೂ ಕೊಂದು ನಿನ್ನ ವಂಶವನ್ನೇ ನಾಶಮಾಡುತ್ತೇನೆ. ನೀನು ಮಾಡುತ್ತಿರುವ ಈ ಪ್ರಯಾಸವೆಲ್ಲವೂ ವ್ಯರ್ಥವೇ!" ಎಂದು ಹೇಳುತ್ತಾ ಅವಳನ್ನು ಹೊಡೆಯಲು ಬಂದಿತು. ಸುಶೀಲ, ಭಯಗೊಂಡು, ಔದುಂಬರ ವೃಕ್ಷದ ಬಳಿಗೆ ಹೋಗಿ, ಅಲ್ಲಿ ಅಗೋಚರನಾದ ಶ್ರೀಗುರುವನ್ನು ಆಶ್ರಯಿಸಿ, ಅಲ್ಲಿ ಕೂತಳು. ಶ್ರೀಗುರುವು ಅವಳಿಗೆ ಅಭಯನೀಡಿ, ಅವಳನ್ನು ಹಿಂಬಾಲಿಸಿ ಬಂದಿದ್ದ ಆ ಪಿಶಾಚಿಗೆ, "ಏಯ್, ಈಕೆಯನ್ನು ನೀನೇಕೆ ಪೀಡಿಸುತ್ತಿದ್ದೀಯೆ?" ಎಂದು ಕೇಳಲು, ಆ ಪಿಶಾಚಿ, "ಹಿಂದಿನ ಜನ್ಮದಲ್ಲಿ ಇವಳು ನನ್ನಿಂದ ಹಣ ಪಡೆದು ಹಿಂತಿರುಗಿಸಲಿಲ್ಲ. ಅದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಸ್ವಾಮಿ, ಈ ನನ್ನ ಶತ್ರುವಿನಲ್ಲಿ ನೀವು ಪಕ್ಷಪಾತ ತೋರಿಸುವುದು ಸರಿಯಲ್ಲ" ಎಂದಿತು. ಶ್ರೀಗುರುವು ಅದರಿಂದ ಕೋಪಗೊಂಡು, "ನೀನು ನನ್ನ ಭಕ್ತರನ್ನು ಪೀಡಿಸದಿದ್ದರೆ ನಿನಗೆ ಸದ್ಗತಿಯಾಗುವಂತೆ ಮಾಡುತ್ತೇನೆ. ಅದರಿಂದ ನಿನ್ನ ಪಿಶಾಚತ್ವ ತೊಲಗಿ ಹೋಗುತ್ತದೆ. ಇನ್ನಾವುದೇ ರೀತಿಯಲ್ಲೂ ನಿನಗೆ ಪರಿಹಾರವಿರುವುದಿಲ್ಲ. ಈಕೆ ತನಗೆ ಸಾಧ್ಯವಿದ್ದಷ್ಟು ಹಣ ಹಿಂತಿರುಗಿಸುವಂತೆ ಹೇಳುತ್ತೇನೆ. ಅದನ್ನು ನೀನು ಅಂಗೀಕರಿಸಬೇಕು. ಇಲ್ಲದಿದ್ದರೆ ನಿನ್ನನ್ನು ದಂಡನೆಗೆ ಗುರಿಮಾಡುತ್ತೇನೆ" ಎಂದು ಹೇಳಿದರು. ಅದಕ್ಕೆ ಆ ಪಿಶಾಚಿ, "ಸ್ವಾಮಿ, ನಾನು ನಿಮ್ಮ ಪಾದಗಳಲ್ಲಿ ಬಿದ್ದಿದ್ದೇನೆ. ನೀವು ಹೇಳಿದಂತೆ ಮಾಡುತ್ತೇನೆ. ನನ್ನನ್ನು ಉದ್ಧರಿಸಿ. ನಿಮ್ಮ ಆಜ್ಞೆಯನ್ನು ಅಂಗೀಕರಿಸುತ್ತೇನೆ" ಎಂದು ಹೇಳಿತು. ಅದಕ್ಕೆ ಶ್ರೀಗುರುವು, "ಇವಳು ನಿನಗೆ ಅಂತ್ಯಕ್ರಿಯೆಗಳನ್ನು ಮಾಡಿಸುತ್ತಾಳೆ. ಅದರಿಂದ ನಿನಗೆ ಸದ್ಗತಿಯಾಗುತ್ತದೆ" ಎಂದು ಹೇಳಿ, ಆ ಬ್ರಾಹ್ಮಣ ಸ್ತ್ರೀಗೆ, "ನೀನು ನಿನ್ನ ಕೈಲಾದಷ್ಟು ಹಣ ವ್ಯಯ ಮಾಡಿ, ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕೆ ಮುಂಚೆಯೇ, ಇವನ ಅಂತ್ಯಕ್ರಿಯೆಗಳನ್ನು ಮಾಡಿಸು. ನಿನ್ನ ಬ್ರಹ್ಮಾಹತ್ಯಾ ದೋಷವು ನಾಶವಾಗುತ್ತದೆ. ಏಳು ದಿನಗಳು ಔದುಂಬರಕ್ಕೆ ಅಭಿಷೇಕ ಮಾಡು. ನಿನಗೆ ಪೂರ್ಣಾಯುಷಿಗಳಾದ ಪುತ್ರರಾಗುತ್ತಾರೆ" ಎಂದು ಹೇಳಿದರು. ಸ್ವಪ್ನದಲ್ಲಿ ತನಗೆ ಗುರುವಿನ ಆಜ್ಞೆಯಾದಂತೆ ಅವಳು ಪ್ರೇತ ಕರ್ಮಗಳನ್ನು ಮಾಡಿಸಿ, ತನಗೆ ಸಾಧ್ಯವಾದಷ್ಟು ಹಣ ದಾನ ಮಾಡಿದಳು. ಹಾಗೆ ಅವಳ ಬ್ರಹ್ಮಹತ್ಯಾದೋಷವು ಕಳೆಯಿತು.

ಮಾರನೆಯ ದಿನ ಅವಳ ಕನಸಿನಲ್ಲಿ ಶ್ರೀಗುರುವು ಕಾಣಿಸಿಕೊಂಡು ಅವಳಿಗೆ ಎರಡು ತೆಂಗಿನ ಕಾಯಿಗಳನ್ನು ಕೊಟ್ಟು, "ವ್ರತ ಸಮಾಪ್ತಿಯಾದ ನಂತರ ಇವುಗಳ ಪಾರಣೆ ಮಾಡು. ಅದರಿಂದ ನಿನಗೆ ಸಂತಾನ ಪ್ರಾಪ್ತಿಯಾಗುತ್ತದೆ" ಎಂದು ಹೇಳಿದರು. ಎಚ್ಚೆತ್ತ ಅವಳು ತನ ಪಕ್ಕದಲ್ಲಿ ಎರಡು ತೆಂಗಿನ ಕಾಯಿಗಳು ಇರುವುದನ್ನು ಕಂಡಳು. ನಡೆದ ವಿಷಯವನ್ನೆಲ್ಲ ತನ್ನ ಗಂಡನಿಗೆ ವಿವರಿಸಿ, ಅವಳು ಶ್ರೀಗುರುವು ಹೇಳಿದಂತೆ, ಔದುಂಬರ ವೃಕ್ಷ ಪೂಜಾದಿಗಳನ್ನು ಮುಗಿಸಿ, ಕಾಯಿಗಳ ಪಾರಣೆ ಮಾಡಿದಳು. ಗುರುವಿನ ಅನುಗ್ರಹದಿಂದ ಅವಳಿಗೆ ಎರಡು ಗಂಡು ಮಕ್ಕಳಾದವು. ಅದರಿಂದ ಸುಶೀಲ ಆನಂದ ಭರಿತಳಾದಳು.

ಮಕ್ಕಳು ಬೆಳೆದು ದೊಡ್ಡವರಾದರು. ದೊಡ್ಡವನಿಗೆ ಉಪನಯನ, ಚಿಕ್ಕವನಿಗೆ ಚೌಲ ಮಾಡಬೇಕೆಂದು ನಿಶ್ಚಯಿಸಿ, ದಂಪತಿಗಳು ಮುಹೂರ್ತಕ್ಕೆ ಪ್ರಶಸ್ತವಾದ ದಿನವನ್ನು ಗೊತ್ತುಮಾಡಿ, ಸರ್ವ ಸಿದ್ಧತೆಗಳನ್ನೂ ಅಣಿ ಮಾಡಿದರು. ಆದರೆ ಆಕಸ್ಮಾತ್ತಾಗಿ, ಮುಹೂರ್ತ ನಿರ್ಧರಿಸಿದ್ದ ದಿನಕ್ಕೆ ಒಂದು ದಿನ ಮುಂಚೆ, ದೊಡ್ಡ ಹುಡುಗನಿಗೆ, ಧನುರ್ವಾತ ರೋಗವು ಬಂದು ಅವನು ಮೂರು ದಿನಗಳು ಬಹಳ ವೇದನೆಯನ್ನನುಭವಿಸಿ, ಗತಪ್ರಾಣನಾದನು. ಅಸಹನೀಯವಾದ ದುಃಖದಿಂದ ಸುಶೀಲ ಅಳಲಾರಂಭಿಸಿದಳು.

ತಲೆಚಚ್ಚಿಕೊಳ್ಳುತ್ತಾ, ನೆಲದ ಮೇಲೆ ಬಿದ್ದು ಹೊರಳಾಡುತ್ತಾ, ತನ್ನ ಮಗನ ಸುಗುಣಗಳನ್ನು ನೆನಸಿಕೊಳ್ಳುತ್ತಾ, ದುಃಖಿಸುತ್ತಿದ್ದ ಆ ತಾಯಿಯು ಮೃತ ಪ್ರಾಯಳೇ ಆದಳು. ಮಗನ ಶವವನ್ನು ತಬ್ಬಿಕೊಂಡು, ಅವಳು, "ತಂದೆ, ನಿನ್ನನ್ನು ನಮ್ಮ ರಕ್ಷಕನೆಂದು ಭಾವಿಸಿದ್ದೆವು. ಆದರೆ ನಮ್ಮನ್ನು ಬಿಟ್ಟು ನೀನು ಎಲ್ಲಿಗೆ ಹೊರಟು ಹೋದೆ? ನಿನ್ನ ಮನಸ್ಸು ಹೇಗೆ ಇಷ್ಟು ಕಠೋರವಾಯಿತು? ಎಲ್ಲಿಗೆ ಆಟವಾಡಲು ಹೋಗಿದ್ದೀಯೆ ಮಗು? ಬೇಗ ಹಿಂತಿರುಗಿ ಬಾ. ನಿನ್ನ ಸುಗುಣಗಳನ್ನು ನಾನು ಹೇಗೆ ಮರೆಯಬಲ್ಲೆ? ನಿನ್ನ ಮುದ್ದು ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಮೊಳಗುತ್ತಿವೆ. ಕನಸಿನಲ್ಲಿ ಕಂಡ ಹಣದ ಗಂಟಿನಂತೆ ನೀನು ನಮಗೆ ಭ್ರಾಂತಿಯುಂಟುಮಾಡಿ ಹೊರಟು ಹೋದೆಯಾ ತಂದೆ? ನನ್ನ ಇಬ್ಬರು ಮಕ್ಕಳಲ್ಲಿ ನೀನೇ ನನ್ನ ನಿಧಿಯೆಂದು ತಿಳಿದಿದ್ದೆ. ನೀನು ನನ್ನ ಗರ್ಭದಲ್ಲಿದ್ದಾಗ ನನಗೆ ಯಾವ ದುರ್ಯೋಚನೆಗಳೂ ಇಲ್ಲದೆ, ಮಗನು ಹುಟ್ಟುತ್ತಾನೆ ಎಂಬ ಆನಂದವೇ ತುಂಬಿತ್ತು. ನಿನಗೆ ಪೂರ್ಣಾಯುಷಿಯಾದ ಸತ್ಪುತ್ರನಾಗುತ್ತಾನೆ ಎಂದು ಶ್ರೀಗುರುವು ನನಗೆ ಅನುಗ್ರಹ ಮಾಡಿದ್ದರು. ಅಂತಹ ವರದಿಂದ ಲಭಿಸಿದ ಮಗನೆಂದು ನಾನು ಅತ್ಯಂತ ಸಂತೋಷದಲ್ಲಿದ್ದೆ. ಹುಟ್ಟಿದಾಗಿನಿಂದಲೂ ನಿನ್ನನ್ನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪಾಲಿಸಿ, ಬೆಳೆಸಿದೆ. ನೀನೇ ನಮ್ಮನ್ನು ನಮ್ಮ ಮುದಿ ವಯಸ್ಸಿನಲ್ಲಿ ಕಾಪಾಡುವವನೆಂದು ನಾವು ನಂಬಿದ್ದೆವು. ನಮ್ಮನ್ನು ಬಿಟ್ಟು ನೀನು ಹೇಗೆ ತಾನೇ ಹೋಗಬಲ್ಲೆ? ನಿನ್ನನ್ನು ಕಾಣುತ್ತಲೇ ನಾನು ನನ್ನ ಹಿಂದಿನ ದುಃಖಗಳನ್ನೆಲ್ಲಾ ಮರೆತಿದ್ದೆ" ಎಂದು ನಾನಾ ವಿಧವಾಗಿ ಆಲಾಪಿಸುತ್ತಾ ಅವಳು ಅಳುತ್ತಿದ್ದಳು.

ಸೇರಿದ್ದ ಜನರೆಲ್ಲರೂ, ಅವಳನ್ನು ಸಂತೈಸುತ್ತಾ, "ಬ್ರಹ್ಮಲಿಪಿಯನ್ನು ತಪ್ಪಿಸಲು ಸಾಧ್ಯವೇ? ಅವತಾರಮಾಡಿ ಬಂದ ಶ್ರೀಹರಿಯೂ ಕಾಲವಶನೇ ಅಲ್ಲವೇ? ಇನ್ನು ಹುಲುಮಾನವರ ಗತಿಯೇನು?" ಎಂದು ನಾನಾ ವಿಧದಲ್ಲಿ ಅವಳಿಗೆ ಬುದ್ಧಿ ಹೇಳಿದರು. ಅದರಿಂದ ಅವಳ ದುಃಖ ಹೆಚ್ಚಿ, "ಔದುಂಬರ ಮೂಲ ನಿವಾಸಿಯಾದ ಶ್ರೀ ನೃಸಿಂಹ ಸರಸ್ವತಿಯವರು ನನ್ನನ್ನು ಆದರಿಸಿ, ಅನುಗ್ರಹಿಸಿ ನನಗೆ ಈ ಮಗನನ್ನು ಕೊಟ್ಟರು. ಆ ಸ್ವಾಮಿಯ ಮಾತು ಸುಳ್ಳಾಗುವುದು ಹೇಗೆ? ಈ ಮಗನೊಡನೆ ನಾನೂ ಪ್ರಾಣ ಕಳೆದುಕೊಳ್ಳುತ್ತೇನೆ. ಅವರ ಮಾತು ಸುಳ್ಳಾದರೂ ನನ್ನ ಸಾವು ಸುಳ್ಳಾಗುವುದಿಲ್ಲ" ಎಂದು ಹೇಳುತ್ತಾ, ಶ್ರೀಗುರುವನ್ನು ನೆನಸಿಕೊಂಡು, "ಸ್ವಾಮಿ, ನನ್ನನ್ನು ಇಂತಹ ದುಃಖಕ್ಕೆ ಏಕೆ ಈಡುಮಾಡಿದೆ? ನೀವು ಸತ್ಯ ವಚನರೆಂದು ನಿಮ್ಮ ಮಾತುಗಳನ್ನು ಸಂಪೂರ್ಣವಾಗಿ ನಂಬಿದ್ದೆ. ಅದು ತಪ್ಪಾಯಿತೇ? ಈಗ ಇಂತಹ ವಿಶ್ವಾಸಘಾತವೇತಕ್ಕೆ? ತ್ರಿಮೂರ್ತಿಗಳ ಅವತಾರವೆಂದು ಪ್ರಸಿದ್ಧರಾದ ಶ್ರೀ ನೃಸಿಂಹ ಸರಸ್ವತಿಗಳಲ್ಲವೇ ನೀವು? ಹಿಂದೆ ಅನೇಕ ಭಕ್ತರು ನಿಮ್ಮ ಮಾತುಗಳನ್ನು ನಂಬಿ ಉದ್ಧಾರವಾದರಲ್ಲವೇ? ನಿಮ್ಮನ್ನು ನಂಬಿದ ನಾನು ಈಗ ನಿಮಗಾಗಿಯೇ ನನ್ನ ಪ್ರಾಣಗಳನ್ನು ತ್ಯಜಿಸುವೆ. ಫಲಾಪೇಕ್ಷೆಯಿಂದ ಮಾಡಿದ ಸೇವೆ ಇನ್ನು ಸಾಕು. ನನ್ನನ್ನು ಪಿಶಾಚಿಯಿಂದ ಕಾಪಾಡಿ ಉದ್ಧರಿಸಿದ ನೀವು, ಈಗ ಹೀಗೆ ನನ್ನ ಕೈಬಿಡುವುದು ನಿಮಗೆ ಉಚಿತವೇ? ದೇವತಾ ದರ್ಶನಕ್ಕೆಂದು ದೇವಾಲಯಕ್ಕೆ ಹೋದವನ ಮೇಲೆ ದೇವಾಲಯವೇ ಕುಸಿದು ಬಿದ್ದಂತೆ ನನ್ನ ಗತಿಯಾಯಿತು. ಇನ್ನೇನು ಹೆಚ್ಚಿಗೆ ಹೇಳಲಿ, ಸ್ವಾಮಿ? ನನ್ನ ಮಗನ ಪ್ರಾಣ ರಕ್ಷಣೆ ಹೇಗೆ ಹೇಳು" ಎಂದು ಧಾರಾಕಾರವಾಗಿ ಕಣ್ಣಿರು ಸುರಿಸುತ್ತಾ, ರಾತ್ರಿಯೆಲ್ಲ ದುಃಖಿಸುತ್ತಾ ಅಲ್ಲಿಯೇ ಕುಳಿತಿದ್ದಳು.

ಮಾರನೆಯ ದಿನ ಬೆಳಗ್ಗೆ ಊರಿನ ಬ್ರಾಹ್ಮಣರೆಲ್ಲರೂ ಬಂದು, "ಅಮ್ಮಾ, ನೀನು ವ್ಯರ್ಥವಾಗಿ ಅಳುತ್ತಿದ್ದಿಯೆ. ಆಗಬೇಕಾದ್ದನ್ನು ಆ ಬ್ರಹ್ಮನೂ ಬದಲಿಸಲಾರ. ಸಂಸ್ಕಾರ ಮಾಡಲು ಶವವನ್ನು ನಮಗೆ ಕೊಡು" ಎಂದರು. ಅವರ ಮಾತುಗಳನ್ನು ಕೇಳಿ ಅವಳು ಇನ್ನೂ ಹೆಚ್ಚಾಗಿ ಅಳುತ್ತಾ, "ಅಯ್ಯಾ, ಬ್ರಾಹ್ಮಣರೇ, ಶವದ ಜೊತೆಗೆ ನನ್ನನ್ನೂ ಚಿತೆಗೇರಿಸಿ. ಇಲ್ಲದಿದ್ದರೆ ನಾನು ಶವವನ್ನು ಕೊಡುವುದಿಲ್ಲ. ಮಗನ ಜೊತೆಗೆ ನಾನೂ ಅಗ್ನಿಗೆ ಆಹುತಿಯಾಗುತ್ತೇನೆ" ಎಂದು ಹೇಳುತ್ತಾ, ಶವವನ್ನು ಇನ್ನೂ ಘಟ್ಟಿಯಾಗಿ ಅಪ್ಪಿಕೊಂಡಳು. ಅದನ್ನು ಕೇಳಿ ಬಂದಿದ್ದವರು, "ಮಗನೊಡನೆ ಅಗ್ನಿಪ್ರವೇಶ ಎಂದರೆ ಆತ್ಮಹತ್ಯೆ. ಅದು ಮಹಾಪಾಪ" ಎಂದು ಅವಳಿಗೆ ಅನೇಕ ರೀತಿಯಲ್ಲಿ ತಿಳಿಯಹೇಳಿದರು. ಆದರೂ ಅವಳು ತನ್ನ ನಿಶ್ಚಯದಿಂದ ಕದಲಲಿಲ್ಲ. ಮಧ್ಯಾಹ್ನ ಸಮಯವಾದರೂ ಅವಳು ಶವವನ್ನು ಕೊಡದೆ ಅದನ್ನು ಅಪ್ಪಿ ಕೂತಳು. ಎಲ್ಲರೂ ಅವಳ ಚರ್ಯೆಯಿಂದ ಚಿಂತಿತರಾಗಿದ್ದಾಗ, ಅಲ್ಲಿಗೆ ಒಬ್ಬ ಬ್ರಹ್ಮಚಾರಿ ಬಂದು ಅವಳಿಗೆ ತಗುನಾದ ರೀತಿಯಲ್ಲಿ ಆತ್ಮಜ್ಞಾನ ಉಪದೇಶ ಮಾಡಿದನು. ಪುತ್ರಶೋಕವನ್ನು ಪರಿಹರಿಸುವಂತಹ ಆತ್ಮಜ್ಞಾನವನ್ನು ಬೋಧಿಸಿದ ಆ ಬ್ರಹ್ಮಚಾರಿ ಇನ್ನಾರೂ ಅಲ್ಲ, ತ್ರಿಮೂರ್ತಿ ಸ್ವರೂಪನಾದ ಶ್ರೀ ನೃಸಿಂಹ ಸರಸ್ವತಿ ಗುರುವೇ! 

ಇಲ್ಲಿಗೆ ಇಪ್ಪತ್ತನೆಯ ಅಧ್ಯಾಯ ಮುಗಿಯಿತು.



Sunday, February 17, 2013

||ಶ್ರೀ ಗುರು ಚರಿತ್ರೆ - ಹತ್ತೊಂಭತ್ತನೆಯ ಅಧ್ಯಾಯ||

ಉತ್ತಮ ಶಿಷ್ಯನಾದ ನಾಮಧಾರಕನು ಸಿದ್ಧರ ಚರಣಗಳಲ್ಲಿ ನಮಿಸಿ, "ಯೋಗಿರಾಜ ಜಯವಾಗಲಿ. ನೀವು ಭಕ್ತ ಜನ ತಾರಕರು. ಭವಸಾಗರ ದಾಟಿಸುವವರು. ನನ್ನನ್ನು ಎಚ್ಚರಿಸಲೆಂದೇ ನನಗೆ ಗುರುಲೀಲೆಗಳೆಂಬ ಅಮೃತವನ್ನು ಕುಡಿಸಿದಿರಿ. ಹೇ ಸ್ವಾಮಿ, ದಯೆಯಿಟ್ಟು ನನಗೆ ಮುಂದಿನ ಗುರುಕಥೆಗಳನ್ನು ಹೇಳಿ" ಎಂದು ಪ್ರಾರ್ಥಿಸಿದನು.

ಅವನ ಮಾತಿಗೆ ಸಂತೋಷಪಟ್ಟ ಸಿದ್ಧಮುನಿಯು, ಗುರು ಮಹಿಮಾ ವೃತ್ತಾಂತಗಳನ್ನು ಹೇಳಲು ಆರಂಭಿಸಿದರು. "ಪ್ರಿಯ ಶಿಷ್ಯ ನಾಮಧಾರಕ, ಮುಂದಿನ ಗುರುಚರಿತ್ರೆಯನ್ನು ಹೇಳುತ್ತೇನೆ. ಸಮಾಧಾನ ಚಿತ್ತನಾಗಿ ಕೇಳು. ಔದುಂಬರ ವೃಕ್ಷದ ಕೆಳಗೆ ಶ್ರೀಗುರುವು ನಿವಾಸ ಮಾಡಿದರು" ಎನ್ನುತ್ತಲೇ, ನಾಮಧಾರಕನು, "ಅನೇಕ ಪುಣ್ಯ ವೃಕ್ಷಗಳು ಇರಲು ಶ್ರೀಗುರುವು ಅದೇಕೆ ಔದುಂಬರ ವೃಕ್ಷವನ್ನೇ ಆರಿಸಿಕೊಂಡರು? ವೇದ ಶಾಸ್ತ್ರ ಪುರಾಣಾದಿಗಳಲ್ಲಿ ಅಶ್ವತ್ಥವೃಕ್ಷವು ಬಹು ಪ್ರಸಿದ್ಧವಾದುದಲ್ಲವೇ? ಶ್ರೀಗುರುವಿಗೆ ಔದುಂಬರ ವೃಕ್ಷದಲ್ಲಿ ಅಷ್ಟೊಂದು ಆಸಕ್ತಿ ಹೇಗೆ ಉಂಟಾಯಿತು? ಅದಕ್ಕೆ ಕಾರಣವೇನು?" ಎಂದು ಕೇಳಿದನು.

ಅದಕ್ಕೆ ಸಿದ್ಧರು, "ನಾಮಧಾರಕ, ನೀನು ಕೇಳಿದ ಪ್ರಶ್ನೆಗೆ ಉತ್ತರ ಹೇಳುತ್ತೇನೆ ಕೇಳು. ಹಿರಣ್ಯಕಶಿಪುವನ್ನು ಸಂಹರಿಸಲು ನೃಸಿಂಹಸ್ವಾಮಿ ಈ ಔದುಂಬರದಲ್ಲಿಯೇ ಅವತರಿಸಿದನು. ಹಾಗೆ ಕ್ರುದ್ಧನಾಗಿ ಅವತರಿಸಿದ ವಿಷ್ಣು ಹಿರಣ್ಯಕಶಿಪುವಿನ ಉದರವನ್ನು ತನ್ನ ಉಗುರುಗಳಿಂದ ಬಗೆದು ಅವನ ಕರುಳು ತೆಗೆದು ಮಾಲೆಯಂತೆ ಕೊರಳಲ್ಲಿ ಧರಿಸಿ, ನಾರದ ಕಶ್ಯಪ ಪ್ರಹ್ಲಾದಾದಿ ಭಕ್ತರ ಮಾತುಗಳನ್ನು ಸತ್ಯಗೊಳಿಸಿದನು. ಆ ರಾಕ್ಷಸನ ಹೊಟ್ಟೆ ಅಗೆದು ಕರುಳು ಈಚೆ ತೆಗೆದಾಗ, ಅವನ ಹೊಟ್ಟೆಯಲ್ಲಿದ್ದ ಕಾಲಕೂಟದಂತಹ ವಿಷವು, ನೃಸಿಂಹ ಸ್ವಾಮಿಯ ಉಗುರುಗಳಿಗೆ ಅಂಟಿಕೊಂಡು, ಸಹಿಸಲಸಾಧ್ಯವಾದಂತಹ ಉರಿ ಉಂಟಾಯಿತು. ಆ ವೇದನೆಯನ್ನು ತಡೆಯಲಾರದ ನೃಸಿಂಹಸ್ವಾಮಿಯ ತಾಪವನ್ನು ಶಾಂತಗೊಳಿಸಲು, ಶ್ರೀ ಮಹಾಲಕ್ಷ್ಮಿ, ಔದುಂಬರದ ಹಣ್ಣುಗಳನ್ನು ತಂದು ಅವನ ಉಗುರುಗಳಿಗೆ ಹಚ್ಚಿದಳು. ತಕ್ಷಣವೇ ವಿಷದಿಂದುಂಟಾದ ಉರಿಯು ಶಮನವಾಗಿ, ನೃಸಿಂಹಸ್ವಾಮಿಗೆ ಶಾಂತಿಯುಂಟಾಯಿತು. ಶಾಂತನಾದ ಆ ಉಗ್ರನೃಸಿಂಹನು, ಶ್ರೀಲಕ್ಷ್ಮಿಯನ್ನು ಆಲಂಗಿಸಿ, ಸಂತುಷ್ಟನಾದನು. ಆಗ ಆ ದೇವದಂಪತಿಗಳು, ವಿಷದ ಉಗ್ರತೆಯನ್ನು ಶಾಂತಗೊಳಿಸಿದ ಔದುಂಬರಕ್ಕೆ, "ಎಲೈ ಔದುಂಬರವೇ, ಕಲ್ಪವೃಕ್ಷದಂತೆ ಸದಾ ಫಲಭರಿತವಾಗಿರು. ನಿನ್ನನ್ನು ಶ್ರದ್ಧಾ ಭಕ್ತಿಗಳಿಂದ ಸೇವಿಸುವವರ ಇಷ್ಟಾರ್ಥ ಸಿದ್ಧಿಯಾಗಲಿ, ಅವರ ಪಾಪಗಳೂ ಕ್ಷಯವಾಗಲಿ. ನಿನ್ನ ದರ್ಶನದಿಂದಲೇ ವಿಷದ ತೀವ್ರತೆ ಶಮನವಾಗುತ್ತದೆ. ನಿನ್ನ ನಿಜವಾದ ಭಕ್ತರು ಸದಾ ಶಾಂತಿ ಸಂತೋಷಗಳಿಂದ ಆರೋಗ್ಯವಂತರಾಗಿ ಜೀವಿಸುತ್ತಾರೆ. ನಿಷ್ಠೆಯಿಂದ ನಿನ್ನನ್ನು ಸೇವಿಸುವವರು ಪುತ್ರವಂತರಾಗುತ್ತಾರೆ. ದೀನರು ಶ್ರೀಮಂತರಾಗುತ್ತಾರೆ. ನಿನ್ನ ಛಾಯೆಯಲ್ಲಿ ಸ್ನಾನವನ್ನಾಚರಿಸಿದವರು ಭಾಗೀರಥಿಯಲ್ಲಿ ಸ್ನಾನ ಮಾಡಿದ ಫಲವನ್ನು ಪಡೆಯುತ್ತಾರೆ. ನಿನ್ನ ನೆರಳಿನಲ್ಲಿ ಜಪತಪಗಳನ್ನಾಚರಿಸಿದವರು ಅನಂತವಾದ ಫಲಗಳನ್ನು ಪಡೆಯುತ್ತಾರೆ. ಶ್ರದ್ಧಾ ಭಕ್ತಿಗಳಿಂದ ನಿನ್ನನ್ನು ಪೂಜಿಸಿದವರು ಬ್ರಹ್ಮಹತ್ಯಾದಿ ಪಾಪಗಳಿಂದಲೂ ಮುಕ್ತರಾಗುತ್ತಾರೆ. ಸುಸಂಕಲ್ಪರಾಗಿ ನಿನ್ನನ್ನು ನಂಬಿ ಪೂಜಿಸಿ ಭಜಿಸುವವರ ಇಷ್ಟಕಾಮ್ಯಗಳು ಪೂರ್ಣವಾಗುತ್ತವೆ. ಲಕ್ಷ್ಮಿದೇವಿ ಸಹಿತನಾದ ನಾನು ಮಿಕ್ಕ ದೇವತೆಗಳೊಡನೆ ನಿನ್ನಲ್ಲಿ ನೆಲಸಿರುತ್ತೇನೆ" ಎಂದು ಅನೇಕ ವರಗಳನ್ನಿತ್ತರು. ಆದ್ದರಿಂದಲೇ ಕಲಿಯುಗದಲ್ಲಿ ಔದುಂಬರ ವೃಕ್ಷವು ಕಲ್ಪವೃಕ್ಷಕ್ಕೆ ಸಮಾನವಾದದ್ದು. ಅದೇ ಕಾರಣದಿಂದಲೇ ಶ್ರೀಗುರುವು ಕೂಡಾ ಔದುಂಬರದ ನೆರಳಿನಲ್ಲಿ ನೆಲಸಿದರು. ಶ್ರೀಗುರುವು ನೆಲೆಸಿದ್ದುದರಿಂದ ಅದು ಸರ್ವ ಕಾಮಫಲಪ್ರದವಾಯಿತು.

ತ್ರಿಮೂರ್ತ್ಯವತಾರವಾದ ಶ್ರೀಗುರುವು ಮಾನವ ರೂಪದಲ್ಲಿ ಅಲ್ಲಿ ಗುಪ್ತರಾಗಿ ನೆಲೆಸಿದ್ದಾಗ, ಪ್ರತಿದಿನವೂ ಅಲ್ಲಿಗೆ ಅರವತ್ತನಾಲ್ಕು ಯೋಗಿನಿಯರು ಅಮರೇಶ್ವರದಿಂದ ಬಂದು ಶ್ರೀಗುರುವನ್ನು ಪೂಜಿಸಿಕೊಳ್ಳುತ್ತಿದ್ದರು. ಅವರು ಶ್ರೀಗುರುವನ್ನು ತಮ್ಮ ಧಾಮಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಸರ್ವೋಪಚಾರಗಳಿಂಡ ಪೂಜೆ ಮಾಡಿ, ಭಿಕ್ಷೆ ನೀಡುತ್ತಿದ್ದರು. ಭಿಕ್ಷೆಯನ್ನು ಮುಗಿಸಿ ಶ್ರೀಗುರುವು ತನ್ನ ಆಶ್ರಯವಾದ ಔದುಂಬರ ಮೂಲಕ್ಕೆ ಹಿಂತಿರುಗುತ್ತಿದ್ದರು. ಆ ಊರಿನಲ್ಲಿದ್ದ ವಿಪ್ರರು, ಔದುಂಬರದ ಮೂಲದಲ್ಲಿ ನೆಲೆಸಿರುವ ಯತಿಯು ತಮ್ಮಲ್ಲಿ ಯಾರ ಮನೆಗೂ ಭಿಕ್ಷಕ್ಕೆ ಬರದೆ ಇರುವುದನ್ನು ಗಮನಿಸಿ, "ಈ ಯತಿಯು ಭಿಕ್ಷೆಗೆಂದು ಊರಿನೊಳಕ್ಕೆ ಬರುತ್ತಿಲ್ಲ. ಆ ಕಾಡಿನಲ್ಲಿ ಊಟವಿಲ್ಲದೆ ಹೇಗೆ ಇರುತ್ತಾರೆ?" ಎಂದು ಯೋಚಿಸುತ್ತಾ, ಅವರನ್ನು ಗಮನಿಸಿ, ಅವರು ಹೇಗೆ ಭಿಕ್ಷೆ ಮಾಡುತ್ತಿದ್ದಾರೆ ಎಂಬುದನ್ನು ತಮಗೆ ತಿಳಿಸುವಂತೆ ಒಬ್ಬ ಬ್ರಾಹ್ಮಣನನ್ನು ನೇಮಿಸಿದರು. ಗುರುವಿನ ಚರ್ಯೆಗಳನ್ನು ಗಮನಿಸುತ್ತಿದ್ದ ಅವನಿಗೆ ಮಧ್ಯಾಹ್ನ ಸಮಯದಲ್ಲಿ ಬಹಳ ಭಯವಾಗುತ್ತಿತ್ತು. ಶ್ರೀಗುರುವಿನ ಅಂತರಂಗ ಚರ್ಯೆಗಳನ್ನು ಪರೀಕ್ಷೆ ಮಾಡುವುದು, ಅವನಿಗೆ ಮೃತ್ಯು ಭಯವನ್ನುಂಟುಮಾಡುತ್ತಿತ್ತು. ಅದರಿಂದ ಅವನು ಭೀತನಾಗಿ, ತನಗೇನಾಗುವುದೋ ಎಂದು ಹೆದರಿ, ಊರನ್ನೇ ಬಿಟ್ಟು ಓಡಿಹೋದನು.

ಒಂದು ದಿನ ಅಲ್ಲಿ ಹೊಲ ಕಾಯುತ್ತಿದ್ದ, ಗಂಗಾನುಜನೆಂಬುವವನೊಬ್ಬನು, ನದಿ ಮಧ್ಯದಿಂದ ಯೋಗಿನಿಯರು ಬರುವುದನ್ನು ಕಂಡನು. ಆ ದಿವ್ಯ ಸ್ತ್ರೀಯರು ಜಲ ಮಧ್ಯದಲ್ಲಿ ದಾರಿ ಮಾಡಿಕೊಂಡು ಬರುವುದನ್ನು ಕಂಡ ಅವನಿಗೆ ಆಶ್ಚರ್ಯವಾಗಿ ಅವರನ್ನೇ ಗಮನಿಸುತ್ತಾ ನಿಂತನು. ಅವರು ನದಿಯಿಂದ ಈಚೆಗೆ ಬಂದು ನೇರವಾಗಿ ಶ್ರೀಗುರುವಿದ್ದ ಔದುಂಬರದ ಬಳಿಗೆ ಹೋಗಿ, ಅಲ್ಲಿ ಶ್ರೀಗುರುವಿಗೆ ಪೂಜೆ ಅರ್ಪಿಸಿ, ಅವರನ್ನು ಕರೆದುಕೊಂಡು ಮತ್ತೆ ತಾವು ಬಂದ ದಾರಿಯಲ್ಲಿಯೇ ಹೋದರು. ಸ್ವಲ್ಪ ಕಾಲವಾದ ಮೇಲೆ ಅವನು ಶ್ರೀಗುರುವು ಹಿಂತಿರುಗಿ ಬಂದು ಯಥಾ ಪ್ರಕಾರವಾಗಿ ಔದುಂಬರ ಮೂಲದಲ್ಲಿ ಕುಳಿತುದನ್ನು ಕಂಡನು. ಮಾರನೆಯ ದಿನವೂ ಅ ಯೋಗಿನಿಯರು ಬಂದು ಶ್ರೀಗುರುವನ್ನು ಕರೆದುಕೊಂಡು ಹೋದರು. ಕುತೂಹಲಗೊಂಡ ಗಂಗಾನುಜನೂ ಅವರನ್ನು ಹಿಂಬಾಲಿಸಿ ಹೋದನು. ಆ ಯೋಗಿನಿಯರು ಗುರುವನ್ನು ಒಂದು ರತ್ನ ಖಚಿತವಾದ ಗೋಪುರಗಳಿಂದ ಕೂಡಿದ ಪುರದೊಳಕ್ಕೆ ಕರೆದುಕೊಂಡು ಹೋದರು. ಅಮರಾವತಿಯಂತೆ ಕಂಗೊಳಿಸುತ್ತಿದ್ದ ಆ ಪುರದಲ್ಲಿ ಶ್ರೀಗುರುವಿಗೆ ನೀರಾಜನಾದಿಗಳನ್ನು ಕೊಟ್ಟು, ರತ್ನ ಸಿಂಹಾಸನದ ಮೇಲೆ ಕೂಡಿಸಿ, ಷೋಡಶೋಪಚಾರ ಪೂಜೆಗಳನ್ನು ಮಾಡಿ ಭಿಕ್ಷೆಯನ್ನು ಕೊಟ್ಟರು. ಶ್ರೀಗುರುವು ಅವರಿತ್ತ ಭಿಕ್ಷೆಯನ್ನು ಸ್ವೀಕರಿಸಿ, ಅಲ್ಲಿಂದ ಹಿಂತಿರುಗಿ, ಔದುಂಬರ ವೃಕ್ಷ ಮೂಲಕ್ಕೆ ಹಿಂತಿರುಗಿದರು. ದಾರಿಯಲ್ಲಿ ಅವರು ಗಂಗಾನುಜನನ್ನು ನೋಡಿ, "ನೀನೇಕೆ ಇಲ್ಲಿಗೆ ಬಂದೆ?" ಎಂದು ಕೇಳಿದರು. ಅವನು ಹೆದರಿ, "ಸ್ವಾಮಿ ನನ್ನ ಹೆಸರು ಗಂಗಾನುಜ. ಕುತೂಹಲದಿಂದ ಏನು ನಡೆಯುತ್ತಿದೆ ಎಂದು ನೋಡಲು ನಿಮ್ಮ ಹಿಂದೆ ಬಂದೆ. ನನ್ನ ತಪ್ಪನ್ನು ಕ್ಷಮಿಸಿ. ನೀವು ನಿಜವಾಗಿಯೂ ಆ ಪಾರ್ವತೀ ಪತಿಯೇ! ನನ್ನ ಈ ಅಪರಾಧವನ್ನು ಕ್ಷಮಿಸಿ, ನನ್ನನ್ನು ಉದ್ಧರಿಸಿ" ಎಂದು ದೀನನಾಗಿ ಬೇಡಿಕೊಂಡನು. ಅವನ ಮಾತಿಗೆ ಶ್ರೀಗುರುವು, "ಗಂಗಾನುಜ, ಇಂದಿಗೆ ನಿನ್ನ ದಾರಿದ್ರ್ಯವೆಲ್ಲಾ ನಾಶವಾಯಿತು. ನೀನು ಕೋರಿದ್ದು ನಿನಗೆ ಲಭಿಸುತ್ತದೆ. ಆದರೆ ನೀನು ಇಲ್ಲಿ ನೋಡಿದ್ದನ್ನು ಯಾರಿಗೂ ಹೇಳಬೇಡ. ಹೇಳಿದರೆ ನಿನಗೆ ಸಾವು ಬರುತ್ತದೆ. ನಾನಿಲ್ಲಿರುವವರೆಗೂ ಅದು ಯಾರಿಗೂ ತಿಳಿಯಬಾರದು. ನನ್ನ ಅನುಗ್ರಹದಿಂದ ನೀನು ಸದ್ಗತಿಯನ್ನು ಪಡೆಯುತ್ತೀಯೆ" ಎಂದು ಹೇಳಿ, ಅವರು ಔದುಂಬರವನ್ನು ಸೇರಿದರು. ಗಂಗಾನುಜನೂ ಅವರನ್ನು ಹಿಂಬಾಲಿಸಿ ಹೊರಟು, ಅವರ ಅನುಮತಿಯನ್ನು ಪಡೆದು ತನ್ನ ಮನೆಗೆ ಹೋದನು. ಗುರುವಿನ ಅನುಗ್ರಹದಿಂದ ಅವನಿಗೆ ಹೊಲದಲ್ಲಿ ನಿಧಿಯೊಂದು ದೊರೆಯಿತು. ಅಂದಿನಿಂದ ಅವನು ತನ್ನ ಹೆಂಡತಿಯೊಡನೆ ಪ್ರತಿ ದಿನವೂ ಶ್ರೀಗುರುವಿನ ಸನ್ನಿಧಾನಕ್ಕೆ ಬಂದು ಅವರ ಸೇವೆ ಮಾಡುತ್ತಾ ಆನಂದದಿಂದಿದ್ದನು.

ಒಂದುಸಲ, ಗಂಗಾನುಜ, ಮಾಘಮಾಸದ ಹುಣ್ಣಿಮೆಯಂದು, ಶ್ರೀಗುರುವಿನ ಬಳಿಗೆ ಬಂದು, ನಮಸ್ಕರಿಸಿ, "ಹೇ ಸದ್ಗುರು, ಮಾಘಮಾಸದಲ್ಲಿ ಪ್ರಯಾಗ, ಕಾಶಿ ಕ್ಷೇತ್ರಗಳಲ್ಲಿ ಸ್ನಾನ ಮಾಡಿದರೆ ಮಹಾ ಪುಣ್ಯವುಂಟಾಗುವುದೆಂದು ಊರಿನಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದರು. ಪ್ರಯಾಗ ಕಾಶಿ ಕ್ಷೇತ್ರಗಳು ಎಲ್ಲಿವೆ? ಅಲ್ಲಿ ಸ್ನಾನ ಮಾಡುವುದರಿಂದ ಬರುವ ಫಲವೇನು? ಎಂಬುದು ನನಗೆ ತಿಳಿಯದು. ದಯೆಯಿಟ್ಟು ಅದನ್ನು ನನಗೆ ತಿಳಿಯುವಂತೆ ಹೇಳಿ" ಎಂದು ಕೇಳಿಕೊಂಡನು. "ತ್ರಿಸ್ಥಲಿ ಎಂದು ಕರೆಯಲ್ಪಡುವ ಪ್ರಯಾಗ, ಕಾಶಿ, ಗಯ ಎಂಬುವು ಬಹಳ ಪುಣ್ಯಪ್ರದವಾದ ಕ್ಷೇತ್ರಗಳು. ಇಲ್ಲಿ ಕೃಷ್ಣಾ ಪಂಚ ನದಿಸಂಗಮವೇ ಪ್ರಯಾಗ. ಯುಗಾಲಯವೇ ಕಾಶಿ. ಕೊಲ್ಹಾಪುರವೇ ಗಯಾ. ದಕ್ಷಿಣದಲ್ಲಿ ಇವು ಮೂರೂ ಬಹು ಪುಣ್ಯದಾಯಿಗಳು. ತ್ರಿಸ್ಥಲಿಯನ್ನು ನೀನು ನೋಡಬೇಕೆಂದರೆ ನಿನಗೆ ತೋರಿಸುತ್ತೇನೆ" ಎಂದು ಹೇಳಿ ಗಂಗಾನುಜನನ್ನು ತಮ್ಮ ಪಾದುಕೆಗಳನ್ನು ಹಿಡಿದುಕೊಳ್ಳಲು ಹೇಳಿ, ವ್ಯಾಘ್ರ ಚರ್ಮಾಸೀನರಾದ ಶ್ರೀಗುರುವು ಅವನನ್ನು ಬೆಳಗ್ಗೆ ಪ್ರಯಾಗಕ್ಕೆ ಕರೆದುಕೊಂಡು ಹೋಗಿ, ಅಲ್ಲಿಸ್ನಾನಾದಿಗಳನ್ನು ಆಚರಿಸಿ, ಮಧ್ಯಾಹ್ನದಲ್ಲಿ ಕಾಶಿಯಲ್ಲಿ ವಿಶ್ವೇಶ್ವರನ ದರ್ಶನ ಮಾಡಿ, ಅಲ್ಲಿಂದ ಗಯಾ ಕ್ಷೇತ್ರಕ್ಕೆ ಹೋಗಿ, ಸಾಯಂಕಾಲದ ವೇಳೆಗೆ ಮತ್ತೆ ತಮ್ಮ ಸ್ವಸ್ಥಾನಕ್ಕೆ ಕರೆದುಕೊಂಡು ಬಂದರು. ಗುರುವಿನ ಅನುಗ್ರಹದಿಂದ ಗಂಗಾನುಜ ತ್ರಿಸ್ಥಲಿ ದರ್ಶನಮಾಡಿ, ವಿಸ್ಮಿತನಾಗಿ, ಸಂತೋಷಗೊಂಡನು.

ಈ ಘಟನೆಯಿಂದ ಗುಪ್ತವಾಗಿದ್ದ ತಮ್ಮ ಇರುವಿಕೆಯು ಪ್ರಕಟಗೊಂಡಿತು ಎಂದು ಭಾವಿಸಿ ಶ್ರೀಗುರುವು ತಾವು ಇನ್ನು ಆ ಪ್ರದೇಶದಲ್ಲಿ ನಿಲ್ಲಬಾರದು ಎಂದುಕೊಂಡು, ತಾವಿದ್ದ ಸ್ಥಾನ ಮಹಿಮೆಯನ್ನು ಪ್ರಕಟಗೊಳಿಸಿ, ಅಮರೇಶ್ವರಸ್ವಾಮಿ ಸನ್ನಿಧಿಯನ್ನು ಬಿಟ್ಟು ಹೋಗಲು ನಿಶ್ಚಯಿಸಿದರು. ಅದನ್ನು ತಿಳಿದ ಯೋಗಿನಿಯರು ಶ್ರೀಗುರುವಿನ ಬಳಿಗೆ ಬಂದು, "ಸ್ವಾಮಿ, ನಮ್ಮನ್ನು ಬಿಟ್ಟು ಹೇಗೆ ಹೋಗುತ್ತಿದ್ದೀರಿ? ಈ ರೀತಿ ನಮ್ಮನ್ನು ಉಪೇಕ್ಷಿಸುವುದು ನಿಮಗೆ ತರವೇ? ನೀವು ನಮ್ಮನ್ನು ಬಿಟ್ಟು ಹೋಗಲು ನಾವು ಒಪ್ಪುವುದಿಲ್ಲ" ಎಂದು ದೀನರಾಗಿ ಬೇಡಿಕೊಳ್ಳಲು, ಭಕ್ತವತ್ಸಲನಾದ ಶ್ರೀಗುರುವು, "ಈ ಔದುಂಬರ ವೃಕ್ಷ ಮೂಲದಲ್ಲಿ ನಾವು ಸದಾ ನೆಲಸಿರುತ್ತೇವೆ. ಆದರೆ ಪ್ರಕಟವಾಗಿಯಲ್ಲ. ನೀವೂ ಇಲ್ಲೇ ನೆಲೆಯಾಗಿ. ಇಲ್ಲಿ ಅನ್ನಪೂರ್ಣೆಯೂ ನೆಲಸಿರುತ್ತಾಳೆ. ಅಮರಪುರಕ್ಕೆ ಪಶ್ಚಿಮದಲ್ಲಿರುವ ಈ ಔದುಂಬರವೇ ನಮ್ಮ ನಿವಾಸ ಸ್ಥಾನವು. ಈ ಸ್ಥಳ ಸಕಲರಿಗೂ ಪೂಜ್ಯ ಸ್ಥಾನವಾಗುತ್ತದೆ. ನೀವೆಲ್ಲರೂ ಇಷ್ಟಾರ್ಥ ಪೂರಯಿಸುವವರಾಗುತ್ತೀರಿ. ನಿಮ್ಮನ್ನೂ, ಈ ಔದುಂಬರದ ಮೂಲದಲ್ಲಿ ಇರುವ ಪಾದುಕೆಗಳನ್ನೂ ಪೂಜಿಸಿದ ಜನರಿಗೆ ಅವರ ಕೋರಿಕೆಗಳು ಸಿದ್ಧಿಸುತ್ತವೆ. ಇಲ್ಲಿ ಬ್ರಾಹ್ಮಣರ ಆರಾಧನೆ ಮಾಡುವವರ ಕಾಮಿತಾರ್ಥಗಳು ನೆರವೇರುತ್ತವೆ. ಪಾಪನಾಶಿನಿ, ಕಾಮ್ಯತೀರ್ಥ, ಸಿದ್ಧತೀರ್ಥಗಳಲ್ಲಿ ಸ್ನಾನ ಮಾಡಿ, ಈ ಔದುಂಬರ ವೃಕ್ಷ ಸಹಿತ ನಮಗೆ ಏಳುಸಲ ಅಭಿಷೇಕ ಮಾಡಿದರೆ ವಯಸ್ಸಾದ ಬಂಜೆಯೂ ಪುತ್ರವತಿಯಾಗುತ್ತಾಳೆ. ಈ ಪ್ರದೇಶದಲ್ಲಿ ಸ್ನಾನವಾಚರಿಸಿದ ಮಾತ್ರಕ್ಕೇ ಬ್ರಹ್ಮ ಹತ್ಯಾದಿ ಪಾಪಗಳೂ ನಾಶವಾಗುತ್ತವೆ. ಗ್ರಹಣ ಸಮಯದಲ್ಲಿ ಇಲ್ಲಿ ಸ್ನಾನ ಮಾಡುವವರಿಗೆ ಅಶ್ವಮೇಧಯಾಗ ಮಾಡಿದರೆ ಉಂಟಾಗುವ ಫಲಕ್ಕಿಂತಲೂ ಅಧಿಕವಾದ ಫಲವುಂಟಾಗುತ್ತದೆ. ಅಮಾವಾಸ್ಯೆ ವ್ಯತಿಪಾತ ಯೋಗದಂತಹ ಪರ್ವದಿನಗಳಲ್ಲಿ ಇಲ್ಲಿ ಸ್ನಾನ ಮಾಡಿದರೆ ಸಾವಿರ ಗೋವುಗಳನ್ನು ದಾನ ಮಾಡಿದ ಫಲ ಉಂಟಾಗುತ್ತದೆ. ಇಲ್ಲಿ ಒಬ್ಬ ಬ್ರಾಹ್ಮಣನಿಗೆ ಭೋಜನವಿಟ್ಟರೆ ಕೋಟಿ ಬ್ರಾಹ್ಮಣರಿಗೆ ಊಟವಿಟ್ಟ ಫಲ ದೊರಕುವುದು. ಔದುಂಬರದ ಮೂಲದಲ್ಲಿ ಮಾಡಿದ ಒಂದು ಜಪ ಒಂದು ಕೋಟಿಸಲ ಜಪಮಾಡಿದ ಫಲವನ್ನು ಕೊಡುವುದು. ನಿರ್ಮಲ ಮನಸ್ಸಿನಿಂದ ಮಾಡಿದ ಹೋಮ ಫಲವೂ ಅಂತಹುದೇ! ಏಕಾದಶಿಯಂದು ಇಲ್ಲಿ ರುದ್ರಪಾದಗಳನ್ನು ಪೂಜಿಸಿದರೆ ಅತಿರುದ್ರಾಭಿಷೇಕ ಮಾಡಿದ ಫಲವುಂಟಾಗುತ್ತದೆ. ನಿರ್ಮಲ ಮನಸ್ಕರಾಗಿ, ಶ್ರದ್ಧಾಭಕ್ತಿಗಳಿಂದ ಮಾಡಿದ ಔದುಂಬರದ ಪ್ರದಕ್ಷಿಣೆ ವಾಜಪೇಯ ಯಾಗ ಮಾಡಿದ ಫಲವನ್ನು ಕೊಡುತ್ತದೆ. ಅಂಗಹೀನರು, ರೋಗಿಗಳು ಈ ವೃಕ್ಷಕ್ಕೆ ಒಂದು ಲಕ್ಷ ಸಲ ಪ್ರದಕ್ಷಿಣೆ ಮಾಡಿದರೆ ಅವರ ಶರೀರವು ದೇವಶರೀರ ಸಮಾನವಾಗುವುದು. ಕಲ್ಪತರುವೇ ಇರುವಂತಹ ಈ ಪ್ರದೇಶದಲ್ಲಿ ಲೌಕಿಕರ ದೃಷ್ಟಿಗೆ ಬೀಳದೆ ನಾವು ಸದಾ ಅಗೋಚರರಾಗಿ ಇಲ್ಲಿ ನೆಲಸಿರುತ್ತೇವೆ" ಎಂದು ಯೋಗಿನಿಗಳಿಗೆ ಹೇಳಿ, ಶ್ರೀಗುರುವು ಅಲ್ಲಿಂದ ಅದೃಶ್ಯರಾದರು. ಅವರೇ ಹೇಳಿದಂತೆ ಈಗಲೂ ಅವರು ಅಗೋಚರರಾಗಿ ಅಲ್ಲಿಯೇ ಇದ್ದುಕೊಂಡು, ಭೀಮಾ ಅಮರಜಾ ನದಿಯ ಸಂಗಮದಲ್ಲಿರುವ ಗಂಧರ್ವಪುರವನ್ನು ಸೇರಿಕೊಂಡರು. ಜಗನ್ನಾಥನೂ, ಸರ್ವಗತನೂ, ಅವ್ಯಯನೂ ಆದರೂ ಶ್ರೀಗುರುವು ಸದಾ, ಅಗೋಚರನಾಗಿ, ಅಲ್ಲಿ ಇರುತ್ತಾನೆ. ಪ್ರತ್ಯಕ್ಷವಾಗಿ ಆವರು ಗಂಧರ್ವಪುರದಲ್ಲಿ ಇದ್ದಾರೆ. ಹೇ ನಾಮಧಾರಕ, ಕೃಷ್ಣಾತೀರದಲ್ಲಿ ಶ್ರೀಗುರುವಿನ ಮಹಿಮೆ ಇಂತಹುದು’ ಎಂದು ನಾಮಧಾರಕನಿಗೆ ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಹತ್ತೊಂಭತ್ತನೆಯ ಅಧ್ಯಾಯ ಮುಗಿಯಿತು. 



||ಶ್ರೀ ಗುರು ಚರಿತ್ರೆ - ಹದಿನೆಂಟನೆಯ ಅಧ್ಯಾಯ||

"ಸ್ವಾಮಿ, ಸಿದ್ಧಮುನಿ, ಭವಾರ್ಣವ ತಾರಕ, ಗುರುಪಾದಾಂಬುಜ ಧ್ಯಾನವನ್ನು ಎಷ್ಟು ಮಾಡಿದರೂ ತೃಪ್ತಿಯಾಗುವುದಿಲ್ಲ. ಎಂದು ನಾಮಧಾರಕನು ಭಕ್ತಿ, ನಮ್ರತೆಗಳಿಂದ ಸಿದ್ಧಮುನಿಯ ಪಾದಗಳಿಗೆರಗಿದನು. ಸಿದ್ಧಮುನಿಯು ಗುರುಚರಿತ್ರೆಯನ್ನು ಮುಂದುವರೆಸಿದರು.

"ಅಯ್ಯಾ, ಶಿಷ್ಯ ಶಿಖಾಮಣಿ, ಶ್ರೀಗುರುಚರಣಗಳಲ್ಲಿ ನೀನು ಲೀನನಾಗಿದ್ದೀಯೆ. ನಿನ್ನ ಪ್ರಶ್ನೆಗಳಿಂದ ನನ್ನ ಮನಸ್ಸು ಗುರುವಿನಲ್ಲಿ ಮತ್ತಷ್ಟು ಸ್ಥಿರವಾಯಿತು. ಭಿಲ್ಲವಟಿಯಲ್ಲಿ ನಡೆದ ಗುರುಲೀಲೆಯನ್ನು ಹೇಳಿದೆನಲ್ಲವೇ? ಮುಂದಿನ ಚರಿತ್ರೆಯನ್ನು ಹೇಳುತ್ತೇನೆ. ಕೇಳು. ಶ್ರೀಗುರುವು ಆಲ್ಲಿ ಅದೃಶ್ಯರೂಪನಾಗಿ ನೆಲೆಗೊಂಡು, ಅಲ್ಲಿಂದ ಮುಂದಕ್ಕೆ ಹೊರಟನು. ವರುಣ ಸಂಗಮಕ್ಕೆ ಹೋಗಿ, ಅಲ್ಲಿ ದಕ್ಷಿಣ ಕಾಶಿಯೆಂದು ಪ್ರಸಿದ್ಧವಾದ ತೀರ್ಥವನ್ನು ಸೇರಿದನು. ಹೀಗೆ ಕೃಷ್ಣಾತೀರ ತೀರ್ಥಗಳನ್ನು ಪಾವನಗೊಳಿಸುತ್ತಾ, ಕೃಷ್ಣಾ ಪಂಚನದೀ ಸಂಗಮದಲ್ಲಿ ಹನ್ನೆರಡು ವರ್ಷ ನಿಂತನು. ಅದು ಪ್ರಯಾಗಕ್ಕೆ ಸಮಾನವಾದ ಸಂಗಮ ಕ್ಷೇತ್ರ. ಕಾಶಿಕ್ಷೇತ್ರಕ್ಕೆ ಸಮಾನವಾದ ತೀರ್ಥ. ಆ ಪವಿತ್ರ ಸ್ಥಳದಲ್ಲಿ ಅನೇಕ ತೀರ್ಥಗಳು ಇವೆ. ಅದರಿಂದಲೇ ಶ್ರೀಗುರುವು ಅಲ್ಲಿ ನಿಂತನು. ಪುರಾಣಗಳಲ್ಲಿಯೂ ಆ ಸ್ಥಳ ಪಂಚಗಂಗಾ ತೀರವೆಂದು ಪ್ರಸಿದ್ಧವಾಗಿದೆ. ಅಲ್ಲಿ ಶಿವ, ಭದ್ರ, ಭೋಗವತಿ, ಕುಂಭಿ, ಸರಸ್ವತಿ ಎನ್ನುವ ಐದು ನದಿಗಳು ಬಂದು ಕೃಷ್ಣಾ ನದಿಯೊಡನೆ ಸೇರುತ್ತವೆ. ಅದರಿಂದಲೇ ಅದು ಪ್ರಯಾಗಕ್ಕಿಂತಲೂ ಅಧಿಕ ಪುಣ್ಯಪ್ರದವಾದ ಸ್ಥಳ ಎಂದು ಹೇಳಲ್ಪಟ್ಟಿದೆ. ಅದರ ಪೂರ್ವದಲ್ಲಿ ಅಮರಪುರವೆಂಬ ಊರೊಂದಿದೆ. ಅದು ದಕ್ಷಿಣ ಪ್ರಯಾಗ ಎಂದು ಪ್ರಸಿದ್ಧಗೊಂಡ ಮನೋಹರವಾದ ಕ್ಷೇತ್ರ. ಕಲ್ಪವೃಕ್ಷವೆಂದೇ ಹೇಳುವ ಔದುಂಬರವೃಕ್ಷ, ಅಮರೇಶ್ವರ ಇರುವ ಆ ಸ್ಥಳವು ಷಟ್ಕಾಲ ತೀರ್ಥವೆಂದು ಪ್ರಖ್ಯಾತವಾಗಿದೆ. ಪಂಚನದಿಗಳೊಡನೆ ಮಿಲನವಾದ ಕೃಷ್ಣಾನದಿಯು ಗಂಗಾನದಿಗೆ ಸಮಾನವಾದದ್ದು. ಅಮರೇಶ್ವರನ ಸನ್ನಿಧಿಯಲ್ಲಿ ಅರವತ್ತನಾಲ್ಕು ಯೋಗಿನಿಯರಿದ್ದಾರೆ. ಅಂತಹ ಶಕ್ತಿ ತೀರ್ಥವು ಲೋಕಪಾವನೆಯೆಂಬುದು ಅನ್ವರ್ಥವಾಗಿದೆ. ಸುಂದರವಾದ ಅಮರೇಶ್ವರ ಲಿಂಗದಲ್ಲಿ ವಿಶ್ವನಾಥನೇ ಇದ್ದಾನೆ. ಈ ಪವಿತ್ರ ಸ್ಥಳದಲ್ಲಿ ಮಾನವನು ಅಮರತ್ವ ಪಡೆದು ಸಾಕ್ಷಾತ್ ಪರಬ್ರಹ್ಮನೇ ಆಗಬಹುದು. ಈ ಪುಣ್ಯ ಸ್ಥಳದಲ್ಲಿ ಒಂದುಸಲ ಸ್ನಾನ ಮಾಡಿದರೆ ಬರುವ ಪುಣ್ಯ, ಪ್ರಯಾಗದಲ್ಲಿ ತ್ರಿಕರಣ ಶುದ್ಧಿಯಾಗಿ ಮಾಡಿದ ಒಂದು ಮಾಘ ಸ್ನಾನದಿಂದ ಬರುವ ಪುಣ್ಯದ ನೂರರಷ್ಟು ಅಧಿಕ. ಅಲ್ಲಿರುವ ಅಮರೇಶ್ವರ ಸಾಕ್ಷಾತ್ ಪರಬ್ರಹ್ಮನೇ! ಅದರಿಂದಲೇ ಅಲ್ಲಿ ಕೋಟಿ ತೀರ್ಥಗಳು ಇವೆ.

ವೇಣಿ ಸಹಿತವಾದ ಕೃಷ್ಣೆ, ದಕ್ಷಿಣ ವಾಹಿನಿಯಾಗಿ ಅಲ್ಲಿದ್ದಾಳೆ. ಕೃಷ್ಣವೇಣಿ ತೀರದಲ್ಲಿರುವ ಅಷ್ಟ ತೀರ್ಥಗಳು ಪ್ರಸಿದ್ಧವಾದವು. ಅಲ್ಲಿಂದ ಉತ್ತರಕ್ಕೆ ಹೋದರೆ ಅಲ್ಲಿ ಕೃಷ್ಣೆ ಪಶ್ಚಿಮ ವಾಹಿನಿಯಾಗಿದ್ದಾಳೆ. ಅಲ್ಲಿರುವ ಶುಕ್ಲತೀರ್ಥ ಬ್ರಹ್ಮಹತ್ಯಾ ಪಾಪವನ್ನೂ ನಾಶಪಡಿಸುತ್ತದೆ. ಔದುಂಬರವೃಕ್ಷ ಸಮೀಪದಲ್ಲಿ ಮನೋಹರವಾದ ತೀರ್ಥಗಳಿವೆ. ಅವು ಒಂದರಿಂದ ಇನ್ನೊಂದು ಒಂದು ಧನು ದೂರದಲ್ಲಿವೆ. ಅವುಗಳಲ್ಲಿ ಮೊದಲನೆಯದು ಪಾಪವಿನಾಶ ತೀರ್ಥ. ಎರಡನೆಯದು ಕಾಮ್ಯ ತೀರ್ಥ. ಮೂರನೆಯದು ವರದ ತೀರ್ಥ. ಅಮರೇಶ್ವರ ಸನ್ನಿಧಿಯಲ್ಲಿರುವುದರಿಂದ ಅದು ಅತಿ ಶ್ರೇಷ್ಠವಾದದ್ದು. ಷಟ್ಕಾಲ ಸಂಗಮದಲ್ಲಿ ಶಕ್ತಿ ತೀರ್ಥ, ಅಮರ ತೀರ್ಥ, ಕೋಟಿ ತೀರ್ಥಗಳೆನ್ನುವ ಮೂರುತೀರ್ಥಗಳಿವೆ. ತ್ರಿಮೂರ್ತಿ ಸ್ವರೂಪನಾದ ಶ್ರೀಗುರುವು ಅಲ್ಲಿ ಹನ್ನೆರಡು ವರ್ಷ ನೆಲೆಸಿದ್ದನು. ಕೃಷ್ಣ ವೇಣಿ ಪಂಚನದಿಗಳು ಇವು ಏಳೂ ಸೇರಿ ಒಂದಾಗುವ ತೀರ್ಥ ಸ್ಥಾನದ ಮಹಿಮೆಯನ್ನು ಏನೆಂದು ವರ್ಣಿಸಲಿ? ಅಲ್ಲಿ ಸ್ನಾನ ಮಾತ್ರದಿಂದಲೇ ಬ್ರಹ್ಮಹತ್ಯಾದಿ ಪಾಪಗಳೂ ನಶಿಸಿಹೋಗುತ್ತವೆ. ಆ ಸ್ಥಳವು ಸಕಲ ಅಭೀಷ್ಟ ಸಿದ್ಧಿಪ್ರದವಾದ ಸ್ಥಳ. ಉಪಮೆ ಇಲ್ಲದ್ದು. ದರ್ಶನ ಮಾತ್ರದಿಂದಲೇ ಕಾರ್ಯ ಸಿದ್ಧಿಯಾಗುವ ಆ ತೀರ್ಥದಲ್ಲಿ ಸ್ನಾನ ಮಾಡಿದರೆ ಉಂಟಾಗುವ ಫಲವೇನು ಎಂಬುದನ್ನು ಹೇಳಲು ಅಸಾಧ್ಯ. ಗುಪ್ತರೂಪದಲ್ಲಿ ನೆಲೆಸಿದ್ದ ಶ್ರೀಗುರುವು ಅಲ್ಲಿ ತನ್ನ ಭಕ್ತರಿಗೆ ತಾರಕನಾಗಿದ್ದನು. ಅಲ್ಲಿನ ತೀರ್ಥಗಳ ಮಹಿಮೆಯನ್ನು ಪ್ರಕಟಗೊಳಿಸಲು ಶ್ರೀಗುರುವು ಅಲ್ಲಿ ನೆಲೆಸಿದರು. ಅಲ್ಲಿದ್ದಾಗ ಶ್ರೀಗುರುವು ಪ್ರತಿದಿನವೂ ಅಮರಪುರಕ್ಕೆ ಭಿಕ್ಷಾರ್ಥಿಯಾಗಿ ಹೋಗುತ್ತಿದ್ದರು. ಅಲ್ಲಿ ವೈದಿಕನಾದ ಬ್ರಾಹ್ಮಣನೊಬ್ಬನಿದ್ದನು. ಅವನು ಬಡವ. ಭಿಕ್ಷೆಮಾಡುತ್ತಾ, ಸ್ವಕರ್ಮ ನಿರತನಾಗಿ ಅವನು ಅಲ್ಲಿನ ಜನರಲ್ಲಿ ಮಾನ್ಯನಾಗಿದ್ದನು. ಅವನ ಹೆಂಡತಿ ಪತಿಯೇ ದೈವವೆಂದು ಭಾವಿಸಿ ಪತಿ ಸೇವೆಯಲ್ಲಿ ನಿರತಳಾಗಿದ್ದಳು. ಅವರ ಮನೆಯ ಅಂಗಳದಲ್ಲಿ ಚಪ್ಪರದ ಅವರೇಕಾಯಿಯ ಬಳ್ಳಿಯೊಂದು ಸೊಂಪಾಗಿ ಬೆಳೆದು ಹೂವು ಕಾಯಿಗಳಿಂದ ತುಂಬಿತ್ತು. ಭಿಕ್ಷೆ ದೊರೆಯದಿದ್ದ ದಿನ ಅವರು ಅ ಬಳ್ಳಿಯಿಂದ ಕಾಯಿಗಳನ್ನು ಕಿತ್ತು ತಮ್ಮ ಆಹಾರಕ್ಕಾಗಿ ಉಪಯೋಗಿಸುತ್ತಿದ್ದರು. ಹಾಗೆ ಬಡವನಾದರೂ ಆ ಬ್ರಾಹ್ಮಣ ಪ್ರತಿದಿನವೂ ಪಂಚಯಜ್ಞಗಳನ್ನು ಮಾಡುತ್ತಾ, ಅತಿಥಿಪೂಜೆ ಮಾಡುತ್ತಾ ಜೀವನ ಸಾಗಿಸುತ್ತಿದ್ದನು.

ಹೀಗಿರಲಾಗಿ, ಒಂದು ದಿನ ಶ್ರೀಗುರುವು ಅವರ ಮನೆಗೆ ಭಿಕ್ಷಾರ್ಥಿಯಾಗಿ ಬಂದನು. ಆ ಬ್ರಾಹ್ಮಣ ಶ್ರೀಗುರುವನ್ನು ಆದರದಿಂದ ಒಳಕ್ಕೆ ಕರೆದುಕೊಂಡು ಹೋಗಿ ಅವರನ್ನು ಯಥಾಶಕ್ತಿ ಪೂಜೋಪಚಾರಗಳಿಂದ ಸಂತುಷ್ಟಗೊಳಿಸಿದನು. ಆ ದಿನ ಅವನಿಗೆ ಎಲ್ಲೂ ಭಿಕ್ಷೆ ದೊರೆಯದಿದ್ದುದರಿಂದ ಅವನು ಶ್ರೀಗುರುವಿಗೆ ತಮ್ಮ ಮನೆಯಲ್ಲಿ ಬೆಳೆದಿದ್ದ ಚಪ್ಪರದ ಅವರೆಕಾಯಿಯ ಪಲ್ಯ ಮಾಡಿ ಶ್ರದ್ಧಾ ಭಕ್ತಿಗಳಿಂದ ಅದನ್ನೆ ಶ್ರೀಗುರುವಿಗೆ ಅರ್ಪಿಸಿದನು. ಅದರಿಂದಲೇ ಸಂತುಷ್ಟರಾದ ಶ್ರೀಗುರುವು, "ನಿನ್ನ ಆತಿಥ್ಯದಿಂದ ನಮಗೆ ಸಂತೋಷವಾಗಿದೆ. ಇಂದಿನಿಂದ ನಿನ್ನ ದಾರಿದ್ರ್ಯ ತೀರಿತು" ಎಂದು ಹೇಳಿ, ಹೊರಗೆ ಹೋಗುತ್ತಾ ಅವನ ಮನೆಯಲ್ಲಿ ಅಷ್ಟು ಸೊಂಪಾಗಿ ಬೆಳೆದಿದ್ದ ಆ ಬಳ್ಳಿಯನ್ನು ಕಿತ್ತುಹಾಕಿ, ತುಳಿದು ಹೊರಟು ಹೋದರು. ಶ್ರೀಗುರುವಿನ ಆ ಕಾರ್ಯವನ್ನು ನೋಡಿ, ಅವನ ಹೆಂಡತಿ, ದುಃಖಿಸುತ್ತಾ, "ಅಯ್ಯೋ. ನಾವು ಶ್ರೀಗುರುವಿಗೆ ಏನು ಅನ್ಯಾಯಮಾಡಿದೆವು? ನಮ್ಮದು ಎಂತಹ ದುರಾದೃಷ್ಟ. ನಾವೇನು ಅಪಕಾರ ಮಾಡಿದೆವು ಅವರಿಗೆ? ಆ ಬಳ್ಳಿಯನ್ನು ಕಿತ್ತುಹಾಕಿ ನಮ್ಮ ಆಹಾರವನ್ನೇ ಹಾಳುಮಾಡಿದರಲ್ಲ?" ಎಂದು ಗೋಳಾಡಿದಳು.

ಅವಳ ಅಳುವನ್ನು ಕಂಡ ಆ ಬ್ರಾಹ್ಮಣ, "ನಮಗೆ ಅಶ್ರೇಯಸ್ಸನ್ನು ತರುವ ಈ ಕೋಪವನ್ನು ಬಿಡು. ನಮ್ಮ ಪ್ರಾರಬ್ಧವೇ ದೊಡ್ಡದು. ಜಗತ್ತೆಲ್ಲವೂ ಪರಮೇಶ್ವರಾಧೀನ. ಈಶ್ವರನ ಇಚ್ಚೆಯಿಂದಲೇ ಎಲ್ಲವೂ ನಡೆಯುತ್ತದೆ. ಅವನು ಮೊದಲು ಆಹಾರವನ್ನು ಸೃಷ್ಟಿಮಾಡಿ ನಂತರವೇ ಜೀವರಾಶಿಗಳನ್ನು ಸೃಷ್ಟಿಸಿದ. ಅವನಿಗೆ ಯಾವ ತರಹೆಯ ಬೇಧಗಳೂ ಇಲ್ಲ. ಎಲ್ಲರಲ್ಲೂ ಸಮ ದೃಷ್ಟಿಯುಳ್ಳವನು. ಅವರವರ ಪೂರ್ವ ಕರ್ಮಾನುಸಾರವಾಗಿ ಈ ಜನ್ಮದಲ್ಲಿ ಮಾನವರಿಗೆ ಜೀವನೋಪಾಯವನ್ನು ಕಲ್ಪಿಸುತ್ತಾನೆ. ಹಿಂದಿನ ಜನ್ಮಗಳಲ್ಲಿ ಮಾಡಿದ ಸುಕೃತ ದುಷ್ಕೃತ ಕರ್ಮಫಲಗಳನ್ನು ಈ ಜನ್ಮದಲ್ಲಿ ಅನುಭವಿಸಬೇಕಾದದ್ದೇ! ಆದರೆ ಮೂರ್ಖರು ಅದು ತಾವು ಮಾಡಿದ ಕರ್ಮಫಲಗಳೆಂದು ಭಾವಿಸುವುದಿಲ್ಲ. ಸುಖವಾಗಲೀ ದುಃಖವಾಗಲೀ ತನ್ನ ಕರ್ಮಫಲದಿಂದಲೇ ಲಭಿಸುವುದು. ನೀನು ಬಂದಿದ್ದ ಯತಿಯಲ್ಲಿ ದೋಷವನ್ನೆಣಿಸುತ್ತಾ, ನಮ್ಮ ಕರ್ಮಫಲವನ್ನು ಕಾಣುತ್ತಿಲ್ಲ. ಆ ಗುರುವು ನಮ್ಮನ್ನು ಕಾಪಾಡಲೆಂದೇ ನಮ್ಮ ಮನೆಯಲ್ಲಿ ಭಿಕ್ಷೆಯನ್ನು ತೆಗೆದು ಕೊಂಡು ನಮ್ಮ ದಾರಿದ್ರ್ಯವನ್ನು ಹರಿಸಿದರು. ನನ್ನದು, ನನಗೆ ಎನ್ನುವ ಮೋಹವನ್ನು ಬಿಡಿಸಿದ ಆ ಯತಿ ನಮ್ಮ ಪ್ರಭುವೇ!" ಎಂದು ಹೇಳಿ ತನ್ನ ಹೆಂಡತಿಯನ್ನು ಸಮಾಧಾನಗೊಳಿಸಿ, ಯತಿ ಕಿತ್ತುಹಾಕಿದ್ದ ಆ ಬಳ್ಳಿಯನ್ನು ಮತ್ತೆ ನೆಡಲು ಉದ್ಯುಕ್ತನಾದನು.

ಹಾಗೆ ಅವನು ಬಳ್ಳಿಯನ್ನು ನೆಡಲು ಅಗೆಯುತ್ತಿದ್ದಾಗ ಆ ಜಾಗದಲ್ಲಿ ಅವನಿಗೆ ಧನತುಂಬಿದ್ದ ಘಟವೊಂದು ಕಾಣಿಸಿತು. ಅವನು ಪರಮಾನಂದದಿಂದ ಅದನ್ನು ತೆಗೆದು ತನ್ನ ಹೆಂಡತಿಗೆ ತೋರಿಸಿ, "ಈ ವಿಚಿತ್ರವನ್ನು ನೋಡು. ನಮ್ಮಲ್ಲಿ ಪ್ರಸನ್ನನಾದ ಆ ಯತೀಶ್ವರ ನಮ್ಮನ್ನು ಆಶೀರ್ವದಿಸಿ, ಈ ಧನಕುಂಭವನ್ನು ಅನುಗ್ರಹಿಸಿದರು. ಅವರು ಈ ಬಳ್ಳಿಯನ್ನು ಕಿತ್ತು ಹಾಕಿದ್ದರಿಂದಲೇ ಈ ಘಟವು ನಮಗೆ ದೊರೆಯಿತು. ಆ ಯೋಗಿ ಪುಂಗವ ಮಾನವ ಮಾತ್ರನಲ್ಲ. ಸಾಕ್ಷಾತ್ ಪರಮೇಶ್ವರನೇ! ನಮ್ಮ ದೈನ್ಯವನ್ನು ಪರಿಹರಿಸಲೆಂದೇ ಆತ ನಮ್ಮ ಮನೆಗೆ ದಯಮಾಡಿಸಿದರು. ನಡೆ. ನಾವು ಹೋಗಿ ಆತನ ದರ್ಶನಮಾಡಿ ಬರೋಣ" ಎಂದು ಹೇಳಿ ಅವಳೊಡನೆ ಶ್ರೀಗುರುವಿನ ದರ್ಶನಕ್ಕೆಂದು ಅವರಿದ್ದ ಸಂಗಮ ಸ್ಥಳಕ್ಕೆ ಹೋದನು. ಅಲ್ಲಿ ಶ್ರೀಗುರುವನ್ನು ಕಂಡು ತನ್ನ ಮನೆಯಲ್ಲಿ ನಡೆದದ್ದನ್ನೆಲ್ಲ ಅವರಿಗೆ ವಿಶದವಾಗಿ ನಿವೇದಿಸಿಕೊಂಡನು.

ಶ್ರೀಗುರುವು ಅವನನ್ನು ನೋಡಿ, "ಈ ವಿಷಯವನ್ನು ನೀನು ಯಾರಲ್ಲೂ ಹೇಳಬೇಡ. ಹೇಳಿದರೆ ಬಂದಿರುವ ಲಕ್ಷ್ಮಿ ನಿನ್ನ ಮನೆಯನ್ನು ಬಿಟ್ಟು ಹೋಗುತ್ತಾಳೆ. ಇನ್ನು ಮುಂದೆ ನಿನ್ನ ವಂಶದಲ್ಲಿ ಲಕ್ಷ್ಮಿ ಅಚಂಚಲೆಯಾಗಿ ನಿಂತಿರುತ್ತಾಳೆ. ನನ್ನ ಅನುಗ್ರಹದಿಂದ ನೀನು ಪುತ್ರಪೌತ್ರಾದಿಗಳಿಂದ ಕೂಡಿ ಸುಖ ಸಂತೋಷಗಳಿಂದ ಜೀವನಮಾಡು. ನಿನ್ನ ಕುಲ ವೃದ್ಧಿಯಾಗುತ್ತದೆ" ಎಂದು ಹೇಳಿ ಆ ಬ್ರಾಹ್ಮಣನನ್ನು ಅಶೀರ್ವದಿಸಿದರು. ವರಪಡೆದ ಆ ಬ್ರಾಹ್ಮಣ ಗುರುವಿನ ಅನುಮತಿ ಪಡೆದು ತನ್ನ ಮನೆಗೆ ಹಿಂತಿರುಗಿದನು. "ಗುರುದೃಷ್ಟಿಯಿಂದ ದೈನ್ಯವು ನಾಶವಾಗುತ್ತದೆ. ಗುರುಕೃಪೆಯನ್ನು ಪಡೆದವನು ದೀನ ಹೇಗಾಗುತ್ತಾನೆ? ಅಂತಹವನು ಎಲ್ಲರಿಗೂ ಪೂಜ್ಯನಾಗಿ, ಇಹ ಪರಗಳಲ್ಲಿ ಸೌಖ್ಯವನ್ನು ಹೊಂದುತ್ತಾನೆ. ಅವನ ಮನೆಯಲ್ಲಿ ಅಷ್ಟೈಶ್ವರ್ಯಗಳು ಸದಾ ನಾಟ್ಯವಾಡುತ್ತಿರುತ್ತವೆ. ಶ್ರೀಗುರು ಮಹಿಮೆ ಅಂತಹುದು! ಆದ್ದರಿಂದ, ನಾಮಧಾರಕ, ನೀನು ಸದಾ ಮನಸ್ಸಿನಲ್ಲಿ ಗುರುಭಜನೆ ಮಾಡುತ್ತಿರು. ಕಾಮಧೇನುವೇ ನಿನ್ನ ಮನೆಗೆ ಬರುತ್ತದೆ" ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಹದಿನೆಂಟನೆಯ ಅಧ್ಯಾಯ ಮುಗಿಯಿತು. 



||ಶ್ರೀ ಗುರು ಚರಿತ್ರೆ - ಹದಿನೇಳನೆಯ ಅಧ್ಯಾಯ||

ಸಿದ್ಧಮುನಿಯು ನಾಮಧಾರಕನಿಗೆ ಮತ್ತೆ, "ನಿನಗೆ ಗುರು ಪಾದಗಳಲ್ಲಿ ಧೃಢಭಕ್ತಿಯುಂಟಾಗಿದೆ. ಗುರು ಕಥೆಗಳಲ್ಲಿ ನೀನು ತೋರಿಸುತ್ತಿರುವ ಅಭಿರುಚಿ ನಿನ್ನ ಗುರು ಭಕ್ತಿಯನ್ನು ತೋರಿಸುತ್ತಿದೆ. ಕಾಮಧೇನುವಿನಂತೆ ಕೋರಿದ್ದನ್ನು ಕೊಡುವ ಗುರುಚರಿತ್ರೆಯನ್ನು ಆಲಿಸು.

ಕೃಷ್ಣಾನದಿಯ ಪಶ್ಚಿಮ ತೀರದಲ್ಲಿರುವ ಭುವನೇಶ್ವರಿಯಲ್ಲಿ ಶ್ರೀಗುರುವು ರಹಸ್ಯವಾಗಿ ನಿಂತರು. ಆ ಸ್ಥಳವು ಔದುಂಬರ ವೃಕ್ಷಮೂಲವು. ಕಲ್ಪವೃಕ್ಷ ಸಮಾನವಾದ ಪರಿಶುದ್ಧ ಪ್ರದೇಶವದು. ಶ್ರೀಗುರುವು ಅಲ್ಲಿ ಅನುಷ್ಠಾನ ಪರರಾಗಿ ಚಾತುರ್ಮಾಸ್ಯ ವ್ರತವನ್ನು ಅಚರಿಸಿದರು. ಶ್ರೀಗುರುವು ಆ ಪ್ರದೇಶದಲ್ಲಿ ನಿಂತಿದ್ದರಿಂದ ಅದರ ಮಹಿಮೆ ಅಧಿಕವಾಯಿತು" ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿ, ನಾಮಧಾರಕ, "ಸ್ವಾಮಿ, ಪರಮಾತ್ಮನೇ ಆದ ಶ್ರೀಗುರುವು ಅಲ್ಲಿ ರಹಸ್ಯವಾಗಿ ಏಕೆ ನಿಂತರು? ಶ್ರೀಗುರುವಿಗೆ ತಪೋನುಷ್ಠಾನ, ಭಿಕ್ಷೆಗಳೇತಕ್ಕೆ?" ಎಂದು ಕೇಳಿದನು.

ಅದಕ್ಕೆ ಸಿದ್ಧಮುನಿ, "ಮಗು, ನಾಮಧಾರಕ, ಈಶ್ವರ ಭಿಕ್ಷೆ ಬೇಡಿದನು. ದತ್ತಾತ್ತ್ರೇಯರು ತಪವನ್ನಾಚರಿಸಿದರು. ಭಕ್ತಾನುಗ್ರಹಕ್ಕಾಗಿ ತ್ರಿಮೂರ್ತ್ಯವತಾರ ಧರಿಸಿ, ಭಿಕ್ಷುರೂಪದಲ್ಲಿ ತೀರ್ಥಯಾತ್ರೆಗಳನ್ನು ಮಾಡುತ್ತಾ, ಭಿಕ್ಷೆ ಬೇಡಿದರು. ಅವೆಲ್ಲವೂ ಕೇವಲ ಭಕ್ತರಿಗೆ ಬೋಧಿಸುವುದಕ್ಕಾಗಿಯೇ! ಕಾಲವಶವಾಗಿ ತೀರ್ಥಗಳೆಲ್ಲಾ ಗುಪ್ತವಾಗಿ ಹೋದವು. ಅವನ್ನು ಮತ್ತೆ ಭಕ್ತಾನುಕೂಲಕ್ಕಾಗಿ ಶ್ರೀಗುರುವು ವ್ಯಕ್ತಗೊಳಿಸಿದನು. ಶ್ರೀಗುರುವು ನಮಗೆ ಉಪಕಾರ ಮಾಡಲೆಂದು ಸ್ವಯಂ ಗುಪ್ತವಾಗಿ ತೀರ್ಥಯಾತ್ರೆಗಳನ್ನು ಮಾಡಿದರು. ದುಷ್ಟರಿಂದ ದೂರವಿರಲು ಅವರು ಗುಪ್ತರಾಗಿದ್ದಾರೆಯೇ ಹೊರತು ಭಕ್ತರ ವಾಂಛೆಗಳನ್ನು ನೆರವೇರಿಸುತ್ತಲೇ ಇದ್ದಾರೆ. ಅವರು ಅಲ್ಲಿ ಹಾಗಿರಲು ನಡೆದ ಒಂದು ವಿಚಿತ್ರವನ್ನು ಹೇಳುತ್ತೇನೆ ಕೇಳು. ಅದರಿಂದ ಶ್ರೀಗುರುವಿನ ಮಹಿಮೆ ಮತ್ತೆ ಭೂಮಿಯಲ್ಲಿ ಪ್ರಕಟಗೊಂಡಿತು.

ಕರವೀರವೆಂಬ ಊರಿನಲ್ಲಿ ಕಣ್ವ ಶಾಖೀಯನಾದ ಸಕಲವಿದ್ಯಾ ಪಾರಂಗತನಾದ ಉತ್ತಮ ಚರಿತನಾದ ಬ್ರಾಹ್ಮಣನೊಬ್ಬನಿದ್ದನು. ಅವನಿಗೊಬ್ಬ ಮಗನಾದನು. ಆದರೆ ವಿಧಿವಶಾತ್ ಅವನಿಗೆ ಹುಟ್ಟಿದ ಮಗ ಮಂದಮತಿ. ಅವನಿನ್ನೂ ಸಣ್ಣವನಾಗಿದ್ದಾಗಲೇ ಆ ಬ್ರಾಹ್ಮಣನು ಮರಣಿಸಿದನು. ಹುಡುಗನಿಗೆ ಏಳು ವರ್ಷವಾದಾಗ ಆ ಊರಿನ ಬ್ರಾಹ್ಮಣರು ಅವನಿಗೆ ಉಪನಯನ ಮಾಡಿದರು. ಆ ಹುಡುಗನಿಗೆ ಸ್ನಾನ, ಸಂಧ್ಯಾವಂದನೆ, ಗಾಯತ್ರಿಜಪ ಮುಂತಾದುವುಗಳಲ್ಲಿ ಆಸ್ತೆ ಇರಲಿಲ್ಲ. ಹಾಗಾಗಿ ಅವನು ವೇದಾಧ್ಯಯನವನ್ನೂ ಮಾಡಲಿಲ್ಲ. ಅವನೊಬ್ಬ ಓದಿದ್ದನ್ನು ತಕ್ಷಣವೇ ಮರೆಯುತ್ತಿದ್ದ ಮಹಾ ಮೂರ್ಖ. ಆ ಊರಿನ ವಿದ್ವಾಂಸರು ಆ ಮೂರ್ಖನನ್ನು, "ವಿದ್ವಾಂಸನಾದ ಬ್ರಾಹ್ಮಣನೊಬ್ಬನಿಗೆ ಮಗನಾಗಿ ಹುಟ್ಟಿದರೂ ಮೂರ್ಖನಾದೆ. ನಿನ್ನ ತಂದೆ ವೇದ ಶಾಸ್ತ್ರ ಪುರಾಣಗಳನ್ನೆಲ್ಲಾ ಬಲ್ಲ ಜ್ಞಾನಿಯಾಗಿದ್ದನು. ಅವನಿಗೆ ಕಲ್ಲುಬಂಡೆಯಂತಹ ನೀನು ಹೇಗೆ ಜನಿಸಿದೆ? ನಿನ್ನ ಹುಟ್ಟು ವ್ಯರ್ಥ. ನಿನ್ನ ತಂದೆಯ ಹೆಸರು, ಕೀರ್ತಿ ನಿನ್ನಿಂದ ಕಲಂಕಿತವಾಯಿತು. ಕಲ್ಲು ಕಟ್ಟಿಕೊಂಡು ನೀರಿನಲ್ಲಿ ಮುಳುಗಿ ಸಾಯಿ. ಯಾವುದಾದರೂ ಕೆರೆಯೋ ಭಾವಿಯೋ ನೋಡಿ ಅದರಲ್ಲಿ ಹೋಗಿ ಬೀಳು. ಇಲ್ಲಿ ಹಂದಿಯಂತೆ ಏಕೆ ಬಾಳುತ್ತಿರುವೆ? ವಿದ್ಯೆಯುಳ್ಳವನು ಮನುಷ್ಯರಲ್ಲಿ ಅಧಿಕನೆನಿಸುತ್ತಾನೆ. ವಿದ್ಯಾವಿಹೀನನು ವಯಸ್ಸಿನಲ್ಲಿ ದೊಡ್ಡವನಾದರೂ ಪೂಜಿತನಾಗುವುದಿಲ್ಲ. ವಿದ್ಯಾವಂತನು ವಯಸ್ಸಿನಲ್ಲಿ ಸಣ್ಣವನಾದರೂ ಎಲ್ಲರೂ ಅವನನ್ನು ಗೌರವಿಸುತ್ತಾರೆ. ಒಡಹುಟ್ಟಿದವರಿಲ್ಲದವರಿಗೆ ವಿದ್ಯೆಯೇ ಸಹೋದರ. ಎಲ್ಲಕಡೆಗಳಲ್ಲೂ ವಿದ್ವಾಂಸನು ಗೌರವಿಸಲ್ಪಡುತ್ತಾನೆ. ರಾಜರೂ ಕೂಡಾ ವಿದ್ವಾಂಸರನ್ನು ಆದರದಿಂದ ಕಂಡು ಪೂಜಿಸುತ್ತಾರೆ. ಅಧನನಿಗೆ ವಿದ್ಯೆಯೇ ಮಹಾಧನ. ಅದರಿಂದಲೇ ವಿದ್ಯಾರ್ಜನೆ ಮಾಡಬೇಕು. ವಿದ್ಯೆಯಿಲ್ಲದವನು ಪಶು ಸಮಾನನು" ಏಂದು ಅವನಿಗೆ ಬುದ್ಧಿ ಮಾತುಗಳನ್ನು ಹೇಳಿದರು.

ಅವರ ಮಾತುಗಳನ್ನು ಕೇಳಿದ ಆ ಹುಡುಗ, ಅವರಿಗೆ ನಮಸ್ಕರಿಸಿ, "ಅಯ್ಯಾ, ನೀವು ಹೇಳುವುದೆಲ್ಲ ನಿಜವೇ! ವಿದ್ಯಾವಂತನು ಪ್ರಶಸ್ತಿ ಪಡೆಯುತ್ತಾನೆ. ನಾನು ಹಿಂದಿನ ಜನ್ಮಗಳಲ್ಲಿ ವಿದ್ಯಾದಾನ ಮಾಡಲಿಲ್ಲ. ಅದರಿಂದಲೇ ಈಗ ನನಗೆ ವಿದ್ಯೆ ಹತ್ತುತ್ತಿಲ್ಲ. ನಾನೇನು ಮಾಡಲಿ? ನೀವೇ ಕೃಪೆಮಾಡಿ ನನ್ನನ್ನು ಉದ್ಧರಿಸಿ. ವಿದ್ಯೆ ಕಲಿಯಲು ಯಾವುದಾದರೂ ಉಪಾಯವನ್ನು ಹೇಳಿ" ಎಂದು ಕೇಳಿಕೊಂಡನು. ಅದಕ್ಕೆ ಆ ಬ್ರಾಹಣರು, "ನಿನಗಿನ್ನು ಈ ಜನ್ಮದಲ್ಲಿ ವಿದ್ಯೆ ಲಭಿಸುವುದಿಲ್ಲ. ಮುಂದಿನ ಜನ್ಮದಲ್ಲಿಯಾದರೂ ವಿದ್ಯಾವಂತನಾಗಲು ಕೃಷಿ ಮಾಡು. ವಿದ್ಯೆಯಿಲ್ಲದ ನೀನು ಪಶು ಸಮಾನನು. ಭಿಕ್ಷೆಯೆತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತಾ ನೀನು ಕುಲನಾಶಕನಾಗಿದ್ದೀಯೆ. ವಿದ್ವಾಂಸನ ಮಗನಾಗಿಯೂ ನೀನು ಮತಿಹೀನನಾಗಿದ್ದೀಯೆ" ಎಂದು ನಿಂದಿಸಿದರು. ಆ ಬ್ರಾಹ್ಮಣರ ನಿಂದೆಗಳನ್ನು ಕೇಳಿದ ಅವನಿಗೆ ಒಂದು ತರಹೆಯ ವೈರಾಗ್ಯವುಂಟಾಗಿ, ಹತ್ತಿರದಲ್ಲೇ ಇದ್ದ ಅರಣ್ಯಕ್ಕೆ ಹೋದನು.

ಅಲ್ಲಿಗೆ ಹೋಗಿ, "ನನ್ನನ್ನೆಲ್ಲರೂ ದೂಷಿಸುತ್ತಿದ್ದಾರೆ. ಇನ್ನು ನಾನು ಪ್ರಾಣದಿಂದಿದ್ದೇನು ಪ್ರಯೋಜನ? ನನಗಿಂತಲೂ ನಾಯಿ ಜನ್ಮ ಒಳ್ಳೆಯದು. ಇನ್ನು ಈ ಜೀವನ ಸಾಕು" ಎಂದು ಆಲೋಚಿಸುತ್ತಾ, ಭಿಲ್ಲವಟಿಯನ್ನು ಸೇರಿ, ದೈವವಶಾತ್ ಕೃಷ್ಣಾ ನದಿಯ ಪೂರ್ವ ತೀರದಲ್ಲಿರುವ ಭುವನೇಶ್ವರಿಯ ಗುಡಿಗೆ ಹೋದನು. ಅಲ್ಲಿ ದೇವಿಯ ದರ್ಶನ ಮಾಡಿ, ಪ್ರಾಯೋಪವೇಶ ಮಾಡಲು ನಿರ್ಧರಿಸಿ ಕೂತನು. ಹೀಗೆ ನಿರ್ವಿಣ್ಣ ಮನಸ್ಕನಾದ ಅವನು ಮೂರು ದಿನ ಉಪವಾಸ ಮಾಡುತ್ತಾ ಜಗನ್ಮಾತೆಯನ್ನು ಧ್ಯಾನಿಸುತ್ತಿದ್ದನು. ದೇವಿಯು ಅವನಿಗೆ ಸ್ವಪ್ನ ದರ್ಶನವನ್ನೂ ಕೊಡಲಿಲ್ಲ ಎಂಬ ದುಃಖದಿಂದ, ದೇವಿ ನನ್ನನ್ನು ಉಪೇಕ್ಷಿಸುತ್ತಿದ್ದಾಳೆ ಎಂದು ಆಗ್ರಹಗೊಂಡು, ತನ್ನ ನಾಲಗೆಯನ್ನು ಕತ್ತರಿಸಿ ದೇವಿಯ ಪಾದಗಳಲ್ಲಿಟ್ಟು, "ಅಮ್ಮಾ, ಇನ್ನೂ ನೀನು ನನ್ನನ್ನು ಅನುಗ್ರಹಿಸದಿದ್ದರೆ, ನಾನು ನಾಳೆ ನನ್ನ ತಲೆಯನ್ನು ಕತ್ತರಿಸಿ ನಿನಗೆ ಒಪ್ಪಿಸುತ್ತೇನೆ" ಎಂದು ಘೋರವಾದ ಹರಕೆಯನ್ನು ಮಾಡಿದನು. ಹಾಗೆ ದೃಢವಾದ ಮನಸ್ಸಿನಿಂದ ತನ್ನ ತಲೆಯನ್ನೂ ಅರ್ಪಿಸಲು ಸಿದ್ಧನಾದ ಅವನಿಗೆ ದೇವಿ ಪ್ರತ್ಯಕ್ಷಳಾಗಿ, "ಅಯ್ಯಾ ಬಾಲಕ, ಅನವಶ್ಯಕವಾಗಿ ನನ್ನ ಮೇಲೆ ಏಕೆ ಕೋಪಗೊಳ್ಳುತ್ತೀಯೆ? ನದಿಯ ಪಶ್ಚಿಮ ತೀರದಲ್ಲಿ, ಔದುಂಬರ ವೃಕ್ಷದ ಛಾಯೆಯಲ್ಲಿ ಒಬ್ಬ ಯತಿಯಿದ್ದಾನೆ. ನೀನು ಅವನ ಬಳಿಗೆ ಹೋಗು. ತಪಸ್ಸು ಮಾಡುತ್ತಿರುವ ಆ ಯತಿ ಸಾಕ್ಷಾತ್ತು ಈಶ್ವರನ ಅವತಾರವೇ! ಅವನು ನಿನ್ನ ಇಚ್ಚೆಯನ್ನು ಪೂರೈಸುತ್ತಾನೆ" ಎಂದು ಹೇಳಿದಳು. ಅದರಿಂದ ಸಂತೋಷಗೊಂಡ ಆ ಹುಡುಗ ತಕ್ಷಣವೇ ದೇವಿ ಹೇಳಿದ ಜಾಗಕ್ಕೆ ಹೋಗಿ, ಅಲ್ಲಿ ನೆಲೆಸಿದ್ದ ಶ್ರೀಗುರುವಿನ ದರ್ಶನ ಮಾಡಿ ಅವರನ್ನು ಮನಸ್ಸಿನಲ್ಲಿಯೇ ಸ್ತುತಿಸಿದನು. ಅವನ ಸ್ತುತಿಯಿಂದ ಸಂತುಷ್ಟರಾದ ಶ್ರೀಗುರುವು, ಅವನಿಗೆ ಸಾಂತ್ವನದ ಮಾತುಗಳನ್ನು ಹೇಳುತ್ತಾ ಅವನ ತಲೆಯ ಮೇಲೆ ಕೈಯಿಟ್ಟು ಅನುಗ್ರಹಿಸಿದರು. ತಕ್ಷಣವೇ ಕತ್ತರಿಸಿಕೊಂಡಿದ್ದ ಅವನ ನಾಲಗೆ ಬಂದುದಲ್ಲದೆ, ಅವನು ಸಕಲ ವಿದ್ಯಾ ಪಾರಂಗತನೂ ಆದನು. ಹಾಗೆ ಆ ಮಂದಮತಿ ಮಹಾಜ್ಞಾನಿಯಾಗಿ ಪರಿವರ್ತಿತನಾದನು. ಗುರು ಸ್ಪರ್ಶ ಮಾತ್ರದಿಂದಲೇ ಆ ಮೂಢ ವಿದ್ವಾಂಸನಾದನು. ನಾಮಧಾರಕ, ನೋಡಿದೆಯಾ ಶ್ರೀಗುರುವಿನ ಮಹಿಮೆಯನ್ನು! ಅದನ್ನು ಅರಿತವರಾರು? ಆ ಗುರುವಿಗೇ ಅದು ಗೊತ್ತು" ಎಂದು ಸಿದ್ಧರು ತಾವು ಕಂಡ ವಿಚಿತ್ರ ವಿಶೇಷವನ್ನು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಹದಿನೇಳನೆಯ ಅಧ್ಯಾಯ ಮುಗಿಯಿತು.



Saturday, February 16, 2013

||ಶ್ರೀ ಗುರು ಚರಿತ್ರೆ - ಹದಿನಾರನೆಯ ಅಧ್ಯಾಯ||

ಶಿಷ್ಯನಾದ ನಾಮಧಾರಕನು ವಿನಯದಿಂದ, "ಸ್ವಾಮಿ, ಆ ನಂತರದ ಗುರುಚರಿತ್ರೆಯನ್ನು ಹೇಳಿ. ಯಾವ ಯಾವ ಶಿಷ್ಯರು ತೀರ್ಥಯಾತ್ರೆಗಳಿಗೆ ಹೊರಟರು? ಯಾರು ಯಾರು ಅವರ ಸೇವೆಯಲ್ಲಿ ನಿಂತರು? ಎಲ್ಲವನ್ನೂ ತಿಳಿಸಿ" ಎಂದು ಕೇಳಲು, ಸಿದ್ಧಮುನಿ ಹೇಳಿದರು. "ಅಯ್ಯಾ, ನಾಮಧಾರಕ, ಬಹಳ ಕಾಲದಿಂದ ಗುರುಚರಿತ್ರೆಯ ಬಗ್ಗೆ ಮಾತನಾಡದೆ ನನ್ನ ಮನಸ್ಸು ಜಡವಾಗಿತ್ತು. ನೀನು ಅದರ ಬಗ್ಗೆ ಕೇಳಿದ್ದರಿಂದ ನನ್ನ ಮನಸ್ಸು ಈಗ ಉಲ್ಹಾಸಗೊಂಡಿದೆ. ನೀನು ನನ್ನ ಪ್ರಾಣಸಖನಾದೆ. ನಿನ್ನನ್ನು ಕಲೆತಾಗಿನಿಂದಲೂ ಗುರುಚರಿತ್ರೆಯು ನನ್ನ ನೆನಪಿಗೆ ಬರುತ್ತಿದೆ. ಇತರ ಯೋಚನೆಗಳಲ್ಲಿ ಮುಳುಗಿ ಹೋಗಿದ್ದ ನಾನು, ಈಗ ನಿನ್ನಿಂದಾಗಿ ಗುರುಚರಿತ್ರೆ ಎಂಬುವ ಅಮೃತವನ್ನು ಕುಡಿಯುವುದರಲ್ಲಿ ಮಗ್ನನಾಗಿ, ಮನಸ್ಸು ಶಾಂತಿಗೊಂಡಿದೆ. ನೀನು ನನಗೆ ಇಂತಹ ಉಪಕಾರ ಮಾಡಿ ಸಂತೋಷವನ್ನು ತಂದುಕೊಟ್ಟೆ. ನಿನ್ನ ಕುಲ ಉದ್ಧಾರವಾಗುತ್ತದೆ. ನೀನು ಪುತ್ರ ಪೌತ್ರರಿಂದ ಕೂಡಿ ಆನಂದಪಡುವೆ. ನಿನ್ನ ಮನೆಯಲ್ಲಿ ದೈನ್ಯವೆಂಬುದು ಇರುವುದಿಲ್ಲ. ಗುರುವಿನ ಅನುಗ್ರಹದಿಂದ ನೀನು ಈ ಲೋಕದಲ್ಲಿ ಮಾನ್ಯನಾಗುತ್ತೀಯೆ. ಸಂಶಯಪಡಬೇಡ. ನನ್ನನ್ನು ನಂಬು. ನಿನಗೆ ಸರ್ವ ಸಂಪದಗಳೂ ಸಿದ್ಧಿಸುತ್ತವೆ. ಗುರುಚರಿತ್ರೆಯನ್ನು ವಿಸ್ತಾರವಾಗಿ ಹೇಳುತ್ತೇನೆ. ಸಾವಧಾನ ಚಿತ್ತನಾಗಿ ಕೇಳು.

ಶ್ರೀಗುರುವು ವೈದ್ಯೇಶ್ವರ ಸನ್ನಿಧಿಯಲ್ಲಿ ರಹಸ್ಯವಾಗಿದ್ದರು. ಶಿಷ್ಯರೆಲ್ಲರೂ ಗುರುವಿನೆ ಆಜ್ಞೆಯಂತೆ ತೀರ್ಥಾಟನೆಗೆಂದು ಹೊರಟು ಹೋಗಿದ್ದರು. ನಾನು ಗುರುದೇವರ ಸೇವೆಗೆಂದು ಅವರ ಜೊತೆಯಲ್ಲಿ ಇದ್ದೆ. ಒಂದು ವರ್ಷಕಾಲ ಶ್ರೀಗುರುವು ವೈದ್ಯನಾಥದಲ್ಲಿ ರಹಸ್ಯವಾಗಿದ್ದರು. ಅಲ್ಲಿ ಆರೋಗ್ಯಭವಾನಿ ಮಾತೆ ಇದ್ದಾಳೆ. ಅದೊಂದು ಮನೋಹರವಾದ ಸ್ಥಳ. ಅವರು ಅಲ್ಲಿದ್ದಾಗ ಒಬ್ಬ ಬ್ರಾಹ್ಮಣ ಬಂದು ಸದ್ಗುರುವಿಗೆ ನಮಸ್ಕಾರಮಾಡಿ, "ಅಜ್ಞಾನವೆನ್ನುವ ಕತ್ತಲೆಯಲ್ಲಿ ಬಿದ್ದಿರುವ ನನ್ನನ್ನು ಉದ್ಧರಿಸಿ. ಬಹಳ ಕಾಲ ತಪಸ್ಸು ಮಾಡಿದರೂ ನನ್ನ ಮನಸ್ಸು ಇನ್ನೂ ಸ್ಥಿರವಾಗಿಲ್ಲ. ಸನ್ಮಾರ್ಗವು ಯಾವುದೆಂದು ತಿಳಿಯುತ್ತಿಲ್ಲ. ಜ್ಞಾನವಿಲ್ಲದ ತಪಸ್ಸು ವ್ಯರ್ಥವಲ್ಲವೇ? ಈಗ ನಿಮ್ಮ ದರ್ಶನ ಮಾತ್ರದಿಂದಲೇ ನನ್ನ ಮನಸ್ಸು ಶಾಂತಗೊಂಡಿದೆ. ಬಹಳಕಾಲ ಗುರುಸೇವೆ ಮಾಡಲಿಲ್ಲವೆಂದೋ ಅಥವಾ ಇನ್ನಾವುದಾದರೂ ಕಾರಣಕ್ಕಾಗಿಯೋ ನನ್ನ ಮನಸ್ಸು ಸ್ಥಿರವಾಗುತ್ತಿಲ್ಲ. ನೀವೇ ಲೋಕೋದ್ಧಾರಕರು. ನನಗೆ ಉಪದೇಶಕೊಟ್ಟು ಜ್ಞಾನೋದಯವಾಗುವಂತೆ ಮಾಡಿ" ಎಂದು ಪ್ರಾರ್ಥಿಸಿಕೊಂಡನು. ಅವನ ಮಾತು ಕೇಳಿ ಗುರುವು ಅವನನ್ನು, "ಅಯ್ಯಾ, ಗುರುವಿಲ್ಲದೆ ನೀನು ಹೇಗೆ ತಪಸ್ಸು ಮಾಡಿದೆ?" ಎಂದು ಕೇಳಿದರು.

ಅದಕ್ಕೆ ಆ ಬ್ರಾಹ್ಮಣ, ಕಣ್ಣೀರು ಸುರಿಸುತ್ತಾ, "ಸ್ವಾಮಿ, ಗುರುನಾಥ, ನನಗೆ ಗುರುವೊಬ್ಬರಿದ್ದರು. ಆತ ಶೀಘ್ರಕೋಪಿ. ಬಹಳ ನಿಷ್ಠೂರವಾದ ಮಾತುಗಳನ್ನಾಡುತ್ತಾ, ನನ್ನಾನ್ನು ದುಷ್ಕರವಾದ ಸೇವೆಯಲ್ಲಿ ನಿಯಮಿಸಿ ಬಹಳವಾಗಿ ಪೀಡಿಸುತ್ತಿದ್ದರು. ವೇದ, ಶಾಸ್ತ್ರ, ತರ್ಕ, ವ್ಯಾಕರಣಗಳೇನನ್ನೂ ಬೋಧಿಸಲಿಲ್ಲ. ಬರಿಯ ಸೇವೆ ಮಾಡಿಸುತ್ತಿದ್ದರು. ನನ್ನ ಮೇಲೆ ಸದಾ ಕೋಪಿಸಿಕೊಳ್ಳುತ್ತಿದ್ದರು. ಅದರಿಂದ ನನ್ನ ಮನಸ್ಸು ಸ್ಥಿರಗೊಳ್ಳಲಿಲ್ಲ. ಅಂತಹ ನಿಷ್ಠುರಗಳನ್ನಾಡುವ ಗುರುವನ್ನು ಬಿಟ್ಟು ಬಂದೆ" ಎಂದು ಹೇಳಿದನು.

ಅದನ್ನು ಕೇಳಿ, ಶ್ರೀಗುರುವು, "ಅಯ್ಯಾ ಬ್ರಾಹ್ಮಣ, ನೀನು ಆತ್ಮಘಾತಕನಾದೆ. ಮೂಢನೊಬ್ಬ ದೇವಾಲಯದೊಳಗೆ ಮಲವಿಸರ್ಜನೆ ಮಾಡುತ್ತಿದ್ದನು. ಅದನ್ನು ಕಂಡ ಇನ್ನೊಬ್ಬ ಅವನನ್ನು ನಿಂದಿಸಿದನು. ಅದಕ್ಕೆ ಆ ಮೂಢ ತನ್ನನ್ನು ನಿಂದಿಸಿದವನನ್ನು ಹಿಂತಿರುಗಿಸಿ ಬೈದನು. ಹಾಗೆ ನೀನು ಕಿವಿ ಮೂಗುಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದೀಯೆ. ಅದೇನೆಂದು ಕೇಳಿದವನನ್ನು ನಿಂದಿಸುತ್ತಿದ್ದೀಯೆ. ನಿನ್ನ ಅವಗುಣಗಳನ್ನು ತಿಳಿದುಕೊಳ್ಳದೆ ನಿನಗೆ ಜ್ಞಾನ ಹೇಗೆ ಲಭ್ಯವಾಗುತ್ತದೆ? ಅಷ್ಟೇ ಆಲ್ಲದೆ ಗುರುನಿಂದೆ ಮಾಡಿ ದುರ್ಬುದ್ಧಿಯಾದ ನೀನು ಗುರು ದ್ರೋಹಿಯಾದೆ. ಮನೆಯನ್ನು ಬಿಟ್ಟು ಕಾಡಿನಲ್ಲಿ ಅಲೆಯುತ್ತಿರುವೆ. ಕಾಮಧೇನುವಂತಹ ಗುರುವನ್ನು ಬಿಟ್ಟು ಓಡಿಹೋಗುತ್ತಿದ್ದೀಯೇಕೆ? ನೀನೇ ನಿನ್ನ ಗುರುವಿನ ದೋಷಗಳನ್ನು ಎತ್ತಿತೋರಿಸಿ ಆಡಿಕೊಳ್ಳುತ್ತಿದ್ದೀಯೆ. ನಿನಗೆ ಮನಸ್ಸು ಹೇಗೆ ಸ್ಥಿರವಾಗಬಲ್ಲದು? ಜ್ಞಾನ ಹೇಗೆ ಉಂಟಾಗುತ್ತದೆ? ಗುರುದ್ರೋಹಿಗೆ ಇಹಪರಗಳೆರಡರಲ್ಲೂ ಸುಖವಿರಲಾರದು. ಅಜ್ಞಾನಾಂಧಕಾರದಲ್ಲಿ ಮುಳುಗಿದವನಿಗೆ ಜ್ಞಾನ ಹೇಗೆ ಲಭಿಸುವುದು? ಗುರುಸೇವಾ ಪದ್ಧತಿಯನ್ನು ಅರಿತವನಿಗೆ ಮಾತ್ರವೇ ವೇದಾದಿಗಳು ತಿಳಿಯುತ್ತವೆ. ಸದ್ಗುರುವು ಸಂತುಷ್ಟನಾದರೆ ಸರ್ವಜ್ಞತ್ವ ಲಭ್ಯವಾಗುತ್ತದೆ. ಸದ್ಗುರುವನ್ನು ಸಂತೋಷಗೊಳಿಸಿದವನು ಅಷ್ಟಸಿದ್ಧಿಗಳನ್ನೂ ಪಡೆಯುತ್ತಾನೆ. ಕ್ಷಣಮಾತ್ರದಲ್ಲಿ ವೇದಶಾಸ್ತ್ರಗಳೆಲ್ಲ ಸುಲಭವಾಗುತ್ತವೆ" ಎಂದು ಹೇಳಿದರು. ಅದನ್ನು ಕೇಳಿದ ಆ ಬ್ರಾಹ್ಮಣ, ಗುರುವಿನ ಚರಣಗಳಲ್ಲಿ ತಲೆಯಿಟ್ಟು, ವಿನೀತನಾಗಿ, ದೀನನಾಗಿ, "ಜ್ಞಾನಸಾಗರ, ನೀವು ನಿರ್ಗುಣರು. ದುರ್ಬುದ್ಧಿಯಾದ ನನ್ನನ್ನು ಉದ್ಧರಿಸಿ. ಮಾಯಾ ಮೋಹಿತನಾದ ನಾನು ಸದ್ಗುರುವನ್ನು ಗುರುತಿಸಲಾರದೆ ಹೋದೆ. ನನ್ನಲ್ಲಿ ದಯೆತೋರಿ ಜ್ಞಾನದಾನ ಮಾಡಿ. ಗುರುಸೇವಾ ರೀತಿ ಹೇಗೆ? ನನ್ನ ಮನಸ್ಸು ಸ್ಥಿರವಾಗಿ, ಹೇಗೆ ಗುರುವನ್ನು ತಿಳಿದುಕೊಳ್ಳಬೇಕು? ಹೇ ವಿಶ್ವವಂದ್ಯ, ಎಲ್ಲವನ್ನೂ ವಿಸ್ತರಿಸಿ ಹೇಳಿ, ನನಗೆ ಉಪಕಾರ ಮಾಡಿ" ಎಂದು ಪ್ರಾರ್ಥಿಸಿಕೊಂಡನು.

ಅವನ ಮಾತುಗಳನ್ನು ಕೇಳಿದ ಗುರುವು ಅವನಲ್ಲಿ ಕೃಪೆಮಾಡಿ, "ಅಯ್ಯಾ, ಗುರುವೇ ತಂದೆ, ತಾಯಿ, ಹಿತಕರ್ತ, ಉದ್ಧರಿಸುವವನು. ಅವನೇ ತ್ರಿಮೂರ್ತಿ ಸ್ವರೂಪನು. ಅದರಲ್ಲಿ ಸಂಶಯಬೇಡ. ಮನಸ್ಸನ್ನು ಸ್ಥಿರಮಾಡಿ ಕಷ್ಟಪಟ್ಟಾದರೂ, ಗುರುಸೇವೆಯನ್ನು ಮಾಡಬೇಕು. ಮಹಾಭಾರತದ ಆದಿಪರ್ವದಲ್ಲಿ ಗುರುಸೇವೆಯ ಬಗ್ಗೆ ವಿಶೇಷವಾಗಿ ಹೇಳಲ್ಪಟ್ಟಿದೆ. ಅದಕ್ಕೆ ನಿದರ್ಶನವಾಗಿ ಒಂದು ಕಥೆಯನ್ನು ಹೇಳುತ್ತೇನೆ. ಸಮಾಧಾನಚಿತ್ತನಾಗಿ ಕೇಳು.

ದ್ವಾಪರಯುಗದಲ್ಲಿ ಧೌಮ್ಯನೆಂಬ ಋಷಿವರ್ಯನೊಬ್ಬನಿದ್ದನು. ಆತ ಮಹಾಜ್ಞಾನಿ. ಆತನಿಗೆ ಅರುಣ, ಬೈದ, ಉಪಮನ್ಯು ಎಂಬ ಮೂರು ಜನ ಗುರುಸೇವಾ ಪರಾಯಣರಾದ ಶಿಷ್ಯರಿದ್ದರು. ಶಿಷ್ಯನ ಸೇವೆಯನ್ನು ಸ್ವೀಕರಿಸಿ, ಅವನ ಅಂತಃಕರಣ ಶುದ್ಧಿಗಾಗಿ ಅವನನ್ನು ಪರೀಕ್ಷಿಸಿ, ಅವನಲ್ಲಿ ಭಕ್ತಿ ಧೃಢವಾಗಿ ನೆಲೆಗೊಂಡಿದೆ ಎಂಬುದನ್ನು ಖಚಿತ ಮಾಡಿಕೊಂಡ ನಂತರ ಅವನ ಅಭೀಷ್ಟಗಳನ್ನು ನೆರವೇರಿಸುವುದು, ಅವನನ್ನು ಅನುಗ್ರಹಿಸುವುದು ಪ್ರಾಚೀನ ಗುರು ಸಂಪ್ರದಾಯ. ಅದರಂತೆ ಧೌಮ್ಯನು ಅವರನ್ನು ಪರೀಕ್ಷಿಸಲು ನಿರ್ಧರಿಸಿಕೊಂಡನು.

ಅದರಂತೆ, ಒಂದು ದಿನ ಧೌಮ್ಯನು ಅರುಣನನ್ನು ಕರೆದು, "ಅರುಣ, ಹೊಲದಲ್ಲಿ ಧಾನ್ಯವನ್ನು ಹಾಕಿದ್ದೇವೆ. ನೀರಿಲ್ಲದಿದ್ದರೆ ಅದು ಒಣಗಿಹೋಗುತ್ತದೆ. ನೀನು ಹೋಗಿ ಕೆರೆಯಿಂದ ನೀರು ಹಾಯಿಸಿ ಹೊಲದಲ್ಲಿ ನೀರು ತುಂಬಿಸಿ ಬಾ" ಎಂದನು. ಗುರುವಿನ ಆಜ್ಞೆಯಂತೆ ಅರುಣ ಹೊಲಕ್ಕೆ ಹೋಗಿ ನದಿಯಿಂದ ಹೊಲಕ್ಕೆ ಕಾಲುವೆ ಮಾಡಿದನು. ಆದರೆ ನೀರಿನ ಪ್ರವಾಹವು ಕಾಲುವೆಯೊಳಕ್ಕೆ ಬಹಳ ವೇಗವಾಗಿದ್ದುದರಿಂದ ಕಾಲುವೆಯ ಪಕ್ಕಗಳು ಕುಸಿದು ನೀರು ಅಕ್ಕ ಪಕ್ಕಗಳಿಗೆ ಹರಿದು ಹೋಗಿ, ಹೊಲ ಸ್ವಲ್ಪ ಎತ್ತರದಲ್ಲಿದ್ದುದರಿಂದ, ಹೊಲದೊಳಕ್ಕೆ ಹೋಗುತ್ತಿರಲಿಲ್ಲ. ನೀರನ್ನು ಹೊಲದೊಳಕ್ಕೆ ಹರಿಸಲು ಮಾಡಿದ ಅವನ ಎಲ್ಲ ಪ್ರಯತ್ನಗಳೂ ವಿಫಲವಾದವು. ನೀರನ್ನು ಸರಿಯಾದ ದಾರಿಗೆ ತರಲು ಅವನು ದೊಡ್ಡ ದೊಡ್ಡ ಕಲ್ಲುಗಳನ್ನು ಅಡ್ಡ ಇಟ್ಟನು. ಆದರೆ ನೀರು ಹೋಗ ಬೇಕಾದ ದಾರಿಯನ್ನೇ ಬಿಟ್ಟು ಬೇರೆ ದಾರಿ ಹಿಡಿಯಿತು. ಹೊಲದೊಳಕ್ಕೆ ನೀರು ಹರಿಯಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಅವನು ನೀರನ್ನು ಹೊಲದೊಳಕ್ಕೆ ತರಲಾಗಲಿಲ್ಲ. ಅದರಿಂದ ಬಹಳ ನಿರಾಶನಾದ ಅರುಣ, ದೇವರನ್ನು ಸ್ಮರಿಸುತ್ತ, ನೀರು ಹೊಲದೊಳಕ್ಕೆ ಹೋಗದಿದ್ದರೆ ನಾನು ಪ್ರಾಣತ್ಯಾಗ ಮಾಡುತ್ತೇನೆ ಎಂದು ನಿರ್ಧರಿಸಿ, ಶ್ರೀಗುರುವಿನ ಧ್ಯಾನಮಾಡುತ್ತಾ, ಕಲ್ಲುಗಳಿಟ್ಟುದದರಿಂದ ಅಡ್ಡ ದಾರಿಯನ್ನು ಹಿಡಿದಿದ್ದ ನೀರಿನ ಎದುರಿಗೆ ತನ್ನ ದೇಹವನ್ನೇ ಇಟ್ಟು ನೀರಿನ ಪ್ರವಾಹವನ್ನು ತಡೆದನು. ಆಗ ನೀರು ಸರಿಯಾದ ದಾರಿಯನ್ನು ಹಿಡಿದು ಹೊಲದೊಳಕ್ಕೆ ಹೊರಟಿತು. ಆ ಪ್ರಯತ್ನದಿಂದ ಅವನ ದೇಹವು ನೀರಿನಲ್ಲಿ ಮುಳುಗಿ ಹೋಯಿತು. ಹಾಗೆ ಅವನು ಗುರುವಿನ ಆಜ್ಞೆಯನ್ನು ಪಾಲಿಸಿದನು. ಬಹಳ ಹೊತ್ತಾದರೂ ಅರುಣ ಹಿಂತಿರುಗಿ ಬರಲಿಲ್ಲವೆಂದು ಆತಂಕಗೊಂಡ ಗುರುವು ಅಲ್ಲಿಗೆ ಬಂದು ಹೊಲದಲ್ಲಿ ನೀರು ತುಂಬಿರುವುದನ್ನು ನೋಡಿ ಬಹಳ ಸಂತೋಷಗೊಂಡನು. ಆದರೆ ಶಿಷ್ಯನಾದ ಅರುಣ ಎಲ್ಲಿಯೂ ಕಾಣಲಿಲ್ಲವಾದ್ದರಿಂದ ಅವನನ್ನು ಹುಡುಕುತ್ತಾ, "ಹೇ ಅರುಣ ಎಲ್ಲಿದ್ದೀಯೆ?" ಎಂದು ಗಟ್ಟಿಯಾಗಿ ಕೂಗುತ್ತಾ, ಅವನ ಜಾಡನ್ನು ಹುಡುಕಲು ಆರಂಭಿಸಿದನು. ಗುರುವಿನ ಕೂಗು ಅರುಣನ ಕಿವಿಗೆ ಬಿದ್ದು, ಅವನು ಪ್ರಯತ್ನಮಾಡಿ ಮೆಲ್ಲಮೆಲ್ಲಗೆ ಎದ್ದುಬಂದು ಗುರುವಿನ ಪಾದಗಳಿಗೆ ನಮಸ್ಕರಿಸಿ, ಭಕ್ತಿಯಿಂದ ಗುರುವಿನ ಎದುರಿಗೆ ನಿಂತನು. ಅವನಿಂದ ಎಲ್ಲವನ್ನೂ ಕೇಳಿಸಿಕೊಂಡ ಗುರುವು, ಅವನನ್ನು ಆಲಂಗಿಸಿಕೊಂಡು, "ನೀನು ನನ್ನ ಶಿಷ್ಯರಲ್ಲಿ ಉತ್ತಮನು. ನೀನು ವೇದಶಾಸ್ತ್ರ ನಿಪುಣನಾಗು" ಎಂದು ಆಶೀರ್ವದಿಸಿದನು. ಮತ್ತೊಮ್ಮೆ ತನ್ನ ಪಾದಗಳಿಗೆ ನಮಸ್ಕರಿಸಿದ ಅರುಣನನ್ನು, ಕೃಪಾನಿಧಿಯಾದ ಧೌಮ್ಯನು, "ಮಗು ನೀನು ಇನ್ನು ನಿನ್ನ ಮನೆಗೆ ಹೋಗಿ, ಅನುರೂಪಳಾದ ಕನ್ಯೆಯನ್ನು ವಿವಾಹ ಮಾಡಿಕೊಂಡು ಕೃತಾರ್ಥನಾಗು" ಎಂದು ಮತ್ತೊಮ್ಮೆ ಅಶೀರ್ವದಿಸಿ ಕಳುಹಿಸಿದನು. ಗುರ್ವಾಜ್ಞೆಯನ್ನು ಶಿರಸಾವಹಿಸಿ ಅರುಣ ತನ್ನ ಮನೆಗೆ ಹಿಂತಿರುಗಿ ವಿದ್ವದ್ವೇತ್ತನಾಗಿ ಸುಖವಾಗಿ ಜೀವಿಸಿದನು.

ಅರುಣ ಹೊರಟುಹೋದಮೇಲೆ ಧೌಮ್ಯನಿಗೆ ಇನ್ನೂ ಇಬ್ಬರು ಶಿಷ್ಯರಿದ್ದರು. ಅವರಲ್ಲಿ ಬೈದನನ್ನು ಪರೀಕ್ಷಿಸಲು ಧೌಮ್ಯನು ಅವನನ್ನು ಕರೆದು, "ಬೈದ, ಹೊಲಕ್ಕೆ ಹೋಗಿ ಅಲ್ಲಿ ದಿನಪೂರ್ತಿ ಕಾವಲಿದ್ದು ಬೆಳೆಯನ್ನು ಕಾಪಾಡಿ, ಅದು ಪಕ್ವವಾದ ಮೇಲೆ ಕೊಯ್ದು, ಧಾನ್ಯವನ್ನೆಲ್ಲಾ ಮನೆಗೆ ತೆಗೆದುಕೊಂಡು ಬಾ" ಎಂದು ಹೇಳಿದನು. ಗುರುವಿನ ಆಜ್ಞೆಯನ್ನು ಶಿರಸಾವಹಿಸಿ, ಬೈದನು ಸಂತೋಷದಿಂದ ಹೊಲಕ್ಕೆ ಹೋಗಿ ಫಸಲು ಪಕ್ವವಾಗುವವರೆಗೂ ಅದನ್ನು ಕಾಯುತ್ತಿದ್ದು, ಪಕ್ವವಾದಮೇಲೆ ಅದನ್ನು ಕೊಯ್ದು ಧಾನ್ಯವನ್ನೆಲ್ಲಾ ಬೇರೆಮಾಡಿ, ಗುರುವಿನ ಸನ್ನಿಧಿಗೆ ಬಂದು, "ಧಾನ್ಯವನ್ನೆಲ್ಲಾ ಬೇರೆಮಾಡಿ, ರಾಶಿಮಾಡಿದ್ದೇನೆ. ಅದನ್ನು ಮನೆಗೆ ತರಲು ಅನುಮತಿ ಕೊಡಿ" ಎಂದು ಹೇಳಿದನು. ಧೌಮ್ಯನು ಅವನಿಗೆ ಗಾಡಿಯೊಂದನ್ನು ಕೊಟ್ಟು, "ಬೇಗ ಹೋಗಿ ಧಾನ್ಯವನ್ನೆಲ್ಲ ತಂದು ಮನೆಗೆ ಸೇರಿಸು" ಎಂದು ಹೇಳಿದನು. ಆ ಗಾಡಿಗೆ ಎರಡು ಎಮ್ಮೆಗಳ ಬದಲಾಗಿ ಒಂದೇ ಎಮ್ಮೆಯಿತ್ತು. ಬೈದನು, ಗಾಡಿಯಲ್ಲಿ ಧಾನ್ಯವನ್ನೆಲ್ಲ ತುಂಬಿ, ಒಂದೇ ಎಮ್ಮೆ ಇದ್ದದ್ದರಿಂದ ಅದನ್ನು ಒಂದು ಕಡೆ ಕಟ್ಟಿ, ಇನ್ನೊಂದು ಕಡೆ ತಾನೇ ನೊಗವನ್ನು ಹಿಡಿದು ಗಾಡಿಯನ್ನು ಎಳೆದು ತರುತ್ತಿರುವಾಗ, ದಾರಿಯಲ್ಲಿ ಎಮ್ಮೆ ಒಂದು ಹಳ್ಳದಲ್ಲಿ ಬಿದ್ದು ಹೋಯಿತು. ಬೈದನು ಆ ಎಮ್ಮೆಯನ್ನು ನೊಗದಿಂದ ಬಿಡಿಸಿ, ತಾನೊಬ್ಬನೇ ಗಾಡಿಯನ್ನು ಎಳೆಯಲು ಪ್ರಯತ್ನಿಸಿದನು. ತನ್ನ ಬಲವನ್ನೆಲ್ಲ ಬಿಟ್ಟು ಬಹು ಭಾರವಾದ ಆ ಗಾಡಿಯನ್ನು ಎಳೆಯುತ್ತಿರಲು, ಉಸಿರುಕಟ್ಟಿ ಮೂರ್ಛಿತನಾಗಿ ಬಿದ್ದುಬಿಟ್ಟನು. ಬಹಳ ಸಮಯವಾದರೂ ಮನೆಗೆ ಬೈದನು ಬರಲಿಲ್ಲವೆಂದು ಅವನನ್ನು ಹುಡುಕುತ್ತಾ ಬಂದ ಧೌಮ್ಯನು, ಅವನು ಮೂರ್ಛಿತನಾಗಿ ಬಿದ್ದಿದ್ದುದನ್ನು ಕಂಡು, ಅವನನ್ನು ಎಬ್ಬಿಸಿ, ಆಲಂಗಿಸಿಕೊಂಡು, "ನೀನು ವೇದಶಾಸ್ತ್ರವೇತ್ತನಾಗು" ಎಂದು ಆಶೀರ್ವದಿಸಿದನು, ಕ್ಷಣದಲ್ಲಿಯೇ ಸರ್ವವಿದ್ಯಾ ವಿಶಾರದನಾಗಿ ಬೈದನು, ಗುರುವಿನ ಅನುಮತಿ ಪಡೆದು, ತನ್ನ ಮನೆಗೆ ಹಿಂತಿರುಗಿ ಪ್ರಖ್ಯಾತನಾದನು.

ಮೂರನೆಯವನು ಉಪಮನ್ಯುವು. ಅವನೂ ಗುರುಸೇವಾ ಪರಾಯಣನೇ! ಆದರೆ ಅವನು ಆಹಾರ ಪ್ರಿಯನಾದದ್ದರಿಂದ ಅವನಿಗೆ ವಿದ್ಯಾಭ್ಯಾಸದಲ್ಲಿ ಮನಸ್ಸು ಸ್ಥಿರವಾಗಲಿಲ್ಲ. ಅದರ ಬಗ್ಗೆ ಚಿಂತಿಸಿ ಧೌಮ್ಯನು ಒಂದು ಉಪಾಯವನ್ನು ಮಾಡಿದನು. ಒಂದು ದಿನ ಧೌಮ್ಯನು ಉಪಮನ್ಯುವನ್ನು ಕರೆದು, "ಮಗು, ಹಸುಗಳನ್ನು ಪ್ರತಿದಿನವೂ ಕಾಡಿಗೆ ಕರೆದುಕೊಂಡು ಹೋಗಿ ಅವನ್ನು ಮೇಯಿಸಿಕೊಂಡು ಬಾ" ಎಂದು ಹೇಳಿದನು. ಉಪಮನ್ಯುವು ಗುರುವಾಜ್ಞೆಯನ್ನು ಶಿರಸಾವಹಿಸಿ, ಹಸುಗಳನ್ನು ಕರೆದುಕೊಂಡು ಹೋಗುತ್ತಿದ್ದನು. ಆದರೆ ಅವನಿಗೆ ಹಸಿವು ಹೆಚ್ಚಾಗಿದ್ದುದರಿಂದ ಅವನು ಹಸಿವೆಯನ್ನು ತಾಳಲಾರದೆ, ಬಹಳ ಬೇಗ ಮನೆಗೆ ಹಿಂತಿರುಗುತ್ತಿದ್ದನು. ಅದನ್ನು ಗಮನಿಸಿದ ಗುರುವು, ಕೋಪಗೊಂಡು, "ನೀನೇಕೆ ಹಸುಗಳನ್ನು ಬೇಗನೆ ಮನೆಗೆ ಕರೆದುಕೊಂಡು ಬರುತ್ತಿದ್ದೀಯೆ? ಸೂರ್ಯಾಸ್ತಮದವರೆಗೂ ಅವುಗಳನ್ನು ಮೇಯಿಸಿಕೊಂಡು ಬರಬೇಕು" ಎಂದು ಆಜ್ಞೆ ಮಾಡಿದನು. ಹಾಗೇ ಆಗಲೆಂದು ಹೇಳಿ, ಉಪಮನ್ಯುವು ಹಸುಗಳನ್ನು ಕರೆದುಕೊಂಡು ಹೋಗಿ, ಹಸಿವೆಯನ್ನು ತಾಳಲಾರದೆ, ಅಲ್ಲಿ ನದಿಯಲ್ಲಿ ಸಂಧ್ಯಾ ಕರ್ಮಗಳನ್ನಾಚರಿಸಿ, ಹತ್ತಿರದಲ್ಲಿದ್ದ ಗ್ರಾಮದಲ್ಲಿ ಬ್ರಾಹ್ಮಣರ ಮನೆಗಳಲ್ಲಿ ಭಿಕ್ಷೆಯೆತ್ತಿ, ಭಿಕ್ಷಾನ್ನವನ್ನುಂಡು, ಸಾಯಂಕಾಲದವೇಳೆಗೆ ಹಸುಗಳನ್ನು ಮನೆಗೆ ಕರೆತರುತ್ತಿದ್ದನು. ಅವನನ್ನು ಗಮನಿಸುತ್ತಿದ್ದ ಧೌಮ್ಯನು ಶಿಷ್ಯನು ಹಸಿವೆಯಿಂದ ಒದ್ದಾಡದೇ ಇರುವುದನ್ನು ಕಂಡು, "ಶಿಷ್ಯ, ನೀನು ಕಾಡಿನಲ್ಲಿ ಉಪವಾಸ ಇರುತ್ತೀಯೆ ಅಲ್ಲವೇ? ಆದರೂ ನಿನ್ನ ಶರೀರವು ಪುಷ್ಟಿಯಾಗಿಯೇ ಕಾಣುತ್ತಿದೆ. ಅದಕ್ಕೆ ಕಾರಣವೇನು?" ಎಂದು ಕೇಳಿದನು. ಉಪಮನ್ಯುವು, "ಗುರುದೇವ, ನಾನು ವಿಪ್ರರ ಮನೆಗಳಲ್ಲಿ ಭಿಕ್ಷೆಯೆತ್ತಿ ಹಸಿವೆ ತೀರಿಸಿಕೊಂಡು ಹಸುಗಳನ್ನು ಮೇಯಿಸುತ್ತಿದ್ದೇನೆ" ಎಂದು ಹೇಳಿದನು. ಅದನ್ನು ಕೇಳಿ ಧೌಮ್ಯನು ಕೋಪದಿಂದ, "ನನಗೆ ನಿವೇದಿಸದೆ ಹೇಗೆ ನೀನು ಭಿಕ್ಷಾನವನ್ನು ತಿನ್ನುತ್ತೀಯೆ? ಇನ್ನುಮೇಲೆ, ಪ್ರತಿದಿನವೂ ಭಿಕ್ಷೆಮಾಡಿದ ನಂತರ ಅದನ್ನು ನನಗೆ ತಂದುಕೊಟ್ಟು ಮತ್ತೆ ಕಾಡಿಗೆ ಹೋಗಿ ಹಸುಗಳನ್ನು ಮೇಯಿಸಿಕೊಂಡು ಬಾ" ಎಂದು ಆಜ್ಞೆ ಮಾಡಿದನು. ಹಾಗೇ ಆಗಲೆಂದು ಹೇಳಿ, ಉಪಮನ್ಯುವು, ಪ್ರತಿದಿನ ಭಿಕ್ಷಾನ್ನವನ್ನು ತಂದು ಗುರುವಿಗೆ ಅರ್ಪಿಸಿ ಕಾಡಿಗೆ ಹಿಂತಿರುಗಿ, ಎರಡನೆಯ ಸಲ ಭಿಕ್ಷೆಯೆತ್ತಿ ತಿಂದು ಹಸುಗಳನ್ನು ಕಾಯಲು ಹೋಗುತ್ತಿದ್ದನು. ಹೀಗೇ ಸ್ವಲ್ಪ ಕಾಲವಾದಮೇಲೆ ಅವನು ಇನ್ನೂ ಪುಷ್ಟಿಯಾಗಿಯೇ ಇರುವುದನ್ನು ಕಂಡ ಧೌಮ್ಯನು, ಮತ್ತೆ ಅವನನ್ನು ಅದಕ್ಕೆ ಕಾರಣವೇನೆಂದು ಕೇಳಿದನು. ಉಪಮನ್ಯುವು ತನ್ನ ಹಸಿವಿನ ಉಪಶಮನಕ್ಕಾಗಿ ತಾನು ಎರಡನೆಯ ಸಲ ಭಿಕ್ಷೆ ಎತ್ತುತ್ತಿರುವುದಾಗಿ ಹೇಳಿದನು. ಅದಕ್ಕೆ ಧೌಮ್ಯನು ಕ್ರುದ್ಧನಾಗಿ, "ಎರಡನೆಯ ಸಲ ಮಾಡಿದ ಭಿಕ್ಷೆಯನ್ನೂ ನನಗೇ ತಂದು ಕೊಡಬೇಕು" ಎಂದು ಆಜ್ಞೆ ಮಾಡಿದನು. ಉಪಮನ್ಯುವು ಗುರುವಿನ ಆಜ್ಞೆಯಂತೆ ಎರಡನೆಯಸಲ ಮಾಡಿದ ಭಿಕ್ಷೆಯನ್ನೂ ತಂದು ಗುರುವಿಗೆ ಅರ್ಪಿಸಿ ಮತ್ತೆ ಕಾಡಿಗೆ ಹಸುಗಳನ್ನು ಕಾಯಲು ಹೋಗುತ್ತಿದ್ದನು. ಆದರೆ ತಾಳಲಾರದ ಹಸಿವಿನಿಂದ ಅವನು ಕರುಗಳು ಹಾಲು ಕುಡಿದಾದಮೇಲೆ ಹಾಲು ಸುರಿಯುವುದನ್ನು ಕಂಡು, ಅ ಎಂಜಲು ಹಾಲನ್ನು ಕುಡಿಯಬಹುದೆಂದು ತಿಳಿದು ಅದನ್ನು ಕುಡಿದು ಹಸಿವೆ ತೀರಿಸಿಕೊಳ್ಳುತ್ತಿದ್ದನು. ಹೀಗೆ ದಿನವೂ ಹಾಲು ಕುಡಿದು ಪುಷ್ಟಿಯಾಗಿದ್ದ ಅವನನ್ನು ಕಂಡು ಧೌಮ್ಯನು ಅವನನ್ನು ಕಾರಣ ಕೇಳಲು, ತಾನು ಕರುಗಳು ಕುಡಿದು ಬಿಟ್ಟ ಹಾಲನ್ನು ಕುಡಿಯುತ್ತಿದ್ದೇನೆಂದು ನಿಜವನ್ನು ನುಡಿದನು. ಅದಕ್ಕೆ ಗುರುವು, "ಎಂಜಲು ಹಾಲು ಕುಡಿಯುವುದರಿಂದ ಅನೇಕ ದೋಷಗಳುಂಟಾಗುತ್ತವೆ. ಅದರಿಂದ ಅದನ್ನು ಕುಡಿಯಬೇಡ" ಎಂದು ಆಣತಿಯಿತ್ತನು. ಆ ಆಣತಿಯನ್ನೂ ಪಾಲಿಸಿದ ಉಪಮನ್ಯುವು ಹಸಿವಿನಿಂದ ಕಂಗೆಟ್ಟು, ಚಿಂತಾಕುಲನಾಗಿ, ಹಸುಗಳನ್ನು ಮೇಯಿಸುತ್ತಾ, ದಾರಿಯಲ್ಲಿ ಎಕ್ಕದ ಗಿಡವೊಂದರಿಂದ ಹಾಲು ಸುರಿಯುತ್ತಿರುವುದನ್ನು ಕಂಡನು. ಈ ಹಾಲು ಎಂಜಲಲ್ಲ. ಇದನ್ನು ಕುಡಿಯಬಹುದು ಎಂದು ಯೋಚಿಸಿ, ಒಂದು ಎಲೆಯಲ್ಲಿ ಆ ಹಾಲನ್ನು ಹಿಡಿದು ಕುಡಿಯುತ್ತಿರುವಾಗ ಆ ಹಾಲು ಅವನ ಕಣ್ಣಲ್ಲಿ ಬಿದ್ದು ಅವನಿಗೆ ಕಣ್ಣು ಕಾಣದೇ ಹೋಯಿತು. ಕಣ್ಣಿಲ್ಲದವನಾಗಿ, ದಾರಿ ತಿಳಿಯದೆ, ಎಲ್ಲಿ ಹೋಗುತ್ತಿದ್ದೇನೆಂಬ ಅರಿವಿಲ್ಲದೆ, ಚಿಂತಾ ಕ್ರಾಂತನಾಗಿ ಹಸುಗಳನ್ನು ಹುಡುಕುತ್ತಾ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಭಾವಿಯಲ್ಲಿ ಬಿದ್ದುಹೋದನು.

ಹಿಂತಿರುಗಿದ ಹಸುಗಳ ಜೊತೆಗೆ ಉಪಮನ್ಯುವು ಬರದಿದ್ದುದನ್ನು ಕಂಡ ಗುರುವು ಅವನೇನಾದನೋ ಎಂದು ಚಿಂತೆಗೊಂಡು, ಅವನನ್ನು ಹುಡುಕಲು ಕಾಡಿಗೆ ಹೋಗಿ, ಅವನ ಹೆಸರು ಕೂಗುತ್ತಾ, ಹುಡುಕಾಡಿದನು. ಗುರುವಿನ ಕೂಗನ್ನು ಕೇಳಿದ ಉಪಮನ್ಯುವು ಭಾವಿಯೊಳಗಿಂದಲೇ ಕ್ಷೀಣವಾದ ಧ್ವನಿಯಿಂದ ಉತ್ತರಿಸಿದನು. ಅದನ್ನು ಕೇಳಿ ಗುರುವು ಅಲ್ಲಿಗೆ ಬಂದು ನಡೆದದ್ದೆಲ್ಲವನ್ನೂ ಅವನಿಂದ ತಿಳಿದುಕೊಂಡು ಅವನಿಗೆ ಅಶ್ವಿನಿದೇವತೆಗಳನ್ನು ಪ್ರಾರ್ಥಿಸಿಕೊಳ್ಳುವಂತೆ ಹೇಳಿದನು. ಉಪಮನ್ಯುವು ಅದೇ ರೀತಿ ಪ್ರಾರ್ಥಿಸಿಕೊಳ್ಳಲು, ಅಶ್ವಿನಿ ದೇವತೆಗಳ ಅನುಗ್ರಹದಿಂದ ಅವನಿಗೆ ಹಿಂದಿನಂತೆ ದೃಷ್ಟಿ ಬಂತು. ಭಾವಿಯಿಂದ ಮೇಲಕ್ಕೆ ಬಂದು ಅವನು ಗುರು ಪಾದಗಳಿಗೆ ನಮಸ್ಕರಿಸಿ, ಸ್ತೋತ್ರಮಾಡಿದನು. ಅದರಿಂದ ಸಂತೋಷಗೊಂಡ ಧೌಮ್ಯನು, "ಶಿಷ್ಯೋತ್ತಮ ನಿನ್ನ ಭಕ್ತಿಗೆ ಮೆಚ್ಚಿದೆ" ಎಂದು ಹೇಳಿ ಅವನ ತಲೆಯಮೇಲೆ ಕೈಯಿಟ್ಟು ಅಶೀರ್ವದಿಸಿದನು. ತಕ್ಷಣವೇ ಉಪಮನ್ಯುವು ವೇದಶಾಸ್ತ್ರನಿಪುಣನಾದನು. ಗುರುವು, "ಮಗು, ನೀನು ನಿನ್ನ ಮನೆಗೆ ಹಿಂತಿರುಗಿ, ನಿನಗೆ ಅನುರೂಪಳಾದ ಕನ್ಯೆಯನ್ನು ಮದುವೆಯಾಗಿ ಸುಖವಾಗಿ ಜೀವನಮಾಡು. ನಿನ್ನ ಕೀರ್ತಿ ನಾಲ್ಕೂ ದಿಕ್ಕುಗಳಲ್ಲಿ ಹರಡಿ, ನಿನ್ನ ಶಿಷ್ಯರೂ ನಿನ್ನಂತಹವರೇ ಆಗುತ್ತಾರೆ. ಅವರಲ್ಲಿ ಉದಂಕನೆಂಬುವನೊಬ್ಬನು ಪ್ರಸಿದ್ಧಿಯಾಗುತ್ತಾನೆ. ನಾಗರನ್ನು ಜಯಿಸಿ ನಿನಗೆ ದಕ್ಷಿಣೆಯೆಂದು ಅವನು ನಾಗಕುಂಡಲಗಳನ್ನು ತಂದುಕೊಡುತ್ತಾನೆ. ಜನಮೇಜಯನ ಸರ್ಪಯಾಗದಲ್ಲಿ ಸರ್ಪಗಳಹೋಮ ಮಾಡಿ ಸರ್ಪಗಳ ನಾಶಮಾಡುತ್ತಾನೆ" ಎಂದು ಅವನನ್ನು ಆಶೀರ್ವದಿಸಿ ಕಳುಹಿಸಿದರು. ಉಪಮನ್ಯುವು ಮನೆಗೆ ಹಿಂತಿರುಗಿ ಗುರುವು ಹೇಳಿದಂತೆ ಮಾಡಿ ಪ್ರಖ್ಯಾತನಾದನು.

ಉಪಮನ್ಯುವಿನ ಶಿಷ್ಯ ಉದಂಕನು ಇಂದ್ರ ರಕ್ಷಿತ ತಕ್ಷಕನನ್ನು ಕೂಡ, ಗುರುಕೃಪಾ ಸಾಮರ್ಥ್ಯದಿಂದ, ಯಾಗದಲ್ಲಿ ಕರೆಯಲು ಸಮರ್ಥನಾದನು. ಗುರುದ್ರೋಹಿಗೆ ಇಹಪರಗಳಲ್ಲಿ ಸುಖವಿಲ್ಲ. ಗುರುದ್ರೋಹಿಯಾದ ಶಿಷ್ಯನು ಕುಂಭೀಪಾಕ ನರಕದಲ್ಲಿ ಬೀಳುತ್ತಾನೆ. ಗುರುವು ಸಂತುಷ್ಟನಾದರೆ ಸಾಧಿಸಲಸಾಧ್ಯವೆನ್ನುವುದು ಯಾವುದೂ ಇರುವುದಿಲ್ಲ. ಗುರುವು ಸಂತೋಷಗೊಂಡರೆ ಕ್ಷಣದಲ್ಲಿ ಶಿಷ್ಯನಿಗೆ ವೇದಶಾಸ್ತ್ರಾದಿಗಳು ಲಭ್ಯವಾಗುತ್ತವೆ. ಇದನ್ನು ತಿಳಿಯದೆ ನೀನು ಭ್ರಮೆಯಲ್ಲಿ ಬಿದ್ದಿದ್ದೀಯೆ. ಈಗಲಾದರೂ ಗುರುವಿನ ಬಳಿಗೆ ಹೋಗು. ಅವನೇ ನಿನ್ನನ್ನು ಉದ್ಧರಿಸಬಲ್ಲವನು. ನಿನ್ನ ಗುರುವು ಸಂತೋಷಗೊಂಡರೆ ನಿನಗೆ ಮಂತ್ರಸಿದ್ಧಿ ಶೀಘ್ರವಾಗಿ ಆಗುವುದು. ಈ ವಿಷಯವನ್ನು ನಿನ್ನ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು ನೀನು ನಿನ್ನ ಗುರುವಿನ ಬಳಿಗೆ ಹೋಗು" ಎಂದು ಶ್ರೀಗುರುವು ಆ ಬ್ರಾಹ್ಮಣನಿಗೆ ಹೇಳಲು, ಅವನಿಗೆ ನಿಜದ ಅರಿವುಂಟಾಗಿ, ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟು, "ಹೇ ಗುರುದೇವ, ಪರಾರ್ಥ ಸಾಧನವು ನೀವೇ! ಕೃಪೆಯಿಟ್ಟು ನನಗೆ ತತ್ತ್ವಬೋಧೆ ಮಾಡಿದಿರಿ. ನಿಜವಾಗಿಯೂ ನಾನು ಗುರುದ್ರೋಹಿಯೇ! ನನ್ನ ಅಪರಾಧಗಳಿಗೆ ಕೊನೆಯಿಲ್ಲ. ನನ್ನ ಗುರುವಿನ ಮನಸ್ಸಿಗೆ ನೋವುಂಟುಮಾಡಿದೆ. ಅವನು ನನ್ನಲ್ಲಿ ಹೇಗೆ ಪ್ರಸನ್ನನಾಗುತ್ತಾನೆ? ಚಿನ್ನ ಬೆಳ್ಳಿ ಮುಂತಾದ ಲೋಹಗಳು ಮುರಿದರೆ ಅವನ್ನು ಸರಿಮಾಡಬಹುದು. ಆದರೆ ಮುತ್ಯವು ಒಡೆದರೆ ಅದನ್ನು ಸರಿಮಾಡಲಾಗುವುದೇ? ಹಾಗೆ ನಾನು ನನ್ನ ಗುರುವಿನ ಅಂತಃಕರಣವನ್ನು ಒಡೆದು ಬಿಟ್ಟಿದ್ದೇನೆ. ಅದನ್ನು ಸರಿಪಡಿಸಲಾಗುವುದಿಲ್ಲ. ಈ ಗುರುದ್ರೋಹಿಯ ಶರೀರವು ಇನ್ನು ಇರಬಾರದು. ಗುರ್ವಾರ್ಪಣವೆಂದು ಈ ಶರೀರವನ್ನು ತ್ಯಾಗಮಾಡುತ್ತೇನೆ" ಎಂದು ಹೇಳಿ, ಶ್ರೀಗುರುವಿಗೆ ನಮಸ್ಕಾರಮಡಿ, ಪಶ್ಚಾತ್ತಾಪ ದಗ್ಧನಾದ ಆ ಬ್ರಾಹ್ಮಣನು ಪ್ರಾಣ ತ್ಯಾಗಮಾಡಲು ಉದ್ಯುಕ್ತನಾದನು. ಹಾಗೆ ಪಶ್ಚಾತ್ತಾಪ ದಗ್ಧವಾದ ಬ್ರಾಹ್ಮಣನ ಮನಸ್ಸು ನಿಷ್ಕಲ್ಮಷವಾಯಿತು. ನಿಜವಾದ ಪಶ್ಚಾತ್ತಾಪದಿಂದ ನೂರು ಜನ್ಮಗಳಲ್ಲಿ ಮಾಡಿದ್ದ ಪಾಪಗಳೂ ಕೂಡಾ ನಾಶವಾಗಿ ಹೋಗಬಲ್ಲವು.

ಹೀಗೆ ವಿರಕ್ತನಾಗಿ ದೇಹತ್ಯಾಗಕ್ಕೆ ಸಿದ್ಧನಾಗುತ್ತಿದ್ದ ಬ್ರಾಹ್ಮಣನನ್ನು ಕರೆದು, "ಅಯ್ಯಾ ವಿಪ್ರ. ಚಿಂತಿಸಬೇಡ. ನಿನ್ನ ದುರಿತಗಳೆಲ್ಲ ನಾಶವಾದವು. ನಿನಗೆ ವೈರಾಗ್ಯವುಂಟಾಗಿದೆ. ಈಗ ನಿನ್ನ ಗುರುವನ್ನು ಸಮಾಧಾನ ಚಿತ್ತನಾಗಿ ಸ್ಮರಿಸಿಕೋ" ಎಂದು ಅಪ್ಪಣೆ ಮಾಡಿದರು. ತಕ್ಷಣವೇ ಅವನು, "ಸ್ವಾಮಿ, ನೀವು ತ್ರಿಮೂರ್ತ್ಯವತಾರರು. ಜಗದ್ಗುರುವು. ಭವತಾರಕರು. ನಿಮ್ಮ ಕೃಪೆ ನನ್ನ ಮೇಲೆ ಸರ್ವವಿಧದಲ್ಲೂ ಇರಲು ನನಗೆ ಪಾತಕಗಳಿನ್ನೆಲ್ಲಿಯದು?" ಎಂದು ಶ್ರೀಗುರುವನ್ನು ಭಕ್ತಿಯಿಂದ ಸ್ತುತಿಸಿ, ಪುಲಕಿತನಾಗಿ, ನಿರ್ಮಲ ಮನಸ್ಕನಾಗಿ, ಕಣ್ಣೀರುಸುರಿಸುತ್ತಾ, ವಿನಯ ವಿನಮ್ರತೆಗಳಿಂದ, "ಉದ್ಧರಿಸು, ಉದ್ಧರಿಸು" ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತಾ, ಸಾಷ್ಟಾಂಗನಮಸ್ಕಾರ ಮಾಡಿದನು.

ಅವನು ನಮಸ್ಕಾರಮಾಡಿ ಏಳುತ್ತಿದ್ದಹಾಗೆಯೇ, ವೇದಶಾಸ್ತ್ರ ನಿಪುಣನಾಗಿ, ಶ್ರೀಗುರುವಿನಿಂದ ಉದ್ಧರಿಸಲ್ಪಟ್ಟನು. ಶಂಕರನೇ ಪ್ರಸನ್ನನಾದಮೇಲೆ ಬೇರೆ ದೇವತೆಗಳ ಅವಶ್ಯಕತೆಯಾದರೂ ಏನು? ಗುರುಪಾದ ಸ್ಪರ್ಶದಿಂದ ಆ ಬ್ರಾಹ್ಮಣನು ಜ್ಞಾನಿಯಾಗಿ ಆನಂದ ತುಂಬಿದವನಾದನು. ಆಗ ಶ್ರೀಗುರುವು ಅವನನ್ನು ನೋಡಿ, "ಅಯ್ಯಾ, ನನ್ನ ಮಾತು ಕೇಳಿ, ಈಗ ನೀನು ನಿನ್ನ ಗುರುಸನ್ನಿಧಿಯನ್ನು ಸೇರು. ನಿನ್ನ ಹಿಂತಿರುಗುವಿಕೆಯಿಂದ ಆತನು ಸಂತುಷ್ಟನಾಗುತ್ತಾನೆ. ನೀನು ಆತನಿಗೆ ನಮಸ್ಕರಿಸುತ್ತಲೂ ಆತ ಇನ್ನೂ ಹೆಚ್ಚಿನ ಸಂತೋಷದಿಂದ ನಿನ್ನನ್ನು ಆದರಿಸುತ್ತಾನೆ. ಆತನೇ ನಾನೆಂದು ತಿಳಿದುಕೋ. ಇದರಲ್ಲಿ ನಿನಗೆ ಸಂದೇಹಬೇಡ" ಎಂದು ಹೇಳಿ ಆ ಬ್ರಾಹ್ಮಣನನ್ನು ಕಳುಹಿಸಿಕೊಟ್ಟರು. ಆ ಬ್ರಾಹ್ಮಣ ತನ್ನ ಗುರುಸನ್ನಿಧಿಯನ್ನು ಸೇರಿ ಮುಕ್ತನಾದನು.

ನಂತರ ಶ್ರೀಗುರುವು ಕೃಷ್ಣಾನದೀ ತೀರ ಯಾತ್ರೆಮಾಡುತ್ತಾ ಭಿಲ್ಲವಟಿ ಎಂಬ ಊರನಲ್ಲಿರುವ ಭುವನೇಶ್ವರಿಯನ್ನು ಸೇರಿದರು. ಕೃಷ್ಣವೇಣಿಯ ಪಶ್ಚಿಮತೀರದಲ್ಲಿ ಔದುಂಬರ ವೃಕ್ಷವಿದೆ. ಅದರ ಮೂಲದಲ್ಲಿ ಶ್ರೀಗುರುವು ನಿಂತರು. ಆ ಸ್ಥಳದಲ್ಲಿ ಸರ್ವಸಿದ್ಧಿಗಳೂ ಇವೆ. ಆ ಪ್ರದೇಶದ ಮಹಿಮೆಯನ್ನು ಕೇಳಿದರೂ ಸಾಕು ಮೋಕ್ಷ ಪ್ರಾಪ್ತಿಯಾಗುತ್ತದೆ." 

ಇಲ್ಲಿಗೆ ಹದಿನಾರನೆಯ ಅಧ್ಯಾಯ ಮುಗಿಯಿತು.



Friday, February 15, 2013

||ಶ್ರೀ ಗುರು ಚರಿತ್ರೆ - ಹದಿನೈದನೆಯ ಅಧ್ಯಾಯ||

"ಅಯ್ಯಾ, ಶಿಷ್ಯಶಿಖಾಮಣಿ, ನೀನು ಹೇಳುತ್ತಿರುವುದು ಧರ್ಮಯುಕ್ತವಾಗಿದೆ. ಗುರು ಚರಣಗಳಲ್ಲಿ ನಿನ್ನ ಮನಸ್ಸು ಧೃಢವಾಗಿ ನಿಂತಿದೆ. ಶ್ರೀಗುರುವು ರಹಸ್ಯವಾಗಿರಲು ಕಾರಣವನ್ನು ಹೇಳುತ್ತೇನೆ. ಕೇಳು. ಶ್ರೀಗುರುವಿನ ಮಹಿಮೆ ಲೋಕದಲ್ಲಿ ಪ್ರಖ್ಯಾತವಾಗಿದ್ದರಿಂದ ಬಹಳ ಜನ ದೂರದೂರಗಳಿಂದ ಅವರ ದರ್ಶನಕ್ಕಾಗಿ ಬರುತ್ತಿದ್ದರು. ಕಲಿಯುಗವಾದದ್ದರಿಂದ, ಸಾಧುಗಳು, ಸಾಧುಗಳಲ್ಲದವರು, ಧೂರ್ತರು ಮುಂತಾದ ಬಹಳ ಜನ ಶಿಷ್ಯರಾಗುತ್ತೇವೆಂದು ಅವರಲ್ಲಿಗೆ ಬರುತ್ತಿದ್ದರು. ಪರಶುರಾಮನು ಕ್ಷತ್ರಿಯರನ್ನೆಲ್ಲ ಸಂಹಾರ ಮಾಡಿ ಗೆದ್ದ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ದಾನಮಾಡಿ ತಾನು ಲವಣ ಸಮುದ್ರದ ಪಶ್ಚಿಮ ತೀರ ಸೇರಿದನು. ಅಲ್ಲಿ ತಪಸ್ಸು ಮಾಡುತ್ತಿರುವಾಗ ಅಲ್ಲಿಯೂ ಕೂಡ ಮತ್ತೆ ಕೆಲವರು ಬಂದು ಅವನನ್ನು ಯಾಚಿಸಲಾರಂಭಿಸಿದರು. ಅಷ್ಟೇ ಅಲ್ಲ ಕೆಲವರು, "ಈ ಭೂಮಿಯನ್ನೆಲ್ಲಾ ನಮಗೆ ಕೊಟ್ಟುಬಿಟ್ಟಮೇಲೆ, ನಮಗೆ ಕೊಟ್ಟ ಭೂಮಿಯಲ್ಲಿ ನೀವು ಇರುವುದು ಸಮಂಜಸವಲ್ಲ" ಎಂದೂ ಹೇಳಿದರು. ಅದರಿಂದ ಭಾರ್ಗವನು ಸಹ್ಯಪರ್ವತದ ದಕ್ಷಿಣಕ್ಕಿರುವ ಕೊಂಕಣವೆಂದು ಕರೆಯುವ ಪ್ರದೇಶವನ್ನು ಬಿಟ್ಟು, ಯಾಚಕರಿಂದ ತಪ್ಪಿಸಿಕೊಳ್ಳಲು ಸಮುದ್ರದ ಒಳಗೆ ರಹಸ್ಯವಾಗಿ ನಿಂತನು. ಅದರಂತೆಯೇ ಶ್ರೀಗುರುವು ಕೂಡಾ ಈ ಜನಗಳು ಕೇಳುವ ಅನೇಕ ವರಗಳು ಸಾಧುವಲ್ಲ ಎಂದು ಯೋಚಿಸಿ ರಹಸ್ಯವಾಗಿರಲು ನಿರ್ಧರಿಸಿದರು. ಶ್ರೀಗುರುವು ಜಗದ್ವ್ಯಾಪಕನು. ಕೇಳಿದ ವರದಾನ ಸಮರ್ಥನಾದರೂ, ಅನಿತ್ಯವಾದ ವರಗಳಿಂದ ಪ್ರಯೋಜನವಿಲ್ಲ ಎಂದು ಯೋಚಿಸಿ, ತನ್ನದೇ ಮಾಯೆಯಿಂದ ಅದೃಶ್ಯನಾಗಲು ನಿರ್ಧರಿಸಿದನು.

ಹಾಗೆ ನಿರ್ಧಾರಮಾಡಿ, ಒಂದು ದಿನ ಶ್ರೀಗುರುವು, ತನ್ನ ಶಿಷ್ಯರೆಲ್ಲರನ್ನೂ ಕರೆದು, "ನೀವೆಲ್ಲರೂ ತೀರ್ಥಯಾತ್ರೆಗಳಿಗೆ ಹೊರಡಿ. ಮತ್ತೆ ನಿಮಗೆ ಶ್ರೀಶೈಲದಲ್ಲಿ ನಮ್ಮ ದರ್ಶನವಾಗುತ್ತದೆ" ಎಂದರು. ಶಿಷ್ಯರೆಲ್ಲರೂ, ಶ್ರೀಗುರುವಿನ ಚರಣಗಳನ್ನು ಹಿಡಿದು, "ಹೇ ಕೃಪಾನಿಧಿ, ಗುರುರಾಯ, ನಮ್ಮನ್ನೇಕೆ ಹೀಗೆ ಉಪೇಕ್ಷಿಸುತ್ತಿದ್ದೀರಿ? ನಿಮ್ಮ ಪಾದ ದರ್ಶನವೇ ನಮಗೆ ಸರ್ವತೀರ್ಥ ದರ್ಶನವಲ್ಲವೇ? ನಿಮ್ಮ ಚರಣಗಳನ್ನು ಬಿಟ್ಟು ನಾವು ಇನ್ನೆಲ್ಲಿಗೆ ಹೋಗಬೇಕೋ ನಮಗೆ ತಿಳಿಯದು. ಶ್ರೀಗುರುವಿನ ಪಾದಗಳಲ್ಲಿ ಸರ್ವತೀರ್ಥಗಳೂ ಇವೆ ಎಂಬುದು ಶೃತಿವಾಕ್ಯವಲ್ಲವೇ? ಸರ್ವ ಶಾಸ್ತ್ರಗಳ ಸಿದ್ಧಾಂತವೂ ಅದೇ ಅಲ್ಲವೇ? ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುತ್ತಾರೆಯೇ? ಕಲ್ಪವೃಕ್ಷವನ್ನು ಬಿಟ್ಟು ದೂರದ ಮುಳ್ಳುಗಿಡಕ್ಕೆ ಕೈನೀಡುತ್ತಾರೆಯೇ?" ಎಂದು ಕಳಕಳಿಯಿಂದ ಕೇಳಿದರು.

ಅದಕ್ಕೆ ಶ್ರೀಗುರುವು, "ಶಿಷ್ಯರೇ, ನಾವು ಸನ್ಯಾಸಿಗಳು. ಒಂದೇಸ್ಥಳದಲ್ಲಿ ಐದು ದಿನಗಳಿಗಿಂತ ಹೆಚ್ಚುಕಾಲ ನಿಲ್ಲಬಾರದು. ಸನ್ಯಾಸಾಶ್ರಮವನ್ನು ಸ್ವೀಕರಿಸಿ ಭೂಲೋಕದಲ್ಲಿನ ತೀರ್ಥಗಳನ್ನೆಲ್ಲಾ ದರ್ಶಿಸಬೇಕು. ಹಾಗೆ ಮಾಡುವುದರಿಂದ ನಿಮ್ಮ ಚಿತ್ತವು ಸ್ಥಿರವಾಗಿ, ಏಕಾಂತ ವಾಸವೂ ಪ್ರಶಸ್ತವಾಗುತ್ತದೆ. ನನ್ನ ಮಾತನ್ನು ಕೇಳಿ, ನಿಮ್ಮ ಆಶ್ರಮ ಧರ್ಮವನ್ನು ಪಾಲಿಸಿ. ತೀರ್ಥ ಸ್ನಾನಗಳನ್ನು ಮಾಡಿ ಶುದ್ಧರಾಗಿ, ಮತ್ತೆ ನನ್ನನ್ನು ಸೇರಿಕೊಳ್ಳಿ. ಬಹುಧಾನ್ಯ ಸಂವತ್ಸರದಲ್ಲಿ ಶ್ರೀಶೈಲವನ್ನು ಸೇರಿ ಅಲ್ಲಿ ನನ್ನ ದರ್ಶನ ಮಾಡಿಕೊಳ್ಳಿ" ಎಂದರು. ಶಿಷ್ಯರು ಧೃಢಮನಸ್ಕರಾಗಿ, ಅವರ ಆದೇಶವನ್ನು ಸ್ವೀಕರಿಸಿ, ದೈನ್ಯಭಾವದಿಂದ ಶ್ರೀಗುರುವನ್ನು, "ಸ್ವಾಮಿ, ನಿಮ್ಮ ಮಾತುಗಳೇ ನಮಗೆ ಪ್ರಮಾಣ. ಈ ಭೂತಲದಲ್ಲಿರುವ ತೀರ್ಥಗಳನ್ನು ದರ್ಶಿಸಿ ಕೃತಾರ್ಥರಾಗುತ್ತೇವೆ. ಗುರು ವಾಕ್ಯವನ್ನು ಉಲ್ಲಂಘಿಸಿದವನು ರೌರವನರಕವನ್ನು ಸೇರುತ್ತಾನೆಯಲ್ಲವೇ? ಅಂತಹವನಿಗೆ ಯಮಲೋಕವೇ ಮನೆಯಾಗುವುದು. ಹೇ ಗುರುಸಾರ್ವಭೌಮ, ಯಾವಯಾವ ತೀರ್ಥಗಳನ್ನು ನಾವು ಸಂದರ್ಶಿಸಬೇಕು ಎಂಬುದನ್ನು ಹೇಳಿ. ನೀವು ಅಪ್ಪಣೆ ಕೊಟ್ಟ ಹಾಗೆ ನಾವು ನಡೆದುಕೊಳ್ಳುತ್ತೇವೆ. ನಿಮ್ಮ ಮಾತೇ ನಮಗೆ ಸರ್ವಸಿದ್ಧಿಗಳನ್ನು ತಂದುಕೊಡುವುದು" ಎಂದು ಬೇಡಿಕೊಂಡರು. ಅವರ ಮಾತುಗಳಿಂದ ಪ್ರಸನ್ನನಾದ ಶ್ರೀಗುರುವು ಯಾವ ರೀತಿಯಲ್ಲಿ ತೀರ್ಥಯಾತ್ರೆಗಳನ್ನು ಮಾಡಬೇಕು ಎಂಬುದನ್ನು ವಿಸ್ತಾರವಾಗಿ ತಿಳಿಸಿದರು.

"ಈ ಬ್ರಹ್ಮಾಂಡದಲ್ಲಿ ವಿಶೇಷವಾದ, ಪ್ರಸಿದ್ಧವಾದ ತೀರ್ಥರಾಜನು ಕಾಶಿಕ್ಷೇತ್ರವು. ಅಲ್ಲಿಗೆ ಹೋಗಿ ಶುಭಪ್ರದವಾದ, ಭಾಗೀರಥಿಯ ಸೇವೆ ಮಾಡಿ. ಭಾಗೀರಥಿ ತೀರ್ಥಯಾತ್ರೆ (ತಟಯಾತ್ರೆ) ಅರವತ್ತು ಯೋಜನಗಳ ವಿಸ್ತೀರ್ಣವಾದ ಪವಿತ್ರ ಪ್ರದೇಶ. ಅರವತ್ತು ಪಾಪಗಳು ಪರಿಹಾರವಾಗುತ್ತವೆ. ಗಂಗಾ ದ್ವಾರವು ಅದರ ಎರಡರಷ್ಟು ಫಲವನ್ನು ಕೊಡುವುದು. ಯಮುನಾ ತಟಯಾತ್ರೆ ಇಪ್ಪತ್ತು ಯೋಜನಗಳುಳ್ಳದ್ದು. ಅದರಿಂದ ಇಪ್ಪತ್ತು ಪಾಪಗಳು ಪರಿಹಾರಗೊಳ್ಳುತ್ತವೆ. ಮಹಾಗಂಗ ಎನ್ನಿಸಿಕೊಳ್ಳುವ ಸರಸ್ವತಿ, ಕುಮಾರಿಯಾಗಿ, ಭೂಮಿಯಲ್ಲಿ ಅಂತರ್ವಾಹಿನಿಯಾಗಿದ್ದಾಳೆ. ಇಪತ್ತನಾಲ್ಕು ಯೋಜನಗಳಿಂದ ಇಪ್ಪತ್ತನಾಲ್ಕು ಪಾಪಗಳನ್ನು ನಾಶಮಾಡಬಲ್ಲಳು. ತೀರ್ಥಕ್ಷೇತ್ರಗಳು ಎಷ್ಟು ಯೋಜನಗಳೋ ಅಷ್ಟು ಪಾಪಗಳು ಪರಿಹರಿಸಲ್ಪಡುತ್ತವೆ. ಪಿತೃತ್ವ, ಯಜ್ಞಫಲ, ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ.

ವರುಣ, ಕುಶಾವರ್ತ, ಶತದ್ರು, ವಿಪಾಶಕ, ಶರಾವತಿ, ವಿತಸ್ತ, ಅಸಿಕ್ನಿ, ಮರುಧ್ವದ, ಮಧುಮತಿ, ಪಯಸ್ಥಿತ, ಘೃತವತಿ ಎನ್ನುವ ನದೀತೀರಗಳ ಯಾತ್ರೆಯು ಶುಭಪ್ರದವು. ಭೂಮಂಡಲದಲ್ಲಿ ದೇವನದಿ ಎಂದು ಪ್ರಖ್ಯಾತವಾದ ನದಿತಟಯಾತ್ರೆ ಹದಿನೈದು ಯೋಜನಗಳಷ್ಟು ವಿಸ್ತಾರವಾಗಿದೆ. ಇದು ಪಂಚದಶ ಪಾಪಗಳನ್ನು ಹೋಗಲಾಡಿಸುತ್ತದೆ. ಚಂದ್ರಭಾಗ, ರೇವತಿ, ಸರಯು, ಗೋಮತಿ, ವೇದಿಕ, ಕೌಶಿಕ, ನಿತ್ಯಜಲ, ಮಂದಾಕಿನಿ, ಸಹಸ್ರವಕ್ತ್ರ, ಪೂರ್ಣ, ಬಾಹುದ ಎನ್ನುವ ನದಿಗಳು ಹದಿನಾರು ಯೋಜನಗಳ ವಿಸ್ತಾರವುಳ್ಳದ್ದು. ಅವುಗಳ ಸಂಗಮ ಸ್ಥಾನದಲ್ಲಿ ಸ್ನಾನವು ಬಹು ಪುಣ್ಯ ಫಲವು. ನದಿ ಸಂಗಮದಲ್ಲಿ ಮಾಡಿದ ಸ್ನಾನಕ್ಕೆ ತ್ರಿವೇಣಿ ಸ್ನಾನಫಲ ಉಂಟಾಗುತ್ತದೆ. ವೈರೋಚಿನಿ, ಉತ್ತಮ ತೀರ್ಥವಾದ ಪುಷ್ಕರ, ಫಲ್ಗುನದಿ, ಗಯಾ ಕ್ಷೇತ್ರಗಳು ಬಹು ಫಲದಾಯಕವಾದದ್ದು. ಬದರಿನಾರಾಯಣ, ಅಲಕನಂದ, ಅತಿ ಪುಣ್ಯ ಪ್ರದವಾದವು. ಕುರುಕ್ಷೇತ್ರ, ಶ್ರೀಶೈಲ, ಅನಂತ, ಸೇತು ಬಂಧದಲ್ಲಿ ರಾಮೇಶ್ವರ, ಶ್ರೀರಂಗ, ಪದ್ಮನಾಭ, ನೈಮಿಶಾರಣ್ಯ, ಮನೋಹರವಾದ ಪುರುಷೋತ್ತಮ ತೀರ್ಥಗಳು. ಸೇವೆ ಮಾಡ ತಕ್ಕಂಥ ಕ್ಷೇತ್ರಗಳು. ಮಹಾಲಯತೀರ್ಥ ಪಿತೃಗಳಿಗೆ ತೃಪ್ತಿದಾಯಕವು. ಅಲ್ಲಿ ಸ್ನಾನ ಮಾಡುವುದರಿಂದ ಹನ್ನೆರಡು ತಲೆಮಾರಿನವರು ಸ್ವರ್ಗವನ್ನು ಸೇರಿಕೊಳ್ಳುತ್ತಾರೆ. ಕೇದಾರ, ಕೋಟಿರುದ್ರ, ನರ್ಮದ ಮಹಾಫಲದಾಯಕವಾದವು. ಮಾತೃಕೇಶ, ಕುಬ್ಜತೀರ್ಥ, ಕೋಕಾಮುಖಿ, ಪ್ರಸಾದತೀರ್ಥ, ವಿಜಯತೀರ್ಥ, ಚಂದ್ರತೀರ್ಥ, ಗೋಕರ್ಣ, ಶಂಖಕರ್ಣ, ಈ ಸ್ಥಳಗಳಲ್ಲಿ ಮಾಡಿದ ಸ್ನಾನವು ಮನೋಹರವು.

ಅಯೋಧ್ಯ, ಮಧುರ, ಮಾಯ, ದ್ವಾರವತಿ, ಕಂಚಿ, ಪುರಿ, ಸಾಲಗ್ರಾಮ, ಶಬಲ ಗ್ರಾಮಗಳು ಮುಕ್ತಿದಾಯಕಗಳು. ಗೋದಾವರಿ ತೀರಯಾತ್ರೆ ಆರು ಯೋಜನಗಳ ವಿಸ್ತೀರ್ಣವುಳ್ಳದ್ದು. ಅದು ಅನಂತ ಫಲವನ್ನು ಕೊಡುವಂತಹುದು. ವಾಜಪೇಯ ಯಾಗಪಲವನ್ನು ಕೊಡುವಂತಹುದು. ಗೋದಾವರಿ ತಟಯಾತ್ರೆಯನ್ನು ಮೂರುಸಲ ಮಾಡಿದವರು ಸರ್ವಪಾಪಗಳಿಂದ ಮುಕ್ತಿಪಡೆದು ಜ್ಞಾನಿಗಳಾಗುತ್ತಾರೆ. ಭೀಮೇಶ್ವರ, ಪಂಜರ ಎನ್ನುವ ಎರಡು ಸಂಗಮ ಸ್ಥಾನಗಳು ಪ್ರಯಾಗಕ್ಕೆ ಸಮನಾದವು. ಕುಶ ತರ್ಪಣ ತೀರ್ಥ ದ್ವಾದಶ ಯೋಜನ ಪರಿಮಿತವಾದದ್ದೆಂದು ಪ್ರಸಿದ್ಧಿ. ಇದು ಗೋದಾವರಿ ಸಮುದ್ರ ಸಂಗಮ ಸ್ಥಾನ. ಮುವ್ವತ್ತಾರು ಪಾಪಗಳ ಪರಿಹಾರಕವು. ಪೂರ್ಣಾನದಿ ತಟಯಾತ್ರೆ ಮುವ್ವತ್ತು ಯೋಜನಗಳ ಪ್ರಮಾಣವಿರುವುದು. ಮುವ್ವತ್ತು ಪಾಪಗಳನ್ನು ಹೊರಗಟ್ಟಿ ಪುಣ್ಯವನ್ನು ನೀಡುತ್ತದೆ. ಕೃಷ್ಣವೇಣಿ ಹದಿನೈದು ಪಾಪಗಳನ್ನು ನಾಶಮಾಡುತ್ತದೆ. ತುಂಗಭದ್ರಾ ಯಾತ್ರೆ ಇಪ್ಪತ್ತು ಪಾಪಗಳನ್ನು ನಾಶಮಾಡುತ್ತದೆ. ಪವಿತ್ರವಾದ ಪಂಪಾ ಸರಸ್ಸಿನ ಮಹಿಮೆ ಅನಂತವಾದದ್ದು. ಹಾಗೆಯೇ ಎರಡೂ ಹರಿಹರ ಕ್ಷೇತ್ರಗಳು ಸರ್ವಪಾಪ ಪರಿಹಾರಕಗಳು. ಭೀಮಾ ತಟಯಾತ್ರೆ ಮಾಡಿದವರಿಗೆ ಹತ್ತು ಪಾಪಗಳು ನಿವಾರಣೆಯಾಗಿ, ಪುಣ್ಯ ಲಭ್ಯವಾಗುತ್ತದೆ. ಪಾಂಡುರಂಗ, ಮಾತುಲಿಂಗ, ಗಂಧರ್ವಪುರಗಳಲ್ಲಿ ಅನೇಕ ತೀರ್ಥಗಳಿವೆ. ಅಲ್ಲಿ ದೇವತೆಗಳು ಜನರ ಕೋರಿಕೆಗಳನ್ನು ತೀರಿಸುತ್ತಾರೆ. ಭೀಮಾ ಅಮರಜಾ ನದಿಗಳ ಸಂಗಮದಲ್ಲಿ ಕೋಟಿತೀರ್ಥವಿದೆ. ಅಲ್ಲಿ ಕಲ್ಪವೃಕ್ಷಕ್ಕ್ಕೆ ಸಮಾನವಾದ ಅಶ್ವತ್ಥ ವೃಕ್ಷವಿದೆ. ಅದು ಸರ್ವಕಾಮದಾಯಕ. ಆ ಅಶ್ವತ್ಥದ ಎದುರಿಗೆ ನೃಸಿಂಹ ತೀರ್ಥವಿದೆ. ಅದಕ್ಕೆ ಉತ್ತರದಲ್ಲಿನ ಪ್ರದೇಶ ಕಾಶಿ-ವಾರಣಾಸಿಗಳಿಗೆ ಸಮಾನವಾದ ಪಾಪಹರವಾದ ಪ್ರದೇಶ. ಅದರ ಪೂರ್ವದಲ್ಲಿ ಪರಮ ಪಾವನವಾದ ಪಾಪವಿನಾಶ ತೀರ್ಥವಿದೆ. ಅದೂ ಸರ್ವಪಾಪಹಾರಿಣಿ.

ಚಕ್ರತೀರ್ಥದಲ್ಲಿ ದೇವ ನಾಯಕನಾದ ಕೇಶವನಿದ್ದಾನೆ. ಆ ನಂತರ ಕೋಟಿತೀರ್ಥ ಮನ್ಮಥತೀರ್ಥಗಳಿವೆ. ಕಲ್ಲೇಶ್ವರನಿರುವ ಸ್ಥಳ ಸಾಕ್ಷಾತ್ತು ಗೋಕರ್ಣವೇ ಎನ್ನುತ್ತಾರೆ. ಗಂಧರ್ವಪುರ ಸಿದ್ಧಭೂಮಿ. ಅದಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಅಲ್ಲಿ ಅನುಷ್ಠಾನ ಮಾಡಿದವರಿಗೆ ಬಹು ಶೀಘ್ರವಾಗಿ ಇಷ್ಟ ಸಿದ್ಧಿಯಾಗುವುದು. ಕಲ್ಪವೃಕ್ಷವಿರುವೆಡೆಯಲ್ಲಿ ಏನುತಾನೇ ಸಿದ್ಧಿಯಾಗುವುದಿಲ್ಲ? ಕಾಕಿಣಿ ಸಂಗಮವು ಅತ್ಯಂತ ಪುಣ್ಯಫಲದಾಯಕವು. ಅದು ಪ್ರಯಾಗ ಸಂಗಮಕ್ಕೆ ಸಮಾನವಾದುದು. ಹಾಗೆಯೇ ಭೀಮಾನದಿಯೂ ಮಹಾಫಲದಾಯಕವಾದದ್ದು. ತುಂಗಭದ್ರೆಯು ವರದಾಯಿನಿ. ಈ ನದಿಯ ಸಂಗಮಸ್ಥಳವೂ ಬಹು ಫಲಗಳನ್ನು ನೀಡುವಂತಹುದು. ಮಲಾಪಹಾ ಸಂಗಮವು ನೂರುಜನ್ಮಗಳ ಪಾಪವನ್ನು ನಾಶಮಾಡಬಲ್ಲದು. ನಿವೃತ್ತಿ ಸಂಗಮವು ಬ್ರಹ್ಮಹತ್ಯೆಯಂತಹ ಪಾಪವನ್ನು ನಿವಾರಿಸುವಂತಹುದು. ಶಿಷ್ಯರೇ, ಪ್ರೀತಿ, ಭಕ್ತಿ, ಶ್ರದ್ಧೆಗಳಿಂದ ಈ ತೀರ್ಥಗಳೆಲ್ಲವನ್ನೂ ದರ್ಶಿಸಿ. ಪಾಪಗಳೆಲ್ಲವೂ ನಾಶವಾಗುವುವು.

ಬೃಹಸ್ಪತಿ ಸಿಂಹರಾಶಿಯಲ್ಲಿದ್ದಾಗ ಗಂಗೆ ಗೋದಾವರಿಯಲ್ಲಿ ಒಂದುವರ್ಷಕಾಲ ಇರುತ್ತಾಳೆ. ಗುರುವು ಕನ್ಯಾರಾಶಿಯಲ್ಲಿರುವಾಗ ತುಂಗಭದ್ರೆಯಲ್ಲಿ ಗಂಗೆಯಿರುತ್ತಾಳೆ. ಬೃಹಸ್ಪತಿಯು ಕರ್ಕಾಟಕದಲ್ಲಿರುವಾಗ ಗಂಗೆ ಮಲಾಪಹಾ ನದಿಯಲ್ಲಿರುತ್ತಾಳೆ. ಆ ಸಮಯದಲ್ಲಿ ಮಲಾಪಹಾ ನದಿಯಲ್ಲಿ ಸ್ನಾನಮಾಡಿದವರಿಗೆ ಬ್ರಹ್ಮಹತ್ಯಾದಿ ಪಾಪಗಳೂ ತೊಲಗಿಹೋಗುತ್ತವೆ. ಭೀಮಾ ಕೃಷ್ಣಾ ಸಂಗಮದಲ್ಲಿ ಸ್ನಾನಮಾಡಿದವನು ಶುದ್ಧನಾಗಿ ಅರವತ್ತು ಜನ್ಮಗಳಲ್ಲಿ ಸದ್ಬ್ರಾಹ್ಮಣ ವಂಶದಲ್ಲಿಯೇ ಹುಟ್ಟುತ್ತಾನೆ. ತುಂಗಭದ್ರಾ ಸಂಗಮವು ಅದಕ್ಕೆ ಮೂರರಷ್ಟು ಪುಣ್ಯವನ್ನು ಕೊಡುವುದು. ನಿವೃತ್ತಿ ಸಂಗಮವು ನಾಲ್ಕರಷ್ಟುಫಲ ನೀಡುವುದು. ಪಾತಾಳಗಂಗ ಸ್ನಾನ, ಮಲ್ಲಿಕಾರ್ಜುನ ದರ್ಶನ ಆರರಷ್ಟು ಪುಣ್ಯ ನೀಡಿ ಪುನರ್ಜನ್ಮವಿಲ್ಲದಂತೆ ಮಾಡುವುದು. ಯುಗಾಲಯವು ಎರಡರಷ್ಟು ಪುಣ್ಯದಾಯಕವು. ಕಾವೇರಿ ಸಾಗರ ಸಂಗಮ, ಕೃಷ್ಣಾ ಸಮುದ್ರ ಸಂಗಮ ಅದರ ಹದಿನೈದರಷ್ಟು ಪುಣ್ಯಫಲವನ್ನು ಕೊಡುವುದು.

ಮಹಾನದಿ, ತಾಮ್ರಪರ್ಣಿಗಳಲ್ಲಿ ಸ್ನಾನಮಾಡುವವರಿಗೆ ಮಹಾಪುಣ್ಯವು ಲಭಿಸುತ್ತದೆ. ಕೃತಮಾಲಾ ನದಿ ಸರ್ವಪಾಪ ಪರಿಹಾರಕವಾದದ್ದು. ಪಯಸ್ವಿನಿ ನದಿ ಭವನಾಶಿನಿ. ಸಮುದ್ರಸ್ಕಂದ ದರ್ಶನವು ಸಕಲ ಪಾಪನಾಶಕವು. ಶೇಷಾದ್ರಿ, ಶ್ರೀರಂಗನಾಥ, ಪದ್ಮನಾಭ, ಶ್ರೀಮಂತನಾದ ಅನಂತ, ಮಲ್ಲಿಕಾರ್ಜುನ ಪೂಜ್ಯರು. ಕುಂಭಕೋಣವು, ಸಮಸ್ತ ತೀರ್ಥಗಳಿಗೂ ಸಮಾನವಾದ ಪುಣ್ಯಪ್ರದಾಯಿನಿ. ಕನ್ಯಾಕುಮಾರಿಯಲ್ಲಿ, ಮತ್ಸ್ಯತೀರ್ಥಗಳಲ್ಲಿ ಮಾಡಿದ ಸ್ನಾನ ಭವತಾರಿಣಿ. ಪಕ್ಷಿತೀರ್ಥ, ರಾಮೇಶ್ವರ, ಧನುಷ್ಕೋಟಿ, ರಂಗನಾಥನ ಸಮೀಪದಲ್ಲಿನ ಕಾವೇರಿತೀರ್ಥ, ಉತ್ತಮವಾದ ಪುರುಷೋತ್ತಮ ತೀರ್ಥ, ಚಂದ್ರಕುಂಡ, ಮಹಾಲಕ್ಷ್ಮೀಪುರಗಳು ಹೆಸರಾದವು. ಕರವೀರಪುರವು ದಕ್ಷಿಣ ಕಾಶಿಯೇ! ಕೃಷ್ಣಾನದಿ ಉದ್ಭವವಾದ ಪ್ರದೇಶದಲ್ಲಿರುವ ಮಹಾಬಲೇಶ್ವರನು ಶ್ರೇಷ್ಠನಾದವನು. ಕೃಷ್ಣಾತೀರದಲ್ಲಿ ಪವಿತ್ರವಾದ ರಾಮೇಶ್ವರ ಸ್ನಾನ ಪುಣ್ಯಪ್ರದವು. ನೃಸಿಂಹ ದೇವನಿರುವ ಕೋಲ್ಹಾ ಗ್ರಾಮವು ಮಹಾ ಪುಣ್ಯಪ್ರದವಾದದ್ದು ಆ ನೃಸಿಂಹನು ಸದಾಶಿವನೇ! ಪ್ರತ್ಯಕ್ಷವಾಗಿ ಕಾಣಬರುವ ಈಶ್ವರನು. ಕೃಷ್ಣಾತೀರದಲ್ಲಿ ಭಿಲ್ಲವಟಿಯಲ್ಲಿ ಭುವನೇಶ್ವರಿ ಎನ್ನುವ ಶಕ್ತಿರೂಪಿಣಿ ಇದ್ದಾಳೆ. ಅಲ್ಲಿ ತಪವನ್ನಾಚರಿಸಿದವರು ಈಶ್ವರ ಕಳೆಯನ್ನು ಹೊಂದುತ್ತಾರೆ. ಅದಕ್ಕೆ ಮುಂದೆ ವರುಣಾ ಸಂಗಮವಿದೆ. ಅದು ಪಾಪಘ್ನವಾದದ್ದು. ಅಲ್ಲಿ ಮಾಡಿದ ಸ್ನಾನ ಮಾತ್ರದಿಂದಲೇ ಮಾರ್ಕಂಡೇಯ ಸಮಾನತ್ವ ಉಂಟಾಗುತ್ತದೆ. ಆದ್ದರಿಂದ ಆ ಪ್ರದೇಶವನ್ನು ತಪ್ಪದೇ ದರ್ಶನ ಮಾಡಿ.

ಕೃಷ್ಣಾತೀರದಲ್ಲಿ ಅತ್ಯುತ್ತಮವಾದ ಋಷ್ಯಾಶ್ರಮ ಒಂದಿದೆ. ಅಲ್ಲಿ ಕೃಷ್ಣಾನದಿಯಲ್ಲಿ ಸ್ನಾನ ಮಾಡುವವರು ಜ್ಞಾನಿಗಳಾಗುವುದರಲ್ಲಿ ಎಂತಹ ಸಂಶಯವೂ ಇಲ್ಲ. ಅಮರಪುರ ಕೃಷ್ಣವೇಣಿ ನದಿಗಳ ಸಂಗಮ ಸ್ಥಳ. ಪಂಚನದೀ ಸಂಗಮ ಸ್ಥಳವೆಂದು ಪ್ರಸಿದ್ಧಿಯಾಗಿದೆ. ಮಾಘ ಮಾಸದಲ್ಲಿ ಅಲ್ಲಿ ಸ್ನಾನ ಮಾಡಿದರೆ ಪ್ರಯಾಗದಲ್ಲಿ ಮಾಡಿದ ಸ್ನಾನಕ್ಕೂ ಮಿಂಚಿದ ಪುಣ್ಯ ಲಭಿಸುತ್ತದೆ. ಅದು ನಿತ್ಯ ಸತ್ಯ! ಅಲ್ಲಿ ಅನೇಕ ಮುನಿಗಳು ತಪಸ್ಸು ಮಾಡಿ ಸಿದ್ಧಿ ಪಡೆದರು. ಆ ಕ್ಷೇತ್ರಕ್ಕೆ ಸಮನಾದದ್ದು ಬೇರೊಂದಿಲ್ಲ. ಅಲ್ಲಿ ಸರ್ವ ತೀರ್ಥಗಳೂ ಇವೆ ಎಂದು ಪ್ರಖ್ಯಾತಿ. ಅಲ್ಲಿ ಮೂರು ದಿನಗಳು ಅನುಷ್ಠಾನ ಮಾಡಿದವನು ಸರ್ವಾಭೀಷ್ಟಗಳನ್ನೂ ಸಿದ್ಧಿಸಿಕೊಂಡು, ಶೀಘ್ರವಾಗಿ ಪರಮಾರ್ಥವನ್ನು ಪಡೆಯುತ್ತಾನೆ. ನಂತರ ಇರುವ ಯುಗಾಲಯವೆಂಬ ತೀರ್ಥವು ದರ್ಶನ ಮಾತ್ರದಿಂದಲೇ ಮುಕ್ತಿಯನ್ನು ಕೊಡುವುದು. ಅದಾದ ಮೇಲೆ ಶೂರ್ಪಾಲಯ ತೀರ್ಥ. ಇದು ಪರಮ ಪಾವನವಾದದ್ದು. ವಿಶ್ವಾಮಿತ್ರನ ಆಶ್ರಮಕ್ಕೆ ಸಮಾನವಾದ ಮಲಾಪಹಾರ ತೀರ್ಥವು. ಕೃಷ್ಣಾ ಸಂಗಮದಿಂದಾಗಿ ಸರ್ವದೋಷ ಪರಿಹಾರಿಣಿ. ಕಪಿಲಮಹರ್ಷಿ ಸಾಕ್ಷಾದ್ವಿಷ್ಣುವೇ! ಆ ಮುನಿಯ ಆಶ್ರಮವು ಮಹಾತೀರ್ಥವು. ಅಲ್ಲಿ ಕೃಷ್ಣಾ ನದಿ ಉತ್ತರ ವಾಹಿನಿಯಾಗಿದೆ. ಆ ಮಹಾತೀರ್ಥದಲ್ಲಿ ಒಂದುಸಲ ಮಾಡಿದ ಜಪವು ಕೋಟಿ ಜಪದ ಫಲವನ್ನು ನೀಡುತ್ತದೆ. ಅಲ್ಲಿಂದ ಮುಂದೆ ಕೇದಾರೇಶ್ವರ ತೀರ್ಥವಿದೆ.

ನಂತರ ಪೀಠಾಪುರವಿದೆ. ಅದು ಸನಾತನವಾದ ದತ್ತಾತ್ತ್ರೇಯಸ್ವಾಮಿಯ ಶಾಶ್ವತ ನೆಲೆ. ಆ ನಂತರ ಪ್ರಸಿದ್ಧವಾದ ಮಹಾತೀರ್ಥ ಮಣಿಗಿರಿ. ಆಲಿ ಸಪ್ತರ್ಷಿಗಳು ನಿರ್ಮಲರಾಗಿ ತಪವನ್ನಾಚರಿಸಿ ಧನ್ಯರಾದರು. ಮಹಾ ಪುಣ್ಯದಾಯಕವಾದ ಋಷಭಾದ್ರಿಯೂ ಕಲ್ಯಾಣನಗರವೂ ಇವೆ. ಕಲ್ಯಾಣ ನಗರದಲ್ಲಿರುವ ತೀರ್ಥವನ್ನು ಸೇವಿಸುವವನು ಪುನರ್ಜನ್ಮ ರಹಿತನಾಗುತ್ತಾನೆ. ಅಹೋಬಲ ದರ್ಶನದಿಂದ ಮಾನವರು ಅರವತ್ತು ಯಜ್ಞಗಳನ್ನು ಮಾಡಿದ ಪುಣ್ಯಫಲವನ್ನು ಪಡೆಯುತ್ತಾರೆ. ಶ್ರೀರಂಗ ದರ್ಶನದಿಂದಲೂ ಸಹ ಮಾನವರಿಗೆ ಪುನರ್ಜನ್ಮವಿರುವುದಿಲ್ಲ.

ಶಿಷ್ಯರೇ, ನಾನು ಹೇಳಿದ ಸರ್ವ ತೀರ್ಥಗಳನ್ನೂ ವಿಧ್ಯುಕ್ತವಾಗಿ ಸೇವಿಸಿರಿ. ನದಿ ರಜಸ್ವಲೆಯಾಗಿರುವಾಗ ಅದರಲ್ಲಿ ಸ್ನಾನ ಮಾಡುವುದು ದೋಷಕರವು. ರವಿ ಕರ್ಕಾಟಕ ಸಂಕ್ರಾಂತಿಯಿಂದ ಎರಡು ತಿಂಗಳು ನದಿಸ್ನಾನಗಳನ್ನು ಬಿಟ್ಟುಬಿಡಬೇಕು. ನದೀ ತೀರದಲ್ಲಿ ವಾಸಿಸುವವರಿಗೆ ಮಾತ್ರ ಈ ದೋಷವಿರುವುದಿಲ್ಲ ಎಂಬುದು ವಿಶೇಷ. ಮಳೆಗಾಲದಲ್ಲಿ ಸರ್ವನದಿಗಳೂ ರಜಸ್ವಲೆಯರಾಗೇ ಇರುತ್ತವೆ. ರಜೋದೋಷವು ಉಂಟಾದಾಗ ಮೂರುದಿನ ನದಿಗಳಲ್ಲಿ ಸ್ನಾನಾದಿಗಳು ಮಾಡುವುದನ್ನು ಬಿಟ್ಟುಬಿಡಬೇಕು. ಭಾಗೀರಥಿ, ಚಂದ್ರಭಾಗ, ಸಿಂಧು, ಗೌತಮಿ, ಸರಯು, ನರ್ಮದ, ನದಿಗಳಿಗೆ ರಜೋದೋಷವು ಬಂದಾಗಲೂ ಮೂರುದಿನ ಸ್ನಾನಾದಿಗಳು ನಿಷಿದ್ಧ. ಗ್ರೀಷ್ಮ ಋತುವು ಮುಗಿದನಂತರ ಸರ್ವ ನದಿಗಳೂ ಹತ್ತು ದಿನಗಳ ಕಾಲ ರಜಸ್ವಲೆಯಾಗಿರುತ್ತವೆ. ವಾಪಿ ಕೂಪ ತಟಾಕಾದಿಗಳು ಸರ್ವ ಕಾಲದಲ್ಲೂ ರಜಸ್ವಲ್ವೆಗಳೇ! ಹೊಸನೀರು ಬಂದಾಗ ನದಿಗಳು ರಜಸ್ವಲೆಯರೆಂದು ತಿಳಿಯಬೇಕು. ಆಗ ಸ್ನಾನಾದಿಗಳನ್ನು ಮಾಡುವುದು, ಮುಂಚೆಯೇ ಹೇಳಿದಂತೆ, ಮಹಾದೋಷ. ಆದ್ದರಿಂದ ಆ ಕಾಲದಲ್ಲಿ ನದಿಗಳನ್ನು ಬಿಡಬೇಕು. ಅಂತಹ ಸಮಯದಲ್ಲಿ ತೀರ್ಥ ದರ್ಶನವಾದರೆ, ವಿಧ್ಯುಕ್ತವಾಗಿ ಸ್ನಾನ ಕ್ಷೌರ ಉಪವಾಸಗಳನ್ನು ಆಚರಿಸಬೇಕು" ಎಂದು ಶ್ರೀಗುರುವು ಅವರಿಗೆ ವಿವರಿಸಿ, ಹೊರಡಲು ಅಪ್ಪಣೆ ಕೊಟ್ಟರು. ಶಿಷ್ಯರೆಲ್ಲರೂ, ಗುರುವಚನಗಳನ್ನು ಮನಸ್ಸಿನಲ್ಲಿಟ್ಟು, ಅವರಿಗೆ ನಮಸ್ಕರಿಸಿ, ತೀರ್ಥಯಾತ್ರೆಗಳಿಗೆ ಹೊರಟರು. ಶ್ರೀಗುರುವು ಮಾತ್ರ ಅಲ್ಲಿಯೇ ರಹಸ್ಯವಾಗಿ ನಿಂತರು. ಶ್ರೀಗುರುವಿನ ಸೇವೆಗೆಂದು ನಾನು ಅವರ ಜೊತೆಯಲ್ಲಿಯೇ ಇದ್ದೆ" ಎಂದು ಸಿದ್ಧಮುನಿ ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಹದಿನೈದನೆಯ ಅಧ್ಯಾಯ ಮುಗಿಯಿತು.