Thursday, April 11, 2013

||ಶ್ರೀಗುರು ಚರಿತ್ರೆ - ಮೂವತ್ತೆರಡನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ಹೀಗೆ ಬೃಹಸ್ಪತಿಯು ಪತಿವ್ರತೆಯ ರೀತಿಯನ್ನು, ಸಹಗಮನಕ್ಕೆ ಸಮ್ಮತಿ, ಫಲಶೃತಿಗಳನ್ನು ಹೇಳಿ, ನಂತರ ವಿಧವೆಯರ ಅಚಾರಗಳನ್ನು ಹೇಳಲು ದೇವತೆಗಳು ದೇವ ಗುರುವನ್ನು ಹೀಗೆ ಪ್ರಶ್ನಿಸಿದರು, "ಪತಿವ್ರತೆಯು ತನ್ನ ಎದುರಿಗೆ ಗಂಡ ಸತ್ತರೆ ಸಹಗಮನ ಮಾಡ ಬೇಕೆಂಬುದು ಸಹಜವೇ. ಆದರೆ ಅವಳು ಗರ್ಭಿಣಿಯಾಗಿದ್ದರೆ, ಸ್ತನ್ಯಪಾನ ಮಾಡುವ ಮಗುವಿದ್ದರೆ, ಗಂಡ ದೂರ ದೇಶದಲ್ಲಿ ಮರಣಿಸಿದರೆ ಆಗ ಏನು ಮಾಡಬೇಕು?" ಅವರ ಪ್ರಶ್ನೆಯನ್ನು ಕೇಳಿದ ದೇವ ಗುರುವು ಅದನ್ನು ವಿಸ್ತಾರವಾಗಿ ಹೇಳಲು ಉಪಕ್ರಮಿಸಿದನು. "ದೇವತೆಗಳಿರಾ ಕೇಳಿ. ಗಂಡ ಸಮೀಪದಲ್ಲಿ ಮರಣಿಸಿದಾಗ ಪತಿವ್ರತೆಗೆ ಸಹಗಮನವು ಕರ್ತವ್ಯವೇ ಅಲ್ಲವೆ? ಶವ ಸಿಕ್ಕದಿದ್ದರೆ, ಪತಿವ್ರತೆ ಗರ್ಭಿಣಿಯಾಗಿದ್ದರೆ, ಅವಳಿಗೆ ಹಾಲು ಕುಡಿಯುವ ಮಗುವಿದ್ದರೆ, ಸಹಗಮನ ಮಾಡುವುದರಿಂದ ದೋಷವುಂಟಾಗುತ್ತದೆ. ಎಲ್ಲೋ ದೂರದಲ್ಲಿ ಗಂಡ ಮರಣಿಸಿದಾಗಲೂ ಅವಳು ಸಹಗಮನ ಮಾಡಬಾರದು. ಆಗ ಅವಳು ಯಾವಜ್ಜೀವವೂ ವೈಧವ್ಯವನ್ನು ಪಾಲಿಸಬೇಕು. ಹಾಗೆ ಮಾಡಿದರೆ ಅವಳಿಗೆ ಸಹಗಮನ ಮಾಡಿದ ಪುಣ್ಯವು ಲಭಿಸುತ್ತದೆ. ವೈಧವ್ಯಾಚಾರಗಳನ್ನು ಪಾಲಿಸುವುದರಿಂದ ವಿಧವೆಯರಿಗೆ ಮಹಾ ಪುಣ್ಯವು ಲಭಿಸುವುದು. ಗಂಡ ಮೃತನಾದರೆ ವಿಧವೆ ಶಿರೋ ಮುಂಡನವನ್ನು ಮಾಡಿಸಿ ಕೊಳ್ಳಬೇಕು. ಜಡೆ ಹಾಕಿದ ವಿಧವೆ ತನ್ನ ಗಂಡನನ್ನು ಕೂದಲಿನಿಂದ ಬಂಧಿಸಿದವಳಾಗುತ್ತಾಳೆ. ಅವಳಿಗೆ ದುರ್ಗತಿಯು ಬರುವುದು. ಆದ್ದರಿಂದ ಅವಳೂ ಸದಾ ಶಿರೋ ಮುಂಡನವನ್ನು ಆಚರಿಸಬೇಕು. ಪ್ರತಿ ದಿನವೂ ತಲೆಗೆ ಸ್ನಾನ, ಒಂದು ಹೊತ್ತು ಊಟ ಮಾತ್ರ ಮಾಡಬೇಕು. ಅವಳು ಒಂದೇ ರೀತಿಯ ಅನ್ನವನ್ನು ತಿನ್ನಬೇಕು. ಶಕ್ತಿಯಿದ್ದರೆ ಭಕ್ತಿಯಿಂದ ಕೂಡಿ ಮೂರು ದಿನಗಳು ಉಪವಾಸ ಮಾಡಬೇಕು. ಐದು ದಿನಗಳಾಗಲೀ, ಒಂದು ಪಕ್ಷವಾಗಲಿ ಉಪವಾಸವಿರಬೇಕು. ಇಲ್ಲದಿದ್ದರೆ ಭಕ್ತಿಯಿಂದ ಚಾಂದ್ರಾಯಣ ವ್ರತವನ್ನು ಆಚರಿಸ ಬೇಕು. ಚಂದ್ರೋದಯದಲ್ಲಿ ಒಂದು ಹಿಡಿ ಅನ್ನ ಮಾತ್ರ ತಿಂದು, ದಿನಕ್ಕೊಂದು ಹಿಡಿಯಂತೆ ಹೆಚ್ಚಿಸುತ್ತಾ ಪೂರ್ಣಿಮೆಯ ದಿನ ಹದಿನೈದು ಹಿಡಿ ಅನ್ನವನ್ನು ತಿನ್ನಬೇಕು. ನಂತರ ಕೃಷ್ಣ ಪಕ್ಷದಲ್ಲಿ ದಿನಕ್ಕೊಂದು ಹಿಡಿಯಂತೆ ತಗ್ಗಿಸುತ್ತಾ ಅಮಾವಾಸ್ಯೆಯ ದಿನ ಒಂದು ಹಿಡಿ ಅನ್ನ ಮಾತ್ರ ತಿನ್ನಬೇಕು. ಹಾಗೆ ಚಾಂದ್ರಾಯಣ ವ್ರತವನ್ನು ಮಾಡ ಬೇಕು. ವೃದ್ಧಳಾಗಿದ್ದರೆ, ಶಕ್ತಿ ಹೀನಳಾಗಿದ್ದರೆ ಒಂದು ಹೊತ್ತು ಊಟ ಮಾಡುವುದನ್ನು ಪಾಲಿಸಬೇಕು. ಫಲಾಹಾರವನ್ನಾಗಲೀ, ಶಕ್ತಿಯನ್ನನ್ನುಸರಿಸಿ ಶಾಖಾಹಾರವನ್ನಾಗಲೀ ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಸ್ವಲ್ಪ ಹಾಲು ತೆಗೆದು ಕೊಳ್ಳಬೇಕು. ದೋಷ ಭೀತಿಯಿಂದ ಅಧಿಕವಾಗಿ ಹಾಲನ್ನೂ ಕುಡಿಯ ಬಾರದು. ಶ್ವಾಸ ಆಡುವುದಕ್ಕೆ, ಪ್ರಾಣಗಳನ್ನು ಹಿಡಿದಿರುವುದಕ್ಕೆ ಸಾಕಾದಷ್ಟು ಆಹಾರವನ್ನು ಮಾತ್ರ ತೆಗೆದು ಕೊಳ್ಳಬೇಕು. ಮಂಚದ ಮೇಲೆ ಮಲಗುವ ವಿಧವೆ ತನ್ನ ಗಂಡನನ್ನು ರೌರವ ನರಕದಲ್ಲಿ ಬೀಳುವಂತೆ ಮಾಡುವಳು. ತಾನೂ ಕೂಡಾ ಗಂಡನಿಗೆ ಸಮಾನವಾಗಿ ನರಕ ಯಾತನೆಗಳನ್ನು ಅನುಭವಿಸುವಳು. ವಿಧವೆಯು ಮಂಗಳ ಸ್ನಾನವನ್ನು ಶರೀರವು ನಲುಗುವಂತೆ ಮಾಡಬಾರದು. ಹಾಗೆಯೇ ಅವಳು ಗಂಧ ಪುಷ್ಪ ತಾಂಬೂಲಾದಿಗಳನ್ನು ವರ್ಜಿಸಬೇಕು. ವಿಧವೆ ಪುತ್ರ ಹೀನಳಾದರೆ ಅವಳೇ ತಿಲೋದಕದಿಂದ, ದರ್ಭೋದಕದಿಂದ ನಾಮೋಚ್ಛಾರಣೆ ಮಾಡುತ್ತಾ ಪಿತೃ ತರ್ಪಣವನ್ನು ಕೊಡಬೇಕು. ಪತಿ ಭಾವನೆಯಲ್ಲಿರುವ ಸತಿಯು ಪ್ರತಿ ದಿನವೂ ವಿಷ್ಣು ಪೂಜೆಯನ್ನು ಮಾಡ ಬೇಕು. ವಿಧವೆಗೆ ಪತಿ ಸ್ಥಾನದಲ್ಲಿ ವಿಷ್ಣುವೇ ಎಂದು ಶೃತಿಗಳು ಹೇಳುತ್ತಿವೆ. ಸತಿಯಾದ ನಾರಿ ಪತಿಯು ಜೀವಿಸಿದ್ದಾಗ ಅವನ ಆಜ್ಞೆಯನ್ನನುಸರಿಸಿ ನಡೆದಂತೆ ವೈಧವ್ಯದಲ್ಲಿ ಭಕ್ತಿಯಿಂದ ವಿಷ್ಣುವಿನ ಅನುಜ್ಞೆಯನ್ನು ಪಡೆಯ ಬೇಕು. ವಿಷ್ಣುವಿನ ಅನುಜ್ಞೆಯನ್ನು ಪಡೆದು ಆಕೆ ವ್ರತ, ಉಪವಾಸಾದಿಗಳನ್ನು ಆಚರಿಸ ಬೇಕು. ಎಂದರೆ, ಗುರುಗಳ, ವಿಪ್ರರ ಅನುಜ್ಞೆಯನ್ನು ಭಕ್ತಿಯಿಂದ ಸ್ವೀಕರಿಸಿ ವ್ರತಾದಿಗಳನ್ನು ಮಾಡಬೇಕು. ಸುವಾಸಿನಿಯಾಗಿದ್ದಾಗ ತನಗೆ ಪ್ರೀತಿಕರವಾಗಿದ್ದ ವಸ್ತುಗಳನ್ನು ವಿದ್ವಾಂಸನಾದ ವಿಪ್ರನಿಗೆ ಕೊಟ್ಟು ಅವನಿಗೆ ಭೋಜನವನ್ನು ನೀಡ ಬೇಕು. ಮಾಘ ಮಾಸದಲ್ಲಿ, ಕಾರ್ತಿಕ ಮಾಸದಲ್ಲಿ, ವೈಶಾಖ ಮಾಸದಲ್ಲಿ ಆಯಾ ನಿಯಮಗಳನ್ನು ಆಚರಿಸಬೇಕು. ಮಾಘ ಮಾಸದಲ್ಲಿ ಮಾಘ ಸ್ನಾನವನ್ನು ವಿಷ್ಣು ಸ್ಮರಣೆ ಪೂರ್ವಕ ಮಾಡಬೇಕು. ವೈಶಾಖ ಮಾಸದಲ್ಲಿ ಜಲದಾನ, ಕಾರ್ತಿಕ ಮಾಸದಲ್ಲಿ ದೀಪದಾನ ಮಾಡಬೇಕು. ಹಾಗೆ ದಾನ ಮಾಡಿ ಬ್ರಾಹ್ಮಣನಿಗೆ ಕೈಲಾದಷ್ಟು ದಕ್ಷಿಣೆ ಕೊಡ ಬೇಕು. ಮಾಘ ಮಾಸದಲ್ಲಿ ಬ್ರಾಹ್ಮಣನಿಗೆ ತುಪ್ಪ, ಎಳ್ಳು ದಾನ ಮಾಡಬೇಕು. ವೈಶಾಖ ಮಾಸದಲ್ಲಿ ನೀರಿಲ್ಲದ ಕಡೆಗಳಲ್ಲಿ ಅರವಂಟಿಗೆಗಳನ್ನು ಸ್ಥಾಪಿಸಬೇಕು. ಶಿವಾರ್ಪಣವೆಂದು ತಂಬಿಗೆಗಳನ್ನು ದಾನ ಮಾಡಬೇಕು. ತಂಬಿಗೆಯನ್ನು ಸ್ವಚ್ಛವಾದ ನೀರಿನಿಂದ ತುಂಬಿ ದಾನ ಮಾಡಬೇಕು. ಗಂಧ, ಪರಿಮಳ ದ್ರವ್ಯಗಳಿಂದ ಶಿವನನ್ನು ಅರ್ಚಿಸಬೇಕು. ಬ್ರಾಹ್ಮಣ ಗೃಹಗಳಿಗೆ ಭಕ್ತಿಯಿಂದ, ಶಕ್ತಿಯಿರುವವರೆಗೆ ನೀರು ಹೊತ್ತು ಹಾಕಬೇಕು. ಅತಿಥಿಗಳಿಗೆ, ವಿಪ್ರರಿಗೆ ಸ್ವಶಕ್ತಿಯನ್ನನುಸರಿಸಿ ಅನ್ನದಾನ ಮಾಡಬೇಕು. ತೀರ್ಥ ಯಾತ್ರೆಗಳನ್ನು ಮಾಡಬೇಕೆಂದಿರುವವರಿಗೆ ಕೊಡೆ, ಪಾದುಕೆಗಳನ್ನು ಅರ್ಪಿಸಬೇಕು. ಮನೆಗೆ ಬಂದ ಬ್ರಾಹ್ಮಣರ ಪಾದಗಳನ್ನು ತೊಳೆಯ ಬೇಕು. ಬೀಸಣಿಗೆಯಿಂದ ಗಾಳಿ ಹಾಕುತ್ತಾ, ಅವರಿಗೆ ವಸ್ತ್ರಾದಿಗಳನ್ನು ಕೊಟ್ಟು ಪೂಜಿಸ ಬೇಕು. ಗಂಧ ಪರಿಮಳಾದಿಗಳಿಂದ ಅವರನ್ನು ಸಂತೋಷ ಪಡಿಸಬೇಕು. ಶಕ್ತಿಯಿದ್ದರೆ ಅವರಿಗೆ ಜಲಪಾತ್ರೆಗಳನ್ನು, ದ್ರಾಕ್ಷಿ, ಬಾಳೆ ಹಣ್ಣುಗಳನ್ನು ನೀಡಬೇಕು. ಬೆಲ್ಲ ಸೇರಿಸಿದ ಸ್ವಾದಿಷ್ಟ ಪಾನೀಯವನ್ನು ವಿಪ್ರರಿಗೆ ಕೊಟ್ಟು ಅವರ ಆಯಾಸವನ್ನು ತೀರುವಂತೆ ಮಾಡಬೇಕು.

ದಾನ ಮಾಡಿದಾಗ ಗಂಡನ ಹೆಸರು ಹೇಳಿ, ಸಂಕಲ್ಪ ಮಾಡಿ ವಿಪ್ರನಿಗೆ ದಾನ ಮಾಡಬೇಕು ಎನ್ನುವುದು ವಿಧವೆಯರಿಗೆ ವಿಧಿ. ಅದು ಸಾತ್ವಿಕ ದಾನವು. ಕಾರ್ತಿಕ ಮಾಸದಲ್ಲಿ ಅನ್ನವನ್ನಿಡಬೇಕು. ಅನ್ನದಾನದಲ್ಲಿ ಬದನೆ ಕಾಯಿ, ಮುಲ್ಲಂಗಿ, ಜೇನುತುಪ್ಪ, ಎಣ್ಣೆ ಇಡಬಾರದು. ಕಂಚಿನ ಪಾತ್ರೆಯಲ್ಲಿ ತಿನ್ನಬಾರದು. ಎರಡು ದಳಗಳ ಎಲೆಯಲ್ಲಿ ಊಟ ಮಾಡಬಾರದು. ಸ್ವಚ್ಛವಾದ ಮನಸ್ಸಿನಿಂದ ಕಾರ್ತಿಕ ಮಾಸ ಪೂರ್ತಿ ದಾನ ಧರ್ಮಗಳಲ್ಲಿ ಕಳೆಯಬೇಕು. ಮೋದಗದ ಎಲೆಯಲ್ಲಿ ತಿನ್ನುತ್ತಾ ಮಾಸಾಂತದಲ್ಲಿ ಉದ್ಯಾಪನೆ ಮಾಡಬೇಕು. ಯಾವ ವ್ರತಗಳನ್ನು ಮಾಡಿದರೂ ಉದ್ಯಾಪನೆ ಮಾಡಬೇಕು. ತುಪ್ಪದಿಂದ ತುಂಬಿದ ಕಂಚಿನ ಪಾತ್ರೆಯನ್ನು ವಿಪ್ರನಿಗೆ ಭಕ್ತಿಯಿಂದ ದಾನ ಮಾಡಬೇಕು. ತಾನು ನೆಲದಮೇಲೆ ಮಲಗಿ ವಿಪ್ರನಿಗೆ ಮಂಚವನ್ನು ದಾನ ಮಾಡಬೇಕು. ತಾನು ತ್ಯಜಿಸಿದ ವಸ್ತುಗಳನ್ನು ಬ್ರಾಹ್ಮಣನಿಗೆ ಭಕ್ತಿಯಿಂದ ಸಮರ್ಪಿಸ ಬೇಕು. ಒಂದು ತಿಂಗಳು ರಸವನ್ನು ಬಿಟ್ಟರೆ ಬ್ರಾಹ್ಮಣನಿಗೆ ದಕ್ಷಿಣೆಯೊಡನೆ ರಸ ದಾನಮಾಡಬೇಕು. ನಾಲ್ಕು ತಿಂಗಳು ಪಂಚಾಮೃತವನ್ನು ಬಿಟ್ಟರೆ ಉದ್ಯಾಪನೆ ಮಾಡಿ ಸಾಲಂಕೃತವಾದ ಧೇನುವನ್ನು ಸ್ವಶಕ್ತಿಯನ್ನನುಸರಿಸಿ ದಾನ ಕೊಡಬೇಕು. ದೀಪದಾನ ವ್ರತವು ಮಹಾಫಲವನ್ನು ಕೊಡುವುದು. ಮಿಕ್ಕ ಎಲ್ಲ ದಾನಗಳು, ಇತರ ಧರ್ಮಗಳು ಎಲ್ಲವೂ ದೀಪದಾನದ ಹದಿನಾರನೆಯ ಭಾಗಕ್ಕೆ ಸಮಾನವಾಗಲಾರವು. ಮಾಘ ಮಾಸದಲ್ಲಿ ಸೂರ್ಯನು ಅರ್ಧ ಉದಯವಾಗಿರುವ ಸಮಯದಲ್ಲಿ ಮಾಘ ಸ್ನಾನವನ್ನು ಮಾಡಬೇಕು. ಆ ತಿಂಗಳೆಲ್ಲಾ ಮಾಘ ವ್ರತವನ್ನು ಆಚರಿಸಬೇಕು. ಎಳ್ಳು, ಹೊಯ್ಗಡುಬು, ಖರ್ಜೂರ, ಪಕ್ವಾನ್ನ, ಮುಂತಾದುವನ್ನು ದಾನ ಮಾಡಬೇಕು. ಭಕ್ತಿಯಿಂದ ಯಥಾ ಶಕ್ತಿಯಾಗಿ ಬ್ರಾಹ್ಮಣರಿಗೆ ದಾನ ಕೊಡಬೇಕು. ಧನ ಲೋಭ ಮಾಡಬಾರದು. ಸಕ್ಕರೆ ಸೇರಿಸಿ ತುಪ್ಪದಲ್ಲಿ ಮಾಡಿದ ಭಕ್ಷ್ಯಗಳನ್ನು ದಾನ ಮಾಡಬೇಕು. ದೀಪದಾನವನ್ನು ಯಥಾ ಶಕ್ತಿಯಾಗಿ ಮಾಡಿ ತಾಪಸಿಗಳಿಗೆ ಊಟವನ್ನಿಡಬೇಕು. ಹೇಮಂತದಲ್ಲಿ ಛಳಿ ಹೋಗಲು ಬ್ರಾಹ್ಮಣನಿಗೆ ಕಟ್ಟಿಗೆ ದಾನಮಾಡಿ, ಯಥಾ ಶಕ್ತಿಯಾಗಿ ವಸ್ತ್ರಗಳು, ಕಂಬಳಿಗಳು ಮುಂತಾದುವನ್ನು ಸಮರ್ಪಿಸಬೇಕು. ವಿದ್ವಾಂಸನಾದ ಬ್ರಾಹ್ಮಣನಿಗೆ ಸುಖವಾಗಿ ನಿದ್ರೆ ಮಾಡಲು ಅನುಕೂಲವಾಗುವಂತೆ ಮಂಚ, ಚಿತ್ರರಂಜಿತವಾದ ಉಣ್ಣೆಯ ಬಟ್ಟೆಗಳನ್ನು ಕೊಡಬೇಕು. ಶೀತ ನಿವಾರಕಗಳಾದ ಶುಂಠಿ ಮುಂತಾದ ಬಿಸಿಯನ್ನುಂಟು ಮಾಡುವ ಔಷಧಗಳನ್ನು ವಿಪ್ರನಿಗೆ ದಾನ ಮಾಡಬೇಕು. ಏಲಕ್ಕಿ, ಪಚ್ಚಕರ್ಪೂರ ಸೇರಿಸಿದ ತಾಂಬೂಲವನ್ನು ನೀಡಬೇಕು. ವರ್ಷಕ್ಕೆ ಬೇಕಾದ ಪದಾರ್ಥಗಳೊಡನೆ ಸಮೃದ್ಧಿಯಾದ ಮನೆಯನ್ನು ಬ್ರಾಹ್ಮಣನಿಗೆ ನೀಡಬೇಕು. ತೀರ್ಥಯಾತ್ರೆಗಳನ್ನು ಮಾಡುವವರಿಗೆ ಸುಖವನ್ನುಂಟು ಮಾಡುವ ಪಾದುಕೆಗಳನ್ನು ದಾನ ಮಾಡಬೇಕು. ಗಂಧ, ಪರಿಮಳವಾದ ಹೂವುಗಳಿಂದ ಕೇಶವನ ಪೂಜೆ ಮಾಡಬೇಕು. ರುದ್ರಾಭಿಷೇಕದಿಂದ ಯಥಾ ವಿಧಿಯಾಗಿ ಪಾರ್ವತಿ ಪರಮೇಶ್ವರರನ್ನು ಅರ್ಚಿಸಬೇಕು. ಧೂಪ ದೀಪ ನೈವೇದ್ಯಗಳಿಂದ ಸಾಂಬಶಿವನ ಪೂಜೆ ಮಾಡಬೇಕು. ದೀಪಮಾಲೆ ಶಂಕರನಿಗೆ ವಿಶೇಷವಾಗಿ ಪ್ರೀತಿಕರವಾದದ್ದು. ಪತಿರೂಪವನ್ನು ಹೃದಯದಲ್ಲಿ ಧ್ಯಾನಿಸುತ್ತಾ ಭಕ್ತಿಯಿಂದ ನಾರಾಯಣನನ್ನು ಸ್ಮರಿಸಿ ಏಕಭಾವದಿಂದ ಪೂಜೆ ಮಾಡುವ ಸತಿಗೆ ಪಾಪಗಳೆಲ್ಲವೂ ನಾಶವಾಗುತ್ತವೆ. ನಿಯಮಗಳನ್ನು ಪಾಲಿಸುತ್ತಾ, ಎತ್ತಿನ ಗಾಡಿಯನ್ನು ಹತ್ತದೆ, ರವಿಕೆಯನ್ನು ಹಾಕಿಕೊಳ್ಳದೆ, ಬಿಳಿಯ ವಸ್ತ್ರಗಳನ್ನೇ ಧರಿಸಬೇಕು. ಕೆಂಪು, ಕಪ್ಪು, ಚಿತ್ರ ವರ್ಣಗಳ ವಸ್ತ್ರಗಳು ದೋಷಪ್ರದವು.
   

1 comment:

  1. The 8 Best Casinos in San Diego - Mapyro
    Best Casinos in San Diego · Golden 강릉 출장샵 Nugget: 8Best Casinos in San Diego 울산광역 출장마사지 · Red Dog 안성 출장샵 Casino: 8Best Casino Resort: 8Best Casino Resort · El Cortez: 경주 출장샵 8Best Casino 서산 출장샵 Resort

    ReplyDelete