Monday, September 23, 2013

||ಶ್ರೀಗುರುಚರಿತ್ರೆ - ನಲವತ್ತೈದನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ಶ್ರಿಗುರುಚರಿತೆಯನ್ನು ಕೇಳಿದ ನಾಮಧಾರಕ, "ನಿಮ್ಮ ಅನುಗ್ರಹದಿಂದ ನನಗೆ ದೇವತೆಗಳಿಗೂ ಅಲಭ್ಯವಾದ ಅಮೃತವು ಲಭಿಸಿತು. ಶ್ರೀಗುರುಚರಿತ್ರೆಯ ಶ್ರವಣದಿಂದ ನನ್ನ ಅಭೀಷ್ಟ ಸಿದ್ಧಿಯ ಜೊತೆಗೆ ಸುಖವೂ ದೊರಕಿತು. ನಂತರ ನಡೆದ ಗುರುಚರಿತ್ರೆಯೇನು ಎಂಬುದನ್ನು ಹೇಳಬೇಕೆಂದು ಕೋರುತ್ತೇನೆ" ಎಂದು ಪ್ರಾರ್ಥಿಸಿದನು. ಅದಕ್ಕೆ ಸಿದ್ಧಮುನಿಯು, "ಅಯ್ಯಾ, ನಾಮಧಾರಕ, ಪವಿತ್ರವಾದ ಶ್ರೀಗುರುಚರಿತ್ರೆಯಲ್ಲಿ ಒಂದು ವಿಚಿತ್ರವು ನಡೆಯಿತು. ನಂದಿಶರ್ಮ ಎನ್ನುವ ಬ್ರಾಹ್ಮಣನು ಶರೀರದಲ್ಲೆಲ್ಲಾ ಕುಷ್ಠುವ್ಯಾಧಿ ಆವರಿಸಿದ್ದುದರಿಂದ ತುಲಜಾಪುರಕ್ಕೆ ಹೋಗಿ ಅಲ್ಲಿ ಮೂರು ವರ್ಷಗಳು ದೇವಿಯನ್ನು ಪೂಜಿಸಿದನು. ದೇವಿ ಕನಸಿನಲ್ಲಿ ಕಾಣಿಸಿಕೊಂಡು ಚಂದಲಾ ಪರಮೇಶ್ವರಿಯ ಕಡೆಗೆ ಹೋಗು ಎಂದು ಆ ಬ್ರಾಹ್ಮಣನನ್ನು ಆದೇಶಿಸಿದಳು. ಜಗದಂಬೆ ಹಾಗೆ ಆಜ್ಞೆ ಮಾಡಿದ್ದರಿಂದ ಮನಸ್ಸಿಲ್ಲದಿದ್ದರೂ ಚಂದಲಾ ಪರಮೇಶ್ವರಿಯನ್ನು ಸೇರಿ ಅಲ್ಲಿ ಏಳು ತಿಂಗಳು ಉಪವಾಸ ಮಾಡುತ್ತಾ ಪೂಜಿಸಿದನು. ಸ್ವಪ್ನದಲ್ಲಿ ಆ ದೇವಿ ಕಾಣಿಸಿಕೊಂಡು ಅವನನ್ನು, "ಅಯ್ಯಾ, ನನ್ನ ಆಜ್ಞೆಯಂತೆ ಗಂಧರ್ವಪುರಕ್ಕೆ ಶೀಘ್ರವಾಗಿ ಹೋಗು. ಅಲ್ಲಿ ತ್ರಿಮೂರ್ತಿ ಸ್ವರೂಪನಾದ ಶ್ರೀ ನೃಸಿಂಹಸರಸ್ವತಿ ಇದ್ದಾನೆ. ಆತನು ಭಿಕ್ಷು ವೇಷವನ್ನು ಧರಿಸಿದ್ದಾನೆ. ದುಷ್ಟಬುದ್ಧಿಯಾದ ನಿನ್ನನ್ನು ಆತನು ಪವಿತ್ರನನ್ನಾಗಿ ಮಾಡುತ್ತಾನೆ" ಎಂದು ಅಜ್ಞಾಪಿಸಲು, ಅವನು ಎಚ್ಚರಗೊಂಡು, "ದೇವಿ, ಆರು ತಿಂಗಳು ನನ್ನನ್ನು ಇಷ್ಟು ಕಷ್ಟಕ್ಕೆ ಗುರಿಪಡಿಸಿದುದು ಏಕೆ? ಈ ವಿಷಯವನ್ನು ಮುಂಚೆಯೇ ಹೇಳಬಾರದಿತ್ತೆ? ಜಗನ್ಮಾತೆಯ ಅನುಜ್ಞೆಯಿಂದ ನಾನು ನಿನ್ನ ಸನ್ನಿಧಿಗೆ ಬಂದೆ. ನೀನು ದೇವತೆಯಾಗಿಯೂ ಒಬ್ಬ ಮನುಷ್ಯನ ದರ್ಶನ ಮಾಡಿಕೋ ಎಂದು ಪ್ರೋತ್ಸಾಹಿಸುವ ನಿನ್ನ ದೇವತ್ವವು ಈಗ ನನಗೆ ತಿಳಿದು ಬಂತು. ನಾನು ಏಳು ತಿಂಗಳು ಉಪವಾಸ ಮಾಡಿದೆ. ಈ ಸಂಗತಿ ನನಗೆ ಮುಂಚೆಯೇ ಹೇಳಿದ್ದರೆ ನನಗೀಕಷ್ಟ ತಪ್ಪುತ್ತಿತ್ತಲ್ಲ? ನೀನು ನನ್ನ ಆಸೆಯನ್ನು ಹೀಗೆ ತರಿದುಹಾಕಿದೆ" ಎಂದು ಅವನು ವಿಲಪಿಸಿದನು. ಹೀಗೆ ದುಃಖ ಪಡುತ್ತಲೇ ಅವನು ಪ್ರಾಯೋಪವೇಶ ಪ್ರಾರಂಭಿಸಿದನು. ದೇವಿ ಮತ್ತೆ ಕನಸಿನಲ್ಲಿ ಕಾಣಿಸಿಕೊಂಡು, "ಅಯ್ಯಾ ಬ್ರಾಹ್ಮಣ, ಗಂಧರ್ವನಗರಕ್ಕೆ ಹೋಗು" ಎಂದು ಆದೇಶಿಸಿ, ತನ್ನ ಭಕ್ತರಿಗೆ ‘ಆ ಬ್ರಾಹ್ಮಣನನ್ನು ಇಲ್ಲಿಂದ ಹೊರದೂಡಿ’ ಎಂದು ಆಜ್ಞಾಪಿಸಿದಳು. ಆ ಭಕ್ತರು ಅವನನ್ನು ಹೊರದೂಡುತ್ತೇವೆಂದು ಹೇಳಿದರು. ಆ ಬ್ರಾಹ್ಮಣನು ಅಂಬಿಕೆಯನ್ನು ಪೂಜಿಸಿ ಅಲ್ಲಿಂದ ಹೊರಟನು.

ಅವನು ಗಂಧರ್ವಪುರವನ್ನು ಸೇರಿ ಅಲ್ಲಿನ ಸೇವಕರನ್ನು ‘ಯತಿಗಳು ಎಲ್ಲಿ’ ಎಂದು ಕೇಳಿದನು. ಅವರು, "ಸಂಗಮದಲ್ಲಿದ್ದಾರೆ. ನೆನ್ನೆ ಶಿವರಾತ್ರಿಯಾದದ್ದರಿಂದ ಉಪವಾಸವಿದ್ದರು. ಪಾರಣೆ ಮಾಡಲು ತ್ವರೆಯಾಗಿ ಬರುತ್ತಾರೆ. ಸಂಶಯವಿಲ್ಲ" ಎಂದು ಹೇಳಿದರು. ಅಷ್ಟರಲ್ಲೇ ಶ್ರೀಗುರುವೂ ಬಂದರು. ಅವನನ್ನು ಗ್ರಾಮವಾಸಿಗಳು ದೂರದಲ್ಲೇ ಇರು ಎಂದು ಹೇಳಿದ್ದರಿಂದ ಅವನು ದೂರದಲ್ಲೇ ನಿಂತನು. ಶ್ರೀಗುರುವು ಮಠವನ್ನು ಸೇರಿದರು. ಭಕ್ತರು ಶ್ರೀಗುರುವಿಗೆ, "ಒಬ್ಬ ವಿಪ್ರನು ಬಂದಿದ್ದಾನೆ. ಆತನ ಸರ್ವಾವಯವಗಳಲ್ಲೂ ಶ್ವೇತ ಕುಷ್ಠುರೋಗದಿಂದ ಬಾಧೆಪಡುತ್ತಾ, ನಿಮ್ಮ ದರ್ಶನಕ್ಕಾಗಿ ಬಂದಿದ್ದಾನೆ" ಎಂದು ತಿಳಿಸಿದರು. ಅವರ ಮಾತನ್ನು ಕೇಳಿದ ಶ್ರೀಗುರುವು, "ಅವನನ್ನು ಬಲ್ಲೆ. ಅವನು ಮನಸ್ಸಿನಲ್ಲಿ ಸಂಶಯವಿಟ್ಟುಕೊಂಡು ಬಂದಿದ್ದಾನೆ. ಮಠದೊಳಕ್ಕೆ ಅವನನ್ನು ಕರೆಯಿರಿ" ಎಂದು ಹೇಳಿದರು. ಭಕ್ತರು ಹೋಗಿ ಅವನನ್ನು ಕರೆಯಲು ಅವನು ಒಳಕ್ಕೆ ಬಂದು ದೂರದಿಂದಲೇ ಶ್ರೀಗುರುವನ್ನು ನೋಡಿ ಸಾಷ್ಟಾಂಗ ಪ್ರಣಾಮ ಮಾಡುತ್ತ, ಸಂತೋಷಗೊಂಡು ಶ್ರೀಗುರುವನ್ನು ಸಮೀಪಿಸಿದನು. ಶ್ರೀಗುರುವು ಅವನನ್ನು ನೋಡಿ, "ಅಯ್ಯಾ, ನೀನು ಮೊದಲು ದೇವತಾ ಸನ್ನಿಧಿಗೆ ಹೋದೆ. ಮತ್ತೆ ಮಾನವನಾದ ನನ್ನ ಬಳಿಗೆ ಸಂದೇಹ ಪಡುತ್ತಾ ಏಕೆ ಬಂದೆ?" ಎಂದು ಕೇಳಿದರು. ಅವನು ‘ನನ್ನ ಹೃದಯಲ್ಲಿದ್ದ ಭಾವನೆಯು ಅವರಿಗೆ ತಿಳಿದುಹೋಯಿತು. ಅದರಿಂದ ಈತನು ಪರಮಾತ್ಮನು’ ಎಂದು ತಿಳಿದುಕೊಂಡು, ಕ್ಷಮಾಪಣೆ ಕೇಳಿಕೊಳ್ಳುತ್ತಾ, "ಸ್ವಾಮಿ, ನಾನು ಅಜ್ಞಾನಾಂಧಕಾರದಲ್ಲಿದ್ದೆ. ಸ್ವಾಮಿಯ ದರ್ಶನದಿಂದ ಶುದ್ದನಾದೆ. ನೀವಲ್ಲದೆ ಇತರ ಪರಬ್ರಹ್ಮ ನನಗೆ ತಿಳಿಯದು. ನಾನು ಅಜ್ಞಾನದಿಂದ ಸುತ್ತಲ್ಪಟ್ಟಿರುವ ಮಂದಮತಿಯು. ಇಂದು ನನಗೆ ಸುದಿನವು. ನಿಮ್ಮ ದರ್ಶನದಿಂದ ಧನ್ಯನಾದೆ. ಪಾವನನಾದೆ. ಹೇ ಶ್ರೀ ನೃಸಿಂಹಸರಸ್ವತಿ, ನಿನ್ನ ಬಿರುದಾವಳಿ ಪ್ರಪಂಚ ವ್ಯಾಪ್ತವಾಗಿದೆ. ನನ್ನ ದುಷ್ಕರ್ಮಗಳೆಲ್ಲ ನಾಶವಾದವು. ನಿನ್ನ ಸ್ಥಾನವೇ ಪರಬ್ರಹ್ಮ ಪದವು ಎಂದು ತಿಳಿಯಿತು. ಹೇ ಯತೀಶ್ವರ, ನಿನ್ನ ಕೃಪೆಯಿಂದಲೇ ನನ್ನ ಮನೋರಥವು ನೆರವೇರುತ್ತದೆ. ಮಾನವ ದೇಹದಲ್ಲಿ ಅವತರಿಸಿ ನೀವು ಭಕ್ತಜನರ ಕಾಮಧೇನುವಾಗಿದ್ದೀರಿ. ನೀವು ನಿಮ್ಮ ಸೇವಕರನ್ನು ರಕ್ಷಿಸಲು ಭೂತಲದಲ್ಲಿ ಅವತರಿಸಿದ್ದೀರಿ. ಸ್ವಾಮಿ, ವಿವಾಹವಾದಾಗಿನಿಂದಲೂ ನನ್ನ ಶರೀರವೆಲ್ಲವೂ ಕುಷ್ಠವು ವ್ಯಾಪಿಸಲು ನನ್ನ ಹೆಂಡತಿ ತವರು ಮನೆಗೆ ಹೊರಟು ಹೋದಳು. ಹೇ ಪ್ರಭು, ನನ್ನ ತಾಯಿ ತಂದೆಯರೂ ನನ್ನನ್ನು ದೂರಮಾಡಿದರು. ಜಗನ್ಮಾತೆಯ ಆಲಯದಲ್ಲಿ ಉಪವಾಸಗಳು ಮಾಡಿದೆ. ಆ ದೇವಿ ‘ನಿನ್ನ ಪಾಪಗಳು ಇಲ್ಲಿ ನಾಶವಾಗುವುದಿಲ್ಲ. ನೀನು ಚಂದಲೇಶ್ವರಿಯ ಕಡೆಗೆ ಹೋಗು. ಪಾಪ ರಹಿತನಾಗುತ್ತೀಯೆ’ ಎಂದು ಆಜ್ಞಾಪಿಸಿದಳು. ಅದರಂತೆ ನಾನು ಅಲ್ಲಿಗೆ ಹೋಗಿ ಕಷ್ಟ ಪಟ್ಟೆ. ಆಕೆ ನನ್ನನ್ನು ನಿಮ್ಮಲ್ಲಿಗೆ ಹೋಗು ಎಂದು ಆದೇಶಿಸಿದಳು. ಹೇ ಕೃಪಾನಿಧಿ, ದೇವತೆಗಳಿಗೇ ಆಗದು ಎಂದದ್ದನ್ನು ಮಾನವ ಮಾತ್ರನಾದವನು ಏನು ಮಾಡಬಲ್ಲ ಎಂದು ಸಂದೇಹ ಪಟ್ಟೆ. ನಿಮ್ಮ ಶರಣು ಬಂದಿದ್ದೇನೆ. ನಾನು ದೊಡ್ಡ ಪಾಪಿ. ಅಂಗಹೀನನಾದ ಕುಷ್ಠು ರೋಗಿಗೆ ಕರ್ತವ್ಯವೇನು? ಮರಣಿಸುವುದೇ ಅಲ್ಲವೇ? ಈಗ ನನ್ನದೊಂದೇ ಪ್ರಾರ್ಥನೆ. ಈ ಶರೀರದ ಮೇಲೆ ಆಸೆಯಿಲ್ಲ. ನಿಮ್ಮ ಎದುರಿಗೇ ಪ್ರಾಣ ಬಿಡುತ್ತೇನೆ. ನೀವು ಆರ್ತರನ್ನು ಕಾಪಾಡುವವರೆಂದು ನಿಮ್ಮ ಬಳಿಗೆ ಬಂದಿದ್ದೇನೆ. ನಿಮ್ಮ ಇಷ್ಟದಂತೆ ಮಾಡಿ" ಎಂದು ಪ್ರಾರ್ಥಿಸಿದನು.

ಶ್ರೀಗುರುವು ಕರುಣೆಯಿಂದ ನಗುತ್ತಾ ಸೋಮನಾಥನನ್ನು ಕರೆದು, "ಇವನನ್ನು ಸಂಗಮಕ್ಕೆ ಕರೆದುಕೊಂಡು ಹೋಗು. ಅಲ್ಲಿ ತೀರ್ಥದಲ್ಲಿ ಇವನಿಂದ ಸಂಕಲ್ಪ ಮಾಡಿಸಿ ಸ್ನಾನ ಮಾಡಿಸು. ಆ ನಂತರ ಅಶ್ವತ್ಥವೃಕ್ಷವನ್ನು ಅರ್ಚಿಸಿ, ಇವನ ಒದ್ದೆ ಬಟ್ಟೆಗಳನ್ನು ದೂರವಾಗಿ ಎಸೆದು, ಇವನಿಗೆ ಹೊಸ ಬಟ್ಟೆಗಳನ್ನು ಕೊಟ್ಟು ಇವನನ್ನು ಕರೆದುಕೊಂಡು ಬಾ" ಎಂದು ಆಣತಿ ಮಾಡಿದರು. ಸ್ನಾನ ಮಾತ್ರದಿಂದಲೇ ಅವನ ದೇಹವು ಪರಿಶುದ್ಧವಾಯಿತು. ಅವನು ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿದ ಮಾತ್ರದಿಂದಲೇ ಅವನು ಸುವರ್ಣಕಾಂತಿ ಶರೀರನಾದನು. ಅವನ ಹಳೆಯ ಬಟ್ಟೆಗಳನ್ನು ಹಾಕಿದ ಸ್ಥಳವೆಲ್ಲವೂ ಬಂಜರು ಭೂಮಿಯಾಯಿತು. ಸೋಮನಾಥನು ಅವನನ್ನು ಹಿಂದಿಟ್ಟು ಕೊಂಡು ಮಠಕ್ಕೆ ಹಿಂತಿರುಗಿ ಅವನನ್ನು ಶ್ರೀಗುರುವಿನ ಪಾದಗಳಲ್ಲಿ ನಿಲ್ಲಿಸಿದನು. ಅಲ್ಲಿದ್ದವರೆಲ್ಲ ಅವನನ್ನು ನೋಡಿ ಆಶ್ಚರ್ಯಪಟ್ಟರು. ನಂದಿಶರ್ಮ ಎನ್ನುವ ಆ ಬ್ರಾಹ್ಮಣನು ಅತ್ಯಂತ ಸಂತೋಷದಿಂದ ಶ್ರೀಗುರು ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ‘ಧನ್ಯನಾದೆ’ ಎಂದು ಹೇಳಿದನು. "ಅಯ್ಯಾ, ನಿನ್ನ ಕೋರಿಕೆ ಸಿದ್ಧಿಸಿತೋ ಇಲ್ಲವೋ ಹೇಳು. ನಿನ್ನ ಶರೀರವನ್ನೆಲ್ಲ ಇನ್ನೊಂದುಸಲ ಚೆನ್ನಾಗಿ ಪರೀಕ್ಷಿಸಿ ನೋಡಿಕೊಂಡು ಹೇಳು" ಎಂದು ಶ್ರೀಗುರುವು ಹೇಳಿದರು. ಅವನು ಮತ್ತೊಮ್ಮೆ ತನ್ನ ಶರೀರವನ್ನೆಲ್ಲಾ ಹುಡುಕಿ ನೋಡಿ, ಭಯಪಟ್ಟು, "ಸ್ವಾಮಿ, ನಿಮ್ಮ ಕೃಪಾ ದೃಷ್ಟಿಯಿಂದ ಕುಷ್ಠವೆಲ್ಲ ಹೋಯಿತು. ಆದರೆ ಜಂಘದಲ್ಲಿ ಮಾತ್ರ ಹೇಗೆ ಮಿಕ್ಕಿದೆಯೋ ತಿಳಿಯುತ್ತಿಲ್ಲ. ಪರಮಾತ್ಮ, ನನ್ನಲ್ಲಿ ದಯೆತೋರು!" ಎಂದು ಕಳಕಳಿಯಿಂದ ಬೇಡಿಕೊಂಡನು.

"ಮಾನವನು ನನಗೇನು ಮಾಡಬಲ್ಲನು ಎಂದು ನಿನ್ನ ಸಂಶಯವು. ಅದರಿಂದಲೇ ಆ ಸ್ವಲ್ಪ ಜಾಗದಲ್ಲಿ ನಿನ್ನ ಕುಷ್ಠವು ಮಿಕ್ಕಿದೆ. ನನ್ನನ್ನು ಕವನಗಳಿಂದ ಸ್ತುತಿಸು. ನೀನು ಸ್ತುತಿಯನ್ನು ಸದಾ ಮಾಡುತ್ತಿರಬೇಕು. ಹಾಗಾದರೆ ನಿನಗೆ ಸಂಪೂರ್ಣ ಪರಿಶುದ್ಧಿಯಾಗುತ್ತದೆ" ಎಂದು ಶ್ರೀಗುರುವು ಆಣತಿ ಮಾಡಿದನು. ಅದಕ್ಕೆ ನಂದಿಶರ್ಮ, "ಸ್ವಾಮಿ ನಾನು ಮಂದಬುದ್ಧಿಯವನು. ಅಕ್ಷರಗಳನ್ನು ಕಲಿಯಲಿಲ್ಲ. ನಾನು ಕಾವ್ಯಕರ್ತನು ಹೇಗಾಗಬಲ್ಲೆ?" ಎಂದು ಹೇಳುತ್ತಾ ಶ್ರೀಗುರುವಿನ ಪಾದಗಳನ್ನು ಹಿಡಿದನು. ಆಗ ಶ್ರೀಗುರುವು ಅವನ ನಾಲಗೆಯ ಮೇಲೆ ಭಸ್ಮವನ್ನು ಹಾಕಿದರು. ತಕ್ಷಣವೇ ನಂದಿಶರ್ಮನು ಜ್ಞಾನವಂತನಾದನು. ಶ್ರೀಗುರುವಿನ ಪಾದಗಳಲ್ಲಿ ಶಿರವಿಟ್ಟು ಶ್ರೀಗುರುವನ್ನು ಸ್ತುತಿಸಲು ಆರಂಬಿಸಿದನು.

"ಸ್ವಾಮಿ ಅಜ್ಞಾನದಿಂದ ಇಲ್ಲಿಯವರೆಗೂ ನಿಮ್ಮನ್ನು ಸೇವಿಸಲಾರದೆ ಹೋದೆ. ಈ ಸಂಸಾರ ಚಕ್ರವನ್ನು ಸುತ್ತುತ್ತಾ ನಾನಾ ಯೋನಿಗಳಲ್ಲಿ ಜನಿಸಿ ಕರ್ಮಗಳನ್ನು ಅನುಭವಿಸಿದೆ. ಇಲ್ಲಿಯವರೆಗೂ ನಿಮ್ಮ ಪಾದಪದ್ಮಗಳು ನೆನಪಿಗೆ ಬರಲಿಲ್ಲ. ನನ್ನ ಪೂರ್ವ ಜನ್ಮದಲ್ಲಿ ನಿಮ್ಮ ಶ್ರೀಚರಣಗಳು ನನ್ನ ಸ್ಮರಣೆಗೆ ಬರಲಿಲ್ಲ. ಮಾನವರಲ್ಲಿಯೂ ನೀಚ ಜನ್ಮದ ಸಮಯದಲ್ಲೂ ನಿಮ್ಮ ತಾರಕಪಾದಗಳು ನನಗೆ ಸ್ಮರಣೆಗೆ ಬರಲಿಲ್ಲ. ಶ್ರೀಗುರು ಬ್ರಾಹ್ಮಣಜನ್ಮ ಶ್ರೇಷ್ಠವಾದುದು. ಅಂತಹ ಈ ಜನ್ಮದಲ್ಲೂ ಕೂಡಾ ನಿಮ್ಮ ತಾರಕವಾದ ಪಾದಗಳನ್ನು ನಾನು ಮೂಢತ್ವದಿಂದಾಗಿ ಸೇವಿಸಲಿಲ್ಲ. ಗರ್ಭಾವಾಸದಲ್ಲಿ ತಂದೆತಾಯಿಯರ ರಕ್ತ ತೇಜಸ್ಸುಗಳು ಏಕವಾಗಿ ಕುಕ್ಷಿಯಲ್ಲಿ ಐದು ದಿನಗಳಿಗೆ ಬುದ್ಬುದದಂತಾಗುವುದು. ಒಂದು ಪಕ್ಷದೊಳಗೆ ಸುಸ್ಥಿರನಾಗಿ ಮುದ್ದೆಯಾಗಿ ಬದಲಾಗಿ ಏಕರಸವಾಗಿ ತತ್ತ್ವಹೀನವಾದ ತಾಯಿಯ ಗರ್ಭದಲ್ಲಿ ಮೃತ ಸಮಾನನಾಗಿ ಬಿದ್ದಿದ್ದೆ. ಒಂದು ಮಾಸದಲ್ಲಿ ಪಿಂಡಕಾರನಾಗಿ, ಎರಡು ಮಾಸಗಳಲ್ಲಿ ತಲೆ ಮುಂತಾದುವು ಏರ್ಪಡಲು, ಮೂರನೆಯ ಮಾಸದಲ್ಲಿ ಅವಯವಗಳು ಏರ್ಪಟ್ಟು, ನಾಲ್ಕನೆಯ ಮಾಸದಲ್ಲಿ ನವದ್ವಾರಗಳು ಉಂಟಾಗಿ, ಐದನೆಯ ಮಾಸದಲ್ಲಿ ಪಂಚ ಭೂತಗಳು ಏಕೀಭೂತವಾಗಿ ಪ್ರಾಣಗಳು ಬರಲು ಆ ಸಮಯದಲ್ಲಿ ನನಗೆ ನಿಮ್ಮ ತಾರಕಪಾದಗಳ ಸ್ಮರಣೆ ಹೇಗಿರಬಲ್ಲದು? ಐದನೆಯ ಮಾಸದಲ್ಲೇ ಚರ್ಮ, ಕೂದಲು, ಉಗುರುಗಳು ಏರ್ಪಟ್ಟವು. ಆರನೆಯ ಮಾಸದಲ್ಲಿ ಶ್ವಾಸ ಕ್ರಿಯೆ ನಡೆಯಿತು. ಏಳನೆಯ ಮಾಸದಲ್ಲಿ ಇಂದ್ರಿಯಗಳು, ಎಂಟನೆಯ ಮಾಸದಲ್ಲಿ ಚಿತ್ತ ಏರ್ಪಡುವ ಕಾಲದಲ್ಲಿ ನಿಮ್ಮ ಸ್ಮರಣೆ ಹೇಗಿರಬಲ್ಲುದು? ಒಂಬತ್ತು ಮಾಸಗಳು ಮರಣ ಸಮಾನವಾದ ತಾಯಿಯ ಗರ್ಭದಲ್ಲಿ ಅತಿ ಕಷ್ಟದಿಂದ ನಾನು ಜೀವಿಸಿದ್ದೆ. ಆ ಕಷ್ಟ ಕಾಲದಲ್ಲಿ ನನಗೆ ನಿಮ್ಮ ಸ್ಮರಣೆ ಹೇಗಿರಬಲ್ಲುದು? ತಾಯಿ ಖಾರ, ಬಿಸಿ ಪದಾರ್ಥಗಳನ್ನು ತಿಂದಾಗ ನನಗೆ ಸಹಿಸಲಾರದ ವೇದನೆ, ದುಃಖಗಳಾಗುತ್ತಿದ್ದ ಕಾಲದಲ್ಲಿ ನನಗೆ ನಿಮ್ಮ ಸ್ಮರಣೆ ಹೇಗಾಗಬಲ್ಲುದು? ಪಂಜರದಲ್ಲಿ ಪಕ್ಷಿಯಂತೆ ಗರ್ಭವಾಸದಲ್ಲಿ ನಿಮ್ಮ ಪಾದಗಳನ್ನು ನೋಡಲಿಲ್ಲ. ಆಗ ಹೇಗೆ ನಿಮ್ಮ ಸ್ಮರಣೆ ಇರುತ್ತದೆ? ಯೋನಿ ದ್ವಾರಾ ಹೊರಗೆ ಬಿದ್ದ ಕಷ್ಟ ಕಾಲದಲ್ಲೂ ನಿಮ್ಮ ಸ್ಮರಣೆ ಹೇಗಿರಬಲ್ಲುದು? ನೂರು ವರ್ಷಗಳ ಆಯುರ್ದಾಯವು ಲಿಖಿತವಾಗಿದ್ದರೂ ಅದರಲ್ಲಿ ಅರ್ಧದಷ್ಟು ರಾತ್ರಿಯಾಗಿ ವ್ಯರ್ಥವಾಯಿತು. ಉಳಿದ ಆಯುಸ್ಸಿನಲ್ಲಿ ಮೂರುಭಾಗ ಬಾಲ್ಯ ಯೌವನ ವಾರ್ಧಕ್ಯಗಳೆಂದು ಹೋಯಿತು. ಆ ಕಾಲವೂ ವ್ಯರ್ಥವಾಯಿತು. ಶೈಶವದಲ್ಲಿ ಕಷ್ಟಗಳನ್ನನುಭವಿಸಿದೆ. ಶ್ರೀಗುರು, ಆ ಸಮಯದಲ್ಲಿ ನಿತ್ಯವೂ ಮಂಚದಮೇಲೆ ಬಿದ್ದಿದ್ದುದರಿಂದ ಮಹಾ ಕಷ್ಟವಾಯಿತು. ಬಾಲ್ಯ ಕಷ್ಟಗಳನ್ನು ಈಗ ನೆನಸಿಕೊಂಡರೆ ಅತಿ ದುಃಖವಾಗುತ್ತದೆ. ಮಲಮೂತ್ರಗಳಿದ್ದ ಜಾಗದಲ್ಲೇ ನಿರಂತರವಾಗಿ ನಾನಿರಬೇಕಾಗುತ್ತಿತ್ತು. ಅಜ್ಞಾನದಿಂದ ನನ್ನ ಮಲವನ್ನು ನಾನೇ ತಿನ್ನುತ್ತಿದ್ದೆ. ಹಸಿವೆಯಿಂದ ಅಳುತ್ತಿದ್ದಾಗ ನನ್ನ ತಾಯಿ ನನ್ನ ಮುಖದಲ್ಲಿ ಬೆರಳಿಟ್ಟು ತಿನ್ನಿಸುತ್ತಾ, ಬಲಾತ್ಕಾರವಾಗಿ ಬೇವಿನ ಬೀಜಗಳಂತಹ ಔಷಧಗಳನ್ನು ನುಂಗಿಸುತ್ತಿದ್ದಳು. ನನ್ನ ಹಸಿವನ್ನು ಅರಿಯಲಾರದೆ ನನ್ನ ತಾಯಿ ನನ್ನನ್ನು ತೊಟ್ಟಿಲಲ್ಲಿ ಹಾಕಿ ನಿದ್ರೆ ಮಾಡು ಎನ್ನುತ್ತಾ ನನ್ನ ಬಾಧೆಯನ್ನು ಗುರುತಿಸುತ್ತಿರಲಿಲ್ಲ. ಅಯ್ಯೋ, ಹಸಿವಿಗೆ ಸ್ವಲ್ಪ ಗಂಜಿ ಕುಡಿಸಿ, ದೃಷ್ಟಿ ತಗುಲಿದೆಯೇನೋ ಎಂದು ಮಂತ್ರದಿಂದ ರಕ್ಷೆ ಕಟ್ಟಲು ಪ್ರಯತ್ನಿಸುತ್ತಿದ್ದಳೇ ಹೊರತು ನನ್ನ ಅವಶ್ಯಕತೆಗಳೇನು ಎಂದು ಗುರುತಿಸಲಿಲ್ಲ. ಮಂಚದ ಮೇಲೆ ಚೇಳು ಕಡಿದು ಬಾಧೆಪಡುತ್ತಿದ್ದರೂ ಅಳುವುದಕ್ಕೆ ಕಾರಣವೇನು ತಿಳಿದುಕೊಳ್ಳದೆ ತೊಟ್ಟಿಲಲ್ಲಿಟ್ಟು ತೂಗುತ್ತಿದ್ದಳು. ಹಾಲು ಕುಡಿಯದೆ ಇನ್ನೂ ಅಳುತ್ತಿದ್ದರೂ ಮತ್ತೆ ಚೇಳಿದ್ದ ಕಡೆಯೇ ನನ್ನನ್ನು ಮಲಗಿಸುತ್ತಿದ್ದಳು. ಆ ಕಷ್ಟ ಪ್ರಾಣಾಂತಿಕವಾಗಿರುತ್ತಿತ್ತು. ತಾಯಿ ಖಾರ ಮುಂತಾದುವನ್ನು ತಿಂದು ಸ್ತನ್ಯ ಕುಡಿಸಿದಾಗ ಆಮ್ಲಾದಿಗಳಿಂದ ಕೂಡಿದ ಆ ಹಾಲಿನಿಂದ ಶ್ವಾಸಕೋಶ ರೋಗಗಳು ಪೀಡಿಸುತ್ತಿದ್ದವು. ಔಷಧಗಳಿಂದ ನೇತ್ರ ರೋಗ ಉಂಟಾಗುತ್ತಿತ್ತು. ಕಾಡಿಗೆ ಇಟ್ಟರೆ ಅದರಿಂದ ಕಣ್ಣುರೋಗ ವಾಗುತ್ತಿತ್ತು. ಹೀಗೆ ಬಾಲ್ಯದಲ್ಲಿ ಅತಿಕಷ್ಟಗಳು ಅಜ್ಞಾನದಿಂದ ಉಂಟಾಗಲು ಪರಾಧೀನತೆಯಿಂದ ಮುಂದಿನ ಜೀವನದಲ್ಲೂ, ಆಟಪಾಟಗಳಿಂದಲೂ ಆಯುರ್ದಾಯವು ಕ್ಷೀಣಿಸಿತು.

ಆ ನಂತರ ಯೌವನವು ಬಂದಾಗ ನಾನು ಅಬಲೆಯರು ಎನ್ನುವ ಅಗ್ನಿಯಲ್ಲಿ ಬಿದ್ದಿದ್ದೆ. ಕೊನೆಗೆ ತಾಯಿತಂದೆ ಗುರುವನ್ನು ಕೂಡಾ ಗುರುತಿಸದೆ ದೇವಮಾಯೆಯಂತಹ ಸ್ತ್ರೀಯನ್ನು, ಭೋಗಲಾಲಸೆಯಿಂದ ಪಾಪಿಯಾಗಿ, ಕಾರ್ಯಾಕಾರ್ಯಾಗಳನ್ನು ತಿಳಿಯಲಾರದೆ, ಪರಸ್ತ್ರೀಯರನ್ನು ಕೋರುತ್ತಿದ್ದೆ. ಬ್ರಾಹ್ಮಣರನ್ನು ನಿಂದಿಸಿದೆ. ವೃದ್ಧರ ದೂಷಣೆ ಮಾಡಿದೆ. ಅವರ ಸೇವೆ ಮಾಡಲಿಲ್ಲ. ಯೌವನದಲ್ಲಿ ಮದೋನ್ಮತ್ತನಾಗಿ ನಿಮ್ಮ ಪಾದಗಳನ್ನು ಸ್ಮರಿಸಲಿಲ್ಲ. ಇಂದ್ರಿಯ ಪರವಶನಾಗಿ ಅನೇಕ ಜಾತಿಯ ಸ್ತ್ರೀಯರನ್ನು ಅನುಭವಿಸಿದೆ. ಪರರ ಸೊತ್ತನ್ನು ಬಲಾತ್ಕಾರವಾಗಿ ಅಪಹರಿಸಿದೆ. ಸಾಧುಗಳನ್ನು, ಹಿರಿಯರನ್ನು ನಿಂದಿಸಿದೆ. ಯಾರನ್ನೂ ಲೆಕ್ಕಿಸಲಿಲ್ಲ. ಹೀಗೆ ಪರಬ್ರಹ್ಮಾನುಸಂಧಾನವನ್ನು ಬಿಟ್ಟು ಸ್ಮೃತಿ ಕಳೆದುಕೊಂಡು ಮನ್ಮಥನೆನ್ನುವ ಅಗ್ನಿಹೋತ್ರದಲ್ಲಿ ಬಿದ್ದಿದ್ದೆ. ನಿಮ್ಮ ಚರಣಗಳನ್ನು ಸ್ಮರಿಸಲಿಲ್ಲ. ಅಷ್ಟರಲ್ಲಿ ವಾರ್ಧಕ್ಯ ಬಂದು ಮೇಲೆಬಿತ್ತು. ಮುದಿತನವೇ ಪರಾಧೀನತೆಯನ್ನು ಉಂಟುಮಾಡುತ್ತದೆ. ಆದರೂ ಹೆಂಡತಿ ಮಕ್ಕಳು ಬಿಟ್ಟುಹೋದರು. ಕಫದ ಉಲ್ಬಣದಿಂದ ನನಗೆ ಶ್ವಾಸ ನಿಃಶ್ವಾಸಗಳು ಕಷ್ಟವಾಗಿ ನಾನು ರೋಗಿಯಾದೆ. ಇಂದ್ರಿಯಗಳು ಸ್ವಾಧೀನ ತಪ್ಪಿದವು. ಕೂದಲು ಬೆಳ್ಳಗಾಯಿತು. ಹಲ್ಲುಗಳು ಉದುರಿ ಹೋದವು. ದೃಷ್ಟಿ ಮಂದವಾಯಿತು. ಹಠಾತ್ತಾಗಿ ಕಿವುಡು ಬಂತು. ರೋಗಗಳೆಲ್ಲವೂ ಶತ್ರುಗಳಂತೆ ಒಂದೇ ಸಲ ಮುತ್ತಿಕೊಂಡವು. ಸ್ವಾಮಿ, ಗುರುದೇವ ನಿಮ್ಮ ಸೇವೆ ಮಾಡಿಕೊಳ್ಳಲಿಲ್ಲ. ನನ್ನನ್ನು ಉದ್ಧರಿಸು ತಂದೆ. ನಾನು ಮಂದ ಬುದ್ಧಿಯವನಾದರೂ ನಿನ್ನ ಶರಣು ಬೇಡಿ ಬಂದಿದ್ದೇನೆ. ಜಗತ್ತನ್ನು ರಕ್ಷಿಸಲು ಬಂದ ನಾರಾಯಣನೇ ನೀವು ಹೀಗೆ ಅವತರಿಸಿದಿರಿ. ಹೇ ಈಶ್ವರ, ನೀವೇ ವಿಶ್ವವನ್ನೆಲ್ಲಾ ತರಿಸುವಂತಹರು. ಮಾನವ ವೇಷ ಧರಿಸಿದ ದೇವರೇ ನೀವು. ಹೇ ಗುರು, ನೀವು ಏಕರೂಪರಾಗಿ ಅವತರಿಸಿದ ತ್ರಿಮೂರ್ತಿ ಸ್ವರೂಪರಾದ ಆ ಪರಬ್ರಹ್ಮನೇ! ನಿಮ್ಮ ಕುಮಾರ ನಾನು. ಈ ಸಂಸಾರದಿಂದ ರಕ್ಷಿಸು" ಈ ರೀತಿಯಲ್ಲಿ ಸ್ತೋತ್ರ ಮಾಡಿ ತನ್ನ ಸುತ್ತಮುತ್ತಲೂ ನೋಡಿ ಅಲ್ಲಿದ್ದ ಜನರಿಗೆ ನಂದಿಶರ್ಮ, "ಅಯ್ಯಾ, ನಾನು ಬಹಳ ಪಾಪಗಳನ್ನು ಮಾಡಿದ್ದೇನೆ. ಶ್ರೀಗುರುವಿನ ಕೃಪೆಯಿಂದ ನನ್ನ ಸರ್ವಪಾಪಗಳೂ ಲಯವಾದವು. ‘ಚರಣಂ ಪವಿತ್ರ........’ ಎಂದು ಹೇಳುವ ವೇದವು ಸತ್ಯವೇ! ಬ್ರಹ್ಮ ಬರೆದ ಲಿಪಿಯಲ್ಲಿ ದುಷ್ಟ ವರ್ಣಗಳಿದ್ದರೂ ಶ್ರೀಗುರುಪಾದ ಸ್ಪರ್ಶದಿಂದ ಆ ಲಿಪಿಯೆಲ್ಲವೂ ಶುಭಾಕ್ಷರಗಳುಳ್ಳದ್ದೇ ಆಗುವುದು. ಭಜಿಸುವವರಿಗೆ ಶ್ರೀ ನೃಸಿಂಹಸರಸ್ವತಿ ಕಾಮಧೇನುವೇ! ಐಹಿಕ, ಆಮುಷ್ಮಿಕ, ವೈಕುಂಠಗಳನ್ನು ಕೂಡಾ ಈತನು ಕೊಡುತ್ತಾನೆ. ನನ್ನ ಮಾತುಗಳು ಸತ್ಯವು" ಎನ್ನುತ್ತಾ ಸ್ತುತಿಸಲು, ಶ್ರೀಗುರುವು ಸಂತುಷ್ಟನಾಗಿ, "ಭಕ್ತರೇ, ಇವನನ್ನು ಕವೀಶ್ವರನೆಂದು ತಿಳಿಯಿರಿ. ಕವೀಶ್ವರನೆಂಬ ಹೆಸರು ಇವನಿಗೆ ಕೊಟ್ಟಿದ್ದೇನೆ" ಎಂದು ಹೇಳಲು, ನಂದಿಶರ್ಮ ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟನು. ಆಗ ಮಿಕ್ಕಿದ್ದ ಕುಷ್ಠು ರೋಗವೂ ನಾಶವಾಗಿ, ನಂದಿಶರ್ಮನಿಗೆ ಕವೀಶ್ವರನೆಂಬ ಹೆಸರು ಸಾರ್ಥಕವಾಯಿತು. ಅವನು ಶ್ರೀಗುರುವಿನ ಸೇವಕನಾದನು.

ಅಯ್ಯಾ ನಾಮಧಾರಕ, ಅಂತಹ ಕವೀಶ್ವರನೇ ಮತ್ತೊಬ್ಬನು ಬಂದನು. ಭಕ್ತಿಯಿಂದ ಶ್ರಿಗುರುವಿನ ಸತ್ಕಥೆಗಳನ್ನು ಬರೆಯುತ್ತಾ ಆ ಕವೀಶ್ವರರಿಬ್ಬರೂ ಶ್ರೀಗುರುವನ್ನು ಸೇವಿಸುತ್ತಿದ್ದರು." ಎಂದು ಸಿದ್ಧಮುನಿ ಹೇಳಲು, ಅದನ್ನು ಕೇಳಿದ ನಾಮಧಾರಕ, "ಸ್ವಾಮಿ, ಸಿದ್ಧಮುನೀಶ್ವರ, ಎರಡನೆಯ ಕವಿ ಬಂದುದನ್ನು ವಿಸ್ತಾರವಾಗಿ ದಯೆಯಿಟ್ಟು ಹೇಳಿ ಎಂದು ಕೋರುತ್ತೇನೆ. ಶ್ರೀಗುರುಚರಿತ್ರೆ ಬಹಳ ಆಸಕ್ತಿಕರವಾಗಿದೆ" ಎಂದು ಪ್ರಾರ್ಥಿಸಿದನು. ಸಿದ್ಧಯೋಗಿ ಹೇಳಿದ ರೀತಿಯಲ್ಲಿ ಗಂಗಾಧರಾತ್ಮಜನಾದ ಸರಸ್ವತಿ ಶ್ರೀಗುರುಚರಿತ್ರೆಯನ್ನು ಕಾಮದಾಯಕವಾಗಿ ಹೇಳುತ್ತಿದ್ದಾನೆ. 

ಇಲ್ಲಿಗೆ ನಲವತ್ತೈದನೆಯ ಅಧ್ಯಾಯ ಮುಗಿಯಿತು.

||ಶ್ರೀಗುರುಚರಿತ್ರೆ - ನಲವತ್ತನಾಲ್ಕನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ಸಿದ್ಧ ಮುನಿಯು ಮುಂದಿನ ಕಥೆಯನ್ನು ಹೇಳಲುಪಕ್ರಮಿಸಿದರು. ಶ್ರೀಗುರುವಿನ ಸೇವಕರಲ್ಲಿ ನೇಕಾರನೊಬ್ಬನಿದ್ದ. ಅವನ ಹೆಸರು ತಂತುಕ. ಅವನು ತನ್ನ ಗೃಹಕೃತ್ಯಗಳನ್ನೆಲ್ಲ ಮುಗಿಸಿ ಶ್ರೀಗುರುವಿನ ನಿವಾಸದ ಬಾಗಿಲನ್ನು ತೊಳೆದು, ಗೋಮಯ ನೀರನ್ನು ಚೆಲ್ಲಿ ದೂರದಿಂದಲೇ ಶ್ರೀಗುರುವಿಗೆ ನಮಸ್ಕಾರ ಮಾಡುತ್ತಿದ್ದನು. ಒಂದು ಶಿವರಾತ್ರಿಯ ದಿನ ಅವನ ಬಂಧುಗಳು ಶ್ರೀಶೈಲಯಾತ್ರೆಯ ಪ್ರಯಾಣಕ್ಕೆ ಸಿದ್ಧರಾಗುತ್ತಿದ್ದರು. ಅವರು ತಂತುಕನನ್ನು ಕೂಡಾ ಬರುವಂತೆ ಆಹ್ವಾನಿಸಿದರು. ಅವನು ನಗುತ್ತಾ, "ಶ್ರೀಗುರುವಿನ ನಿವಾಸವೇ ಶ್ರೀಶೈಲವು. ಶ್ರೀಗುರುವೇ ಮಲ್ಲಿಕಾರ್ಜುನನು. ಇದೇ ನನ್ನ ನಂಬಿಕೆ. ಅದರಿಂದಲೇ ನಾನು ಇಲ್ಲಿಂದ ಎಲ್ಲಿಗೂ ಬರುವುದಿಲ್ಲ" ಎಂದು ಹೇಳಿದನು. ಅವರೆಲ್ಲರೂ ಸಂತೋಷದಿಂದ ಶ್ರೀಶೈಲಕ್ಕೆ ಹೊರಟರು. ತಂತುಕನು ಮಾತ್ರ ಪ್ರತಿನಿತ್ಯ ಮಾಡುತ್ತಿದ್ದಂತೆ ಸಂಗಮ ಸ್ಥಾನವನ್ನು ಸೇರಿ ಶ್ರೀಗುರುವಿಗೆ ನಮಿಸಿದನು. ಶ್ರೀಗುರುವು ತಂತುಕನಿಗೆ, "ನಿನ್ನ ಬಂಧುಗಳೆಲ್ಲರೂ ಶ್ರೀಶೈಲಕ್ಕೆ ಹೋರಟಿದ್ದಾರೆ. ನೀನೇಕೆ ಹೋಗಲಿಲ್ಲ?" ಎಂದು ಕೇಳಿದರು. ಆ ತಂತುಕ, "ಅಯ್ಯಾ, ನನಗೆ ಸಮಸ್ತವೂ ಇಲ್ಲೇ ಇದೆ. ತಮ್ಮ ಚರಣಗಳೇ ನಾನಾ ಕ್ಷೇತ್ರಗಳು. ನಾನಾ ತೀರ್ಥಗಳು" ಎಂದು ಹೇಳಿ, ನಿತ್ಯದಂತೆ ನಮಸ್ಕರಿಸಿಕೊಂಡು ತನ್ನ ಮನೆಗೆ ಹಿಂತಿರುಗಿದ. ಮಾಘ ಬಹುಳ ಚತುರ್ದಶಿ ಶಿವರಾತ್ರಿ. ಅಂದು ಮಧ್ಯಾಹ್ನ ತಂತುಕನು ಸಂಗಮದಲ್ಲಿ ಸ್ನಾನ ಮಾಡಿಕೊಂಡು ಶ್ರೀಗುರುವಿನ ಬಳಿಗೆ ಹೋಗಿ ನಮಸ್ಕರಿಸಿ ಅವರ ಎದುರಿಗೆ ನಿಂತನು. ಶ್ರೀಗುರುವು, "ಅಯ್ಯಾ ತಂತುಕ, ನಿನ್ನವರೆಲ್ಲರೂ ಶ್ರೀಶೈಲಕ್ಕೆ ಹೋದರು. ನೀನು ಎಂದಾದರೂ ಶ್ರೀಶೈಲವನ್ನು ನೋಡಿದ್ದೀಯೋ ಇಲ್ಲವೋ ಹೇಳು" ಎಂದು ಕೇಳಲು, ಅವನು, "ಸ್ವಾಮಿ, ಸರ್ವಯಾತ್ರೆಗಳೂ ನನಗೆ ನಿಮ್ಮ ಪಾದಗಳೇ!" ಎಂದನು. ಅವನ ಮಾತುಗಳನ್ನು ಕೇಳಿದ ಶ್ರೀಗುರುವು ಅದರ ಹಿಂದಿನ ಭಾವವನ್ನು ತಿಳಿದು, ಅವನನ್ನು ಹತ್ತಿರಕ್ಕೆ ಕರೆದು, "ನಿನಗೆ ಶ್ರೀಶೈಲವನ್ನು ತೋರಿಸುತ್ತೇನೆ" ಎಂದು ಹೇಳಿ, ಅವನು ಹೇಗಿದ್ದನೋ ಹಾಗೆಯೇ, ಕ್ಷಣದಲ್ಲಿ, ಶ್ರೀಶೈಲದಲ್ಲಿ ಪಾತಾಳ ಎನ್ನುವ ಹೆಸರಿನ ನದಿಯ ತಟದಲ್ಲಿ ನಿಲ್ಲಿಸಿ, "ಕಣ್ಣು ಬಿಟ್ಟು ನೋಡು. ಇದೇ ಶ್ರೀಶೈಲ ಕ್ಷೇತ್ರ" ಎಂದರು. ಅವನು ಶ್ರೀಶೈಲವನ್ನು ನೋಡಿ "ನಾನೇನಾದರೂ ಕನಸು ಕಾಣುತ್ತಿದ್ದೇನೆಯೇ?" ಎಂದನು.

ಶ್ರೀಗುರುವು ಆ ಭಕ್ತನಿಗೆ, "ಕ್ಷೌರಾದಿಗಳನ್ನು ಮುಗಿಸಿ, ತಕ್ಷಣವೇ ಮಲ್ಲಿಕಾರ್ಜುನನನ್ನು ದರ್ಶಿಸು" ಎಂದು ಆಜ್ಞಾಪಿಸಿದರು. ತಂತುಕನು ಹಾಗೆ ಮಾಡಲು ಹೊರಟನು. ಅಲ್ಲಿ ತನ್ನ ಊರಿನವರನ್ನು ಕಂಡನು. ಅವರು ತಂತುಕನನ್ನು ನೋಡಿ, "ನೀನೂ ನಮ್ಮ ಹಿಂದೆಯೇ ಬಂದೆಯಾ? ಬಂದೂ ಇನ್ನೂ ದರ್ಶನ ಮಾಡಿಕೊಳ್ಳಲಿಲ್ಲವೇ?" ಎಂದು ಕೇಳಿದರು. ಅವನು, "ನಾನು ಇಲ್ಲಿಗೆ ಬಂದು ಇನ್ನೂ ಒಂದು ಘಳಿಗೆಯಾಗಿಲ್ಲ. ಶ್ರೀಗುರುವಿನ ಜೊತೆಯಲ್ಲಿ ಬಂದೆ" ಎಂದು ಹೇಳಿದನು. ಅವರಲ್ಲಿ ಕೆಲವರು ಅದು ಸುಳ್ಳು ಎಂದರು. ಕೆಲವರು, "ಇವನು ನಮ್ಮ ಹಿಂದೆಯೇ ಮರೆಯಾಗಿದ್ದುಕೊಂಡು ನಮ್ಮನ್ನನುಸರಿಸಿ ಬಂದಿದ್ದಾನೆ. ಇವನು ಅಸತ್ಯವನ್ನಾಡುತ್ತಿದ್ದಾನೆ" ಎಂದರು. ತಂತುಕನು ಶಿವಲಿಂಗ ಪೂಜೆಗೆಂದು ಹೋದನು. ದೇವಾಲಯದಲ್ಲಿ ಶ್ರೀಗುರುವನ್ನು ಬಿಟ್ಟು ಬೇರೆ ಯಾವ ದೇವರನ್ನೂ ಅವನು ಕಾಣಲಿಲ್ಲ. ಸದ್ಗುರುವೇ ಅವರ ಪೂಜೆಗಳನ್ನು ಸ್ವೀಕರಿಸುತ್ತಿದ್ದುದನ್ನು ನೋಡಿ, ಅವನು ಮನಸಾರ ಶ್ರೀಗುರುವನ್ನೇ ಶಂಕರನೆಂದು ತಿಳಿದು, ಶ್ರೀಗುರುವನ್ನು ಅರ್ಚಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀಗುರುವಿನ ಸನ್ನಿಧಿಯನ್ನು ಸೇರಿಕೊಂಡನು. ಶ್ರೀಗುರುವು, "ನನ್ನೊಡನೆ ಬರುತ್ತೀಯೋ ಇಲ್ಲ ಇನ್ನೂ ಇಲ್ಲೇ ಇರುತ್ತೀಯೋ?" ಎಂದು ಕೇಳಲು, ತಂತುಕನು, "ಸ್ವಾಮಿ, ದೇವಾಲಯದಲ್ಲಿ ಶಿವಲಿಂಗವು ನನಗೆ ಕಾಣಲಿಲ್ಲ. ನಿಮ್ಮನ್ನೇ ಪೂಜಿಸುತ್ತಿರುವುದು ನನಗೆ ಕಂಡು ಬಂತು. ಹತ್ತಿರವೇ ಇರುವ ನಿಮ್ಮನ್ನು ಬಿಟ್ಟು ಕಷ್ಟಪಟ್ಟು ಇಷ್ಟು ದೂರ ಬರುವುದೇತಕ್ಕೆ? ಜನರು ಮೂಢರಾಗಿ ನಿಮ್ಮ ಮಾಹಾತ್ಮ್ಯೆಯನ್ನು ತಿಳಿದುಕೊಳ್ಳಲಾರದವರಾಗಿದ್ದಾರೆ. ನಿಮ್ಮನ್ನು ಬಿಟ್ಟು ಬೆಟ್ಟಕ್ಕೆ ಹೋಗುವುದೇಕೆ? ಇದಕ್ಕೆ ಕಾರಣವನ್ನು ತಿಳಿಸಬೇಕೆಂದು ಕೋರುತ್ತೇನೆ" ಎಂದು ಪ್ರಾರ್ಥಿಸಿದನು. ಅದಕ್ಕೆ ಶ್ರೀಗುರುವು ಹೀಗೆ ಹೇಳಿದರು.

"ಭಕ್ತ, ಈಶ್ವರನು ಒಬ್ಬನೇ. ಸ್ಥಾನ ಮಾಹಾತ್ಮ್ಯೆಯು ಭೂಮಿಯ ಮೇಲೆ ಕಾಣಬರುವುದು. ತಂತುಕ, ನಿನಗೆ ಶ್ರೀಶೈಲ ಮಾಹಾತ್ಮ್ಯೆಯನ್ನು ವಿಸ್ತರಿಸಿ ಹೇಳುತ್ತೇನೆ. ಕೇಳು. ಮಾಘ ಬಹುಳ ಚತುರ್ದಶಿಯ ದಿನ ಶ್ರೀಶೈಲದಲ್ಲಿ ಮಹೋತ್ಸವ ನಡೆಯುತ್ತದೆ. ಅದರ ಮಾಹಾತ್ಮ್ಯೆಯು ಅಪಾರವು. ಹಿಂದೆ ಕಿರಾತ ದೇಶವನ್ನು ವಿಮರ್ಷಣನೆಂಬ ರಾಜನು ಪರಿಪಾಲಿಸುತ್ತಿದ್ದನು. ಅವನು ಬುದ್ಧಿವಂತನು. ಆದರೆ ಪರಸ್ತ್ರೀಯನ್ನು ಕಂಡರೆ ಅವನ ಮನಸ್ಸು ಚಂಚಲವಾಗುತ್ತಿತ್ತು. ಇದು ತಿನ್ನಬಹುದು, ಇದು ತಿನ್ನಬಾರದು ಎನ್ನುವ ವಿವೇಕವು ಇರಲಿಲ್ಲ. ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಿದ್ದನು. ನಿತ್ಯವೂ ಶಿವನನ್ನು ಅರ್ಚಿಸುತ್ತಿದ್ದನು. ಶಿವರಾತ್ರಿಯಂದು ವಿಶೇಷವಾದ ಪೂಜೆ ಮಾಡುತ್ತಿದ್ದನು. ಅವನು ಹೊರಗೆ ದುರಾಚಾರಿಯಾಗಿ ಕಂಡರೂ ಒಳಗೆ ಬಹಳ ಭಕ್ತಿಯಿದ್ದವನು. ಶಿವಭಕ್ತನು. ಅವನ ಪಟ್ಟಮಹಿಷಿ ಸೌಭಾಗ್ಯವತಿ. ಸಾಧ್ವಿ. ಕುಮುದ್ವತಿ ಎಂದು ಹೆಸರು. ಅವಳು ‘ನನ್ನ ಪ್ರಾಣನಾಥನು ಪರಭಾರ್ಯೆಯರಲ್ಲಿ ಆಸಕ್ತನಾದರೂ ಶಿವಭಕ್ತನು ಹೇಗಾದನು?’ ಎಂದು ಯೋಚಿಸುತ್ತಾ, "ನಿನಗೆ ಶಿವನಲ್ಲಿ ಸದ್ಭಕ್ತಿಯಿದೆ. ಅದು ಹೇಗೆ ಲಭಿಸಿತು? ಹೇ ಪ್ರಾಣೇಶ್ವರ ಕೋಪ ಮಾಡಿಕೊಳ್ಳದೆ, ಸಂಶಯಪಡದೆ ಹೇಳು" ಎಂದು ಅವನನ್ನು ಪ್ರಾರ್ಥಿಸಿದಳು. ಅದಕ್ಕೆ ಅವನು, "ಹೇ ಪುಣ್ಯವತಿ, ನನ್ನ ಪೂರ್ವಜನ್ಮ ವೃತ್ತಾಂತವನ್ನು ಕೇಳು. ಹಿಂದೆ ನಾನು ಒಬ್ಬ ಗೊಲ್ಲರವನ ಮನೆಯಲ್ಲಿ ಕರ್ಮಯೋಗದಿಂದ ನಾಯಿಯಾಗಿದ್ದೆ. ಶಿವರಾತ್ರಿ ಬಂತು. ಜನರು ಶಿವಾಲಯಕ್ಕೆ ಶಿವಾರ್ಚನೆಗೆಂದು ಬಂದರು. ನಾನು ಹಸಿವಿನಿಂದ ಅಲ್ಲಿಗೆ ಹೋದೆ. ಅವರೆಲ್ಲರೂ ಕೈಯಲ್ಲಿ ಆರತಿ ಹಿಡಿದು ಭಕ್ತಿಯಿಂದ ಪ್ರದಕ್ಷಿಣೆ ಮಾಡುತ್ತಿದ್ದರು. ನಾನು ನೋಡಬೇಕೆಂದು ಬಾಗಿಲ ಬಳಿಗೆ ಹೋದೆ. "ನಾಯಿ! ನಾಯಿ! ಹೊಡೆದಟ್ಟು" ಎಂದು ಎಲ್ಲರೂ ಕಿರಿಚಿದರು. ಅದು ಕೇಳಿ ಹೊಡೆತಗಳಿಗೆ ಹೆದರಿ ನಾನು ಓಡಿದೆ. ಜನರು ಬಾಗಿಲನ್ನು ಆವರಿಸಿದರು. ಹೊರಗೆ ಹೋಗುವ ಮಾರ್ಗ ಇಲ್ಲವಾಯಿತು. ದೇವಾಲಯದ ಒಳಗೇ ಓಡುತ್ತಿದ್ದೆ. ಹೊರಕ್ಕೆ ಹೋಗುವ ದಾರಿಯೇ ಕಾಣಲಿಲ್ಲ. ಪ್ರದಕ್ಷಿಣೆಯಾಗಿ ಓಡಿ ಮತ್ತೆ ಬಾಗಿಲ ಬಳಿಗೆ ಬಂದೆ. ಮುಚ್ಚಿಟ್ಟು ಕೊಳ್ಳಲೂ ನನಗೆ ಎಲ್ಲಿಯೂ ಜಾಗ ಸಿಗಲಿಲ್ಲ. ನನ್ನ ಹಿಂದೆಯೇ ಜನರೆಲ್ಲರೂ ಅರಚುತ್ತಾ ಓಡಿ ಬರುತ್ತಿದ್ದರು. ದೇವರ ಮುಂದೆ ಎಂಜಲು ತಿನ್ನಬೇಕೆಂದು ಬಂದ ನಾನು ಪ್ರಾಣಗಳನ್ನು ರಕ್ಷಿಸು ಶಿವನೇ ಎನ್ನುತ್ತಾ ಎಲ್ಲ ಕಡೆಯೂ ನೋಡುತ್ತಾ ಮೂರುಸಲ ಪ್ರದಕ್ಷಿಣೆ ಹಾಕಿದೆ. ಹೇ ಭಾಮ, ನಾನು ಭಯಪಟ್ಟು ಗರ್ಭಗುಡಿಯೊಳಕ್ಕೆ ಹೋಗಿ ಅಲ್ಲಿ ನಡೆಯುತ್ತಿದ್ದ ಶಿವಾರ್ಚನೆಯನ್ನು ನೋಡಿ ಸಂತೋಷಪಟ್ಟೆ. ಜನರು ನನ್ನನ್ನು ಹೊಡೆಯುತ್ತ ಈಚೆಗೆ ತಂದು ಹೊರಗೆ ಹಾಕಿದರು. ಪ್ರದಕ್ಷಿಣೆಯಿಂದ ಪುಣ್ಯವು ಲಭಿಸಿತು. ನಾನು ಶಿವಪೂಜೆಯನ್ನು ನೋಡಿದೆ. ಆ ಪುಣ್ಯದಿಂದ, ಹೇ ಪ್ರಿಯೆ, ಹೀಗೆ ರಾಜನಾಗಿ ಹುಟ್ಟಿದೆ. ಆಗ ನನಗೆ ತಿನ್ನಲು ಉಚ್ಛಿಷ್ಟವಾದರೂ ಲಭಿಸಲಿಲ್ಲ. ಅದರಿಂದಲೇ ನಾಯಿಯ ಜನ್ಮದಲ್ಲಿ ನನಗೆ ಪೂರ್ವ ಜನ್ಮ ಪುಣ್ಯ ಲಭಿಸಿದೆ. ಇನ್ನೊಂದು ಪುಣ್ಯವೂ ಕೂಡಾ ಲಭಿಸಿತು. ಉಜ್ವಲವಾದ ದೀಪಮಾಲಿಕೆಯನ್ನು ನೋಡಿದ ನಂತರ ಶಿವಾಲಯ ದ್ವಾರದಲ್ಲಿ ನನ್ನ ಪ್ರಾಣಹೋಯಿತಲ್ಲವೆ? ಶಿವರಾತ್ರಿ ಮಹಿಮೆಯಿಂದಲೂ, ದೀಪಮಾಲೆ ನೋಡಿದುದರಿಂದಲೂ ಬಂದ ಪುಣ್ಯದಿಂದ ನಾನು ರಾಜನಾದೆ. ನಾಯಿಗೆ ಸಹಜವಾಗಿ ಭಕ್ಶ್ಯಾಭಕ್ಷ್ಯ ವಿವೇಚನೆ ಇರುವುದಿಲ್ಲ. ಅ ಪೂರ್ವ ಜನ್ಮ ಸ್ವಭಾವದಿಂದಲೇ ನನಗೆ ಸ್ತ್ರೀಲಂಪಟತ್ವವೂ ಬಂದಿದೆ" ಎಂದು ಹೇಳಿದ. ತನ್ನ ಗಂಡನ ಮಾತನ್ನು ಕೇಳಿ ಆ ರಾಣಿ, "ಪ್ರಾಣೇಶ್ವರ, ನನ್ನ ಪೂರ್ವಜನ್ಮವನ್ನು ತಿಳಿಸು" ಎಂದು ಅವನನ್ನು ಪ್ರಾರ್ಥಿಸಿದಳು. ರಾಜ, "ಹೇ ದಯಿತೆ, ಕೇಳು. ಹಿಂದೆ ನೀನೊಂದು ಹೆಣ್ಣು ಪಾರಿವಾಳವಾಗಿದ್ದೆ. ಒಂದು ದಿನ ಹೊಟ್ಟೆ ತುಂಬಿಕೊಳ್ಳುವುದಕ್ಕೆ ಕಾಡಿನಲ್ಲಿ ಸಿಕ್ಕಿದ ಮಾಂಸದ ತುಂಡೊಂದನ್ನು ಕೊಕ್ಕಿನಲ್ಲಿ ಹಿಡಿದು ಆಕಾಶ ಮಾರ್ಗದಲ್ಲಿ ಹೋಗುತ್ತಿರಲು ಡೇಗೆಯೊಂದು ನಿನ್ನನ್ನು ಕೊಲ್ಲಲು ನಿನ್ನ ಹಿಂದೆ ಬಿತ್ತು. ಪ್ರಾಣ ರಕ್ಷಣೆಯ ಆತುರದಲ್ಲಿ ನೀನು ವೇಗವಾಗಿ ಅರಣ್ಯವೊಂದನ್ನು ಪ್ರವೇಶಿಸಿದೆ. ಡೇಗೆ ನಿನ್ನನ್ನು ಹಿಂಬಾಲಿಸುತ್ತಿದೆ ಎಂಬ ಭಯದಿಂದ ನೀನು ಶ್ರೀಶೈಲ ಶಿಖರಕ್ಕೆ ಬಂದಿದ್ದೆ. ಅ ಶಿಖರವು ರಮ್ಯವಾದದ್ದು. ಅಲ್ಲಿಯೇ ಮಲ್ಲಿಕಾರ್ಜುನಸ್ವಾಮಿ ಇದ್ದಾನೆ. ನಿನ್ನ ಹಿಂದೆಯೇ ಡೇಗೆಯೂ ಬಂತು. ನೀನು ಭಯದಿಂದ ಪ್ರದಕ್ಷಿಣೆಯಾಗಿ ತಿರುಗುತ್ತಾ ಬಳಲಿ ಹೋದೆ. ಬಳಲಿದ ನಿನ್ನನ್ನು ಡೇಗೆ ಸಾಯಿಸಿತು. ಪ್ರದಕ್ಷಿಣೆ ಮಾಡಿದ ಪುಣ್ಯದಿಂದ ನೀನು ರಾಜವನಿತೆಯಾದೆ" ಎಂದು ಹೇಳಲು, ರಾಣಿ ಮತ್ತೆ, "ನೀನು ಶೈವನಾದೆ. ನಿನ್ನ ಆಜ್ಞೆಯಿಂದ ಶಿವಾರ್ಚನೆ ಮಾಡುತ್ತೇನೆ. ಇನು ಮುಂದೆ ನಮ್ಮ ಗತಿ ಹೇಗಿದೆ ಎಂಬುದನ್ನು ಹೇಳು" ಎಂದಳು. ಅದಕ್ಕೆ ರಾಜ, "ಪ್ರಿಯೆ, ಕೇಳು. ಇನ್ನು ಮುಂದಿನ ಏಳು ಜನ್ಮಗಳಲ್ಲಿ ನಾವು ರಾಜವಂಶದಲ್ಲಿ ಹುಟ್ಟುತ್ತೇವೆ. ಹೇ ಪ್ರಾಣಪ್ರಿಯೆ, ಏಳನೆಯ ಜನ್ಮದಲ್ಲಿ ನಾನು ಪಾಂಡ್ಯ ದೇಶದ ರಾಜನಾಗುತ್ತೇನೆ. ಮನ್ಮಥನಂತೆ ಸುಂದರನಾಗಿ, ಪ್ರಕಾಶದಲ್ಲಿ ಸೂರ್ಯ ಸಮಾನನಾಗಿ ಪದ್ಮವರ್ಣನೆಂಬ ಹೆಸರಿನಿಂದ ಪ್ರಸಿದ್ಧಿ ಹೊಂದುತ್ತೇನೆ. ನೀನು ಸುಮತಿ ಎನ್ನುವ ಹೆಸರಿನಿಂದ ವೈದರ್ಭ ವಂಶದಲ್ಲಿ ಹುಟ್ಟಿ ವಿಖ್ಯಾತಳಾಗಿರುತ್ತೀಯೆ. ನಾನು ಸ್ವಯಂವರದಲ್ಲಿ, ಸ್ವಧರ್ಮವನ್ನನುಸರಿಸಿ, ದಮಯಂತಿ ನಳನನ್ನು ವರಿಸಿದಂತೆ ನಿನ್ನಿಂದ ವರಿಸಲ್ಪಡುತ್ತೇನೆ. ದಾನ ಧರ್ಮ ಪರಾಯಣನಾಗಿ ವೃದ್ಧಾಪ್ಯದವರೆಗೂ ರಾಜ್ಯವಾಳಿ ಪುತ್ರನಿಗೆ ರಾಜ್ಯವನ್ನು ಕೊಟ್ಟು, ನಾಲ್ಕನೆಯ ಆಶ್ರಮವಾದ ಸನ್ಯಾಸಾಶ್ರಮವನ್ನು ಆಶ್ರಯಿಸಿ ಅಗಸ್ತ್ಯನೆಂಬ ಸದ್ಗುರುವನ್ನು ಸೇರಿ ಬ್ರಹ್ಮಜ್ಞಾನವನ್ನು ಪಡೆದು ನಿನ್ನೊಡನೆ ಕೂಡಿ ಮುಕ್ತಿ ಹೊಂದಿ ಸ್ವಯಂಪ್ರಕಾಶನಾಗಿರುತ್ತೇನೆ. ಇದು ಈಶ್ವರನ ಅರ್ಚನೆ ತೋರಿಸಿದ ಪುಣ್ಯವು" ಎಂದು ರಾಣಿಗೆ ಹೇಳಿ ಶ್ರೀಶೈಲ ಯಾತ್ರೆಗೆ ಹೊರಟನು. ಈ ವೃತ್ತಾಂತವನ್ನು ಹೇಳಿ ಶ್ರೀಗುರುವು ತಂತುಕನಿಗೆ, "ಇದು ಕ್ಷೇತ್ರ ಮಾಹಾತ್ಮ್ಯೆ. ಇದರ ಪ್ರಭಾವದಿಂದ ಅವನು ಏಳು ಜನ್ಮಗಳಲ್ಲಿ ತನ್ನ ಹೆಂಡತಿಯೊಡನೆ ರಾಜನಾದನು. ಇಬ್ಬರೂ ಆಮೇಲೆ ಮೋಕ್ಷ ಪಡೆದರು. ಶ್ರೀಶೈಲ ಮಾಹಾತ್ಮ್ಯೆ ಇಂತಹುದು. ನಿನಗೆ ಗುರೂಪದೇಶವಾಯಿತು. ಈಶ್ವರನನ್ನು ಆದರದಿಂದ ಪೂಜೆ ಮಾಡು. ಗಂಧರ್ವಪುರದಲ್ಲಿ ಕಲ್ಲೇಶ್ವರನೆಂಬ ಹೆಸರಿನಲ್ಲಿ ಈಶ್ವರನು ಇದ್ದಾನೆ. ಮಲ್ಲಿಕಾರ್ಜುನನಿಗೆ ಸಮಾನನು. ಸಂಗಮದಲ್ಲಿ ಸಂಗಮೇಶ್ವರನನ್ನು ಕೂಡಾ ನೀನು ಪೂಜಿಸು. ಆ ದೇವನೂ ಮಲ್ಲಿಕಾರ್ಜುನನೇ ಅಲ್ಲವೇ!". ಶ್ರೀಗುರುವಿನ ಆ ಮಾತುಗಳನ್ನು ಕೇಳಿದ ತಂತುಕನು, "ಸ್ವಾಮಿ ಹೇಳುತ್ತಿರುವುದೇನು? ಮಲ್ಲಿಕಾರ್ಜುನನ್ನು ಪೂಜಿಸಲು ಹೋದಾಗ ತಮ್ಮನ್ನೇ ಅಲ್ಲಿ ತೋರಿಸಿ ಕೊಂಡಿರಿ. ಕಲ್ಲೇಶ ಸಂಗಮೇಶರನ್ನು ಪೂಜಿಸಿಕೊಳ್ಳಲು ನನಗೇಕೆ ಹೇಳುತ್ತಿದ್ದೀರಿ? ಎಲ್ಲೆಲ್ಲೂ ವ್ಯಾಪಿಸಿರುವ ಒಬ್ಬನೇ ಆದರೂ ಅನೇಕ ಸೂತ್ರಗಳನ್ನು ಆಡಿಸುವ ನೀವು ಇತರರನ್ನು ಪೂಜಿಸಲು ಹೇಳುವುದೇತಕ್ಕೆ?" ಎಂದು ಕೇಳಿದ. ತಂತುಕನಿಗೆ ಶ್ರೀಗುರುವು ನಗುತ್ತಾ, ತನ್ನ ಪಾದುಕೆಗಳನ್ನು ಧರಿಸಿ, ಕಣ್ಣು ಮುಚ್ಚಿ ಕೂತಿದ್ದ ಅವನನ್ನು ಕ್ಷಣದಲ್ಲಿ ಸಂಗಮಕ್ಕೆ ಸೇರಿಸಿದರು. ಅಲ್ಲಿ ಗ್ರಾಮಸ್ಥರು ಶ್ರೀಗುರುವು ನಮ್ಮನ್ನು ಬಿಟ್ಟು ಎಲ್ಲಿಗೆ ಹೋರಟು ಹೋದರು ಎಂದು ಮಾತನಾಡಿಕೊಳ್ಳುತ್ತಿದ್ದರು. ಸಂಗಮಕ್ಕೆ ಸೇರಿದ ಶ್ರೀಗುರುವು ತಂತುಕನಿಗೆ ಊರೊಳಕ್ಕೆ ಹೋಗಿ ಗ್ರಾಮಸ್ಥರನ್ನು ಕರೆದುಕೊಂಡು ಬರಲು ಹೇಳಿದರು. ಅವನು ಹೋಗಿ ಶ್ರೀಗುರುವಿನ ಮಾತುಗಳನ್ನು ಹೇಳಿ, ಪ್ರಸಾದವಾಗಿ ತಂದಿದ್ದ ಪತ್ರ ಪುಷ್ಪ ವಿಭೂತಿಗಳನ್ನು ತೋರಿಸಿದನು. ಅವರು, "ಅಯ್ಯಾ ನಿಜವನ್ನು ಹೇಳು" ಎನ್ನಲು, ಅವನು "ಸ್ವಾಮಿ, ಶ್ರೀಗುರುವಿನೊಡನೆ ಶ್ರೀಶೈಲಪರ್ವತಕ್ಕೆ ಹೋಗಿ ಬಂದೆ. ಶ್ರೀಗುರುವು ಒಂದು ಕ್ಷಣದ ಮುಂಚೆ ನನ್ನೊಡನೆ ಸಂಗಮಕ್ಕೆ ಬಂದು,ನಿಮ್ಮನ್ನು ಕರೆದುಕೊಂಡು ಬರಲು ಹೇಳಿದರು. ಈಗ ಶ್ರೀಗುರುವು ಅಲ್ಲೇ ಇದ್ದಾರೆ" ಎಂದನು. ಕೆಲವರು ಅದು ನಿಜವೆಂದರು. ಇನ್ನು ಕೆಲವರು ಮೂಢರು ಸುಳ್ಳು ಎಂದರು. ಅವರೆಲ್ಲರೂ ಶ್ರೀಗುರುವಿನ ಸನ್ನಿಧಾನವನ್ನು ಸೇರಿ, ಅಲ್ಲಿ ಶ್ರೀಗುರುವನ್ನು ಪೂಜಿಸಿ ಶಿವರಾತ್ರಿ ಆಚರಿಸಿದರು. ನಾಮಧಾರಕ, ಸುಳ್ಳು ಎಂದವರಿಗೆ ಕುಂಭೀಪಾಕ ನರಕವೇ! ಶ್ರೀಶೈಲಕ್ಕೆ ಹೋಗಿದ್ದ ಯಾತ್ರಿಕರು ಹದಿನೈದು ದಿನಗಳಾದ ಮೇಲೆ ಹಿಂತಿರುಗಿದರು. ಅವರು ಹೇಳಿದ ಮಾತುಗಳನ್ನು ಕೇಳಿ ಊರಿನವರೆಲ್ಲರೂ ಆಶ್ಚರ್ಯಪಟ್ಟರು. 

ಹೀಗೆ ಸಿದ್ಧಮುನಿ ಭ್ರಮನಾಶಕವಾದ ಈ ವೃತ್ತಾಂತವನ್ನು ನಾಮಧಾರಕನಿಗೆ ಹೇಳಿದರು. ಶ್ರೀಗುರು ಮಹಿಮೆಯೆನ್ನುವ ಈ ಅಮೃತವು ಭಕ್ತರಿಗೆ ಮುದ ನೀಡುವಂತಹುದು. ಶ್ರೋತೃಗಳಿಗೆ ಜ್ಞಾನವನ್ನು ಕೊಟ್ಟು ಶ್ರೀಗುರುವಿನಲ್ಲಿ ಪ್ರೀತಿಯುಂಟುಮಾಡುವುದು. 

ಇಲ್ಲಿಗೆ ನಲವತ್ತನಾಲ್ಕನೆಯ ಅಧ್ಯಾಯ ಮುಗಿಯಿತು.

Sunday, September 22, 2013

||ಶ್ರೀಗುರುಚರಿತ್ರೆ - ನಲವತ್ತುಮೂರನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ಶ್ರೀಗುರುವು, "ಸಾಯಂದೇವ, ಮಹಿಮೋಪೇತವಾದ ಅನಂತವ್ರತ ವಿಧಾನವನ್ನು ಕೇಳು. ಹಿಂದೆ ಕಪಟ ದ್ಯೂತದಲ್ಲಿ ಕೌರವರು ಪಾಂಡು ಪುತ್ರರ ರಾಜ್ಯವನ್ನು ಅಪಹರಿಸಿದರಲ್ಲವೇ? ರಾಜ್ಯಭ್ರಷ್ಠನಾದ ಯುಧಿಷ್ಠಿರ ಹನ್ನೆರಡು ವರ್ಷ ಕಾಡಿನಲ್ಲಿದ್ದನು. ಘೋರಾರಣ್ಯದಲ್ಲಿ ವಾಸಿಸುತ್ತಾ ದರ್ಮರಾಜನು ಸೋದರರೊಡನೆ ಯಾವಾಗಲೂ ಶ್ರೀಹರಿಯ ಧ್ಯಾನವನ್ನು ಮಾಡುತ್ತಿದ್ದನು. ಪಾಂಡವರು ಕಾಡಿನಲ್ಲಿ ಬಹಳ ಕಷ್ಟಪಡುತ್ತಿದ್ದರು. ಆ ಪಾಂಡವರ ಸರ್ವಸ್ವವನ್ನೂ ಅಪಹರಿಸಲು ದುರ್ಯೋಧನನು ದೂರ್ವಾಸ ಮುನಿಯನ್ನು ಕಳುಹಿಸಿದನು. ಪಾಂಡವರ ಸಹಾಯಕನಾದ ಹೃಷೀಕೇಶನು ಪಾಂಡವರನ್ನು ರಕ್ಷಿಸಿದನು. ಅವರ ಕಷ್ಟಗಳನ್ನು ತಿಳಿದ ಶ್ರೀ ಕೃಷ್ಣ ಅವರಿದ್ದ ಸ್ಥಳಕ್ಕೆ ಸ್ವಯಂ ಬಂದನು. ಧರ್ಮರಾಜನು ಶೀಕೃಷ್ಣನನ್ನು ಸಮೀಪಿಸಿ, ಶ್ರೀಕೃಷ್ಣನ ದರ್ಶನದಿಂದ ತಾನು ಪವಿತ್ರನಾದೆನೆಂದು ತಿಳಿದು ಅವನನ್ನು ಭಕ್ತಿಯಿಂದ ಪೂಜಿಸಿ ಈ ವಿಧದಲ್ಲಿ ಸ್ತುತಿಸಿದನು.

"ನಾರಾಯಣ, ಅನಂತ, ಭಕ್ತವತ್ಸಲ, ಹೃಷೀಕೇಶ, ಜಯವಾಗಲಿ. ಭವಸಾಗರತಾರಕ, ಜಯವಾಗಲಿ. ಕ್ಷೀರಸಮುದ್ರನಿವಾಸ, ಲಕ್ಷ್ಮೀಶ, ಶ್ರೀಪತೇ, ಜಯವಾಗಲಿ. ಪರಮಾತ್ಮ, ನೀನೇ ಪರಂಜ್ಯೊತಿಯಾದ ತ್ರಿಮೂರ್ತಿಯು. ವಿಶ್ವವನ್ನು ನೀನೇ ಸೃಷ್ಟಿಸುತ್ತಿದ್ದೀಯೆ. ನೀನೇ ರಕ್ಷಿಸುತ್ತಿದ್ದೀಯೆ. ನೀನೇ ಲಯ ಮಾಡುತ್ತಿದ್ದೀಯೆ. ವಿಶ್ವಕ್ಕೆಲ್ಲ ನೀನೇ ಜೀವವಾಗಿ ಸರ್ವವನ್ನೂ ಸದಾ ರಕ್ಷಿಸುತ್ತಿದ್ದೀಯೆ. ಪಾಂಡವರು ನನ್ನ ಪ್ರಾಣವೆಂದು ಎಲ್ಲರಿಗೂ ಪ್ರಕಟ ಮಾಡಿ ನಮ್ಮನ್ನು ಕಾಡಿನಲ್ಲಿ ಇಟ್ಟು ಇಂತಹ ಕಷ್ಟಗಳನ್ನು ಏಕೆ ಉಂಟು ಮಾಡಿದ್ದೀಯೆ? ನಿನ್ನನ್ನು ಬಿಟ್ಟು ನಾವು ಯಾರಿಗೆ ಹೇಗೆ ಹೇಳಿಕೊಳ್ಳಬೇಕೋ ಅದನ್ನು ನಮಗೆ ಹೇಳು" ಎಂದು ಧರ್ಮರಾಜನು ಹೇಳುತ್ತಿರಲು, ಭೀಮಸೇನನು ಬಂದು ಶ್ರೀಹರಿಯ ಪಾದಗಳನ್ನು ಹಿಡಿದು, "ಹೇ ಪ್ರಭು, ಭಕ್ತರಾದ ನಮ್ಮನ್ನು ಉಪೇಕ್ಷಿಸುತ್ತಿರುವುದೇತಕ್ಕೆ?" ಎಂದನು. ಧನಂಜಯನು ಕೂಡಾ ಅಲ್ಲಿಗೆ ಬಂದು, ಶ್ರೀಹರಿಯ ಪಾದಗಳಲ್ಲಿ ಶಿರಸ್ಸಿಟ್ಟು, "ಹೇ ಮುರವೈರಿ, ಕೃಪಾನಿಧಿ, ಶ್ರೀಕೃಷ್ಣ, ನಮ್ಮಲ್ಲಿ ನಿನಗೆ ದಯಾ ದೃಷ್ಟಿಯಿದ್ದರೆ ನಮಗೆ ಈ ವನವಾಸವೇ ಮೊದಲಾದ ಶ್ರಮ ಯಾತಕ್ಕೆ ಉಂಟಾಗುತ್ತಿದೆ? ಕುಂತೀಪುತ್ರರು ನನ್ನ ಪ್ರಾಣಪ್ರಿಯರು ಎಂದ ನಿನ್ನ ಮಾತನ್ನು ಸತ್ಯಮಾಡು. ನಮ್ಮ ಕಷ್ಟಗಳನ್ನು ಹೋಗಲಾಡಿಸು" ಎಂದು ಬಿನ್ನವಿಸಿಕೊಂಡನು. ನಂತರ ನಕುಲ ಸಹದೇವರೂ ಬಂದು ಪ್ರಣಾಮ ಮಾಡಿದರು. ದ್ರೌಪದಿ ಸಹಿತರಾದ ಪಂಚ ಪಾಂಡವರು ಹೀಗೆ ನಮಸ್ಕಾರಗಳನ್ನು ಅರ್ಪಿಸಿ, "ಹೇ ಪ್ರಭು, ನಮ್ಮಲ್ಲಿ ಪಕ್ಷಪಾತವಿರುವವನೇ! ನಮ್ಮನ್ನು ಕಾಡಿನಲ್ಲಿ ಏಕೆ ನಿಲ್ಲಿಸಿದ್ದೀಯೆ? ಈಗ ನಮ್ಮ ಕರ್ತವ್ಯವೇನು ಎಂಬುದನ್ನು ಹೇಳು. ಸಾಮ್ರಾಜ್ಯವನ್ನು ಮತ್ತೆ ಪಡೆಯಲು ಏನು ಮಾಡಬೇಕು? ಹೇ ಹೃಷೀಕೇಶ, ಹೇಳು" ಎಂದು ಪ್ರಾರ್ಥಿಸಿದ ಪಾಂಡವರಿಗೆ ಆರ್ದ್ರಹೃದಯನಾದ ಶ್ರೀ ಕೃಷ್ಣನು ಹೀಗೆ ಬೋಧಿಸಿದನು.

"ನಿಮಗೆ ಒಂದು ವ್ರತವನ್ನು ಹೇಳುತ್ತೇನೆ. ಅದರ ಅನುಗ್ರಹದಿಂದ ನಿಮಗೆ ರಾಜ್ಯ ಪ್ರಾಪ್ತಿಯಾಗುವುದು. ಅದು ಅನಂತವ್ರತವು. ವ್ರತಗಳಲ್ಲೆಲ್ಲಾ ಅದು ಉತ್ತಮವು. ಅದನ್ನು ಆಚರಿಸುವುದರಿಂದ ಶೀಘ್ರವಾಗಿ ರಾಜ್ಯವು ಪ್ರಾಪ್ತಿಯಾಗುವುದು. ಅನಂತನಾದ ನಾನು ಒಬ್ಬನೇ ಎಲ್ಲೆಲ್ಲೂ ಸದಾ ಸಂಪೂರ್ಣನಾಗಿ ಇದ್ದೇನೆ. ಹಗಲು ರಾತ್ರಿಗಳಲ್ಲಿ, ಪಕ್ಷಗಳಲ್ಲಿ, ಮಾಸಗಳಲ್ಲಿ, ಅಯನಗಳಲ್ಲಿ, ಸಂವತ್ಸರಗಳಲ್ಲಿ, ಯುಗಗಳಲ್ಲಿ, ಕಲ್ಪಗಳಲ್ಲಿ ನಾನೇ ವ್ಯಾಪಿಸಿದ್ದೇನೆ. ಭೂತ, ಭವಿಷ್ಯತ್, ವರ್ತಮಾನಗಳೆಲ್ಲವೂ ನಾರಾಯಣನಾದ ನನ್ನ ಸ್ವರೂಪಗಳೇ. ದುಷ್ಟ ಸಂಹಾರಕ್ಕೆಂದು, ಸಾಧು ರಕ್ಷಣೆಗಾಗಿ ನಾನು ಯದು ವಂಶದಲ್ಲಿ ಜನಿಸಿದ್ದೇನೆ. ಧರ್ಮರಾಜ, ಆ ವಾಸುದೇವನೂ, ಅನಂತನೂ ನಾನೇ! ಬ್ರಹ್ಮ, ವಿಷ್ಣು, ಮಹೇಶ್ವರರು ನನ್ನ ಮೂರ್ತಿತ್ರಯವೇ! ರಾಶಿಗಳು, ಗ್ರಹಗಳು, ಚತುರ್ದಶಭುವನಗಳು, ಅಷ್ಟವಸುಗಳು, ದ್ವಾದಶಾದಿತ್ಯರು, ಏಕಾದಶರುದ್ರರು, ಸಪ್ತಸಮುದ್ರಗಳು, ಸಪ್ತಪಾತಾಳಗಳು, ಪರ್ವತಗಳೂ ನಾನೇ! ತೃಣ, ವೃಕ್ಷ, ಲತೆ, ಪೊದೆಗಳು, ನಕ್ಷತ್ರಗಳು, ಆಕಾಶವು, ದಿಕ್ಕುವಿದಿಕ್ಕುಗಳು, ನಾನೇ ಆಗಿ ಸಮಸ್ತವನ್ನೂ ವ್ಯಾಪಿಸಿ, ಜನ್ಮ ರಹಿತನಾಗಿ ಭರಿಸುತ್ತಿದ್ದೇನೆ. ಪಾತಾಳಗಳು, ಭೂಲೋಕ, ಅಣುವೇ ಮುಂತಾದುವೂ ನಾನೇ! ಆದ್ದರಿಂದ ಯುಧಿಷ್ಠಿರ, ನನ್ನನ್ನೇ ಶಾಶ್ವತನಾದ ಅನಂತನನ್ನಾಗಿ ತಿಳಿದುಕೊಂಡು, ನನ್ನನ್ನು ಶಾಸ್ತ್ರೋಕ್ತವಾಗಿ ಪೂಜಿಸು. ಈ ವ್ರತವೇ ನನ್ನ ಪೂಜವಿಧಾನಗಳಲ್ಲೆಲ್ಲ ಶ್ರೇಷ್ಠವು" ಎಂದು ಶ್ರೀ ಕೃಷ್ಣನು ಉಪದೇಶಮಾಡಿದನು.

ಪಾರ್ಥನು, "ಸ್ವಾಮಿ, ವ್ರತವಿಧಾನವನ್ನು ತಿಳಿಸು. ಅದಕ್ಕೆ ಧನವೇನು? ಹೇಗೆ ಪೂಜೆಮಾಡಬೇಕು? ಯಾವ ದಿನದಂದು ಈ ವ್ರತವನ್ನು ಮಾಡಬೇಕು? ಹಿಂದೆ ಯಾರು ಈ ವ್ರತವನ್ನು ಮಾಡಿದ್ದಾರೆ? ಸ್ವಾಮಿ, ನಮಗೆ ಎಲ್ಲವನ್ನೂ ವಿಸ್ತರಿಸಿ ಹೇಳು" ಎಂದು ಪ್ರಾರ್ಥಿಸಲು, ಶ್ರೀಕೃಷ್ಣನು, "ಧರ್ಮರಾಜ, ಭಾದ್ರಪದ ಶುಕ್ಲ ಚತುರ್ದಶಿಯ ದಿನ ಮಧ್ಯಾಹ್ನದಲ್ಲಿ ಈ ವ್ರತವನ್ನು ಮಾಡು. ಶ್ರದ್ಧೆಯಿಂದ ಅನಂತನನ್ನು ಆರಾಧಿಸು. ಶೀಘ್ರವಾಗಿ ರಾಜ್ಯವನ್ನು ಹೊಂದಬಲ್ಲೆ. ಹಿಂದೆ ಕೃತ ಯುಗದಲ್ಲಿ ಸುಮಂತನೆಂಬ ಬ್ರಾಹ್ಮಣೋತ್ತಮನೊಬ್ಬನು ಇದ್ದನು. ಅವನು ವಸಿಷ್ಠ ಗೋತ್ರದವನು. ಅವನ ಹೆಂದತಿ ಭಾರ್ಗವ ವಂಶ ಸಂಜಾತೆ, ದೀಕ್ಷ ಎನ್ನುವ ಪತಿವ್ರತೆ. ಆಕೆಗೆ ಸುಶೀಲ ಎನ್ನುವ ಮಗಳಿದ್ದಳು. ಸುಮಂತನ ಹೆಂಡತಿ ದೈವವಶಾತ್ ಮರಣ ಹೊಂದಿದಳು. ಸುಶೀಲ ತಂದೆಯೊಡನೆ ಬೆಳೆಯುತ್ತಿದ್ದಳು. ಅವಳು ಪ್ರತಿದಿನವೂ ಐದು ಬಣ್ಣಗಳ ರಂಗೋಲಿಯಿಂದ ಮನೆಯನ್ನು ಅಲಂಕರಿಸಿ ವಿಚಿತ್ರವಾದ ತೋರಣಗಳನ್ನು ಕಟ್ಟುತ್ತಿದ್ದಳು. ಮನೆ ಬಾಗಿಲುಗಳನ್ನು ತೊಳೆಯುವಾಗ ಶಂಖ ಪದ್ಮ ಮುಂತಾದುವನ್ನು ಬರೆಯುತ್ತಿದ್ದಳು. ಸುಮಂತನು ಕ್ರಿಯಾಲೋಪ ವಾಗುತ್ತಿದ್ದುದರಿಂದ ಯಜ್ಞ ಸೇವೆಗೆಂದು ದ್ವಿತೀಯ ವಿವಾಹವನ್ನು ಮಾಡಿಕೊಂಡನು. ಆ ಎರಡನೆಯ ಹೆಂಡತಿ ಗಯ್ಯಾಳಿ. ದುರಾಚಾರಿ. ದುಶ್ಶೀಲೆ. ದುರದೃಷ್ಟದಿಂದ ಗಂಡನಲ್ಲಿ, ಮಗಳಲ್ಲಿ ವೈರವುಂಟಾಗುವಂತೆ ವರ್ತಿಸುತ್ತಿದ್ದಳು. ಸ್ವಲ್ಪಕಾಲದಲ್ಲಿ ಆ ಸುಶೀಲೆಗೆ ವಿವಾಹ ಯೋಗ್ಯ ವಯಸ್ಸಾಯಿತು. ಅವಳ ತಂದೆ ಇದು ಕನ್ಯಾದಾನ ಸಮಯವಲ್ಲವೇ ಎಂದು ಚಿಂತಿಸುತ್ತಿರಲು ಅವರಲ್ಲಿಗೆ ಕೌಂಡಿನ್ಯ ಋಷಿ ಬಂದನು. ಸರ್ವ ವಿದ್ಯಾ ಪಾರಂಗತನಾದ ಅವನು ಅವಳನ್ನು ಭಾರ್ಯೆಯಾಗಿ ಸ್ವೀಕರಿಸಿದನು. ಎರಡು ವರ್ಷ ಎರಡು ತಿಂಗಳು ಅ ನೂತನ ದಂಪತಿಗಳನ್ನು ಮುನಿ ತನ್ನ ಮನೆಯಲ್ಲೇ ನಿಲ್ಲಿಸಿ ಕೊಂಡನು. ಸವತಿ ತಾಯಿಗೂ ಮಗಳಿಗೂ ವೈರವು ಬೆಳೆಯಿತು. ಕೌಂಡಿನ್ಯನು ಮಾವನಿಗೆ ‘ಮತ್ತೊಂದು ಮನೆ ಮಾಡುತ್ತೇನೆ’ ಎಂದು ಹೇಳಿದನು. "ಈ ನನ್ನ ಹೆಂಡತಿ ಕಲಹಕಾರಿಣಿ. ಎಂದಿದ್ದರೂ ಇವರಿಬ್ಬರೂ ನನ್ನಿಂದ ದೂರವಾಗುವವರೇ! ಹೆಂಡತಿ ಶಾಂತಳಾಗಿಲ್ಲದ ಮನೆಯು ಕಾಡೇ! ಮಗಳು ಇಲ್ಲೇ ಇದ್ದರೆ ಅಳಿಯನ ದರ್ಶನ, ಸಂತೋಷಗಳು ಲಭಿಸುತ್ತವೆ" ಎಂದು ದುಃಖದಿಂದ ಯೋಚಿಸುತ್ತಿದ್ದ ಸುಮಂತನನ್ನು ಕೌಂಡಿನ್ಯನು, "ಇಬ್ಬರು ತಾಪಸಿಗಳು ಒಂದೇ ಕಡೆಯಲ್ಲಿ ಇರಬಾರದು. ಅದರಿಂದ ಇಬ್ಬರ ಯೋಗಾಭ್ಯಾಸಕ್ಕೂ ಹಾನಿಯಾಗುವುದು. ಆಶ್ರಮವನ್ನು ಏರ್ಪಡಿಸಿಕೊಂಡು ಸುಖವಾಗಿ ತಪಸ್ಸು ಮಾಡಿಕೊಳುತ್ತೇನೆ. ಸ್ವಲ್ಪವೇ ದೂರದಲ್ಲಿ ಇರುತ್ತೇನೆ. ಅದರಿಂದ ನಮ್ಮನ್ನು ಆಗಾಗ ನೋಡುತ್ತಿರಬಹುದು" ಎಂದು ಹೇಳಿದನು.

ಅದಕ್ಕೆ ಸುಮಂತನು, "ಅಯ್ಯಾ, ಸುವ್ರತ, ಇನ್ನು ಹನ್ನೆರಡು ದಿನಗಳು ಇಲ್ಲೇ ಇರು. ಸರ್ವಸಿದ್ಧಿ ಪ್ರದವಾದ ತ್ರಯೋದಶಿಯಂದು ಪ್ರಯಾಣ ಮಾಡು" ಎಂದು ಕೋರಲು, ಅವನ ಕೋರಿಕೆಯನ್ನು ಮನ್ನಿಸಿ ಕೌಂಡಿನ್ಯನು ಹನ್ನೆರಡು ದಿನಗಳು ಅಲ್ಲೇ ಇದ್ದು ನಂತರ, ಸುಮುಹೂರ್ತದಲ್ಲಿ ಹೆಂಡತಿಯನ್ನು ಕರೆದುಕೊಂಡು ಹೊರಟನು. ಸುಮಂತನು ತನ್ನ ಗಯ್ಯಾಳಿ ಹೆಂಡತಿಯೊಡನೆ, "ಮಗಳು ಗಂಡನೊಡನೆ ಹೊರಟಿದ್ದಾಳೆ. ಧಾನ್ಯವನ್ನು, ಗೋಧಿಯಿಂದ ಮಾಡಿದ ದಾರಿಬುತ್ತಿಯನ್ನು ಅವಳಿಗೆ ಕೊಡು" ಎಂದು ಹೇಳಿದನು. ಅದಕ್ಕೆ ಅವಳು ಮನೆಯೊಳಕ್ಕೆ ಹೋಗಿ ಬಾಗಿಲು ಸೇರಿಸಿ, ಚಿಲಕ ಹಾಕಿ, "ನಾನು ಏನೂ ಕೊಡುವುದಿಲ್ಲ" ಎಂದು ಹೇಳಿದಳು. ಸುಶೀಲೆ ತಂದೆಯನ್ನು ಓದಾರಿಸುತ್ತಾ, "ಏನೂ ಕೊಡಬೇಕಾದ ಅವಶ್ಯಕತೆಯಿಲ್ಲ. ನಾನು ಹೋಗಿಬರುತ್ತೇನೆ" ಎಂದು ಹೇಳಿದಳು. ಋಷಿಯು ಅಡಿಗೆ ಮನೆಯಲ್ಲಿದ್ದ ಸ್ವಲ್ಪ ಗೋಧಿಹಿಟ್ಟನ್ನು ತಂದು ಮಗಳಿಗೆ ಕೊಟ್ಟು ಅವರನ್ನು ಕಳುಹಿಸಿಕೊಟ್ಟನು.

ಮಧ್ಯಾಹ್ನವಾಗುತ್ತಲೂ ಕೌಂಡಿನ್ಯನು ಒಂದು ನದಿತೀರದಲ್ಲಿ ಆಹ್ನಿಕ ಕೃತ್ಯಗಳನ್ನು ಮುಗಿಸಿದನು. ನದೀತಟದಲ್ಲಿ ಕೆಲವು ಸ್ತ್ರೀಯರು ಕೆಂಪು ವಸ್ತ್ರಗಳನ್ನುಟ್ಟು ಚತುರ್ದಶಿ ವ್ರತವನ್ನು ಮಾಡುತ್ತಾ, ಬೇರೆಬೇರೆಯಾಗಿ ಕಲಶಗಳನ್ನು ಸ್ಥಾಪಿಸುತ್ತಿರುವುದನ್ನು ಸುಶೀಲ ನೋಡಿದಳು. ಮೆಲ್ಲಮೆಲ್ಲಗೆ ಅವಳು ಅವರ ಹತ್ತಿರಕ್ಕೆ ಹೋಗಿ, "ನೀವೆಲ್ಲರೂ ಮಾಡುತ್ತಿರುವ ವ್ರತವೇನು?" ಎಂದು ಕೇಳಿದಳು. ಅದಕ್ಕೆ ಅವರು, "ಇದು ಅನಂತವ್ರತ ಎನ್ನುವ ಉತ್ತಮ ವ್ರತವು. ಇದು ಸಕಲ ಅಭೀಷ್ಟಗಳನ್ನೂ ಕೊಡುವಂತಹುದು" ಎಂದರು. "ನೀವು ನನಗೆ ಈ ವ್ರತವಿಧಾನವನ್ನು ವಿಸ್ತಾರವಾಗಿ ಹೇಳಬೇಕೆಂದು ಕೋರುತ್ತೇನೆ" ಎಂದು ಅವರಲ್ಲಿ ಪ್ರಾರ್ಥಿಸಿದಳು. ಅವರು, "ಹೇ ಸಾಧ್ವಿ, ಭಾದ್ರಪದಮಾಸದ ಶುಕ್ಲಪಕ್ಷದ ಚತುರ್ದಶಿಯದಿನ ಮಾಡುವ ಈ ಅನಂತ ವ್ರತವು ಬಹು ಶ್ರೇಷ್ಠವಾದದ್ದು. ಸರ್ವಕಾಮಫಲಗಳನ್ನೂ ಕೊಡುವುದು. ಹದಿನಾಲ್ಕು ಗಂಟು ಹಾಕಿ ಕೆಂಪು ದಾರದ ದೋರ(ದಾರ)ವನ್ನು ಮಾಡಿಟ್ಟುಕೊಂಡು, ಶಾಸ್ತ ಪ್ರಕಾರ ನದಿಯಲ್ಲಿ ಸ್ನಾನ ಮಾಡಿ ವ್ರತ ಮಾಡಬೇಕು. ಕೆಂಪು ವಸ್ತ್ರವನ್ನು ಧರಿಸಿ, ಅರಿಶಿನ ಕುಂಕುಮಗಳಿಂದ ಶರೀರವನ್ನು ಅಲಂಕರಿಸಿಕೊಂಡು, ಎರಡು ಪೂರ್ಣ ಕಲಶಗಳನ್ನು ನೀರಿನಿಂದ ತುಂಬಿ ಐದು ಚಿಗುರುಗಳನ್ನು ಅದರಲ್ಲಿ ಹಾಕಿ, ಯಥಾಶಕ್ತಿಯಾಗಿ ರತ್ನಗಳೇ ಮುಂತಾದುವನ್ನು ಅದರಲ್ಲಿಟ್ಟು ಉಪಚಾರಗಳಿಂದ ಪೂಜಿಸಬೇಕು. ನೀರಾಜನ ಕೊಟ್ಟು ಪೂರ್ಣ ಕಲಶಗಳನ್ನಿಟ್ಟು ದರ್ಭೆಗಳಿಂದ ಸುತ್ತಲೂ ಅಲಂಕರಿಸಿ ಶೇಷನ ಪೂಜೆಯನ್ನು ಮಾಡಬೇಕು. ಪೂರ್ಣ ಕಲಶಗಳನ್ನು ಒಂದು ನೂತನ ವಸ್ತ್ರದಲ್ಲಿಟ್ಟು ಅಲ್ಲಿ ಅಷ್ಟದಳ ಪದ್ಮವನ್ನು ಸ್ಫುಟವಾಗಿ ಬರೆದು, ಆ ಪದ್ಮದಲ್ಲಿ ಅನಂತನನ್ನು ಪೂಜಿಸಬೇಕು. ಕಲಶಕ್ಕೆ ಎದುರಾಗಿ ಪದ್ಮ, ಸ್ವಸ್ತಿಕ ಮುಂತಾದುವನ್ನು ಪಂಚ ರಂಗುಗಳಿಂದ ಚೆನ್ನಾಗಿ ಬರೆದು ಅಲಂಕರಿಸಬೇಕು. ಮೊದಲು ಷೋಡಶೋಪಚಾರಗಳಿಂದ ಶೇಷನನ್ನು, ನಂತರ ಅನಂತನನ್ನು ಧ್ಯಾನಾದಿಗಳಿಂದ ಅರ್ಚಿಸಬೇಕು. ಅನಂತನನ್ನು ಧ್ಯಾನಿಸಿ, ಷೋಡಶೋಪಚಾರಗಳಿಂದ ಹೊಸದೋರವನ್ನು, ‘ಓಂ ನಮೋ ಭಗವತೇ ವಾಸುದೇವಾಯ’ ಎನ್ನುವ ದ್ವಾದಶಾಕ್ಷರಿ ಮಂತ್ರವನ್ನು ಬರೆದು, ಪುರುಷಸೂಕ್ತ ಅಥವ ವಿಷ್ಣುಸೂಕ್ತದಿಂದ ಸಮಾಹಿತಚಿತ್ತರಾಗಿ ಪೂಜೆಮಾಡಬೇಕು. ಹಾಗೆ ಪೂಜಿಸಿ, ‘ಸಂಸಾರಗಹ್ವರ---’ ಎನ್ನುವ ಮಂತ್ರದಿಂದ ಕೈಗೆ ಹೊಸದಾರವನ್ನು ಕಟ್ಟಿಕೊಂಡು, ಹಳೆಯದಾರವನ್ನು ನಮಸ್ಕಾರ ಪೂರ್ವಕವಾಗಿ ವಿಸರ್ಜಿಸಬೇಕು. ಆ ನಂತರ ಒಂದು ಅಳತೆ ಗೋಧಿ, ಸಿಹಿತಿಂಡಿ, ಹಣ್ಣುಗಳಿಂದ ಕೂಡಿದ ವಾಯನವನ್ನು ದಕ್ಷಿಣೆಯ ಸಹಿತ ದಾನ ಮಾಡಬೇಕು. ತರುವಾಯ ಇಷ್ಟರೊಡನೆ ಕೂಡಿ ಊಟ ಮಾಡಬೇಕು. ಹೀಗೆ ಹದಿನಾಲ್ಕು ವರ್ಷಗಳು ವ್ರತಮಾಡಿ, ನಂತರ ಉದ್ಯಾಪನೆ ಮಾಡಿ, ಹದಿನಾಲ್ಕು ಕುಂಭಗಳನ್ನು ದಾನ ಮಾಡಿ, ಬ್ರಾಹ್ಮಣರಿಗೆ ಭಕ್ತಿಯಿಂದ ಸುಗ್ರಾಸ ಊಟವಿಡಬೇಕು. ಹೀಗೆ ಮಾಡಿದರೆ ಚತುರ್ವಿಧ ಪುರುಷಾರ್ಥಗಳೂ ಸಿದ್ಧಿಸುತ್ತವೆ. ಅಮ್ಮಾ ಸುಶೀಲೆ, ನಮ್ಮೊಡನೆ ನೀನೂ ಅನಂತನನ್ನು ಪೂಜಿಸು. ಇಂದು ಚತುರ್ದಶಿ" ಎಂದು ಆ ಪುಣ್ಯಸ್ತ್ರೀಯರು ಹೇಳುತ್ತಾ, ಒಬ್ಬೊಬ್ಬರು ಒಂದೊಂದು ದಾರವನ್ನು ದೋರ ಮಾಡಲು ಸಂತೋಷದಿಂದ ಕೊಟ್ಟರು. ಸುಶೀಲ ಹದಿನಾಲ್ಕು ಗಂಟುಗಳನ್ನು ಹಾಕಿ ಅನಂತನನ್ನು ಪೂಜಿಸಿ, ತಮ್ಮ ರಥವಿದ್ದ ಕಡೆಗೆ ಬಂದಳು. ಅಷ್ಟರಲ್ಲಿ ಕೌಂಡಿನ್ಯನು ಅನುಷ್ಠಾನವನ್ನು ಮುಗಿಸಿ ಬಂದನು. ಅವರಿಬ್ಬರೂ ಮುಂದೆ ಹೋಗುತ್ತಾ ಅಮರಾವತಿಯಂತೆ ಕಾಣುತ್ತಿದ್ದ ಒಂದು ಊರಿಗೆ ಬಂದರು. ಅಲ್ಲಿನ ಜನರು ಆ ಮುನಿಯ ಸಮೀಪಕ್ಕೆ ಬಂದು, "ಸ್ವಾಮಿ, ತಪೋನಿಧಿ, ನೀವು ಇಲ್ಲೇ ಇರಿ" ಎಂದು ಪ್ರಾರ್ಥಿಸಿದರು. ಆ ಮುನಿದಂಪತಿಗಳು ಅಲ್ಲೇ ನೆಲೆಸಿದರು. ಅನಂತನ ಅನುಗ್ರಹದಿಂದ ಅವರು ಸಕಲೈಶ್ವರ್ಯಗಳನ್ನೂ ಹೊಂದಿದರು.

ಕೌಂಡಿನ್ಯನು ಒಂದು ದಿನ ಸುಶೀಲಳ ಕೈಯಲ್ಲಿದ್ದ ಅನಂತನ ದೋರವನ್ನು ನೋಡಿದನು. ಅವನು, "ಪ್ರಿಯಳೇ, ನಿನ್ನ ಕೈಯಲ್ಲಿ ಕಟ್ಟಿರುವುದೇನು? ನನ್ನನ್ನು ವಶ ಮಾಡಿಕೊಳ್ಳಲು ಕೆಂಪು ದಾರವನ್ನು ಕಟ್ಟಿಕೊಂಡಿದ್ದೀಯೇನು?" ಎಂದು ಕೇಳಿದನು. ಅದಕ್ಕೆ ಸುಶೀಲ, "ಸ್ವಾಮಿ, ನಾನು ಅನಂತನ ದೋರವನ್ನು ಕಟ್ಟಿಕೊಂಡಿದ್ದೇನೆ. ಆ ದೇವನ ಅನುಗ್ರಹದಿಂದಲೇ ನಮಗೆ ಈ ಸಂಪತ್ತೆಲ್ಲವೂ ಕೈಗೂಡಿದೆ" ಎಂದು ಹೇಳಲು, ಕೌಂಡಿನ್ಯನು ಕೋಪಗೊಂಡು ಅನಂತನ ದೋರವನ್ನು ಕಿತ್ತು ಅಗ್ನಿಕುಂಡದಲ್ಲಿ ಹಾಕಿ, "ಅನಂತನೆಲ್ಲಿ? ನನ್ನ ತಪಃಪುಣ್ಯವೇ ನನಗೆ ಈ ಐಶ್ವರ್ಯವನ್ನು ಸಂಪಾದಿಸಿ ಕೊಟ್ಟಿದೆ" ಎಂದು ಕೋಪದಿಂದ ಹೇಳಿದನು. ಆ ಪತಿವ್ರತೆ, "ಅಯ್ಯೋ, ಅನಂತನನ್ನು ಅಗ್ನಿಯಲ್ಲಿ ಹಾಕಿದಿರಾ?" ಎಂದು ಹೇಳುತ್ತಾ ಆ ದೋರವನ್ನು ತೆಗೆದು (ಮೊಸರಿನಲ್ಲಿ) ಇಟ್ಟಳು. ಅವರ ಐಶ್ವರ್ಯವೆಲ್ಲ ನಷ್ಟವಾಗಿ ದಾರಿದ್ರ್ಯ ಬಂತು. ಕಳ್ಳರು ಅವರ ಸಂಪದವನ್ನೆಲ್ಲ ಅಪಹರಿಸಿದರು. ಹಿತರು ಅಹಿತರಾದರು. ಕೌಂಡಿನ್ಯನು ದೀನನಾದನು. ಅನಂತನನ್ನು ಅವಮಾನಿಸಿದ್ದರಿಂದ ಅವರ ಮನೆಯೂ ಸುಟ್ಟು ದಗ್ಧವಾಯಿತು.

ಕೌಂಡಿನ್ಯನು ಅದರ ಬಗ್ಗೆ ಯೋಚಿಸಿ, "ಅನಂತನು ನನ್ನಮೇಲೆ ಕೋಪಗೊಂಡನು. ಮದಾಂಧನಾದ ನಾನು ದೋರವನ್ನು ಅಗ್ನಿಯಲ್ಲಿ ಹಾಕಿದೆ. ಅದಕ್ಕಾಗಿ ಅನಂತನನ್ನು ದರ್ಶಿಸಿದ ನಂತರವೇ ನಾನು ಊಟ ಮಾಡುತ್ತೇನೆ. ಅಲ್ಲಿಯವರೆಗೆ ನಾನು ಅನ್ನವನ್ನು ಮುಟ್ಟುವುದಿಲ್ಲ" ಎಂದು ನಿರ್ಧರಿಸಿ, ಅನಂತ, ಅನಂತ ಎಂದು ಕೂಗುತ್ತಾ ಕಾಡನ್ನು ಸೇರಿದನು. ಅಲ್ಲೊಂದು ಮಾವಿನ ಮರವನ್ನು ನೋಡಿದನು. ಪಕ್ಷಿಗಳು ಆ ಮರವನ್ನು ಮುಟ್ಟುತ್ತಿರಲಿಲ್ಲ. ಕೌಂಡಿನ್ಯನು ಆ ಮರವನ್ನು, "ಹೇ ಮಾವಿನ ಮರವೇ, ನಿನಗೆ ಅನಂತನು ಕಾಣಿಸಿದನೇ?" ಎಂದು ಕೇಳಿದನು. ಆ ಮರ, "ನಾನು ಅನಂತನನ್ನು ಕಾಣಲಿಲ್ಲ. ನೀನೇನಾದರೂ ಕಂಡರೆ ನನ್ನ ಈ ದೆಸೆಯನ್ನು ಕುರಿತು ಅವನಿಗೆ ಹೇಳು" ಎಂದು ಹೇಳಿತು. ಅವನು ಮುಂದಕ್ಕೆ ಹೋಗುತ್ತಾ, ಹುಲ್ಲುಗಾವಲೊಂದರಲ್ಲಿ ಕರುವಿನ ಜೊತೆಯಿದ್ದ ಹಸುವನ್ನು ಕಂಡನು. ಆ ಹಸುವು ಹುಲ್ಲು ಮೇಯುತ್ತಿರಲಿಲ್ಲ. ಆ ಹಸುವನ್ನು, "ಅಮ್ಮಾ ಹಸುವೇ, ನೀನು ಅನಂತನನ್ನು ನೋಡಿದ್ದರೆ ನನ್ನಲ್ಲಿ ದಯೆತೋರಿ ಹೇಳು" ಎಂದು ಕೇಳಿದನು. ಆ ಹಸುವು, "ಅಯ್ಯಾ ಬ್ರಾಹ್ಮಣ, ನಾನು ಅನಂತನನ್ನು ನೋಡಲಿಲ್ಲ. ನೀನು ನೋಡಿದರೆ ಅನಂತನಿಗೆ ನನ್ನ ಈ ದೆಸೆಯನ್ನು ತಿಳಿಸು" ಎಂದು ಹೇಳಿತು. ಕೌಂಡಿನ್ಯನು ಇನ್ನೂ ಮುಂದಕ್ಕೆ ಹೋಗುತ್ತಾ ಒಂದು ಎತ್ತನ್ನು ನೋಡಿದನು. ಅವನು ಆ ಎತ್ತನ್ನು ನೀನು ಅನಂತನನ್ನು ನೋಡಿದ್ದರೆ ಹೇಳು ಎನ್ನಲು ಅದೂ ಕೂಡಾ ಹಿಂದಿನವರಂತೆಯೇ ಉತ್ತರ ಕೊಟ್ಟಿತು. ಇನ್ನೂ ಮುಂದಕ್ಕೆ ಹೋಗುತ್ತಾ ಅವನು ಎರಡು ಸರಸ್ಸುಗಳನ್ನು ಕಂಡನು. ಅಲ್ಲಿ ಯಾವುದೇ ಪಕ್ಷಿಗಳೂ ಬರುತ್ತಿರಲಿಲ್ಲ. ಒಂದು ಸರಸ್ಸಿನ ನೀರು ಇನ್ನೊಂದು ಸರಸ್ಸಿನೊಳಕ್ಕೆ ಹರಿಯುತ್ತಿತ್ತು. ಅವನು ಆ ಸರಸ್ಸುಗಳನ್ನು ನೀವು ಅನಂತನನ್ನು ನೋಡಿದಿರಾ ಎಂದು ಕೇಳಲು ಅವೂ ಕೂಡಾ ನೋಡಿಲ್ಲ ಎಂದು ಹೇಳಿದವು. ಅವನು ಹಾಗೇ ಮುಂದಕ್ಕೆ ಹೋಗುತ್ತಾ ಒಂದು ಕತ್ತೆ, ಒಂದು ಆನೆ ನೋಡಿ, ಅವುಗಳನ್ನು ಹಿಂದಿನಂತೆಯೇ ಕೇಳಿದನು. ಅವೂ ಕೂಡಾ ಇಲ್ಲ ಎಂದು ಹೇಳಿದವು. ಅವನು ‘ಅನಂತ, ಅನಂತ’ ಎಂದು ಹೇಳಿಕೊಂಡು ಮುಂದಕ್ಕೆ ಹೋಗುತ್ತಾ ಬಸವಳಿದು ಮೂರ್ಛೆ ಹೊಂದಿ ಬಿದ್ದುಹೋದನು. ಅಷ್ಟರಲ್ಲಿ ವೃದ್ಧನೊಬ್ಬನು ಅವನನ್ನು ಸಮೀಪಿಸಿ, "ಅಯ್ಯಾ ವಿಪ್ರ, ಏಳು. ಬಾ. ನಾನು ನಿನಗೆ ಅನಂತನನ್ನು ತೋರಿಸುತ್ತೇನೆ" ಎಂದು ಹೇಳಿ ಅವನ ಕೈಹಿಡಿದು ಅರಣ್ಯದೊಳಕ್ಕೆ ಕರೆದುಕೊಂಡು ಹೋದನು. ಅಲ್ಲಿ ಕೌಂಡಿನ್ಯನು ಒಂದು ನಗರವನ್ನು ನೋಡಿದನು. ಶುಭಪ್ರದವಾದ ರತ್ನಖಚಿತವಾದ ಸಿಂಹಾಸನದಲ್ಲಿ ಕೂತು ಆ ವೃದ್ಧ ವೇಷಧಾರಿ ತನ್ನ ನಿಜರೂಪ ಸೌಂದರ್ಯವನ್ನು ತೋರಿಸಿದನು. ಆ ರೂಪವನ್ನು ನೋಡಿದ ಕೌಂಡಿನ್ಯನು ಸ್ತೋತ್ರ ಮಾಡಲು ಆರಂಭಿಸಿದನು.

"ಸಚ್ಚಿದಾನಂದ, ಗೋವಿಂದ, ಶ್ರೀವತ್ಸಾಂಕಿತ, ನಿನಗೆ ನಮಸ್ಕಾರಗಳು. ನಿನ್ನ ದರ್ಶನಮಾತ್ರದಿಂದಲೇ ನನ್ನ ಪಾಪಗಳು ದುಃಖಗಳು ಹೋದವು. ನೀನೇ ಬ್ರಹ್ಮ. ವಿಷ್ಣು, ರುದ್ರಾತ್ಮಕನು. ವೈಕುಂಠವಾಸಿ, ನಿನ್ನಲ್ಲಿ ನಾನು ಶರಣು ಬಂದಿದ್ದೇನೆ. ಹೇ ಬ್ರಹ್ಮಾಂಡನಾಥ, ನಾನು ಪಾಪಿಯು. ಭಕ್ತಿಯಿಲ್ಲದವನು. ನಿನ್ನನ್ನು ಶರಣುಹೊಂದಿದ್ದೇನೆ. ನಿನ್ನ ಪಾದಗಳಲ್ಲಿ ನನ್ನ ಜನ್ಮ ಸಫಲವಾಗಬಲ್ಲದು. ನನ್ನ ಜೀವನವು ಧನ್ಯವಾಗಬಲ್ಲದು. ಅದರಿಂದಲೇ ನಿನ್ನಲ್ಲಿ ಶರಣು ಬರುತ್ತಿದ್ದೇನೆ" ಎಂದು ಕೌಂಡಿನ್ಯನು ಸ್ತುತಿಸಲು, ಪ್ರಸನ್ನನಾದ ಆ ಅನಂತನು ದಾರಿದ್ರ್ಯನಾಶನ, ಧರ್ಮಪ್ರಾಪ್ತಿ, ಶಾಶ್ವತ ವೈಕುಂಠ ಪ್ರಾಪ್ತಿ ಎಂದು ಮೂರು ವರಗಳನ್ನು ಕೊಟ್ಟನು. ಅಯ್ಯಾ, ಯುಧಿಷ್ಠಿರ, ಕೌಂಡಿನ್ಯನು ಆಗ ತಾನು ಮಾರ್ಗ ಮಧ್ಯದಲ್ಲಿ ಕಂಡ ವಿಚಿತ್ರಗಳನ್ನು ಕುರಿತು ಹೇಳಿ, ಅದರ ವಿಷಯವೇನು ಎಂಬುದನ್ನು ವಿಸ್ತರಿಸಿ ಹೇಳಬೇಕೆಂದು ಪ್ರಾರ್ಥಿಸಿದನು. ಅದಕ್ಕೆ ಅನಂತನು ಹೀಗೆ ಹೇಳಿದನು. "ಆ ಮಾವಿನ ಮರವು ಪೂರ್ವಜನ್ಮದಲ್ಲಿ ವಿದ್ಯಾಭಿಮಾನದಿಂದ ಮತ್ತನಾಗಿ, ವೇದಶಾಸ್ತ್ರಗಳನ್ನು ಸಂಪೂರ್ಣವಾಗಿ ತಿಳಿದವನು. ಅವನು ಗರ್ವಿತನಾಗಿ ಶಿಷ್ಯರಿಗೆ ವಿದ್ಯೆಯನ್ನು ಸ್ವಲ್ಪವಾದರೂ ಹೇಳಿಕೊಡಲಿಲ್ಲ. ಆ ಪಾಪದಿಂದ ವೃಕ್ಷವಾದನು. ಅದರ ಹಣ್ಣನ್ನು ಯಾರೂ ತಿನ್ನುವುದಿಲ್ಲ. ಆ ಹಸುವು ಪೂರ್ವಜನ್ಮದಲ್ಲಿ ಬ್ರಾಹ್ಮಣನೊಬ್ಬನಿಗೆ ಬಂಜರು ಭೂಮಿಯನ್ನು ಕೊಟ್ಟವನು. ನೀನು ಕಂಡ ವೃಷಭವು ಹಿಂದೆ ಧನವಂತನಾದರೂ ಸ್ವಲ್ಪವಾದರೂ ದಾನಮಾಡಲಿಲ್ಲ. ನೀನು ಕಂಡ ಎರಡು ಸರಸ್ಸುಗಳು ಪೂರ್ವದಲ್ಲಿ ಅಕ್ಕ ತಂಗಿಯರು. ಒಬ್ಬರಿಗೊಬ್ಬರು ಮಾತ್ರವೇ ದಾನ ಪ್ರದಾನಗಳನ್ನು ಮಾಡಿಕೊಳ್ಳುತ್ತಿದ್ದುದರಿಂದ ಈ ಸ್ಥಿತಿಯನ್ನು ಹೊಂದಿದರು. ಕ್ರೋಧವು ಅಧಿಕವಾಗಿದ್ದವನು ಕತ್ತೆಯಾದನು. ಮದಾಂಧನು ಆನೆಯಾದನು.

ನಿನ್ನ ಮನಸ್ಸು ಶುದ್ಧವಾಗಿದ್ದರಿಂದ ನಾನು ದ್ವಿಜರೂಪದಲ್ಲಿ ಬಂದೆ. ನೀನು ನೋಡಿದವರೆಲ್ಲರಿಗೂ ನನ್ನಿಂದ ಪಾಪಮೋಕ್ಷವು ಪ್ರಸಾದಿಸಲ್ಪಟ್ಟಿತು. ಅಯ್ಯಾ, ಮುನಿಯೇ, ನೀನು ನಕ್ಷತ್ರಮಂಡಲದಲ್ಲಿ ಪುನರ್ವಸು ಆಗಿ ನೆಲಸು." ಎಂದು ಹೇಳಿ, ಅನಂತನು ಕೌಂಡಿನ್ಯನಿಗೆ ವರ ಪ್ರಸಾದಿಸಿದನು. ಹೇ ಪಾಂಡವ, ನೀನೂ ಆ ವ್ರತವನ್ನು ಮಾಡು." ಎಂದು ಶ್ರೀಕೃಷ್ಣನು ಧರ್ಮರಾಜನಿಗೆ ಉಪದೇಶಿಸಿದನು. ಧರ್ಮರಾಜನು ಆ ವ್ರತವನ್ನು ಮಾಡಿ ಶತ್ರುಗಳನ್ನು ಸಂಹರಿಸಿ, ಕಳೆದುಕೊಂಡಿದ್ದ ರಾಜ್ಯವನ್ನು ಹೊಂದಬಲ್ಲವನಾದನು. ನಿನ್ನ ಜ್ಯೇಷ್ಠಪುತ್ರನಾದ ನಾಗನಾಥನಿಗೆ ಈ ವ್ರತವನ್ನು ಉಪದೇಶಮಾಡು. ನೀನು ಕೌಂಡಿನ್ಯನ ಗೋತ್ರದಲ್ಲಿ ಹುಟ್ಟಿದವನು. ಕೌಂಡಿನ್ಯನು ಮಾಡಿದ ಈ ವ್ರತವನ್ನು, ಸಾಯಂದೇವ, ನೀನೂ ಆಚರಿಸು." ಎಂದು ಶ್ರೀಗುರುವು ಆಜ್ಞೆ ಮಾಡಲು, ಸಾಯಂದೇವನು ಆ ವ್ರತವನ್ನು ಆಚರಿಸಿ ಶ್ರೀಗುರುವನ್ನೂ ಪೂಜಿಸಿದನು. ಶ್ರೀಗುರುವಿಗೆ ಗೀತವಾದ್ಯಗಳನ್ನು ಕೇಳಿಸಿ, ಭಕ್ತಿಯಿಂದ ನೀರಾಜನವನ್ನು ಕೊಟ್ಟನು. ನಂತರದಲ್ಲಿ ಶ್ರೀಗುರುವಿಗೂ, ಬ್ರಾಹ್ಮಣರಿಗೂ ಅವನು ಭೋಜನವಿಟ್ಟನು. ಹೀಗೆ ಶ್ರೀಗುರುವನ್ನು ಆರಾಧಿಸಿ ಸಂತೋಷಗೊಂಡ ಸಾಯಂದೇವನು ಶ್ರೀಗುರುವು ಹೋಗಿಬಾ ಎಂದು ಆಜ್ಞೆ ಕೊಡಲು, ತನ್ನ ಕುಟುಂಬದವರೊಡನೆ ಸ್ವಗ್ರಾಮವನ್ನು ಸೇರಿಕೊಂಡನು. ಭಾರ್ಯಾಪುತ್ರರನ್ನು ಗೃಹದಲ್ಲಿ ನಿಲ್ಲಿಸಿ, ಸಾಯಂದೇವನು ಮತ್ತೆ ಶ್ರೀಗುರುವನ್ನು ಸೇವಿಸಲು ಹಿಂತಿರುಗಿ ಬಂದನು. ಅಯ್ಯಾ ನಾಮಧಾರಕ, ಈ ವಿಧದಲ್ಲಿ ನಿಮ್ಮ ವಂಶದ ಪೂರ್ವೀಕನಾದ ಸಾಯಂದೇವನು ಮಾಡಿದ ಪೂಜಾದಿಗಳಿಂದ ಭಗವಂತನು ಅವನಿಗೆ ಪ್ರಸನ್ನನಾದನು. ಶಿಷ್ಯ, ಇದು ನಿನ್ನ ಪೂರ್ವೀಕರು ಅರ್ಜಿಸಿದ ಪರಮದಿವ್ಯವಾದ ನಿಧಿ. ಆ ನಿಧಿಯೇ ಶ್ರೀ ನೃಸಿಂಹ ಸರಸ್ವತಿ. ಗಂಗಾಧರ ತನಯನು ವಿನಯದಿಂದ ಶ್ರೀಗುರುವಿನ ಸಮೀಪದಲ್ಲಿದ್ದುಕೊಂಡು ಶ್ರೋತೃಗಳಿಗೆ ಈ ಚರಿತ್ರೆಯನ್ನು ಹೇಳಿದನು. ಇದನ್ನು ಶ್ರದ್ಧೆಯಿಂದ ಕೇಳಿದ ಮನುಷ್ಯನು ಅಭೀಷ್ಟಸಿದ್ಧಿಯನ್ನು ಹೊಂದಬಲ್ಲನು. ಅವನಿಗೆ ಪುನರ್ಜನ್ಮವಿರುವುದಿಲ್ಲ. 

ಇಲ್ಲಿಗೆ ನಲವತ್ತಮೂರನೆಯ ಅಧ್ಯಾಯ ಮುಗಿಯಿತು.

||ಶ್ರೀಗುರುಚರಿತ್ರೆ - ನಲವತ್ತೆರಡನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ|| 

ಶಿಷ್ಯಾಗ್ರಣಿಯಾದ ನಾಮಧಾರಕನು, "ಹೇ ಯೋಗೀಶ್ವರ, ಶ್ರೀಗುರುವು ಹೇಳಿದ ಕಾಶೀಯಾತ್ರಾ ವಿಧಾನವನ್ನು ಹೇಳು." ಎಂದು ಕೋರಲು ಸಿದ್ಧಮುನಿ ಹೇಳಿದರು.

"ಅಯ್ಯಾ ನಾಮಧಾರಕ, ಸಾಯಂದೇವನಿಗೆ ಶ್ರೀಗುರುವು ಹೇಳಿದ ರೀತಿಯಲ್ಲಿ, ಆ ತಾಪಸಿಯು ಬಾಲಬ್ರಹ್ಮಚಾರಿಗೆ ಉಪದೇಶಿಸಿದ ರೀತಿಯಲ್ಲಿ ವಿಶ್ವೇಶ್ವರ ದರ್ಶನ, ಅಂತರ್ಗೃಹಯಾತ್ರೆ, ‘ದಕ್ಷಿಣೋತ್ತರ ಮಾನಸ’ ಎಂದು ಕರೆಯಲ್ಪಡುವ ಪಂಚಕ್ರೋಶಿಯನ್ನು ಯಥಾತಥವಾಗಿ ನಿನಗೆ ಹೇಳುತ್ತೇನೆ. ಸ್ನಾನ, ದಾನ, ಅರ್ಚನೆ, ಶ್ರಾದ್ಧಗಳಿಂದ ಕೂಡಿ ಶುಕ್ಲಕೃಷ್ಣಪಕ್ಷಗಳಯಾತ್ರೆಯಲ್ಲಿ ಭವಾನೀಶ್ವರ, ಹರಿ, ಡುಂಡಿ, ದಂಡಪಾಣಿ, ಭೈರವರ ಆಲಯಗಳು, ಕಾಶಿ ಗಂಗಾನದಿ ಮುಂತಾದ ದೇವತೆಗಳು, ಶಿವಲಿಂಗಗಳೆಲ್ಲದರ ಪೂಜೆ, ಪ್ರತಿಷ್ಠೆಮಾಡಿ ನೈವೇದ್ಯವಿಟ್ಟು ನಿನ್ನ ಹೆಸರಿನಲ್ಲಿ ಅಂಕಿತವಾಗುವಂತೆ ಲಿಂಗ ಸ್ಥಾಪನೆ ಮಾಡು. ಅಯ್ಯಾ ವಟು, ಪ್ರತಿದಿನವೂ ಪೂಜೆಮಾಡು. ಕಾಶಿಖಂಡದಲ್ಲಿ ಅಂತರ್ಗೃಹಯಾತ್ರೆ ಮಾಡು. ಹೀಗೆ ವಿಶ್ವೇಶ್ವರಯಾತ್ರಾ ವಿಧಾನವನ್ನು ನಿನಗೆ ಹೇಳಿದೆ. ಅಯ್ಯಾ ಬ್ರಹ್ಮಚಾರಿ, ನಿನ್ನ ಹೆಸರಿಗೆ ಅಂಕಿತಮಾಡಿ ಲಿಂಗವೊಂದನ್ನು ಪ್ರತಿಷ್ಠೆ ಮಾಡು. ಈ ವಿಧದಲ್ಲಿ ಕಾಶಿಯಾತ್ರೆ ಮಾಡು. ನಿನ್ನ ಕೋರಿಕೆ ನೆರವೇರುವುದು. ನಿನಗೆ ಶಂಕರನು ಪ್ರಸನ್ನನಾಗುವನು. ನಿನ್ನ ಮೇಲೆ ಗುರುದಯೆ ಪ್ರಸರಿಸುವುದು. ನಿನ್ನ ಗುರುವನ್ನು ಸ್ಮರಿಸು." ಎಂದು ಹೇಳಿ ಆ ತಾಪಸಿ ಅದೃಶ್ಯನಾದನು. ಹೀಗೆಂದು ಸಾಯಂದೇವನು ಕನ್ನಡ ಭಾಷೆಯಲ್ಲಿ ಶ್ರೀಗುರುವನ್ನು ಸ್ತುತಿಸಲಾಗಿ ಶ್ರೀಗುರುವು ಅವನಲ್ಲಿ ಪ್ರೇಮವನ್ನು ತೋರಿದನು.

ಆ ಬ್ರಹ್ಮಚಾರಿ ವಿಸ್ಮಿತನಾಗಿ, ‘ಗುರುವು ನನ್ನಲ್ಲಿ ದಯೆ ತೋರಿಸಿದನು. ನನ್ನ ಕರ್ತವ್ಯವು ನಿಶ್ಚಯವಾಯಿತು. ನಾನು ಆರಾಧಿಸದಿದ್ದರೂ ಈ ಪರಮೇಶ್ವರನು ನನ್ನ ಬಳಿಗೆ ಬಂದನು. ಯಜ್ಞ ದಾನ, ತಪಸ್ಸುಗಳನ್ನು ಮಾಡಿದರೂ ತಕ್ಷಣವೇ ಲಭ್ಯವಾಗದ ಈಶ್ವರನು ಗುರುಪ್ರಸಾದದಿಂದಲೇ ಪ್ರಯತ್ನವಿಲ್ಲದೆ ಲಭಿಸಿದನು.’ ಎಂದು ಯೋಚಿಸುತ್ತಾ, ಆ ಬ್ರಹ್ಮಚಾರಿ ಗುರುವು ಉಪದೇಶಿಸಿದ ರೀತಿಯಲ್ಲಿ ಕಾಶಿಯಾತ್ರೆ ಮಾಡಿದನು. ಆ ಬಾಲಕನು ಪೂಜೆಮಾಡುತ್ತಲೇ ಶಿವನು ಪ್ರಸನ್ನನಾಗಿ ಆ ಬಾಲಕನಿಗೆ ಕಾಣಿಸಿಕೊಂಡು, "ಅಯ್ಯಾ ವಟುವೇ, ವರವನ್ನು ಕೇಳಿಕೋ." ಎಂದನು. ತ್ವಷ್ಟ ಬಹಳ ಸಂತೋಷಗೊಂಡು ತನ್ನ ವೃತ್ತಾಂತವನ್ನೆಲ್ಲಾ ಬಿನ್ನವಿಸಿಕೊಂಡನು. ಆಗ ಶಂಕರನು, " ಹೇ ಬಾಲಕ, ನನ್ನ ವರಪ್ರಭಾವದಿಂದ ನೀನು ಬಹುತ್ವರೆಯಾಗಿ ಸರ್ವವಿದ್ಯೆಗಳನ್ನೂ ಕಲಿತವನಾಗುವೆ. ಗುರು ಭಕ್ತಿಯನ್ನು ತೋರಿಸಿದೆ. ವಿಶ್ವಕರ್ಮನಾಗಿ ಸೃಷ್ಟಿಕರ್ತನಾದ ಬ್ರಹ್ಮನಂತೆ ನೀನು ತ್ವಷ್ಟನಾಗುತ್ತೀಯೆ." ಎಂದು ಹೇಳಿದನು. ವರಗಳನ್ನು ಪಡೆದು ತ್ವಷ್ಟನು ತನ್ನ ಹೆಸರಿನಲ್ಲಿ ಒಂದು ಉತ್ತಮಲಿಂಗವನ್ನು ಸ್ಥಾಪಿಸಿದನು. ಗುರು ಕುಟುಂಬವು ಕೇಳಿದ್ದುದನ್ನೆಲ್ಲವನ್ನೂ ಆ ತ್ವಷ್ಟ ನಿರ್ಮಿಸಿ, ತೆಗೆದುಕೊಂಡು ಹೋಗಿ ನಮಸ್ಕರಿಸಿ, ಕ್ರಮವಾಗಿ ಗುರು, ಗುರುಪತ್ನಿ, ಗುರುಪುತ್ರ, ಗುರುಪುತ್ರಿ ಎಲ್ಲರಿಗೂ ಒಪ್ಪಿಸಿ ಪಾದಾಭಿವಂದನೆಗಳನ್ನು ಮಾಡಿದನು. ಗುರುವು, "ಹೇ ಶಿಷ್ಯ, ನಿನ್ನ ಭಕ್ತಿಗೆ ಸಂತುಷ್ಟನಾಗಿದ್ದೇನೆ. ನೀನು ಜ್ಞಾನರಾಶಿಯು. ನೀನು ಚಂದ್ರಸೂರ್ಯರಿರುವವರೆಗೂ ಚಿರಂಜೀವಿಯಾಗಿರು. ಸ್ವರ್ಗದಲ್ಲಿ, ಮರ್ತ್ಯಲೋಕದಲ್ಲಿ, ಪಾತಾಳದಲ್ಲಿ ನೀನು ಕಲಿತದ್ದನ್ನು ವ್ಯಾಪಕವಾಗುವಂತೆ ಮಾಡು." ಎಂದು ಆಣತಿ ಕೊಟ್ಟನು. ತ್ವಷ್ಟ ತನ್ನ ಆಶ್ರಮಕ್ಕೆ ಹೋದನು. 

ಈ ವೃತ್ತಾಂತವನ್ನು ಈಶ್ವರನು ಪಾರ್ವತಿಗೆ ಹೇಳಿ, "ಹೇ ಪಾರ್ವತಿ, ಗುರುಭಕ್ತಿ ಇಂತಹುದು. ಭವಸಾಗರದಿಂದ ತರಿಸಬಲ್ಲ ಶಕ್ತಿ ಭೂಲೋಕದಲ್ಲಿ ಗುರುವೊಬ್ಬನಿಗೇ ಇರುವುದು. ಗುರುವನ್ನು ಭಕ್ತಿಯಿಂದ ಪೂಜಿಸುವವನಿಗೆ ತ್ರಿಮೂರ್ತಿಗಳೂ ಅಧೀನರಾಗಿರುತ್ತಾರೆ. ಸ್ವಯಂ ತ್ರಿಮೂರ್ತಿಗಳು ಶ್ರೀಗುರುಪಾದಗಳ ಸಮೀಪವನ್ನು ಸೇರುವರು. ಗುರುವಿಲ್ಲದೆ ಗತಿಯಿಲ್ಲ ಎಂದು ಶೃತಿಸ್ಮೃತಿಗಳು ಕೂಡಾ ಹೇಳುತ್ತಿವೆ." ಹೀಗೆ ಪಾರ್ವತಿಗೆ ಪರಮೇಶ್ವರನು ವಿಸ್ತಾರವಾಗಿ ಹೇಳಿದನು ಎಂಂದು ಭಕ್ತವತ್ಸಲನಾದ ಶ್ರೀಗುರುವು ಸಾಯಂದೇವನಿಗೆ ಹೇಳಿದರು. ಅಷ್ಟರಲ್ಲಿ ಸೂರ್ಯನು ಉದಯಿಸಿದನು. ಸಾಯಂದೇವನು ಶ್ರೀಗುರುವಿಗೆ ನಮಸ್ಕಾರಮಾಡಿ, " ಸ್ವಾಮಿ, ದೀನರಿಗೆ ನಾಥನು ನೀವೇ! ಕಥಾಶ್ರವಣಕಾಲದಲ್ಲಿ ನಾನೊಂದು ವಿಚಿತ್ರವನ್ನು ಕಂಡೆ. ನಿಮ್ಮ ಜೊತೆಯಲ್ಲಿ ನಾನೂ ಅಪೂರ್ವವಾದ ಕಾಶಿ ಕ್ಷೇತ್ರವೆಲ್ಲವನ್ನೂ ನೋಡಿದೆ. ಅದೇನು ಎಚ್ಚೆತ್ತಿರುವಾಗಲೇ ಸ್ವಪ್ನವೋ!" ಎಂದು ಹೇಳಿ ಮತ್ತೆ ಶ್ರೀಗುರು ಪಾದಗಳಿಗೆ ನಮಸ್ಕರಿಸಿ, ಶ್ರೀಗುರುವನ್ನು, "ನೀವೇ ಪರಮಹಂಸರು. ಶ್ರೀ ನೃಸಿಂಹ ಸರಸ್ವತಿ, ಭಕ್ತರ ಮನಸ್ಸುಗಳಲ್ಲಿ ನಿವಾಸಮಾಡುತ್ತೀರಿ." ಎಂದು ಸ್ತುತಿಸಿದನು. ಅಯ್ಯಾ ನಾಮಧಾರಕ ನಿನ್ನ ಪೂರ್ವಜನ ಆ ಸ್ತೋತ್ರವನ್ನು ಕೇಳು.

"ಹಿಂದೆ ಬ್ರಹ್ಮನಾದ ನೀನು ಬಹುರೂಪಿಯಾಗಿ ಬ್ರಹ್ಮಾಂಡವನ್ನು ಸೃಷ್ಟಿಸಿದೆ. ಅದರಿಂದ ಜಗತ್ತೆಲ್ಲವೂ ಬಂತು. ನಿನ್ನಲ್ಲಿ ನೀನೇ ರಮಿಸುತ್ತಾ ಈ ಭೂಮಿಯಲ್ಲಿ ಅವತರಿಸಿ ದುಷ್ಟ ಸಂಹಾರ ಮಾಡುತ್ತಿದ್ದೀಯೆ. ಶ್ರೀ ನೃಸಿಂಹಸರಸ್ವತಿ ನಿನ್ನ ಪಾದಪದ್ಮಗಳು ಶ್ರೇಷ್ಠವಾದವು. ಕಲಿಯುಗದಲ್ಲಿ ಸದ್ಧರ್ಮಗಳು, ಆಶ್ರಮಗಳು ಎನ್ನುವ ಸೇತುಗಳು ಶಿಥಿಲವಾಗಿ ಅವನ್ನು ಮತ್ತೆ ದೃಡ್ಃಅವಾಗಿ ನಿರ್ಮಿಸಿದ ಶ್ರೀ ನೃಸಿಂಹಸರಸ್ವತಿ ನಿನ್ನ ಶ್ರೇಷ್ಠವಾದ ಪಾದಪದ್ಮಗಳಿಗೆ ನಮಸ್ಕರಿಸುತ್ತಿದ್ದೇನೆ. ಮೂರ್ತೀಭವಿಸಿದ ಸತ್ತ್ವರೂಪನು. ಮೂರೂ ಆಶ್ರಮಗಳಲ್ಲಿ ಇರುವ ಈ ಜನರೆನ್ನುವ ಮೃಗಗಳು ಕ್ರೀಡಿಸುತ್ತಿರುವಂತೆ ಈ ಸಂಸಾರದಿಂದ ನಮ್ಮನ್ನು ಉದ್ಧರಿಸುವಂತಹ ಶ್ರೀ ನೃಸಿಂಹಸರಸ್ವತಿ ನಿಮ್ಮ ಶ್ರೇಷ್ಠವಾದ ಪಾದಪದ್ಮಗಳಿಗೆ ನಮಸ್ಕಾರವು. ಮೂಕನಿಗೆ ಮಾತು, ಕುರುಡನಿಗೆ ಕಣ್ಣು, ಬಂಜೆಗೆ ಸುಪುತ್ರ, ಮೃತನಿಗೆ ಪ್ರಾಣ, ವಿಧವೆಗೆ ಸೌಭಾಗ್ಯ, ಒಣಗಿದ ಕಟ್ಟಿಗೆಗೆ ಚಿಗುರು ಕೊಡಬಲ್ಲ ಮಹಿಮೆ ನಿನ್ನದು. ಮೂರುಲೋಕಗಳನ್ನು ನಿಲ್ಲಿಸಬಲ್ಲ ಸಮರ್ಥನು ನೀನು. ಹೇ ಶ್ರೀನೃಸಿಂಹಸರಸ್ವತಿ ಶ್ರೇಷ್ಠವಾದ ನಿನ್ನ ಪಾದಪದ್ಮಗಳಿಗೆ ನಮಸ್ಕಾರವು. ಮುಕ್ತಿಯೇ ನಿನ್ನ ನಿವಾಸವು. ಕೋರಿಕೆಗಲನ್ನು ಕೊಡುವ ಕಾಮಧೇನುವು. ದಾರಿದ್ರ್ಯವೆನ್ನುವ ಅಗ್ನಿಗೆ ನೀನೇ ಮೇಘವು. ದುಷ್ಕಾರ್ಯಗ್ಳಿಗೆ ನೀನೇ ದಾವಾಗ್ನಿ. ಹೇ ಮಹಾನುಭಾವ, ಶ್ರೇಷ್ಠವಾದ ನಿನ್ನ ಪಾದಪದ್ಮಗಳಿಗೆ ನಮಸ್ಕಾರವು. ಹೇ ಓಗೀಶ್ವರ, ನಿನ್ನ ಪ್ಪದಗಳು ತೀರ್ಥಗಳಿಗೆ ಆಶ್ರಯವು. ಸಜ್ಜನರಿಗೆ ಜೀವನವು. ಸುಕೃತಗಳಿಗೆ ಸ್ಥಾನವಾದ ನೀನು ಮಹಾಪಾವನನು. ಶ್ರೀ ನೃಸಿಂಹಸರಸ್ವತಿ ಶ್ರೇಶ್ಃಠವಾದ ನಿನ್ನ ಪಾದಪದ್ಮಗಳಿಗೆ ನಮಸ್ಕಾರವು. ಅಗ್ನಿ, ಜಲ, ಸೂರ್ಯ, ಚಂದ್ರ, ಭೂಮಿ, ಆಕಾಶ, ವಾಯು, ಆತ್ಮ ಎನ್ನುವ ಎಂಟೂ ನಿನ್ನ ಮೂರ್ತಿಗಳು ಎಂದು ಹೇಳುತ್ತಾರೆ. ನೀನು ವಿಶ್ವಮಯನು. ಓಂಕಾರರೂಪನಾಗಿ ಈಶ್ವರನಾದ ನಿನ್ನಂತಹ ಇತರರು ಇಲ್ಲ. ಹೇ ಶ್ರೀ ನೃಸಿಂಹಸರಸ್ವತಿ ಶ್ರೇಷ್ಟವಾದ ನಿನ್ನ ಪಾದಪದ್ಮಗಳಿಗೆ ನಮಸ್ಕಾರವು. ಕಮಂಡಲ ದಂಡಗಳನ್ನು ಧರಿಸಿದ್ದೀಯೆ. ಶಾಂತನು. ಶ್ರೀ ಭೀಮಾನದಿ ಅಮರಜಾನದಿ ಸಂಗಮಸ್ಥಾನವು ನಿನ್ನ ನಿವಾಸವು. ಶ್ರೀ ನೃಸಿಂಹ ಸರಸ್ವತಿ ನಿನ್ನ ಶ್ರೇಷ್ಠವಾದ ಪಾದಪದ್ಮಗಳಿಗೆ ನಮಸ್ಕಾರವು. ಈ ಶ್ರೀಗುರುವಿನ ಅಷ್ಟಕವನ್ನು ನಿತ್ಯವೂ ಪಠಿಸುವವನು ಬಲ, ಸಿರಿ, ಬುದ್ಧಿ, ತೇಜಸ್ಸು, ಆರೋಗ್ಯವಾದ ದೃಢಶರೀರ, ವರ್ಚಸ್ಸು, ಪುತ್ರಕಳತ್ರಮಿತ್ರರಿಂದ ಸುಖ, ದೀರ್ಘಾಯು, ಆರೋಗ್ಯಗಳಿಂದ ಇಹಲೋಕಸುಖವನ್ನು ಯಾವಾಗಲೂ ಪಡೆಯುತ್ತಾ ಕೊನೆಯಲ್ಲಿ ಮುಕ್ತಿಯನ್ನು ಹೊಂದಬಲ್ಲನು."

ಹೀಗೆ ಗುರುನಾಥಾಷ್ಟಕದಿಂದ ಶ್ರೀಗುರುವನ್ನು ಸ್ತುತಿಸಿ, ದಂಡಪ್ರಣಾಮ ಮಾಡಿ ಗಂಟಲು ಗದ್ಗದವಾಗಿ, ಪುಳಕಿತಶರೀರನಾಗಿ ಭಕ್ತಿಯಿಂದ ಸಾಯಂದೇವನು ಮತ್ತೆ ಹೀಗೆ ನುಡಿದನು. "ಹೇ ಸ್ವಾಮಿ, ನೀನು ತ್ರಿಮೂರ್ತಿಗಳ ಅವತಾರನಾದವನು. ಹೇ ದೇವದೇವ, ಜಗದ್ಗುರು, ನೀನು ಸತ್ಯವಾಗಿಯೂ ವಿಶ್ವನಾಥನೇ! ನಿನ್ನ ಸನ್ನಿಧಿಯಲ್ಲೇ ಕಾಶಿಪುರವು ಇದೆ."

ಹೀಗೆ ಆ ಸಾಯಂದೇವನು ಭಕ್ತಿಯಿಂದ ಶ್ರೀಗುರುವನ್ನು ಸ್ತುತಿಸಿದನು. ಬಹು ಸಂತುಷ್ಟರಾದ ಶ್ರೀಗುರುವು ಅವನಿಗೆ, "ಸಾಯಂದೇವ, ಇಂದು ನಿನಗೆ ಕಾಶಿಕ್ಷೇತ್ರವನ್ನು ಚೆನ್ನಾಗಿ ತೋರಿಸಿದ್ದೇನೆ. ನಿನ್ನ ಜೊತೆ ನಿನ್ನ ಇಪ್ಪತ್ತೊಂದು ತಲೆಮಾರಿನವರೂ ಆ ಫಲವನ್ನು ಹೊಂದಬಲ್ಲರು. ನನ್ನ ಸನ್ನಿಧಿಯಲ್ಲಿದ್ದುಕೊಂಡು ಯಾವಾಗಲೂ ನನ್ನ ಸೇವೆ ಮಾಡಿಕೊಂಡಿರು. ಮ್ಲೇಚ್ಛನ ಸೇವೆಯನ್ನು ಬಿಟ್ಟುಬಿಡು. ನಿನ್ನ ಹೆಂಡತಿಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ನನ್ನ ದರ್ಶನ ಮಾಡಿಸು." ಎಂದು ಅವನಿಗೆ ಆಣತಿಮಾಡಿ ಶ್ರೀಗುರುವು ಮಠಕ್ಕೆ ಬಂದರು.

ನಾಮಧಾರಕ ನಿನ್ನ ಪೂರ್ವಜನು ಹಾಗೆ ಗುರ್ವಾಜ್ಞೆಯಂತೆ ಭಾದ್ರಪದ ಶುಕ್ಲ ಚತುರ್ದಶಿಯ ದಿನ ಕುಟುಂಬಸಹಿತನಾಗಿ ಮಠಕ್ಕೆ ಬಂದನು. ಸಾಯಂದೇವನು ಪ್ರೇಮದಿಂದ ಸದ್ಗುರುವನ್ನು ಹೀಗೆ ಸ್ತುತಿಸಿದನು. "ಓಂ ನಮ್ಶ್ಚಂದ್ರಮೌಳಿ, ಪ್ರಭು, ತ್ರಿಮೂರ್ತಿಸ್ವರೂಪನು ನೀನೇ! ತ್ರಿಮೂರ್ತಿಗಳೇ ನೀನಾಗಿ ಅವತರಿಸಿ ಭೂಲೋಕದಲ್ಲಿ ಸದ್ಗುರುವಾದಿರಿ. ಪೂರ್ವಜನ್ಮದಲ್ಲಿ ಮಾಡಿದ್ದ ಪಾಪರಾಶಿಗಳು, ನಿಮ್ಮ ದರ್ಶನದಿಂದ, ಕ್ಷಣದಲ್ಲಿ ನಾಶವಾಗಿ ಹೋಗಿ, ನಾವೆಲ್ಲರೂ ಪವಿತ್ರರಾದೆವು. ಗಂಗೆ ಪಾಪವನ್ನು, ಚಂದ್ರನು ತಾಪವನ್ನು, ಕಲ್ಪತರುವು ದೈನ್ಯವನ್ನು ಹೋಗಲಾಡಿಸಬಲ್ಲವು. ಒಂದೊಂದರಲ್ಲಿ ಒಂದೊಂದು ಗುಣವಿದೆ. ನಿನ್ನ ದರ್ಶನದಿಂದ ತಕ್ಷಣವೇ ಫಲತ್ರಯವು ಲಭಿಸುವುದು." ಎಂದು ಆನಂದಭರಿತನಾಗಿ ಸಾಯಂದೇವನು ಶ್ರೀಗುರು ಸತ್ಕಥೆಯನ್ನು ಕನ್ನಡ ಭಾಷೆಯಲ್ಲಿ ರಚಿಸಿ ರಾಗಸಹಿತವಾಗಿ ಗಾನಮಾಡಿದನು. ‘ಯೋಗಿಜನರಿಗೆ ಶಿಷ್ಟನಾದ ಶ್ರೀನೃಸಿಂಹಸರಸ್ವತಿಗೆ ನಾನು ವಂದಿಸುತ್ತಿದ್ದೇನೆ. ಹೇ ಸ್ವಾಮಿ, ನೀನು ಸಗುಣಬ್ರಹ್ಮನು. ಸಜ್ಜನರಲ್ಲಿ ಪ್ರೀತಿಯುಳ್ಳವನು. ಹೇ ಗುರುಮೂರ್ತಿ, ಸನ್ಯಾಸಿಶ್ರೇಷ್ಠನು ನೀನು. ಹರಿದಾಸ ಪ್ರಿಯ, ಕರುಣಾನಿಲಯ, ಸ್ವಭಕ್ತಪರಿಪಾಲಕ, ಪ್ರೇಮಾತಿಶಯ, ನಿನ್ನ ಚರಣಸ್ಪರ್ಶದಿಂದ ಗಂಧರ್ವಪುರವೇ ಕೈಲಾಸವಾಯಿತು. ಹೇ ನೃಸಿಂಹಸರಸ್ವತಿ ಯತೀಶ್ವರ, ಜಯವಾಗಲಿ. ಜಯವಾಗಲಿ. ಹೇ ಸದ್ಗುರುಮೂರ್ತಿ, ನೀನೇ ಮಹಾತ್ಮನು. ದಯಾನಿಧಿ, ನಮ್ಮನ್ನು ಪಾಪರಹಿತರನ್ನಾಗಿ ಮಾಡಿ ರಕ್ಷಿಸು. ಹೇ ಸನ್ಮೂರ್ತಿ, ನೀನು ಅತ್ರಿಸುತನಾಗಿದ್ದೀಯೆ. ನಿನಗೆ ವಂದನವು. ಮಾಯೆಯನ್ನು ನಿವಾರಿಸು. ನನಗೆ ಭಕ್ತಿ ಸುಖಗಳನ್ನು ನೀಡು. ಹೇ ಸದ್ಗುರುಮೂರ್ತಿ, ನಿನಗೆ ಜಯವಾಗಲಿ. ಜಯವಾಗಲಿ. ಜಗತ್ಕಾರಣಕ್ಕಾಗಿ ನರರೂಪವನ್ನು ಧರಿಸಿದವನೇ, ಕೃಪಾಘನ, ವಿಶ್ವವ್ಯಾಪ್ತಿಯದ ಕೀರ್ತಿಯುಳ್ಳವನೇ, ಪಾಪರಾಹಿತ್ಯವನ್ನು ಉಂಟುಮಾಡಿ ನಮ್ಮನ್ನು ರಕ್ಷಿಸು."

ನಾಮಧಾರಕ ಆ ದಿನವೇ ಧನ್ಯವು. ಮನೆಯಲ್ಲಿನ ಎಲ್ಲರ ಕಷ್ಟಸುಖಗಳನ್ನು ಭಕ್ತವತ್ಸಲನಾದ ಆ ಭಗವಂತನು ಸಾಯಂದೇವನಲ್ಲಿ ವಿಚಾರಿಸಿದನು. ಪುತ್ರಾದಿಗಳ ಮತ್ತೆಲ್ಲರ ಯೋಗಕ್ಷೇಮವನ್ನು ಬಿನ್ನವಿಸಿ ಸಾಯಂದೇವನು ತನ್ನ ಇಬ್ಬರು ಮಕ್ಕಳನ್ನು ಶ್ರೀಗುರು ಪಾದಗಳಲ್ಲಿ ನಿಲ್ಲಿಸಿದನು. ಜ್ಯೇಷ್ಠಪುತ್ರನಾದ ನಾಗನಾಥನಲ್ಲಿ ಶ್ರೀಗುರುವಿನ ಕೃಪೆ ಅಧಿಕ. ದಯಾನಿಧಿಯಾದ ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು, ಸಾಯಂದೇವನಿಗೆ, "ಅಯ್ಯಾ, ನಿನ್ನ ದೊಡ್ಡ ಮಗನು ಸಂಪೂರ್ಣ ಆಯುಸ್ಸಿನಿಂದ ನಿನ್ನ ವಂಶವನ್ನು ಉದ್ಧರಿಸುವನು. ಇವನೆ ನನ್ನ ಭಕ್ತನಾಗಿ ಸಿರಿಸಂಪದಗಳು ಇರುವವನಾಗುತ್ತಾನೆ. ಇನ್ನುಮೇಲೆ ನೀನು ಮ್ಲೇಛ್ಛಸೇವೆ ಮಾಡಬಾರದು. ಈಕೆ, ನಿನ್ನ ಭಾರ್ಯೆ, ಪತಿವ್ರತೆ. ಅದೃಷ್ಟವಂತಳು. ನಿಮಗೆ ಇನ್ನೂ ನಾಲ್ಕು ಮಕ್ಕಳು ಜನಿಸುತ್ತಾರೆ. ನಿನ್ನ ಕುಲವೆಲ್ಲ ಸಂಪದಗಳಿಂದ ತುಂಬಿರುತ್ತವೆ. ಆದ್ದರಿಂದ ನೀನು ನನ್ನನ್ನೇ ಸೇವಿಸು. ಸಾಯಂದೇವ, ಈ ನಿನ್ನ ಜ್ಯೇಷ್ಠಕುಮಾರ ನನ್ನ ಸೇವಕನು. ನನ್ನ ಅನುಗ್ರಹದಿಂದ ಇವನ ಕೀರ್ತಿ ಎಲ್ಲಕಡೆಯೂ ವ್ಯಾಪಿಸುತ್ತದೆ." ಎಂದು ಹೇಳಿ, " ತಕ್ಷಣವೇ ಸಂಗಮಸ್ಥಾನಕ್ಕೆ ಹೋಗಿ ವಿಧಿವಿಧಾನವಾಗಿ ಸ್ನಾನಮಾಡಿ ಮತ್ತೆ ನನ್ನ ಎದುರಿಗೆ ಬಾ." ಎಂದು ಆದೇಶಕೊಡಲು ಆ ದ್ವಿಜನು ಹೆಂಡತಿ ಮಕ್ಕಳೊಡನೆ ಹೋಗಿ ಸ್ನಾನ ಮಾಡಿ ಅಶ್ವತ್ಥವೃಕ್ಷವನ್ನು ಅರ್ಚಿಸಿ ಮತ್ತೆ ಶ್ರೀಗುರು ಸನ್ನಿಧಿಗೆ ಬಂದನು. ಅಂದಿನ ದಿನ ಆ ಗ್ರಾಮದಲ್ಲಿನ ಜನರು ಸಂತೋಷದಿಂದ ಅನಂತವ್ರತವನ್ನು ಆಚರಿಸಿ ಅಲ್ಲಿಗೆ ಬಂದು ಶ್ರೀಗುರುವನ್ನು ಭಕ್ತಿಯಿಂದ ಪೂಜಿಸಿದರು.

ಶ್ರೀಗುರುವು ಸಾಯಂದೇವನಿಗೆ, "ಅಯ್ಯಾ ಸಾಯಂದೇವ, ಈ ದಿನ ಅನಂತವ್ರತವಲ್ಲವೇ? ಪೂರ್ವದಲ್ಲಿ ಕೌಂಡಿನ್ಯನೆಂಬ ಋಷಿಯು ಸರ್ವಕಾಮದಗಳನ್ನೂ ತೀರಿಸುವ ಅನಂತನ ವ್ರತವನ್ನು ಮಾಡಿದನು." ಎಂದು ಹೇಳಿದರು. ಸಾಯಂದೇವನು ಸದ್ಗುರುವಿಗೆ ನಮಸ್ಕರಿಸಿ, "ಸ್ವಾಮಿ, ಈ ವ್ರತವನ್ನು ಪೂರ್ವದಲ್ಲಿ ಕೌಂಡಿನ್ಯ ಋಷಿಯು ಹೇಗೆ ಮಾಡಿದನು? ವ್ರತವಿಧಾನವನ್ನು ಆದ್ಯಂತವಾಗಿ ಹೇಳುವ ಕೃಪೆಮಾಡಿ." ಎಂದು ಪ್ರಾರ್ಥಿಸಲು, ಅವನ ಪ್ರಶ್ನೆಯನ್ನು ಕೇಳಿದ ಶ್ರೀಗುರುವು ಸಂತೋಷಪಟ್ಟವರಾಗಿ ವ್ರತವನ್ನು ವಿಸ್ತಾರವಾಗಿ ಹೇಳಿದರು.

ಇಲ್ಲಿಗೆ ನಲವತ್ತೆರಡನೆಯ ಅಧ್ಯಾಯ ಮುಗಿಯಿತು.

||ಶ್ರೀಗುರುಚರಿತ್ರೆ - ನಲವತ್ತೊಂದನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಾಮಧಾರಕನು, "ಸ್ವಾಮಿ, ಸಿದ್ಧಪುರುಷ, ಜಯವಾಗಲಿ. ಜಯವಾಗಲಿ. ನೀವು ಮಹಾಪುರುಷರು. ಶ್ರೀಗುರುವಿನ ಚರಿತ್ರೆಯನ್ನು ನನಗೆ ತಿಳಿಸಿದ್ದೀರಿ. ಅದರಿಂದ ನಾನು ಧನ್ಯನಾದೆ. ನನ್ನ ಜ್ಞಾನವು ಪ್ರಕಾಶಗೊಂಡಿತು. ಆನಂದಬ್ರಹ್ಮಕಲ್ಪವಾದ ಗುರುಸ್ಮೃತಿಯನ್ನು ನೀವು ಪ್ರಕಾಶಗೊಳಿಸಿದಿರಿ. ಹಿಂದೆ ನಮ್ಮ ವಂಶಸ್ಥನು ಶ್ರೀಗುರುವನ್ನು ಹೇಗೆ ಪೂಜಿಸಿದರು? ನೀವು ಸಿದ್ಧರು. ಮಹಾಜ್ಞಾನಿ. ಶ್ರೀಗುರುವಿನ ಸನ್ನಿಧಿಯಲ್ಲೇ ಸದಾ ನಿವಸಿಸಿದ್ದೀರಿ. ಅ ನನ್ನ ಪೂರ್ವೀಕನು ಶ್ರೀಗುರುವಿಗೆ ಹೇಗೆ ಶಿಷ್ಯನಾದನು ಎಂಬುದನ್ನು ಹೇಳಿ." ಎಂದು ಕೋರಿದನು. ಅದನ್ನು ಕೇಳಿದ ಸಿದ್ಧಮುನಿಯು ಹೇಳಲು ಆರಂಭಮಾಡಿ, " ಅಯ್ಯಾ ಶಿಷ್ಯ, ನಾಮಧಾರಕ, ಕೇಳು. ನಿನ್ನ ಪೂರ್ವಜನು ಗೋದಾವರಿ ತೀರದಲ್ಲಿ ಶ್ರೀಗುರುವಿನ ಸನ್ನಿಧಿಯನ್ನು ಸೇರಿ ಪೂಜಿಸಿದನು. ಆ ಕಥೆಯನ್ನೇ ಈಗ ಹೇಳುತ್ತೇನೆ. 

ಸಾಯಂದೇವನೆಂಬ ಹೆಸರುಳ್ಳ ಒಬ್ಬನು ಶ್ರೀಗುರುವನ್ನು ಅರ್ಚಿಸಿದನು. ಅಯ್ಯಾ, ದ್ವಿಜ, ಶ್ರೀಗುರುವಿಗೆ ನಾವು ಶಿಶ್ಯರೆಲ್ಲರಲ್ಲೂ ಅವನ ಮೇಲೆ ಹೆಚ್ಚು ಪ್ರೀತಿಯಿತ್ತು. ನಂತರ ಶ್ರೀಗುರುವು ದಕ್ಷಿಣಭಾರತದಿಂದ ಗಂಧರ್ವನಗರವನ್ನು ಸೇರಿದರು. ಶ್ರೀಗುರುವಿನ ಕೀರ್ತಿ ಕೇಳಿ ಅವರ ದರ್ಶನಾರ್ಥಿಗಳಾಗಿ ಬಂದವರು ಪೂರ್ಣಕಾಮರಾಗುತ್ತಿದ್ದಾರೆ. ಹೀಗೆ ಎಲ್ಲಕಡೆಯಲ್ಲೂ ವ್ಯಾಪಿಸಿದ ಕೀರ್ತಿಯಿಂದ ಶ್ರೀ ನೃಸಿಂಹ ಸರಸ್ವತಿಯವರು ಭಕ್ತವತ್ಸಲರಾಗಿ ಗಂಧರ್ವನಗರದಲ್ಲಿ ಇದ್ದಾರೆನ್ನುವ ವಾರ್ತೆ ಹರಡಿತು. ನಿನ ಪೂರ್ವಜನಾದ ಸಾಯಂದೇವನೆಂಬುವನು ಶ್ರೀಗುರು ಕೀರ್ತಿ ಕೇಳಿ ಆನಂದಭರಿತನಾಗಿ ಭಕ್ತಿಯಿಂದ ಕೂಡಿ ಗಂಧರ್ವನಗರಕ್ಕೆ ಸಾಷ್ಟಾಂಗ ನಮಸ್ಕಾರಮಾಡುತ್ತ ಬಂದನು. ಸಾಕ್ಷಾತು ಪರಬ್ರಹ್ಮನೇ ಆದ ಶ್ರೀಗುರುವನ್ನು ಅವನು ಬಂದು ದರ್ಶಿಸಿದನು. ಆ ಸಾಯಂದೇವನು ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟನು. ಶ್ರೀಗುರು ಪಾದಧೂಳಿಯನ್ನು ತನ್ನ ಕೂದಲಿನಿಂದ ಒರೆಸಿದನು. ಎರಡೂ ಕೈ ಜೋಡಿಸಿ ಏಕಾಗ್ರಮನಸ್ಸಿನಿಂದ ಅವನು ಶ್ರೀಗುರುವನ್ನು ಸ್ತುತಿಸಿದನು.

"ಹೇ ಸ್ವಾಮಿ, ಶ್ರೀಗುರುದೇವ, ನೀವೊಬ್ಬರೇ! ತ್ರಿಮೂರ್ತಿಸ್ವರೂಪರು. ನನ್ನ ಜನ್ಮ ಧನ್ಯವಾಯಿತು. ನನ್ನ ಪಿತೃಗಳು ಕೃತಾರ್ಥರಾದರು. ನಿಮ್ಮ ಪಾದಗಳನ್ನು ಗ್ರಹಿಸಿದ್ದರಿಂದ ನಾನು ಕೋಟಿ ಜನ್ಮಗಳಲ್ಲಿ ಮಾಡಿದ್ದ ಪಾಪಗಳೆಲ್ಲವೂ ನಷ್ಟವಾದವು. ಹೇ ಪರಮಾತ್ಮ, ಶ್ರೀ ನೃಸಿಂಹ ಸರಸ್ವತಿ, ಹೇ ಸ್ವಾಮಿ, ನೀವು ಭಕ್ತವತ್ಸಲರು. ನಿಮ್ಮ ಶ್ರೀಚರಣಗಳು ಎಲ್ಲಿರುತ್ತದೋ ಅಲ್ಲಿ ಕೋಟಿಗಟ್ಟಳೆ ತೀರ್ಥಗಳು ಇರುತ್ತವೆ. ಶ್ರುತಿಯು, "ಚರಣಂ ಪವಿತ್ರಂ ವಿತತಂ---" ಎನ್ನುವ ಮಂತ್ರವನ್ನು ಹೇಳಿದೆ. ನಿನ್ನ ಸ್ವರೂಪವು ಸಾಕ್ಷಾತ್ತು ತ್ರಿಮೂರ್ತ್ಯಾತ್ಮಕವೇ! ನೀವೇ ಬ್ರಹ್ಮದೇವನು. ಸುಧಾಪೂರ್ಣ ಕಮಂಡಲವನ್ನು ಕೈಯಲ್ಲಿ ಹಿಡಿದಿದ್ದೀರಿ. ಅದರಲ್ಲಿನ ಅಮೃತ ಸ್ಪರ್ಶದಿಂದ ಮೃತನು ಜೀವಿಸಲ್ಪಡುತ್ತಿದ್ದಾನೆ. ಶ್ರೀ ಮಹಾವಿಷ್ಣುವು ನೀವೇ. ಶರಣು ಎಂದವರನ್ನು ರಕ್ಷಿಸುತ್ತೀರಿ. ಭಸ್ಮ ರುದ್ರಾಕ್ಷ ವ್ಯಾಘ್ರಚರ್ಮಗಳನ್ನು ಧರಿಸಿದ ಮೂರು ಕಣ್ಣುಗಳುಳ್ಳ ಶಿವನೂ ನೀವೇ! ಕೄರದೃಷ್ಟಿಯಿಂದ ನೀವು ಪಾಪಗಳನ್ನು ದಹಿಸುತ್ತೀರಿ. ಅಮೃತ ನೇತ್ರಗಳಿಂದ ಜೀವಿಸುವಂತೆ ಮಾಡುತ್ತೀರಿ. ಭಕ್ತಜನರಿಗೆ ನೀವು ಚತುರ್ವಿಧಪುರುಷಾರ್ಥಗಳನ್ನು ಅನುಗ್ರಹಿಸುತ್ತೀರಿ. ಹೇ ನೃಸಿಂಹ, ಶ್ರೀಜಗದ್ಗುರು, ನೀವು ಭವರೋಗಗಳನ್ನು ಹರಿಸುವ ರುದ್ರನು. ನೀವೇ ಪೀತಾಂಬರಧಾರಿಯಾದ ವಿಷ್ಣುವು. ಕ್ಷಮ ಶಾಂತಿ ಮುಂತಾದವು ನಿಮ್ಮ ಭೂಷಣಗಳು. ನಿಮ್ಮ ಪಾದಗಳಲ್ಲಿಯೇ ಸರ್ವ ತೀರ್ಥಗಳೂ ಇವೆ. ಒಣಗಿಹೋಗಿದ್ದ ಕಾಷ್ಠವನ್ನು ಚಿಗುರುವಂತೆ ಮಾಡಿದಿರಿ. ಗೊಡ್ಡೆಮ್ಮೆ ಹಾಲುಕರೆಯುವಂತೆ ಮಾಡಿದಿರಿ. ಬಂಜೆಗೆ ಕನ್ಯೆ ಪುತ್ರರನ್ನು ಕೊಟ್ಟಿರಿ. ನಿಮ್ಮ ಹತ್ತಿರ ಅನ್ನಪೂರ್ಣೆ ಇದ್ದಾಳೆ. ಶ್ರೀಗುರು, ವಿಷ್ಣುಸ್ವರೂಪವನ್ನು ಜ್ಞಾಪಕಕ್ಕೆ ಬರುವಂತೆ ಮಾಡಲು ನೀವು ತ್ರಿವಿಕ್ರಮನೆನ್ನುವ ಮುನಿಗೆ ವಿಶ್ವರೂಪವನ್ನು ಪ್ರದರ್ಶಿಸಿದಿರಿ. ಅಂತ್ಯಜನ ಮುಖದಿಂದ ವೇದಗಳನ್ನು ಹೇಳಿಸಿದ ಮಹಿಮೆ ನಿಮ್ಮದು. ನೀವು ತ್ರಿಮೂರ್ತಿಯೇ!"

ಹೀಗೆ ಶ್ರೀಗುರುವನ್ನು ಸ್ತುತಿಸಿ ಸಾಯಂದೇವನು ಅತಿ ಭಕ್ತಿಯಿಂದ ನವರಸಪೂರ್ಣವಾದ ಸದ್ಗುರು ಸ್ತುತಿಯನ್ನು ರಚಿಸಿದನು. ಶ್ರೀಗ್ರುವು ಅದರಿಂದ ಸಂತುಷ್ಟನಾಗಿ ಅವನನ್ನು ಆಶೀರ್ವದಿಸಿ, ಆ ದಯಾನಿಧಿಯು, "ನೀನೇ ನನ್ನ ಪರಮಭಕ್ತನೆಂದು." ಎಂದು ಅವನ ತಲೆಯಮೇಲೆ ಅಭಯಹಸ್ತವನ್ನು ಇಟ್ಟರು. "ನಿನ್ನ ಸ್ತೋತ್ರದಿಂದ ಸಂತುಷ್ಟನಾಗಿದ್ದೇನೆ. ನಿನಗೆ ವರವನ್ನು ಕೊಡುತ್ತಿದ್ದೇನೆ. ನಿನ್ನ ವಂಶದವರೂ ನನ್ನನ್ನು ಪೂಜಿಸುತ್ತಾರೆ." ಎಂದು ಶ್ರ್ರೀಗುರುವು ಅವನಿಗೆ ವರವನ್ನು ನೀಡಿದರು. ಮತ್ತೆ ಶ್ರೀಗುರುವು ಅವನ ತಲೆಯಮೇಲೆ ಹಸ್ತವನ್ನಿಟ್ಟು, "ನೀನು ನನ್ನ ಪ್ರಿಯಭಕ್ತನು. ಸಂಗಮಸ್ನಾನ ಮಾಡಿ ಅಶ್ವತ್ಥವೃಕ್ಷವನ್ನು ಆದರದಿಂದ ಪೂಜಿಸಿಕೊಂಡು ಮಠದಲ್ಲಿ ಊಟಮಾಡಲು ತ್ವರೆಯಾಗಿ ಬಾ." ಎಂದು ಸಾಯಂದೇವನಿಗೆ ಆಜ್ಞಾಪಿಸಿದರು. ಅವನು ಹಾಗೆಯೇ ಸ್ನಾನ ಮಾಡಿ ಬಂದು, ಸದ್ಗುರುವನ್ನು ಷೋಡಶೋಪಚಾರಗಳಿಂದ, ಭಕ್ತಿಪೂರ್ಣನಾಗಿ ಪೂಜಿಸಿ, ಪಕ್ವಾನ್ನಗಳು, ಷಡ್ರಸಗಳಿಂದ ಕೂಡಿದ ಭಿಕ್ಷೆಯನ್ನು ಶ್ರೀಗುರುವು ಭುಜಿಸುವಂತೆ ಮಾಡಿದನು. ನಂತರ ಶ್ರೀಗುರುವು ಸಾಯಂದೇವನನ್ನು ತಮ್ಮ ಸನ್ನಿಧಿಯಲ್ಲಿ ಊಟಮಾಡಿಸಿದರು. ಶಿಷ್ಯರೆಲ್ಲರ ಸಹಿತನಾಗಿ ಸಂತೋಷದಿಂದ ಕುಳಿತ ಶ್ರೀಗುರುವು, ಸಾಯಂದೇವನನ್ನು ಕರೆದು, "ಸಾಯಂದೇವ ನೀನು ಯಾವ ದೇಶದವನು? ನೀನು ಏನು ಮಾಡುತ್ತಿದ್ದೀಯೆ? ನಿನ್ನ ಹೆಂಡತಿ ಮಕ್ಕಳು ಎಲ್ಲಿದ್ದಾರೆ? ನೀವೆಲ್ಲರೂ ಕ್ಷೇಮವೇ?" ಎಂದು ಪರಮಕೃಪೆಯಿಂದ ಕೇಳಿದರು. ಅದಕ್ಕೆ ಸಾಯಂದೇವನು, "ಸ್ವಾಮಿ, ಸರ್ವಜ್ಞ, ಉತ್ತರ ಕಂಚಿ ನನ್ನ ನಿವಾಸವು. ಹೇ ದಯಾನಿಧಿ, ನನ್ನ ಮಕ್ಕಳು, ಬಂಧುಗಳು ಎಲ್ಲರೂ ಅಲ್ಲೇ ಇದ್ದಾರೆ. ಎಲ್ಲರೂ ಕ್ಷೇಮವೇ. ಹೇ ಭಗವನ್, ಇಲ್ಲಿಯೇ ಇರುತ್ತಾ, ಭಕ್ತಿಯಿಂದ ನಿಮ್ಮ ಚರಣ ಸೇವೆ ಮಾಡಿಕೊಂಡಿರಬೇಕೆಂದು ಎಂದು ನನ್ನ ಅಭಿಲಾಷೆಯು. ಹೇ ದೇವ, ನಿಮ್ಮ ದಾಸ್ಯವನ್ನು ಮಾಡುವ ಅದೃಷ್ಟವನ್ನು ನನಗೆ ಕೊಡು." ಎಂದು ಹೇಳಿದನು. ಅದಕ್ಕೆ ಶ್ರೀಗುರುವು ನಸುನಗುತ್ತಾ ಹೇಳಿದರು.

"ಅಯ್ಯಾ, ನನ್ನ ಸೇವೆಯು ಕಠಿಣವು. ನನ್ನ ನಿವಾಸ ಒಂದುಕಡೆ ಇರುವುದಿಲ್ಲ. ಅದರಿಂದ ನೀನು ನನ್ನ ಜೊತೆಯಲ್ಲಿ ಇದ್ದುಕೊಂಡು ಕಷ್ಟಗಳನ್ನು ಸಹಿಸಲಾರೆ." ಶ್ರೀಗುರುವು ಹೇಳಿದ ಮಾತನ್ನು ಕೇಳಿ ಸಾಯಂದೇವನು ನಮಸ್ಕರಿಸಿ, "ಸ್ವಾಮಿ, ನನ್ನನ್ನು ಅಂಗೀಕರಿಸಿ. ನಾನು ಶರಣು ಬೇಡುತ್ತಿದ್ದೇನೆ. ಗುರುಸೇವೆಯನ್ನು ಮಾಡಿದ ಮಾನವನು ಭವಸಾಗರವನ್ನು ದಾಟಬಲ್ಲನು. ಶ್ರೀಗುರುದೇವರು ಅವನಿಗೆ ಚತುರ್ವಿಧ ಪುರುಷಾರ್ಥಗಳನ್ನು ಕೊಡುತ್ತಾರೆ. ಅವನಿಗೆ ಯಮನ ಭಯವಿರುವುದಿಲ್ಲ. ಶ್ರೀಗುರುಭಕ್ತಿಯೇ ಅವನಿಗೆ ಶ್ರೇಷ್ಠವು." ಎಂದು ಅತ್ಯಂತ ಭಕ್ತಿಯಿಂದ ಬಿನ್ನವಿಸಿಕೊಂಡನು. ಆಗ ಶ್ರೀಗುರುವು, " ನಿನ್ನ ಮನಸ್ಸಿನಲ್ಲಿ ಎಂತಹ ಭಕ್ತಿಯಿದೆಯೋ ಅದರಂತೆ ಮಾಡು." ಎಂದು, "ನನ್ನಲ್ಲಿ ಸುದೃಢವಾದ ಭಕ್ತಿಯಿದ್ದರೆ ಮಾತ್ರ ನನ್ನ ದಾಸ್ಯವನ್ನು ಅಂಗೀಕರಿಸು." ಎಂದು ಶ್ರೀಗುರುವು ಎಚ್ಚರಿಸಿದರು. ಸಾಯಂದೇವನು ‘ಹಾಗೇ ಆಗಲಿ’ ಎಂದು ಮನಸ್ಥೈರ್ಯವನ್ನು ಹೊಂದಿ ಸದಾ ಶ್ರೀಗುರುವನ್ನು ಭಜಿಸುತ್ತಾ ಅವರ ಸೇವೆ ಮಾಡುತ್ತಿದ್ದನು. ಹೀಗೇ ಮೂರು ತಿಂಗಳುಗಳು ಕಳೆದವು. ಒಂದು ದಿನ ಶಿಷ್ಯರೆಲ್ಲರನ್ನೂ ಬಿಟ್ಟು ಶ್ರೀಗುರುವು ಸಾಯಂದೇವನೊಬ್ಬನನ್ನು ಮಾತ್ರ ಕರೆದುಕೊಂಡು ಸಂಗಮಕ್ಕೆ ಹೋಗಿ, ಅಲ್ಲಿ ಅಶ್ವತ್ಥಮೂಲದಲ್ಲಿ ಕುಳಿತು ಅವನೊಡನೆ ಮಾತನಾಡಲಾರಂಭಿಸಿದರು. ಶ್ರೀಗುರುವು ತನ್ನ ಶಿಷ್ಯನ ಮನೋಸ್ಥೈರ್ಯವನ್ನು ಪರೀಕ್ಷಿಸಬೇಕೆಂದು ಯೋಚಿಸಿ, ಒಂದು ಉಪಾಯವನ್ನು ಮಾಡಿದರು. ಅಕಸ್ಮಾತ್ತಾಗಿ ಗಾಳಿಯು ತೀಕ್ಷ್ಣವಾಗಿ ಬೀಸಲಾರಂಭಿಸಿತು. ಮರಗಳು ಮುರಿದು ಬಿದ್ದವು. ಮಳೆ ಧಾರಾಕಾರವಾಗಿ ಸುರಿಯಿತು. ಸಾಯಂದೇವನು ಮಳೆಗಾಳಿಗಳನ್ನು ಸಹಿಸಿಕೊಂಡು, ತನ್ನವಸ್ತ್ರವನ್ನು ಶ್ರೀಗುರುವಿಗೆ ಹೊದಿಸಿದನು. ಹಾಗೆ ಎರಡು ಝಾಮಗಳವರೆಗೂ ಕುಂಭವೃಷ್ಟಿ ಆಯಿತು. ಆಮೇಲೆ ಬಹಳ ಜೋರಾದ ಬೀಸುಗಾಳಿಯು ಮೊದಲಾಗಿ ಬಹಳ ಛಳಿ ಹುಟ್ಟಿತು. ಶ್ರೀಗುರುವು, "ಅಯ್ಯಾ, ಸಾಯಂದೇವ, ಛಳಿ ಬಹಳವಾಗಿದೆ. ಊರೊಳಕ್ಕೆ ಹೋಗಿ ಮಠದಿಂದ ಕಾಯಿಸಿಕೊಳ್ಳುವುದಕ್ಕೆ ಅಗ್ನಿಯನ್ನು ತೆಗೆದುಕೊಂಡು ಬಾ." ಎಂದು ಹೇಳಿದರು. ತಕ್ಷಣವೇ ಅವನು ಗುರುವಾಕ್ಯವನ್ನು ಶಿರಸಾವಹಿಸಿ ಅಗ್ನಿ ತರಲು ಹೊರಟನು. ನಗುತ್ತಾ, ಶ್ರೀಗುರುವು, "ಎರಡೂ ಕಡೆಗಳನ್ನು ನೋಡದೆ ತ್ವರೆಯಾಗಿ ಹೋಗಿ ಬಾ." ಎಂದು ಹೇಳಿದರು. ‘ಹಾಗೇ ಆಗಲಿ’ ಎಂದು ನುಡಿದು ಸಾಯಂದೇವನು ಗುರುವಾಜ್ಞೆಯಂತೆ ಹೊರಟನು. ಕತ್ತಲಲ್ಲಿ ದಾರಿ ಕಾಣುತ್ತಿರಲಿಲ್ಲ. ಹೇಗೋ ಮಾರ್ಗವನ್ನು ಹುಡುಕುತ್ತಾ, ಶ್ರೀಗುರುವನ್ನೇ ಧ್ಯಾನಿಸುತ್ತಾ ಮುಂದುವರೆಯುತ್ತಿದ್ದನು. ಆ ರೀತಿಯಲ್ಲಿ ಮೆಲ್ಲಮೆಲ್ಲಗೆ ನಡೆದು ಗಂಧರ್ವನಗರದ ಬಾಗಿಲಿಗೆ ಬಂದು ಅಲ್ಲಿ ದ್ವಾರಪಾಲಕರಿಗೆ ತಾನು ಬಂದ ವಿಷಯವನ್ನು ತಿಳಿಸಿದನು. ಅವರು ಒಂದು ಭಾಂಡದಲ್ಲಿ ಅಗ್ನಿಯನ್ನು ಹಾಕಿ ಅವನಿಗೆ ಕೊಟ್ಟರು. ಅದನ್ನು ತೆಗೆದುಕೊಂಡು ಅವನು ಹಿಂದಿನಂತೆಯೇ ಮಿಂಚಿನ ಬೆಳಕಿನಲ್ಲಿ ದಾರಿಯನ್ನು ಹುಡುಕುತ್ತಾ ಶ್ರೀಗುರುವನ್ನು ಧ್ಯಾನಿಸುತ್ತಾ ಆ ಕಡೆ ಈ ಕಡೆ ನೋಡದೆ ಹಿಂತಿರುಗಿ ಹೊರಟನು. 


ಬರುತ್ತಾ ದಾರಿಯಲ್ಲಿ ಶ್ರೀಗುರುವು ನನ್ನನ್ನು ಎರಡು ಪಕ್ಕಗಳನ್ನು ನೋಡದೆ ಹೋಗಿ ಬಾ ಎಂದು ಹೇಳಲು ಕಾರಣವೇನು ಎಂದು ಯೋಚಿಸುತ್ತಾ ಬಲಗಡೆ ನೋಡಿದನು. ಅಲ್ಲಿ ಮಹಾಸರ್ಪವೊಂದು ಕಾಣಿಸಿತು. ಅವನು ಭಯದಿಂದ ಎಡಗಡೆ ನೋಡಲು ಅಲ್ಲಿಯೂ ಅವನಿಗೆ ಮತ್ತೊಂದು ಮಹಾಸರ್ಪ ಕಾಣಿಸಿತು. ಎರಡೂ ಹಾವುಗಳು ಸಾಯಂದೇವನನ್ನು ಅನುಸರಿಸುತ್ತಾ ಅವನ ಹಿಂದೆಯೇ ಬರುತ್ತಿದ್ದವು. ಬಹಳ ಭೀತನಾಗಿ ಅವನು ಓಡಿ ಬರುತ್ತಿದ್ದಾಗ ದಾರಿತಪ್ಪಿ ಕಾಡಿನೊಳಕ್ಕೆ ಹೋದನು. ಆ ಹಾವುಗಳು ಅಲ್ಲಿಯೂ ಅವನನ್ನು ಹಿಂಬಾಲಿಸಿ ಬರುತ್ತಿದ್ದವು. ಹೇಗೋ ಮಾಡಿ, ಶ್ರೀಗುರುವನ್ನು ಧ್ಯಾನಿಸುತ್ತಾ. ಕೊನೆಗೆ ಅವನು ಸಂಗಮವನ್ನು ಸಮೀಪಿಸಿದನು. ಅಲ್ಲಿ ಸಾವಿರಾರೂ ದೀಪಗಳು ಕಾಣಿಸಿತು. ಬ್ರಾಹ್ಮಣರು ಉಚ್ಛಸ್ವರದಲ್ಲಿ ವೇದಘೋಷಗಳನ್ನು ಮಾಡುತ್ತಿದ್ದುದು ಕೇಳಿಸಿತು. ಹತ್ತಿರಕ್ಕೆ ಹೋದಾಗ ಅಲ್ಲಿ ಶ್ರೀಗುರುವು ಒಬ್ಬರೇ ಇರುವುದನ್ನು ನೋಡಿದನು. ಅಗ್ನಿಯನ್ನು ಪ್ರಜ್ವಲಿಸಿ ಸಾಯಂದೇವನು ಶ್ರೀಗುರುವನ್ನು ಸಮೀಪಿಸಲು ಅಲ್ಲಿ ಅವನಿಗೆ ತನ್ನನ್ನು ಹಿಂಬಾಲಿಸಿದ್ದ ಎರಡೂ ಸರ್ಪಗಳು ಬಂದು ಶ್ರೀಗುರುವಿಗೆ ನಮಸ್ಕರಿಸಿ ಬಂದ ದಾರಿಯಲ್ಲಿ ಹಿಂತಿರುಗಿ ಹೊರಟು ಹೋದದ್ದನ್ನು ನೋಡಿದನು. ಭಯಪಟ್ಟ ಅವನನ್ನು ಕಂಡ ಶ್ರೀಗುರುವು, " ನಿನಗೇಕೆ ಭಯವಯ್ಯಾ? ನಿನ್ನನ್ನು ರಕ್ಷಿಸಲು ನಾನೇ ಆ ಸರ್ಪಗಳನ್ನು ಕಳುಹಿಸಿದ್ದೆ. ನಮ್ಮನ್ನು ಸೇವಿಸುವುದು ಎಷ್ಟು ಕಷ್ಟ ಎಂದು ತಿಳಿಯಿತಲ್ಲವೇ? ಮುಂಚೆಯೇ ಚೆನ್ನಾಗಿ ಯೋಚಿಸಿ ನಮ್ಮ ಸೇವೆಯನ್ನು ಸ್ವೀಕರಿಸಬೇಕು. ಕಠಿಣವಾದ ಗುರುಸೇವೆಯನ್ನು ದೃಢವಾದ ಧೈರ್ಯದಿಂದ ಮಾಡುವ ಬುದ್ಧಿವಂತನಿಗೆ ಕಾಲನಿಂದಲಾಗಲೀ, ಕಲಿಯಿಂದಲಾಗಲೀ ಭಯವೇತಕ್ಕೆ?" ಎಂದರು. ಸಾಯಂದೇವನು ಮತ್ತೆ ಶ್ರೀಗುರು ಪಾದಗಳನ್ನು ಹಿಡಿದು, "ಸ್ವಾಮಿ ಗುರುಭಕ್ತಿಯನ್ನು ಉಪದೇಶಿಸಿ. ಅದರಿಂದ ನನ್ನ ಮನಸ್ಸು ಸ್ಥಿರಗೊಂಡು ನಿಮ್ಮ ಸೇವೆ ಮಾಡುತ್ತೇನೆ." ಎಂದು ಕೇಳಿಕೊಂಡನು.

ಶ್ರೀಗುರುವು ಹೇಳಿದರು. "ಅಯ್ಯಾ ಬ್ರಾಹ್ಮಣ, ನಿನಗೆ ಒಂದು ರಮ್ಯವಾದ ಕಥೆಯನ್ನು ಹೇಳುತ್ತೇನೆ. ಕೇಳು. ಹಿಂದೆ ಕೈಲಾಸಶಿಖರದಲ್ಲಿ ವ್ಯೋಮಕೇಶನು ರಹಸ್ಯವಾಗಿದ್ದನು. ಅವನು ಅರ್ಧನಾರೀಶ್ವರನು. ಆಗ ಗಿರಿಜೆ, "ಸ್ವಾಮಿ, ಗುರುಭಕ್ತಿಯ ವಿಧಾನವನ್ನು ನನಗೆ ವಿಸ್ತಾರವಾಗಿ ಅನುಗ್ರಹಿಸು." ಎಂದು ಕೇಳಲು, ಶಂಕರನು ಅವಳಿಗೆ ಹೇಳಿದನು. "ಪ್ರಿಯಳೇ, ಗುರುಭಕ್ತಿ ಸರ್ವಸಿದ್ಧಿಗಳನ್ನೂ ಕೈಗೂಡಿಸುತ್ತದೆ. ಶ್ರೀಗುರುವನ್ನು ಶಿವಸ್ವರೂಪನಾಗಿ ಭಾವಿಸಬೇಕು. ಗುರುಭಕ್ತಿ ಸುಲಭವಾದುದು. ತಕ್ಷಣವೇ ಫಲಕೊಡುವಂತಹುದು. ತಪಾನುಷ್ಠಾನಗಳಿಂದ ಸಿದ್ಧಿಯಾಗುವುದು ತಡವಾಗುತ್ತದೆ. ವ್ರತ, ದಾನ, ಯಜ್ಞಾದಿಗಳು ದುಷ್ಕರವು. ಅವುಗಳ ಸಿದ್ಧಿ ಲೋಕದಲ್ಲಿ ದುರ್ಲಭವು. ಅವಕ್ಕೆ ಪ್ರತಿಕ್ಷಣವೂ ವಿಘ್ನಗಳೇ! (ಆದರೆ) ಸದ್ಗುರು ಭಕ್ತಿಯಿಂದ ಫಲವು ತ್ವರೆಯಾಗಿ ಕೈಗೂಡುತ್ತದೆ. ಯಜ್ಞಾದಿಗಳ ಫಲವೂ ಗುರುಭಕ್ತಿಯಲ್ಲೇ ಸೇರಿವೆ. ಭಕ್ತಿಯಿಂದ ಗುರುಕುಲವಾಸ ಮಾಡುತ್ತಾ ಗುರುವನ್ನು ಸೇವಿಸಬೇಕು. ಗಿರಿಜೆ, ಇದಕ್ಕೆ ಒಂದು ವಿಚಿತ್ರವಾದ ನಿದರ್ಶನವನ್ನು ನಿನಗೆ ಹೇಳುತ್ತೇನೆ.

ಬ್ರಹ್ಮವಂಶದಲ್ಲಿ ಉದ್ಭವಿಸಿದ ತ್ವಷ್ಟ ಎನ್ನುವವನು ಲೋಕದಲ್ಲಿ ಪ್ರಸಿದ್ಧನು. ಅವನು ಸರ್ವಕರ್ಮಗಳಲ್ಲಿಯೂ ಕುಶಲನು. ಅವನಿಗೆ ಉಪನಯದ ವಯಸ್ಸು ಬಂತು. ಅವನ ತಂದೆ ಸಂಸ್ಕಾರಗಳನ್ನೆಲ್ಲಾ ಮುಗಿಸಿ, ಉಪನಯನ ಮಾಡಿ ಅವನನ್ನು ಗುರುಕುಲಕ್ಕೆ ಕಳುಹಿಸಿದನು. ಗುರ್ವಾಶ್ರಮದಲ್ಲಿ ಇದ್ದುಕೊಂಡು ಅವನು ಗುರುವನ್ನು ಭಕ್ತಿಯಿಂದ ಸೇವಿಸುತ್ತಿದ್ದನು. ಒಂದು ದಿನ ಆ ಆಶ್ರಮದಲ್ಲಿ ಕುಂಭವೃಷ್ಟಿಯಾಯಿತು. ಜೀರ್ಣವಾಗಿದ್ದ ಪರ್ಣಶಾಲೆಯೆಲ್ಲವೂ ನೀರಿನಿಂದ ತುಂಬಿಹೋಯಿತು. ಆಗ ಸದ್ಗುರುವು ಶಿಷ್ಯನನ್ನು ಕರೆದು ಅದನ್ನು ತೋರಿಸುತ್ತಾ, " ಈ ಮನೆಯನ್ನು ದೃಢವಾಗಿ ನಿರ್ಮಿಸು. ಪ್ರತಿ ವರ್ಷವೂ ಇದು ಜೀರ್ಣವಾಗುತ್ತಲೇ ಇದೆ. ಈ ಮನೆಯು ನಿತ್ಯ ನೂತನವಾಗಿರುವಂತೆ ನಿರ್ಮಿಸು. ನೀನು ನಿರ್ಮಿಸುವ ಮನೆಯು ಮನೋಹರವಾಗಿ ಸರ್ವೋಪಕರಣಗಳಿಂದ ಕೂಡಿರಬೇಕು." ಎಂದು ಗುರುವು ಆದೇಶಿಸಿದನು. ಗುರುಪತ್ನಿ, "ಶಿಷ್ಯ, ನನಗೊಂದು ಕಂಚುಕವನ್ನು ತೆಗೆದುಕೊಂಡು ಬಾ. ಅದಕ್ಕೆ ಬಣ್ಣ ಹಾಕಿರಬಾರದು. ಹೊಲೆದಿರಬಾರದು. ಚಿತ್ರವಿಚಿತ್ರವಾಗಿ ಮನೋಹರವಾಗಿರಬೇಕು. ಶರೀರದ ಅಳತೆಗೆ ಸರಿಯಾಗಿರಬೇಕು." ಎಂದು ಕೇಳಿದಳು. ನಂತರ ಗುರುಪುತ್ರನೂ ಕೂಡಾ, "ಅಯ್ಯಾ, ನನಗೆ ಪಾದುಕೆಗಳನ್ನು ತಂದುಕೊಡು. ಅವು ನೀರಿನಲ್ಲಿ ಮುಳುಗಿಹೋಗಬಾರದು. ನನ್ನ ಪಾದಗಳಿಗೆ ಹೆಚ್ಚುಕಡಮೆಯಿಲ್ಲದೆ ಸರಿಹೋಗುವಂತಿರಬೇಕು. ಅದಕ್ಕೆ ಮಣ್ಣು ಅಂಟಿಕೊಳ್ಳಬಾರದು. ನಾನು ಹೋಗಬೇಕೆಂದಿರುವ ಸ್ಥಳಕ್ಕೆ ನನ್ನನ್ನು ತ್ವರೆಯಾಗಿ, ಸುಖವಾಗಿ ಸೇರಿಸುವಂತಿರಬೇಕು." ಎಂದು ಹೇಳಿದನು. ಅಷ್ಟರಲ್ಲಿ ಗುರುಪುತ್ರಿಯೂ ಅಲ್ಲಿಗೆ ಬಂದು ತ್ವಷ್ಟನಿಗೆ, "ನನಗೋಸ್ಕರ ಚೆನ್ನಾಗಿರುವ ಎರಡು ಕರ್ಣಕುಂಡಲಗಳನ್ನು ತಂದುಕೊಡು. ನಾನು ಆಡಿಕೊಳ್ಳಲು ಅಂದವಾದ ಒಂದು ಮನೆಯನ್ನೂ ಕಟ್ಟಿಕೊಡು. ಆ ಮನೆಗೆ ಆನೆಯ ದಂತಗಳಿಂದ ಮಾಡಿದ ಒಂದೇ ಒಂದು ಸ್ಥಂಭವಿರಬೇಕು. ಅದು ಎಂದಿಗೂ ಮುರಿಯಬಾರದು. ಶಿಥಿಲವಾಗಬಾರದು. ಅಲ್ಲಲ್ಲಿ ಆಟವಾಡಲು ಅನುಕೂಲವಾಗುವಂತೆ ಆಟಗಳಿಗೆ ಸರಿಹೋಗುವ ಪೀಠಗಳು ಮುಂತಾದ ಪರಿಕರಗಳು ಇರುವ ನಿತ್ಯ ನೂತನ ಗೃಹವನ್ನು ಕಟ್ಟು. ಮಣಿಗಳಿಂದ ಮಾಡಿದ, ಅಡಿಗೆಗೆ ಉಪಯೋಗವಾಗುವಂತಹ ಪಾತ್ರೆಗಳು ಮುಂತಾದುವು ಕೂಡಾ ಅದರಲ್ಲಿರಬೇಕು. ಪಾತ್ರೆಗಳಲ್ಲಿ ಮಾಡಿದ ಅಡಿಗೆ ಒಂದು ಝಾಮ ಕಳೆದರೂ ತಣ್ಣಗಾಗಬಾರದು. ಅಡಿಗೆ ಮಾಡುವಾಗ ಪಾತ್ರೆಗಳ ಮೇಲೆ ಮಸಿ ಅಂಟದಂತಿರುವ ಪಾತ್ರೆಗಳನ್ನೇ ತರಬೇಕು." ಎಂದಳು. ಹಾಗೆ ನಾಲ್ವರೂ ಕೊಟ್ಟ ಆದೇಶದಂತೆ, ಆ ಶಿಷ್ಯ ಅವರ ಕೋರಿಕೆಗಳನ್ನು ಅಂಗೀಕರಿಸಿ ಹೊರಟನು. ಅಡವಿಯಲ್ಲಿ ಹೋಗುತ್ತಾ, "ನಾನು ಬಾಲಕ. ಬ್ರಹ್ಮಚಾರಿ. ಈ ಕರ್ತವ್ಯವನ್ನು ನಿರ್ವಹಿಸುವ ಶಕ್ತಿ ನನಗೆಲ್ಲಿದೆ? ಊಟದೆಲೆಗಳನ್ನು ಕೂಡಿಸುವುದನ್ನು ಕೂಡಾ ನಾನು ಅರಿಯೆ! ದೃಢವಾದ ಮನೆಯನ್ನು ಹೇಗೆ ನಿರ್ಮಿಸಬಲ್ಲೆ?" ಎಂದು ಯೋಚಿಸುತ್ತಾ ಗುರುವನ್ನು ಸ್ಮರಿಸಿದನು. ಹೇಳಿದ್ದನ್ನು ಮಾಡದಿದ್ದರೆ ಗುರುವು ಕೋಪಿಸಿಕೊಳ್ಳುತ್ತಾನೆ. ಆದ್ದರಿಂದ ನಾನು ಯಾರನ್ನು ಶರಣುಹೋಗಲಿ? ಶರಣಾಗಲು ಬೇರೆ ಯಾರೂ ಕಾಣುತ್ತಿಲ್ಲ. ಸದ್ಗುರುವು ದಯಾಸಮುದ್ರನು. ಅವನಲ್ಲದೆ ಇನ್ನು ಯಾರು ನನಗೆ ಸಹಾಯಮಾಡುತ್ತಾರೆ? ಆ ಗುರುವಾಕ್ಯಗಳನ್ನು ಮಾಡದೇ ಹೇಗಿರಲಿ? ಗುರುವಾಕ್ಯಗಳೇ ಕಾಮಧೇನುವು. ಪ್ರಾಣಕೊಟ್ಟಾದರೂ ಗುರುವಾಕ್ಯಗಳನ್ನು ಸತ್ಯ ಮಾಡಲು ಪ್ರಯತ್ನಿಸುತ್ತೇನೆ. ಅವರು ಹೇಳಿದ ಕೆಲಸ ಮಾಡಲು ನನಗೆ ಶಕ್ತಿಯಿಲ್ಲ. ಅದರೂ ಅದನ್ನು ಮಾಡುತ್ತೇನೆಂದು ಒಪ್ಪಿಕೊಂಡೆ." ಎಂದೆಲ್ಲಾ ಚಿಂತೆಮಾಡುತ್ತಾ, ಆ ಕಾಡಿನಲ್ಲಿ ಹೊಗುತ್ತಾ ಬಳಲಿದವನಾಗಿ ದುಃಖಗೊಂಡು ಕ್ಷಣಕಾಲ ಒಂದುಕಡೆ ನಿಂತನು. ಅಲ್ಲಿಂದ ಮುಂದಕ್ಕೆ ಹೋಗುತ್ತಾ ಅಲ್ಲೊಬ್ಬ ಅವಧೂತನನ್ನು ಕಂಡನು. ಚಿಂತಾವಿಷ್ಟನಾಗಿ ಹೋಗುತ್ತಿದ್ದ ಆ ಬ್ರಹ್ಮಚಾರಿಯನ್ನು ಕಂಡ ಆ ಅವಧೂತ ಅವನನ್ನು ಕೇಳಿದನು. 


’ಅಯ್ಯಾ ಬ್ರಹ್ಮಚಾರಿ, ನೀನು ಎಲ್ಲಿಂದ ಏತಕ್ಕೆಂದು ಬಂದಿದ್ದೀಯೆ ನನಗೆ ಹೇಳು." ಅದಕ್ಕೆ ಆ ಬ್ರಹ್ಮಚಾರಿ ಆ ಸನ್ಯಾಸಿಗೆ ನಮಸ್ಕರಿಸಿ, "ಸ್ವಾಮಿ, ನಾನು ಚಿಂತಾಸಮುದ್ರದಲ್ಲಿ ಮುಳುಗಿಹೋಗಿದ್ದೇನೆ. ನನ್ನನ್ನು ದಡ ಸೇರಿಸು. ನೀನು ನಿಧಿಯಂತೆ ನನ್ನನ್ನು ತರಿಸಲು, ಹಸು ತನ್ನ ಕರುವನ್ನು ಸೇರಿದಂತೆ, ಲಭಿಸಿದ್ದೀಯೆ. ನೀನು ವಾತ್ಸಲ್ಯದಿಂದ ಬಂದಿದ್ದು, ದುಃಖದಲ್ಲಿದ್ದ ನನಗೆ ಸುಖವನ್ನು ತಂದಿದೆ. ಚಕೋರವು ಚಂದ್ರನ ಬೆಳದಿಂಗಳನ್ನು ನೋಡಿದಕೂಡಲೇ ಆನಂದಪಡುವುದು ಅಲ್ಲವೇ! ಹಾಗೆ ನಿನ್ನ ದೃಷ್ಟಿ ನನ್ನಮೇಲೆ ಬಿದ್ದ ತಕ್ಷಣವೇ ನನಗೆ ಸಂತೋಷವುಂಟಾಯಿತು. ನನ್ನ ಪೂರ್ವಪುಣ್ಯ ಇಂದು ಫಲಿತವಾಯಿತು. ಮನುಷ್ಯರೇ ಇಲ್ಲದ ಈ ಕಾಡಿನಲ್ಲಿ ದುಃಖಿತನಾಗಿದ್ದ ನನ್ನನ್ನು ಸಾಂತ್ವನಗೊಳಿಸಲು ಬಂದಿದ್ದೀಯೆ. ನೀನೇ ನನ್ನ ಗುರುವು. ಈಶ್ವರನಾದ ನಿನ್ನನ್ನು ನೋಡಿ ನನ್ನ ಮನಸ್ಸು ಸ್ಥಿರವಾಯಿತು. ನಿನ್ನ ದಾಸನು ನಾನು." ಎಂದು ಹೇಳುತ್ತಾ ಅವನು ಆ ಅವಧೂತನ ಪಾದಗಳನ್ನು ಹಿಡಿದನು. ಆ ಹುಡುಗನನ್ನು ಆದರದಿಂದ ಮೇಲಕ್ಕೆತ್ತಿ , ಅಪ್ಪಿಕೊಂಡು ಸಮಾಧಾನಮಾಡುತ್ತಾ ಆ ಅವಧೂತ ಅವನೊಡನೆ ಕೂತನು. ಮತ್ತೆ ಆ ಹುಡುಗನನ್ನು ಪ್ರಶ್ನೆಮಾಡಲು ಆ ಬಾಲಬ್ರಹ್ಮಚಾರಿ, ತನ್ನ ಗುರುವು ಮುಂತಾದವರೆಲ್ಲರೂ ಕೇಳಿದ ಕೋರಿಕೆಗಳ ವಿಷಯವನ್ನೆಲ್ಲ ಆರಂಭದಿಂದ ಹೇಳಿ, " ನಾನು ಈ ಕಷ್ಟಸಾಧ್ಯವಾದ ಕಾರ್ಯವನ್ನು ಮಾಡಲು ಒಪ್ಪಿಕೊಂಡು ಚಿಂತಾಸಮುದ್ರದಲ್ಲಿ ಮುಳುಗಿಹೋದೆ. ಹೇ ಸ್ವಾಮಿ, ನನ್ನನ್ನುದ್ಧರಿಸು." ಎಂದು ಕೇಳಿಕೊಳ್ಳಲು ಆ ಅವಧೂತ ಆ ಬಾಲಕನಿಗೆ ಅಭಯವನ್ನು ಕೊಟ್ಟು, "ಅಯ್ಯಾ ವಟುವೇ, ನಿನಗೊಂದು ಹಿತವನ್ನು ಹೇಳುತ್ತೇನೆ. ಅದರಿಂದ ನಿನಗೆ ಎಲ್ಲವೂ ಸಿದ್ಧಿಸುತ್ತದೆ. ಕಾಶೀಪುರವು ಸಕಲ ಅಭೀಷ್ಟಗಳನ್ನು ಸಾಧಿಸಿಕೊಳ್ಳುವ ಮಹಾಸಾಧನವು. ಅಲ್ಲಿನ ವಿಶ್ವೇಶ್ವರನನ್ನು ವಿಧಿವಿಧಾನಗಳಿಂದ ಆರಾಧಿಸು. ಆ ಕಾಶೀಪ್ರದೇಶವು ೫೦೦ ಕೋಟಿ ಯೋಜನಗಳ ವಿಸ್ತಾರದಿಂದ ಖ್ಯಾತಿ ಪಡೆದಿದೆ.ಅಲ್ಲಿ ಬ್ರಹ್ಮಾದಿಗಳೇ ವರವನ್ನು ಪಡೆದಿದ್ದು ಒಂದು ವಿಶೇಷವು. ಬ್ರಹ್ಮ ಇಲ್ಲಿ ಜಗತ್ತನ್ನು ಸೃಷ್ಟಿಸಲು ಉತ್ತಮವರಗಳನ್ನು ಪಡೆದನು. ವಿಷ್ಣುವೂ ಕೂಡಾ ಇಲ್ಲಿ ಆರಾಧನೆ ಮಾಡಿ ಜಗತ್ಪರಿಪಾಲನೆಗೆ ವರಗಳನ್ನು ಪಡೆದನು. ಕಾಶೀಪುರವು ಮಹತ್ಕ್ಷೇತ್ರವು. ಬರಿಯ ದರ್ಶನದಿಂದಲೇ ಸಿದ್ಧಿಯನ್ನು ನೀಡುವುದು. ಅಲ್ಲಿ ನಿನ್ನ ಕೋರಿಕೆಗಳು ಸಿದ್ಧಿಸುವುವು. ಆದ್ದರಿಂದ ತಕ್ಷಣವೇ ಸಂಶಯ ಪಡದೆ ಕಾಶಿ ಪಟ್ಟಣಕ್ಕೆ ಹೋಗು. ನೀನು ವಿಶ್ವಕರ್ಮನೇ ಆಗಬಲ್ಲೆ. ಆ ಕಾಶಿಯಲ್ಲೇ ಧರ್ಮಾರ್ಥಕಾಮ ಮೋಕ್ಷಗಳು ಸಿದ್ಧಿಸುವುವು. ಆ ಕಾಶಿಯಲ್ಲಿ ನೆಲೆಗೊಂಡಿರುವ ಕೃಪಾನಿಲಯನೇ ಆದ ದೇವನು ಸ್ವಲ್ಪ ಹಾಲು ಕೋರಿದ ಉಪಮನ್ಯುವಿಗೆ ಕ್ಷೀರಸಮುದ್ರವನ್ನೇ ಕೊಟ್ಟನು. ಆ ಕಾಶಿಯ ಆನಂದಕಾನನದಲ್ಲಿ ಸಮಸ್ತ ಕಾಮನೆಗಳೂ ಸಿದ್ಧಿಸುವುವು. ಕಾಶಿ ಸಮಸ್ತ ಧರ್ಮಗಳಿಗೂ ರಾಶಿ. ಸರ್ವಲೋಕಗಳಿಗೂ ಇದೇ ಮೋಕ್ಷಸ್ಥಾನವು. ಕಾಶಿಯನ್ನು ನೋಡಿದರೇನೇ ಸರ್ವ ದೋಷಗಳೂ ನಾಶವಾಗುವುವು. ಅಲ್ಲೇ ನೆಲಸಿರುವವರ ವಿಷಯವನ್ನು ಇನ್ನು ಹೇಳಲೇಕೆ? ತೀರ್ಥಸ್ವರೂಪಿಯಾದ ಕಾಶಿಯನ್ನು ಹೆಜ್ಜೆಹೆಜ್ಜೆಯಲ್ಲೂ ನೋಡುತ್ತಾ ಪರ್ಯಟಿಸುವವರಿಗೆ ಅಶ್ವಮೇಧ ಮಾಡಿದ ಪುಣ್ಯಫಲವು ಲಭಿಸುವುದು." ಎಂದು ಅವಧೂತನು ಉಪದೇಶಿಸಿದನು. ಅವನ ಉಪದೇಶವನ್ನು ಕೇಳಿದ ಆ ಬಾಲಬ್ರಹ್ಮಚಾರಿ ಅವಧೂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, "ಸ್ವಾಮಿ, ಕಾಶೀಪುರವು ಎಲ್ಲಿದೆ? ನಾನು ಈಗ ಮಹಾರಣ್ಯದಲ್ಲಿದ್ದೇನೆ. ಆನಂದಕಾನನವು ಪಾತಾಳದಲ್ಲಿದೆಯೇ? ಮಹೀತಲದಲ್ಲಿದೆಯೇ? ಸ್ವರ್ಗದಲ್ಲಿದೆಯೇ? ನನಗೇನೂ ತಿಳಿಯದು. ಕಾಶಿ ಎಲ್ಲಿದೆ ಎಂಬುದನ್ನು ನನಗೆ ಹೇಳು. ನನ್ನನ್ನು ಕಾಪಾಡು. ನೀನಲ್ಲದೆ ನನ್ನನ್ನು ಇನ್ನು ಯಾರು ಕಾಶಿಗೆ ಸೇರಿಸಬಲ್ಲರು? ಸ್ವಾಮಿ ನಿನಗೆ ಅಲ್ಲಿ ಕೆಲಸವಿದ್ದರೆ ಬಾಲಕನಾದ ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು. ನೀನು ನೀಡಿದ ಜ್ಞಾನವನ್ನು ಅನುಸರಿಸಿ ಹಾಗೆಯೇ ಮಾಡುತ್ತೇನೆ." ಎನ್ನುತ್ತಾ ಬಾಲಕನು ಮತ್ತೆ ಅವಧೂತನ ಪಾದಗಳನ್ನು ಹಿಡಿದುಕೊಂಡನು.

ಹಾಗೆ ಪ್ರಾರ್ಥಿಸುತ್ತಿದ್ದ ಆ ಬಾಲಕನಿಗೆ ಆ ಅನಾಥನಾಥನು ಸಂತೋಷದಿಂದ, " ಅಯ್ಯಾ, ಬಾಲಕ, ನಿನ್ನನ್ನು ಅಲ್ಲಿಗೆ ಯೋಗಮಾರ್ಗದಿಂದ ಕರೆದುಕೊಂಡು ಹೋಗುತ್ತೇನೆ. ನನಗೂ ತೀರ್ಥಯಾತ್ರೆ ಮಾಡಿದ ಲಾಭವಾಗುವುದು. ಕಾಶೀವಾಸವಿಲ್ಲದ ಮಾನವನ ಜನ್ಮವು ವ್ಯರ್ಥವೇ ಅಲ್ಲವೇ! ನಿನ್ನೊಡನೆ ಮಾತನಾಡಿದ್ದರಿಂದ ನನಗೆ ಕಾಶಿ ದರ್ಶನ ಲಭ್ಯವಾಯಿತು. ನನ್ನೊಡನೆ ಬಾ." ಎಂದು ಹೇಳಿ ಆ ಬಾಲಕನನ್ನು ಜೊತೆಯಲ್ಲಿಟ್ಟುಕೊಂಡು ಆ ಅವಧೂತ ಮನೋವೇಗದಲ್ಲಿ ಕ್ಷಣದಲ್ಲಿ ವಿಶ್ವೇಶ್ವರನನ್ನು ಸೇರಿದನು. ಅಲ್ಲಿ ಆ ಅವಧೂತನು ಬಾಲಕನಿಗೆ, " ಇನ್ನು ಕಾಶಿ ಯಾತ್ರೆ ಮಾಡು." ಎಂದು ಹೇಳಿದನು. "ಸ್ವಾಮಿ, ನನಗೇನೂ ತಿಳಿಯದು. ನೀನು ಭಗವಂತನು. ಆದ್ದರಿಂದ ಕಾಶಿಯಾತ್ರಾ ವಿಧಿಯನ್ನು ವಿಶದವಾಗಿ ತಿಳಿಸು." ಎಂದು ಆ ಬಾಲಕನು ಪ್ರಾರ್ಥಿಸಲು, ಆ ತಾಪಸಿ ಕ್ರಮವಾಗಿ ಕಾಶಿಯಾತ್ರಾ ಪದ್ಧತಿಯನ್ನು ಹೇಳಿದನು.

ಸರಸ್ವತಿ "ಹೀಗೆ ಶ್ರೀಗುರುಚರಿತ್ರೆ ಹರ್ಷದಾಯಕವು. ಇದರಿಂದ ನಾಲ್ಕು ಪುರುಷಾರ್ಥಗಳೂ ಸುಲಭಸಾಧ್ಯವಾಗುವುದು." ಎಂದು ಬೋಧಿಸಿದನು. ಸಕಲ ಪ್ರಿಯಗಳನ್ನೂ ಕೈಗೂಡಿಸುವಂತಹ ಇದನ್ನು ಕೇಳುವವನು ಕೃತಾರ್ಥನಾಗಿ ಇಹಲೋಕದಲ್ಲಿ ಭಯರಹಿತನಾಗುತ್ತಾನೆ.

ಇಲ್ಲಿಗೆ ನಲವತ್ತೊಂದನೆಯ ಅಧ್ಯಾಯ ಮುಗಿಯಿತು.

Saturday, September 21, 2013

||ಶ್ರೀಗುರುಚರಿತ್ರೆ - ನಲವತ್ತನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

"ನಾಮಧಾರಕ, ಒಣಗಿದ ಕಟ್ಟಿಗೆ ಗಿಡವಾಗಿ ಬದಲಾದ ಕಥೆಯನ್ನು ಕೇಳು. ಗಂಧರ್ವ ನಗರದಲ್ಲಿ ಶ್ರೀಗುರುವು ನೆಲೆಸಿದ್ದ ಸಮಯದಲ್ಲಿ ಕುಷ್ಠು ರೋಗ ಪೀಡಿತನಾದ ಬ್ರಾಹ್ಮಣನೊಬ್ಬನು ಶ್ರೀಗುರುವಿನ ಬಳಿಗೆ ಬಂದನು. ಅವನು ಯಜುರ್ವೇದಿ. ಹೆಸರು ನರಹರಿ. ಗಾರ್ಗ್ಯ ಗೋತ್ರ. ಅವನು ಭಕ್ತಿ ಭಾವದಿಂದ ಬಂದು ಶ್ರೀಗುರುವಿಗೆ ನಮಸ್ಕಾರ ಮಾಡಿ, ಶ್ರೀಗುರುವನ್ನು ಸ್ತುತಿಸುತ್ತಾ, "ಹೇ ಗುರುಮೂರ್ತಿ, ಜಯವಾಗಲಿ. ಜಯವಾಗಲಿ. ನಿಮ್ಮ ಉತ್ತಮ ಖ್ಯಾತಿಯನ್ನು ಕೇಳಿದೆ. ನೀವು ಪರಮ ಪುರುಷನು. ನೀವೇ ಪರಂಜ್ಯೋತಿಯು. ಭಕ್ತವತ್ಸಲರು. ಹೇ ಶ್ರೀಗುರು, ಸ್ವಾಮಿ, ಇವನು ಕುಷ್ಠು ರೋಗಿ ಎಂದು ಎಲ್ಲರೂ ನನ್ನನ್ನು ನಿಂದಿಸುತ್ತಿದ್ದಾರೆ. ನಾನು ಆಪಸ್ಥಂಭ ಶಾಖೆಯನ್ನು ಅಧ್ಯಯನ ಮಾಡಿದ್ದೇನೆ. ಅವಯವ ಹೀನನು ಇವನು ಎಂದು ನನ್ನನ್ನು ಬ್ರಾಹ್ಮಣರು ಯಾರೂ ಊಟಕ್ಕೆ ಆಹ್ವಾನಿಸುವುದಿಲ್ಲ. ಬೆಳಗ್ಗೆ ಏಳುತ್ತಲೇ ಕುಷ್ಠನಾದ ನನ್ನ ಮುಖವನ್ನು ಯಾರೂ ನೋಡುವುದಿಲ್ಲ. ಇನ್ನು ನಾನು ಜೀವಿಸಿ ಪ್ರಯೋಜನವೇನು? ಹಿಂದಿನ ಜನ್ಮದಲ್ಲಿ ಲೆಕ್ಕವಿಲ್ಲದಷ್ಟು ಪಾಪಗಳನ್ನು ನಾನು ಮಾಡಿದ್ದಿರಬೇಕು. ಅದರ ಪರಿಣಾಮ ಹೀಗಾಗಿದೆ. ಇದನ್ನು ಸಹಿಸಲಾರೆ. ಅನೇಕ ವ್ರತಗಳನ್ನು ಮಾಡಿದೆ. ತೀರ್ಥಗಳಲ್ಲಿ ಸೇವೆ ಮಾಡಿದೆ. ದೇವತೆಗಳ ಪೂಜೆಗಳನ್ನು ಮಾಡಿದೆ. ಆದರೂ ನನ್ನ ಈ ರೋಗವು ಹೋಗಲಿಲ್ಲ. ನೀವು ದಯೆ ತೋರಿಸದಿದ್ದರೆ ನಿಮ್ಮ ಎದುರಿಗೇ ಪ್ರಾಣ ತ್ಯಾಗ ಮಾಡಬೇಕೆಂದು ನಿಶ್ಚಯ ಮಾಡಿಕೊಂಡು ಬಂದಿದ್ದೇನೆ" ಎಂದು ಹೇಳಿ, "ನನಗೆ ನಿಮ್ಮ ದರ್ಶನವು ಲೋಹವನ್ನು ಬದಲಿಸುವ ಪರಶು ವೇದಿಯಾಗಬೇಕು" ಎಂದು ಕೇಳಿಕೊಂಡನು.

ಶ್ರೀಗುರುವು ಆ ದ್ವಿಜನಿಗೆ, "ನೀನು ಪೂರ್ವದಲ್ಲಿ ಮಹಾಪಾಪಗಳನ್ನು ಮಾಡಿದ್ದೀಯೆ. ಹೇ ವಿಪ್ರ, ಅದರಿಂದಲೇ ನೀನೀಗ ಕುಷ್ಠು ರೋಗದಿಂದ ಬಾಧೆ ಪಡುತ್ತಿದ್ದೀಯೆ. ಈಗ ನಿನಗೆ ಆ ದೋಷಗಳನ್ನು ನಾಶ ಮಾಡುವಂತಹ ಒಂದು ಉಪಾಯವನ್ನು ಹೇಳುತ್ತೇನೆ. ಹಾಗೆ ಮಾಡಿದರೆ ನೀನು ಶುದ್ಧನಾಗಿ ದಿವ್ಯವಾದ ದೇಹವನ್ನು ತ್ವರೆಯಾಗಿ ಹೊಂದಬಲ್ಲೆ" ಎಂದು ಹೇಳಿದರು. ಆ ಸಮಯದಲ್ಲಿ ಒಬ್ಬನು ನಾಲ್ಕು ವರ್ಷಗಳ ಹಿಂದೆಯೇ ಒಣಗಿ ಹೋಗಿದ್ದ ಔದುಂಬರ ವೃಕ್ಷದ ತುಂಡೊಂದನ್ನು ಸೌದೆಯಾಗಿ ಉಪಯೋಗಿಸಲು ತೆಗೆದು ಕೊಂಡು ಬರುತ್ತಿದ್ದನು. ಅದನ್ನು ನೋಡಿದ ಶ್ರೀಗುರುವು, "ಹೇ ಬ್ರಾಹ್ಮಣ, ಈ ಒಣಗಿದ ಕಟ್ಟಿಗೆಯನ್ನು ನೀನು ತೆಗೆದುಕೊಂಡು ಹೋಗಿ ನೆಡು. ಭಿಮಾ ನದೀ ತೀರದ ಸಂಗಮ ಸ್ಥಳದ ಪೂರ್ವ ಭಾಗದಲ್ಲಿ ಇದನ್ನು ಗಿಡದಂತೆ ನೆಡು. ಆ ನಂತರ ಸಂಗಮಕ್ಕೆ ಹೋಗಿ ಸ್ನಾನ ಮಾಡಿ ಬಂದು, ಅಶ್ವತ್ಥ ವೃಕ್ಷವನ್ನು ಅರ್ಚಿಸಿ, ಮತ್ತೆ ಸಂಗಮದಲ್ಲಿ ಸ್ನಾನ ಮಾಡು. ಹೇ ಭೂಸುರ, ಅನಂತರ ನೀರು ತುಂಬಿದ ಎರಡು ಕಲಶಗಳನ್ನು ತಂದು ಮೂರು ಕಾಲದಲ್ಲೂ ಈ ಒಣಗಿದ ಕಟ್ಟಿಗೆಗೆ ನನ್ನ ಮಾತಿನಂತೆ ಅಭಿಷೇಕ ಮಾಡು. ಯಾವ ದಿನ ಈ ಒಣಗಿದ ಕಟ್ಟಿಗೆಯ ತುಂಡು ಚಿಗುರುತ್ತದೋ ಅಂದು ನಿನ್ನ ಪಾಪಗಳೆಲ್ಲಾ ನಾಶವಾಗಿ ನೀನು ಸುಂದರಾಂಗನಾಗುವೆ" ಎಂದು ಶ್ರೀಗುರುವು ಆ ಕುಷ್ಠು ರೋಗಿಗೆ ಆದೇಶ ಕೊಟ್ಟರು. ಶ್ರೀಗುರುವಿನ ಆಜ್ಞೆಯನ್ನು ಅನುಸರಿಸಿ ಆ ವಿಪ್ರನು, ಒಣಗಿದ ಆ ಕಟ್ಟಿಗೆಯತುಂಡನ್ನು ತಲೆಯ ಮೇಲಿಟ್ಟು ಕೊಂಡು ತೆಗೆದು ಕೊಂಡು. ಭೀಮಾತೀರದ ಸಂಗಮಕ್ಕೆ ಹೋಗಿ, ಸಂಗಮೇಶ್ವರನ ಎದುರಿಗೆ ಹಳ್ಳ ತೆಗೆದು ಆ ತುಂಡನ್ನು ನೆಟ್ಟನು. ಆ ಬ್ರಾಹ್ಮಣ ಭಕ್ತಿಯಿಂದ ಶ್ರೀಗುರುವಿನ ಆಜ್ಞೆಯನ್ನು ಪಾಲಿಸುತ್ತಾ ಅಲ್ಲಿ ನೆಟ್ಟಿದ್ದ ಕಟ್ಟಿಗೆಯ ತುಂಡಿಗೆ ನೀರು ಹಾಕುತ್ತಿದ್ದನು. ಹೀಗೆ ಆ ಬ್ರಾಹ್ಮಣ ಉಪವಾಸ ಮಾಡುತ್ತಾ ಏಳು ದಿನಗಳು ನೀರು ತುಂಬಿದ ಮಡಕೆಗಳಿಂದ ಶ್ರದ್ಧೆಯಿಂದ ಅಭಿಷೇಕ ಮಾಡಿದನು. ಅಲ್ಲಿನ ಬ್ರಾಹ್ಮಣರು ಅವನನ್ನು ಕರೆದು, "ಇದೇನಯ್ಯ ನಿನ್ನ ಕೆಲಸ? ಒಣಗಿದ ಕಟ್ಟಿಗೆಯನ್ನು ಸೇವಿಸುತ್ತಿದ್ದೀಯೇಕೆ? ನಿರ್ಜೀವವಾದದ್ದಕ್ಕೆ ನೀರು ಹಾಕುವುದರಿಂದ ನಿನಗೆ ಏನು ಸಿಕ್ಕುತ್ತದೆ? ಶ್ರೀಗುರು ಮೂರ್ತಿ ದಯಾ ಸಮುದ್ರನು. ಭಕ್ತರಿಗೆ ವರದನು ಅಲ್ಲವೇ? ಆತನ ಕೃಪೆ ತಕ್ಷಣವೇ ಫಲ ಕೊಡುವುದಲ್ಲವೇ? ನಿನ್ನ ಪಾಪಗಳಿಗೆ ಪ್ರಾಯಶ್ಚಿತ್ತವಿಲ್ಲ. ಅದರಿಂದಲೇ ನಿನಗೆ ಈ ಕಟ್ಟಿಗೆಯನ್ನು ಕೊಟ್ಟನು. ಅದು ವ್ಯರ್ಥವು. ಶ್ರೀಗುರುವಿನ ಮಾತುಗಳಲ್ಲಿ ನೀನು ವಿಶ್ವಾಸ ಇಟ್ಟೆ" ಎಂದರು. ಅವರ ಮಾತುಗಳನ್ನು ಕೇಳಿ ಅವನು ವಿನಯದಿಂದ, "ಅಯ್ಯಾ, ಶ್ರೀಗುರು ವಾಕ್ಯವೇ ಕಾಮಧೇನುವು. ಅದು ಬೇರೊಂದು ರೀತಿಯಲ್ಲಿ ಹೇಗಾಗುವುದು? ಶ್ರೀಗುರು ವಾಕ್ಯವು ಅಸತ್ಯ ಹೇಗಾಗುವುದು? ಈ ಕಟ್ಟಿಗೆಯ ತುಂಡು ಮರವಾಗಬಲ್ಲದು ಎಂಬ ಧೈರ್ಯ ನನ್ನಲ್ಲಿ ನಿಜವಾಗಿಯೂ ಇದೆ. ಪ್ರಾಣ ಕೊಟ್ಟಾದರೂ ನಾನು ಶ್ರೀಗುರುವಿನ ಆದೇಶವನ್ನು ಪರಿಪಾಲಿಸುತ್ತೇನೆ" ಎಂದು ಎಲ್ಲರಿಗೂ ಹೇಳಿ, ಆ ಬ್ರಾಹ್ಮಣ ಇತರರು ಅವನನ್ನು ನಿವಾರಿಸಿದರೂ ತಾನ್ನ ಸೇವೆಯನ್ನು ಮಾಡುತ್ತಲೇ ಇದ್ದನು.

ಒಂದು ದಿನ ಶಿಷ್ಯರೆಲ್ಲರೂ ಶ್ರೀಗುರುವಿನ ಬಳಿಸೇರಿ, "ಸ್ವಾಮಿ, ಆ ಬ್ರಾಹ್ಮಣನನ್ನು ಆ ಕಾಷ್ಠವನ್ನು ಸೇವಿಸಲು ಏಕೆ ಹೇಳಿದಿರಿ? ವ್ಯರ್ಥವಾಗಿ ಅವನು ಕಷ್ಟ ಪಡುತ್ತಿದ್ದಾನೆ ಎಂದು ಅವನನ್ನು ನಾವು ನಿವಾರಿಸಿದರೂ, ಇದು ಮೂರ್ಖತ್ವ ಎಂದು ಹೇಳಿದರೂ ಅವನು ಅಂಗೀಕರಿಸುತ್ತಿಲ್ಲ. ಅದಲ್ಲದೆ ನಮಗೆ ಶ್ರೀಗುರುವಿನ ಮಾತೇ ನನ್ನ ಆಕಾಂಕ್ಷೆ ಎನ್ನುವ ನಿಶ್ಚಯದಿಂದ ಅವನು ಆ ಕಾಷ್ಠವನ್ನು ಸೇವಿಸುತಿದ್ದಾನೆ. ಏಳು ದಿನಗಳಾಯಿತು. ಆ ಬ್ರಾಹ್ಮಣ ನೀರು ಕೂಡಾ ಕುಡಿಯುತ್ತಿಲ್ಲ" ಎಂದರು. ಶಿಷ್ಯರ ಮಾತು ಕೇಳಿ, ಶ್ರೀಗುರುವು ಅವರಿಗೆ, "ಯಾರಿಗೆ ಎಂತಹ ಭಾವನೆಯಿರುತ್ತದೋ ಅವರಿಗೆ ಅಂತಹ ಸಿದ್ಧಿ ಲಭಿಸುತ್ತದೆ. ಶಿಷ್ಯರಿಗೆ ಗುರು ವಾಕ್ಯವೇ ಸಿದ್ಧಿಗೆ ಕಾರಣ. ಮಾನವರಿಗೆ ಅವರವರ ಭಾವನೆಗಳಿಗೆ ಅನುಗುಣವಾದ ಸಿದ್ಧಿ ಲಭ್ಯವಾಗುತ್ತದೆ.ಈ ಸಂಗತಿಯನ್ನು ತಿಳಿಸಲು ನಿಮಗೆ ಒಂದು ಪುಣ್ಯ ಪ್ರದವಾದ ಕಥೆಯನ್ನು ಹೇಳುತ್ತೇನೆ. ಅದು ಸ್ಕಾಂದ ಪುರಾಣದಲ್ಲಿದೆ. ಅದನ್ನು ಸೂತನು ಹೇಳಿದನು. ಸೂತನು ಋಷಿಪುಂಗವರಿಗೆ ಗುರುಭಕ್ತಿ ಸಂಸಾರವನ್ನು ತರಿಸುವಂತಹುದು. ಅಂತಹ ಸುಲಭ ಸಾಧನ ಬೇರೊಂದಿಲ್ಲ. ಗುರುವಿನ ಯೋಗ್ಯತೆಯನ್ನು ಪ್ರಶ್ನಿಸಬಾರದು. ಗುರುವನ್ನೇ ಬ್ರಹ್ಮನಾಗಿ ಧ್ಯಾನಿಸುತ್ತಾ ಸೇವೆ ಮಾಡಬೇಕು. ಗುರುವನ್ನು ಲಘುವಾಗಿ ಕಾಣಬಾರದು. ಗುರುವನ್ನು ಈಶ್ವರನಾಗಿ ಭಾವಿಸಬೇಕು. ಮಾನವ ದೃಷ್ಟಿಯಿಂದ ಗುರುವನ್ನು ನೋಡ ಬಾರದು. ಗುರುವನ್ನು ತ್ರಿಮೂರ್ತಿಯಾಗಿ ಭಾವಿಸಬೇಕು. ಹಾಗೆ ನಿಶ್ಚಯಿಸಿಕೊಂಡು ಶ್ರೀಗುರು ಪಾದಗಳನ್ನು ಭಜಿಸುವವರಿಗೆ ಶೂಲಪಾಣಿ ಪ್ರಸನ್ನನಾಗುತ್ತಾನೆ. ಮಂತ್ರದಲ್ಲಿ, ತೀರ್ಥದಲ್ಲಿ, ದ್ವಿಜನಲ್ಲಿ, ದೈವದಲ್ಲಿ, ಜ್ಯೋತಿಷ್ಕನಲ್ಲಿ, ವೈದ್ಯನಲ್ಲಿ, ಗುರುವಿನಲ್ಲಿ ಯಾರಿಗೆ ಯಾವ ಭಾವನೆ ಇರುತ್ತದೋ ಅವರು ಅಂತಹ ಸಿದ್ಧಿಯನ್ನೇ ಪಡೆಯುತ್ತಾರೆ. ಗುರುವನ್ನು ಶಿವನಾಗಿ ನೋಡಿದರೆ ಈಶ್ವರನು ಪ್ರಸನ್ನನಾಗುತ್ತಾನೆ. ಗುರುಭಕ್ತಿ ಅಂತಹುದು. ಅದು ತಕ್ಷಣವೆ ಫಲಪ್ರದವಾಗುತ್ತದೆ. ಹೇ ಋಷೀಶ್ವರರೇ, ಧೃಢ ಭಕ್ತಿಯನ್ನು ಉಂಟುಮಾಡುವ ನಿದರ್ಶನವೊಂದನ್ನು ಹೇಳುತ್ತೇನೆ.

ಪೂರ್ವದಲ್ಲಿ ಪಾಂಚಾಲನಗರವೆಂಬಲ್ಲಿ ಸಿಂಹಕೇತುವೆಂಬ ರಾಜನೊಬ್ಬನಿದ್ದನು. ಅವನ ತನಯನು ಧಾರ್ಮಿಕನು. ಹೆಸರು ಧನಂಜಯ. ಒಂದುಸಲ ಆ ರಾಜಕುಮಾರನು ಬೇಟೆಗೆಂದು ಕಾಡಿಗೆ ಹೋದನು. ನೀರೂ ಕೂಡಾ ದೊರೆಯದ ನಿರ್ಜನ ಪ್ರದೇಶದಲ್ಲಿ ಅವನು ಸಂಚರಿಸುತ್ತಿದ್ದನು. ರಾಜಪುತ್ರನಿಗೆ ನೀರಡಿಕೆಯಾಗಿ ಬಾಧೆಯಾಯಿತು. ಒಬ್ಬ ಬೇಟೆಗಾರನನ್ನು ಹಿಂದಿಟ್ಟುಕೊಂಡು, ದಾಹದಿಂದ ಒದ್ದಾಡುತ್ತಾ ಅವನು ಕಾಡಿನಲ್ಲಿ ಅಲೆಯುತ್ತಿದನು. ಹಾಗೆ ಅಲೆಯುತ್ತಾ ಅಲಸಿ ಹೋಗಿ ಅವನು ದೂರದಲ್ಲಿದ್ದ ಶಬರನೊಡನೆ ಒಂದು ಜೀರ್ಣವಾದ ಶಿವಾಲಯವನ್ನು ಸೇರಿದನು. ಅಲ್ಲಿ ಅನೇಕ ಶಿವಲಿಂಗಗಳು ಬಿದ್ದಿದ್ದವು. ಶಬರನು ಒಂದು ಮೊನೋಹರವಾದ ಶಿವಲಿಂಗವನ್ನು ತೆಗೆದುಕೊಂಡು ರಾಜಪುತ್ರನಿದ್ದ ಜಾಗಕ್ಕೆ ಬಂದನು. ಆ ಅಜಪುತ್ರನು ಅವನನ್ನು ನೋಡಿ, "ಈ ಲಿಂಗದಿಂದ ಏನಾಗಬೇಕು ನಿನಗೆ? ಇಲ್ಲಿ ಬಹಳ ಲಿಂಗಗಳಿವೆಯಲ್ಲವೇ?" ಎಂದನು. ಆ ಶಬರ, " ಈ ಲಿಂಗದಲ್ಲಿ ನನಗೆ ಮನಸ್ಸುಂಟಾಗಿದೆ. ಈ ಲಿಂಗವನ್ನು ಪೂಜೆಮಾಡಬೇಕು" ಎಂದನು. ಅವನ ಮಾತುಗಳನ್ನು ಕೇಳಿದ ರಾಜಪುತ್ರ , " ಒಳ್ಳೆಯದು. ಈ ಲಿಂಗವನ್ನು ಸ್ಥಿರಭಕ್ತಿಯಿಂದ ಪೂಜೆಮಾಡು" ಎನ್ನಲು, ಆ ಶಬರನು ರಾಜಕುಮಾರನಿಗೆ ನಮಸ್ಕರಿಸಿ, "ಹೇ ಪ್ರಭು, ಲಿಂಗವನ್ನು ಯಾವ ವಿಧಾನದಲ್ಲಿ ಪೂಜಿಸಬೇಕೋ ಹೇಳು. ನಾನು ಜಾತಿಯಲ್ಲಿ ಬೇಡರವನು. ಅಜ್ಞಾನಿ. ಪೂಜಾವಿಧಾನ ನನಗೆ ತಿಳಿಯದು. ವಿಸ್ತಾರವಾಗಿ ಹೇಳು. ಹೇ ಪ್ರಭು ನೀನೇ ನನಗೆ ಗುರುವು" ಎಂದು ಪ್ರಾರ್ಥಿಸಿದನು. ಆ ರಾಜಕುಮಾರನು, "ಈ ಲಿಂಗವನ್ನು ಮನೆಗೆ ತೆಗೆದುಕೊಂಡು ಹೋಗಿ, ಶುಭ್ರವಾದ ಒಂದು ಪ್ರದೇಶದಲ್ಲಿ ಸ್ಥಾಪಿಸಿ, ಗಂಧ ಪುಷ್ಪಾದಿಗಳಿಂದ ಅರ್ಚಿಸು. ನಿನ್ನ ಹೆಂಡತಿಯನ್ನೂ ನಿನ್ನ ಜೊತೆಯಲ್ಲಿಟ್ಟುಕೊಂಡು ಪೂಜಿಸು. ಲಿಂಗಕ್ಕೆ ನೈವೇದ್ಯ ಮಾಡಿ ಆ ನೈವೇದ್ಯ ಪ್ರಸಾದವನ್ನು ನಿನ್ನ ಹೆಂಡತಿಯೊಡನೆ ತಿನ್ನು. ನೀನು ಯಾವಯಾವ ಪದಾರ್ಥಗಳನ್ನು ತಿನ್ನುತ್ತಿಯೋ ಅದೆಲ್ಲವನ್ನೂ ಮೊದಲು ಲಿಂಗಕ್ಕೆ ಅರ್ಪಿಸಿ ನಂತರ ತಿನ್ನು. ಶಬರ, ನಿನಗೆ ಪೂಜಾವಿಧಾನವನ್ನು ಹೇಳಿದ್ದೇನೆ" ಎಂದು ಹೇಳಿದನು.

ಆ ಶಬರನು ಸಂತುಷ್ಟನಾಗಿ ಲಿಂಗವನ್ನು ತೆಗೆದು ಕೊಂಡು ಮನೆಗೆ ಹೋದನು. ಅವನು ತನಗೆ ಲಿಂಗವ ಪ್ರಸನ್ನವಾಯಿತೆಂದು ತನ್ನ ಹೆಂಡತಿಗೆ ಹೇಳಿದನು. ಅವನು ಪ್ರತಿದಿನವೂ ಲಿಂಗವನ್ನು ರಾಜಕುಮಾರನು ಹೇಳಿದ ಹಾಗೆ ಅರ್ಚಿಸುತ್ತಿದ್ದನು. ನಿತ್ಯವೂ ಚಿತಾ ಭಸ್ಮವನ್ನು ತಂದು ಲಿಂಗವನ್ನು ಅಲಂಕರಿಸಿ ಅವರಿಬ್ಬರೂ ಲಿಂಗಾರ್ಚನೆ ಮಾಡುತ್ತಿದ್ದರು. ಒಂದುದಿನ ಚಿತಾ ಭಸ್ಮ ದೊರೆಯಲಿಲ್ಲ. ಅವನು ಎಲ್ಲ ಕಡೆಯಲ್ಲೂ ಹುಡುಕಿ ಅಲಸಿಹೋಗಿ ಮನೆಗೆ ಹಿಂತಿರುಗಿದನು. ಚಿಂತೆಯಿಂದ ಖಿನ್ನನಾದ ಅವನು ಹೆಂಡತಿಗೆ, "ನಾನೇನು ಮಾಡಲಿ? ಪ್ರಾಣ ಬಿಡುತ್ತೇನೆ. ಚಿತಾಭಸ್ಮವಿಲ್ಲದೆ ಲಿಂಗ ಪೂಜೆ ಆಗುವುದಿಲ್ಲ. ಇಂದು ಚಿತಾಭಸ್ಮ ದೊರೆಯಲಿಲ್ಲ. ಗುರುವು ಆದೇಶಿಸಿದಂತೆ ನೈವೇದ್ಯವನ್ನು ಇಡಲೇ ಬೇಕು. ಇಲ್ಲದಿದ್ದರೆ ಲಿಂಗಪೂಜೆ ವ್ಯರ್ಥ. ಗುರುವಾಕ್ಯವನ್ನು ನಿರ್ವಹಿಸದವನು ರೌರವ ನರಕಕ್ಕೆ ಹೋಗುತ್ತಾನೆ. ದರಿದ್ರನಾಗುತ್ತಾನೆ. ಗುರುಭಕ್ತಿಯನ್ನು ತೋರಿಸುವವನು ಭವಸಾಗರವನ್ನು ದಾಟುತ್ತಾನೆ. ಆದ್ದರಿಂದ ಲಿಂಗಕ್ಕೋಸ್ಕರ ನಾನು ಪ್ರಾಣ ಬಿಡಲು ನಿಶ್ಚಯಿಸಿ ಕೊಂಡಿದ್ದೇನೆ" ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಶಬರಿ, "ಸ್ವಾಮಿ, ನಿಮಗೆ ಚಿಂತೆ ಏತಕ್ಕೆ? ನಾನು ನಿಮಗೆ ಚಿತಾಭಸ್ಮವನ್ನು ಕೊಡುತ್ತೇನೆ. ನನ್ನನ್ನು ಮನೆಯೊಳಗೆ ಇಟ್ಟು ಮನೆಗೆ ಬೆಂಕಿ ಹಚ್ಚು. ನನ್ನ ದೇಹವು ದಗ್ಧವಾಗುವುದು. ಆ ಭಸ್ಮವನ್ನು ತೆಗೆದುಕೊಂಡು ಶಂಕರನಿಗೆ ಸಮರ್ಪಿಸು. ವ್ರತಭಂಗ ಮಾಡಬೇಡ. ಈ ಶರೀರಕ್ಕೆ ಎಂದಾದರೂ ನಾಶನವು ನಿಶ್ಚಯವೇ ಅಲ್ಲವೇ? ಆದ್ದರಿಂದ ಶಿವ ಕಾರ್ಯಾರ್ಥವಾಗಿ ದೇಹವನ್ನು ಸಮರ್ಪಿಸುತ್ತೇನೆ" ಎಂದಳು.

ಆ ಶಬರನು ದುಃಖದಿಂದ, "ಪ್ರಿಯಳೇ. ನಿನ್ನ ಪ್ರಾಣವನ್ನು ಹೇಗೆ ತೆಗೆಯಲಿ? ಚಿಕ್ಕ ವಯಸ್ಸಿನವಳು. ಸಂತಾನ ಸೌಖ್ಯವನ್ನೂ ಪಡೆದಿಲ್ಲ. ನಿನ್ನಲ್ಲಿ ಏನೂ ದೋಷವಿಲ್ಲ. ನಿನ್ನ ತಾಯಿ ನಿನ್ನನ್ನು ರಕ್ಷಿಸು ಎಂದು ನನಗೆ ಕೊಟ್ಟಳು. ಪ್ರಾಣದಂತೆ ರಕ್ಷಿಸುತ್ತೇನೆ ಎಂದು ನಿನ್ನನ್ನು ನನ್ನ ಮನೆಗೆ ಕರೆದುತಂದೆ. ಅದರಿಂದ ನಾನು ನಿನ್ನನ್ನು ದಹಿಸಿದರೆ ನನಗೆ ಅನೇಕ ಪಾಪಗಳು ಬರುತ್ತವೆ. ನನ್ನನ್ನು ಎಲ್ಲರೂ ಭಾರ್ಯಾ ಹಂತಕನೆಂದು ಹಳಿಯುತ್ತಾರೆ. ಹೇಗೋ ಮಾಡಿ ನಾನು ನಿನ್ನನ್ನು ಸಾಯಿಸಿದರೂ ತ್ರಿಪುರಾರಿಯಾದ ಮಹೇಶ್ವರನು ಹೇಗೆ ಸಂತುಷ್ಟನಾಗುತ್ತಾನೆ? ಶರೀರವಿಟ್ಟುಕೊಂಡೇ ಈ ಲೋಕದಲ್ಲಿ ವ್ರತಾದಿಗಳನ್ನು ಮಾಡಬೇಕಲ್ಲವೇ? ಅಂತಹ ಶರೀರವನ್ನು ದಹಿಸಲಾಗದು. ಜೀವಿಸಿರುವ ಶರೀರವನ್ನು ದಹಿಸುವುದರಿಂದ ನನಗೇನು ಸಿಕ್ಕುವುದು?’ ಎಂದು ಅವನು ಹೇಳಲು, ಅವಳು ತನ್ನ ಗಂಡನಿಗೆ, "ಮೋಹದಿಂದಾಗಿ ನಿನ್ನ ಭಕ್ತಿಯು ಅಸತ್ಯವಾಗಿದೆ. ಈ ದೇಹವು ಕನಸಿನಲ್ಲಿ ಕಂಡಂತೆ, ನೀರಿನಗುಳ್ಳೆಯಂತೆ ನಶ್ವರವಾದದ್ದು. ಹುಟ್ಟಿದವನಿಗೆ ಮರಣವು ನಿಶ್ಚಯವು. ನನ್ನ ತಾಯಿತಂದೆಗಳು ನನ್ನನ್ನು ನಿನಗೆ ಅರ್ಪಿಸಿದ್ದಾರೆ. ನಾನು ನಿನ್ನ ಶರೀರದಲ್ಲಿ ಅರ್ಧಭಾಗವೇ ಅಲ್ಲವೇ? ಪ್ರಾಣನಾಥ, ನಿನಗಿಂತ ನಾನು ಬೇರೆ ಹೇಗಾಗುತ್ತೇನೆ ಹೇಳು. ‘ನಾನೇ ನಿನ್ನ ಆತ್ಮವು. ನೀನೇ ನನ್ನ ಆತ್ಮವು’ ಎಂದು ಭಾವಿಸಿ ಅರ್ಧ ಶರೀರ ಎಂದು ತಿಳಿದವನಿಗೆ ತನ್ನಲ್ಲಿ ದೋಷವೇನೂ ಇಲ್ಲ. ಆದ್ದರಿಂದ ನನ್ನ ದೇಹಕ್ಕೆ ಸಾಫಲ್ಯವನ್ನು ಪ್ರಸಾದಿಸು. ಅದರಿಂದ ಈಶ್ವರನೂ ಕೂಡಾ ಪ್ರಸನ್ನನಾಗುತ್ತಾನೆ" ಎಂದು ವಿನಯದಿಂದ ಹೇಳಿ, ತಾನು ಮನೆಯೊಳಕ್ಕೆ ಹೋಗಿ, "ನಾಥ, ಮನೆಗೆ ಬೆಂಕಿ ಹಚ್ಚು" ಎಂದಳು. ಶಬರನು ಗೃಹದ್ವಾರವನ್ನು ಮುಚ್ಚಿ ಮನೆಗೆ ಬೆಂಕಿಯಿಟ್ಟನು. ಮನೆಯೆಲ್ಲವೂ ಸುಟ್ಟು ಭಸ್ಮವಾಯಿತು. ಶಬರನ ಹೆಂಡತಿಯೂ ಸುಟ್ಟು ಹೋದಳು. ಆ ಭಸ್ಮವನ್ನು ತೆಗೆದು ಕೊಂಡು ಎಂದಿನಂತೆ ಆ ಶಬರನು ಭಕ್ತಿಯಿಂದ ಲಿಂಗಕ್ಕೆ ಅರ್ಪಿಸಿದನು. ಅವನಿಗೆ ಮಹದಾನಂದವಾಯಿತು. ಆ ಆನಂದದಲ್ಲಿ ಅವನಿಗೆ ಹೆಂಡತಿ ಸುಟ್ಟು ಹೋದಳೆಂಬುದೂ ಮರೆತುಹೋಯಿತು.

ಶ್ರದ್ಧಾಭಕ್ತಿಗಳಿಂದ ದಿನವೂ ಆ ಶಬರ ಶಿವನನ್ನು ಪೂಜಿಸಿ ಕೈಯಲ್ಲಿ ಪ್ರಸಾದವನ್ನು ಹಿಡಿದು ಪ್ರೇಮದಿಂದ ತನ್ನ ಹೆಂಡತಿಯನ್ನು ಕರೆದು ಅವಳೊಡನೆ ಪ್ರಸಾದವನ್ನು ತಿನ್ನುವನು. ಆ ದಿನವೂ ಎಂದಿನಂತೆ, ತನ್ನ ಹೆಂಡತಿಯಿಲ್ಲ ಎನ್ನುವುದನ್ನು ಮರೆತು, ಪ್ರಸಾದ ತೆಗೆದುಕೊಳ್ಳಲು ಅವಳನ್ನು ಕರೆದನು. ಶಂಕರನು ಅವನಲ್ಲಿ ಪ್ರಸನ್ನನಾದನು. ಆ ಶಬರಿಯು ಕೈಯಲ್ಲಿ ಪ್ರಸಾದವನ್ನು ಹಿಡಿದು ಬಂದಳು. ಮನೆಯೂ ಕೂಡಾ ಹಿಂದಿನಂತೆಯೇ ಇತ್ತು. ಅದನ್ನು ಕಂಡ ಶಬರನು, "ಇದೇನು ಆಶ್ಚರ್ಯ! ಮನೆಯು ಹಿಂದಿನಂತೆಯೇ ಇದೆ!" ಎಂದು ಯೋಚಿಸುತ್ತ ತನ್ನ ಹೆಂಡತಿಯನ್ನು ಕರೆದು, "ಪ್ರಿಯೆ, ನೀನು ದಗ್ಧಳಾಗಿದ್ದರೂ ಮತ್ತೆ ಹೇಗೆ ಬಂದೆ?" ಎಂದು ಕೇಳಿದನು. ಅವಳು "ನನಗೆ ನಿದ್ದೆ ಬಂತು. ಬಹಳ ಛಳಿಯಿಂದ ಬಾಧೆಯಾಗಿ ಮನೆಯಲ್ಲಿ ನಿದ್ರೆ ಮಾಡಿದೆ. ಈಗ ನೀನು ಕರೆಯುತ್ತಲೇ ಎಚ್ಚರವಾಯಿತು" ಎಂದಳು. ಆ ಕ್ಷಣದಲ್ಲಿ ಶಿವನು ಅವರ ಮುಂದೆ ಪ್ರತ್ಯಕ್ಷನಾದನು. ಅವರಿಬ್ಬರೂ ಶಿವನ ಪಾದಗಳನ್ನು ಹಿಡಿದು ಕೊಂಡರು. ಶೂಲಪಾಣಿ ಪ್ರಸನ್ನನಾಗಿ ವರ ಕೇಳೆಂದು ಹೇಳಿ, ತಾನೇ ಅವರಿಗೆ ಇಹದಲ್ಲಿ ಸೌಖ್ಯ, ನಂತರ ಕೋಟಿ ವರ್ಷಗಳು ಸ್ವರ್ಗದಲ್ಲಿ ವಾಸ ಎಂದು ವರವನ್ನು ಕೊಟ್ಟನು. ಹೀಗೆ ಮುನಿಗಳಿಗೆ ಸೂತನು ವಿಸ್ತಾರವಾಗಿ ಈ ಕಥೆಯನ್ನು ಹೇಳಿದನು. ಗುರುವಾಕ್ಯದಲ್ಲಿ ವಿಶ್ವಾಸ ಇರುವವರಿಗೆ ಫಲವು ತ್ವರೆಯಾಗಿ ಲಭಿಸುತ್ತದೆ" ಎಂದು ಶ್ರೀಗುರುವು ಶಿಷ್ಯರಿಗೆ ಬೋಧಿಸಿ, ಮತ್ತೆ ಹೇಳಿದರು.

"ಅ ಬ್ರಾಹ್ಮಣನು ಭಕ್ತಿಯಿಂದ ವಿಶ್ವಾಸವಿಟ್ಟು ಆ ಕಾಷ್ಠವನ್ನು ಸೇವಿಸುತ್ತಿದ್ದಾನೆ. ಯಾರ ಭಾವ ಹೇಗಿರುತ್ತದೋ ಅವರಿಗೆ ಫಲವೂ ಹಾಗೆಯೆ ಲಭಿಸುತ್ತದೆ" ಎಂದು ಹೇಳಿ ಶ್ರೀಗುರುವು ಸಂಗಮ ಸ್ಥಾನಕ್ಕೆ ಹೋದರು. ಮಾಧ್ಯಾಹ್ನಿಕ ಅನುಷ್ಠಾನಗಳನ್ನೆಲ್ಲ ತೀರಿಸಿಕೊಂಡು ಆ ಕುಷ್ಠುರೋಗಿಯನ್ನು ನೋಡಿ, ಕಾಷ್ಠವನ್ನು ಹೇಗೆ ಸೇವಿಸುತ್ತಿದ್ದಾನೆ ಎಂಬುದನ್ನು ಕಂಡು ಅವನಲ್ಲಿ ಪ್ರಸನ್ನನಾದರು. ಕಮಂಡಲುವಿನಿಂದ ನೀರು ತೆಗೆದುಕೊಂಡು ಆ ಒಣಕಾಷ್ಠದ ಮೇಲೆ ಚೆಲ್ಲಿ, ಅದನ್ನು ದೃಷ್ಟಿಸಿ ನೋಡಿದರು. ತಕ್ಷಣವೇ ಆ ಒಣಕಾಷ್ಠ ಚಿಗುರಿತು. ಅದು ಔದುಂಬರ ವೃಕ್ಷವೆನ್ನುವುದನ್ನು ಎಲ್ಲರೂ ಸಾಕ್ಷಾತ್ತಾಗಿ ನೋಡಿದರು. ಚಿಂತಾಮಣಿ ಸ್ಪರ್ಶದಿಂದ ಕಬ್ಬಿಣವು ಚಿನ್ನವಾದ ಹಾಗೆ ಶ್ರೀಗುರುವಿನ ಸುಧಾದೃಷ್ಟಿಯಿಂದ ಒಣಗಿದ ಕಟ್ಟಿಗೆ ಔದುಂಬರ ವೃಕ್ಷವಾಯಿತು. ಪಂಡಿತನಾದ ಆ ಕುಷ್ಠು ರೋಗಿಯ ರೋಗವು ತೊಲಗಿಹೋಗಿ, ಅವನ ಶರೀರ ಹೇಮ ಛಾಯೆಯಿಂದ ಬೆಳಗಿತು. ಆಗ ಆ ದ್ವಿಜನು ಶ್ರೀಗುರುವನ್ನು ಹೀಗೆ ಸ್ತುತಿಸಿದನು. ** **

"ಶ್ರೀ ನೃಸಿಂಹೇಶ್ವರ ಕೋಟಿಸೂರ್ಯಪ್ರಭೆಯಿಂದ ಕೋಟಿ ಚಂದ್ರನಂತೆ ಶಾಂತನಾಗಿ ವಿಶ್ವಕ್ಕೆಲ್ಲಾ ಆಶ್ರಯನಾಗಿ ದೇವಗಣಗಳು ಅರ್ಚಿಸುವ ಪಾದಪದ್ಮಗಳೊಡನೆ ಬೆಳಗುತ್ತಾ ಭಕ್ತಪ್ರಿಯನಾಗಿ ವರೇಣ್ಯನಾದ ನಿನಗೆ ವಂದನವು. ನನ್ನನ್ನು ರಕ್ಷಿಸು.

ಮಾಯೆ ಎನ್ನುವ ಕತ್ತಲಿಗೆ ನೀನೇ ಸೂರ್ಯನು. ಗುಣರಹಿತನಾದರೂ ಗುಣಾಢ್ಯನು. ನೀನೇ ಶ್ರೀವಲ್ಲಭನು. ಭಿಕ್ಷುವೇಷವನ್ನು ಸ್ವೀಕರಿಸಿದ್ದೀಯೆ. ಸದ್ಭಕ್ತರು ನಿನ್ನ ಸೇವೆ ಮಾಡುತ್ತಾರೆ. ನೀನೇ ವರದನು. ನೀನೇ ವರಿಷ್ಠನು. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು.

ಕಾಮವೇ ಮೊದಲಾದ ಷಡ್ಗುಣಗಳೆಂಬ ಗಜಗಳಿಗೆ ನೀನೇ ಅಂಕುಶವು. ನೀನೇ ಆನಂದಕ್ಕೆ ಮೂಲವು. ಪರತತ್ತ್ವವೇ ನಿನ್ನ ರೂಪವು. ಸದ್ಧರ್ಮವನ್ನು ರಕ್ಷಿಸಲು ಅವತಾರವನ್ನು ಧರಿಸಿದ್ದೀಯೆ. ನಿನಗೆ ವಂದನವು. ನನ್ನನ್ನು ಕಾಪಾಡು. 

ಸೂರ್ಯನೂ ಚಂದ್ರನೂ ನಿನ್ನ ನೇತ್ರಗಳು. ಸಜ್ಜನರಿಗೆ ಕಾಮಧೇನುವು ನೀನೇ. ಪಂಚಭೂತಾತ್ಮಕವಾದ ಈ ಮಾಯಾಪ್ರಪಂಚವು ನಿನ್ನಿಂದಲೇ ಉದಯಿಸಿ ನಿನ್ನಲ್ಲೇ ರಮಿಸುತ್ತಾ ನಿನ್ನಲ್ಲೇ ಅಸ್ತಮಿಸುತ್ತಿದೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು. 

ಕೆಂಪುತಾವರೆಯಂತೆ ಮನೋಹರವಾದವು ನಿನ್ನ ನಯನಗಳು. ಉತ್ತಮವಾದ ದಂಡವನ್ನು ಕಮಂಡಲವನ್ನು ಹಿಡಿದು ನೀನು ಪಾಪಗಳನ್ನು ಹೋಗಲಾಡಿಸುತ್ತೀಯೆ. ಆಶ್ರಿತರಿಗೆ ನಸುನಗೆ ಎನ್ನುವ ಬೆಳದಿಂಗಳಿನಿಂದ ನಿನ್ನ ಮುಖಚಂದ್ರವು ಶೋಭಿಸುತ್ತಿದೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು. 

ನಿತ್ಯವೂ ವೇದತ್ರಯಗಳು ನಿನ್ನ ಪಾದಪದ್ಮಧೂಳಿಯನ್ನು ಅನ್ವೇಷಿಸುತ್ತಿರುತ್ತಿವೆ. ನಾದಬಿಂದುಕಳಾಸ್ವರೂಪನು ನೀನು. ತಾಪತ್ರಯಗಳಿಂದ ತಪ್ತರಾದ ಆಶ್ರಿತರಿಗೆ ನೀನೇ ಕಲ್ಪವೃಕ್ಷವು. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು. 

ದೈನ್ಯ, ಆಧಿ, ಭಯ, ಕಷ್ಟಗಳೆನ್ನುವ ದಾವಾಗ್ನಿಯನ್ನು ಶಾಂತಗೊಳಿಸಿ ಸ್ತುತ್ಯನಾಗಿದ್ದೀಯೆ ನೀನು. ಅಷ್ಟಾಂಗಯೋಗವನ್ನು, ಜ್ಞಾನವನ್ನು ಬೋಧಿಸುವುದರಲ್ಲಿ ನೀನು ಉತ್ಸಾಹವನ್ನು ತೋರಿಸುತ್ತೀಯೆ. ಕೃಷ್ಣಾನದಿಯ ಪಂಚನದಿ ಸಂಗಮದಲ್ಲಿ ನೀನು ನೆಲೆಸಿದ್ದೀಯೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು. 

ಆದಿಮಧ್ಯಾಂತಗಳು ನಿನಗಿಲ್ಲ. ನಿನ್ನ ಶಕ್ತಿ ಅನಂತವು. ನಿನ್ನ ಭಾವವು ತರ್ಕಕ್ಕೆ ಸಿಕ್ಕಲಾರದ್ದು. ನಿನ್ನ ಹೆಸರೇ ಪರಮಾತ್ಮ. ಮಾತುಗಳಿಗೆ, ದೃಷ್ಟಿಗೆ ನಿನ್ನ ಮಾರ್ಗವು ಸಿಕ್ಕುವುದಿಲ್ಲ. ನೀನು ಅದ್ವಿತೀಯನು. ಶ್ರೀನೃಸಿಂಹೇಶ್ವರ ನಿನಗೆ ವಂದನವು. ರಕ್ಷಿಸು. 

ಶ್ರೀ ನೃಸಿಂಹಾಷ್ಟಕವನ್ನು ಪಠಿಸುವವನಿಗೆ ದೀರ್ಘಾಯುವು ಲಭಿಸುವುದು. ಅಂತಹವನು ಸಂಸಾರವನ್ನು ದಾಟಿ ಅಮೃತವನ್ನು ಪಡೆಯುತ್ತಾನೆ" **

ಎಂದು ಸ್ತುತಿಸಿ ನರಹರಿ ಎನ್ನುವ ಆ ದ್ವಿಜನು ಶ್ರೀಗುರುವನ್ನು, "ಹೇ ಭಗವನ್, ನೃಹರಿ, ದೇವ, ಸ್ವಾಮಿ, ನನ್ನಲ್ಲಿ ದಯೆತೋರಿಸಿದೆ." ಎಂದು ಹೇಳುತ್ತಾ ಅವರ ಪಾದಗಳಲ್ಲಿ ನಮಿಸಿದನು. ಶ್ರೀಗುರುನಾಥನು ಅವನ ತಲೆಯಮೇಲೆ ಕೈಯಿಟ್ಟು, ಕೃಪಾತಿರೇಕದಿಂದ ಅವನನ್ನು ಮೇಲೆತ್ತಿ, "ಹೇ ಜ್ಞಾನರಾಶಿ ಏಳು’ ಎಂದು ಹೇಳಿ ಆದರಿಸಿದನು. ಒಣಗಿದ ಕೊಂಬೆ ಚಿಗುರುವುದು, ಆ ಬ್ರಾಹ್ಮಣನು ರೋಗವಿಮುಕ್ತನಾಗುವುದು ಎಲ್ಲವನ್ನೂ ಕಂಡು ಅಲ್ಲಿ ಸೇರಿದ್ದವರೆಲ್ಲರೂ ವಿಸ್ಮಯಗೊಂಡು ಶ್ರೀಗುರುವನ್ನು ಸ್ತುತಿಸಿದರು. 

ಶ್ರೀಗುರುವು ನಿರ್ಗುಣ ಮಠಕ್ಕೆ ಹಿಂತಿರುಗಿದರು. ಗ್ರಾಮಸ್ಥರು ನೀರಾಜನವನ್ನು ತಂದು ಆದರದಿಂದ ಅವರ ಸಮ್ಮುಖಕ್ಕೆ ಬಂದರು. ಅಂದು ನರಹರಿ ಸಕುಟುಂಬರಾದ ಬ್ರಾಹ್ಮಣರೆಲ್ಲರಿಗೂ ಸಮಾರಾಧನೆ ಮಾಡಿದನು. ನರಹರಿಯನ್ನು ಕರೆದು ಶ್ರೀಗುರುವು, "ಅಯ್ಯಾ, ನೀನು ನನ್ನ ಭಕ್ತನು. ನಿನಗೆ ಇಹಲೋಕಪರಲೋಕಗಳ ಸುಖವನ್ನು ಕೊಟ್ಟಿದ್ದೇನೆ. ಪುತ್ರಪುತ್ರಿಯರು, ಸಂಪದವು ನಿನಗೆ ಸಮೃದ್ಧಿಯಾಗಿ ಸೇರುತ್ತವೆ." ಎಂದು ಹೇಳಿ ಅವನಿಗೆ ಸಾಂಗಯೋಗಮಾರ್ಗವನ್ನು ಅನುಗ್ರಹಿಸಿ, "ನಿನಗೆ ಇಂದಿನಿಂದ ಯೋಗೀಶ್ವರನೆಂದು ಹೆಸರು ಕೊಡಲಾಗಿದೆ. ಈ ಸರ್ವ ಶಿಷ್ಯರಲ್ಲಿ ನೀನೇ ಶ್ರೇಷ್ಠನು. ನೀನು ನನ್ನ ಪ್ರಿಯ ಭಕ್ತನು. ಇನ್ನು ಮೇಲೆ ನನ್ನ ಅನುಗ್ರಹದಿಂದ ನಿನಗೆ ಎಂತಹ ಚಿಂತೆಯೂ ಬರುವುದಿಲ್ಲ. ನನ್ನ ಆಜ್ಞೆಯನ್ನು ತ್ವರೆಯಾಗಿ ನಡೆಸು. ತಕ್ಷಣವೇ ನಿನ್ನ ಮನೆಗೆ ಹೋಗಿ ನಿನ್ನ ಹೆಂಡತಿ ಮಗನನ್ನು ಕರೆದುಕೊಂಡು ತ್ವರೆಯಾಗಿ ಬಾ. ನಿನ್ನ ಹೆಂಡತಿ ಮಕ್ಕಳೊಡನೆ ಇಲ್ಲೇ ನನ್ನ ಸನ್ನಿಧಿಯಲ್ಲಿ ಸಂತೋಷವಾಗಿರು. ಅಯ್ಯಾ ನರಹರಿ, ನಿನಗೆ ಒಳ್ಳೆಯದಾಗುತ್ತದೆ. ನಿನಗೆ ಮೂವರು ಪುತ್ರರು ಜನಿಸುತ್ತಾರೆ. ಅವರು ಯೋಗಿಗಳೆನ್ನುವ ಹೆಸರಿನಿಂದ ನನ್ನನ್ನು ಅರ್ಚಿಸುತ್ತಾರೆ. ನಿನ್ನ ವಂಶದಲ್ಲಿ ಹುಟ್ಟುವವರೆಲ್ಲರೂ ನನ್ನ ಭಕ್ತರೇ ಆಗುತ್ತಾರೆ." ಎಂದು ಹೇಳಿ, ವಿದ್ಯಾಸರಸ್ವತಿ ಎನ್ನುವ ಮಂತ್ರವನ್ನು ಪಂಡಿತನಿಗೆ ಉಪದೇಶಿಸಿದರು. ಶ್ರೀಗುರುವು ಹೇಳಿದಂತೆಯೇ ನರಹರಿಗೆ ಎಲ್ಲವೂ ನಡೆಯಿತು. ಅಯ್ಯಾ ನಾಮಧಾರಕ, ಶ್ರೀಗುರುವಿನ ಪ್ರಸಾದವು ಅಂತಹುದಯ್ಯ! ಅದರಿಂದಲೇ ಗಂಗಾಧರ ಪುತ್ರನಾದ ಸರಸ್ವತಿ ಶ್ರೀಗುರು ಚರಿತ್ರೆಯನ್ನು ವಿಸ್ತರಿಸಿದನು. ಇದು (ಸಂಸಾರಸಾಗರವನ್ನು)ತರಿಸಬೇಕು ಎಂದುಕೊಳ್ಳುವವರಿಗೆ ಪವಿತ್ರವಾದ ಮಿತ್ರನು. 

ಇಲ್ಲಿಗೆ ನಲವತ್ತನೆಯ ಅಧ್ಯಾಯ ಮುಗಿಯಿತು. 

Saturday, September 7, 2013

||ಶ್ರೀಗುರುಚರಿತ್ರೆ - ಮುವ್ವತ್ತೊಂಭತ್ತನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ಸಿದ್ಧಮುನಿಯು, "ನಾಮಧಾರಕ, ಮುಂದಿನ ವೃತ್ತಾಂತವನ್ನು ಹೇಳುತ್ತೇನೆ.ಕೇಳು. ಅರವತ್ತು ವರ್ಷ ತುಂಬಿದ ಬಂಜೆಗೆ ಶ್ರೀಗುರುವಿನ ಅನುಗ್ರಹದಿಂದ ಇಬ್ಬರು ಮಕ್ಕಳು ಹುಟ್ಟಿದರು. ಆಪಸ್ತಂಭ ಶಾಖೆಗೆ ಸೇರಿದ ಸೋಮನಾಥನೆನ್ನುವ ಬ್ರಾಹ್ಮಣನು ವೇದಶಾಸ್ತ್ರಪರಾಯಣನು. ಅವನ ಹೆಂಡತಿ ಗಂಗ ಪತಿವ್ರತಾ ಶಿರೋಮಣಿ. ಅರವತ್ತು ವರ್ಷಗಳಾದರೂ ಆಕೆಗೆ ಪುತ್ರಲಾಭವಾಗಲಿಲ್ಲ. ಗಂಧರ್ವನಗರದಲ್ಲಿನ ಪ್ರಜೆಗಳು ಅವಳನ್ನು ಬಂಜೆ ಎನ್ನುತ್ತಿದ್ದರು. ಆಕೆ ಶ್ರದ್ಧಾಭಕ್ತಿಗಳಿಂದ ಪತಿಸೇವೆ ಮಾಡುತ್ತಾ ಅನಿಂದ್ಯಳಾಗಿದ್ದಳು. ಪ್ರತಿದಿನವೂ ನಿಯಮವಾಗಿ ಆಕೆ ಶ್ರೀಗುರುವಿನ ದರ್ಶನ ಮಾಡುತ್ತಿದ್ದಳು. ಪ್ರತಿದಿನವೂ ಶ್ರೀಗುರುವಿಗೆ ನೀರಾಜನ ಕೊಟ್ಟು, ಉಪಚಾರಗಳನ್ನು ಮಾಡುತ್ತಾ ಬಹಳಕಾಲ ಕಳೆಯಿತು. ಸಂತುಷ್ಟನಾದ ಶ್ರೀಗುರುವು, ಒಂದು ದಿನ, ನಸುನಗೆ ನಗುತ್ತಾ, "ಅಮ್ಮಾ, ಗಂಗ ಬ್ರಾಹ್ಮಣಿ, ದಿನವೂ ಏಕೆ ನೀರಾಜನ ಕೊಡುತ್ತಿದ್ದೀಯೆ? ನಿನ್ನ ಅಭೀಷ್ಟವೇನೋ ಹೇಳಲಿಲ್ಲ. ನಿನ್ನ ಕೋರಿಕೆ ಏನು ಎಂದು ಇಂದು ಹೇಳು. ಗುರುಪ್ರಸಾದದಿಂದ ನಿನಗೆ ಗೌರೀಶನೂ, ನಾರಾಯಣನೂ ಸಿದ್ಧಿಯಾಗುವಂತೆ ಮಾಡುತ್ತಾರೆ." ಎಂದು ಹೇಳಿದರು. ಆಕೆ ಅಂಜಲಿಬದ್ಧಳಾಗಿ, ಪ್ರಣಾಮ ಮಾಡಿ, "ಸ್ವಾಮಿ, ಅಪುತ್ರನಿಗೆ ಗತಿಯಿಲ್ಲ ಎಂದು ಶ್ರುತಿಗಳು ಹೇಳುತ್ತಿವೆ. ಪುತ್ರನಿಲ್ಲದ ಸ್ತ್ರೀಯ ಮುಖವನ್ನು ನೋಡಬಾರದು ಎನ್ನುತ್ತಾರೆ. ಗರ್ಭವು ಫಲಿಸದ ಸ್ತ್ರೀಜನ್ಮ ನಿಷ್ಫಲವು. ನಮ್ಮ ವಂಶದಲ್ಲಿ ಸಾಧ್ವಿ ಮಗನನ್ನು ಹೆರುತ್ತಾಳೆ ಎಂದೂ, ಅವನು ನಮ್ಮನ್ನು ದುರ್ಗತಿಯಿಂದ ಉದ್ಧರಿಸುತ್ತಾನೆ ಎಂದೂ ಪಿತೃಗಳು ದಿನವೂ ಕಾಯುತ್ತಿದ್ದಾರೆ. ಪುತ್ರರಿಲ್ಲದ ಗೃಹವು ಘೋರ ಅರಣ್ಯವು. ಬಾಲಕನನ್ನು ಸೊಂಟದಲ್ಲಿಟ್ಟುಕೊಂಡು ಗಂಗಾಸ್ನಾನಕ್ಕೆ ಬರುವ ಸ್ತ್ರೀಯರು ಪ್ರತಿದಿನವೂ ತಮ್ಮ ಮಕ್ಕಳನ್ನು ಆಡಿಸುತ್ತಾರೆ. ನನ್ನ ವಿಷಯದಲ್ಲಿ ದೈವವು ಹಾಗಿಲ್ಲ. ನಾನು ದೊಡ್ಡ ನಿರ್ಭಾಗ್ಯಳು. ಮಗನಿಲ್ಲದೇ ಹೋದರೂ ಮಗಳು ಕೂಡಾ ಇಲ್ಲ. ಮಗನಿಲ್ಲದೆ ಪರಲೋಕವಿಲ್ಲ ಅಲ್ಲವೇ! ಮಕ್ಕಳಿಲ್ಲದವನ ಪಿತೃಗಳು ಪಿಂಡೋದಕ ಕ್ರಿಯೆಗಳಿಲ್ಲದೆ ಅಧೋಗತಿ ಹೊಂದುವರು. ನಾನು ಹುಟ್ಟಿ ಅರವತ್ತು ವರ್ಷಗಳಾದವು. ಇನ್ನು ನನಗೆ ಈ ಜನ್ಮವೇಕೆ? ಆದ್ದರಿಂದ ಸ್ವಾಮಿ, ನನಗೆ ಮರುಜನ್ಮವಾದರೂ ಶುಭಪ್ರದವಾಗುವಂತೆ ವರವನ್ನು ಕೊಡು. ಬರುವ ಜನ್ಮದಲ್ಲಿ ಪುತ್ರವತಿಯಾಗಿವಂತೆ ವರವನ್ನು ನೀಡು." ಎಂದು ಗಂಗ ಪ್ರಾರ್ಥಿಸಿದಳು. ಶ್ರೀಗುರುವು ನಸುನಕ್ಕು, " ಆ ಜನ್ಮದಲ್ಲಿ ನಿನಗೆ ಈ ಜನ್ಮದ ಸ್ಮೃತಿ ಹೇಗಿರುತ್ತದೆ? ನೀನು ಈ ಜನ್ಮದಲ್ಲಿ ಭಕ್ತಿಯಿಂದ ದಿನವೂ ನೀರಾಜನ ಕೊಡುತ್ತಿದ್ದೀಯಲ್ಲವೇ? ಅದರಿಂದ ನಾನು ಸಂತುಷ್ಟನಾಗಿದ್ದೇನೆ. ಈ ಜನ್ಮದಲ್ಲೇ ನಿನಗೆ ಉತ್ತಮನಾದ ಮಗ, ಒಬ್ಬಳು ಮಗಳು ಜನಿಸುತ್ತಾರೆ." ಎಂದು ಪ್ರೀತಿಯಿಂದ ಶ್ರೀಗುರುವು ಅನುಗ್ರಹಿಸಿದರು. ಹಾಗೆ ಶ್ರೀಗುರುವು ಹೇಳಲು ಗಂಗ ಸೀರೆಸೆರಗು ಗಂಟುಹಾಕಿ, ಕೈಜೋಡಿಸಿ, "ಸ್ವಾಮಿ, ದಯಾನಿಧಿ, ನಾನು ಹುಟ್ಟಿ ಅರವತ್ತು ವರ್ಷಗಳು ಕಳೆದುಹೋಗಿವೆ. ಇನ್ನು ಪುತ್ರನು ಹೇಗೆ ಜನಿಸುತ್ತಾನೆ? ಪುತ್ರಾರ್ಥಿಯಾಗಿ ನಾನಾ ವ್ರತಗಳನ್ನು ಮಾಡಿದೆ, ಅನೇಕ ತೀರ್ಥಗಳನ್ನು ದರ್ಶಿಸಿದೆ. ಪುತ್ರಕಾಮನೆಯಿಂದ ಅಶ್ವತ್ಥಪೂಜೆಗಳು ಮಾಡಿದೆ. ಈ ಜನ್ಮದಲ್ಲಿ ಪುತ್ರರು ಆಗದಿದ್ದರೂ, ಮರುಜನ್ಮದಲ್ಲಿ ಸಂಭವಿಸಲಿ ಎನ್ನುವ ಕೋರಿಕೆಯಿಂದ ಅಶ್ವತ್ಥನಾರಾಯಣನನ್ನು ಸೇವಿಸುತ್ತಿದ್ದೇನೆ. ಸ್ವಾಮಿ, ಈಗ ನೀವು ನನಲ್ಲಿ ಪ್ರಸನ್ನರಾಗಿ ಈ ಜನ್ಮದಲ್ಲೇ ಪುತ್ರನನ್ನು ಕೊಡುತ್ತಿದ್ದೀರಿ. ನಿಮ್ಮ ಮಾತು ಅನ್ಯಥಾ ಆಗಲಾರದು. ಸ್ವಾಮಿ, ಸ್ವಯಂ ಆ ನರಹರಿಯೇ ನೀವಲ್ಲವೇ! ಈ ವರವನ್ನು ಕೊಟ್ಟಿರಿ. ನಿಮ್ಮ ಮಾತು ನಿಶ್ಚಯವೆಂದು ಮುಡಿಹಾಕಿದೆ. ಸ್ವಾಮಿ ಈಗ ನೀವೇ ಪ್ರಸನ್ನನಾಗಿ ಕನ್ಯೆಯನ್ನು ಪುತ್ರನನ್ನು ಕೊಡುತ್ತಿದ್ದೀರಿ. ಪೂಜೆ ಮಾಡುವುದರಿಂದ ಅಶ್ವತ್ಥವು ಏನು ಕೊಡುತ್ತದೆ? ಮೂರ್ಖತ್ವದಿಂದ ನಾನು ಅದನ್ನು ಅರ್ಚಿಸಿದೆ." ಎಂದಳು. ಹಾಗೆ ಹೇಳಿದ ಆಕೆಯ ಮಾತುಗಳನ್ನು ಕೇಳಿ ಶ್ರೀಗುರುವು ನಗುತ್ತಲೇ ಉತ್ತರಕೊಟ್ಟರು. "ಅಶ್ವತ್ಥ ಪೂಜೆಯು ಎಂದಿಗೂ ವ್ಯರ್ಥವಲ್ಲ. ಅಶ್ವತ್ಥನಿಂದೆ ಮಾಡಬಾರದು. ನಾನು ನಿವಸಿಸುತ್ತಿರುವ ಅಶ್ವತ್ಥವನ್ನು ಭಜಿಸು. ಸತ್ಯವಾಗಿ ಪುತ್ರನು ಜನಿಸುತ್ತಾನೆ. ನನ್ನ ಮಾತಿನಂತೆ ವ್ರತ ಮಾಡು. ಪ್ರತಿದಿನವೂ ಸಂಗಮಕ್ಕೆ ಹೋಗು. ಶ್ರೀ ಭೀಮಾ-ಅಮರಜಾ ನದಿಗಳ ಸಂಗಮಸ್ಥಾನದಲ್ಲಿರುವ ಅಶ್ವತ್ಥದಲ್ಲಿ ನಾನು ನಿವಾಸಮಾಡುತ್ತಿದ್ದೇನೆ. ನಾನು ಸೇರಿದಂತೆ ಅಶ್ವತ್ಥವನ್ನು ಪೂಜಿಸು. ಅದು ತ್ವರೆಯಾಗಿ ಕಾಮನೆಗಳನ್ನು ಪೂರಯಿಸುವುದು. ನಾರಾಯಣನಿಗೂ ನನಗೂ ಅಶ್ವತ್ಥವೇ ನಿವಾಸವು." ಅವರ ಉಪದೇಶವನ್ನು ಕೇಳಿದ ಆಕೆ ಮತ್ತೆ ಕೇಳಿದಳು. "ಸ್ವಾಮಿ, ಅಶ್ವತ್ಥ ಮಹಿಮೆಯನ್ನು ಕೇಳಿಸಬೇಕೆಂದು ಕೋರುತ್ತಿದ್ದೇನೆ. ತತ್ತ್ವವು ತಿಳಿದರೆ ಮನಸ್ಸು ಸ್ಥಿರವಾಗಿ ಆಮೇಲೆ ಭಕ್ತಿಯಿಂದ ಸೇವೆಮಾಡಬಲ್ಲೆನು." ಅವಳ ಮಾತನ್ನು ಕೇಳಿದ ಶ್ರೀಗುರುವು ಅಶ್ವತ್ಥ ಮಹಿಮೆಯನ್ನು ಉಪದೇಶಿಸಿದರು.

ಬ್ರಹ್ಮಾಂಡಪುರಾಣದಲ್ಲಿ ಅಶ್ವತ್ಥ ಮಹಿಮೆ ಹೇಳಲ್ಪಟ್ಟಿದೆ. ನಾರದ ಮಹರ್ಷಿಗೆ ಬ್ರಹ್ಮದೇವನು ಆ ಮಹಿಮೆಯನ್ನು ವರ್ಣಿಸಿದನು. ನಾರದ ಮಹಾಮುನಿ ನಿತ್ಯವೂ ತ್ರಿಭುವನಗಳಲ್ಲಿ ಸಂಚರಿಸುತ್ತಿದ್ದನು. ಆ ಬ್ರಹ್ಮಪುತ್ರನು ಒಂದುಸಲ ಋಷಿಗಳ ಆಶ್ರಮಕ್ಕೆ ಹೋದನು. ಅರ್ಘ್ಯಪಾದ್ಯಾದಿಗಳನ್ನು ಆ ಮಹರ್ಷಿಗೆ ಅರ್ಪಿಸಿ ಸ್ವಾಗತಕೊಟ್ಟಮೇಲೆ ಋಷಿಗಳು, " ಹೇ ಮಹರ್ಷಿ, ಅಶ್ವತ್ಥ ಮಾಹಾತ್ಮ್ಯೆಯನ್ನು ವಿಸ್ತಾರವಾಗಿ ನಮಗೆ ಉಪದೇಶಿಸು." ಎಂದು ಪ್ರಾರ್ಥಿಸಲು, ನಾರದನು, "ಅಯ್ಯಾ ಮುನಿಗಳಿರಾ, ನಾನು ಈಗ ಬ್ರಹ್ಮಲೋಕದಿಂದ ಬರುತ್ತಿದ್ದೇನೆ. ಬ್ರಹ್ಮದೇವನನ್ನು ನಾನು ಅಶ್ವತ್ಥ ಮಹಿಮೆಯನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತಾ, ಈ ಅಶ್ವತ್ಥವನ್ನು ಎಲ್ಲರೂ ವಿಷ್ಣುಸ್ವರೂಪವೆಂದು ಹೇಳುತ್ತಾರೆಯಲ್ಲವೇ. ಈ ಅಶ್ವತ್ಥ ಮಹಿಮೆಯನ್ನು ತಿಳಿಯಲು ಇಚ್ಛಿಸುತ್ತೇನೆ" ಎಂದು ಕೋರಲು ಬ್ರಹ್ಮನು ಹೀಗೆ ಬೋಧಿಸಿದನು.

"ಅಶ್ವತ್ಥ ವೃಕ್ಷದ ಮೂಲದಲ್ಲಿ ನಾನು ನೆಲಸಿದ್ದೇನೆ. ಮಧ್ಯದಲ್ಲಿ ಹೃಷೀಕೇಶ, ಅಗ್ರದಲ್ಲಿ ರುದ್ರ ನೆಲೆಸಿದ್ದಾರೆ. ಹಾಗೆಯೇ ದಕ್ಷಿಣದಲ್ಲಿರುವ ಕೊಂಬೆಗಳಲ್ಲಿ ಶೂಲಪಾಣಿ ಇದ್ದಾನೆ. ವಿಷ್ಣುವು ಪಶ್ಚಿಮಶಾಖೆಗಳಲ್ಲಿದ್ದರೆ ನಾನು ಉತ್ತರದಲ್ಲಿ ಇದ್ದೇನೆ. ಪೂರ್ವದಲ್ಲಿರುವ ಕೊಂಬೆಗಳಲ್ಲಿ ಸದಾ ಇಂದ್ರಾದಿ ದೇವತೆಗಳು ಇರುತ್ತಾರೆ. ವಸುಗಳು, ರುದ್ರರು, ಆದಿತ್ಯರು ಎನ್ನುವ ದೇವತೆಗಳೆಲ್ಲರೂ ಎಲ್ಲ ಶಾಖೆಗಳಲ್ಲೂ ನಿವಸಿಸುತ್ತಾರೆ. ಬ್ರಾಹ್ಮಣರು, ಋಷಿಗಳು, ಗೋವುಗಳು, ವೇದಗಳು, ಯಜ್ಞಗಳು ಎಲ್ಲ ಜಾಗಗಳಲ್ಲೂ ಸದಾ ಬೇರುಗಳು, ಚಿಗುರು ಮುಂತಾದುವುಗಳಲ್ಲಿನಿವಾಸಮಾಡುತ್ತಾರೆ. ಸಮಸ್ತ ನದಿಗಳು, ಕ್ಷೀರಸಮುದ್ರವೇ ಮೊದಲಾದ ಸಪ್ತಸಮುದ್ರಗಳು ಪೂರ್ವದ ಕೊಂಬೆಗಳಲ್ಲಿ ನಿವಸಿಸುತ್ತವೆ. ಇಂತಹುದು ಅಶ್ವತ್ಥವೃಕ್ಷವು. ಮೂಲದಲ್ಲಿ ಅಕಾರ, ಮಧ್ಯದಲ್ಲಿ ಉಕಾರ, ಫಲಪುಷ್ಪಗಳಲ್ಲಿ ಮಕಾರ ಇರುವುದರಿಂದ ಅಶ್ವತ್ಥ ವೃಕ್ಷವು ಉತ್ತಮವು. ಅಶ್ವಥ್ಥ ವೃಕ್ಷವೇ ಕಲ್ಪವೃಕ್ಷವೆಂದು ಬ್ರಹ್ಮ ನನಗೆ ಹೇಳಿದನು. ಅಶ್ವತ್ಥವೃಕ್ಷ ಮಹಿಮೆಯನ್ನು ಯಾರೂ ವಿವರಿಸಲಾರರು. ಆ ವೃಕ್ಷವನ್ನು ಸೇವಿಸುವವನು ಕಾಮದಾತ ಆಗುತ್ತಾನೆ. ಹೀಗೆಂದು ನಾರದನು ಹೇಳಲು ಮುನಿಗಣವು ಮತ್ತೆ ನಾರದನನ್ನು, "ದೇವರ್ಷಿ, ಅಶ್ವತ್ಥ ವೃಕ್ಷವನ್ನು ಸೇವಿಸುವ ವಿಧಾನವನ್ನು ತಿಳಿಸು." ಎಂದು ಕೋರಿದರು.

ನಾರದನು, " ಮುನಿಗಳಿರಾ, ವಿಸ್ತಾರವಾಗಿ ಬ್ರಹ್ಮನು ತಿಳಿಸಿದ ವಿಧಾನದಲ್ಲಿ ಅಶ್ವತ್ಥವನ್ನು ಸೇವಿಸುವುದನ್ನು ಹೇಳುತ್ತೇನೆ. ಕೇಳಿ. ಆಷಾಢ, ಪುಷ್ಯ, ಚೈತ್ರಮಾಸಗಳಂದು, ಗುರುಶುಕ್ರರ ಅಸ್ತಮೋದಯಗಳಲ್ಲಿ, ಚಂದ್ರನು ಅನುಕೂಲವಾಗಿ ಇಲ್ಲದಿರುವಾಗ ಅಶ್ವತ್ಥ ಸೇವೆಯನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ. ನಿಷಿದ್ಧವಲ್ಲದ ಮಾಸಗಳಲ್ಲಿ, ಶುಭದಿನದಲ್ಲಿ, ಉಪವಾಸದಿಂದಿದ್ದು, ಶುಚಿಯಾಗಿ ಅಶ್ವತ್ಥ ಸೇವಾವ್ರತವನ್ನು ಆಚರಿಸಬೇಕು. ಧೀಮಂತನಾದವನು ಆದಿ ಸೋಮವಾರಗಳಲ್ಲಿ, ಶುಕ್ರವಾರದಲ್ಲಿ, ಸೂರ್ಯಸಂಕ್ರಮಣದಲ್ಲಿ ಅಶ್ವತ್ಥವನ್ನು ಮುಟ್ಟಬಾರದು. ಪರ್ವದಿನಗಳಲ್ಲಿ, ವ್ಯತಿಪಾತಯೋಗದಂದು, ದುರ್ದಿನಗಳಲ್ಲಿ, ವೈಧೃತೀಕರಣದಲ್ಲಿ, ರಾತ್ರಿಯಲ್ಲಿ, ರಿಕ್ತತಿಥಿಗಳಲ್ಲಿ, ಸಂಧಿಯಲ್ಲಿ, ಅಪರಾಹ್ಣದಲ್ಲಿ, ತಿಳಿದವನು ಅಶ್ವತ್ಥವನ್ನು ಸ್ಪರ್ಶಿಸಬಾರದು. ನಿಂದೆಗಳು, ಪಾಷಂಡಿಗಳೊಡನೆ ವಾದ, ಜೂಜು, ಅಸತ್ಯವನ್ನು ನುಡಿಯುವುದು, ಮುಂತಾದುವನ್ನು ಬಿಟ್ಟು, ಪ್ರಾತಃಕಾಲದಲ್ಲಿ ಶುಚಿಯಾಗಿ ಮೌನದಿಂದ ಅಶ್ವತ್ಥವ್ರತವನ್ನು ಆಚರಿಸಬೇಕು. ಸಚೇಲಸ್ನಾನಮಾಡಿ, ಸ್ವಚ್ಛವಾದ ವಸ್ತ್ರಗಳನ್ನು ಧರಿಸಿ, ಗಂಗಾಯಮುನೆಗಳ ನೀರು ತುಂಬಿದ ಎರಡು ಕಲಶಗಳನ್ನು, ರಂಗೋಲಿಗಳಿಂದ ಅಲಂಕರಿಸಿದ ಪದ್ಮವನ್ನು ಪೂಜಿಸಿ ಯಥಾವಿಧಿಯಾಗಿ ಪುಣ್ಯಾಹವನ್ನು ಬ್ರಾಹ್ಮಣರಿಂದ ಹೇಳಿಸಿ, ತನ್ನ ಕಾಮನೆಯನ್ನು ಉದ್ದೇಶಿಸಿ, ಆದರದಿಂದ ಸಂಕಲ್ಪಮಾಡಿ, ಕಲಶದಲ್ಲಿರುವ ನೀರಿನಿಂದ ಅಶ್ವತ್ಥವೃಕ್ಷಕ್ಕೆ ಏಳುಸಲ ಸ್ನಾನ ಮಾಡಿಸಿ, ಭಕ್ತಿಯಿಂದ ಕೂಡಿದವನಾಗಿ, ಮತ್ತೆ ತಾನು ಸ್ನಾನ ಮಾಡಿ ದೈವಸ್ವರೂಪವಾದ ಅಶ್ವತ್ಥವೃಕ್ಷವನ್ನು ಪೂಜಿಸಬೇಕು. ಪುರುಷಸೂಕ್ತ ವಿಧಾನವಾಗಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

ಶ್ರೀ ವಿಷ್ಣುಮೂರ್ತಿಯಾದ ಅಶ್ವತ್ಥವನ್ನು ಅಷ್ಟಭುಜಗಳು ಇರುವಹಾಗೆ ದ್ವಿಜನಾದವನು ಧ್ಯಾನಿಸಬೇಕು. ಕ್ರಮವಾಗಿ ಶಂಖ, ಚಕ್ರ, ವರದಹಸ್ತಗಳನ್ನು ಧ್ಯಾನಿಸಬೇಕು. ಖಡ್ಗ, ಗದೆ, ಶಾರ್ಙ್ಗಗಳನ್ನು, ಹಾಗೇ ಅಭಯಮುದ್ರೆಯನ್ನು ಅಷ್ಟಹಸ್ತಗಳಲ್ಲಿ ಧರಿಸಿರುವ ಅವ್ಯಯನಾದ ವಿಷ್ಣುವನ್ನು, ನಾರಾಯಣನನ್ನು, ಪೀತಾಂಬರನನ್ನು, ಲಕ್ಷ್ಮೀಸಹಿತನಾದ ಜನಾರ್ದನನ್ನು ಧ್ಯಾನಿಸಿ ಅಶ್ವತ್ಥ ಮೂಲವನ್ನು ಪೂಜಿಸಬೇಕು. ಅಶ್ವತ್ಥವನ್ನು ತ್ರಿಮೂರ್ತಿಗಳಿಗೆ ಉತ್ತಮ ಸ್ಥಾನವಾಗಿ ಆಹ್ವಾನ ಮಾಡಿ, ದೇವತಾಮಯವಾದ ಈ ವೃಕ್ಷವನ್ನು ಅರ್ಚಿಸಬೇಕು. ವಸ್ತ್ರವನ್ನಾಗಲೀ, ದಾರವನ್ನಾಗಲೀ ವೃಕ್ಷದ ಸುತ್ತಲೂ ಸುತ್ತಿ ತನ್ನ ಅಭೀಷ್ಟವನ್ನು ಸಂಕಲ್ಪಿಸಿಕೊಂಡು ಮನೋವಾಕ್ಕಾಯಗಳಿಂದ ನಿಯಮವನ್ನು ಪಾಲಿಸುತ್ತಾ, ಭಕ್ತಿಯಿಂದ ಕೂಡಿ ಪುರುಷಸೂಕ್ತವನ್ನು ಹೇಳುತ್ತಾ/ಪಠಿಸುತ್ತಾ ಪ್ರದಕ್ಷಿಣೆಗಳನ್ನು ಮಾಡಬೇಕು. ಆನಂದಫಲವನ್ನು ಕೊಡುವ ಸಹಸ್ರನಾಮಗಳನ್ನು ಹೇಳುತ್ತಾ ಮೌನವಾಗಿ, ನಿಧಾನವಾಗಿ, ಗರ್ಭಿಣಿಸ್ತ್ರೀಯಂತೆ, ತುಂಬಿದಕೊಡ ಹೊತ್ತಿರುವ ಸ್ತ್ರೀಯಂತೆ, ಮಂದಗಮನನಾಗಿ ಶಕ್ತಿಯಿದ್ದಷ್ಟು ಪ್ರದಕ್ಷಿಣೆಗಳನ್ನು ಮಾಡಬೇಕು.

ಪ್ರದಕ್ಷಿಣೆ ಮಾಡುವಾಗ ಪ್ರತಿ ಪ್ರದಕ್ಷಿಣೆಯ ಮೊದಲು, ಮಧ್ಯೆ ಹಾಗೂ ಕೊನೆಯಲ್ಲಿ ನಮಸ್ಕಾರ ಮಾಡಬೇಕು. ಬ್ರಹ್ಮಹತ್ಯೆಯಿಂದುಂಟಾದ ಪಾಪವನ್ನು ಎರಡು ಲಕ್ಷ ಪ್ರದಕ್ಷಿಣೆಗಳು ನಾಶಮಾಡಬಲ್ಲವು. ಗುರುತಲ್ಪಗಮನದಂತಹ ಪಾಪಗಳನ್ನೂ ಆ ಪ್ರದಕ್ಷಿಣೆಗಳು ನಾಶಮಾಡಬಲ್ಲವು. ಪ್ರದಕ್ಷಿಣೆ ಮಾಡುವವನ ವ್ಯಾಧಿಗಳು ನಾಶವಾಗುತ್ತವೆ. ಋಣವಿಮುಕ್ತನಾಗುತ್ತಾನೆ. ಈ ಪ್ರದಕ್ಷಿಣಗಳು ಜನ್ಮ, ಮೃತ್ಯು, ಜರಾ, ವ್ಯಾಧಿ, ಸಂಸಾರ ಭಯಗಳನ್ನು ಕೂಡಾ ಹೋಗಲಾಡಿಸಿ ಮಾನವರನ್ನು ತರಿಸಬಲ್ಲದು. ಸಾವಿರ ಪ್ರದಕ್ಷಿಣೆಗಳು ಗ್ರಹಬಾಧೆಗಳನ್ನು ಹೋಗಲಾಡಿಸುವುದು. ಮನೋವಾಕ್ಕಾಯಕರ್ಮಗಳಿಂದ ಅಶ್ವತ್ಥವೃಕ್ಷವನ್ನು ಸೇವಿಸಿದವರಿಗೆ ನಿಶ್ಚಯವಾಗಿಯೂ ಪುತ್ರಲಾಭವಾಗುತ್ತದೆ. ಅಶ್ವತ್ಥ ಸೇವೆ ಚತುರ್ವಿಧ ಫಲಪುರುಷಾರ್ಥಗಳನ್ನು ಕೊಡಬಲ್ಲುದು. ಇನ್ನು ಅಶ್ವತ್ಥ ಸೇವೆಯಿಂದ ಪುತ್ರಪ್ರಾಪ್ತಿಗೆ ತಡವೇಕಾಗುತ್ತದೆ? ಶನಿವಾರದ ದಿನ ಅಶ್ವತ್ಥ ವೃಕ್ಷವನ್ನು ಸ್ಪರ್ಶಿಸಿ ಮೃತ್ಯುಂಜಯ ಮಂತ್ರವನ್ನು ಜಪಿಸಿದವವನು ಕಾಲಮೃತ್ಯುವನ್ನೂ ಕೂಡಾ ಜಯಿಸಬಲ್ಲನು. ಅಂತಹ ನರನು ಪೂರ್ಣಾಯುಷ್ಯನಾಗುತ್ತಾನೆ. ಶನಿಯಿಂದ ಉಂಟಾಗುವ ಏಳು ವರ್ಷಗಳ ಕಾಟವು ಸಂಭವಿಸಿದಾಗ ಅಶ್ವತ್ಥ ಸಮೀಪದಲ್ಲಿ ಕೋಣಸ್ಥ, ಪಿಂಗಳ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಶೌರಿ, ಶನೇಶ್ವರ, ಮಂದ, ಪಿಪ್ಪಲಾದರುಗಳಿಂದ ಸ್ತುತಿಸಲ್ಪಡುವವನು ಎಂದು ಜಪಮಾಡಬೇಕು. ಧೃಢವಾದ ಮನಸ್ಸಿನಿಂದ ಅಶ್ವತ್ಥವನ್ನು ಸೇವಿಸುವವರಿಗೆ ಕಾಮಸಿದ್ಧಿ, ಪುತ್ರಲಾಭಗಳಾಗುವುದರಲ್ಲಿ ಸಂಶಯವೇ ಇಲ್ಲ. ಈ ವಿಧದಲ್ಲಿ ಬ್ರಹ್ಮದೇವನು ನಾರದನಿಗೆ ಅಶ್ವತ್ಥಮಾಹಾತ್ಮ್ಯೆಯನ್ನು ತಿಳಿಸಿದನು. ನಾರದ ಮಹರ್ಷಿಯಿಂದ ಪೂರ್ವದಲ್ಲಿ ಅದನ್ನು ಋಷಿಗಳೆಲ್ಲರೂ ಕೇಳಿದರು.

ಅಶ್ವತ್ಥ ಪ್ರದಕ್ಷಿಣೆಗಳ ಸಂಖ್ಯೆಯಯಲ್ಲಿ ದಶಾಂಶವಾಗಿ ಆಗಮೋಕ್ತ ಪ್ರಕಾರ ತಿಳಿದವರು ಹೋಮ ಮಾಡಬೇಕು. ಹೋಮದ ದಶಾಂಶವಾಗಿ ಬ್ರಾಹ್ಮಣರಿಗೆ ಭೋಜನ ಇಡಬೇಕು. ಪ್ರದಕ್ಷಿಣೆ ಮಾಡುವಾಗ ಬ್ರಹ್ಮಚರ್ಯೆಯನ್ನು ಪಾಲಿಸುತ್ತಾ, ಹವಿಷ್ಯಾನ್ನವನ್ನು ಮಾತ್ರ ತಿನ್ನುತ್ತಾ, ವ್ರತ ಮಾಡಿ ಕೊನೆಯಲ್ಲಿ ಉದ್ಯಾಪನೆ ಮಾಡುವಾಗ ಶಕ್ತಿಯಿದ್ದಷ್ಟು, ಚಿನ್ನದಲ್ಲಿ ಆಶ್ವತ್ಥವೃಕ್ಷವನ್ನು ಮಾಡಿಸಿ ಬ್ರಾಹ್ಮಣನಿಗೆ ದಾನ ಮಾಡಬೇಕು. ದಾನ ಸ್ವೀಕರಿಸುವ ಬ್ರಾಹ್ಮಣನು ಕುಟುಂಬಿಯಾಗಿ ಸುಶೀಲನಾಗಿರಬೇಕು. ಬ್ರಾಹ್ಮಣನಿಗೆ ಕರುವಿನ ಸಹಿತ ಸಾಲಂಕೃತ ಬಿಳಿಯ ಗೋವನ್ನು ಕೂಡಾ ದಾನ ಕೊಡಬೇಕು. ಅಶ್ವತ್ಥ ವೃಕ್ಷದ ಕೆಳಗೆ ಯಥಾಶಕ್ತಿಯಾಗಿ ಎಳ್ಳು ರಾಶಿಯಾಗಿ ಹಾಕಿ ವಸ್ತ್ರದಿಂದ ಮುಚ್ಚಿ ಬ್ರಾಹ್ಮಣನಿಗೆ ದಾನಕೊಟ್ಟವನು ಅಭೀಷ್ಟಸಿದ್ಧಿಗಳನ್ನು ಪಡೆಯುತ್ತಾನೆ. ಇದು ಅಶ್ವತ್ಥ ಸೇವಾ ವಿಧಾನವು. ಈ ವಿಧಾನದಲ್ಲಿ ಭಕ್ತಿಯಿಂದ ಆಚರಿಸುವವನು ತನ್ನ ಅಭೀಷ್ಟಗಳನ್ನು ಹೊಂದುತ್ತಾನೆ."

ಹೀಗೆ ಶ್ರೀಗುರುವು ಆ ಬಂಜೆ ಹೆಂಗಸಿಗೆ ಹೇಳಿ, "ನಿನಗೆ ಅಶ್ವತ್ಥ ಮಹಿಮೆಯನ್ನು ಹೇಳಿದ್ದೇನೆ. ಭಕ್ತಿಯಿದ್ದವರಿಗೆ ಅವರವರು ಕೇಳಿದ ಪ್ರಕಾರ ಆಯಾ ವಿಧವಾಗಿ ಫಲಗಳು ಕೈಗೂಡುತ್ತವೆ. ನೀನೂ ಕೂಡಾ ಹಾಗೆ ಅಶ್ವತ್ಥ ಸೇವೆಯನ್ನು ಮಾಡು. ಈ ಸಂಗಮ ಸ್ಥಾನದಲ್ಲಿರುವ ಅಶ್ವತ್ಥವೃಕ್ಷವು ಕಲ್ಪದ್ರುಮವೇ! ಅದೇ ನಮ್ಮ ನಿವಾಸವು. ಆದ್ದರಿಂದ ಈ ಅಶ್ವತ್ಥ ಸೇವೆಯನ್ನು ಭಕ್ತಿಯಿಂದ ಮಾಡು. ನಿನಗೆ ಇಷ್ಟ ಸಿದ್ಧಿಯಾಗಿ ಒಬ್ಬಳು ಕನ್ಯೆ, ಒಬ್ಬ ಮಗ ಜನಿಸುತ್ತಾರೆ" ಎಂದು ಉಪದೇಶಿಸಿದ ಗುರು ವಾಕ್ಯಗಳನ್ನು ಕೇಳಿ ಆ ದ್ವಿಜಾಂಗನೆ ಅವರಿಗೆ ನಮಸ್ಕರಿಸಿ, ಭಕ್ತಿಪೂರ್ವಕವಾಗಿ ಶ್ರೀಗುರುವನ್ನು ಕೇಳಿದಳು.

"ಸ್ವಾಮಿ, ನಾನು ಹುಟ್ಟಾವಂಧ್ಯೆ. ನನಗೆ ಅರವತ್ತು ವರ್ಷಗಳು ಕಳೆದಿವೆ. ನನಗೆ ಮಗನು ಹೇಗೆ ಹುಟ್ಟುತ್ತಾನೆ? ಆದರೂ ಗುರುವಾಕ್ಯವೇ ಕಾಮಧೇನು. ಆದ್ದರಿಂದ ನಿಮ್ಮ ಮಾತುಗಳನ್ನು ನಂಬಿ ನಾನು ಸೇವೆ ಮಾಡುತ್ತೇನೆ. ನಿಮ್ಮ ಪಾದಸೇವೆ ಮಾಡುತ್ತೇನೆ" ಎಂದು ಹೇಳಿ, ಶ್ರೀಗುರುವು ಆಣತಿ ಕೊಡಲು ಸಂಗಮ ಸ್ನಾನ ಮಾಡಿ, ಷಟ್ಕೂಲ ತೀರ್ಥದಲ್ಲಿ ಆ ಬಂಜೆ ಶ್ರೀಗುರುವು ಉಪದೇಶಿಸಿದಂತೆ ಅಶ್ವತ್ಥವನ್ನು ಸೇವಿಸಿದಳು. ಹಾಗೆ ಆಕೆ ಮೂರು ದಿನಗಳು ಆರಾಧಿಸಿದಳು. ಅಶ್ವತ್ಥದೊಡನೆ ಶ್ರೀಗುರುವಿಗೂ ಆ ದ್ವಿಜಾಂಗನೆ ಸೇವಿಸಲು ಆರಂಭ ಮಾಡಿದಳು. ಮೂರನೆಯ ದಿನ ಆ ಸಾಧ್ವಿ ಒಂದು ಸ್ವಪ್ನವನ್ನು ಕಂಡಳು. ಅಕೆಯ ಕನಸಿನಲ್ಲಿ ಒಬ್ಬ ಬ್ರಾಹ್ಮಣ ಬಂದು, "ಹೇ ಸಾಧ್ವಿ, ನಿನ್ನ ಕೋರಿಕೆ ನೆರವೇರಿತು. ಗಂಧರ್ವ ನಗರಕ್ಕೆ ಹೋಗಿ ಗುರುನಾಥನಿಗೆ ಭಕ್ತಿಯಿಂದ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡು. ಶ್ರೀಗುರುವು ನಿನಗೆ ಏನನ್ನು ಕೊಟ್ಟರೂ ಅದನ್ನು ಭಕ್ಷಿಸು. ನಿನ್ನ ಕೋರಿಕೆ ತೀರುವುದು. ನೀನು ನಿನ್ನ ಮನೋ ನಿಶ್ಚಯವನ್ನು ಬಿಡದೆ ಮಾಡಬೇಕು" ಎಂದು ಹೇಳಿದನು. ಹಾಗೆ ಸ್ವಪ್ನವನ್ನು ಕಂಡ ಆ ಮಹಿಳೆ ತಕ್ಷಣವೇ ಎದ್ದು ಸಾಕ್ಷಾತ್ತು ಕಲ್ಪವೃಕ್ಷವೇ ಆದ ಆ ಅಶ್ವತ್ಥ ವೃಕ್ಷವನ್ನು ಸೇವಿಸಿ, ನಾಲ್ಕನೆಯ ದಿನ ಶ್ರೀಗುರುವಿದ್ದ ಮಠಕ್ಕೆ ಬಂದು ಶ್ರೀಗುರುವಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದಳು. ಮುಗುಳ್ನಗುತ್ತಾ ಶ್ರೀಗುರುವು ಅವಳಿಗೆ ಎರಡು ಫಲಗಳನ್ನು ಕೊಟ್ಟು, "ನಿನ್ನ ಕೋರಿಕೆ ಸಿದ್ಧಿಸಿತು. ಈ ಎರಡು ಫಲಗಳನ್ನು ತಿನ್ನು. ಈ ಪಾರಣೆಯಿಂದ ನಿನ್ನ ಸಂಕಲ್ಪವು ಸಿದ್ಧಿಸುವುದು. ನಿನಗೆ ಪುತ್ರೀ ಪುತ್ರರು ಅನುಗ್ರಹಿಸಲ್ಪಟ್ಟಿದ್ದಾರೆ" ನಂತರ ಆ ವಂಧ್ಯಾಸ್ತ್ರೀ ಬ್ರಾಹ್ಮಣನಿಗೆ ದಾನಕೊಟ್ಟು, ಗುರುದತ್ತವಾದ ಆ ಎರಡೂ ಫಲಗಳನ್ನು ಭಕ್ಷಿಸಿದಳು. ಹಾಗೆ ವ್ರತ ಸಮಾಪ್ತಿ ಮಾಡಿದ ದಿನವೇ ಆ ವೃದ್ಧಸ್ತ್ರೀ ಋತುಮತಿಯಾಗಿ ವಯೋವೃದ್ಧೆಯಾದರೂ ಶ್ರೀಗುರುಪ್ರಸಾದದಿಂದ ರಜಸ್ವಲೆಯಾದಳು. ಮೂರುದಿನಗಳು ಮೌನದಿಂದಿದ್ದು, ಹವಿಷ್ಯಾನವನ್ನೇ ತಿನ್ನುತ್ತಾ, ಶ್ವೇತವಸ್ತ್ರವನ್ನು ಧರಿಸಿ, ಹಾಗೆ ಹೀಗೆ ನೋಡದೆ ಕಳೆದಳು. ಮೂರು ದಿನಗಳು ಹಾಗೆ ಕಳೆದು ಆ ಪತಿವ್ರತೆ ಶುಚಿ ಸ್ನಾನ ಮಾಡಿ ನಾಲ್ಕನೆಯ ದಿನ ಸಂತೋಷದಿಂದ ಶ್ರೀಗುರುವಿನ ದರ್ಶನ ಮಾಡಿದಳು. ಐದನೆಯ ದಿನ ಅವಳು ತನ್ನ ಗಂಡನೊಡನೆ ಬಂದು ಶ್ರೀಗುರುವನ್ನು ಅರ್ಚಿಸಿದಳು. ಅವಳನ್ನು ಶ್ರೀಗುರುವು ‘ಪುತ್ರವತೀ ಭವ’ ಎಂದು ಆಶೀರ್ವದಿಸಿದರು.

ಹೀಗೆ ಶ್ರೀಗುರುವಿನ ಆಶೀರ್ವಾದ ಪಡೆದು ಆಕೆ ತನ್ನ ಮನೆಯನ್ನು ಸೇರಿದಳು. ಐದನೆಯ ದಿನ ಆ ವೃದ್ಧಸ್ತ್ರೀ ತನ್ನ ಭರ್ತೃ ಸಮಾಗಮದಿಂದ ಕನ್ಯೆಯಾಗುವಂತಹ ಗರ್ಭವನ್ನು ಧರಿಸಿದಳು. ಆಕೆ ಗರ್ಭಿಣಿ ಎಂದು ತಿಳಿದ ಜನ ಆಶ್ಚರ್ಯ ಚಕಿತರಾದರು. "ಇದು ಎಂತಹ ಆಶ್ಚರ್ಯ? ಇದೊಂದು ಹೊಸ ವಿಚಿತ್ರ. ಅರವತ್ತು ವಯಸ್ಸಿನ ವೃದ್ಧೆ ಬಂಜೆಯಾದರೂ ಗರ್ಭಿಣಿಯಾಗಿದ್ದಾಳೆ. ಸೋಮನಾಥನು ಅದೃಷ್ಟವಂತನು" ಎಂದು ಹೇಳಿಕೊಂಡರು. ಆ ದ್ವಿಜನು ಸಂತುಷ್ಟನಾಗಿ ಶ್ರೀಗುರುವಿನ ಆಜ್ಞೆಯಂತೆ ಪುಂಸವನಾದಿ ಕ್ರಿಯೆಗಳನ್ನು ಮಾಡಿದನು. ನಂತರ ಎಂಟನೆಯ ತಿಂಗಳಲ್ಲಿ ಆಕೆಗೆ ಸೀಮಂತೋನ್ನಯನವನ್ನು ಮಾಡಿದನು. ಅಕೆ ಗುರುವಿನ ಅಜ್ಞೆಯಂತೆ ಬ್ರಾಹ್ಮಣರಿಗೆ ವಾಯನಾದಿಗಳನ್ನು ಕೊಟ್ಟಳು. ಕೂದಲು ಬೆಳ್ಳಗಾದ ಆ ವೃದ್ಧೆ ಉತ್ಸಾಹದಿಂದ ವಾಯನಾದಿಗಳನ್ನು ಕೊಡುವುದನ್ನು ನೋಡಿ ಕೆಲವರು ಆಶ್ಚರ್ಯಪಟ್ಟರು. ಮತ್ತೆ ಕೆಲವರು, "ಶ್ರೀ ನೃಸಿಂಹ ಸರಸ್ವತಿ ಪ್ರಸನ್ನನಾದರು. ಶ್ರೀಗುರುವನ್ನು ಅರ್ಚಿಸಿದರೆ ತಕ್ಷಣವೇ ವರ ಕೊಡುತ್ತಾರೆ. ಈ ನೃಸಿಂಹ ಸರಸ್ವತಿ ತ್ರಿಮೂರ್ತಿಗಳ ಅವತಾರವೇ! ತನ್ನ ಭಕ್ತರನ್ನು ರಕ್ಷಿಸಲು ಇವರು ಅವತರಿಸಿದರು" ಎಂದು ಶ್ರೀಗುರುವನ್ನು ಸ್ತುತಿಸಿದರು. ಆಕೆ ವಾಯನಗಳನ್ನು ಕೊಟ್ಟ ನಂತರ ಹೋಗಿ ಶ್ರೀಗುರುವಿಗೆ ನಮಸ್ಕರಿಸಿದಳು. ಶ್ರೀಗುರುವು ಆಶೀರ್ವದಿಸಿದರು. ಆ ವಿಪ್ರವನಿತೆ, " ಹೇ ಪ್ರಭೋ, ನಿಮಗೆ ಜಯವಾಗಲಿ. ಜಯವಾಗಲಿ. ನೀವೇ ಪರಮ ಪುರುಷನು. ಬ್ರಹ್ಮ ವಿಷ್ಣು ಮಹೇಶ್ವರಾತ್ಮಕರು. ಆರ್ಯಾ, ನಿಮ್ಮ ವಚನವೇ ನನ್ನನ್ನು ಅನುಗ್ರಹಿಸಿತು. ವರಗಳನ್ನು ಕೊಟ್ಟಿರಿ. ನನ್ನ ಶರೀರವು ಅಮೃತವಾಯಿತು. ವಿಶ್ವರಕ್ಷಣೆಗಾಗಿ, ಅಜನೂ, ಅವ್ಯಯನೂ ಆಗಿದ್ದರೂ ಮಹೀತಲದಲ್ಲಿ ಅವತರಿಸಿದ್ದೀರಿ. ನೀವೇ ತ್ರಿಮೂರ್ತಿಯು. ನಿಮ್ಮ ಮಹಿಮೆ ಅನಂತವಾದದ್ದು. ಹೇ ಸ್ವಾಮಿ, ದಯಾಸಮುದ್ರ, ಅನವದ್ಯ, ನಿಮಗೆ ನಮಸ್ಕಾರಗಳು" ಎಂದು ಸ್ತುತಿಸುತ್ತಾ ಆ ಬ್ರಾಹ್ಮಣಿ ಶ್ರೀಗುರು ಚರಣಗಳಲ್ಲಿ ವಂದಿಸಿದಳು. ಶ್ರೀಗುರುವಿನ ಆಜ್ಞೆ ಪಡೆದು ಪ್ರೀತಿಯಿಂದ ಕೂಡಿ ತನ್ನ ಮನೆಗೆ ಹಿಂತಿರುಗಿದಳು. ಒಂಭತ್ತು ತಿಂಗಳು ಕಳೆದ ನಂತರ ಆಕೆ ಒಂದು ಶುಭ ದಿನದಲ್ಲಿ ಪ್ರಸವಿಸಿದಳು. ಜ್ಯೋತಿಷ್ಕರು ಬಂದು ಆ ಮಗುವಿನ ಜಾತಕವನ್ನು ನೋಡಿದರು. "ಹೇ ವಿಪ್ರ, ಈ ಕನ್ಯೆ ಶುಭ ಲಕ್ಷಣಗಳಿಂದ ಕೂಡಿದ್ದಾಳೆ. ಆಕೆಗೆ ಎಂಟು ಗಂಡು ಮಕ್ಕಳಾಗುತ್ತಾರೆ. ಕುಲ ವೃದ್ಧಿಯಾಗುತ್ತದೆ" ಎಂದು ಜ್ಯೋತಿಷ್ಕರು ಹೇಳಿದರು. ಹೀಗೆ ಕನ್ಯಾ ಜಾತಕವನ್ನು ತಿಳಿದುಕೊಂಡು ಸೋಮನಾಥನು ಆನಂದ ಹೊಂದಿ ಬ್ರಾಹ್ಮಣರಿಗೆ ಮರ್ಯಾದೆ ಮಾಡಿದನು. ಪುರುಡು ದಿನಗಳು ಕಳೆದ ಮೇಲೆ ಆ ಸಾಧ್ವಿ ಗಂಗಾ ಸ್ನಾನ ಮಾಡಿ ಕುಮಾರಿಯನ್ನೂ, ಗಂಡನನ್ನೂ ಕರೆದು ಕೊಂಡು ಶ್ರೀಗುರುವಿನ ದರ್ಶನಕ್ಕೆ ಹೋದಳು. ಶ್ರೀಗುರುವಿನ ಪಾದ ಸನ್ನಿಧಿಯಲ್ಲಿ ಭಕ್ತಿಯಿಂದ ಮಗುವನ್ನು ಇಟ್ಟು, ಏಕಾಗ್ರ ಚಿತ್ತಳಾಗಿ ಶ್ರೀಗುರುವಿಗೆ ನಮಸ್ಕರಿಸಿದಳು. ಶ್ರೀಗುರುವು ಅವಳನ್ನು ನೋಡಿ, "ಹೇ ಸಾಧ್ವಿ, ಧನ್ಯಳಾದೆ. ಪುತ್ರಿವತಿಯಾದೆ. ಏಳು. ಏಳು" ಎಂದು ಸಂತೋಷದಿಂದ ಹೇಳಿದರು. ಆಕೆ ಎದ್ದು, "ಸ್ವಾಮಿ, ನನ್ನ ಹೊಟ್ಟೆಯಲ್ಲಿ ಕುಮಾರನು ಇಲ್ಲ. ನೀವು ಕೊಟ್ಟ ಮಾತನ್ನು ಮರೆಯಬೇಡಿ" ಎಂದು ಹೇಳಲು, ಶ್ರೀಗುರುವು ನಗುತ್ತಾ, "ಹೇ ಪ್ರಾಜ್ಞೆ, ಸಂಶಯ ಪಡಬೇಡ. ನಿನಗೆ ಪುತ್ರನಾಗುತ್ತಾನೆ" ಎಂದು ಹೇಳಿ, ಆ ಕನ್ಯೆಯನ್ನು ತೆಗೆದು ಕೊಂಡು ನಸು ನಗುತ್ತಾ ಆ ಕನ್ಯೆಯ ಭಾವಿ ಲಕ್ಷಣಗಳನ್ನು ಅಲ್ಲಿದ್ದವರಿಗೆ ಹೇಳಿದರು. "ಈಕೆಗೆ ಶತಾಯುಗಳಾದ ಪುತ್ರರು, ಪೌತ್ರರು ಆಗಿ ಶುಭವಾಗಿರುತ್ತಾರೆ. ಈಕೆ ಪೂರ್ಣ ಸೌಭಾಗ್ಯವತಿಯಾಗಿರುತ್ತಾಳೆ. ಈಕೆಯ ಗಂಡ ಚತುರ್ವೇದ ಪರಾಯಣನಾಗಿ ಜ್ಞಾನಿಯಾಗಿರುತ್ತಾನೆ. ಈಕೆ ಕುಲದಲ್ಲಿ ಅಷ್ಟೈಷ್ವರ್ಯಗಳನ್ನೂ ಹೊಂದಿ ವೃದ್ಧಿಯಾಗುತ್ತಾಳೆ. ಪತಿವ್ರತೆ, ಧರ್ಮರತಿ, ಪುಣ್ಯಶೀಲಳೂ ಆಗುತ್ತಾಳೆ. ದಕ್ಷಿಣದೇಶದ ರಾಜನೊಬ್ಬನು ಈಕೆಯ ದರ್ಶನಕ್ಕೆ ಬರುತ್ತಾನೆ. ಹೇ ದಂಪತಿಗಳಿರಾ, ನಿಮಗೆ ಪುತ್ರನು ತ್ವರೆಯಾಗಿ ಹುಟ್ಟುತ್ತಾನೆ" ಎಂದು ತಿಳಿಸಿದರು. ಆ ವಿಪ್ರವನಿತೆ ಶ್ರೀಗುರುವಿಗೆ ನಮಸ್ಕರಿಸಿ, "ಶ್ರೀಗುರು, ನನಗೆ ಪುತ್ರನನ್ನು ದಯಪಾಲಿಸು" ಎಂದು ಪ್ರಾರ್ಥಿಸಿದಳು. ಶ್ರೀಗುರುವು, "ಅಮ್ಮಾ, ನಿನಗೆ ಎಂತಹ ಮಗ ಬೇಕು? ಯೋಗ್ಯನಾದ ಅಲ್ಪಾಯುವು ಬೇಕೆ ಅಥವ ಶತಾಯುವಾದ ಮೂರ್ಖನು ಬೇಕೆ? ಎಂತಹವನು ಬೇಕು ಹೇಳು" ಎನ್ನಲು, ಅವಳು, "ಹೇ ಭಗವಾನ್, ನನ್ನ ಮಗ ವಿದ್ವಾಂಸ, ಯೋಗ್ಯನಾಗಿ ಐದು ಪುತ್ರರಿಗೆ ತಂದೆಯಾಗುವವನು ಆಗಬೇಕು" ಎಂದು ಕೋರಲು, ಶ್ರೀಗುರುವು ಹಾಗೇ ಆಗಲೆಂದು ನುಡಿದರು. ಆ ದಂಪತಿಗಳು ಸಂತೋಷದಿಂದ ಶ್ರೀಗುರುವನ್ನು ಸ್ತುತಿಸಿ ಮನೆಗೆ ಹೋದರು.

ಕಾಲಾನಂತರದಲ್ಲಿ ಅವಳಿಗೆ ಮಗನು ಹುಟ್ಟಿದನು. ಅವನು ವೇದಶಾಸ್ತ್ರ ಪರಾಯಣನಾಗಿ, ಐದು ಪುತ್ರರಿಗೆ ಜನಕನಾಗಿ, ಶ್ರೀಗುರುವಿನ ಅನುಗ್ರಹವನ್ನು ಪಡೆದನು. ಶ್ರೀಗುರುವು ಹೇಳಿದ ರೀತಿಯಲ್ಲಿ ಕನ್ಯೆಯೂ ಲಕ್ಷಣವತಿಯಾಗಿ, ಸರಸ್ವತಿ ಎಂದು ಪ್ರಸಿದ್ಧಿಯಾದಳು. ಆಕೆಯ ಗಂಡ ದೀಕ್ಷಿತನೂ ನಾಲ್ಕು ರಾಷ್ಟ್ರಗಳಲ್ಲಿ ಶ್ರೀಗುರುವಿನ ಅನುಗ್ರಹದಿಂದ ಪ್ರಸಿದ್ಧಿ ಪಡೆದನು. 

ನಾಮಧಾರಕ, ಹೀಗೆ ಅರವತ್ತು ವರ್ಷಗಳ ಬಂಜೆಗೆ ಮಗಳು, ಮಗ ಹುಟ್ಟಿದರು. ಶಿಷ್ಯ, ಗುರುವಿನ ಕೃಪೆ ಅಂತಹುದು. ಮನಸ್ಸಿನಲ್ಲಿ ಧೃಢನಿಶ್ಚಯವಿರುವವರಿಗೆ ಸಿದ್ಧಿ ಲಭಿಸುವುದು. ಆದ್ದರಿಂದ ಶ್ರೀಗುರುವನ್ನು ಸೇವಿಸಬೇಕು. ಶ್ರೀಗುರುವಿನ ಚರಿತ್ರೆಯು ಲೋಕಾಭೀಷ್ಟವನ್ನು ಕೊಡುವುದು. ಆದ್ದರಿಂದ ಶ್ರೀಗುರುವಿನ ಸೇವೆ ಮಾಡಬೇಕು" ಎಂದು ಸಿದ್ಧಮುನಿಯು ಬೋಧಿಸಿದರು. 

ಇಲ್ಲಿಗೆ ಮುವ್ವತ್ತೊಂಭತ್ತನೆಯ ಅಧ್ಯಾಯ ಮುಗಿಯಿತು.