Tuesday, September 24, 2013

||ಶ್ರೀಗುರು ಚರಿತ್ರೆ - ನಲವತ್ತೇಳನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಂತರ ಸಿದ್ಧಮುನಿಯು ಹೇಳಿದರು. "ನಾಮಧಾರಕ, ಶ್ರೀಗುರು ಚರಿತ್ರೆಯನ್ನು ಕೇಳು. ಪವಿತ್ರವಾದ ಸುಂದರವಾದ ಚರಿತ್ರೆಯನ್ನು ಕೇಳುವುದರಿಂದ ಪತಿತನು ಪವಿತ್ರನಾಗಬಲ್ಲನು. ಶ್ರೀಗುರುವು ಗಂಧರ್ವನಗರದಲ್ಲಿ ನೆಲೆಸಿದ್ದಾಗ ದೀಪಾವಳಿ ಮಹೋತ್ಸವವು ಬಂತು. ಶ್ರೀಗುರುವನ್ನು ಕರೆದುಕೊಂಡು ಹೋಗಲು ಪ್ರಿಯಭಕ್ತರಾದ ಏಳುಜನ ಶಿಷ್ಯರು ಬಂದು ದೀಪಾವಳಿ ಮಹೋತ್ಸವಕ್ಕೆ ತಮ್ಮ ಮನೆಗೆ ಬರಬೇಕೆಂದು ಕೇಳಿಕೊಂಡರು. ಅವರ ಗ್ರಾಮಗಳು ಬೇರೆಬೇರೆಯವು ಎಂದು ತಿಳಿದ ಶ್ರೀಗುರುವು, "ಎಲ್ಲರ ಮನೆಗೆ ಒಂದೇ ಸಮಯದಲ್ಲಿ ನಾನು ಬರುವುದು ಹೇಗೆ ಸಂಭವ? ನೀವು ಇದನ್ನು ವಿಚಾರಮಾಡಿ ನನಗೆ ಹೇಳಿ. ನಾನು ಹಾಗೆ ಮಾಡುತ್ತೇನೆ" ಎಂದರು. ಆ ಶಿಷ್ಯರು ತಮ್ಮಲ್ಲಿ ತಾವು ಚರ್ಚೆ ಮಾಡಿಕೊಂಡು ಜಗಳವಾಡಲು ಪ್ರಾರಂಭಿಸಿದರು. ಶ್ರೀಗುರುವು ಅವರ ಜಗಳವನ್ನು ನಿಲ್ಲಿಸಿ, "ನಿಮ್ಮ ಜಗಳ ವ್ಯರ್ಥ. ನಿಮ್ಮ ಗುರುವು ನಾನೊಬ್ಬನೇ. ಒಂದು ಮನೆಗೆ ಬರಬಹುದಲ್ಲವೇ?" ಎನ್ನಲು, ಅವರು, "ಸ್ವಾಮಿ, ಇವನು ಸಮರ್ಥನು, ಇವನು ದುರ್ಬಲನು ಎಂಬ ಭೇದ ನೋಡಬೇಡಿ. ತನ್ನ ಭಕ್ತನಾದ ವಿದುರನ ಮನೆಯಲ್ಲಿ ಶ್ರೀಕೃಷ್ಣನು ಗಂಜಿಯನ್ನವನ್ನು ಕೂಡಾ ತಿಂದನು. ಕೌರವರ ಅನ್ನವನ್ನು ಸ್ವೀಕರಿಸಲಿಲ್ಲ. ನಾವೆಲ್ಲರೂ ನಿಮ್ಮ ದಾಸರು. ಸ್ವಾಮಿಯ ಆಜ್ಞೆಯನ್ನು ಶಿರಸಾ ವಹಿಸುವೆವು" ಎಂದು ಒಂದೇ ಕೊರಳಲ್ಲಿ ನುಡಿದು, "ಶ್ರೀಗುರು ನಮ್ಮನ್ನು ನೋಡು" ಎಂದು ಪ್ರಾರ್ಥಿಸಿದರು. ಅದಕ್ಕೆ ಶ್ರೀಗುರುವು, "ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಿ. ನಾನು ಬರುತ್ತೇನೆ. ಸತ್ಯಪ್ರತಿಜ್ಞೆ ಮಾಡುತ್ತಿದ್ದೇನೆ" ಎಂದರು. ಅದನ್ನು ಕೇಳಿದ ಆ ಏಳೂಜನ ಶಿಷ್ಯರು, "ಸ್ವಾಮಿ, ನಾನು ಬರುತ್ತೇನೆ ಎಂದು ಹೇಳಿದ್ದರಿಂದ ನೀವು ಯಾರ ಮನೆಗೆ ಬರುತ್ತೀರಿ ಎಂಬುದನ್ನು ನಾವು ಹೇಗೆ ತಿಳಿಯಬೇಕು? ಹೇಳಿ" ಎಂದು ಪ್ರಾರ್ಥಿಸಿದರು.

ಶ್ರೀಗುರುವು, "ಆಹಾ, ಇವರು ಎಂತಹ ಅಜ್ಞಾನಿಗಳು. ಇವರನ್ನು ಒಬ್ಬೊಬ್ಬರನ್ನಾಗಿ ಕರೆದು ಹೇಳಬೇಕು" ಎಂದುಕೊಂಡು, ಅವರನ್ನು ಒಬ್ಬೊಬ್ಬರನ್ನಾಗಿ ಕರೆದು, ಅವನ ಕಿವಿಯಲ್ಲಿ, "ನೀನು ಇನ್ನಾರಿಗೂ ಹೇಳಬೇಡ. ನಿನ್ನ ಮನೆಗೆ ನಾವು ಬರುತ್ತೇವೆ" ಎಂದು ಎಲ್ಲರಿಗೂ ಹೇಳಿ ಕಳುಹಿಸಿ, ತಾವು ಮಠಕ್ಕೆ ಹೋದರು. (ಆ ವಿಷಯವನ್ನು ತಿಳಿದ) ಗ್ರಾಮಸ್ಥರು ಅವರಲ್ಲಿಗೆ ಬಂದು, "ಸ್ವಾಮಿ, ನಮ್ಮನ್ನು ಬಿಟ್ಟು ನೀವು ಎಲ್ಲಿಗೆ ಹೋಗುತ್ತೀರಿ?" ಎಂದು ಕೇಳಲು, ಅವರನ್ನು ಸಮಾಧಾನ ಗೊಳಿಸುತ್ತಾ ಶ್ರೀಗುರುವು, "ನಾವು ಇಲ್ಲಿಯೇ ಇರುತ್ತೇವೆ. ಎಂತಹ ಚಿಂತೆಯನ್ನೂ ಇಟ್ಟುಕೊಳ್ಳಬೇಡಿ" ಎಂದು ಹೇಳಿದರು. ಕ್ರಮವಾಗಿ ಕಾಲ ಕಳೆದು ಧನ ತ್ರಯೋದಶಿಯೂ ಬಂತು. ಅದು ಮಂಗಳಸ್ನಾನ ಮಾಡಬೇಕಾದ ದಿನ. ಆ ಸ್ವಾಮಿ ಮಹಿಮೆ ಅಪಾರವಲ್ಲವೇ! ಮಹಾಮಾಯಿಯಾದ ಶ್ರೀಗುರುವು ಅಲ್ಲಿಯೇ ಇದ್ದುಕೊಂಡು, ಸಪ್ತಗ್ರಾಮಗಳಿಗೂ ಹೋದರು. ಅಷ್ಟರೂಪನಾಗಿ ಎಂಟು ಗ್ರಾಮಗಳಲ್ಲೂ ಇದ್ದುಕೊಂಡು ಅರ್ಚನಾದಿಗಳನ್ನು ಗ್ರಹಿಸಿ ಮಠಕ್ಕೆ ಬಂದರು. ಈ ರಹಸ್ಯವು ಯಾರೂ ತಿಳಿಯಲಾರದೇ ಹೋದರು.

ಕಾರ್ತಿಕ ಪೂರ್ಣಿಮೆಯಂದು ತ್ರಿಪುರೋತ್ಸವ. ಎಂಟು ಗ್ರಾಮಗಳವರೂ ಶ್ರೀಗುರು ಸನ್ನಿಧಿಗೆ ಮಠದೊಳಕ್ಕೆ ಬಂದರು. ‘ಹತ್ತು ದಿನಗಳಾದ ಮೇಲೆ ಗುರುದರ್ಶನವಾಯಿತು’ ಎಂದು ಶ್ರೀಗುರುವಿನಲ್ಲಿ ಬಿನ್ನವಿಸಿಕೊಂಡರು. ಅವರೆಲ್ಲರೂ, ಒಬ್ಬೊಬ್ಬರೂ, ನಮ್ಮ ಮನೆಗೆ ಶ್ರೀಗುರುವು ಬಂದಿದ್ದರು, ಇತರರ ಮಾತುಗಳು ನಿಜವಲ್ಲ ಎಂದು ಹೇಳಿಕೊಳ್ಳುತ್ತಾ, ತಾವು ಅವರಿಗೆ ಸಮರ್ಪಿಸಿದ ವಸ್ತ್ರಾದಿಗಳು ಇನ್ನೂ ಗುರು ಸನ್ನಿಧಿಯಲ್ಲೇ ಇವೆ ಎನ್ನುತ್ತಾ ಶ್ರೀಗುರುವಿನ ಬಳಿಯಿದ್ದ ವಸ್ತ್ರಾದಿಗಳನ್ನು ಮಿಕ್ಕವರಿಗೆ ತೋರಿಸುತ್ತಿದ್ದರು. ಅಲ್ಲಿನ ಗ್ರಾಮಸ್ಥರು ಆಶ್ಚರ್ಯಗೊಂಡು ಶ್ರೀಗುರುವು ದೀಪಾವಳಿಗೆ ಇಲ್ಲೆ ಇದ್ದರಲ್ಲವೇ? ಎಂದುಕೊಳ್ಳುತ್ತಿದ್ದರು.

ಅದರಿಂದ ಅವರೆಲ್ಲರೂ ವಿಸ್ಮಿತರಾಗಿ, "ತ್ರಿಮೂರ್ತಿ ಸ್ವರೂಪಿ ಈ ಶ್ರೀಗುರುವೇ!" ಎಂದು ಹೇಳುತ್ತಾ ಅನೇಕ ಸ್ತೋತ್ರಗಳಿಂದ ಶ್ರೀಗುರುವನ್ನು ಸ್ತುತಿಸಿದರು. "ಹೇ ವೇದಸ್ವರೂಪ, ಗುರುನಾಥ, ನಿಮ್ಮ ಮಾಹಾತ್ಮ್ಯವನ್ನು ತಿಳಿದವನಾರಿದ್ದಾನೆ? ನೀವೇ ವಿಷ್ಣುರೂಪರು. ನಿಮ್ಮ ಮಹಿಮೆ ಅಪಾರ. ಭಕ್ತರಕ್ಷಣೆಗಾಗಿ ನೀವು ತ್ರಿರೂಪರು. ನೀವೊಬ್ಬರೇ!" ಎಂದು ಸ್ತುತಿಸಿ ದೀಪಮಾಲಿಕೆಗಳನ್ನು ಹಚ್ಚಿ ಭಕ್ತರು ಬ್ರಾಹ್ಮಣರಿಗೆ ಭೋಜನವಿಟ್ಟರು. ಹೀಗೆ ಶ್ರೀಗುರುವಿನ ಮಹಿಮೆ ಎಲ್ಲ ಕಡೆಯೂ ಖ್ಯಾತಿಗೊಂಡಿತು. ಅದರಿಂದಲೇ ಸರಸ್ವತಿ, "ಈ ಶ್ರೀಗುರುವೇ ಕಲ್ಪದ್ರುಮವು. ಅಜ್ಞಾನಾಂಧಕಾರದಲ್ಲಿ ಮುಳುಗಿದವರು ದೈನ್ಯವನ್ನೇ ಹೊಂದುವರು" ಎಂದು ಹೇಳಿದನು. ಆದ್ದರಿಂದ ಜನಗಳೇ, ಕಾಮನೆಗಳು ಸಿದ್ಧಿಸಲು ಶ್ರೀಗುರುವನ್ನು ಭಜಿಸಿರಿ. ತ್ವರೆಯಾಗಿ ಕಾರ್ಯ ಸಿದ್ಧಿಯಾಗುವುದು. ಶ್ರೀಗುರುವನ್ನು ಸೇವಿಸಿ ಎಂದು ನಾನು ಡಂಗುರ ಹೊಡೆಯುತ್ತೇನೆ. ಶ್ರೀಗುರುವಿಗಿಂತ ಅನ್ಯ ದೈವವಿಲ್ಲ. ಶ್ರೀಗುರುವನ್ನು ನಿಂದಿಸುವ ಮೂಢನು ಹಂದಿಯ ಜನ್ಮ ಪಡೆಯುತ್ತಾನೆ. ಸಂಸಾರವೆನ್ನುವ ದಾವಾಗ್ನಿಯಲ್ಲಿ ಶಲಭವಾಗಿರುವಂತಹ ನಮಗೆ ಅಮೃತಪ್ರಾಯವಾದ ಕಥೆಯನ್ನು ನಾನು ಹೇಳುತ್ತಿದ್ದೇನೆ. ನೃಸಿಂಹ ಸರಸ್ವತಿಯಾಗಿ ತ್ರಿಮೂರ್ತಿ ಅವತರಿಸಿದ್ದಾನೆ. ಗಂಧರ್ವನಗರದಲ್ಲಿ ಆತನು ಸತ್ಪುರುಷರಿಗೆ ಪ್ರತ್ಯಕ್ಷವಾಗಿ ಇದ್ದಾನೆ. ಆ ಸ್ಥಳವನ್ನು ಸೇರುವವರ ಕಾರ್ಯಗಳು ಕ್ಷಣದಲ್ಲಿ ಸಿದ್ಧಿಸುವುವು. ನಿಮಗೆ ಇಷ್ಟವಿದ್ದರೆ ತ್ವರೆಯಾಗಿ ಗಂಧರ್ವನಗರಕ್ಕೆ ಹೋಗಿ ಎಂದು ಸರಸ್ವತಿ ಹೇಳುತ್ತಿದ್ದಾನೆ. 

ಇಲ್ಲಿಗೆ ನಲವತ್ತೇಳನೆಯ ಅಧ್ಯಾಯ ಮುಗಿಯಿತು.

No comments:

Post a Comment