Tuesday, September 24, 2013

||ಶ್ರೀಗುರು ಚರಿತ್ರೆ - ನಲವತ್ತೆಂಟನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

"ನಾಮಧಾರಕ, ಈ ಅಪೂರ್ವ ವಿಷಯವನ್ನು ಕೇಳು" ಎಂದು ಸಿದ್ಧಮುನಿಯು ಹೇಳಿದರು. "ಗಂಧರ್ವನಗರದಲ್ಲಿ ಶ್ರೀಗುರುವು ನೆಲೆಸಿದ್ದಾಗ ಒಬ್ಬ ಶೂದ್ರ ಭಕ್ತ ಇದ್ದನು. ಅವನ ಕಥೆಯನ್ನು ಹೇಳುತ್ತೇನೆ. ಶ್ರೀಗುರುವು ಅನುಷ್ಠಾನಕ್ಕೆಂದು ಪ್ರತಿ ನಿತ್ಯವೂ ಸಂಗಮಕ್ಕೆ ಹೋಗುವ ದಾರಿಯಲ್ಲಿ ವ್ಯವಸಾಯ ಮಾಡಿಕೊಳ್ಳುತ್ತಿದ್ದ ಶೂದ್ರನೊಬ್ಬನು ಇದ್ದನು. ಶ್ರೀಗುರುವು ಬರುತ್ತಿರುವಾಗ ನೋಡಿ ಸಾಷ್ಟಾಂಗ ಪ್ರಣಾಮ ಮಾಡಿ ಹೊಲಕ್ಕೆ ಹೋಗುತ್ತಿದ್ದನು. ಮಧ್ಯಾಹ್ನ ಮಠಕ್ಕೆ ಹಿಂತಿರುಗುವ ಶ್ರೀಗುರುವನ್ನು ನೋಡಿ ಪ್ರಣಾಮ ಮಾಡುತ್ತಿದ್ದನು. ಹೀಗೆ ಅವನು ಬಹಳ ದಿನಗಳು ಭಕ್ತಿ ತೋರಿಸುತ್ತಿದ್ದನು. ಶ್ರೀಗುರು ಪರಮೇಶ್ವರನು ಆ ರೈತ ದಿನವೂ ಪ್ರಣಾಮ ಮಾಡುತ್ತಿದ್ದರೂ ಮೌನವಾಗಿಯೇ ಇರುತ್ತಿದ್ದರು. ಹೀಗೆ ಬಹಳ ಕಾಲ ಕಳೆಯಿತು. ನಂತರ ಒಂದುದಿನ ತಮ್ಮೆದುರಿಗೆ ನಮಸ್ಕಾರ ಮಾಡುತ್ತಿದ್ದ ಶೂದ್ರನನ್ನು ಕಂಡು ಶ್ರೀಗುರುವು ಮುಗುಳ್ನಗುತ್ತಾ, "ನಿತ್ಯವೂ ಕಷ್ಟಪಟ್ಟು ನಮಗೇಕೆ ನಮಸ್ಕಾರ ಮಾಡುತ್ತಿದ್ದೀಯೆ? ನಿನ್ನ ಮನಸ್ಸಿನಲ್ಲಿ ಇರುವ ಕೋರಿಕೆಯೇನು?" ಎಂದು ಕೇಳಿದರು. ಅವನು ಅಂಜಲಿಬದ್ಧನಾಗಿ, "ಸ್ವಾಮಿ, ಈ ಹೊಲದಲ್ಲಿ ಬೆಳೆ ಅಧಿಕವಾಗಿ ಬರಬೇಕು" ಎಂದು ಕೋರಿದನು. "ನಿನ್ನ ಹೊಲದಲ್ಲಿ ಯಾವ ಬೆಳೆ ಬಿತ್ತಿದ್ದೀಯೆ?" ಎಂದು ಶ್ರೀಗುರುವು ಕೇಳಿದರು. "ಸ್ವಾಮಿ, ತಮ್ಮ ಅನುಗ್ರಹದಿಂದ ಜೋಳ ಬಿತ್ತಿದ್ದೇನೆ" ಎಂದು ಬದಲು ಹೇಳಿದನು. "ನಿತ್ಯ ಪ್ರಣಾಮದಿಂದ ಉಂಟಾದ ಪುಣ್ಯದಿಂದ ಬೆಳೆ ಚೆನ್ನಾಗಿಯೇ ಬಂದಿದೆ. ಸ್ವಾಮಿ, ಹೊಲದೊಳಕ್ಕೆ ಬನ್ನಿ. ನಿಮ್ಮ ಅಮೃತ ದೃಷ್ಟಿಯಿಂದ ನೋಡಿ. ನಾನು ಶೂದ್ರನಾದರೂ ನನ್ನನ್ನು ಉಪೇಕ್ಷಿಸಬೇಡಿ. ನೀವು ಜನರೆಲ್ಲರನ್ನೂ ಕಾಪಾಡುವವರು" ಎನ್ನಲು, ಶ್ರೀಗುರುವು ಹೊಲಕ್ಕೆ ಹೋಗಿ ನೋಡಿ, "ನಮ್ಮ ಮಾತುಗಳಲ್ಲಿ ನಿನಗೆ ನಂಬಿಕೆಯಿದ್ದರೆ ಒಂದು ಮಾತು ನಿನಗೆ ಹೇಳುತ್ತೇವೆ. ಏಕಾಗ್ರಚಿತ್ತದಿಂದ ಅದನ್ನು ನಡೆಸು" ಎಂದು ಶ್ರೀಗುರುವು ಹೇಳಲು, ಆ ಶೂದ್ರನು, "ಸ್ವಾಮಿ, ಗುರುವಾಕ್ಯವೇ ತರಿಸುವುದಲ್ಲವೇ? ನೀವೇ ಸಾಕ್ಷಿ. ನಿಮಗೆ ಸರ್ವವೂ ತಿಳಿದಿದೆ" ಎಂದು ಹೇಳಿದನು. ಅದಕ್ಕೆ ಶ್ರೀಗುರುವು, "ನಾವು ಮಧ್ಯಾಹ್ನ ಸಂಗಮದಿಂದ ಬರುವಷ್ಟರಲ್ಲಿ ಬೆಳೆಯನ್ನೆಲ್ಲಾ ಕೊಯಿಸಿ ಹಾಕು. ಸ್ವಲ್ಪವೇ ಬೆಳೆದಿದ್ದರೂ ಸರಿಯೆ. ಎಲ್ಲವನ್ನು ಕೊಯಿಸಿ ಬಿಡು" ಎಂದು ಆದೇಶ ಕೊಟ್ಟು ಶ್ರೀಗುರುವು ಸ್ನಾನಕ್ಕೆ ಹೊರಟು ಹೋದರು. ಶ್ರೀಗುರುವಾಕ್ಯವನ್ನು ಪ್ರಮಾಣವಾಗಿ ಸ್ವೀಕರಿಸಿ ಆ ರೈತನು ಗ್ರಾಮದೊಳಕ್ಕೆ ಹೋಗಿ, ಆ ಹೊಲದ ಯಜಮಾನನನ್ನು ಕಂಡು ಹಿಂದಿನ ವರ್ಷದಂತೆಯೇ ಕೊಡಬೇಕಾದ ಗೇಣಿಯನ್ನು ನಿರ್ಣಯಿಸಿ ಪ್ರಮಾಣಪತ್ರವನ್ನು ಸಿದ್ಧಮಾಡಿ ಕೊಡು" ಎಂದು ಕೇಳಿದನು. ಆ ಯಜಮಾನ, "ಬೆಳೆ ಚೆನ್ನಾಗಿ ಬಂದಿದೆ ಅಲ್ಲವೇ? ಇನ್ನೂ ಬೆಳೆಯುತ್ತದೆ. ಆದ್ದರಿಂದ ಮುಂಚೆಯೇ ಕೊಯ್ಯಲು ನಾನು ಅನುಮತಿ ಕೊಡುವುದಿಲ್ಲ" ಎನ್ನಲು, ಹೋದ ವರ್ಷ ಕೊಟ್ಟದಕ್ಕಿಂತ ಎರಡರಷ್ಟು ಕೊಡುವುದಕ್ಕೆ ನಿಶ್ಚಯಿಸಿ ಆ ಯಜಮಾನನಿಂದ ಪ್ರಮಾಣ ಪತ್ರವನ್ನು ತೆಗೆದುಕೊಂಡನು.

ಆ ರೈತ ಮನುಷ್ಯರನ್ನು ಕರೆದು ಹೊಲ ಕೊಯ್ಯಲು ಆರಂಭಿಸಿದನು. ರೈತನ ಹೆಂಡತಿ ಮಕ್ಕಳು ಬಂದು ಅಡ್ಡ ಹಾಕಿದರು. ಗುರುಭಕ್ತನಾದ ಶೂದ್ರನು ತನ್ನ ಹೆಂಡತಿಯನ್ನು ಕಲ್ಲುಗಳಿಂದ ಹೊಡೆದನು. ಮಕ್ಕಳನ್ನೂ ಹೊಡೆಯಲು ಅವರೆಲ್ಲರೂ ಭಯಪಟ್ಟು ಓಡಿಹೋದರು. ರಾಜದ್ವಾರಕ್ಕೆ ಹೋಗಿ, "ನಮ್ಮ ತಂದೆ ಪಿಶಾಚಿಯಂತೆ ಬದಲಾಗಿ ಅಪಕ್ವವಾದ ಧಾನ್ಯವನ್ನು ಮೂರ್ಖನಂತೆ ಕೊಯ್ದು ಹಾಕುತ್ತಿದ್ದಾನೆ. ನಮ್ಮ ಜೀವನೋಪಾಧಿಯೆಲ್ಲವೂ ವ್ಯರ್ಥವಾಗಿ ಹೋದವು" ಎಂದು ಮೊರೆಯಿಟ್ಟುಕೊಂಡರು. ಆ ರಾಜ ಅವರಿಗೆ, "ಅವನು ಕ್ಷೇತ್ರ ಸ್ವಾಮಿ. ಅವನಿಗೆ ಇಷ್ಟ ಬಂದಂತೆ ಮಾಡಿಕೊಳ್ಳುತ್ತಾನೆ. ಹಿಂದಿನ ವರ್ಷಕ್ಕಿಂತ ಎರಡರಷ್ಟು ಕೊಡಲು ಒಪ್ಪಿಕೊಂಡು ಪತ್ರ ಬರೆದು ಕೊಟ್ಟಿದ್ದಾನೆ. ಆದರೂ ಒಂದುಸಲ ಅಡ್ಡ ಮಾಡಿ ನೋಡುತ್ತೇನೆ" ಎಂದು ಹೇಳಿ ಆ ರಾಜ ಒಬ್ಬ ದೂತನನ್ನು ಕಳುಹಿಸಿದನು. ಬಂದ ಆ ರಾಜ ದೂತನಿಗೆ ರೈತನು, "ರಾಜನಿಗೆ ಇದಕ್ಕಿಂತಲೂ ಒಳ್ಳೆಯ ಧಾನ್ಯವನ್ನು ಕೊಡುತ್ತೇನೆ" ಎಂದು ಹೇಳಲು, ಆ ದೂತ ಹಿಂತಿರುಗಿ ಬಂದು ಆ ವಿಷಯವನ್ನು ಹೇಳಿದನು. ಆ ರಾಜ, "ಅವನ ಹತ್ತಿರ ಬಹಳ ಧಾನ್ಯವಿದೆಯೆಂದು ತಿಳಿದಿದೆಯಾದ್ದರಿಂದ ನನಗೆ ಚಿಂತೆಯಾಕೆ? ಅವನ ಇಷ್ಟದಂತೆ ಅವನು ಮಾಡಿಕೊಳ್ಳಲಿ" ಎಂದು ಹೇಳಿ ಸುಮ್ಮನಾದನು.

ಆ ರೈತ ನಿಶ್ಶೇಷವಾಗಿ ಪೈರನ್ನೆಲ್ಲಾ ಕೊಯ್ದು ಹಾಕಿ ಶ್ರೀಗುರುವಿನ ಬರುವಿಕೆಗಾಗಿ ಧ್ಯಾನ ಮಾಡುತ್ತಾ, ದಾರಿಯಲ್ಲಿ ಕಾಯುತ್ತಾ ನಿಂತಿದ್ದನು. ಶ್ರೀಗುರುವು ಬಂದು, "ಅಯ್ಯೋ, ವ್ಯರ್ಥವಾಗಿ ಈ ಹೊಲವನ್ನು ನೀನೇಕೆ ಕೊಯ್ದು ಹಾಕಿದೆ? ನನ್ನ ಪರಿಹಾಸವನ್ನು ಸತ್ಯವೆಂದು ನೀನೇಕೆ ನಂಬಿದೆ?" ಎಂದು ಕೇಳಲು, "ನಿಮ್ಮ ವಾಕ್ಯವೇ ನನ್ನ ಕೋರಿಕೆಗಳನ್ನು ತೀರಿಸುತ್ತವೆ" ಎಂದು ಹೇಳಿದ ಆ ರೈತನಿಗೆ, "ನಿನ್ನ ಭಕ್ತಿಗೆ ತಗುನಾದ ಫಲಿತವು ಲಭಿಸುತ್ತದೆ. ಭಕ್ತ, ಚಿಂತಿಸಬೇಡ" ಎಂದು ಹೇಳಿ ಶ್ರೀಗುರುವು ಗ್ರಾಮದೊಳಕ್ಕೆ ಹೊರಟು ಹೋದರು. ಆ ಶೂದ್ರನೂ ತನ್ನ ಮನೆಗೆ ಹೊರಟು ಹೋದನು. ಗ್ರಾಮಸ್ಥರು ಅವನನ್ನು ಮೂರ್ಖನೆಂದರು. ಅವನ ಹೆಂಡತಿ ಅಳುತ್ತಿದ್ದಳು. ಆ ಶೂದ್ರನು, "ಶ್ರೀಗುರುವಿನ ವಚನವು ಕಾಮಧೇನುವೇ! ಒಂದೊಂದು ಧಾನ್ಯದ ಕಾಳಿಗೂ ಸಾವಿರದಷ್ಟು ಶ್ರೀಗುರುವು ಕೊಡುತ್ತಾರೆ. ಅನಂತನು ಅನಂತವನ್ನೇ ಕೊಡುತ್ತಾನೆ. ನನ್ನ ಮನಸ್ಸು ಸ್ಥಿರವಾಗಿದೆ. ಆದ್ದರಿಂದ ಎಂತಹ ಹಾನಿಯೂ ಆಗುವುದಿಲ್ಲ. ನನಗೆ ಶ್ರೀಗುರುವೆಂಬ ನಿಧಿಯು ಲಭಿಸಿತು" ಎಂದು ಆ ರೈತನು ಹೆಂಡತಿ ಮಕ್ಕಳು ಇಷ್ಟಬಾಂಧವರು ಎಲ್ಲರಿಗೂ ಹೇಳುತ್ತಾ ಅವರಿಗೆ ಬೋಧಿಸುತ್ತಿದ್ದನು. ಅವರೆಲ್ಲರೂ ಸುಮ್ಮನಿದ್ದರು.

ಹೀಗೆ ಎಂಟು ದಿನಗಳು ಕಳೆದ ಮೇಲೆ ಬಿರುಗಾಳಿ ಬೀಸಲಾರಂಭಿಸಿತು. ಬೆಳೆಗಳೆಲ್ಲವೂ ಹಾಳಾದವು. ಅಕಾಲದಲ್ಲಿ ಅತಿವೃಷ್ಟಿಯೂ ಸುರಿಯಿತು. ಆ ರೈತ ಕೊಯ್ದು ಬಿಟ್ಟಿದ್ದ ಕೂಳೆಗಳಿಂದ ಹೊಸದಾಗಿ ಹನ್ನೊಂದು ಹನ್ನೆರಡು ಮೊಳಕೆಗಳು ಹುಟ್ಟಿದವು. ಅವನ ಹೊಲದಲ್ಲಿ ಧಾನ್ಯವು ಸಮೃದ್ಧಿಯಾಗಿ ಬೆಳೆಯಿತು. ಜನರೆಲ್ಲ ಆಶ್ಚರ್ಯ ಪಟ್ಟರು. ಆ ಶೂದ್ರನ ಹೆಂಡತಿ ಅವನ ಬಳಿ ಸೇರಿ, ಅವನ ಪಾದಗಳಲ್ಲಿ ಬಿದ್ದು, "ಪ್ರಾಣನಾಥ, ನಿನ್ನನ್ನೂ, ಶ್ರೀಗುರುವನ್ನೂ ನಿಂದಿಸಿದೆ. ನನ್ನನ್ನು ಕ್ಷಮಿಸು" ಎಂದು ಗೋಳಾಡಿದಳು. ಆ ಹೆಂಗಸು ಶ್ರೀಗುರುವನ್ನು ಧ್ಯಾನಿಸಿ ಗಂಡನೊಡನೆ ಶ್ರೀಗುರುವಿನ ದರ್ಶನಕ್ಕೆ ಹೊರಟಳು. ಅವನು ಹೆಂಡತಿಯೊಡನೆ ಹೋಗಿ ಶ್ರೀಗುರುವನ್ನು ಪೂಜಿಸಿದನು. ಶ್ರೀಗುರುವು ಆ ದಂಪತಿಗಳನ್ನು ಕಂಡು ನಸುನಗುತ್ತಾ, "ಅದ್ಭುತವೇನು ನಡೆಯಿತು?" ಎಂದು ಕೇಳಿದರು. ಆ ದಂಪತಿಗಳಿಬ್ಬರೂ ಒಂದೇ ಜೊತೆಯಾಗಿ, "ನೀವೆ ನಮ್ಮ ಕುಲದೈವವು. ತಮ್ಮ ವಚನವೇ ಅಮೃತವು. ಸ್ವಾಮಿ, ನಿಮ್ಮ ಪಾದಗಳು ಚಿಂತಾಮಣಿಯೇ! ನಮ್ಮ ಕೋರಿಕೆ ಸಂಪೂರ್ಣವಾಯಿತು. ನಿಮಗೆ ಶರಣು ಬಂದಿದ್ದೇವೆ" ಎಂದು ಗುರುವಿನ ಪಾದಗಳಲ್ಲಿ ಬಿದ್ದರು. ಆ ಹೆಂಗಸು ಶ್ರೀಗುರುವಿಗೆ ನೀರಾಜನವನ್ನು ಕೊಟ್ಟು ಸ್ತುತಿಸಿದಳು. ಅನಂತರ ಶ್ರೀಗುರುವು, "ನಿಮ್ಮ ಮನೆಯಲ್ಲಿ ಸಿರಿಸಂಪದಗಳು ಅಖಂಡವಾಗಲಿ" ಎಂದು ಹೇಳಲು, ಅವರಿಬ್ಬರೂ ತಮ್ಮ ಮನೆಗೆ ಹಿಂತಿರುಗಿದರು.

ಒಂದು ತಿಂಗಳು ಕಳೆದ ನಂತರ ಹಿಂದಿನ ವರ್ಷಕ್ಕಿಂತ ನೂರರಷ್ಟು ಹೆಚ್ಚಾಗಿ ಧಾನ್ಯ ಅವರಿಗೆ ಲಭಿಸಿತು. ಆ ಶೂದ್ರನು ರಾಜನಿಗೆ, "ಹಿಂದಿನ ವರ್ಷಕ್ಕಿಂತ ಎರಡರಷ್ಟು ಕೊಡುತ್ತೇನೆಂದು ಪತ್ರ ಬರೆದು ಕೊಟ್ಟಿದ್ದೆ. ಆದರೆ ಹಿಂದಿನ ವರ್ಷಕ್ಕಿಂತ ನೂರರಷ್ಟು ಹೆಚ್ಚು ಧಾನ್ಯ ಬಂದಿದೆ. ಆದ್ದರಿಂದ ಹೇ ಪ್ರಭು, ನಿಮಗೆ ಅದರಲ್ಲಿ ಅರ್ಧ ಕೊಡುತ್ತೇನೆ. ಸಂಶಯ ಪಡಬೇಡಿ" ಎಂದು ಹೇಳಲು, ಆ ರಾಜ, "ಲೋಭಗೊಂಡು ನಾನು ಧರ್ಮಾಹನಿ ಮಾಡುವುದಿಲ್ಲ. ನಿನಗೆ ಗುರುಪ್ರಸಾದವಾಗಿದೆ. ಅನುಭವಿಸು" ಎಂದು ಹೇಳಿ ಹೊರಟು ಹೋದನು. ಆ ಶೂದ್ರ ಸ್ವಯಂ ಬ್ರಾಹ್ಮಣರಿಗೆ ಬಹಳವಾಗಿ ದಾನಮಾಡಿ ಮಿಕ್ಕ ಧಾನ್ಯವನ್ನು ತನ್ನ ಮನೆಗೆ ಸೇರಿಸಿದನು. ರಾಜನ ಭಾಗವನ್ನು ರಾಜನಿಗೆ ಕೊಟ್ಟನು.

ಹೇ ನಾಮಧಾರಕ, ಶ್ರೀಗುರುಚರಿತ್ರೆಯು ಇಂತಹ ವಿಚಿತ್ರವು. ಶ್ರೀಗುರು ಸುಚರಿತ್ರೆಯನ್ನು ಯಾರ ಮನೆಯಲ್ಲಿ ಕೇಳುತ್ತಾರೋ ಅವರ ಮನೆಯಲ್ಲಿ ತನ್ನ ಸಹಜವಾದ ಚಾಪಲ್ಯವನ್ನು ಬಿಟ್ಟು ಲಕ್ಷ್ಮಿ ಯಾವಾಗಲೂ ನೆಲೆಸಿರುತ್ತಾಳೆ. ಶ್ರೀಗುರು ಸೇವಕನಿಗೆ ದೈನ್ಯವೆಂಬುದು ಇರುವುದಿಲ್ಲ. ಅದರಿಂದಲೇ ಶ್ರೀ ಗಂಗಾಧರಾತ್ಮಜನಾದ ಸರಸ್ವತಿ ಶ್ರೀಗುರುವನ್ನು ಸೇವಿಸಿ ಎಂದು ಉಪದೇಶಿಸಿದನು." 

ಇಲ್ಲಿಗೆ ನಲವತ್ತೆಂಟನೆಯ ಅಧ್ಯಾಯ ಮುಗಿಯಿತು.

No comments:

Post a Comment