Tuesday, September 24, 2013

||ಶ್ರೀಗುರು ಚರಿತ್ರೆ - ನಲವತ್ತಾರನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಾಮಧಾರಕನು, "ಸ್ವಾಮಿ, ಸಿದ್ಧಯೋಗಿ, ನೀವು ನಂದಿಶರ್ಮನ ಕಥೆಯನ್ನು ಹೇಳಿದಿರಿ. ಇನೊಬ್ಬ ಕವಿ ಶ್ರೀಗುರುವಿನ ಸನ್ನಿಧಿಗೆ ಬಂದನೆಂದೂ ಹೇಳಿದಿರಿ. ಅವನಾರು? ಆ ವಿಷಯವನ್ನು ಹೇಳಬೇಕೆಂದು ಕೋರುತ್ತೇನೆ" ಎಂದು ಕೇಳಿದನು. ಸಿದ್ಧಯೋಗಿ, "ನಾಮಧಾರಕ, ಶ್ರೀಗುರುಚರಿತ್ರೆಯಲ್ಲಿನ ರಮ್ಯವಾದ ಕವಿ ಕಥೆಯನ್ನು ಹೇಳುತ್ತೇನೆ. ಕೇಳು. ಗಂಧರ್ವಪುರದಲ್ಲಿ ಶ್ರೀಗುರುವಿನ ಕೀರ್ತಿ ಬಹಳವಾಗಿ ವ್ಯಾಪಿಸಿತ್ತು. ಬಹಳ ಜನ ಸೇರಿದ್ದರು. ನಂದಿಶರ್ಮನ ಕವಿತೆಗಳನ್ನು ಭಕ್ತರು ಭಕ್ತಿಯಿಂದ ಹಾಡಿಕೊಳ್ಳುತ್ತಿದ್ದರು. ಮತ್ತೊಂದು ಗ್ರಾಮದಲ್ಲಿ ಒಬ್ಬ ವಿಪ್ರಭಕ್ತ ಮಹೋತ್ಸವ ಮಾಡಿಸಿ ಶ್ರೀಗುರುವನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಅವನು ಅಲ್ಲಿಂದ ಹಿಪ್ಪರಿಗೆ ಎನ್ನುವ ಗ್ರಾಮಕ್ಕೆ ಹೋಗಿ ಶ್ರೀಗುರುವನ್ನು ಸಂತೋಷದಿಂದ ಪೂಜಿಸಿದನು. ಆ ಗ್ರಾಮದ ಶಿವಾಲಯದಲ್ಲಿ ಕಲ್ಲೇಶ್ವರನೆಂಬ ಶಿವಲಿಂಗವಿತ್ತು. ಅಲ್ಲಿಗೆ ಒಬ್ಬ ಬ್ರಾಹ್ಮಣನು ಬಂದನು. ಅವನ ಹೆಸರು ನರಕೇಸರಿ. ಅವನು ಐದು ಹೊಸ ಪದ್ಯಗಳನ್ನು ಕಲ್ಲೇಶ್ವರನಿಗೆ ಅರ್ಪಿಸಿದನು. ಆ ಬ್ರಾಹ್ಮಣ ಶಿವಸೇವಾಪರನು. ಜನರು ಅವನಿಗೆ, "ಶ್ರೀಗುರುವಿಗೆ ಕವಿತೆಯೆಂದರೆ ಪ್ರೀತಿ. ಆದ್ದರಿಂದ ಶ್ರೀಗುರುವಿನ ಗುಣಗಳನ್ನು ವರ್ಣಿಸು" ಎಂದರು. ಆ ಕವೀಶ್ವರ ಅವರಿಗೆ, "ಈ ನಾಲಗೆ ಕಲ್ಲೇಶ್ವರನಿಗೆ ಅಂಕಿತವಾಗಿದೆ. ನಾನು ನರಸ್ತುತಿಯನ್ನು ಮಾಡುವುದಿಲ್ಲ" ಎಂದು ಹೇಳಿ, ಆ ನರಕೇಸರಿ ಅಂದು ಕೂಡಾ ಶಿವಲಿಂಗವನ್ನು ಪೂಜಿಸಲು ಕುಳಿತನು. (ಆದರೆ) ಅವನು ಗಾಢ ನಿದ್ರೆಯಲ್ಲಿ ಮುಳುಗಿಹೋದನು. ಅವನ ಕನಸಿನಲ್ಲಿ ಯತಿಯಾದ ಶ್ರೀಗುರುವು ಶಿವಲಿಂಗದಲ್ಲಿ ಕೂತು ದರ್ಶನ ಕೊಡಲು ಆ ಬ್ರಾಹ್ಮಣ ಕನಸಿನಲ್ಲಿ ಶ್ರೀಗುರುವನ್ನೇ ಅರ್ಚಿಸುತ್ತಿದ್ದನು. ಅವನಿಗೆ ಲಿಂಗವು ಕಾಣಲಿಲ್ಲ. ಶ್ರೀಗುರುವು, "ಅಯ್ಯಾ, ಕವಿತೆಗೆ ಅನರ್ಹನಾದ ಮಾನವನನ್ನು ಏಕೆ ಅರ್ಚಿಸುತ್ತಿದ್ದೀಯೆ?" ಎಂದು ಕೇಳಿದರು. ಷೋಡಶೋಪಚಾರಗಳಿಂದ ಶ್ರೀಗುರುವನ್ನು ಅರ್ಚಿಸಿದ ಹಾಗೆ ಕನಸು ಕಂಡ ಅವನು ತಕ್ಷಣವೇ ಎಚ್ಚೆತ್ತನು. ಅದರಿಂದ ವಿಸ್ಮಯಗೊಂಡ ನರಕೇಸರಿ ತನ್ನಲ್ಲೇ, "ಈ ನೃಸಿಂಹಸರಸ್ವತಿಯಾಗಿ ಶಿವನೇ ಭೂಮಿಯಲ್ಲಿ ಅವತರಿಸಿದ್ದಾನೆ. ಶ್ರೀಗುರುವು ತ್ರಿಮೂರ್ತಿಗಳ ಅವತಾರವೇ! ಈ ಸ್ವಾಮಿ ದರ್ಶನ ಈಗ ನನ್ನ ಕರ್ತವ್ಯವು" ಎಂದು ಯೋಚಿಸಿ, ತಕ್ಷಣವೇ ಶ್ರೀಗುರುವಿನ ದರ್ಶನಕ್ಕೆ ಹೊರಟು, ಅವರನ್ನು ಸೇರಿ ಅವರ ಚರಣಗಳನ್ನು ಹಿಡಿದು, "ಸ್ವಾಮಿ ನಾನು ಅಜ್ಞನು. ಪ್ರಪಂಚದಲ್ಲಿ ಮಾಯೆ ಸುತ್ತುವರೆದಿರಲು ಆ ಮಾಯೆಯನ್ನು ನಡೆಸುತ್ತಿರುವವನನ್ನು ತಿಳಿಯಲಾರೆನು. ಮುನೀಶ್ವರರಾದ ನೀವು ಸಾಕ್ಷಾತ್ತು ಶಿವನೇ! ಕರ್ಪೂರಗೌರನಾದ ಕಲ್ಲೇಶ್ವರನೂ ನೀವೇ! ಹೇ ಜಗದ್ಗುರು, ಅದರಿಂದಲೇ ನಿಮ್ಮ ಪಾದಗಳಲ್ಲಿ ಶರಣು ಬಂದಿದ್ದೇನೆ. ನೀವೇ ವಿಶ್ವಾಧಾರರು. ಶರಣಾಗತರನ್ನು ರಕ್ಷಿಸುವವರು. ಇಂದು ಯಾವ ಅನುಷ್ಠಾನ ಮಾಡದಿದ್ದರೂ ನೀವು ನನಗೆ ದರ್ಶನ ಕೊಟ್ಟಿರಿ. ಕಲ್ಲೇಶ್ವರನು ಪ್ರಸನ್ನನಾದನು. ಸತ್ಯವಾಗಿಯೂ ನೀವೇ ಕಲ್ಲೇಶ್ವರನು. ಹೇ ಜಗದ್ಗುರು, ದಯೆ ತೋರಿಸಿ" ಎಂದು ಆ ಕವೀಶ್ವರನು ಶ್ರೀಗುರುವಿನ ಪಾದಗಳನ್ನು ಹಿಡಿದನು. ಆಗ ಶ್ರೀಗುರುವು, "ಹೇ ಕವಿ, ನಿತ್ಯವೂ ನಮ್ಮ ನಿಂದೆ ಮಾಡುತ್ತಿದ್ದೀಯೆ. ಇಂದು ಭಕ್ತಿ ಹೇಗೆ ಬಂತು?" ಎಂದು ಅವನನ್ನು ಕೇಳಿದರು. ಆ ಕವಿ, "ಶ್ರೀಗುರುವೇ, ಸ್ವಾಮಿ, ಕಲ್ಲೇಶ್ವರನ ಪೂಜೆಯಿಂದ ನಾನು ಆರ್ಜಿಸಿದ ಪುಣ್ಯ ಪ್ರಭಾವದಿಂದ ಇಂದು ನನಗೆ ನಿಮ್ಮ ಪಾದಗಳು ದೊರೆತವು. ಇಂದು ಕಲ್ಲೇಶ್ವರನ ಮಂದಿರಕ್ಕೆ ಹೋಗಿ ಸ್ವಪ್ನದಲ್ಲಿ ಆ ಶಿವಲಿಂಗದಲ್ಲಿ ನಿಮ್ಮನ್ನೇ ಈಶ್ವರನಾಗಿ ನೋಡಿದೆ. ಆ ಸ್ವಪ್ನದಲ್ಲಿ ನಿಮ್ಮ ಪಾದಯುಗ್ಮಗಳು ನನಗೆ ಕಾಣಿಸಿದವು. ನನಗೆ ಈಗ ಪ್ರತ್ಯಕ್ಷ ದರ್ಶನವಾಯಿತು. ಆದ್ದರಿಂದ ನನ್ನನ್ನು ನಿಮ್ಮ ಶಿಷ್ಯನಾಗಿ ತೆಗೆದುಕೊಳ್ಳಿ" ಎಂದು ಪ್ರಾರ್ಥಿಸಿ, ಆ ಕವಿ ಶ್ರೀಗುರುವನ್ನು ಬಹಳವಾಗಿ ಸ್ತುತಿಸಿದನು. ಹೃದ್ಯವಾದ ಪದ್ಯಗಳಿಂದ ಅವನು ಶ್ರೀಗುರುವನ್ನು ಸ್ತುತಿಸುತ್ತಾ, ಅಲಂಕಾರ, ಲಲಿತವಾದ ಪದಗಳಿಂದ ಮಾನಸ ಪೂಜೆ ಮಾಡಲು ಶ್ರೀಗುರುವು, "ಈ ಕವಿ ಸ್ವಪ್ನದಲ್ಲಿ ನನ್ನನ್ನು ಪೂಜಿಸಿದನು. ಭಕ್ತಿಯಿಂದ ಕೂಡಿದ ಮನಸ್ಸಿನಿಂದ ಅರ್ಚಿಸಿದನು" ಎಂದು ಹೇಳಿ, ಆ ಕವೀಶ್ವರನನ್ನು ಕರೆದು, ಅವನಿಗೆ ವರಗಳನ್ನು ಕೊಟ್ಟು, "ಅಯ್ಯಾ, ಕಲ್ಲೇಶನು ನಮಗೆ ಸಮ್ಮತವಾದವನೇ! ನಿತ್ಯವೂ ಆ ಶಿವನನ್ನು ನೀನು ಭಕ್ತಿಯಿಂದ ಪೂಜಿಸು. ನಾವು ಅಲ್ಲಿಯೂ ನೆಲೆಸಿದ್ದೇವೆ" ಎಂದು ಆಣತಿ ಮಾಡಲು, ಆ ಕವಿ ಶ್ರೀಗುರುವಿಗೆ, "ಸ್ವಾಮಿ, ಪ್ರತ್ಯಕ್ಷ ಸುಲಭನಾದ ನಿಮ್ಮನ್ನು ಬಿಟ್ಟು ನಾನು ಶಿವಲಿಂಗವನ್ನು ಏಕೆ ಪೂಜಿಸಲಿ? ಆ ಶಿವಲಿಂಗದಲ್ಲಿ ನೀವೇ ಕಂಡು ಬಂದಿರಿ. ನೀವೇ ಕಲ್ಲೇಶ್ವರನು. ನೀವೇ ತ್ರಿಮೂರ್ತಿಯು. ಲೀಲೆಯಾಗಿ ಅವತರಿಸಿದ್ದೀರಿ" ಎಂದು ಪ್ರಾರ್ಥಿಸಿ, ಅನುಚರನಾಗಿ, ಗಂಧರ್ವಪುರದಲ್ಲೇ ನಿವಾಸ ಮಾಡಿಕೊಂಡು, ಶ್ರೀಗುರುವನ್ನು ಭಕ್ತಿ ಕೀರ್ತನೆಗಳಿಂದ ಕವಿತಾ ರೂಪದಲ್ಲಿ ಸೇವಿಸಿದನು.

ನಾಮಧಾರಕ, ಹೀಗೆ ಭಕ್ತರಿಬ್ಬರೂ ಕವೀಶ್ವರರಾಗಿ ಶ್ರೀಗುರುವಿನ ಸನ್ನಿಧಿಯಲ್ಲಿ ಇದ್ದುಕೊಂಡು ಶ್ರೀಗುರುವನ್ನು ಸೇವಿಸುತ್ತಿದ್ದರು. ಶ್ರೀಗುರುವು ಪ್ರಸನ್ನನಾದವನಿಗೆ ಕಲ್ಪವೃಕ್ಷವು ಇದ್ದಹಾಗೆ! ಭವಸಾಗರವನ್ನು ತರಿಸುವ ತಾರಕ ಮಾರ್ಗವನ್ನು ಗಂಗಧರಾತ್ಮಜನಾದ ಸರಸ್ವತಿ ಎನ್ನುವ ವಿಪ್ರನು ಹೇಳಿದ ಸತ್ಕಥೆ ಇದು. ಇಹಪರಗಳಿಗೆ ಇದು ಹಿತಪ್ರದವು. 

ಇಲ್ಲಿಗೆ ನಲವತ್ತಾರನೆಯ ಅಧ್ಯಾಯ ಮುಗಿಯಿತು

No comments:

Post a Comment