Saturday, September 21, 2013

||ಶ್ರೀಗುರುಚರಿತ್ರೆ - ನಲವತ್ತನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

"ನಾಮಧಾರಕ, ಒಣಗಿದ ಕಟ್ಟಿಗೆ ಗಿಡವಾಗಿ ಬದಲಾದ ಕಥೆಯನ್ನು ಕೇಳು. ಗಂಧರ್ವ ನಗರದಲ್ಲಿ ಶ್ರೀಗುರುವು ನೆಲೆಸಿದ್ದ ಸಮಯದಲ್ಲಿ ಕುಷ್ಠು ರೋಗ ಪೀಡಿತನಾದ ಬ್ರಾಹ್ಮಣನೊಬ್ಬನು ಶ್ರೀಗುರುವಿನ ಬಳಿಗೆ ಬಂದನು. ಅವನು ಯಜುರ್ವೇದಿ. ಹೆಸರು ನರಹರಿ. ಗಾರ್ಗ್ಯ ಗೋತ್ರ. ಅವನು ಭಕ್ತಿ ಭಾವದಿಂದ ಬಂದು ಶ್ರೀಗುರುವಿಗೆ ನಮಸ್ಕಾರ ಮಾಡಿ, ಶ್ರೀಗುರುವನ್ನು ಸ್ತುತಿಸುತ್ತಾ, "ಹೇ ಗುರುಮೂರ್ತಿ, ಜಯವಾಗಲಿ. ಜಯವಾಗಲಿ. ನಿಮ್ಮ ಉತ್ತಮ ಖ್ಯಾತಿಯನ್ನು ಕೇಳಿದೆ. ನೀವು ಪರಮ ಪುರುಷನು. ನೀವೇ ಪರಂಜ್ಯೋತಿಯು. ಭಕ್ತವತ್ಸಲರು. ಹೇ ಶ್ರೀಗುರು, ಸ್ವಾಮಿ, ಇವನು ಕುಷ್ಠು ರೋಗಿ ಎಂದು ಎಲ್ಲರೂ ನನ್ನನ್ನು ನಿಂದಿಸುತ್ತಿದ್ದಾರೆ. ನಾನು ಆಪಸ್ಥಂಭ ಶಾಖೆಯನ್ನು ಅಧ್ಯಯನ ಮಾಡಿದ್ದೇನೆ. ಅವಯವ ಹೀನನು ಇವನು ಎಂದು ನನ್ನನ್ನು ಬ್ರಾಹ್ಮಣರು ಯಾರೂ ಊಟಕ್ಕೆ ಆಹ್ವಾನಿಸುವುದಿಲ್ಲ. ಬೆಳಗ್ಗೆ ಏಳುತ್ತಲೇ ಕುಷ್ಠನಾದ ನನ್ನ ಮುಖವನ್ನು ಯಾರೂ ನೋಡುವುದಿಲ್ಲ. ಇನ್ನು ನಾನು ಜೀವಿಸಿ ಪ್ರಯೋಜನವೇನು? ಹಿಂದಿನ ಜನ್ಮದಲ್ಲಿ ಲೆಕ್ಕವಿಲ್ಲದಷ್ಟು ಪಾಪಗಳನ್ನು ನಾನು ಮಾಡಿದ್ದಿರಬೇಕು. ಅದರ ಪರಿಣಾಮ ಹೀಗಾಗಿದೆ. ಇದನ್ನು ಸಹಿಸಲಾರೆ. ಅನೇಕ ವ್ರತಗಳನ್ನು ಮಾಡಿದೆ. ತೀರ್ಥಗಳಲ್ಲಿ ಸೇವೆ ಮಾಡಿದೆ. ದೇವತೆಗಳ ಪೂಜೆಗಳನ್ನು ಮಾಡಿದೆ. ಆದರೂ ನನ್ನ ಈ ರೋಗವು ಹೋಗಲಿಲ್ಲ. ನೀವು ದಯೆ ತೋರಿಸದಿದ್ದರೆ ನಿಮ್ಮ ಎದುರಿಗೇ ಪ್ರಾಣ ತ್ಯಾಗ ಮಾಡಬೇಕೆಂದು ನಿಶ್ಚಯ ಮಾಡಿಕೊಂಡು ಬಂದಿದ್ದೇನೆ" ಎಂದು ಹೇಳಿ, "ನನಗೆ ನಿಮ್ಮ ದರ್ಶನವು ಲೋಹವನ್ನು ಬದಲಿಸುವ ಪರಶು ವೇದಿಯಾಗಬೇಕು" ಎಂದು ಕೇಳಿಕೊಂಡನು.

ಶ್ರೀಗುರುವು ಆ ದ್ವಿಜನಿಗೆ, "ನೀನು ಪೂರ್ವದಲ್ಲಿ ಮಹಾಪಾಪಗಳನ್ನು ಮಾಡಿದ್ದೀಯೆ. ಹೇ ವಿಪ್ರ, ಅದರಿಂದಲೇ ನೀನೀಗ ಕುಷ್ಠು ರೋಗದಿಂದ ಬಾಧೆ ಪಡುತ್ತಿದ್ದೀಯೆ. ಈಗ ನಿನಗೆ ಆ ದೋಷಗಳನ್ನು ನಾಶ ಮಾಡುವಂತಹ ಒಂದು ಉಪಾಯವನ್ನು ಹೇಳುತ್ತೇನೆ. ಹಾಗೆ ಮಾಡಿದರೆ ನೀನು ಶುದ್ಧನಾಗಿ ದಿವ್ಯವಾದ ದೇಹವನ್ನು ತ್ವರೆಯಾಗಿ ಹೊಂದಬಲ್ಲೆ" ಎಂದು ಹೇಳಿದರು. ಆ ಸಮಯದಲ್ಲಿ ಒಬ್ಬನು ನಾಲ್ಕು ವರ್ಷಗಳ ಹಿಂದೆಯೇ ಒಣಗಿ ಹೋಗಿದ್ದ ಔದುಂಬರ ವೃಕ್ಷದ ತುಂಡೊಂದನ್ನು ಸೌದೆಯಾಗಿ ಉಪಯೋಗಿಸಲು ತೆಗೆದು ಕೊಂಡು ಬರುತ್ತಿದ್ದನು. ಅದನ್ನು ನೋಡಿದ ಶ್ರೀಗುರುವು, "ಹೇ ಬ್ರಾಹ್ಮಣ, ಈ ಒಣಗಿದ ಕಟ್ಟಿಗೆಯನ್ನು ನೀನು ತೆಗೆದುಕೊಂಡು ಹೋಗಿ ನೆಡು. ಭಿಮಾ ನದೀ ತೀರದ ಸಂಗಮ ಸ್ಥಳದ ಪೂರ್ವ ಭಾಗದಲ್ಲಿ ಇದನ್ನು ಗಿಡದಂತೆ ನೆಡು. ಆ ನಂತರ ಸಂಗಮಕ್ಕೆ ಹೋಗಿ ಸ್ನಾನ ಮಾಡಿ ಬಂದು, ಅಶ್ವತ್ಥ ವೃಕ್ಷವನ್ನು ಅರ್ಚಿಸಿ, ಮತ್ತೆ ಸಂಗಮದಲ್ಲಿ ಸ್ನಾನ ಮಾಡು. ಹೇ ಭೂಸುರ, ಅನಂತರ ನೀರು ತುಂಬಿದ ಎರಡು ಕಲಶಗಳನ್ನು ತಂದು ಮೂರು ಕಾಲದಲ್ಲೂ ಈ ಒಣಗಿದ ಕಟ್ಟಿಗೆಗೆ ನನ್ನ ಮಾತಿನಂತೆ ಅಭಿಷೇಕ ಮಾಡು. ಯಾವ ದಿನ ಈ ಒಣಗಿದ ಕಟ್ಟಿಗೆಯ ತುಂಡು ಚಿಗುರುತ್ತದೋ ಅಂದು ನಿನ್ನ ಪಾಪಗಳೆಲ್ಲಾ ನಾಶವಾಗಿ ನೀನು ಸುಂದರಾಂಗನಾಗುವೆ" ಎಂದು ಶ್ರೀಗುರುವು ಆ ಕುಷ್ಠು ರೋಗಿಗೆ ಆದೇಶ ಕೊಟ್ಟರು. ಶ್ರೀಗುರುವಿನ ಆಜ್ಞೆಯನ್ನು ಅನುಸರಿಸಿ ಆ ವಿಪ್ರನು, ಒಣಗಿದ ಆ ಕಟ್ಟಿಗೆಯತುಂಡನ್ನು ತಲೆಯ ಮೇಲಿಟ್ಟು ಕೊಂಡು ತೆಗೆದು ಕೊಂಡು. ಭೀಮಾತೀರದ ಸಂಗಮಕ್ಕೆ ಹೋಗಿ, ಸಂಗಮೇಶ್ವರನ ಎದುರಿಗೆ ಹಳ್ಳ ತೆಗೆದು ಆ ತುಂಡನ್ನು ನೆಟ್ಟನು. ಆ ಬ್ರಾಹ್ಮಣ ಭಕ್ತಿಯಿಂದ ಶ್ರೀಗುರುವಿನ ಆಜ್ಞೆಯನ್ನು ಪಾಲಿಸುತ್ತಾ ಅಲ್ಲಿ ನೆಟ್ಟಿದ್ದ ಕಟ್ಟಿಗೆಯ ತುಂಡಿಗೆ ನೀರು ಹಾಕುತ್ತಿದ್ದನು. ಹೀಗೆ ಆ ಬ್ರಾಹ್ಮಣ ಉಪವಾಸ ಮಾಡುತ್ತಾ ಏಳು ದಿನಗಳು ನೀರು ತುಂಬಿದ ಮಡಕೆಗಳಿಂದ ಶ್ರದ್ಧೆಯಿಂದ ಅಭಿಷೇಕ ಮಾಡಿದನು. ಅಲ್ಲಿನ ಬ್ರಾಹ್ಮಣರು ಅವನನ್ನು ಕರೆದು, "ಇದೇನಯ್ಯ ನಿನ್ನ ಕೆಲಸ? ಒಣಗಿದ ಕಟ್ಟಿಗೆಯನ್ನು ಸೇವಿಸುತ್ತಿದ್ದೀಯೇಕೆ? ನಿರ್ಜೀವವಾದದ್ದಕ್ಕೆ ನೀರು ಹಾಕುವುದರಿಂದ ನಿನಗೆ ಏನು ಸಿಕ್ಕುತ್ತದೆ? ಶ್ರೀಗುರು ಮೂರ್ತಿ ದಯಾ ಸಮುದ್ರನು. ಭಕ್ತರಿಗೆ ವರದನು ಅಲ್ಲವೇ? ಆತನ ಕೃಪೆ ತಕ್ಷಣವೇ ಫಲ ಕೊಡುವುದಲ್ಲವೇ? ನಿನ್ನ ಪಾಪಗಳಿಗೆ ಪ್ರಾಯಶ್ಚಿತ್ತವಿಲ್ಲ. ಅದರಿಂದಲೇ ನಿನಗೆ ಈ ಕಟ್ಟಿಗೆಯನ್ನು ಕೊಟ್ಟನು. ಅದು ವ್ಯರ್ಥವು. ಶ್ರೀಗುರುವಿನ ಮಾತುಗಳಲ್ಲಿ ನೀನು ವಿಶ್ವಾಸ ಇಟ್ಟೆ" ಎಂದರು. ಅವರ ಮಾತುಗಳನ್ನು ಕೇಳಿ ಅವನು ವಿನಯದಿಂದ, "ಅಯ್ಯಾ, ಶ್ರೀಗುರು ವಾಕ್ಯವೇ ಕಾಮಧೇನುವು. ಅದು ಬೇರೊಂದು ರೀತಿಯಲ್ಲಿ ಹೇಗಾಗುವುದು? ಶ್ರೀಗುರು ವಾಕ್ಯವು ಅಸತ್ಯ ಹೇಗಾಗುವುದು? ಈ ಕಟ್ಟಿಗೆಯ ತುಂಡು ಮರವಾಗಬಲ್ಲದು ಎಂಬ ಧೈರ್ಯ ನನ್ನಲ್ಲಿ ನಿಜವಾಗಿಯೂ ಇದೆ. ಪ್ರಾಣ ಕೊಟ್ಟಾದರೂ ನಾನು ಶ್ರೀಗುರುವಿನ ಆದೇಶವನ್ನು ಪರಿಪಾಲಿಸುತ್ತೇನೆ" ಎಂದು ಎಲ್ಲರಿಗೂ ಹೇಳಿ, ಆ ಬ್ರಾಹ್ಮಣ ಇತರರು ಅವನನ್ನು ನಿವಾರಿಸಿದರೂ ತಾನ್ನ ಸೇವೆಯನ್ನು ಮಾಡುತ್ತಲೇ ಇದ್ದನು.

ಒಂದು ದಿನ ಶಿಷ್ಯರೆಲ್ಲರೂ ಶ್ರೀಗುರುವಿನ ಬಳಿಸೇರಿ, "ಸ್ವಾಮಿ, ಆ ಬ್ರಾಹ್ಮಣನನ್ನು ಆ ಕಾಷ್ಠವನ್ನು ಸೇವಿಸಲು ಏಕೆ ಹೇಳಿದಿರಿ? ವ್ಯರ್ಥವಾಗಿ ಅವನು ಕಷ್ಟ ಪಡುತ್ತಿದ್ದಾನೆ ಎಂದು ಅವನನ್ನು ನಾವು ನಿವಾರಿಸಿದರೂ, ಇದು ಮೂರ್ಖತ್ವ ಎಂದು ಹೇಳಿದರೂ ಅವನು ಅಂಗೀಕರಿಸುತ್ತಿಲ್ಲ. ಅದಲ್ಲದೆ ನಮಗೆ ಶ್ರೀಗುರುವಿನ ಮಾತೇ ನನ್ನ ಆಕಾಂಕ್ಷೆ ಎನ್ನುವ ನಿಶ್ಚಯದಿಂದ ಅವನು ಆ ಕಾಷ್ಠವನ್ನು ಸೇವಿಸುತಿದ್ದಾನೆ. ಏಳು ದಿನಗಳಾಯಿತು. ಆ ಬ್ರಾಹ್ಮಣ ನೀರು ಕೂಡಾ ಕುಡಿಯುತ್ತಿಲ್ಲ" ಎಂದರು. ಶಿಷ್ಯರ ಮಾತು ಕೇಳಿ, ಶ್ರೀಗುರುವು ಅವರಿಗೆ, "ಯಾರಿಗೆ ಎಂತಹ ಭಾವನೆಯಿರುತ್ತದೋ ಅವರಿಗೆ ಅಂತಹ ಸಿದ್ಧಿ ಲಭಿಸುತ್ತದೆ. ಶಿಷ್ಯರಿಗೆ ಗುರು ವಾಕ್ಯವೇ ಸಿದ್ಧಿಗೆ ಕಾರಣ. ಮಾನವರಿಗೆ ಅವರವರ ಭಾವನೆಗಳಿಗೆ ಅನುಗುಣವಾದ ಸಿದ್ಧಿ ಲಭ್ಯವಾಗುತ್ತದೆ.ಈ ಸಂಗತಿಯನ್ನು ತಿಳಿಸಲು ನಿಮಗೆ ಒಂದು ಪುಣ್ಯ ಪ್ರದವಾದ ಕಥೆಯನ್ನು ಹೇಳುತ್ತೇನೆ. ಅದು ಸ್ಕಾಂದ ಪುರಾಣದಲ್ಲಿದೆ. ಅದನ್ನು ಸೂತನು ಹೇಳಿದನು. ಸೂತನು ಋಷಿಪುಂಗವರಿಗೆ ಗುರುಭಕ್ತಿ ಸಂಸಾರವನ್ನು ತರಿಸುವಂತಹುದು. ಅಂತಹ ಸುಲಭ ಸಾಧನ ಬೇರೊಂದಿಲ್ಲ. ಗುರುವಿನ ಯೋಗ್ಯತೆಯನ್ನು ಪ್ರಶ್ನಿಸಬಾರದು. ಗುರುವನ್ನೇ ಬ್ರಹ್ಮನಾಗಿ ಧ್ಯಾನಿಸುತ್ತಾ ಸೇವೆ ಮಾಡಬೇಕು. ಗುರುವನ್ನು ಲಘುವಾಗಿ ಕಾಣಬಾರದು. ಗುರುವನ್ನು ಈಶ್ವರನಾಗಿ ಭಾವಿಸಬೇಕು. ಮಾನವ ದೃಷ್ಟಿಯಿಂದ ಗುರುವನ್ನು ನೋಡ ಬಾರದು. ಗುರುವನ್ನು ತ್ರಿಮೂರ್ತಿಯಾಗಿ ಭಾವಿಸಬೇಕು. ಹಾಗೆ ನಿಶ್ಚಯಿಸಿಕೊಂಡು ಶ್ರೀಗುರು ಪಾದಗಳನ್ನು ಭಜಿಸುವವರಿಗೆ ಶೂಲಪಾಣಿ ಪ್ರಸನ್ನನಾಗುತ್ತಾನೆ. ಮಂತ್ರದಲ್ಲಿ, ತೀರ್ಥದಲ್ಲಿ, ದ್ವಿಜನಲ್ಲಿ, ದೈವದಲ್ಲಿ, ಜ್ಯೋತಿಷ್ಕನಲ್ಲಿ, ವೈದ್ಯನಲ್ಲಿ, ಗುರುವಿನಲ್ಲಿ ಯಾರಿಗೆ ಯಾವ ಭಾವನೆ ಇರುತ್ತದೋ ಅವರು ಅಂತಹ ಸಿದ್ಧಿಯನ್ನೇ ಪಡೆಯುತ್ತಾರೆ. ಗುರುವನ್ನು ಶಿವನಾಗಿ ನೋಡಿದರೆ ಈಶ್ವರನು ಪ್ರಸನ್ನನಾಗುತ್ತಾನೆ. ಗುರುಭಕ್ತಿ ಅಂತಹುದು. ಅದು ತಕ್ಷಣವೆ ಫಲಪ್ರದವಾಗುತ್ತದೆ. ಹೇ ಋಷೀಶ್ವರರೇ, ಧೃಢ ಭಕ್ತಿಯನ್ನು ಉಂಟುಮಾಡುವ ನಿದರ್ಶನವೊಂದನ್ನು ಹೇಳುತ್ತೇನೆ.

ಪೂರ್ವದಲ್ಲಿ ಪಾಂಚಾಲನಗರವೆಂಬಲ್ಲಿ ಸಿಂಹಕೇತುವೆಂಬ ರಾಜನೊಬ್ಬನಿದ್ದನು. ಅವನ ತನಯನು ಧಾರ್ಮಿಕನು. ಹೆಸರು ಧನಂಜಯ. ಒಂದುಸಲ ಆ ರಾಜಕುಮಾರನು ಬೇಟೆಗೆಂದು ಕಾಡಿಗೆ ಹೋದನು. ನೀರೂ ಕೂಡಾ ದೊರೆಯದ ನಿರ್ಜನ ಪ್ರದೇಶದಲ್ಲಿ ಅವನು ಸಂಚರಿಸುತ್ತಿದ್ದನು. ರಾಜಪುತ್ರನಿಗೆ ನೀರಡಿಕೆಯಾಗಿ ಬಾಧೆಯಾಯಿತು. ಒಬ್ಬ ಬೇಟೆಗಾರನನ್ನು ಹಿಂದಿಟ್ಟುಕೊಂಡು, ದಾಹದಿಂದ ಒದ್ದಾಡುತ್ತಾ ಅವನು ಕಾಡಿನಲ್ಲಿ ಅಲೆಯುತ್ತಿದನು. ಹಾಗೆ ಅಲೆಯುತ್ತಾ ಅಲಸಿ ಹೋಗಿ ಅವನು ದೂರದಲ್ಲಿದ್ದ ಶಬರನೊಡನೆ ಒಂದು ಜೀರ್ಣವಾದ ಶಿವಾಲಯವನ್ನು ಸೇರಿದನು. ಅಲ್ಲಿ ಅನೇಕ ಶಿವಲಿಂಗಗಳು ಬಿದ್ದಿದ್ದವು. ಶಬರನು ಒಂದು ಮೊನೋಹರವಾದ ಶಿವಲಿಂಗವನ್ನು ತೆಗೆದುಕೊಂಡು ರಾಜಪುತ್ರನಿದ್ದ ಜಾಗಕ್ಕೆ ಬಂದನು. ಆ ಅಜಪುತ್ರನು ಅವನನ್ನು ನೋಡಿ, "ಈ ಲಿಂಗದಿಂದ ಏನಾಗಬೇಕು ನಿನಗೆ? ಇಲ್ಲಿ ಬಹಳ ಲಿಂಗಗಳಿವೆಯಲ್ಲವೇ?" ಎಂದನು. ಆ ಶಬರ, " ಈ ಲಿಂಗದಲ್ಲಿ ನನಗೆ ಮನಸ್ಸುಂಟಾಗಿದೆ. ಈ ಲಿಂಗವನ್ನು ಪೂಜೆಮಾಡಬೇಕು" ಎಂದನು. ಅವನ ಮಾತುಗಳನ್ನು ಕೇಳಿದ ರಾಜಪುತ್ರ , " ಒಳ್ಳೆಯದು. ಈ ಲಿಂಗವನ್ನು ಸ್ಥಿರಭಕ್ತಿಯಿಂದ ಪೂಜೆಮಾಡು" ಎನ್ನಲು, ಆ ಶಬರನು ರಾಜಕುಮಾರನಿಗೆ ನಮಸ್ಕರಿಸಿ, "ಹೇ ಪ್ರಭು, ಲಿಂಗವನ್ನು ಯಾವ ವಿಧಾನದಲ್ಲಿ ಪೂಜಿಸಬೇಕೋ ಹೇಳು. ನಾನು ಜಾತಿಯಲ್ಲಿ ಬೇಡರವನು. ಅಜ್ಞಾನಿ. ಪೂಜಾವಿಧಾನ ನನಗೆ ತಿಳಿಯದು. ವಿಸ್ತಾರವಾಗಿ ಹೇಳು. ಹೇ ಪ್ರಭು ನೀನೇ ನನಗೆ ಗುರುವು" ಎಂದು ಪ್ರಾರ್ಥಿಸಿದನು. ಆ ರಾಜಕುಮಾರನು, "ಈ ಲಿಂಗವನ್ನು ಮನೆಗೆ ತೆಗೆದುಕೊಂಡು ಹೋಗಿ, ಶುಭ್ರವಾದ ಒಂದು ಪ್ರದೇಶದಲ್ಲಿ ಸ್ಥಾಪಿಸಿ, ಗಂಧ ಪುಷ್ಪಾದಿಗಳಿಂದ ಅರ್ಚಿಸು. ನಿನ್ನ ಹೆಂಡತಿಯನ್ನೂ ನಿನ್ನ ಜೊತೆಯಲ್ಲಿಟ್ಟುಕೊಂಡು ಪೂಜಿಸು. ಲಿಂಗಕ್ಕೆ ನೈವೇದ್ಯ ಮಾಡಿ ಆ ನೈವೇದ್ಯ ಪ್ರಸಾದವನ್ನು ನಿನ್ನ ಹೆಂಡತಿಯೊಡನೆ ತಿನ್ನು. ನೀನು ಯಾವಯಾವ ಪದಾರ್ಥಗಳನ್ನು ತಿನ್ನುತ್ತಿಯೋ ಅದೆಲ್ಲವನ್ನೂ ಮೊದಲು ಲಿಂಗಕ್ಕೆ ಅರ್ಪಿಸಿ ನಂತರ ತಿನ್ನು. ಶಬರ, ನಿನಗೆ ಪೂಜಾವಿಧಾನವನ್ನು ಹೇಳಿದ್ದೇನೆ" ಎಂದು ಹೇಳಿದನು.

ಆ ಶಬರನು ಸಂತುಷ್ಟನಾಗಿ ಲಿಂಗವನ್ನು ತೆಗೆದು ಕೊಂಡು ಮನೆಗೆ ಹೋದನು. ಅವನು ತನಗೆ ಲಿಂಗವ ಪ್ರಸನ್ನವಾಯಿತೆಂದು ತನ್ನ ಹೆಂಡತಿಗೆ ಹೇಳಿದನು. ಅವನು ಪ್ರತಿದಿನವೂ ಲಿಂಗವನ್ನು ರಾಜಕುಮಾರನು ಹೇಳಿದ ಹಾಗೆ ಅರ್ಚಿಸುತ್ತಿದ್ದನು. ನಿತ್ಯವೂ ಚಿತಾ ಭಸ್ಮವನ್ನು ತಂದು ಲಿಂಗವನ್ನು ಅಲಂಕರಿಸಿ ಅವರಿಬ್ಬರೂ ಲಿಂಗಾರ್ಚನೆ ಮಾಡುತ್ತಿದ್ದರು. ಒಂದುದಿನ ಚಿತಾ ಭಸ್ಮ ದೊರೆಯಲಿಲ್ಲ. ಅವನು ಎಲ್ಲ ಕಡೆಯಲ್ಲೂ ಹುಡುಕಿ ಅಲಸಿಹೋಗಿ ಮನೆಗೆ ಹಿಂತಿರುಗಿದನು. ಚಿಂತೆಯಿಂದ ಖಿನ್ನನಾದ ಅವನು ಹೆಂಡತಿಗೆ, "ನಾನೇನು ಮಾಡಲಿ? ಪ್ರಾಣ ಬಿಡುತ್ತೇನೆ. ಚಿತಾಭಸ್ಮವಿಲ್ಲದೆ ಲಿಂಗ ಪೂಜೆ ಆಗುವುದಿಲ್ಲ. ಇಂದು ಚಿತಾಭಸ್ಮ ದೊರೆಯಲಿಲ್ಲ. ಗುರುವು ಆದೇಶಿಸಿದಂತೆ ನೈವೇದ್ಯವನ್ನು ಇಡಲೇ ಬೇಕು. ಇಲ್ಲದಿದ್ದರೆ ಲಿಂಗಪೂಜೆ ವ್ಯರ್ಥ. ಗುರುವಾಕ್ಯವನ್ನು ನಿರ್ವಹಿಸದವನು ರೌರವ ನರಕಕ್ಕೆ ಹೋಗುತ್ತಾನೆ. ದರಿದ್ರನಾಗುತ್ತಾನೆ. ಗುರುಭಕ್ತಿಯನ್ನು ತೋರಿಸುವವನು ಭವಸಾಗರವನ್ನು ದಾಟುತ್ತಾನೆ. ಆದ್ದರಿಂದ ಲಿಂಗಕ್ಕೋಸ್ಕರ ನಾನು ಪ್ರಾಣ ಬಿಡಲು ನಿಶ್ಚಯಿಸಿ ಕೊಂಡಿದ್ದೇನೆ" ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಶಬರಿ, "ಸ್ವಾಮಿ, ನಿಮಗೆ ಚಿಂತೆ ಏತಕ್ಕೆ? ನಾನು ನಿಮಗೆ ಚಿತಾಭಸ್ಮವನ್ನು ಕೊಡುತ್ತೇನೆ. ನನ್ನನ್ನು ಮನೆಯೊಳಗೆ ಇಟ್ಟು ಮನೆಗೆ ಬೆಂಕಿ ಹಚ್ಚು. ನನ್ನ ದೇಹವು ದಗ್ಧವಾಗುವುದು. ಆ ಭಸ್ಮವನ್ನು ತೆಗೆದುಕೊಂಡು ಶಂಕರನಿಗೆ ಸಮರ್ಪಿಸು. ವ್ರತಭಂಗ ಮಾಡಬೇಡ. ಈ ಶರೀರಕ್ಕೆ ಎಂದಾದರೂ ನಾಶನವು ನಿಶ್ಚಯವೇ ಅಲ್ಲವೇ? ಆದ್ದರಿಂದ ಶಿವ ಕಾರ್ಯಾರ್ಥವಾಗಿ ದೇಹವನ್ನು ಸಮರ್ಪಿಸುತ್ತೇನೆ" ಎಂದಳು.

ಆ ಶಬರನು ದುಃಖದಿಂದ, "ಪ್ರಿಯಳೇ. ನಿನ್ನ ಪ್ರಾಣವನ್ನು ಹೇಗೆ ತೆಗೆಯಲಿ? ಚಿಕ್ಕ ವಯಸ್ಸಿನವಳು. ಸಂತಾನ ಸೌಖ್ಯವನ್ನೂ ಪಡೆದಿಲ್ಲ. ನಿನ್ನಲ್ಲಿ ಏನೂ ದೋಷವಿಲ್ಲ. ನಿನ್ನ ತಾಯಿ ನಿನ್ನನ್ನು ರಕ್ಷಿಸು ಎಂದು ನನಗೆ ಕೊಟ್ಟಳು. ಪ್ರಾಣದಂತೆ ರಕ್ಷಿಸುತ್ತೇನೆ ಎಂದು ನಿನ್ನನ್ನು ನನ್ನ ಮನೆಗೆ ಕರೆದುತಂದೆ. ಅದರಿಂದ ನಾನು ನಿನ್ನನ್ನು ದಹಿಸಿದರೆ ನನಗೆ ಅನೇಕ ಪಾಪಗಳು ಬರುತ್ತವೆ. ನನ್ನನ್ನು ಎಲ್ಲರೂ ಭಾರ್ಯಾ ಹಂತಕನೆಂದು ಹಳಿಯುತ್ತಾರೆ. ಹೇಗೋ ಮಾಡಿ ನಾನು ನಿನ್ನನ್ನು ಸಾಯಿಸಿದರೂ ತ್ರಿಪುರಾರಿಯಾದ ಮಹೇಶ್ವರನು ಹೇಗೆ ಸಂತುಷ್ಟನಾಗುತ್ತಾನೆ? ಶರೀರವಿಟ್ಟುಕೊಂಡೇ ಈ ಲೋಕದಲ್ಲಿ ವ್ರತಾದಿಗಳನ್ನು ಮಾಡಬೇಕಲ್ಲವೇ? ಅಂತಹ ಶರೀರವನ್ನು ದಹಿಸಲಾಗದು. ಜೀವಿಸಿರುವ ಶರೀರವನ್ನು ದಹಿಸುವುದರಿಂದ ನನಗೇನು ಸಿಕ್ಕುವುದು?’ ಎಂದು ಅವನು ಹೇಳಲು, ಅವಳು ತನ್ನ ಗಂಡನಿಗೆ, "ಮೋಹದಿಂದಾಗಿ ನಿನ್ನ ಭಕ್ತಿಯು ಅಸತ್ಯವಾಗಿದೆ. ಈ ದೇಹವು ಕನಸಿನಲ್ಲಿ ಕಂಡಂತೆ, ನೀರಿನಗುಳ್ಳೆಯಂತೆ ನಶ್ವರವಾದದ್ದು. ಹುಟ್ಟಿದವನಿಗೆ ಮರಣವು ನಿಶ್ಚಯವು. ನನ್ನ ತಾಯಿತಂದೆಗಳು ನನ್ನನ್ನು ನಿನಗೆ ಅರ್ಪಿಸಿದ್ದಾರೆ. ನಾನು ನಿನ್ನ ಶರೀರದಲ್ಲಿ ಅರ್ಧಭಾಗವೇ ಅಲ್ಲವೇ? ಪ್ರಾಣನಾಥ, ನಿನಗಿಂತ ನಾನು ಬೇರೆ ಹೇಗಾಗುತ್ತೇನೆ ಹೇಳು. ‘ನಾನೇ ನಿನ್ನ ಆತ್ಮವು. ನೀನೇ ನನ್ನ ಆತ್ಮವು’ ಎಂದು ಭಾವಿಸಿ ಅರ್ಧ ಶರೀರ ಎಂದು ತಿಳಿದವನಿಗೆ ತನ್ನಲ್ಲಿ ದೋಷವೇನೂ ಇಲ್ಲ. ಆದ್ದರಿಂದ ನನ್ನ ದೇಹಕ್ಕೆ ಸಾಫಲ್ಯವನ್ನು ಪ್ರಸಾದಿಸು. ಅದರಿಂದ ಈಶ್ವರನೂ ಕೂಡಾ ಪ್ರಸನ್ನನಾಗುತ್ತಾನೆ" ಎಂದು ವಿನಯದಿಂದ ಹೇಳಿ, ತಾನು ಮನೆಯೊಳಕ್ಕೆ ಹೋಗಿ, "ನಾಥ, ಮನೆಗೆ ಬೆಂಕಿ ಹಚ್ಚು" ಎಂದಳು. ಶಬರನು ಗೃಹದ್ವಾರವನ್ನು ಮುಚ್ಚಿ ಮನೆಗೆ ಬೆಂಕಿಯಿಟ್ಟನು. ಮನೆಯೆಲ್ಲವೂ ಸುಟ್ಟು ಭಸ್ಮವಾಯಿತು. ಶಬರನ ಹೆಂಡತಿಯೂ ಸುಟ್ಟು ಹೋದಳು. ಆ ಭಸ್ಮವನ್ನು ತೆಗೆದು ಕೊಂಡು ಎಂದಿನಂತೆ ಆ ಶಬರನು ಭಕ್ತಿಯಿಂದ ಲಿಂಗಕ್ಕೆ ಅರ್ಪಿಸಿದನು. ಅವನಿಗೆ ಮಹದಾನಂದವಾಯಿತು. ಆ ಆನಂದದಲ್ಲಿ ಅವನಿಗೆ ಹೆಂಡತಿ ಸುಟ್ಟು ಹೋದಳೆಂಬುದೂ ಮರೆತುಹೋಯಿತು.

ಶ್ರದ್ಧಾಭಕ್ತಿಗಳಿಂದ ದಿನವೂ ಆ ಶಬರ ಶಿವನನ್ನು ಪೂಜಿಸಿ ಕೈಯಲ್ಲಿ ಪ್ರಸಾದವನ್ನು ಹಿಡಿದು ಪ್ರೇಮದಿಂದ ತನ್ನ ಹೆಂಡತಿಯನ್ನು ಕರೆದು ಅವಳೊಡನೆ ಪ್ರಸಾದವನ್ನು ತಿನ್ನುವನು. ಆ ದಿನವೂ ಎಂದಿನಂತೆ, ತನ್ನ ಹೆಂಡತಿಯಿಲ್ಲ ಎನ್ನುವುದನ್ನು ಮರೆತು, ಪ್ರಸಾದ ತೆಗೆದುಕೊಳ್ಳಲು ಅವಳನ್ನು ಕರೆದನು. ಶಂಕರನು ಅವನಲ್ಲಿ ಪ್ರಸನ್ನನಾದನು. ಆ ಶಬರಿಯು ಕೈಯಲ್ಲಿ ಪ್ರಸಾದವನ್ನು ಹಿಡಿದು ಬಂದಳು. ಮನೆಯೂ ಕೂಡಾ ಹಿಂದಿನಂತೆಯೇ ಇತ್ತು. ಅದನ್ನು ಕಂಡ ಶಬರನು, "ಇದೇನು ಆಶ್ಚರ್ಯ! ಮನೆಯು ಹಿಂದಿನಂತೆಯೇ ಇದೆ!" ಎಂದು ಯೋಚಿಸುತ್ತ ತನ್ನ ಹೆಂಡತಿಯನ್ನು ಕರೆದು, "ಪ್ರಿಯೆ, ನೀನು ದಗ್ಧಳಾಗಿದ್ದರೂ ಮತ್ತೆ ಹೇಗೆ ಬಂದೆ?" ಎಂದು ಕೇಳಿದನು. ಅವಳು "ನನಗೆ ನಿದ್ದೆ ಬಂತು. ಬಹಳ ಛಳಿಯಿಂದ ಬಾಧೆಯಾಗಿ ಮನೆಯಲ್ಲಿ ನಿದ್ರೆ ಮಾಡಿದೆ. ಈಗ ನೀನು ಕರೆಯುತ್ತಲೇ ಎಚ್ಚರವಾಯಿತು" ಎಂದಳು. ಆ ಕ್ಷಣದಲ್ಲಿ ಶಿವನು ಅವರ ಮುಂದೆ ಪ್ರತ್ಯಕ್ಷನಾದನು. ಅವರಿಬ್ಬರೂ ಶಿವನ ಪಾದಗಳನ್ನು ಹಿಡಿದು ಕೊಂಡರು. ಶೂಲಪಾಣಿ ಪ್ರಸನ್ನನಾಗಿ ವರ ಕೇಳೆಂದು ಹೇಳಿ, ತಾನೇ ಅವರಿಗೆ ಇಹದಲ್ಲಿ ಸೌಖ್ಯ, ನಂತರ ಕೋಟಿ ವರ್ಷಗಳು ಸ್ವರ್ಗದಲ್ಲಿ ವಾಸ ಎಂದು ವರವನ್ನು ಕೊಟ್ಟನು. ಹೀಗೆ ಮುನಿಗಳಿಗೆ ಸೂತನು ವಿಸ್ತಾರವಾಗಿ ಈ ಕಥೆಯನ್ನು ಹೇಳಿದನು. ಗುರುವಾಕ್ಯದಲ್ಲಿ ವಿಶ್ವಾಸ ಇರುವವರಿಗೆ ಫಲವು ತ್ವರೆಯಾಗಿ ಲಭಿಸುತ್ತದೆ" ಎಂದು ಶ್ರೀಗುರುವು ಶಿಷ್ಯರಿಗೆ ಬೋಧಿಸಿ, ಮತ್ತೆ ಹೇಳಿದರು.

"ಅ ಬ್ರಾಹ್ಮಣನು ಭಕ್ತಿಯಿಂದ ವಿಶ್ವಾಸವಿಟ್ಟು ಆ ಕಾಷ್ಠವನ್ನು ಸೇವಿಸುತ್ತಿದ್ದಾನೆ. ಯಾರ ಭಾವ ಹೇಗಿರುತ್ತದೋ ಅವರಿಗೆ ಫಲವೂ ಹಾಗೆಯೆ ಲಭಿಸುತ್ತದೆ" ಎಂದು ಹೇಳಿ ಶ್ರೀಗುರುವು ಸಂಗಮ ಸ್ಥಾನಕ್ಕೆ ಹೋದರು. ಮಾಧ್ಯಾಹ್ನಿಕ ಅನುಷ್ಠಾನಗಳನ್ನೆಲ್ಲ ತೀರಿಸಿಕೊಂಡು ಆ ಕುಷ್ಠುರೋಗಿಯನ್ನು ನೋಡಿ, ಕಾಷ್ಠವನ್ನು ಹೇಗೆ ಸೇವಿಸುತ್ತಿದ್ದಾನೆ ಎಂಬುದನ್ನು ಕಂಡು ಅವನಲ್ಲಿ ಪ್ರಸನ್ನನಾದರು. ಕಮಂಡಲುವಿನಿಂದ ನೀರು ತೆಗೆದುಕೊಂಡು ಆ ಒಣಕಾಷ್ಠದ ಮೇಲೆ ಚೆಲ್ಲಿ, ಅದನ್ನು ದೃಷ್ಟಿಸಿ ನೋಡಿದರು. ತಕ್ಷಣವೇ ಆ ಒಣಕಾಷ್ಠ ಚಿಗುರಿತು. ಅದು ಔದುಂಬರ ವೃಕ್ಷವೆನ್ನುವುದನ್ನು ಎಲ್ಲರೂ ಸಾಕ್ಷಾತ್ತಾಗಿ ನೋಡಿದರು. ಚಿಂತಾಮಣಿ ಸ್ಪರ್ಶದಿಂದ ಕಬ್ಬಿಣವು ಚಿನ್ನವಾದ ಹಾಗೆ ಶ್ರೀಗುರುವಿನ ಸುಧಾದೃಷ್ಟಿಯಿಂದ ಒಣಗಿದ ಕಟ್ಟಿಗೆ ಔದುಂಬರ ವೃಕ್ಷವಾಯಿತು. ಪಂಡಿತನಾದ ಆ ಕುಷ್ಠು ರೋಗಿಯ ರೋಗವು ತೊಲಗಿಹೋಗಿ, ಅವನ ಶರೀರ ಹೇಮ ಛಾಯೆಯಿಂದ ಬೆಳಗಿತು. ಆಗ ಆ ದ್ವಿಜನು ಶ್ರೀಗುರುವನ್ನು ಹೀಗೆ ಸ್ತುತಿಸಿದನು. ** **

"ಶ್ರೀ ನೃಸಿಂಹೇಶ್ವರ ಕೋಟಿಸೂರ್ಯಪ್ರಭೆಯಿಂದ ಕೋಟಿ ಚಂದ್ರನಂತೆ ಶಾಂತನಾಗಿ ವಿಶ್ವಕ್ಕೆಲ್ಲಾ ಆಶ್ರಯನಾಗಿ ದೇವಗಣಗಳು ಅರ್ಚಿಸುವ ಪಾದಪದ್ಮಗಳೊಡನೆ ಬೆಳಗುತ್ತಾ ಭಕ್ತಪ್ರಿಯನಾಗಿ ವರೇಣ್ಯನಾದ ನಿನಗೆ ವಂದನವು. ನನ್ನನ್ನು ರಕ್ಷಿಸು.

ಮಾಯೆ ಎನ್ನುವ ಕತ್ತಲಿಗೆ ನೀನೇ ಸೂರ್ಯನು. ಗುಣರಹಿತನಾದರೂ ಗುಣಾಢ್ಯನು. ನೀನೇ ಶ್ರೀವಲ್ಲಭನು. ಭಿಕ್ಷುವೇಷವನ್ನು ಸ್ವೀಕರಿಸಿದ್ದೀಯೆ. ಸದ್ಭಕ್ತರು ನಿನ್ನ ಸೇವೆ ಮಾಡುತ್ತಾರೆ. ನೀನೇ ವರದನು. ನೀನೇ ವರಿಷ್ಠನು. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು.

ಕಾಮವೇ ಮೊದಲಾದ ಷಡ್ಗುಣಗಳೆಂಬ ಗಜಗಳಿಗೆ ನೀನೇ ಅಂಕುಶವು. ನೀನೇ ಆನಂದಕ್ಕೆ ಮೂಲವು. ಪರತತ್ತ್ವವೇ ನಿನ್ನ ರೂಪವು. ಸದ್ಧರ್ಮವನ್ನು ರಕ್ಷಿಸಲು ಅವತಾರವನ್ನು ಧರಿಸಿದ್ದೀಯೆ. ನಿನಗೆ ವಂದನವು. ನನ್ನನ್ನು ಕಾಪಾಡು. 

ಸೂರ್ಯನೂ ಚಂದ್ರನೂ ನಿನ್ನ ನೇತ್ರಗಳು. ಸಜ್ಜನರಿಗೆ ಕಾಮಧೇನುವು ನೀನೇ. ಪಂಚಭೂತಾತ್ಮಕವಾದ ಈ ಮಾಯಾಪ್ರಪಂಚವು ನಿನ್ನಿಂದಲೇ ಉದಯಿಸಿ ನಿನ್ನಲ್ಲೇ ರಮಿಸುತ್ತಾ ನಿನ್ನಲ್ಲೇ ಅಸ್ತಮಿಸುತ್ತಿದೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು. 

ಕೆಂಪುತಾವರೆಯಂತೆ ಮನೋಹರವಾದವು ನಿನ್ನ ನಯನಗಳು. ಉತ್ತಮವಾದ ದಂಡವನ್ನು ಕಮಂಡಲವನ್ನು ಹಿಡಿದು ನೀನು ಪಾಪಗಳನ್ನು ಹೋಗಲಾಡಿಸುತ್ತೀಯೆ. ಆಶ್ರಿತರಿಗೆ ನಸುನಗೆ ಎನ್ನುವ ಬೆಳದಿಂಗಳಿನಿಂದ ನಿನ್ನ ಮುಖಚಂದ್ರವು ಶೋಭಿಸುತ್ತಿದೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು. 

ನಿತ್ಯವೂ ವೇದತ್ರಯಗಳು ನಿನ್ನ ಪಾದಪದ್ಮಧೂಳಿಯನ್ನು ಅನ್ವೇಷಿಸುತ್ತಿರುತ್ತಿವೆ. ನಾದಬಿಂದುಕಳಾಸ್ವರೂಪನು ನೀನು. ತಾಪತ್ರಯಗಳಿಂದ ತಪ್ತರಾದ ಆಶ್ರಿತರಿಗೆ ನೀನೇ ಕಲ್ಪವೃಕ್ಷವು. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು. 

ದೈನ್ಯ, ಆಧಿ, ಭಯ, ಕಷ್ಟಗಳೆನ್ನುವ ದಾವಾಗ್ನಿಯನ್ನು ಶಾಂತಗೊಳಿಸಿ ಸ್ತುತ್ಯನಾಗಿದ್ದೀಯೆ ನೀನು. ಅಷ್ಟಾಂಗಯೋಗವನ್ನು, ಜ್ಞಾನವನ್ನು ಬೋಧಿಸುವುದರಲ್ಲಿ ನೀನು ಉತ್ಸಾಹವನ್ನು ತೋರಿಸುತ್ತೀಯೆ. ಕೃಷ್ಣಾನದಿಯ ಪಂಚನದಿ ಸಂಗಮದಲ್ಲಿ ನೀನು ನೆಲೆಸಿದ್ದೀಯೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು. 

ಆದಿಮಧ್ಯಾಂತಗಳು ನಿನಗಿಲ್ಲ. ನಿನ್ನ ಶಕ್ತಿ ಅನಂತವು. ನಿನ್ನ ಭಾವವು ತರ್ಕಕ್ಕೆ ಸಿಕ್ಕಲಾರದ್ದು. ನಿನ್ನ ಹೆಸರೇ ಪರಮಾತ್ಮ. ಮಾತುಗಳಿಗೆ, ದೃಷ್ಟಿಗೆ ನಿನ್ನ ಮಾರ್ಗವು ಸಿಕ್ಕುವುದಿಲ್ಲ. ನೀನು ಅದ್ವಿತೀಯನು. ಶ್ರೀನೃಸಿಂಹೇಶ್ವರ ನಿನಗೆ ವಂದನವು. ರಕ್ಷಿಸು. 

ಶ್ರೀ ನೃಸಿಂಹಾಷ್ಟಕವನ್ನು ಪಠಿಸುವವನಿಗೆ ದೀರ್ಘಾಯುವು ಲಭಿಸುವುದು. ಅಂತಹವನು ಸಂಸಾರವನ್ನು ದಾಟಿ ಅಮೃತವನ್ನು ಪಡೆಯುತ್ತಾನೆ" **

ಎಂದು ಸ್ತುತಿಸಿ ನರಹರಿ ಎನ್ನುವ ಆ ದ್ವಿಜನು ಶ್ರೀಗುರುವನ್ನು, "ಹೇ ಭಗವನ್, ನೃಹರಿ, ದೇವ, ಸ್ವಾಮಿ, ನನ್ನಲ್ಲಿ ದಯೆತೋರಿಸಿದೆ." ಎಂದು ಹೇಳುತ್ತಾ ಅವರ ಪಾದಗಳಲ್ಲಿ ನಮಿಸಿದನು. ಶ್ರೀಗುರುನಾಥನು ಅವನ ತಲೆಯಮೇಲೆ ಕೈಯಿಟ್ಟು, ಕೃಪಾತಿರೇಕದಿಂದ ಅವನನ್ನು ಮೇಲೆತ್ತಿ, "ಹೇ ಜ್ಞಾನರಾಶಿ ಏಳು’ ಎಂದು ಹೇಳಿ ಆದರಿಸಿದನು. ಒಣಗಿದ ಕೊಂಬೆ ಚಿಗುರುವುದು, ಆ ಬ್ರಾಹ್ಮಣನು ರೋಗವಿಮುಕ್ತನಾಗುವುದು ಎಲ್ಲವನ್ನೂ ಕಂಡು ಅಲ್ಲಿ ಸೇರಿದ್ದವರೆಲ್ಲರೂ ವಿಸ್ಮಯಗೊಂಡು ಶ್ರೀಗುರುವನ್ನು ಸ್ತುತಿಸಿದರು. 

ಶ್ರೀಗುರುವು ನಿರ್ಗುಣ ಮಠಕ್ಕೆ ಹಿಂತಿರುಗಿದರು. ಗ್ರಾಮಸ್ಥರು ನೀರಾಜನವನ್ನು ತಂದು ಆದರದಿಂದ ಅವರ ಸಮ್ಮುಖಕ್ಕೆ ಬಂದರು. ಅಂದು ನರಹರಿ ಸಕುಟುಂಬರಾದ ಬ್ರಾಹ್ಮಣರೆಲ್ಲರಿಗೂ ಸಮಾರಾಧನೆ ಮಾಡಿದನು. ನರಹರಿಯನ್ನು ಕರೆದು ಶ್ರೀಗುರುವು, "ಅಯ್ಯಾ, ನೀನು ನನ್ನ ಭಕ್ತನು. ನಿನಗೆ ಇಹಲೋಕಪರಲೋಕಗಳ ಸುಖವನ್ನು ಕೊಟ್ಟಿದ್ದೇನೆ. ಪುತ್ರಪುತ್ರಿಯರು, ಸಂಪದವು ನಿನಗೆ ಸಮೃದ್ಧಿಯಾಗಿ ಸೇರುತ್ತವೆ." ಎಂದು ಹೇಳಿ ಅವನಿಗೆ ಸಾಂಗಯೋಗಮಾರ್ಗವನ್ನು ಅನುಗ್ರಹಿಸಿ, "ನಿನಗೆ ಇಂದಿನಿಂದ ಯೋಗೀಶ್ವರನೆಂದು ಹೆಸರು ಕೊಡಲಾಗಿದೆ. ಈ ಸರ್ವ ಶಿಷ್ಯರಲ್ಲಿ ನೀನೇ ಶ್ರೇಷ್ಠನು. ನೀನು ನನ್ನ ಪ್ರಿಯ ಭಕ್ತನು. ಇನ್ನು ಮೇಲೆ ನನ್ನ ಅನುಗ್ರಹದಿಂದ ನಿನಗೆ ಎಂತಹ ಚಿಂತೆಯೂ ಬರುವುದಿಲ್ಲ. ನನ್ನ ಆಜ್ಞೆಯನ್ನು ತ್ವರೆಯಾಗಿ ನಡೆಸು. ತಕ್ಷಣವೇ ನಿನ್ನ ಮನೆಗೆ ಹೋಗಿ ನಿನ್ನ ಹೆಂಡತಿ ಮಗನನ್ನು ಕರೆದುಕೊಂಡು ತ್ವರೆಯಾಗಿ ಬಾ. ನಿನ್ನ ಹೆಂಡತಿ ಮಕ್ಕಳೊಡನೆ ಇಲ್ಲೇ ನನ್ನ ಸನ್ನಿಧಿಯಲ್ಲಿ ಸಂತೋಷವಾಗಿರು. ಅಯ್ಯಾ ನರಹರಿ, ನಿನಗೆ ಒಳ್ಳೆಯದಾಗುತ್ತದೆ. ನಿನಗೆ ಮೂವರು ಪುತ್ರರು ಜನಿಸುತ್ತಾರೆ. ಅವರು ಯೋಗಿಗಳೆನ್ನುವ ಹೆಸರಿನಿಂದ ನನ್ನನ್ನು ಅರ್ಚಿಸುತ್ತಾರೆ. ನಿನ್ನ ವಂಶದಲ್ಲಿ ಹುಟ್ಟುವವರೆಲ್ಲರೂ ನನ್ನ ಭಕ್ತರೇ ಆಗುತ್ತಾರೆ." ಎಂದು ಹೇಳಿ, ವಿದ್ಯಾಸರಸ್ವತಿ ಎನ್ನುವ ಮಂತ್ರವನ್ನು ಪಂಡಿತನಿಗೆ ಉಪದೇಶಿಸಿದರು. ಶ್ರೀಗುರುವು ಹೇಳಿದಂತೆಯೇ ನರಹರಿಗೆ ಎಲ್ಲವೂ ನಡೆಯಿತು. ಅಯ್ಯಾ ನಾಮಧಾರಕ, ಶ್ರೀಗುರುವಿನ ಪ್ರಸಾದವು ಅಂತಹುದಯ್ಯ! ಅದರಿಂದಲೇ ಗಂಗಾಧರ ಪುತ್ರನಾದ ಸರಸ್ವತಿ ಶ್ರೀಗುರು ಚರಿತ್ರೆಯನ್ನು ವಿಸ್ತರಿಸಿದನು. ಇದು (ಸಂಸಾರಸಾಗರವನ್ನು)ತರಿಸಬೇಕು ಎಂದುಕೊಳ್ಳುವವರಿಗೆ ಪವಿತ್ರವಾದ ಮಿತ್ರನು. 

ಇಲ್ಲಿಗೆ ನಲವತ್ತನೆಯ ಅಧ್ಯಾಯ ಮುಗಿಯಿತು. 

Saturday, September 7, 2013

||ಶ್ರೀಗುರುಚರಿತ್ರೆ - ಮುವ್ವತ್ತೊಂಭತ್ತನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ಸಿದ್ಧಮುನಿಯು, "ನಾಮಧಾರಕ, ಮುಂದಿನ ವೃತ್ತಾಂತವನ್ನು ಹೇಳುತ್ತೇನೆ.ಕೇಳು. ಅರವತ್ತು ವರ್ಷ ತುಂಬಿದ ಬಂಜೆಗೆ ಶ್ರೀಗುರುವಿನ ಅನುಗ್ರಹದಿಂದ ಇಬ್ಬರು ಮಕ್ಕಳು ಹುಟ್ಟಿದರು. ಆಪಸ್ತಂಭ ಶಾಖೆಗೆ ಸೇರಿದ ಸೋಮನಾಥನೆನ್ನುವ ಬ್ರಾಹ್ಮಣನು ವೇದಶಾಸ್ತ್ರಪರಾಯಣನು. ಅವನ ಹೆಂಡತಿ ಗಂಗ ಪತಿವ್ರತಾ ಶಿರೋಮಣಿ. ಅರವತ್ತು ವರ್ಷಗಳಾದರೂ ಆಕೆಗೆ ಪುತ್ರಲಾಭವಾಗಲಿಲ್ಲ. ಗಂಧರ್ವನಗರದಲ್ಲಿನ ಪ್ರಜೆಗಳು ಅವಳನ್ನು ಬಂಜೆ ಎನ್ನುತ್ತಿದ್ದರು. ಆಕೆ ಶ್ರದ್ಧಾಭಕ್ತಿಗಳಿಂದ ಪತಿಸೇವೆ ಮಾಡುತ್ತಾ ಅನಿಂದ್ಯಳಾಗಿದ್ದಳು. ಪ್ರತಿದಿನವೂ ನಿಯಮವಾಗಿ ಆಕೆ ಶ್ರೀಗುರುವಿನ ದರ್ಶನ ಮಾಡುತ್ತಿದ್ದಳು. ಪ್ರತಿದಿನವೂ ಶ್ರೀಗುರುವಿಗೆ ನೀರಾಜನ ಕೊಟ್ಟು, ಉಪಚಾರಗಳನ್ನು ಮಾಡುತ್ತಾ ಬಹಳಕಾಲ ಕಳೆಯಿತು. ಸಂತುಷ್ಟನಾದ ಶ್ರೀಗುರುವು, ಒಂದು ದಿನ, ನಸುನಗೆ ನಗುತ್ತಾ, "ಅಮ್ಮಾ, ಗಂಗ ಬ್ರಾಹ್ಮಣಿ, ದಿನವೂ ಏಕೆ ನೀರಾಜನ ಕೊಡುತ್ತಿದ್ದೀಯೆ? ನಿನ್ನ ಅಭೀಷ್ಟವೇನೋ ಹೇಳಲಿಲ್ಲ. ನಿನ್ನ ಕೋರಿಕೆ ಏನು ಎಂದು ಇಂದು ಹೇಳು. ಗುರುಪ್ರಸಾದದಿಂದ ನಿನಗೆ ಗೌರೀಶನೂ, ನಾರಾಯಣನೂ ಸಿದ್ಧಿಯಾಗುವಂತೆ ಮಾಡುತ್ತಾರೆ." ಎಂದು ಹೇಳಿದರು. ಆಕೆ ಅಂಜಲಿಬದ್ಧಳಾಗಿ, ಪ್ರಣಾಮ ಮಾಡಿ, "ಸ್ವಾಮಿ, ಅಪುತ್ರನಿಗೆ ಗತಿಯಿಲ್ಲ ಎಂದು ಶ್ರುತಿಗಳು ಹೇಳುತ್ತಿವೆ. ಪುತ್ರನಿಲ್ಲದ ಸ್ತ್ರೀಯ ಮುಖವನ್ನು ನೋಡಬಾರದು ಎನ್ನುತ್ತಾರೆ. ಗರ್ಭವು ಫಲಿಸದ ಸ್ತ್ರೀಜನ್ಮ ನಿಷ್ಫಲವು. ನಮ್ಮ ವಂಶದಲ್ಲಿ ಸಾಧ್ವಿ ಮಗನನ್ನು ಹೆರುತ್ತಾಳೆ ಎಂದೂ, ಅವನು ನಮ್ಮನ್ನು ದುರ್ಗತಿಯಿಂದ ಉದ್ಧರಿಸುತ್ತಾನೆ ಎಂದೂ ಪಿತೃಗಳು ದಿನವೂ ಕಾಯುತ್ತಿದ್ದಾರೆ. ಪುತ್ರರಿಲ್ಲದ ಗೃಹವು ಘೋರ ಅರಣ್ಯವು. ಬಾಲಕನನ್ನು ಸೊಂಟದಲ್ಲಿಟ್ಟುಕೊಂಡು ಗಂಗಾಸ್ನಾನಕ್ಕೆ ಬರುವ ಸ್ತ್ರೀಯರು ಪ್ರತಿದಿನವೂ ತಮ್ಮ ಮಕ್ಕಳನ್ನು ಆಡಿಸುತ್ತಾರೆ. ನನ್ನ ವಿಷಯದಲ್ಲಿ ದೈವವು ಹಾಗಿಲ್ಲ. ನಾನು ದೊಡ್ಡ ನಿರ್ಭಾಗ್ಯಳು. ಮಗನಿಲ್ಲದೇ ಹೋದರೂ ಮಗಳು ಕೂಡಾ ಇಲ್ಲ. ಮಗನಿಲ್ಲದೆ ಪರಲೋಕವಿಲ್ಲ ಅಲ್ಲವೇ! ಮಕ್ಕಳಿಲ್ಲದವನ ಪಿತೃಗಳು ಪಿಂಡೋದಕ ಕ್ರಿಯೆಗಳಿಲ್ಲದೆ ಅಧೋಗತಿ ಹೊಂದುವರು. ನಾನು ಹುಟ್ಟಿ ಅರವತ್ತು ವರ್ಷಗಳಾದವು. ಇನ್ನು ನನಗೆ ಈ ಜನ್ಮವೇಕೆ? ಆದ್ದರಿಂದ ಸ್ವಾಮಿ, ನನಗೆ ಮರುಜನ್ಮವಾದರೂ ಶುಭಪ್ರದವಾಗುವಂತೆ ವರವನ್ನು ಕೊಡು. ಬರುವ ಜನ್ಮದಲ್ಲಿ ಪುತ್ರವತಿಯಾಗಿವಂತೆ ವರವನ್ನು ನೀಡು." ಎಂದು ಗಂಗ ಪ್ರಾರ್ಥಿಸಿದಳು. ಶ್ರೀಗುರುವು ನಸುನಕ್ಕು, " ಆ ಜನ್ಮದಲ್ಲಿ ನಿನಗೆ ಈ ಜನ್ಮದ ಸ್ಮೃತಿ ಹೇಗಿರುತ್ತದೆ? ನೀನು ಈ ಜನ್ಮದಲ್ಲಿ ಭಕ್ತಿಯಿಂದ ದಿನವೂ ನೀರಾಜನ ಕೊಡುತ್ತಿದ್ದೀಯಲ್ಲವೇ? ಅದರಿಂದ ನಾನು ಸಂತುಷ್ಟನಾಗಿದ್ದೇನೆ. ಈ ಜನ್ಮದಲ್ಲೇ ನಿನಗೆ ಉತ್ತಮನಾದ ಮಗ, ಒಬ್ಬಳು ಮಗಳು ಜನಿಸುತ್ತಾರೆ." ಎಂದು ಪ್ರೀತಿಯಿಂದ ಶ್ರೀಗುರುವು ಅನುಗ್ರಹಿಸಿದರು. ಹಾಗೆ ಶ್ರೀಗುರುವು ಹೇಳಲು ಗಂಗ ಸೀರೆಸೆರಗು ಗಂಟುಹಾಕಿ, ಕೈಜೋಡಿಸಿ, "ಸ್ವಾಮಿ, ದಯಾನಿಧಿ, ನಾನು ಹುಟ್ಟಿ ಅರವತ್ತು ವರ್ಷಗಳು ಕಳೆದುಹೋಗಿವೆ. ಇನ್ನು ಪುತ್ರನು ಹೇಗೆ ಜನಿಸುತ್ತಾನೆ? ಪುತ್ರಾರ್ಥಿಯಾಗಿ ನಾನಾ ವ್ರತಗಳನ್ನು ಮಾಡಿದೆ, ಅನೇಕ ತೀರ್ಥಗಳನ್ನು ದರ್ಶಿಸಿದೆ. ಪುತ್ರಕಾಮನೆಯಿಂದ ಅಶ್ವತ್ಥಪೂಜೆಗಳು ಮಾಡಿದೆ. ಈ ಜನ್ಮದಲ್ಲಿ ಪುತ್ರರು ಆಗದಿದ್ದರೂ, ಮರುಜನ್ಮದಲ್ಲಿ ಸಂಭವಿಸಲಿ ಎನ್ನುವ ಕೋರಿಕೆಯಿಂದ ಅಶ್ವತ್ಥನಾರಾಯಣನನ್ನು ಸೇವಿಸುತ್ತಿದ್ದೇನೆ. ಸ್ವಾಮಿ, ಈಗ ನೀವು ನನಲ್ಲಿ ಪ್ರಸನ್ನರಾಗಿ ಈ ಜನ್ಮದಲ್ಲೇ ಪುತ್ರನನ್ನು ಕೊಡುತ್ತಿದ್ದೀರಿ. ನಿಮ್ಮ ಮಾತು ಅನ್ಯಥಾ ಆಗಲಾರದು. ಸ್ವಾಮಿ, ಸ್ವಯಂ ಆ ನರಹರಿಯೇ ನೀವಲ್ಲವೇ! ಈ ವರವನ್ನು ಕೊಟ್ಟಿರಿ. ನಿಮ್ಮ ಮಾತು ನಿಶ್ಚಯವೆಂದು ಮುಡಿಹಾಕಿದೆ. ಸ್ವಾಮಿ ಈಗ ನೀವೇ ಪ್ರಸನ್ನನಾಗಿ ಕನ್ಯೆಯನ್ನು ಪುತ್ರನನ್ನು ಕೊಡುತ್ತಿದ್ದೀರಿ. ಪೂಜೆ ಮಾಡುವುದರಿಂದ ಅಶ್ವತ್ಥವು ಏನು ಕೊಡುತ್ತದೆ? ಮೂರ್ಖತ್ವದಿಂದ ನಾನು ಅದನ್ನು ಅರ್ಚಿಸಿದೆ." ಎಂದಳು. ಹಾಗೆ ಹೇಳಿದ ಆಕೆಯ ಮಾತುಗಳನ್ನು ಕೇಳಿ ಶ್ರೀಗುರುವು ನಗುತ್ತಲೇ ಉತ್ತರಕೊಟ್ಟರು. "ಅಶ್ವತ್ಥ ಪೂಜೆಯು ಎಂದಿಗೂ ವ್ಯರ್ಥವಲ್ಲ. ಅಶ್ವತ್ಥನಿಂದೆ ಮಾಡಬಾರದು. ನಾನು ನಿವಸಿಸುತ್ತಿರುವ ಅಶ್ವತ್ಥವನ್ನು ಭಜಿಸು. ಸತ್ಯವಾಗಿ ಪುತ್ರನು ಜನಿಸುತ್ತಾನೆ. ನನ್ನ ಮಾತಿನಂತೆ ವ್ರತ ಮಾಡು. ಪ್ರತಿದಿನವೂ ಸಂಗಮಕ್ಕೆ ಹೋಗು. ಶ್ರೀ ಭೀಮಾ-ಅಮರಜಾ ನದಿಗಳ ಸಂಗಮಸ್ಥಾನದಲ್ಲಿರುವ ಅಶ್ವತ್ಥದಲ್ಲಿ ನಾನು ನಿವಾಸಮಾಡುತ್ತಿದ್ದೇನೆ. ನಾನು ಸೇರಿದಂತೆ ಅಶ್ವತ್ಥವನ್ನು ಪೂಜಿಸು. ಅದು ತ್ವರೆಯಾಗಿ ಕಾಮನೆಗಳನ್ನು ಪೂರಯಿಸುವುದು. ನಾರಾಯಣನಿಗೂ ನನಗೂ ಅಶ್ವತ್ಥವೇ ನಿವಾಸವು." ಅವರ ಉಪದೇಶವನ್ನು ಕೇಳಿದ ಆಕೆ ಮತ್ತೆ ಕೇಳಿದಳು. "ಸ್ವಾಮಿ, ಅಶ್ವತ್ಥ ಮಹಿಮೆಯನ್ನು ಕೇಳಿಸಬೇಕೆಂದು ಕೋರುತ್ತಿದ್ದೇನೆ. ತತ್ತ್ವವು ತಿಳಿದರೆ ಮನಸ್ಸು ಸ್ಥಿರವಾಗಿ ಆಮೇಲೆ ಭಕ್ತಿಯಿಂದ ಸೇವೆಮಾಡಬಲ್ಲೆನು." ಅವಳ ಮಾತನ್ನು ಕೇಳಿದ ಶ್ರೀಗುರುವು ಅಶ್ವತ್ಥ ಮಹಿಮೆಯನ್ನು ಉಪದೇಶಿಸಿದರು.

ಬ್ರಹ್ಮಾಂಡಪುರಾಣದಲ್ಲಿ ಅಶ್ವತ್ಥ ಮಹಿಮೆ ಹೇಳಲ್ಪಟ್ಟಿದೆ. ನಾರದ ಮಹರ್ಷಿಗೆ ಬ್ರಹ್ಮದೇವನು ಆ ಮಹಿಮೆಯನ್ನು ವರ್ಣಿಸಿದನು. ನಾರದ ಮಹಾಮುನಿ ನಿತ್ಯವೂ ತ್ರಿಭುವನಗಳಲ್ಲಿ ಸಂಚರಿಸುತ್ತಿದ್ದನು. ಆ ಬ್ರಹ್ಮಪುತ್ರನು ಒಂದುಸಲ ಋಷಿಗಳ ಆಶ್ರಮಕ್ಕೆ ಹೋದನು. ಅರ್ಘ್ಯಪಾದ್ಯಾದಿಗಳನ್ನು ಆ ಮಹರ್ಷಿಗೆ ಅರ್ಪಿಸಿ ಸ್ವಾಗತಕೊಟ್ಟಮೇಲೆ ಋಷಿಗಳು, " ಹೇ ಮಹರ್ಷಿ, ಅಶ್ವತ್ಥ ಮಾಹಾತ್ಮ್ಯೆಯನ್ನು ವಿಸ್ತಾರವಾಗಿ ನಮಗೆ ಉಪದೇಶಿಸು." ಎಂದು ಪ್ರಾರ್ಥಿಸಲು, ನಾರದನು, "ಅಯ್ಯಾ ಮುನಿಗಳಿರಾ, ನಾನು ಈಗ ಬ್ರಹ್ಮಲೋಕದಿಂದ ಬರುತ್ತಿದ್ದೇನೆ. ಬ್ರಹ್ಮದೇವನನ್ನು ನಾನು ಅಶ್ವತ್ಥ ಮಹಿಮೆಯನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತಾ, ಈ ಅಶ್ವತ್ಥವನ್ನು ಎಲ್ಲರೂ ವಿಷ್ಣುಸ್ವರೂಪವೆಂದು ಹೇಳುತ್ತಾರೆಯಲ್ಲವೇ. ಈ ಅಶ್ವತ್ಥ ಮಹಿಮೆಯನ್ನು ತಿಳಿಯಲು ಇಚ್ಛಿಸುತ್ತೇನೆ" ಎಂದು ಕೋರಲು ಬ್ರಹ್ಮನು ಹೀಗೆ ಬೋಧಿಸಿದನು.

"ಅಶ್ವತ್ಥ ವೃಕ್ಷದ ಮೂಲದಲ್ಲಿ ನಾನು ನೆಲಸಿದ್ದೇನೆ. ಮಧ್ಯದಲ್ಲಿ ಹೃಷೀಕೇಶ, ಅಗ್ರದಲ್ಲಿ ರುದ್ರ ನೆಲೆಸಿದ್ದಾರೆ. ಹಾಗೆಯೇ ದಕ್ಷಿಣದಲ್ಲಿರುವ ಕೊಂಬೆಗಳಲ್ಲಿ ಶೂಲಪಾಣಿ ಇದ್ದಾನೆ. ವಿಷ್ಣುವು ಪಶ್ಚಿಮಶಾಖೆಗಳಲ್ಲಿದ್ದರೆ ನಾನು ಉತ್ತರದಲ್ಲಿ ಇದ್ದೇನೆ. ಪೂರ್ವದಲ್ಲಿರುವ ಕೊಂಬೆಗಳಲ್ಲಿ ಸದಾ ಇಂದ್ರಾದಿ ದೇವತೆಗಳು ಇರುತ್ತಾರೆ. ವಸುಗಳು, ರುದ್ರರು, ಆದಿತ್ಯರು ಎನ್ನುವ ದೇವತೆಗಳೆಲ್ಲರೂ ಎಲ್ಲ ಶಾಖೆಗಳಲ್ಲೂ ನಿವಸಿಸುತ್ತಾರೆ. ಬ್ರಾಹ್ಮಣರು, ಋಷಿಗಳು, ಗೋವುಗಳು, ವೇದಗಳು, ಯಜ್ಞಗಳು ಎಲ್ಲ ಜಾಗಗಳಲ್ಲೂ ಸದಾ ಬೇರುಗಳು, ಚಿಗುರು ಮುಂತಾದುವುಗಳಲ್ಲಿನಿವಾಸಮಾಡುತ್ತಾರೆ. ಸಮಸ್ತ ನದಿಗಳು, ಕ್ಷೀರಸಮುದ್ರವೇ ಮೊದಲಾದ ಸಪ್ತಸಮುದ್ರಗಳು ಪೂರ್ವದ ಕೊಂಬೆಗಳಲ್ಲಿ ನಿವಸಿಸುತ್ತವೆ. ಇಂತಹುದು ಅಶ್ವತ್ಥವೃಕ್ಷವು. ಮೂಲದಲ್ಲಿ ಅಕಾರ, ಮಧ್ಯದಲ್ಲಿ ಉಕಾರ, ಫಲಪುಷ್ಪಗಳಲ್ಲಿ ಮಕಾರ ಇರುವುದರಿಂದ ಅಶ್ವತ್ಥ ವೃಕ್ಷವು ಉತ್ತಮವು. ಅಶ್ವಥ್ಥ ವೃಕ್ಷವೇ ಕಲ್ಪವೃಕ್ಷವೆಂದು ಬ್ರಹ್ಮ ನನಗೆ ಹೇಳಿದನು. ಅಶ್ವತ್ಥವೃಕ್ಷ ಮಹಿಮೆಯನ್ನು ಯಾರೂ ವಿವರಿಸಲಾರರು. ಆ ವೃಕ್ಷವನ್ನು ಸೇವಿಸುವವನು ಕಾಮದಾತ ಆಗುತ್ತಾನೆ. ಹೀಗೆಂದು ನಾರದನು ಹೇಳಲು ಮುನಿಗಣವು ಮತ್ತೆ ನಾರದನನ್ನು, "ದೇವರ್ಷಿ, ಅಶ್ವತ್ಥ ವೃಕ್ಷವನ್ನು ಸೇವಿಸುವ ವಿಧಾನವನ್ನು ತಿಳಿಸು." ಎಂದು ಕೋರಿದರು.

ನಾರದನು, " ಮುನಿಗಳಿರಾ, ವಿಸ್ತಾರವಾಗಿ ಬ್ರಹ್ಮನು ತಿಳಿಸಿದ ವಿಧಾನದಲ್ಲಿ ಅಶ್ವತ್ಥವನ್ನು ಸೇವಿಸುವುದನ್ನು ಹೇಳುತ್ತೇನೆ. ಕೇಳಿ. ಆಷಾಢ, ಪುಷ್ಯ, ಚೈತ್ರಮಾಸಗಳಂದು, ಗುರುಶುಕ್ರರ ಅಸ್ತಮೋದಯಗಳಲ್ಲಿ, ಚಂದ್ರನು ಅನುಕೂಲವಾಗಿ ಇಲ್ಲದಿರುವಾಗ ಅಶ್ವತ್ಥ ಸೇವೆಯನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ. ನಿಷಿದ್ಧವಲ್ಲದ ಮಾಸಗಳಲ್ಲಿ, ಶುಭದಿನದಲ್ಲಿ, ಉಪವಾಸದಿಂದಿದ್ದು, ಶುಚಿಯಾಗಿ ಅಶ್ವತ್ಥ ಸೇವಾವ್ರತವನ್ನು ಆಚರಿಸಬೇಕು. ಧೀಮಂತನಾದವನು ಆದಿ ಸೋಮವಾರಗಳಲ್ಲಿ, ಶುಕ್ರವಾರದಲ್ಲಿ, ಸೂರ್ಯಸಂಕ್ರಮಣದಲ್ಲಿ ಅಶ್ವತ್ಥವನ್ನು ಮುಟ್ಟಬಾರದು. ಪರ್ವದಿನಗಳಲ್ಲಿ, ವ್ಯತಿಪಾತಯೋಗದಂದು, ದುರ್ದಿನಗಳಲ್ಲಿ, ವೈಧೃತೀಕರಣದಲ್ಲಿ, ರಾತ್ರಿಯಲ್ಲಿ, ರಿಕ್ತತಿಥಿಗಳಲ್ಲಿ, ಸಂಧಿಯಲ್ಲಿ, ಅಪರಾಹ್ಣದಲ್ಲಿ, ತಿಳಿದವನು ಅಶ್ವತ್ಥವನ್ನು ಸ್ಪರ್ಶಿಸಬಾರದು. ನಿಂದೆಗಳು, ಪಾಷಂಡಿಗಳೊಡನೆ ವಾದ, ಜೂಜು, ಅಸತ್ಯವನ್ನು ನುಡಿಯುವುದು, ಮುಂತಾದುವನ್ನು ಬಿಟ್ಟು, ಪ್ರಾತಃಕಾಲದಲ್ಲಿ ಶುಚಿಯಾಗಿ ಮೌನದಿಂದ ಅಶ್ವತ್ಥವ್ರತವನ್ನು ಆಚರಿಸಬೇಕು. ಸಚೇಲಸ್ನಾನಮಾಡಿ, ಸ್ವಚ್ಛವಾದ ವಸ್ತ್ರಗಳನ್ನು ಧರಿಸಿ, ಗಂಗಾಯಮುನೆಗಳ ನೀರು ತುಂಬಿದ ಎರಡು ಕಲಶಗಳನ್ನು, ರಂಗೋಲಿಗಳಿಂದ ಅಲಂಕರಿಸಿದ ಪದ್ಮವನ್ನು ಪೂಜಿಸಿ ಯಥಾವಿಧಿಯಾಗಿ ಪುಣ್ಯಾಹವನ್ನು ಬ್ರಾಹ್ಮಣರಿಂದ ಹೇಳಿಸಿ, ತನ್ನ ಕಾಮನೆಯನ್ನು ಉದ್ದೇಶಿಸಿ, ಆದರದಿಂದ ಸಂಕಲ್ಪಮಾಡಿ, ಕಲಶದಲ್ಲಿರುವ ನೀರಿನಿಂದ ಅಶ್ವತ್ಥವೃಕ್ಷಕ್ಕೆ ಏಳುಸಲ ಸ್ನಾನ ಮಾಡಿಸಿ, ಭಕ್ತಿಯಿಂದ ಕೂಡಿದವನಾಗಿ, ಮತ್ತೆ ತಾನು ಸ್ನಾನ ಮಾಡಿ ದೈವಸ್ವರೂಪವಾದ ಅಶ್ವತ್ಥವೃಕ್ಷವನ್ನು ಪೂಜಿಸಬೇಕು. ಪುರುಷಸೂಕ್ತ ವಿಧಾನವಾಗಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

ಶ್ರೀ ವಿಷ್ಣುಮೂರ್ತಿಯಾದ ಅಶ್ವತ್ಥವನ್ನು ಅಷ್ಟಭುಜಗಳು ಇರುವಹಾಗೆ ದ್ವಿಜನಾದವನು ಧ್ಯಾನಿಸಬೇಕು. ಕ್ರಮವಾಗಿ ಶಂಖ, ಚಕ್ರ, ವರದಹಸ್ತಗಳನ್ನು ಧ್ಯಾನಿಸಬೇಕು. ಖಡ್ಗ, ಗದೆ, ಶಾರ್ಙ್ಗಗಳನ್ನು, ಹಾಗೇ ಅಭಯಮುದ್ರೆಯನ್ನು ಅಷ್ಟಹಸ್ತಗಳಲ್ಲಿ ಧರಿಸಿರುವ ಅವ್ಯಯನಾದ ವಿಷ್ಣುವನ್ನು, ನಾರಾಯಣನನ್ನು, ಪೀತಾಂಬರನನ್ನು, ಲಕ್ಷ್ಮೀಸಹಿತನಾದ ಜನಾರ್ದನನ್ನು ಧ್ಯಾನಿಸಿ ಅಶ್ವತ್ಥ ಮೂಲವನ್ನು ಪೂಜಿಸಬೇಕು. ಅಶ್ವತ್ಥವನ್ನು ತ್ರಿಮೂರ್ತಿಗಳಿಗೆ ಉತ್ತಮ ಸ್ಥಾನವಾಗಿ ಆಹ್ವಾನ ಮಾಡಿ, ದೇವತಾಮಯವಾದ ಈ ವೃಕ್ಷವನ್ನು ಅರ್ಚಿಸಬೇಕು. ವಸ್ತ್ರವನ್ನಾಗಲೀ, ದಾರವನ್ನಾಗಲೀ ವೃಕ್ಷದ ಸುತ್ತಲೂ ಸುತ್ತಿ ತನ್ನ ಅಭೀಷ್ಟವನ್ನು ಸಂಕಲ್ಪಿಸಿಕೊಂಡು ಮನೋವಾಕ್ಕಾಯಗಳಿಂದ ನಿಯಮವನ್ನು ಪಾಲಿಸುತ್ತಾ, ಭಕ್ತಿಯಿಂದ ಕೂಡಿ ಪುರುಷಸೂಕ್ತವನ್ನು ಹೇಳುತ್ತಾ/ಪಠಿಸುತ್ತಾ ಪ್ರದಕ್ಷಿಣೆಗಳನ್ನು ಮಾಡಬೇಕು. ಆನಂದಫಲವನ್ನು ಕೊಡುವ ಸಹಸ್ರನಾಮಗಳನ್ನು ಹೇಳುತ್ತಾ ಮೌನವಾಗಿ, ನಿಧಾನವಾಗಿ, ಗರ್ಭಿಣಿಸ್ತ್ರೀಯಂತೆ, ತುಂಬಿದಕೊಡ ಹೊತ್ತಿರುವ ಸ್ತ್ರೀಯಂತೆ, ಮಂದಗಮನನಾಗಿ ಶಕ್ತಿಯಿದ್ದಷ್ಟು ಪ್ರದಕ್ಷಿಣೆಗಳನ್ನು ಮಾಡಬೇಕು.

ಪ್ರದಕ್ಷಿಣೆ ಮಾಡುವಾಗ ಪ್ರತಿ ಪ್ರದಕ್ಷಿಣೆಯ ಮೊದಲು, ಮಧ್ಯೆ ಹಾಗೂ ಕೊನೆಯಲ್ಲಿ ನಮಸ್ಕಾರ ಮಾಡಬೇಕು. ಬ್ರಹ್ಮಹತ್ಯೆಯಿಂದುಂಟಾದ ಪಾಪವನ್ನು ಎರಡು ಲಕ್ಷ ಪ್ರದಕ್ಷಿಣೆಗಳು ನಾಶಮಾಡಬಲ್ಲವು. ಗುರುತಲ್ಪಗಮನದಂತಹ ಪಾಪಗಳನ್ನೂ ಆ ಪ್ರದಕ್ಷಿಣೆಗಳು ನಾಶಮಾಡಬಲ್ಲವು. ಪ್ರದಕ್ಷಿಣೆ ಮಾಡುವವನ ವ್ಯಾಧಿಗಳು ನಾಶವಾಗುತ್ತವೆ. ಋಣವಿಮುಕ್ತನಾಗುತ್ತಾನೆ. ಈ ಪ್ರದಕ್ಷಿಣಗಳು ಜನ್ಮ, ಮೃತ್ಯು, ಜರಾ, ವ್ಯಾಧಿ, ಸಂಸಾರ ಭಯಗಳನ್ನು ಕೂಡಾ ಹೋಗಲಾಡಿಸಿ ಮಾನವರನ್ನು ತರಿಸಬಲ್ಲದು. ಸಾವಿರ ಪ್ರದಕ್ಷಿಣೆಗಳು ಗ್ರಹಬಾಧೆಗಳನ್ನು ಹೋಗಲಾಡಿಸುವುದು. ಮನೋವಾಕ್ಕಾಯಕರ್ಮಗಳಿಂದ ಅಶ್ವತ್ಥವೃಕ್ಷವನ್ನು ಸೇವಿಸಿದವರಿಗೆ ನಿಶ್ಚಯವಾಗಿಯೂ ಪುತ್ರಲಾಭವಾಗುತ್ತದೆ. ಅಶ್ವತ್ಥ ಸೇವೆ ಚತುರ್ವಿಧ ಫಲಪುರುಷಾರ್ಥಗಳನ್ನು ಕೊಡಬಲ್ಲುದು. ಇನ್ನು ಅಶ್ವತ್ಥ ಸೇವೆಯಿಂದ ಪುತ್ರಪ್ರಾಪ್ತಿಗೆ ತಡವೇಕಾಗುತ್ತದೆ? ಶನಿವಾರದ ದಿನ ಅಶ್ವತ್ಥ ವೃಕ್ಷವನ್ನು ಸ್ಪರ್ಶಿಸಿ ಮೃತ್ಯುಂಜಯ ಮಂತ್ರವನ್ನು ಜಪಿಸಿದವವನು ಕಾಲಮೃತ್ಯುವನ್ನೂ ಕೂಡಾ ಜಯಿಸಬಲ್ಲನು. ಅಂತಹ ನರನು ಪೂರ್ಣಾಯುಷ್ಯನಾಗುತ್ತಾನೆ. ಶನಿಯಿಂದ ಉಂಟಾಗುವ ಏಳು ವರ್ಷಗಳ ಕಾಟವು ಸಂಭವಿಸಿದಾಗ ಅಶ್ವತ್ಥ ಸಮೀಪದಲ್ಲಿ ಕೋಣಸ್ಥ, ಪಿಂಗಳ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಶೌರಿ, ಶನೇಶ್ವರ, ಮಂದ, ಪಿಪ್ಪಲಾದರುಗಳಿಂದ ಸ್ತುತಿಸಲ್ಪಡುವವನು ಎಂದು ಜಪಮಾಡಬೇಕು. ಧೃಢವಾದ ಮನಸ್ಸಿನಿಂದ ಅಶ್ವತ್ಥವನ್ನು ಸೇವಿಸುವವರಿಗೆ ಕಾಮಸಿದ್ಧಿ, ಪುತ್ರಲಾಭಗಳಾಗುವುದರಲ್ಲಿ ಸಂಶಯವೇ ಇಲ್ಲ. ಈ ವಿಧದಲ್ಲಿ ಬ್ರಹ್ಮದೇವನು ನಾರದನಿಗೆ ಅಶ್ವತ್ಥಮಾಹಾತ್ಮ್ಯೆಯನ್ನು ತಿಳಿಸಿದನು. ನಾರದ ಮಹರ್ಷಿಯಿಂದ ಪೂರ್ವದಲ್ಲಿ ಅದನ್ನು ಋಷಿಗಳೆಲ್ಲರೂ ಕೇಳಿದರು.

ಅಶ್ವತ್ಥ ಪ್ರದಕ್ಷಿಣೆಗಳ ಸಂಖ್ಯೆಯಯಲ್ಲಿ ದಶಾಂಶವಾಗಿ ಆಗಮೋಕ್ತ ಪ್ರಕಾರ ತಿಳಿದವರು ಹೋಮ ಮಾಡಬೇಕು. ಹೋಮದ ದಶಾಂಶವಾಗಿ ಬ್ರಾಹ್ಮಣರಿಗೆ ಭೋಜನ ಇಡಬೇಕು. ಪ್ರದಕ್ಷಿಣೆ ಮಾಡುವಾಗ ಬ್ರಹ್ಮಚರ್ಯೆಯನ್ನು ಪಾಲಿಸುತ್ತಾ, ಹವಿಷ್ಯಾನ್ನವನ್ನು ಮಾತ್ರ ತಿನ್ನುತ್ತಾ, ವ್ರತ ಮಾಡಿ ಕೊನೆಯಲ್ಲಿ ಉದ್ಯಾಪನೆ ಮಾಡುವಾಗ ಶಕ್ತಿಯಿದ್ದಷ್ಟು, ಚಿನ್ನದಲ್ಲಿ ಆಶ್ವತ್ಥವೃಕ್ಷವನ್ನು ಮಾಡಿಸಿ ಬ್ರಾಹ್ಮಣನಿಗೆ ದಾನ ಮಾಡಬೇಕು. ದಾನ ಸ್ವೀಕರಿಸುವ ಬ್ರಾಹ್ಮಣನು ಕುಟುಂಬಿಯಾಗಿ ಸುಶೀಲನಾಗಿರಬೇಕು. ಬ್ರಾಹ್ಮಣನಿಗೆ ಕರುವಿನ ಸಹಿತ ಸಾಲಂಕೃತ ಬಿಳಿಯ ಗೋವನ್ನು ಕೂಡಾ ದಾನ ಕೊಡಬೇಕು. ಅಶ್ವತ್ಥ ವೃಕ್ಷದ ಕೆಳಗೆ ಯಥಾಶಕ್ತಿಯಾಗಿ ಎಳ್ಳು ರಾಶಿಯಾಗಿ ಹಾಕಿ ವಸ್ತ್ರದಿಂದ ಮುಚ್ಚಿ ಬ್ರಾಹ್ಮಣನಿಗೆ ದಾನಕೊಟ್ಟವನು ಅಭೀಷ್ಟಸಿದ್ಧಿಗಳನ್ನು ಪಡೆಯುತ್ತಾನೆ. ಇದು ಅಶ್ವತ್ಥ ಸೇವಾ ವಿಧಾನವು. ಈ ವಿಧಾನದಲ್ಲಿ ಭಕ್ತಿಯಿಂದ ಆಚರಿಸುವವನು ತನ್ನ ಅಭೀಷ್ಟಗಳನ್ನು ಹೊಂದುತ್ತಾನೆ."

ಹೀಗೆ ಶ್ರೀಗುರುವು ಆ ಬಂಜೆ ಹೆಂಗಸಿಗೆ ಹೇಳಿ, "ನಿನಗೆ ಅಶ್ವತ್ಥ ಮಹಿಮೆಯನ್ನು ಹೇಳಿದ್ದೇನೆ. ಭಕ್ತಿಯಿದ್ದವರಿಗೆ ಅವರವರು ಕೇಳಿದ ಪ್ರಕಾರ ಆಯಾ ವಿಧವಾಗಿ ಫಲಗಳು ಕೈಗೂಡುತ್ತವೆ. ನೀನೂ ಕೂಡಾ ಹಾಗೆ ಅಶ್ವತ್ಥ ಸೇವೆಯನ್ನು ಮಾಡು. ಈ ಸಂಗಮ ಸ್ಥಾನದಲ್ಲಿರುವ ಅಶ್ವತ್ಥವೃಕ್ಷವು ಕಲ್ಪದ್ರುಮವೇ! ಅದೇ ನಮ್ಮ ನಿವಾಸವು. ಆದ್ದರಿಂದ ಈ ಅಶ್ವತ್ಥ ಸೇವೆಯನ್ನು ಭಕ್ತಿಯಿಂದ ಮಾಡು. ನಿನಗೆ ಇಷ್ಟ ಸಿದ್ಧಿಯಾಗಿ ಒಬ್ಬಳು ಕನ್ಯೆ, ಒಬ್ಬ ಮಗ ಜನಿಸುತ್ತಾರೆ" ಎಂದು ಉಪದೇಶಿಸಿದ ಗುರು ವಾಕ್ಯಗಳನ್ನು ಕೇಳಿ ಆ ದ್ವಿಜಾಂಗನೆ ಅವರಿಗೆ ನಮಸ್ಕರಿಸಿ, ಭಕ್ತಿಪೂರ್ವಕವಾಗಿ ಶ್ರೀಗುರುವನ್ನು ಕೇಳಿದಳು.

"ಸ್ವಾಮಿ, ನಾನು ಹುಟ್ಟಾವಂಧ್ಯೆ. ನನಗೆ ಅರವತ್ತು ವರ್ಷಗಳು ಕಳೆದಿವೆ. ನನಗೆ ಮಗನು ಹೇಗೆ ಹುಟ್ಟುತ್ತಾನೆ? ಆದರೂ ಗುರುವಾಕ್ಯವೇ ಕಾಮಧೇನು. ಆದ್ದರಿಂದ ನಿಮ್ಮ ಮಾತುಗಳನ್ನು ನಂಬಿ ನಾನು ಸೇವೆ ಮಾಡುತ್ತೇನೆ. ನಿಮ್ಮ ಪಾದಸೇವೆ ಮಾಡುತ್ತೇನೆ" ಎಂದು ಹೇಳಿ, ಶ್ರೀಗುರುವು ಆಣತಿ ಕೊಡಲು ಸಂಗಮ ಸ್ನಾನ ಮಾಡಿ, ಷಟ್ಕೂಲ ತೀರ್ಥದಲ್ಲಿ ಆ ಬಂಜೆ ಶ್ರೀಗುರುವು ಉಪದೇಶಿಸಿದಂತೆ ಅಶ್ವತ್ಥವನ್ನು ಸೇವಿಸಿದಳು. ಹಾಗೆ ಆಕೆ ಮೂರು ದಿನಗಳು ಆರಾಧಿಸಿದಳು. ಅಶ್ವತ್ಥದೊಡನೆ ಶ್ರೀಗುರುವಿಗೂ ಆ ದ್ವಿಜಾಂಗನೆ ಸೇವಿಸಲು ಆರಂಭ ಮಾಡಿದಳು. ಮೂರನೆಯ ದಿನ ಆ ಸಾಧ್ವಿ ಒಂದು ಸ್ವಪ್ನವನ್ನು ಕಂಡಳು. ಅಕೆಯ ಕನಸಿನಲ್ಲಿ ಒಬ್ಬ ಬ್ರಾಹ್ಮಣ ಬಂದು, "ಹೇ ಸಾಧ್ವಿ, ನಿನ್ನ ಕೋರಿಕೆ ನೆರವೇರಿತು. ಗಂಧರ್ವ ನಗರಕ್ಕೆ ಹೋಗಿ ಗುರುನಾಥನಿಗೆ ಭಕ್ತಿಯಿಂದ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡು. ಶ್ರೀಗುರುವು ನಿನಗೆ ಏನನ್ನು ಕೊಟ್ಟರೂ ಅದನ್ನು ಭಕ್ಷಿಸು. ನಿನ್ನ ಕೋರಿಕೆ ತೀರುವುದು. ನೀನು ನಿನ್ನ ಮನೋ ನಿಶ್ಚಯವನ್ನು ಬಿಡದೆ ಮಾಡಬೇಕು" ಎಂದು ಹೇಳಿದನು. ಹಾಗೆ ಸ್ವಪ್ನವನ್ನು ಕಂಡ ಆ ಮಹಿಳೆ ತಕ್ಷಣವೇ ಎದ್ದು ಸಾಕ್ಷಾತ್ತು ಕಲ್ಪವೃಕ್ಷವೇ ಆದ ಆ ಅಶ್ವತ್ಥ ವೃಕ್ಷವನ್ನು ಸೇವಿಸಿ, ನಾಲ್ಕನೆಯ ದಿನ ಶ್ರೀಗುರುವಿದ್ದ ಮಠಕ್ಕೆ ಬಂದು ಶ್ರೀಗುರುವಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದಳು. ಮುಗುಳ್ನಗುತ್ತಾ ಶ್ರೀಗುರುವು ಅವಳಿಗೆ ಎರಡು ಫಲಗಳನ್ನು ಕೊಟ್ಟು, "ನಿನ್ನ ಕೋರಿಕೆ ಸಿದ್ಧಿಸಿತು. ಈ ಎರಡು ಫಲಗಳನ್ನು ತಿನ್ನು. ಈ ಪಾರಣೆಯಿಂದ ನಿನ್ನ ಸಂಕಲ್ಪವು ಸಿದ್ಧಿಸುವುದು. ನಿನಗೆ ಪುತ್ರೀ ಪುತ್ರರು ಅನುಗ್ರಹಿಸಲ್ಪಟ್ಟಿದ್ದಾರೆ" ನಂತರ ಆ ವಂಧ್ಯಾಸ್ತ್ರೀ ಬ್ರಾಹ್ಮಣನಿಗೆ ದಾನಕೊಟ್ಟು, ಗುರುದತ್ತವಾದ ಆ ಎರಡೂ ಫಲಗಳನ್ನು ಭಕ್ಷಿಸಿದಳು. ಹಾಗೆ ವ್ರತ ಸಮಾಪ್ತಿ ಮಾಡಿದ ದಿನವೇ ಆ ವೃದ್ಧಸ್ತ್ರೀ ಋತುಮತಿಯಾಗಿ ವಯೋವೃದ್ಧೆಯಾದರೂ ಶ್ರೀಗುರುಪ್ರಸಾದದಿಂದ ರಜಸ್ವಲೆಯಾದಳು. ಮೂರುದಿನಗಳು ಮೌನದಿಂದಿದ್ದು, ಹವಿಷ್ಯಾನವನ್ನೇ ತಿನ್ನುತ್ತಾ, ಶ್ವೇತವಸ್ತ್ರವನ್ನು ಧರಿಸಿ, ಹಾಗೆ ಹೀಗೆ ನೋಡದೆ ಕಳೆದಳು. ಮೂರು ದಿನಗಳು ಹಾಗೆ ಕಳೆದು ಆ ಪತಿವ್ರತೆ ಶುಚಿ ಸ್ನಾನ ಮಾಡಿ ನಾಲ್ಕನೆಯ ದಿನ ಸಂತೋಷದಿಂದ ಶ್ರೀಗುರುವಿನ ದರ್ಶನ ಮಾಡಿದಳು. ಐದನೆಯ ದಿನ ಅವಳು ತನ್ನ ಗಂಡನೊಡನೆ ಬಂದು ಶ್ರೀಗುರುವನ್ನು ಅರ್ಚಿಸಿದಳು. ಅವಳನ್ನು ಶ್ರೀಗುರುವು ‘ಪುತ್ರವತೀ ಭವ’ ಎಂದು ಆಶೀರ್ವದಿಸಿದರು.

ಹೀಗೆ ಶ್ರೀಗುರುವಿನ ಆಶೀರ್ವಾದ ಪಡೆದು ಆಕೆ ತನ್ನ ಮನೆಯನ್ನು ಸೇರಿದಳು. ಐದನೆಯ ದಿನ ಆ ವೃದ್ಧಸ್ತ್ರೀ ತನ್ನ ಭರ್ತೃ ಸಮಾಗಮದಿಂದ ಕನ್ಯೆಯಾಗುವಂತಹ ಗರ್ಭವನ್ನು ಧರಿಸಿದಳು. ಆಕೆ ಗರ್ಭಿಣಿ ಎಂದು ತಿಳಿದ ಜನ ಆಶ್ಚರ್ಯ ಚಕಿತರಾದರು. "ಇದು ಎಂತಹ ಆಶ್ಚರ್ಯ? ಇದೊಂದು ಹೊಸ ವಿಚಿತ್ರ. ಅರವತ್ತು ವಯಸ್ಸಿನ ವೃದ್ಧೆ ಬಂಜೆಯಾದರೂ ಗರ್ಭಿಣಿಯಾಗಿದ್ದಾಳೆ. ಸೋಮನಾಥನು ಅದೃಷ್ಟವಂತನು" ಎಂದು ಹೇಳಿಕೊಂಡರು. ಆ ದ್ವಿಜನು ಸಂತುಷ್ಟನಾಗಿ ಶ್ರೀಗುರುವಿನ ಆಜ್ಞೆಯಂತೆ ಪುಂಸವನಾದಿ ಕ್ರಿಯೆಗಳನ್ನು ಮಾಡಿದನು. ನಂತರ ಎಂಟನೆಯ ತಿಂಗಳಲ್ಲಿ ಆಕೆಗೆ ಸೀಮಂತೋನ್ನಯನವನ್ನು ಮಾಡಿದನು. ಅಕೆ ಗುರುವಿನ ಅಜ್ಞೆಯಂತೆ ಬ್ರಾಹ್ಮಣರಿಗೆ ವಾಯನಾದಿಗಳನ್ನು ಕೊಟ್ಟಳು. ಕೂದಲು ಬೆಳ್ಳಗಾದ ಆ ವೃದ್ಧೆ ಉತ್ಸಾಹದಿಂದ ವಾಯನಾದಿಗಳನ್ನು ಕೊಡುವುದನ್ನು ನೋಡಿ ಕೆಲವರು ಆಶ್ಚರ್ಯಪಟ್ಟರು. ಮತ್ತೆ ಕೆಲವರು, "ಶ್ರೀ ನೃಸಿಂಹ ಸರಸ್ವತಿ ಪ್ರಸನ್ನನಾದರು. ಶ್ರೀಗುರುವನ್ನು ಅರ್ಚಿಸಿದರೆ ತಕ್ಷಣವೇ ವರ ಕೊಡುತ್ತಾರೆ. ಈ ನೃಸಿಂಹ ಸರಸ್ವತಿ ತ್ರಿಮೂರ್ತಿಗಳ ಅವತಾರವೇ! ತನ್ನ ಭಕ್ತರನ್ನು ರಕ್ಷಿಸಲು ಇವರು ಅವತರಿಸಿದರು" ಎಂದು ಶ್ರೀಗುರುವನ್ನು ಸ್ತುತಿಸಿದರು. ಆಕೆ ವಾಯನಗಳನ್ನು ಕೊಟ್ಟ ನಂತರ ಹೋಗಿ ಶ್ರೀಗುರುವಿಗೆ ನಮಸ್ಕರಿಸಿದಳು. ಶ್ರೀಗುರುವು ಆಶೀರ್ವದಿಸಿದರು. ಆ ವಿಪ್ರವನಿತೆ, " ಹೇ ಪ್ರಭೋ, ನಿಮಗೆ ಜಯವಾಗಲಿ. ಜಯವಾಗಲಿ. ನೀವೇ ಪರಮ ಪುರುಷನು. ಬ್ರಹ್ಮ ವಿಷ್ಣು ಮಹೇಶ್ವರಾತ್ಮಕರು. ಆರ್ಯಾ, ನಿಮ್ಮ ವಚನವೇ ನನ್ನನ್ನು ಅನುಗ್ರಹಿಸಿತು. ವರಗಳನ್ನು ಕೊಟ್ಟಿರಿ. ನನ್ನ ಶರೀರವು ಅಮೃತವಾಯಿತು. ವಿಶ್ವರಕ್ಷಣೆಗಾಗಿ, ಅಜನೂ, ಅವ್ಯಯನೂ ಆಗಿದ್ದರೂ ಮಹೀತಲದಲ್ಲಿ ಅವತರಿಸಿದ್ದೀರಿ. ನೀವೇ ತ್ರಿಮೂರ್ತಿಯು. ನಿಮ್ಮ ಮಹಿಮೆ ಅನಂತವಾದದ್ದು. ಹೇ ಸ್ವಾಮಿ, ದಯಾಸಮುದ್ರ, ಅನವದ್ಯ, ನಿಮಗೆ ನಮಸ್ಕಾರಗಳು" ಎಂದು ಸ್ತುತಿಸುತ್ತಾ ಆ ಬ್ರಾಹ್ಮಣಿ ಶ್ರೀಗುರು ಚರಣಗಳಲ್ಲಿ ವಂದಿಸಿದಳು. ಶ್ರೀಗುರುವಿನ ಆಜ್ಞೆ ಪಡೆದು ಪ್ರೀತಿಯಿಂದ ಕೂಡಿ ತನ್ನ ಮನೆಗೆ ಹಿಂತಿರುಗಿದಳು. ಒಂಭತ್ತು ತಿಂಗಳು ಕಳೆದ ನಂತರ ಆಕೆ ಒಂದು ಶುಭ ದಿನದಲ್ಲಿ ಪ್ರಸವಿಸಿದಳು. ಜ್ಯೋತಿಷ್ಕರು ಬಂದು ಆ ಮಗುವಿನ ಜಾತಕವನ್ನು ನೋಡಿದರು. "ಹೇ ವಿಪ್ರ, ಈ ಕನ್ಯೆ ಶುಭ ಲಕ್ಷಣಗಳಿಂದ ಕೂಡಿದ್ದಾಳೆ. ಆಕೆಗೆ ಎಂಟು ಗಂಡು ಮಕ್ಕಳಾಗುತ್ತಾರೆ. ಕುಲ ವೃದ್ಧಿಯಾಗುತ್ತದೆ" ಎಂದು ಜ್ಯೋತಿಷ್ಕರು ಹೇಳಿದರು. ಹೀಗೆ ಕನ್ಯಾ ಜಾತಕವನ್ನು ತಿಳಿದುಕೊಂಡು ಸೋಮನಾಥನು ಆನಂದ ಹೊಂದಿ ಬ್ರಾಹ್ಮಣರಿಗೆ ಮರ್ಯಾದೆ ಮಾಡಿದನು. ಪುರುಡು ದಿನಗಳು ಕಳೆದ ಮೇಲೆ ಆ ಸಾಧ್ವಿ ಗಂಗಾ ಸ್ನಾನ ಮಾಡಿ ಕುಮಾರಿಯನ್ನೂ, ಗಂಡನನ್ನೂ ಕರೆದು ಕೊಂಡು ಶ್ರೀಗುರುವಿನ ದರ್ಶನಕ್ಕೆ ಹೋದಳು. ಶ್ರೀಗುರುವಿನ ಪಾದ ಸನ್ನಿಧಿಯಲ್ಲಿ ಭಕ್ತಿಯಿಂದ ಮಗುವನ್ನು ಇಟ್ಟು, ಏಕಾಗ್ರ ಚಿತ್ತಳಾಗಿ ಶ್ರೀಗುರುವಿಗೆ ನಮಸ್ಕರಿಸಿದಳು. ಶ್ರೀಗುರುವು ಅವಳನ್ನು ನೋಡಿ, "ಹೇ ಸಾಧ್ವಿ, ಧನ್ಯಳಾದೆ. ಪುತ್ರಿವತಿಯಾದೆ. ಏಳು. ಏಳು" ಎಂದು ಸಂತೋಷದಿಂದ ಹೇಳಿದರು. ಆಕೆ ಎದ್ದು, "ಸ್ವಾಮಿ, ನನ್ನ ಹೊಟ್ಟೆಯಲ್ಲಿ ಕುಮಾರನು ಇಲ್ಲ. ನೀವು ಕೊಟ್ಟ ಮಾತನ್ನು ಮರೆಯಬೇಡಿ" ಎಂದು ಹೇಳಲು, ಶ್ರೀಗುರುವು ನಗುತ್ತಾ, "ಹೇ ಪ್ರಾಜ್ಞೆ, ಸಂಶಯ ಪಡಬೇಡ. ನಿನಗೆ ಪುತ್ರನಾಗುತ್ತಾನೆ" ಎಂದು ಹೇಳಿ, ಆ ಕನ್ಯೆಯನ್ನು ತೆಗೆದು ಕೊಂಡು ನಸು ನಗುತ್ತಾ ಆ ಕನ್ಯೆಯ ಭಾವಿ ಲಕ್ಷಣಗಳನ್ನು ಅಲ್ಲಿದ್ದವರಿಗೆ ಹೇಳಿದರು. "ಈಕೆಗೆ ಶತಾಯುಗಳಾದ ಪುತ್ರರು, ಪೌತ್ರರು ಆಗಿ ಶುಭವಾಗಿರುತ್ತಾರೆ. ಈಕೆ ಪೂರ್ಣ ಸೌಭಾಗ್ಯವತಿಯಾಗಿರುತ್ತಾಳೆ. ಈಕೆಯ ಗಂಡ ಚತುರ್ವೇದ ಪರಾಯಣನಾಗಿ ಜ್ಞಾನಿಯಾಗಿರುತ್ತಾನೆ. ಈಕೆ ಕುಲದಲ್ಲಿ ಅಷ್ಟೈಷ್ವರ್ಯಗಳನ್ನೂ ಹೊಂದಿ ವೃದ್ಧಿಯಾಗುತ್ತಾಳೆ. ಪತಿವ್ರತೆ, ಧರ್ಮರತಿ, ಪುಣ್ಯಶೀಲಳೂ ಆಗುತ್ತಾಳೆ. ದಕ್ಷಿಣದೇಶದ ರಾಜನೊಬ್ಬನು ಈಕೆಯ ದರ್ಶನಕ್ಕೆ ಬರುತ್ತಾನೆ. ಹೇ ದಂಪತಿಗಳಿರಾ, ನಿಮಗೆ ಪುತ್ರನು ತ್ವರೆಯಾಗಿ ಹುಟ್ಟುತ್ತಾನೆ" ಎಂದು ತಿಳಿಸಿದರು. ಆ ವಿಪ್ರವನಿತೆ ಶ್ರೀಗುರುವಿಗೆ ನಮಸ್ಕರಿಸಿ, "ಶ್ರೀಗುರು, ನನಗೆ ಪುತ್ರನನ್ನು ದಯಪಾಲಿಸು" ಎಂದು ಪ್ರಾರ್ಥಿಸಿದಳು. ಶ್ರೀಗುರುವು, "ಅಮ್ಮಾ, ನಿನಗೆ ಎಂತಹ ಮಗ ಬೇಕು? ಯೋಗ್ಯನಾದ ಅಲ್ಪಾಯುವು ಬೇಕೆ ಅಥವ ಶತಾಯುವಾದ ಮೂರ್ಖನು ಬೇಕೆ? ಎಂತಹವನು ಬೇಕು ಹೇಳು" ಎನ್ನಲು, ಅವಳು, "ಹೇ ಭಗವಾನ್, ನನ್ನ ಮಗ ವಿದ್ವಾಂಸ, ಯೋಗ್ಯನಾಗಿ ಐದು ಪುತ್ರರಿಗೆ ತಂದೆಯಾಗುವವನು ಆಗಬೇಕು" ಎಂದು ಕೋರಲು, ಶ್ರೀಗುರುವು ಹಾಗೇ ಆಗಲೆಂದು ನುಡಿದರು. ಆ ದಂಪತಿಗಳು ಸಂತೋಷದಿಂದ ಶ್ರೀಗುರುವನ್ನು ಸ್ತುತಿಸಿ ಮನೆಗೆ ಹೋದರು.

ಕಾಲಾನಂತರದಲ್ಲಿ ಅವಳಿಗೆ ಮಗನು ಹುಟ್ಟಿದನು. ಅವನು ವೇದಶಾಸ್ತ್ರ ಪರಾಯಣನಾಗಿ, ಐದು ಪುತ್ರರಿಗೆ ಜನಕನಾಗಿ, ಶ್ರೀಗುರುವಿನ ಅನುಗ್ರಹವನ್ನು ಪಡೆದನು. ಶ್ರೀಗುರುವು ಹೇಳಿದ ರೀತಿಯಲ್ಲಿ ಕನ್ಯೆಯೂ ಲಕ್ಷಣವತಿಯಾಗಿ, ಸರಸ್ವತಿ ಎಂದು ಪ್ರಸಿದ್ಧಿಯಾದಳು. ಆಕೆಯ ಗಂಡ ದೀಕ್ಷಿತನೂ ನಾಲ್ಕು ರಾಷ್ಟ್ರಗಳಲ್ಲಿ ಶ್ರೀಗುರುವಿನ ಅನುಗ್ರಹದಿಂದ ಪ್ರಸಿದ್ಧಿ ಪಡೆದನು. 

ನಾಮಧಾರಕ, ಹೀಗೆ ಅರವತ್ತು ವರ್ಷಗಳ ಬಂಜೆಗೆ ಮಗಳು, ಮಗ ಹುಟ್ಟಿದರು. ಶಿಷ್ಯ, ಗುರುವಿನ ಕೃಪೆ ಅಂತಹುದು. ಮನಸ್ಸಿನಲ್ಲಿ ಧೃಢನಿಶ್ಚಯವಿರುವವರಿಗೆ ಸಿದ್ಧಿ ಲಭಿಸುವುದು. ಆದ್ದರಿಂದ ಶ್ರೀಗುರುವನ್ನು ಸೇವಿಸಬೇಕು. ಶ್ರೀಗುರುವಿನ ಚರಿತ್ರೆಯು ಲೋಕಾಭೀಷ್ಟವನ್ನು ಕೊಡುವುದು. ಆದ್ದರಿಂದ ಶ್ರೀಗುರುವಿನ ಸೇವೆ ಮಾಡಬೇಕು" ಎಂದು ಸಿದ್ಧಮುನಿಯು ಬೋಧಿಸಿದರು. 

ಇಲ್ಲಿಗೆ ಮುವ್ವತ್ತೊಂಭತ್ತನೆಯ ಅಧ್ಯಾಯ ಮುಗಿಯಿತು. 


||ಶ್ರೀಗುರುಚರಿತ್ರೆ - ಮುವ್ವತ್ತೆಂಟನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ನಾಮಧಾರಕ ಸಿದ್ಧಮುನಿಗೆ, "ಸ್ವಾಮಿ, ಇನ್ನೂ ವಿಸ್ತಾರವಾಗಿ ಗುರುಕಥಾಮೃತವನ್ನು ಆಸ್ವಾದನ ಮಾಡುವಂತೆ ಮಾಡಿ. ಶ್ರೀಗುರು ಮಾಹಾತ್ಮ್ಯೆಯನ್ನು ಕೇಳುವುದರಿಂದ ನನ್ನ ಮನಸ್ಸು ಶಾಂತಿಗೊಂಡಿದೆ" ಎಂದು ಕೇಳಲು, ಸಿದ್ಧಮುನಿಯು, "ನಿನ್ನ ನಿಮಿತ್ತದಿಂದ ನನಗೂ ಉತ್ತಮವಾದ ಲಾಭ ಕೈಗೂಡಿತು. ಆದ್ದರಿಂದ ಹೇಳುತ್ತೇನೆ. ಕೇಳು. ಗಂಧರ್ವನಗರದಲ್ಲಿ ಭಕ್ತರು ಶ್ರೀಗುರುವಿನ ಪ್ರೀತಿಗಾಗಿ ಬ್ರಾಹ್ಮಣರಿಗೆ ಸಮಾರಾಧನೆ ನಡೆಸುತ್ತಿದ್ದರು. ಬ್ರಾಹ್ಮಣರು ಅಲ್ಲಿ ಹಾಗೆ ಊಟಮಾಡದೇ ಇದ್ದ ದಿವಸವೇ ಇರುತ್ತಿರಲಿಲ್ಲ. ಹೀಗಿರಲು ಒಂದು ದಿನ ಬಡವನಾದ ಬ್ರಾಹ್ಮಣನೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಭಾಸ್ಕರ. ಅವನೊಬ್ಬ ದೀನನಾದ ಭಕ್ತ. ಕಾಶ್ಯಪ ಗೋತ್ರದವನು. ಶ್ರೀಗುರು ದರ್ಶನಕ್ಕಾಗಿ ಆ ದರಿದ್ರ ವಿಪ್ರ ಬಂದು ಭಕ್ತಿಪೂರ್ವಕವಾಗಿ ಶ್ರೀಗುರುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಶ್ರೀಗುರುವಿಗೆ ಭಿಕ್ಷೆ ಕೊಡಬೇಕೆಂಬ ಸಂಕಲ್ಪದಿಂದ ಅವನು ಬಂದಿದ್ದನು. ಆವನು ತಂದಿದ್ದ ಪದಾರ್ಥಗಳು ಮೂರು ಜನರ ಊಟಕ್ಕೆ ಮಾತ್ರ ಸಾಕಾಗುವಷ್ಟಿತ್ತು. ಆ ದಿನವೂ ಶ್ರೀಗುರು ಪ್ರೀತಿಗೋಸ್ಕರ ಸಮಾರಾಧನೆ ನಡೆಯುತ್ತಿತ್ತು. ಅವನಿಗೂ ಊಟಕ್ಕೆ ಆಹ್ವಾನ ಬಂದಿದ್ದರಿಂದ, ತಾನು ತಂದಿದ್ದ ಪದಾರ್ಥಗಳನ್ನು ಮೂಟೆ ಕಟ್ಟಿ ಮಠದಲ್ಲಿ ಒಂದು ಮೂಲೆಯಲ್ಲಿಟ್ಟು, ಅವನು ಊಟ ಮಾಡಿ ಬರುವಷ್ಟರಲ್ಲಿ ಸಾಯಂಕಾಲವಾಗಿತ್ತು. ಸಂಧ್ಯಾದಿಗಳನ್ನು ಮುಗಿಸಿ ಭಾಸ್ಕರನು ಮೂಟೆಯನ್ನು ತಲೆ ಕೆಳಗಿಟ್ಟುಕೊಂಡು ಮಲಗಿದನು. ಎರಡನೆಯ ದಿನವೂ ಅವನು ಮತ್ತೆ ಊಟಕ್ಕೆ ಹೋದನು. ಹೀಗೆ ಪ್ರತಿ ದಿನವೂ ಊಟ ಮಾಡುತ್ತಿದ್ದ ಭಾಸ್ಕರನ್ನು ನೋಡಿ, "ಶ್ರೀಗುರುವಿಗೆ ಭಿಕ್ಷೆಕೊಡಲು ಬಂದ ನಿನ್ನ ಹತ್ತಿರ ಒಬ್ಬನಿಗೆ ಸಾಕಾಗುವಷ್ಟು ಕೂಡಾ ಇಲ್ಲ. ಶ್ರೀಗುರುವಿಗೆ ಅನೇಕ ಶಿಷ್ಯರಿದ್ದಾರೆ. ಸಮರಾಧನೆ ಮಾಡುತ್ತೇನೆ ಎಂದು ಹೇಳಲಾದರೂ ನಿನಗೆ ನಾಚಿಕೆ ಬೇಡವೇ? ಸ್ವಯಂಪಾಕ ಮಾಡಿ ನೀನು ನಮಗೆ ಭಿಕ್ಷೆ ಕೊಡು" ಎಂದು ಮಠದಲ್ಲಿನ ಬ್ರಾಹ್ಮಣರು ಅವನನ್ನು ಪರಿಹಾಸ ಮಾಡುತ್ತಿದ್ದರು. ಆ ಮಾತುಗಳನ್ನು ಕೇಳದವನ ಹಾಗೆ ಇದ್ದುಕೊಂಡು ಭಾಸ್ಕರನು ಮಠದಲ್ಲಿ ಮೂರು ತಿಂಗಳು ಇದ್ದನು. ಮೂರು ತಿಂಗಳಾದ ನಂತರ ಬ್ರಾಹ್ಮಣರು ಬಾಸ್ಕರನನ್ನು ಪರಿಹಾಸ ಮಾಡುತ್ತಿದ್ದಾರೆ ಎಂದು ಶ್ರೀಗುರುವಿಗೆ ತಿಳಿಯಿತು. ಶ್ರೀಗುರುವು ಭಾಸ್ಕರನನ್ನು ಕರೆದು ಕೃಪೆಯಿಂದ, "ಇಂದು ಸ್ವಯಂಪಾಕ ಮಾಡಿ ನನಗೆ ಭಿಕ್ಷೆ ಕೊಡು" ಎಂದು ಹೇಳಿದರು. ಅವರ ಮಾತಿನಿಂದ ಸಂತೋಷಗೊಂಡ ಭಾಸ್ಕರ ಶ್ರೀಗುರು ಪಾದಗಳಿಗೆ ಶಿರಸಾ ನಮಸ್ಕರಿಸಿ, ಮಾರುಕಟ್ಟೆಗೆ ಹೋಗಿ ತುಪ್ಪ, ತರಕಾರಿಗಳನ್ನು ತಂದು, ಸ್ನಾನ ಮಾಡಿ ಶುಚಿಯಾಗಿ ಅಡಿಗೆ ಮಾಡಲು ಆರಂಭಿಸಿದನು.

ಅಷ್ಟರಲ್ಲಿ ಶ್ರೀಗುರುವಿನ ಹತ್ತಿರಕ್ಕೆ ಮತ್ತೊಬ್ಬ ಭಕ್ತ ಬಂದು, "ಇಂದೇ ನಾನು ಆರಾಧನೆ ಆರಂಭಿಸ ಬೇಕೆಂದು ಕೊಂಡಿದ್ದೇನೆ. ಅಡಿಗೆ ಸಿದ್ಧವಾಗಿದೆ" ಎಂದು ಹೇಳಲು, ಶ್ರೀಗುರುವು, "ಇಂದು ಭಾಸ್ಕರನು ಕೊಡುತ್ತಾನೆ. ನಾಳೆ ನೀನು ಕೊಡ ಬಹುದು" ಎಂದರು. ಅದಕ್ಕೆ ಅಲ್ಲಿದ್ದ ಬ್ರಾಹ್ಮಣರು, "ಇಂದು ದಿನ ನಿತ್ಯದಂತೆ ಮೃಷ್ಟಾನ್ನ ಭೋಜನ ದೊರೆಯುವುದಿಲ್ಲ. ಏಕೆಂದರೆ ಇಂದು ಭಿಕ್ಷೆ ಕೊಡುವವನು ನಿರ್ಧನನು. ಆದ್ದರಿಂದ ನಾವು ನಮ್ಮ ಮನೆಗಳಿಗೆ ಹೋಗುತ್ತೇವೆ" ಎಂದರು. ಆ ಮಾತುಗಳನ್ನು ಕೇಳಿದ ಶ್ರೀಗುರುವು, "ನೀವು ಮನೆಗಳಿಗೆ ಹೋಗಬೇಡಿ. ನೀವೆಲ್ಲರೂ ಇಂದು ಸಕುಟುಂಬರಾಗಿ ಇಲ್ಲಿಯೇ ಊಟ ಮಾಡಬೇಕು" ಎಂದು ಹೇಳಲು, ಬ್ರಾಹ್ಮಣರು ಮಠದಲ್ಲಿರುವ ಸಾಮಗ್ರಿಗಳನ್ನು ಉಪಯೋಗಿಸಿ ಶ್ರೀಗುರುವು ಅಡಿಗೆಮಾಡಿಸಿ ನಮಗೆ ಊಟ ಕೊಡುತ್ತಾರೆ" ಎಂದುಕೊಂಡು ಎಲ್ಲರೂ ಸ್ನಾನಕ್ಕೆ ಹೋದರು. ಶ್ರೀಗುರುವು ಭಾಸ್ಕರನಿಗೆ, "ಬಹಳ ಜನಕ್ಕೆ ಆಹ್ವಾನ ಹೋಗಿದೆ. ತಕ್ಷಣವೆ ಹೋಗಿ ಶೀಘ್ರವಾಗಿ ಅಡಿಗೆ ತಯಾರು ಮಾಡು" ಎಂದರು. ಅವನು ‘ಹಾಗೇ ಆಗಲಿ’ ಎಂದು ಹೇಳಿ, ತಕ್ಷಣವೇ ಹೋಗಿ ಅಡಿಗೆಯನ್ನು ಸಿದ್ಧಪಡಿಸಿ ಬಂದು ‘ಅಡಿಗೆ ತಯಾರಾಗಿದೆ’ ಎಂದು ಶ್ರೀಗುರುವಿಗೆ ತಿಳಿಸಿದನು. ಶ್ರೀಗುರುವು ಹೋಗಿ ಬ್ರಾಹ್ಮಣರನ್ನು ಕರೆಯುವಂತೆ ಹೇಳಿದರು. ಭಾಸ್ಕರನು ಅವರು ಹೇಳಿದಂತೆ ನದಿಯ ಹತ್ತಿರ ಹೋಗಿ ಬ್ರಾಹ್ಮಣರನ್ನು, "ನಾನು ಅಡಿಗೆಯೆಲ್ಲ ಸಿದ್ಧಪಡಿಸಿದ್ದೇನೆ. ಸ್ವಾಮಿ ನಿಮ್ಮೆಲ್ಲರನ್ನು ತಕ್ಷಣವೇ ಬರಲು ಹೇಳಿದ್ದಾರೆ" ಎಂದು ಹೇಳಿದನು. ಅವರೆಲ್ಲರೂ, "ನಾವು ಬರುವುದಿಲ್ಲ. ನೀನು ಹೋಗು. ಶ್ರೀಗುರುವಿಗೆ ಭಿಕ್ಷೆ ಕೊಡು" ಎಂದು ಪ್ರತ್ಯುತ್ತರ ಕೊಟ್ಟರು. ಭಾಸ್ಕರನು ಹಿಂತಿರುಗಿ ಶ್ರೀಗುರುವಿಗೆ ಆ ವಿಷಯವನ್ನು ಬಿನ್ನವಿಸಿದನು. "ಈಗಲೇ ಆ ಬ್ರಾಹ್ಮಣರೊಡನೆಯೇ ಭುಜಿಸುತ್ತೇನೆ. ಬ್ರಾಹ್ಮಣರೊಡನೆ ನನಗೆ ಭಿಕ್ಷೆ ಕೊಡಲು ಸಮ್ಮತಿಸಿದರೇನೆ ನಾನು ಅಂಗೀಕರಿಸುವುದು. ಇಲ್ಲದಿದ್ದರೆ ನಿನ್ನ ಮನೆಗೆ ಬರುವುದಿಲ್ಲ" ಎಂದರು. "ಪ್ರಭು, ನಿಮ್ಮ ಆಜ್ಞೆಯನ್ನು ಶಿರಸಾ ವಹಿಸಿದ್ದೇನೆ. ಬ್ರಾಹ್ಮಣರೊಡನೆಯೇ ನಿಮಗೆ ಭಿಕ್ಷೆ ಕೊಡುತ್ತೇನೆ" ಎಂದು ಹೇಳಿ, ಭಾಸ್ಕರನು, ‘ಈ ಸ್ವಾಮಿ ಸಾಕ್ಷಾತ್ತು ಈಶ್ವರಾವತಾರವೇ! ತಮ್ಮ ಮಾತನ್ನು ತಾವೇ ಸತ್ಯ ಮಾಡುತ್ತಾರೆ’ ಎಂದು ತನ್ನೊಳಗೇ ಆಲೋಚಿಸಿದನು.

ಶ್ರೀಗುರುವು, "ನನ್ನ ಆಜ್ಞೆಯೆಂದು ಹೇಳಿ ಇಲ್ಲೇ ಊಟಮಾಡಲು ಎಲ್ಲರನ್ನೂ ತಕ್ಷಣವೇ ಕರೆದುಕೊಂಡು ಬಾ" ಎಂದು ಆಣತಿ ಕೊಟ್ಟರು. ಹಾಗೇ ಎಂದು ಆ ದ್ವಿಜನು ಓಡಿ ಹೋಗಿ ಎಲ್ಲರಿಗೂ ಗುರು ವಾಕ್ಯವನ್ನು ತಿಳಿಸಿದನು. ವಿಪ್ರರೆಲ್ಲರೂ ಗುರು ಸನ್ನಿಧಿಗೆ ಬಂದರು. ಶ್ರೀಗುರುವು, "ವಿಪ್ರರೇ, ಎಲೆಗಳನ್ನು ಹಾಕಿ. ನೀವೆಲ್ಲರೂ ಇಂದು ಸಕುಟುಂಬರಾಗಿ ಇಲ್ಲಿಯೇ ಊಟ ಮಾಡಬೇಕು. ನಾಲ್ಕು ಸಾವಿರ ಎಲೆಗಳನ್ನು ತ್ವರೆಯಾಗಿ ಹರಡಿ" ಎಂದರು. ಅಷ್ಟು ಹೇಳಿ ಅಲ್ಲಿಯೇ ನಿಂತಿದ್ದ ಭಾಸ್ಕರನನ್ನು ನೋಡಿ ಶ್ರೀಗುರುವು, "ಅಯ್ಯಾ, ನೀವೆಲ್ಲರೂ ಸೇರಿ ಇಲ್ಲಿಗೆ ಬಂದು ಊಟ ಮಾಡಿ. ಸಕುಟುಂಬರಾಗಿ ಬನ್ನಿ ಎಂದು ದ್ವಿಜರೆಲ್ಲರನ್ನೂ ಪ್ರಾರ್ಥಿಸು" ಎಂದು ಅಜ್ಞಾಪಿಸಲು, ಭಾಸ್ಕರನು ಅವರು ಹೇಳಿದ ಹಾಗೆ ವಿಪ್ರರೆಲ್ಲರನ್ನೂ ಸಕುಟುಂಬರಾಗಿ ಬರುವಂತೆ ಆಹ್ವಾನಿಸಿದನು. ಅವರೆಲ್ಲರೂ ನಗುತ್ತಾ, "ಅಯ್ಯಾ ಬ್ರಾಹ್ಮಣ, ನೀನು ಹೀಗೆ ಕರೆಯುವುದಕ್ಕೆ ಏಕೆ ನಾಚಿಕೆ ಪಡುವುದಿಲ್ಲ?" ಎಂದರು. ಅವರಲ್ಲಿ ವೃದ್ಧರು ಮಾತ್ರ, "ಈ ದ್ವಿಜನನ್ನು ನಿಂದಿಸಬಾರದು. ಇವನು ಶ್ರೀಗುರುವು ಹೇಳಿದ ಮಾತುಗಳನ್ನೇ ಮತ್ತೆ ಹೇಳುತ್ತಿದ್ದಾನೆ. ಅದರಲ್ಲಿ ದೋಷವೇನಿಲ್ಲ" ಎಂದರು. ಆ ನಂತರ ಎಲ್ಲರೂ ಸೇರಿ ಎಲೆಗಳನ್ನು ಹಾಕಿದರು. ಭಾಸ್ಕರನು ಶ್ರೀಗುರುವಿಗೆ ಉಪಚಾರಗಳನ್ನು ಮಾಡಿ ಪೂಜಿಸಿದನು. ಭಕ್ತಿಪೂರ್ವಕವಾಗಿ ಅರ್ಚನೆ ಮಾಡಿ ನೀರಾಜನವನ್ನು ಕೊಟ್ಟನು.

ಆಗ ಶ್ರಿಗುರುವು ಭಾಸ್ಕರನಿಗೆ, "ತ್ವರೆಯಾಗಿ ಎಲೆಗಳಮೇಲೆ ನೀರು ಚೆಲ್ಲಿ ಸಿದ್ಧಮಾಡು. ಮಾಡಿರುವ ಅಡಿಗೆಯನ್ನು ನನ್ನ ಹತ್ತಿರಕ್ಕೆ ತೆಗೆದುಕೊಂಡು ಬಾ" ಎಂದು ಹೇಳಿದರು. ಅವನು ಮಾಡಿದ್ದ ಅಡಿಗೆಯನ್ನು ತಂದು ಶ್ರೀಗುರುವಿನ ಮುಂದೆ ಇಟ್ಟನು. ಒಂದು ವಸ್ತ್ರವನ್ನು ಕೊಟ್ಟು ಶ್ರೀಗುರುವು, "ಅಯ್ಯಾ ಭಾಸ್ಕರ, ಈ ನನ್ನ ವಸ್ತ್ರದಿಂದ ಅಡಿಗೆಯೆಲ್ಲವನ್ನೂ ಮುಚ್ಚು" ಎಂದು ಆಜ್ಞಾಪಿಸಿದರು. ಅವನು ಹಾಗೇ ಮುಚ್ಚಿಟ್ಟನು. ಶ್ರೀಗುರುವು ಕಮಂಡಲದಿಂದ ನೀರು ತೆಗೆದುಕೊಂಡು ಮಂತ್ರಿಸಿ ಅದರ ಮೇಲೆ ಪ್ರೋಕ್ಷಿಸಿದರು. ನಂತರ ಶ್ರೀಗುರುವು ಭಾಸ್ಕರನನ್ನು ಕರೆದು, "ಬೇರೊಂದು ಪಾತ್ರೆಯಲ್ಲಿ, ಈ ಮುಚ್ಚಿಟ್ಟಿರುವ ಅನ್ನವನ್ನು ತೆಗೆದುಕೊಂಡು ತ್ವರೆಯಾಗಿ ಬಡಿಸು. ಹಾಗೆಯೇ ಕುಂಡದಲ್ಲಿರುವ ತುಪ್ಪವನ್ನೂ ಕೂಡಾ ಇನ್ನೊಂದು ಪಾತ್ರೆಯಲ್ಲಿ ತೆಗೆದುಕೊಂಡು ದ್ವಿಜರಿಗೆಲ್ಲ ಇಷ್ಟ ಬಂದ ಹಾಗೆ ಬಡಿಸು" ಎಂದು ಆದೇಶ ಕೊಟ್ಟರು. ಭಾಸ್ಕರನು ಅನೇಕ ಪಾತ್ರೆಗಳಲ್ಲಿ ಬಡಿಸಿದನು. ಆ ಮಹದಾಶ್ಚರ್ಯವನ್ನು ಕಂಡ ಎಲ್ಲರೂ ವಿಸ್ಮಿತರಾದರು. ಶ್ರೀಗುರುವು ಇತರರನ್ನೂ ಬಡಿಸಿರಿ ಎಂದು ಆದೇಶ ಕೊಟ್ಟರು. ಬಹಳ ಜನ ಬ್ರಾಹ್ಮಣರು ಎದ್ದು ಬಡಿಸಿದರು. ಅನೇಕ ಪಾತ್ರೆಗಳನ್ನು ಅನ್ನದಿಂದ ತುಂಬಿ ಅವರು ಮತ್ತೆ ಮತ್ತೆ ಬಡಿಸಿದರು. ಹಾಗೆಯೇ ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ತೆಗೆದುಕೊಂಡು ಶ್ರೀಗುರುವಿನ ಪಾತ್ರೆಯಲ್ಲೂ, ಎಲ್ಲ ಪಂಕ್ತಿಗಳಲ್ಲೂ ಬಡಿಸಿದರು. ಆಗ ಅವರೆಲ್ಲರೂ ಶ್ರೀಗುರುವಿನೊಡನೆ ಕೂಡಿ ಊಟ ಮಾಡಲಾರಂಭಿಸಿದರು.

ಭಾಸ್ಕರನು ಬ್ರಾಹ್ಮಣರಿಗೆ, "ಬೇಕಾದ್ದನ್ನು ಕೇಳಿ. ಅಲಸಿಹೋಗಿದ್ದೀರಿ. ಕ್ಷಮಿಸಿ. ತೃಪ್ತಿಯಾಗುವವರೆಗೂ ಸ್ವಸ್ಥ ಮನಸ್ಕರಾಗಿ ಊಟಮಾಡಿ" ಎಂದು ಪ್ರಾರ್ಥಿಸಿ, ತಾನೇ ತುಪ್ಪ ಬಡಿಸಿದನು. ತಿಂದ ಹಾಗೆಲ್ಲಾ, ಭೋಕ್ತರ ಇಷ್ಟದಂತೆ ಭಕ್ಷ್ಯ, ಭೋಜ್ಯ, ಪಲ್ಯಗಳು, ಪರಮಾನ್ನ, ತುಪ್ಪ, ಮೊಸರು ಮುಂತಾದುವುಗಳನ್ನು ಭಾಸ್ಕರನು ಬಡಿಸಿದನು. ದ್ವಿಜರೆಲ್ಲರೂ ತೃಪ್ತಿ ಹೊಂದಿದರು. ನಂತರ ಅವರು ಆಚಮನ ಮಾಡಿ ಅತ್ಯಾಶ್ಚರ್ಯಪಟ್ಟರು. ಭಾಸ್ಕರನು ಅವರೆಲ್ಲರಿಗೂ ತಾಂಬೂಲವನ್ನು ಕೊಟ್ಟನು. ನಂತರ ಶ್ರೀಗುರುವು ಭಾಸ್ಕರನಿಗೆ, "ಅಯ್ಯಾ, ಮಿಕ್ಕ ಸ್ತ್ರೀಯರನ್ನೂ ಮಕ್ಕಳನ್ನು ಊಟ ಮಾಡಲು ಬರಹೇಳು" ಎಂದರು. ಹಾಗೆ ವಿಪ್ರ ಕುಲದವರೆಲ್ಲರೂ ಬಂದು ಮಠದಲ್ಲಿ ಅಮೃತವನ್ನೇ ಊಟ ಮಾಡಿದರು. ಆ ನಂತರ ಶ್ರೀಗುರುವು ಗ್ರಾಮಸ್ಥರನ್ನು, ಶೂದ್ರರನ್ನು ಕೂಡಾ ಊಟಕ್ಕೆ ಕರೆಸಿದರು. ಕರೆದವರೆಲ್ಲರೂ ಬಂದು ಊಟ ಮಾಡಿದರು. ಶ್ರೀಗುರುವು ಮಿಕ್ಕವರು ಯಾರಿದ್ದಾರೆ ಎಂದು ಕೇಳಲು, "ಸ್ವಾಮಿ ಹೀನ ಜಾತಿಯವರು ಮಾತ್ರ ಇದ್ದಾರೆ" ಎಂದು ಹೇಳಿದರು. "ಅವರನ್ನೂ ಕೂಡಾ ಕರೆದು ಅವರಿಗೆ ಬೇಕಾದಷ್ಟು ಅನ್ನವನ್ನು ನೀಡಬೇಕಾದ್ದೇ! ಯಾರು ಎಷ್ಟು ಕೇಳುತ್ತಾರೋ ಅಷ್ಟು ಅನ್ನವನ್ನು ಅವರಿಗೆ ಕೊಡಿ. ಅವರ ಸ್ತ್ರೀಬಾಲರನ್ನೂ ಕೂಡಾ ಕರೆದು ಅನ್ನವನ್ನು ನೀಡಿ" ಎಂದು ಶ್ರೀಗುರುವು ಆಜ್ಞಾಪಿಸಲು ಭಾಸ್ಕರನು ಅವರನ್ನೂ ಕರೆದು ಕೇಳಿದಷ್ಟು ಅನ್ನವನ್ನು ಅವರಿಗೂ ಕೊಟ್ಟನು. ಅವರೆಲ್ಲರೂ ತೃಪ್ತಿಪಟ್ತರು. ಹಸಿದು ಕೊಂಡಿದ್ದವರು ಯಾರೂ ಇರಲಿಲ್ಲ. ಆ ನಂತರದಲ್ಲಿ ಶ್ರೀಗುರುವು ಭಾಸ್ಕರನಿಗೆ, "ಅಯ್ಯಾ ಬ್ರಾಹ್ಮಣ, ಗ್ರಾಮದಲ್ಲಿ ಎಲ್ಲ ವೀಧಿಗಳಿಗೂ ಹೋಗಿ ಹಸಿದುಕೊಂಡಿರುವವರು ಯಾರಾದರೂ ಇದ್ದರೆ ಬಂದು ಊಟ ಮಾಡಿಕೊಂಡು ಹೋಗಿ. ಇದು ಶ್ರೀಗುರುವಿನ ಆಜ್ಞೆ, ಎಂದು ಘಟ್ಟಿಯಾಗಿ ಘೋಷಣೆ ಮಾಡು" ಎಂದು ಆದೇಶಿಸಿದರು. ಭಾಸ್ಕರನು ಅದೇ ರೀತಿ ಮಾಡಿದನು. ಯಾವ ಪ್ರಾಣಿಯೂ ಅಂದು ಉಪವಾಸ ಮಾಡಲಿಲ್ಲ. ಎಲ್ಲರೂ ಕೋರಿದಷ್ಟು ತಿಂದವರಾದರು. ಆಗ ಶ್ರೀಗುರುವು, "ಭಾಸ್ಕರ ಇನ್ನು ನೀನು ಊಟ ಮಾಡಯ್ಯಾ" ಎಂದರು. ಅವನೂ ಊಟ ಮಾಡಿದನು. ಅದಾದಮೇಲೆ ಶ್ರೀಗುರುವು, "ಭಾಸ್ಕರ, ಇಲ್ಲಿ ಕೇಳು. ಇನ್ನೂ ಅನ್ನವೇನಾದರೂ ಮಿಕ್ಕಿದೆಯೇ?" ಎಂದು ಕೇಳಿದರು. ಅವನು ಮಿಕ್ಕ ಅನ್ನವೆಷ್ಟೊ ತೋರಿಸಿದನು. "ಈ ಅವಶಿಷ್ಟಾನ್ನವನ್ನೆಲ್ಲಾ ನೀರಿನಲ್ಲಿ ಜಲಪ್ರಾಣಿಗಳಿಗೆ ಕೊಡು. ಅವೂ ಸ್ವೇಚ್ಛೆಯಾಗಿ ತಿಂದು ತೃಪ್ತಿ ಹೊಂದುತ್ತವೆ" ಎಂದು ಆಣತಿ ಕೊಟ್ಟ ಶ್ರೀಗುರುವಿನ ಆಜ್ಞೆಯಂತೆ ಭಾಸ್ಕರನು ಮಿಕ್ಕ ಅನ್ನವನ್ನೆಲ್ಲಾ ನೀರಿನಲ್ಲಿ ಹಾಕಿದನು. ಅಂದು ಊಟ ಮಾಡಿದ ಒಟ್ಟು ಜನರ ಸಂಖ್ಯೆ ನಾಲ್ಕು ಸಾವಿರವಾಗಿತ್ತು ಎಂದು ತಿಳಿದು ಜನರೆಲ್ಲರೂ ಆಶ್ಚರ್ಯ ಪಟ್ಟರು. ಬಹಳ ಕಡಮೆ ಅನ್ನದಿಂದ ಅಪರಿಮಿತವಾದ ಜನ ಊಟ ಮಾಡಿದರು ಎನ್ನುವುದು ಎಷ್ಟು ಆಶ್ಚರ್ಯಕರವಾದದ್ದು! ಭಾಸ್ಕರನನ್ನು, ‘ಪುತ್ರಪೌತ್ರಾದಿಗಳು, ಸಿರಿಸಂಪದದಿಂದ ಕೂಡಿ ವರ್ಧಮಾನನಾಗು’ ಎಂದು ಶ್ರೀಗುರುವು ಆಶೀರ್ವದಿಸಿದರು. ಆ ಆಶೀರ್ವಚನಗಳನ್ನು ಕೇಳಿ ಅಲ್ಲಿದ್ದವರೆಲ್ಲರೂ ಆಶ್ಚರ್ಯಪಟ್ಟರು. ‘ಶ್ರೀಗುರುವು ಅನ್ನಪೂರ್ಣೆಯನ್ನು ಸ್ಮರಿಸಿದರೇ?’ ಎಂದು ಮತ್ತೆ ಕೆಲವರು ಹೇಳಿದರು. ‘ಇಲ್ಲಿ ಶ್ರೀ ನೃಸಿಂಹ ಸರಸ್ವತಿ ಮಾನವನಾಗಿ ಅವತರಿಸಿದರು’ ಎಂದು ಮತ್ತೆ ಕೆಲವರು ಹೇಳಿದರು. ಹಿಂದೆ ದೂರ್ವಾಸ ಮಹರ್ಷಿ ಋಷಿಗಳೊಡನೆ ಪಾಂಡವರ ಮನೆಗೆ ಹೋದನಂತೆ. ಆತಿಥ್ಯ ಕೊಡಲು ಅವಕಾಶವಿಲ್ಲವೆನ್ನುವ ಭಯದಿಂದ ದ್ರೌಪದಿ ಪ್ರಾರ್ಥಿಸಲು ಶ್ರೀ ಕೃಷ್ಣನು ಪ್ರತ್ಯಕ್ಷನಾಗಿ ಅನ್ನವನ್ನು ಸಂಪೂರ್ಣವಾಗಿ ಸೃಷ್ಟಿಸಿದನೆಂದು ಕೇಳಿದ್ದೇನೆ. ಈಗ ಪ್ರತ್ಯಕ್ಷವಾಗಿ ನೋಡಿದೆವು. ತ್ರಿಮೂರ್ತ್ಯವತಾರವಾದ ಈ ಪುರುಷನು ಕೇವಲ ಮಾನವ ಮಾತ್ರನಲ್ಲ. ಈ ಗುರುವಿನ ಮಹಿಮೆ ಯಾರಿಗೂ ತಿಳಿಯಲಾಗುವುದಿಲ್ಲ. ಈತನು ಮಾನವ ಮಾತ್ರನು ಎಂದು ಹೇಳುವವನು ಅಧೋಗತಿಯನ್ನು ಹೊಂದುತ್ತಾನೆ. ಪ್ರಾಣ ಹೋದವನು ಜೀವಂತನಾದನು. ಒಣಗಿಹೋದ ಕಟ್ಟಿಗೆ ಚಿಗುರಿತು. ತ್ರಿವಿಕ್ರಮನಿಗೆ ವಿಶ್ವರೂಪವನ್ನೇ ಈ ಶ್ರೀಗುರುವು ದರ್ಶಿಸುವಂತೆ ಮಾಡಿದನು. ಗೊಡ್ಡೆಮ್ಮೆ ಹಾಲು ಕರೆಯಿತು. ನೀಚನ ಮುಖವನ್ನು ಅಭಿಮಂತ್ರಿಸಲು ವೇದಗಳು ಉಚ್ಚರಿಸಲ್ಪಟ್ಟವು. ಕುಷ್ಠುರೋಗ ಪೀಡಿತನಾದ ಬ್ರಾಹ್ಮಣ ಬಂದಾಗ ಶ್ರೀಗುರುವಿನ ದೃಷ್ಟಿ ತಾಕುತ್ತಿದಂತೆಯೇ ಅವನು ರೋಗ ಹೋಗಿ ನಿರ್ಮಲನಾದನು. ಭಕ್ತನಾದ ನೇಯ್ಗೆಯವನನ್ನು ಒಂದು ಕ್ಷಣದಲ್ಲಿ ಶ್ರೀಗಿರಿಗೆ ಕರೆದುಕೊಂಡು ಹೋದರು. ಅರೆಕ್ಷಣದಲ್ಲಿ ಭಕ್ತನಿಗೆ ಕಾಶಿಕ್ಷೇತ್ರ ದರ್ಶನ ಮಾಡಿಸಿದರು. ಹಾಗೆ ಮಾಡಬಲ್ಲ ಸಮರ್ಥನು ಶ್ರಿಗುರುವೊಬ್ಬನೇ! ಶ್ರೀಗುರುವಿಗೆ ಸಮಾನರಾದವರು ಯಾರೂ ಇಲ್ಲ. ದೇವತೆಗಳನ್ನು ಆರಾಧಿಸಿದರೆ ಅವರು ತ್ವರೆಯಾಗಿ ಫಲವನ್ನು ನೀಡುವುದಿಲ್ಲ. ಶ್ರೀಗುರುನಾಥನು ತನ್ನ ದೃಷ್ಟಿಯಿಂದಲೇ ತ್ವರೆಯಾಗಿ ಸರ್ವಕರ್ಮಗಳೂ ಸಿದ್ಧಿಸುವಂತೆ ಮಾಡುವನು. ಹೀಗೆಲ್ಲಾ ಹೇಳಿಕೊಳ್ಳುತ್ತಾ ಎಲ್ಲರೂ ಕುತೂಹಲಿಗಳಾಗಿ ನಿಂತಿದ್ದರು. ಹಾಗೆ ಶ್ರೀಗುರುವಿನ ಚರಿತ್ರೆ ಮೂರುಲೋಕಗಳಲ್ಲೂ ಖ್ಯಾತಿಗೆ ಬಂತು. ನಾಮಧಾರಕ, ಆದರಿಂದಲೇ ಆ ಮಹಾತ್ಮನಿಗೆ ಬಹಳಜನ ಶಿಷ್ಯರು ಇದ್ದಾರೆ. ಅವರೆಲ್ಲರೂ ವಿವಿಧ ದೇಶಗಳಿಂದ ಬಂದು ಶ್ರೀಗುರುವಿನ ಸೇವೆ ಮಾಡುತ್ತಿದ್ದಾರೆ. ಅಂತಃಕರಣ ಧೃಢವಾಗಿರುವವನಿಗೆ ಶ್ರೀಗುರುವು ಪ್ರಸನ್ನನಾಗುತ್ತಾನೆ.

ಶ್ರೀಗುರುವು ಕಲಿಯುಗದಲ್ಲೂ ಕೂಡಾ ತ್ವರೆಯಾಗಿ ಅಭೀಷ್ಟ ಸಿದ್ಧಿಯಾಗುವಂತೆ ಮಾಡುತ್ತಾನೆ. ಆದ್ದರಿಂದ ಆಪ್ತಬಂಧುವಾದ ಶ್ರೀಗುರುವಿನ ಸೇವೆ ಸತತವಾಗಿ ಮಾಡು" ಎಂದು ಸಿದ್ಧಮುನಿ ಬೋಧಿಸಿದರು. 

ಇಲ್ಲಿಗೆ ಮುವ್ವತ್ತೆಂಟನೆಯ ಅಧ್ಯಾಯ ಮುಗಿಯಿತು.

Friday, September 6, 2013

||ಶ್ರೀಗುರುಚರಿತ್ರೆ - ಮುವ್ವತ್ತೇಳನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| ||ಶ್ರೀಗುರುಭ್ಯೋನಮಃ||

"ಹೇ ಸಿದ್ಧಯೋಗೀಶ್ವರ, ಶ್ರೀಗುರುವು ಬ್ರಾಹ್ಮಣನಿಗೆ ಉಪದೇಶ ಮಾಡಿದ ನಂತರ ನಡೆದ ಕಥೆಯನ್ನು ಹೇಳಿ" ಎಂದು ನಾಮಧಾರಕನು ಸಿದ್ಧಮುನಿಯನ್ನು ಪ್ರಾರ್ಥಿಸಲು, ಸಿದ್ಧಯೋಗಿ ಹೇಳಿದರು. "ಶ್ರೀಗುರುವು ಸಾಕ್ಷಾತ್ತು ನಾರಾಯಣನೇ! ಆ ಸ್ವಾಮಿಯು ಸರ್ವಜ್ಞನು. ಜ್ಞಾನದಾನ ಮಾಡಿ ಹೀನನ ಮುಖದಿಂದ ಅವರು ವೇದಗಳನ್ನು ಹೇಳಿಸಲಿಲ್ಲವೇ? ಶ್ರೀಗುರುವು ಈಶ್ವರನೇ! ಆತನೇ ಕಲ್ಪವೃಕ್ಷವು. ಶ್ರೀಗುರುವು ಆ ಬ್ರಾಹ್ಮಣನಿಗೆ ಧರ್ಮೋಪದೇಶ ಮಾಡಿ ಅವನಿಗೆ ಹೀಗೆ ಹೇಳಿದರು. ‘ಗೃಹಸ್ಥನು ತನ್ನ ಮನೆಯಲ್ಲಿ ಅರಣಿ ಮುಂತಾದ ಸಾಧನಾ ಸಾಮಗ್ರಿಗಳನ್ನು ಕಾಪಾಡಿಕೊಂಡಿರಬೇಕು. ಸಾಲಗ್ರಾಮ, ತುಪ್ಪ, ಶ್ರೀಚಂದನ, ಎಳ್ಳು, ಕೃಷ್ಣಾಜಿನ ಮುಂತಾದುವು ಮನೆಯಲ್ಲಿ ಇರುವವನನ್ನು ದುರಿತಗಳು ಭಾಧಿಸುವುದೇ ಇಲ್ಲ. ಶುಕ್ಲಪಕ್ಷದಲ್ಲಿ ಸಾರಸ ಪಕ್ಷಿಯನ್ನು ರಕ್ಷಿಸಬೇಕು. ಗೋವನ್ನು ಚೆನ್ನಾಗಿ ಬೆಳೆಸಬೇಕು. ಮನೆಯನ್ನು ಸಾರಿಸಿ, ರಂಗೋಲಿ ಇಟ್ಟಮೇಲೆಯೇ ಪ್ರತಿದಿನವೂ ದೇವತಾ ಪೂಜೆಯನ್ನು ಮಾಡಬೇಕು. ಚಿನ್ನ, ಬೆಳ್ಳಿ, ತಾಮ್ರ, ಮಣ್ಣಿನಲ್ಲಿ ಮಾಡಿದ ಪಾತ್ರೆಗಳಲ್ಲಿ ಯಾವುದಾದರೂ ಒಂದನ್ನು ಮನೆ ತೊಳೆ (ಸಾರಿಸು)ಯುವುದಕ್ಕೆ ಉಪಯೋಗಿಸಬಹುದು. ಕಂಚು ಪಾತ್ರೆ ಉಪಯೋಗಕ್ಕೆ ಬರುವುದಿಲ್ಲ. ಕುಮಾರಿಯರು, ಹೊಸಸೊಸೆ, ಶೂದ್ರರು ಮನೆ ಸಾರಿಸಬಾರದು. ಬಲಗೈಯಲ್ಲಿ ಸಾರಿಸಬಾರದು. ನೈರುತ್ಯ ಮೂಲೆಯಿಂದ ಆರಂಭಿಸಿ ಮನೆ ಸಾರಿಸಬೇಕು. ರಾತ್ರಿಯಲ್ಲಿ ಸಾರಿಸಬಾರದು. ಸಾರಿಸಲೇ ಬೇಕಾದ ಸಂದರ್ಭ ಬಂದರೆ ಭಸ್ಮದಿಂದ ಸಾರಿಸಬೇಕು. ರಾತ್ರಿಯ ಹೊತ್ತು ನೀರಿನಿಂದ ಸಾರಿಸಬಾರದು.

ದೇವರ ಮನೆಯನ್ನು ದಿನವೂ ರಂಗೋಲಿಗಳಿಂದ ಅಲಂಕರಿಸಬೇಕು. ಶುಭಾಸನದಲ್ಲಿ ಕುಳಿತು ದೇವರ ಪೂಜೆಯನ್ನು ಆರಂಭಿಸಬೇಕು. ಬ್ರಾಹ್ಮಣರು ಸಂಧ್ಯಾತ್ರಯವನ್ನು ಮಾಡಬೇ. ಭಕ್ತಿಯುಕ್ತವಾಗಿ ದೇವರ ಪೂಜೆಯನ್ನು ಬ್ರಾಹ್ಮಣನು ಮಾಡಬೇಕು. ತ್ರಿಕಾಲ ಪೂಜೆಯನ್ನು ಮಾದಲು ಶಕ್ತಿಯಿಲ್ಲದಿದ್ದರೆ ಪ್ರಾತಃಕಾಲದಲ್ಲಿ ಯಥಾವಿಧಿಯಾಗಿ ಪೂಜೆ ಮಾಡಬೇಕು. ಮಧ್ಯಾಹ್ನದಲ್ಲಿ ಗಂಧಾದಿಗಳಿಂದ ಪಂಚೋಪಚಾರ ಪೂಜೆ ಮಾಡಬೇಕು. ಸಾಯಂಕಾಲ ನೀರಾಜನ ಕೊಟ್ಟು ಮಂತ್ರಪುಷ್ಪವನ್ನು ನೀಡಬೇಕು. ದೇವರ ಪೂಜೆ ಮಾಡದವನು ಯಮಾಲಯಕ್ಕೆ ಹೋಗುವನು. ದ್ವಿಜ ಕುಲದಲ್ಲಿ ಜನಿಸಿ ಪೂಜೆ ಮಾಡದೆ ಊಟ ಮಾಡಿದರೆ ಯಮನಿಂದ ದಂಡಿಸಲ್ಪಡುತ್ತಾನೆ. ಪಂಚ ಮಹಾಯಜ್ಞಗಳನ್ನು ಮಾಡದವನೂ ಕೂಡಾ ಅದೇ ರೀತಿಯಲ್ಲಿ ದಂಡಿಸಲ್ಪಡುತ್ತಾನೆ.

ದೇವರ ಪೂಜೆಯಲ್ಲಿನ ಬೇಧ-ವಿಧಾನಗಳನ್ನು ಹೇಳುತ್ತೇನೆ. ಜಲಪೂಜೆಯಿಂದ ನಾರಾಯಣ, ಅಗ್ನಿಪೂಜೆಯಿಂದ ವಿಷ್ಣು ತೃಪ್ತಿಹೊಂದುತ್ತಾರೆ. ಮಾನಸ ಪೂಜೆಯೇ ಪ್ರಶಸ್ತವು. ಸೂರ್ಯನ ಪೂಜೆ ಶ್ರದ್ಧೆಯಿಂದ ಮಾಡುವುದರಿಂದ ಶ್ರೀಮನ್ನಾರಾಯಣನು ಸಾಕ್ಷಾತ್ತು ತೃಪ್ತಿಹೊಂದುತ್ತಾನೆ. ಸ್ಥಂಡಿಲದಲ್ಲಿ ಪ್ರತಿಮಾ ಪೂಜೆ ಸಾಮಾನ್ಯವು. ಬುದ್ಧಿವಂತನಾದ ಜ್ಞಾನಿ ಯಜ್ಞಪುರುಷನನ್ನು ಪೂಜಿಸಬೇಕು. ಯಜ್ಞಪೂಜೆ ಸರ್ವಮೋಕ್ಷಗಳನ್ನೂ ಕೊಡುವುದು. ಬ್ರಾಹ್ಮಣನು ಧೇನುವನ್ನು ಪೂಜಿಸಬೇಕು. ಶ್ರೀಗುರುವಿನ ಪೂಜೆಯನ್ನು ಭಕ್ತಿಯಿಂದ ಮಾಡಿದರೆ ತ್ರಿಮೂರ್ತಿಗಳೂ ಸಂತೋಷಗೊಳ್ಳುತ್ತಾರೆ. ಶ್ರೀಗುರುವೇ ತ್ರಿಮೂರ್ತಿ ಸ್ವರೂಪನು. ಶ್ರೀಗುರುವನ್ನು ಅರ್ಚಿಸುವುದರಿಂದ ಅಭೀಷ್ಟ ಸಿದ್ಧಿ, ಪುರುಷಾರ್ಥ ಪ್ರಾಪ್ತಿಯಾಗುತ್ತದೆ. ಕಲಿಯುಗದಲ್ಲಿ ಮಾನವರ ಅಂತಃಕರಣವು ಸ್ಥಿರವಾಗಿ ನಿಲ್ಲುವುದಿಲ್ಲ. ಆದ್ದರಿಂದ ಮನಸ್ಥೈರ್ಯಕ್ಕಾಗಿ ಶಾರ್ಙ್ಞಧರನು ಉಪಾಯವೊಂದನ್ನು ಏರ್ಪಡಿಸಿದ್ದಾನೆ. ಹೃಷೀಕೇಶನು ಸಾಲಗ್ರಾಮ ಅರ್ಚನೆಯನ್ನು ಪ್ರಕಟಗೊಳಿಸಿದನು. ಚಕ್ರಾಂಕಿತವಾಗಿ ದ್ವಾರವತಿಯಿಂದ ಉದ್ಭವಿಸಿದ ಸಾಲಗ್ರಾಮ ಜಲವನ್ನು ತೆಗೆದುಕೊಳ್ಳುವುದರಿಂದ ಪಾತಕಗಳು ಕ್ಷಯವಾಗುವುವು. ಶ್ರೀಗುರುವಿನ ಅನುಜ್ಞೆ ಪಡೆದು ಬ್ರಾಹ್ಮಣನು ಪ್ರತಿಮೆಯನ್ನು ಪೂಜಿಸಬೇಕು. ಸ್ತ್ರೀಯರಿಗೆ, ಶೂದ್ರರಿಗೆ ಶ್ರೀಗುರುವು ಪೌರಾಣಿಕವಾದ ಮಂತ್ರಗಳನ್ನು ಹೇಳುವರು. ಶ್ರೀಗುರುವಿನ ಆಜ್ಞೆಯಂತೆ ಕಲ್ಲು, ಕಟ್ಟಿಗೆಯ ತುಂಡು ಅರ್ಚಿಸಿದರೂ ಆ ಕಲ್ಲು, ಕಟ್ಟಿಗೆಗಳೇ ದೇವರಾಗಿ ಭಕ್ತಿಗೆ ಪ್ರಸನ್ನರಾಗುತ್ತಾನೆ. ಪೀಠದಲ್ಲಿ ಕೂತು, ಮೂರುಸಲ ಪ್ರಾಣಾಯಾಮ ಮಾಡಿ, "ಯೇಭ್ಯೋಮಾತಾ-----"ಎನ್ನುವ ಮಂತ್ರದಿಂದ ಮನುಷ್ಯ ಭಾವವನ್ನು ಬಿಟ್ಟು, ಆತ್ಮಭಾವದಿಂದ ಸಂಕಲ್ಪ ಮಾಡಿ, ತನ್ನನ್ನೂ, ಪೂಜಾದ್ರವ್ಯಗಳನ್ನೂ ಪ್ರಣವದಿಂದ ಪ್ರೋಕ್ಷಿಸಿ, ಪೂಜಾ ಸಂಕಲ್ಪ ಮಾಡಿ, ಅಂಗನ್ಯಾಸ ಮಾಡಿ, ಕಲಶಾರಾಧನೆ ಮಾಡಬೇಕು. ದೇವರಿಗೆ ಬಲಭಾಗದಲ್ಲಿ ಕಲಶ ಸ್ಥಾಪನೆ ಮಾಡಬೇಕು. ದೇವರಿಗೆ ಎಡ, ಬಲ ಭಾಗಗಳಲ್ಲಿ ಕ್ರಮವಾಗಿ ಶಂಖ, ಘಂಟೆಗಳನ್ನು ಇಟ್ಟು ಅರ್ಚಿಸಬೇಕು. ಮೊದಲು ನಿರ್ಮಾಲ್ಯವನ್ನು ವಿಸರ್ಜಿಸಿ, ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಒಗೆದು ಶುದ್ಧಮಾಡಿದ ವಸ್ತ್ರವನ್ನು ಹರಡಿ, ದೀಪವನ್ನು ಬೆಳಗಿಸಬೇಕು. ಶ್ರದ್ಧಾ ಭಕ್ತಿಗಳಿಂದ ಶ್ರೀಗುರುವಿಗೆ ನಮಸ್ಕಾರ ಮಾಡಿ, ಮನೋವಾಕ್ಕಾಯಗಳಿಂದ, ಆಗಮೋಕ್ತ ವಿಧಾನದಿಂದ ಮೊದಲು ಪೀಠ ಪೂಜೆಯನ್ನು ಮಾಡಬೇಕು. ನಂತರ ದ್ವಾರಪಾಲಕ ಪೂಜೆ ಮಾಡಿ, ಆತ್ಮನಲ್ಲಿ ಧ್ಯಾನ ಮಾಡಿ ಚಿತ್ಕಳೆಯನ್ನು ದೇವರೂಪವಾಗಿ ಭಾವಿಸಬೇಕು. ಪುರುಷಸೂಕ್ತದ ಮೊದಲ ಮಂತ್ರದಿಂದ ಆವಾಹನೆ ಮಾಡಬೇಕು. ಎರಡನೆಯ ಮಂತ್ರದಿಂದ ಆಸನ ಕೊಡಬೇಕು. ಮೂರನೆಯ ಮಂತ್ರದಿಂದ ಪಾದ್ಯವನ್ನು ಕೊಡಬೇಕು. ನಾಲ್ಕನೆಯ ಮಂತ್ರವನ್ನು ಉಚ್ಛರಿಸಿ, ತಗುನಾದ ವಿಧದಲ್ಲಿ ಅರ್ಘ್ಯವನ್ನು ಕೊಡಬೇಕು. ಐದನೆಯ ಮಂತ್ರದಿಂದ ಶುಚಿಯಾದ ಆಚಮನವನ್ನು ನೀಡಬೇಕು. ಆರನೆಯ ಮಂತ್ರದಿಂದ ಸ್ನಾನವು. ಸಾಧ್ಯವಾದರೆ ಪಂಚಾಮೃತಗಳಿಂದ ಸ್ನಾನ ಮಾಡಿಸಬೇಕು. ಅದಕ್ಕೆ ಐದು ಮಂತ್ರಗಳು ಬೇರೆಬೇರೆಯಾಗಿ ಹೇಳಬೇಕು. ಪುರುಷಸೂಕ್ತ, ರುದ್ರ(ನಮಕ) ಮತ್ತು ಇತರ ಮಂತ್ರಗಳಿಂದ ಘಂಟಾನಾದ ಮಾಡುತ್ತಾ ಭಕ್ತಿಯಿಂದ ಅಭಿಷೇಕವನ್ನು ಮಾಡಬೇಕು. ಸ್ನಾನಾನಂತರ ಆಚಮನ ಕೊಟ್ಟು ದೇವರನ್ನು ಪೀಠದಮೇಲೆ ಧೃಢವಾಗಿ ಇರುವಂತೆ ಇಡಬೇಕು.

ಪುರುಷಸೂಕ್ತದ ಏಳನೆಯ ಮಂತ್ರದಿಂದ ಎರಡು ವಸ್ತ್ರಗಳನ್ನು ದೇವರಿಗೆ ಸಮರ್ಪಿಸಬೇಕು. ಎಂಟನೆಯ ಮಂತ್ರದಿಂದ ಯಜ್ಞೋಪವೀತವನ್ನು ಅರ್ಪಿಸಿ, ಮತ್ತೆ ಆಚಮನ ಮಾಡಬೇಕು. ಒಂಭತ್ತನೆಯ ಮಂತ್ರದಿಂದ ಗಂಧ ಅಕ್ಷತೆಗಳನ್ನು ನೀಡಬೇಕು. ಹತ್ತನೆಯ ಮಂತ್ರದಿಂದ ನಾನಾವಿಧ ಪರಿಮಳ ಪುಷ್ಪಗಳನ್ನು ಅರ್ಪಿಸಬೇಕು. ಮುನಿಸಮ್ಮತವಾದ ಪುಷ್ಪಾರ್ಪಣ ವಿಧಾನವನ್ನು ಹೇಳುತ್ತೇನೆ. ಸ್ವಂತ ತೋಟದಲ್ಲಿ ಬೆಳೆದ ಹೂಗಳು ಉತ್ತಮವಾದವು. ಕೊಂಡು ತಂದ ಹೂಗಳು ಅಧಮವು. ಸಾಧ್ಯವೇ ಇಲ್ಲದಂತಹ ಸಮಯದಲ್ಲಿ ಕೊಂಡ ಹೂಗಳಲ್ಲಿ ಬಿಳಿಯ ಹೂಗಳನ್ನು ಸ್ವೀಕರಿಸಬಹುದು. ಅರಣ್ಯದಲ್ಲಿ ಬಿಡುವ ಹೂಗಳು ಮಧ್ಯಮವು. ಬಿಳಿಯ ಹೂಗಳು ಉತ್ತಮವಾದವು. ಕೆಂಪು ಹಳದಿ ಹೂಗಳು ಮಧ್ಯಮವು. ಕಪ್ಪುಬಣ್ಣದ ಹೂಗಳು ಅಧಮವು. ಉಪಯೋಗಿಸಿ ಬಿಟ್ಟ ಹೂಗಳು, ಹುಳು ತಿಂದಿರುವ ಹೂಗಳು, ರಂಧ್ರಗಳಿರುವ ಹೂಗಳು ನಿಂದ್ಯವು. ಉದುರಿಬಿದ್ದ ಹೂಗಳನ್ನು ದೇವರಿಗೆ ಅರ್ಪಿಸಬಾರದು. ಪದ್ಮಪತ್ರ, ತುಳಸಿಪತ್ರ, ಬಿಲ್ವಪತ್ರಗಳು ಹಳೆಯವು ಎಂಬುದಿಲ್ಲ. ಗಂಗಾಜಲದಂತೆ ಆ ಪತ್ರಗಳು ಹಳೆಯದಾದದರೂ ಸ್ವೀಕರಿಸಬಹುದಾದಂತಹವು. ಶತಪತ್ರ, ಪಗಡೆ, ಸಂಪಿಗೆ, ನಾಗಕೇಸರ, ಪಾಟಲ, ಮಲ್ಲಿಗೆ, ಜಾಜಿ, ಕಣಿಗಲೆ, ನೀರುದಾವರೆ, ಈ ಹೂಗಳು ಸರ್ವದೇವರಿಗೂ ಸಮರ್ಪಿಸಬಹುದಾದವು. ಪೂಜೆ ಮಾಡುವವನು ಎಕ್ಕ, ಗಿರಿಕರ್ಣಿಕೆಗಳನ್ನು ವಿಷ್ಣು ಪೂಜೆಯಲ್ಲಿ ವಿಸರ್ಜಿಸಬೇಕು. ಕೆಂಪು ಕಣಿಗಲೆ, ಎಕ್ಕ, ಉಮ್ಮತ್ತಿ, ಗಿರಿಕರ್ಣಿಕೆ, ಬೇಲ, ಕುಂಬಳದ ಹೂಗಳು, ಎಲ್ಲತರಹೆಯವೂ, ವರ್ಜ್ಯವು. ವಿಷ್ಣುವಿಗೆ ಎಕ್ಕದ ಹೂವನ್ನು ಸಮರ್ಪಿಸಿದರೆ ಕುಲನಾಶವು. ಉಮ್ಮತ್ತಿ ಹೂವು ಕೊಟ್ಟರೆ ಪ್ರಜ್ಞಾ ನಾಶ, ದಾರಿದ್ರ್ಯ ಉಂಟಾಗುವುವು. ಗಿರಿಕರ್ಣಿಕೆಯನ್ನು ಪೂಜಿಸಿದರೆ ಕುಲನಾಶವು. ಕಂಟಕಾರಿ ಪುಷ್ಪಗಳಿಂದ ಪೂಜಿಸಿದರೆ ಶೋಕ. ಬೆಟ್ಟಮಲ್ಲಿಗೆಯಿಂದ ಅರ್ಚನೆಮಾಡಿದರೆ ದುಃಖಪ್ರದವು. ಬೂರುಗದ ಹೂಗಳಿಂದ ಪೂಜೆ ಮಾಡಿದರೆ ವ್ಯಾಧಿಯುಂಟಾಗುವುದು. ಅದರಿಂದ ವಿಷ್ಣುವಿಗೆ ಸರಿಯಾಗಿ ಯೋಚಿಸಿ-ವಿಮರ್ಶಿಸಿ, ಪುಷ್ಪಗಳನ್ನು ಸಮರ್ಪಿಸಬೇಕು. ರಕ್ತ ಪುಷ್ಪ, ಶಶಾಂಕ, ಕರಂಜ, ಉಸಿರಿ, ಬೇವು, ಮಾಧವಿ, ಪಗಡೆ, ದಾಳಿಂಬೆ ಮುಂತಾದ ಅನೇಕ ಹೂಗಳನ್ನು ಶಂಭುವಿನ ಪೂಜೆಗೆ ಉಪಯೋಗಿಸಬಾರದು. ಮಾವಿನ ಹೂವು, ಮಲ್ಲಿಗೆ, ದೋಷಗಳನ್ನುಂಟು ಮಾಡುವ ಹೂಗಳು. ಶಿವನಿಗೆ ಬಿಳಿಯ ಹೂಗಳನ್ನೇ ಮುಖ್ಯವಾಗಿ ಭಕ್ತಿಯಿಂದ ಕೊಡಬೇಕು. ಗಣೇಶನ ಅರ್ಚನೆಯಲ್ಲಿ ತುಳಸಿಯನ್ನು ವಿಸರ್ಜಿಸಬೇಕು. ದುರ್ಗಾಶಕ್ತಿಯನ್ನು ದೂರ್ವೆಗಳಿಂದ ಎಂದೂ ಪೂಜಿಸಬಾರದು. ಹೀಗೆ ಹೂಗಳ ಒಳ್ಳೆಯ-ಕೆಟ್ಟ ಗುಣಗಳನ್ನರಿತು ಭಕ್ತಿಯಿಂದ ಪೂಜಿಸಬೇಕು. ಅದರಿಂದ ಧರ್ಮಾರ್ಥ ಕಾಮಮೋಕ್ಷಗಳು ಲಭಿಸುತ್ತವೆ.

ಪುರುಷಸೂಕ್ತದ ಹನ್ನೊಂದನೆಯ ಮಂತ್ರದಿಂದ ಧೂಪವನ್ನು ದೇವರಿಗೆ ಆಘ್ರಾಣಿಸುವಂತೆ ಮಾಡಬೇಕು. ಹನ್ನೆರಡನೆಯ ಮಂತ್ರದಿಂದ ಏಕಾರ್ತಿ ಎನ್ನುವ ದೀಪವನ್ನು ಸಮರ್ಪಿಸಬೇಕು. ಹದಿಮೂರನೆಯ ಮಂತ್ರದಿಂದ ನೈವೇದ್ಯವಿಟ್ಟು ಆಚಮನ ಕೊಡಬೇಕು. ಹದಿನಾಲ್ಕನೆಯ ಮಂತ್ರದಿಂದ ಪೂಗೀಫಲ ಸಹಿತ ತಾಂಬೂಲವನ್ನು ಅರ್ಪಿಸಬೇಕು. ನೀರಾಜನವನ್ನು ಹದಿನೈದನೆಯ ಮಂತ್ರದಿಂದ ಕೊಟ್ಟು, ಹದಿನಾರನೆಯ ಮಂತ್ರದಿಂದ ಪುಷ್ಪಾಂಜಲಿಯನ್ನು ಕೊಡಬೇಕು. ಸಾಷ್ಟಾಂಗ ನಮಸ್ಕಾರ ಮಾಡುವಾಗ ದೇವರಿಗೆ ಬಹಳ ಹತ್ತಿರ ಹೋಗಬಾರದು. ಗರ್ಭಾಲಯದ ಹಿಂಭಾಗಕ್ಕೆ ನಮಸ್ಕಾರ ಮಾಡಬಾರದು. ಅಯ್ಯಾ, ದ್ವಿಜೋತ್ತಮ, ನಮಸ್ಕಾರ ವಿಧಾನವನ್ನು ಹೇಳುತ್ತೇನೆ. ಮೊದಲು ಪ್ರದಕ್ಷಿಣೆ ಮಾಡಿ, ನಂತರ ಪ್ರಣಾಮ ಮಾಡಬೇಕು. ತಾಯಿ-ತಂದೆಯರಿಗೆ, ಗುರುಗಳಿಗೆ ಹತ್ತಿರಕ್ಕೆ ಹೋಗಿ ನಮಸ್ಕರಿಸಬೇಕು. ಎಲ್ಲ ಕಾಲದಲ್ಲೂ, ಬ್ರಾಹ್ಮಣನ ಸಮ್ಮುಖಕ್ಕೆ ಹೋಗಿ, ನಮಸ್ಕರಿಸಬೇಕು. ಸಭೆಗೆ ಒಂದು ನಮಸ್ಕಾರ ಮಾಡಬೇಕು. ಬೇರೆಬೇರೆಯಾಗಿ ಮಾಡುವ ಅವಶ್ಯಕತೆ ಇಲ್ಲ. ದೇವಾಲಯದಲ್ಲಿ ಪ್ರಾಜ್ಞನು ಹಾಗೆ ಒಂದು ನಮಸ್ಕಾರ ಮಾತ್ರ ಮಾಡಬೇಕು. ತಾಯಿತಂದೆಯರಿಗೆ, ಗುರುಗಳಿಗೆ ನಮಸ್ಕಾರ ಮಾಡುವ ವಿಧಾನ ಹೇಗೆಂದರೆ, ಎರಡು ಕಿವಿಗಳನ್ನೂ ಮುಟ್ಟಿ, ತನ್ನ ಎರಡೂಕೈಗಳಿಂದ ಎದುರಿಗಿರುವ ಗುರುಗಳ ಪೃಷ್ಠಭಾಗದಿಂದ ಪಾದಗಳವರೆಗೂ ನೇವರಿಸುತ್ತಾ ಅಭಿವಾದನ ಮಾಡಬೇಕು. ತಾಯಿ, ತಂದೆ, ಗುರುವು, ವಿದ್ಯಾದಾತ, ಭಯವನ್ನು ಹೋಗಲಾಡಿಸಿದವನು, ಅನ್ನವಿಟ್ಟವನು, ಸವತಿ ತಾಯಿ, ಗಾಯತ್ರಿ ಹೇಳಿಕೊಟ್ಟವನು, ಪುರೋಹಿತ, ದೊಡ್ಡ ಅಣ್ಣ, ತಂದೆಯ ಸಹೋದರ, ತಾಯಿಯ ಸಹೋದರ, ವಯಸ್ಸಾದ ಹಿರಿಯ ಸ್ನೇಹಿತರು, ಇಷ್ಟರು, ಜ್ಞಾನವೃದ್ಧರು, ನಮಸ್ಕಾರಾರ್ಹರು. ನಮಸ್ಕಾರ ಮಾಡುವಾಗ ನಿಷಿದ್ಧ ಸ್ಥಾನಗಳನ್ನು ಹೇಳುತ್ತೇನೆ. ವಿದ್ಯೆಯಿಲ್ಲದವನು, ವಯಸ್ಸಿನಲ್ಲಿ ಚಿಕ್ಕವನು ನಮಸ್ಕರಿಸಲು ಅರ್ಹರಲ್ಲ. ಸಮಿತ್ತುಗಳು, ಹೂಗಳು, ಅಕ್ಷತೆ ತರುತ್ತಿರುವ ದ್ವಿಜನಿಗೆ ನಮಸ್ಕರಿಸಬಾರದು. ಅವನ್ನು ತಾನು ತರುತ್ತಿರುವಾಗಲೂ ಬೇರೆಯವರಿಗೆ ನಮಸ್ಕರಿಸಬಾರದು. ಹೋಮ ಮಾಡುತ್ತಿರುವಾಗ ದೂರದಲ್ಲಿ ಯಾರಾದರೂ ತಿಳಿದವರು ಕಂಡುಬಂದರೆ ನಮಸ್ಕರಿಸಬಾರದು. ಓಡುತ್ತಿರುವವನು, ಕೋಪಗೊಂಡಿರುವವನು, ಧನಗರ್ವಿತನು ಇವರಿಗೂ ನಮಸ್ಕರಿಸಬಾರದು. ಬ್ರಾಹ್ಮಣನಿಗೆ ಒಂದೇ ಕೈಯಲ್ಲಿ ಎಂದೂ ನಮಸ್ಕರಿಸಬಾರದು.

ವಾದ್ಯ, ನೃತ್ಯ, ಗೀತಗಳಿಂದ ದೇವರನ್ನು ಸಂತುಷ್ಟಿಗೊಳಿಸಬೇಕು. ಸ್ತೋತ್ರಗಳಿಂದ ಪ್ರಾರ್ಥಿಸಿ, ಸನಕಾದಿಗಳನ್ನು ಅರ್ಚಿಸಬೇಕು. ದೇವರ ಪೂಜೆ ಮಾಡಿ, ಪೀಠದ ಮೇಲೆ ಎರಡೂ ಕೈಯಿಟ್ಟು ನಮಸ್ಕರಿಸಬೇಕು. ಅಂತ್ಯದಲ್ಲಿ ಉತ್ತರಪೂಜೆ (ಪುನಃಪೂಜೆ) ಮಾಡಿ ಉದ್ವಾಸನೆ ಹೇಳಬೇಕು. ವೈಶ್ವದೇವವನ್ನು, ಪಂಚಸೂನ ದೋಷಾಘ್ನವನ್ನು ಆತ್ಮಸಂಸ್ಕಾರಕ್ಕೋಸ್ಕರ, ಅನ್ನಸಂಸ್ಕಾರಕ್ಕೋಸ್ಕರ ಆಚರಿಸಬೇಕು. ಅನ್ನಸಂಸ್ಕಾರಕ್ಕೆ ಸಂಕಲ್ಪ ಮಾಡಿ, ಕುಂಡದಲ್ಲಿ ಅಗ್ನಿಯನ್ನು ಪ್ರಜ್ವಲಿಸಿ, ಧ್ಯಾನಿಸಿ, ಸಂಸ್ಕರಿಸಿ, ಆಜ್ಯ(ತುಪ್ಪ)ದಿಂದ ಕೂಡಿದ ಅನ್ನದ ಒಂದು ಭಾಗವನ್ನು ವಿಧಿವಿಧಾನವಾಗಿ ಹೋಮ ಮಾಡಬೇಕು. ಎರಡನೆಯ ಭಾಗದಿಂದ ಬಲಿಹರಣ ಮಾಡಬೇಕು. ಮೂರನೆಯ ಭಾಗದಿಂದ ಪಿತೃಗಳಿಗೆ, ನಾಲ್ಕನೆಯ ಭಾಗದಿಂದ ಕಾಗೆ/ನಾಯಿಗಳಿಗೆ ಹಾಕಬೇಕು. ಐದನೆಯ ಭಾಗದಿಂದ ಸನಕಾದಿಗಳಿಗೆ/ಮನುಷ್ಯರಿಗೆ ದ್ವಿಜನು ಸಮರ್ಪಿಸಬೇಕು. ಅನ್ನವಿಲ್ಲದ ಪಕ್ಷದಲ್ಲಿ ತಂಡುಲಾದಿಗಳಿಂದ ವೈಶ್ವದೇವ ಮಾಡಬೇಕು. ವೈಶ್ವದೇವ ಸಮಯದಲ್ಲಿ ಯಾರು ಬಂದರೆ ಅವನೇ ಅತಿಥಿ. ಹಾಗೆ ಬಂದವನು ಚಂಡಾಲನಾದರೂ, ಕಳ್ಳನಾದರೂ ಅನ್ನವನ್ನು ಇಡಬೇಕು. "ವೈಶ್ವದೇವವಿಲ್ಲದ ಮನೆಯಲ್ಲಿ, ಅನ್ನದಾನವಿಲ್ಲದ ಮನೆಯಲ್ಲಿ ವಾಸ ಮಾಡುವವರು ನನ್ನಿಂದ ದಂಡಿಸಲ್ಪಡಲು ಅರ್ಹರು. ಆದ್ದರಿಂದ ಅಂತಹವರನ್ನು ಕರೆದುತನ್ನಿ. ಅತಿಥಿಪೂಜೆ ಮಾಡುವವರ ಮನೆಗಳಿಗೆ ನೀವು ಹೋಗಬಾರದು/ ಹೋಗಬೇಡಿ. ಇದು ವಿಷ್ಣು ಮಾಡಿರುವ ಆಜ್ಞೆ." ಎಂದು ಯಮನು ತನ್ನ ದೂತರಿಗೆ ಹೇಳಿದ್ದಾನೆ. ತಂದೆತಾಯಿಗಳನ್ನು ಕೊಂದವನು, ನಾಯಿ ತಿಂದವನು, ಮನೆಗೆ ಬಂದರೂ ಅವರಿಗೆ ಅನ್ನವನ್ನು ಕೊಡಬೇಕು. ಬ್ರಾಹ್ಮಣರಿಗೆ ಕುಲಗೋತ್ರಗಳನ್ನು ವಿಚಾರಿಸದೆ ಅನ್ನವನ್ನು ನೀಡಬೇಕು. ಅತಿಥಿ ವಿಮುಖನಾದವನ ಮನೆಗೆ ಪಿತೃದೇವತೆಗಳು ಬರುವುದಿಲ್ಲ. ದ್ವಿಜನಾದವನು ಪ್ರವಾಸಾದಿಗಳಲ್ಲಿದ್ದರೂ ತುಪ್ಪ ಮುಂತಾದುವುಗಳಿಂದ ಯಜ್ಞ ಮಾಡಬೇಕು. ಪ್ರಾಜ್ಞನು ಕಂದಮೂಲಾದಿಗಳಿಂದಲೂ ಯಜ್ಞ ಮಾಡಬಹುದು. ಸಜ್ಜನನಾದವನು ಅನ್ನವಿಲ್ಲದೆ ಅಗ್ರದಾನ ಮಾಡಬಾರದು. ಬುಧನು ಪಂಚಯಜ್ಞಗಳಿಗಾಗಿ ಚಾಂದ್ರಾಯಣ ಮಾಡಬೇಕು. ವೈಶ್ವದೇವಕ್ಕೆ ಮುಂಚೆಯೇ ಯತಿ ಬಂದರೆ ಅವನಿಗೆ ಭಿಕ್ಷೆ ಕೊಟ್ಟರೆ ವೈಶ್ವದೇವ ಫಲವು ಲಭಿಸುವುದು. ಸ್ವಯಂ (ತಾನೇ) ಬಲಿ ಕೊಡಬಾರದು. ಪರಹಸ್ತದಿಂದ ಬಲಿಯನ್ನು ಹಾಕಿಸಬೇಕು. ತನ್ನ ಕೈಯಿಂದ ಬಲಿಯನ್ನು ಹಾಕುವವರಿಗೆ ಚಾಂದ್ರಾಯಣದಿಂದ ಶುದ್ಧಿಯಾಗುತ್ತದೆ. ಬಲಿಯನ್ನಿಡದೆ ಊಟ ಮಾಡಿದರೆ ಬ್ರಾಹ್ಮಣನು ದೋಷಿಯಾಗುತ್ತಾನೆ. ಆ ದೋಷ ಪರಿಹಾರಕ್ಕೆ ಆರು ಪ್ರಾಣಾಯಾಮಗಳನ್ನು ಮಾಡಬೇಕು. ಮನೆಯ ಬಾಗಿಲಲ್ಲಿ ಬಲಿಯನ್ನಿಟ್ಟು ಗೋವಿಗೆ ಗ್ರಾಸ ಹಾಕಿಸಬೇಕು. ಆ ನಂತರ ನಿತ್ಯಶ್ರಾದ್ಧ, ನೈಮಿತ್ತಿಕ ಶ್ರಾದ್ಧ ಮಾಡಬೇಕು. ನಿತ್ಯ ಶ್ರಾದ್ಧದಲ್ಲಿ ಪಿಂಡಗಳ ಅಗ್ನೌಕರಣದ ಅವಶ್ಯಕತೆಯಿಲ್ಲ. ಅದಕ್ಕೆ ದಕ್ಷಿಣೆ ಕೊಡಬೇಕಾದ ಅವಸರವೂ ಇಲ್ಲ. ಬ್ರಹ್ಮಚರ್ಯದ ಅವಸರವೂ ಇಲ್ಲ. ಯಜ್ಞಾಂತ್ಯದಲ್ಲಿ ಹಾಲು ಕರೆಯುವಷ್ಟು ಕಾಲ ಮಾತ್ರವೇ ಮನೆಯ ಬಾಗಿಲಲ್ಲಿ ನಿಂತು ಅತಿಥಿಗಳ ಬರವಿಗಾಗಿ ಕಾಯಬೇಕು. ಅಲಸಿಹೋದ, ಹಸಿದು ಬಂದ ಅತಿಥಿಯನ್ನು ವಿಶೇಷವಾಗಿ ಪೂಜಿಸಬೇಕು. ಹಾಗೆಯೇ ಸೂರ್ಯಾಸ್ತಮಯ ಕಾಲದಲ್ಲಿ ಬಂದವನಿಗೆ ಕೂಡಾ ಗೌರವದಿಂದ ಪೂಜೆಮಾಡಬೇಕು. ವೈಶ್ವದೇವ ಸಮಯದಲ್ಲಿ ಬಂದ ಬ್ರಾಹ್ಮಣೋತ್ತಮನನ್ನು ಪೂಜಿಸಬೇಕು. ಎಲ್ಲ ವರ್ಣದವರಿಗೂ ಬ್ರಾಹ್ಮಣನು ಗುರುವು. ಅವನನ್ನು ಪೂಜಿಸಿದರೆ ದೇವತೆಗಳೆಲ್ಲರನ್ನೂ ಪೂಜಿಸಿದಂತೆಯೇ! ಅವನ ಪೂಜೆಯಿಂದ ಅಗ್ನಿದೇವನ ಮುಖದಲ್ಲಿರುವ ಸುರರೆಲ್ಲರೂ ಸಂತಸಗೊಳ್ಳುತ್ತಾರೆ. ಮರುದ್ಗಣ, ಆರ್ಯಮ, ಬ್ರಹ್ಮ, ಸದಾಶಿವ, ದೇವತೆಗಳು, ಎಲ್ಲರೂ ಅತಿಥಿಪೂಜೆಯಿಂದಲೇ ತೃಪ್ತಿ/ಸಂತೋಷ ಹೊಂದುತ್ತಾರೆ. ಬ್ರಾಹ್ಮಣನ ಪಾದಗಳನ್ನು ತೊಳೆಯುವುದರಿಂದ ಪಿತೃದೇವತೆಗಳೆಲ್ಲರೂ ತೃಪ್ತಿಹೊಂದುತ್ತಾರೆ. ಅತಿಥಿಗೆ ಭೋಜನವಿಟ್ಟರೆ ಬ್ರಹ್ಮ, ವಿಷ್ಣು, ಮಹೇಶ್ವರರು ಸಂತೃಪ್ತಿಗೊಳ್ಳುತ್ತಾರೆ. ಯತೀಶ್ವರನಾಗಲೀ, ಬ್ರಹ್ಮಚಾರಿಯಾಗಲೀ ಮನೆಗೆ ಬಂದಾಗಲೂ ಅನ್ನವನ್ನು ಕೊಡಬೇಕು. ಅದರಿಂದ ಮಹಾಪುಣ್ಯ ಲಭ್ಯವಾಗುತ್ತದೆ. ಒಂದು ಮುದ್ದೆ ಅನ್ನವನ್ನಿಟ್ಟರೆ ಅದು ಮೇರುವನ್ನು ಕೊಟ್ಟ ಫಲಕ್ಕೆ ಸಮಾನವು. ಭೋಜನಕ್ಕೆ ಮುಂಚೆ, ಭೋಜನಾನಂತರ ಸ್ವಲ್ಪ ನೀರನ್ನು ಕೊಟ್ಟರೆ ಸಮುದ್ರವನ್ನು ಕೊಟ್ಟಿದ್ದಕ್ಕೆ ಸಮಾನವು. ಬಂದ ಅತಿಥಿಯನ್ನು ಆದರಿಸದೆ, ಅವನಿಗೆ ಏನನ್ನೂ ಕೊಡದೆ ತಾನು ತಿನ್ನುವ ದ್ವಿಜಾಧಮನು ಮೊದಲು ನಾಯಿ ನಂತರ ಕತ್ತೆಯಾಗಿ ಹುಟ್ಟುವನು. ಆದ್ದರಿಂದ ಅತಿಥಿಗಳಿಗೆ ಮೊದಲು ಅನ್ನವಿಟ್ಟು ಆ ನಂತರವೇ ಬಾಲವೃದ್ಧರೊಡನೆ ಕೂಡಿ ತಾನು ಊಟಮಾಡಬೇಕು. ಪಂಕ್ತಿ ಬೇಧ ಮಾಡಬಾರದು. ಮೊದಲು ಪಾದಗಳು, ನಂತರ ಎರಡು ಕೈಗಳು, ನಂತರ ಎರಡೂ ಕಾಲುಗಳು, ಐದನೆಯದಾಗಿ ಮುಖ ತೊಳೆದುಕೊಳ್ಳಬೇಕು. ಈ ಐದನ್ನೂ ಒದ್ದೆಯಾಗಿಯೇ ಇಟ್ಟುಕೊಂಡು ಭೋಜನ ಮಾಡುವ ದ್ವಿಜನು ಶತಾಯುವಾಗುವನು. ಪೂರ್ವಮುಖಿಯಾಗಿ, ಮೌನಿಯಾಗಿ, ಎರಡೂ ಪಾದಗಳನ್ನು ಸೇರಿಸಿ ಕೂತು ಊಟಮಾಡಬೇಕು. ಬ್ರಾಹ್ಮಣನಿಗೆ ನಾಲ್ಕು ಕೋಣೆಗಳುಳ್ಳ ಭಸ್ಮದಿಂದ ಕೂಡಿದ ಮಂಡಲ, ಕ್ಷತ್ರಿಯನಿಗೆ ಮೂರುಕೋಣಗಳುಳ್ಳ ಮಂಡಲ, ವೈಶ್ಯನಿಗೆ ಗುಂಡಗಿರುವ ಮಂಡಲ, ಹೇಳಲ್ಪಟ್ಟಿದೆ. ಶೂದ್ರನಿಗೆ ಅರ್ಧಚಂದ್ರಕಾರದ ಮಂಡಲವು ವಿಹಿತವು. ಅಂತಹ ಮಂಡಲದಲ್ಲಿ ದ್ವಿಜನು ವಸುಗಳು, ರುದ್ರರು, ಆದಿತ್ಯರು ಮುಂತಾದ ದೇವತೆಗಳನ್ನು ಆವಾಹನ ಮಾಡಬೇಕು. ಮಂಡಲದಲ್ಲಿ ಬ್ರಹ್ಮಾದಿ ದೇವತೆಗಳು ಕೂಡಾ ಇರುತ್ತಾರೆ. ಮಂಡಲ ಮಾಡದೆಯೇ ತಿನ್ನುವವನ ಅನ್ನರಸವನನ್ನು ರಾಕ್ಷಸರು, ಪಿಶಾಚಿಗಳು ಮುಂತಾದವುಗಳ ಸಮ್ಮೂಹಗಳು ತಿನ್ನುತ್ತವೆ. ಪೂರ್ವಾಭಿಮುಖವಾಗಿ ಕೂತು ತಿನ್ನುವುದು ಪ್ರಶಸ್ತವು. ಪಶ್ಚಿಮಮುಖವಾಗಿ ತಿನ್ನುವುದು ಮಧ್ಯಮವು. ಉತ್ತರ ಮುಖವಾಗಿ ಕೂತು ತಿನ್ನುವುದು ಪಿತೃಕಾರ್ಯದಲ್ಲಿ ಮಾಡಬೇಕಾದದ್ದು. ದಕ್ಷಿಣ ಮುಖವಾಗಿ ಕೂತು ತಿನ್ನುವುದು ಸರಿಯಲ್ಲವೇನಲ್ಲ. ಆದರೆ ಮೂಲೆಗಳಿಗೆದುರಾಗಿ ಕೂತು ತಿನ್ನುವುದು ನಿಷಿದ್ಧವು. ಚಿನ್ನ ಇಲ್ಲ ಬೆಳ್ಳಿಪಾತ್ರೆಯಲ್ಲಿ ಊಟಮಾಡುವುದು ಶುಭವು. ತಾಮ್ರ, ಕಮಲದೆಲೆ, ತೇಗದೆಲೆ, ಮುಂತಾದುವುಗಳಲ್ಲಿ ತಿನ್ನುವುದು ಉತ್ತಮವು. ತಾಮ್ರ ಪಾತ್ರೆಯನ್ನು ಗೃಹಸ್ಥನು ಬಿಡಬೇಕು. ಯತಿಯಾದವನು ಧಾತುಮಯವಾದ ಪಾತ್ರೆಯನ್ನು ವಿಸರ್ಜಿಸಬೇಕು. ತಾಮ್ರ ಪಾತ್ರೆ, ಮರದ ಪಾತ್ರೆ, ಸ್ಫಟಿಕ ಪಾತ್ರೆ, ಕಲ್ಲು ಪಾತ್ರೆ ಯತಿಗೆ ಶುಭಕರವು. ಬಾಳೆಯ ದೊನ್ನೆಯಲ್ಲಾಗಲೀ, ತೇಗದ ಮಧ್ಯದೆಲೆಯಲ್ಲಾಗಲೀ, ಬಳ್ಳಿಯ ಎಲೆಗಳಲ್ಲಾಗಲೀ, ತಿನ್ನುತ್ತಾ ಚಾಂದ್ರಾಯಣ ವ್ರತವನ್ನು ಮಾಡಬೇಕು. ಎಕ್ಕ, ಅಶ್ವತ್ಥ ಎಲೆಗಳಲ್ಲಿ ತಿನ್ನುವವನು ಚಾಂದ್ರಾಯಣ ವ್ರತ ಆಚರಿಸಬೇಕು. ನೆಲದ ಮೇಲೆ, ಲೋಹದ ಪಾತ್ರೆಯಲ್ಲಿ, ಮಣ್ಣಿನ ಪಾತ್ರೆಯಲ್ಲಿ ಅಥವಾ ವಸ್ತ್ರದ ಮೇಲೆ ತಿನ್ನುವ ದ್ವಿಜಾತಿ ನರಕಕ್ಕೆ ಹೋಗುವನು. ಕಂಚಿನ ಪಾತ್ರೆಯಲ್ಲಿ ತಿಂದರೆ ಆಯುರ್ದಾಯ, ಕೀರ್ತಿ, ಬಲ, ಪ್ರಜ್ಞೆ ಬೆಳೆಯುತ್ತವೆ. ಆದ್ದರಿಂದ ಗೃಹಸ್ಥನು ಕಂಚುಪಾತ್ರೆಯಲ್ಲಿ ತಿನ್ನುವುದು ಮುಖ್ಯವು. ಐದು ಅಂಗುಲಕ್ಕಿಂತ ಕಡಮೆಯಾದ ಪಾತ್ರೆ ಪ್ರಶಸ್ತವಲ್ಲ. ಹದಿನಾರು ಅಂಗುಲಗಳ ಕಂಚುಪಾತ್ರೆ ಚಿನ್ನದ ಪಾತ್ರೆಗೆ ಸಮಾನವು. ಅಭ್ಯಂಗ ಸ್ನಾನ, ತಾಂಬೂಲ, ಕಂಚುಪಾತ್ರೆ ಭೋಜನ, ವಿಧವಾ ಸ್ತ್ರೀಯರಿಗೆ, ಯತಿಗಳಿಗೆ, ಬ್ರಹ್ಮಚಾರಿಗಳಿಗೆ ವರ್ಜ್ಯವು. ಹರಳೆಲೆ ನಾಯಿಚರ್ಮದಂತಹುದಾದದ್ದರಿಂದ ನಿಷಿದ್ಧವು. ಕಂಚುಪಾತ್ರೆಯೂ ನಿಷಿದ್ಧವೇ! ಬಹಳ ಒಡೆದಿರುವ ಕಂಚುಪಾತ್ರೆಯಲ್ಲಿ ಭೋಜನ ಅತಿನಿಷಿದ್ಧ. ಸಂಧ್ಯಾಸಮಯದಲ್ಲಿ ಊಟ ಮಾಡುವುದು ಮಹಾ ದೋಷಕರವು. ಪತಿತನ ಬಳಿ ಕುಳಿತು ವಿಪ್ರನು ತಿನ್ನಬಾರದು. ಶೂದ್ರನು ತಿಂದು ಮಿಕ್ಕ ಭೋಜನವು ಬ್ರಾಹ್ಮಣನಿಗೆ ಪ್ರಶಸ್ತವಲ್ಲ. ಶ್ರಾದ್ಧದಿನಗಳಲ್ಲಿ ಸಣ್ಣಪುಟ್ಟವರೊಡನೆ ಕೂತು ಊಟ ಮಾಡಬಾರದು. ರಾತ್ರಿಯಲ್ಲೂ ಹುಡುಗರೊಡನೆ ಊಟ ಮಾಡಬಾರದು. ಆಪೋಶನ ತೆಗೆದುಕೊಳ್ಳುವ ನೀರನ್ನು ತಾನೇ ಗ್ರಹಿಸಬಾರದು. ಅಭ್ಯಂಗನಕ್ಕೆ ನೀರನ್ನು, ಆಪೋಶನ ತೆಗೆದುಕೊಳ್ಳುವ ನೀರನ್ನು ತನಗೆ ತಾನೇ ತೆಗೆದುಕೊಳ್ಳಬಾರದು. ಅದರಿಂದ ಬುದ್ಧಿಮಾಂದ್ಯವಾಗುವುದು. ಆದ್ದರಿಂದ ಅದನ್ನು ಪರಹಸ್ತದಿಂದ ಮಾಡಿಸಿಕೊಳ್ಳಬೇಕು. ಹಾಗೆಯೇ ಮಂಡಲವನ್ನು ತಾನೇ ಮಾಡಬಾರದು. ತಾನೇ ಮಾಡಿದರೆ ಪುತ್ರಘಾತ, ಆಯುಕ್ಷೀಣ ಸಂಭವಿಸುವುದು. ಬಡಿಸುವ ಸಮಯದಲ್ಲಿ ನಮಸ್ಕಾರ ಮಾಡಿದಮೇಲೆ ಅಭಿಗಾರ ಮಾಡಬೇಕು. ಮೊದಲು ಪಾಯಸ, ಕೊನೆಯಲ್ಲಿ ಉಪ್ಪು ಬಡಿಸಬೇಕು. ಗಾಯತ್ರಿ ಮಂತ್ರದಿಂದ ಬಡಿಸಿದ ಅನ್ನದ ಮೇಲೆ ನೀರು ಚುಮುಕಿಸಿ, "ಸತ್ಯಂತ್ವಾ------"ಎನ್ನುವ ಮಂತ್ರದಿಂದ ಹಗಲಿನಲ್ಲಿ, "ಋತಂತ್ವಾ----------" ಎನ್ನುವ ಮಂತ್ರದಿಂದ ರಾತ್ರಿಯಲ್ಲಿ ಪರಿಷೇಚನ ಮಾಡಿ, ಬಲಭಾಗದಲ್ಲಿ ಬಲಿ ನೀಡಬೇಕು. ಚಿತ್ರಾದಿಗಳಿಗೆ ಬಲ್ಯನ್ನವನ್ನು ವಿಸರ್ಜನೆ ಮಾಡಿ ನಂತರ ದ್ವಿಜನು ಕೈತೊಳೆದುಕೊಳ್ಳಬೇಕು. ತರ್ಜನಿ, ಮಧ್ಯಮ ಹಾಗೂ ಹೆಬ್ಬೆರಳು ಮೂರೂ ಸೇರಿಸಿ, ಎಡದ ಕೈಯಲ್ಲಿ ಭೋಜನಪಾತ್ರೆಯನ್ನು ಹಿಡಿದುಕೊಂಡು, ದ್ವಿಜನು ಬಲಗೈಯಲ್ಲಿ ಆಪೋಶನ ಹಿಡಿದು ಮಂತ್ರಸಹಿತವಾಗಿ ನೀರನ್ನು ಕುಡಿಯಬೇಕು. ಆಪೋಶನಜಲವನ್ನು ಬಿಟ್ಟು ಮತ್ತೆ ಬೇರೆ ನೀರನ್ನು ತೆಗೆದುಕೊಂಡರೆ ಅದು ನಾಯಿಮೂತ್ರದಂತಾಗುತ್ತದೆ. ಕೈಯಲ್ಲಿ ಆಪೋಶನಜಲ ಗ್ರಹಿಸಿ ತಾನು ಇತರರಿಗೆ ನಮಸ್ಕರಿಸಿದರೂ, ಇತರರು ತನಗೆ ನಮಸ್ಕರಿಸಿದರೂ/ ಆಶೀರ್ವಾದ ಕೊಟ್ಟರೂ ಇಬ್ಬರಿಗೂ ಅದು ದೋಷವೇ! ಮೌನವಾಗಿ ಊಟಮಾಡುವುದು ಪ್ರಶಸ್ತವು. ತಿನ್ನುವಾಗ ಶಬ್ದಾದಿಗಳನ್ನು ಮಾಡಬಾರದು. ಮಂತ್ರಪೂರ್ವಕವಾಗಿ ಆಪೋಶನಜಲವನ್ನು ಕುಡಿದು, ನಂತರ ಪ್ರಾಣಾಹುತಿಗಳನ್ನು ಮಾಡಬೇಕು. ಅಪೋಶನ ತೆಗೆದುಕೊಳ್ಳದೆ ಊಟ ಮಾಡಿದರೆ ಅದು ದೋಷವು. ಆ ದೋಷವನ್ನು ಕಳೆದುಕೊಳ್ಳಲು ದ್ವಿಜನು ಅಷ್ಟೋತ್ತರಶತ ಗಾಯತ್ರಿ ಮಾಡಬೇಕು.

ಬ್ರಾಹ್ಮಣ, ಪ್ರಾಣಾಹುತಿ ವಿಧಾನವು ಶ್ರುತಿಯಲ್ಲಿ ಹೇಳಿರುವ ಹಾಗೆ ಕೇಳು. ಈ ಪ್ರಾಣಾಗ್ನಿಹೋತ್ರವು ಸರ್ವಪಾಪಹರವು. ಅಗ್ನಿಯ ಸ್ಪರ್ಶದಿಂದಲೇ ಹತ್ತಿಯ ರಾಶಿಯು ಸುಟ್ಟುಹೋಗುವಹಾಗೆ ಪ್ರಾಣಾಗ್ನಿಹೋತ್ರದಿಂದ ಸರ್ವಪಾಪಗಳು ನಾಶವಾಗುವುವು. ಪ್ರಾಣಾಹುತಿ ವಿಧಾನದಲ್ಲಿ ಸರ್ವಾರ್ಥಕಾಮಮೋಕ್ಷಗಳೆನ್ನುವ ಚತುರ್ವರ್ಗಗಳೂ ಸಿದ್ಧಿಸುತ್ತವೆ. ಗೀತೆಯಲ್ಲಿ ಹೇಳಿರುವ ಶ್ಲೋಕವನ್ನು ಅನ್ನವನು ಮುಟ್ಟಿಕೊಂಡು ಧ್ಯಾನನಿಷ್ಠನಾಗಿ ಹೇಳಬೇಕು. 

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ| 
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ||

ನಾನು ವೈಶ್ವಾನರನಾಗಿ ಪ್ರಾಣಿಗಳ ದೇಹವನ್ನಾಶ್ರಯಿಸಿ ಪ್ರಾಣ-ಅಪಾನಗಳಿಂದ ಕೂಡಿ, ಚತುರ್ವಿಧವಾದ ಅನ್ನವನ್ನು ಪಚನ ಮಾಡುತ್ತೇನೆ. ಅನ್ನಂ ಬ್ರಹ್ಮ, ರಸೋ ವಿಷ್ಣುಃ, ಭೋಕ್ತಾದೇವೋ ಮಹೇಶ್ವರಃ ಅನ್ನವು ಬ್ರಹ್ಮ, ರಸವು ವಿಷ್ಣು, ಭೋಕ್ತ ಮಹೇಶ್ವರದೇವನು. ಹೀಗೆ ಧ್ಯಾನಮಾಡಿ ಭುಜಿಸುವವನು ಅನ್ನ ದೋಷವನ್ನು ಹೊಂದುವುದಿಲ್ಲ. ಆದ್ದರಿಂದ ಮಂತ್ರಾರ್ಥವನ್ನು ಧ್ಯಾನಮಾಡಿ, ‘ಅಗ್ನಿರಸ್ಮಿ------’ ಎನ್ನುವ ಮಂತ್ರವನ್ನು ಪಠಿಸಿ, ಪ್ರಾಣಾಹುತಿಗಳನ್ನು ಸ್ವೀಕರಿಸುವುದಕ್ಕೆ, ಕ್ರಮಕ್ರಮವಾಗಿ ಒಂದೊಂದಾಗಿ ಬಾಯೊಳಕ್ಕೆ ಹಾಕಿಕೊಳ್ಳಬೇಕು. ತರ್ಜನಿ (ತೋರುಬೆರಳು), ಹೆಬ್ಬೆರಳು, ಮಧ್ಯದ ಬೆರಳುಗಳಿಂದ ಮೊದಲನೆಯ ಪ್ರಾಣಾಹುತಿ ಹಾಕಿಕೊಳ್ಳಬೇಕು. ಮಧ್ಯದ ಬೆರಳು, ಅನಾಮಿಕ, ಹೆಬ್ಬೆರಳುಗಳಿಂದ ಅಪಾನಾಹುತಿಯನ್ನು ಬಾಯಲ್ಲಿ ಹಾಕಿಕೊಳ್ಳಬೇಕು. ಕಿರುಬೆರಳು ಅನಾಮಿಕದಿಂದ ವ್ಯಾನಾಹುತಿಯನ್ನು ಹಾಕಿಕೊಳ್ಳಬೇಕು. ಕಿರುಬೆರಳು, ಹೆಬ್ಬೆರಳು, ತೋರುಬೆರಳುಗಳಿಂದ ಉದಾನಾಹುತಿಯನ್ನು ಹಾಕಿಕೊಳ್ಳಬೇಕು. ಸಮಾನಾಹುತಿಯನ್ನು ಐದೂ ಬೆರಳುಗಳಲ್ಲಿ ಆದರದಿಂದ ಹೋಮ ಮಾಡಬೇಕು. ಇದಕ್ಕೆ ಸ್ಥಾನಗಳು ಹೃದಯ, ಗುದ, ನಾಭಿ, ಕಂಠ, ಸಮಗ್ರ ಅವಯವಗಳು. ದ್ವಿಜನು ಹಲ್ಲುಗಳಿಂದ ಮುಟ್ಟದೆ ಪ್ರಾಣಾಹುತಿಗಳಿಗೆ ಕೊಟ್ಟ ಅನ್ನವನ್ನು ನಾಲಗೆಯಿಂದ ಮುಟ್ಟುತ್ತ ಮಾತ್ರ ನುಂಗಬೇಕು. ಪಂಚಸ್ಥಾನಗಳಲ್ಲಿ ಪ್ರಾಣಾಹುತಿಗಳನ್ನು ಕೊಡುವಾಗ ಮೌನ ವಹಿಸುವುದು ಸರ್ವಾರ್ಥ ಸಾಧಕವು. ಸ್ನಾನ ಮಾಡುವಾಗ ಮೌನವನ್ನು ವಹಿಸದಿದ್ದರೆ ಅದರ ಫಲವನ್ನು ವರುಣನು ತೆಗೆದುಕೊಂಡು ಹೋಗುತ್ತಾನೆ. ಹೋಮ ಮಾಡುವಾಗ ಮೌನವನ್ನು ವಹಿಸದಿದ್ದರೆ ಅದರ ಫಲವಾಗಿ ಲಕ್ಷ್ಮಿ ಬಿಟ್ಟು ಹೋಗುತ್ತಾಳೆ. ಭೋಜನ ಮಾಡುವಾಗ ಮೌನ ಪಾಲಿಸದಿದ್ದರೆ ಅಪಮೃತ್ಯುವು ಬರಬಹುದು. ಮೌನವು ಅಸಂಭವವಾದರೆ ಪ್ರಾಣಾಹುತಿಗಳು ಆಗುವವರೆಗಾದರೂ ಮೌನವು ಎಲ್ಲರಿಗೂ ಬಹು ಅವಶ್ಯವು. ಇದರಲ್ಲಿ ವಿಶೇಷವೊಂದಿದೆ. ತಂದೆ ಜೀವಂತವಿರುವವನಿಗೆ, ದೊಡ್ಡಣ್ಣ ಇರುವವನಿಗೆ, ಮೌನದ ಅವಶ್ಯಕತೆಯಿಲ್ಲ. ಅವರು ಶ್ರಾದ್ಧ ಭೋಜನದಲ್ಲಿ ಮೌನ ಪಾಲಿಸಬೇಕು.

ಮಧುರಾನ್ನವನ್ನು ಮೊದಲು ತಿನ್ನಬೇಕು. ಹುಳಿಯಾದದ್ದು, ಘಟ್ಟಿಯಾದದ್ದು, ಊಟದ ಮಧ್ಯದಲ್ಲಿ ತಿನ್ನಬೇಕು. ಭೋಜನ ಮಧ್ಯದಲ್ಲಿ ದ್ರವಾನ್ನ ತಿನ್ನಬಾರದು. ಭೋಜನದ ಕೊನೆಯಲ್ಲಿ ಘಟ್ಟಿಯಾದದ್ದನ್ನು ತಿನ್ನಬೇಕು. ಮೊದಲು ತಿನ್ನಬೇಕಾದ್ದು ಆಮೇಲೆ, ಆಮೇಲೆ ತಿನ್ನಬೇಕಾದ್ದು ಮೊದಲು ತಿಂದರೆ ಬಲಹಾನಿ. ಬೇಗ ತಿನ್ನುವುದು ಉತ್ತಮವು. ಸುಖಪ್ರದವು. ಈ ಶೀಘ್ರ ಭೋಜನವನ್ನು ಹಸುವು ನೀರು ಕುಡಿಯುವಷ್ಟು ಹೊತ್ತಿನಲ್ಲಿ ಮಾಡಬೇಕು. ಮೇಕೆಯ ಹಾಗೆ ಶೀಘ್ರ ಭೋಜನ ಮಡುವುದು ಸುಖಪ್ರದವು. ಊಟಮಾಡುವಾಗ ಮುದ್ದೆಗಳು ಹೇಗಿರಬೇಕು ಎಂಬುದನ್ನು ಮುನಿಗಳು ಹೇಳಿದ್ದಾರೆ. ಸನ್ಯಾಸಿಗೆ ನವಿಲು ಮೊಟ್ಟೆಯಪರಿಮಾಣದಲ್ಲಿ ಎಂಟು ಮುದ್ದೆ ಹೇಳಿದ್ದಾರೆ. ಗೃಹಸ್ಥನಿಗೆ ಮುವ್ವತ್ತೆರಡು ಗ್ರಾಸ. ವಾನಪ್ರಸ್ಥನಿಗೆ ಹದಿನಾರು ಗ್ರಾಸ. ಬ್ರಹ್ಮಚಾರಿಗೆ ಇವೆರಡರ ಮಧ್ಯೆ ಅವನಿಗಿಷ್ಟವಾದಷ್ಟು. ಅಂದರೆ ಹದಿನಾರರಿಂದ ಮುವ್ವತ್ತೆರಡರವರೆಗೂ ಇರಬಹುದು. ಮುಖದಲ್ಲಿ ಯಾವ ವಿಕಾರವೂ ತೋರದಂತೆ ನುಂಗಬೇಕು. ತುತ್ತು ಬಹಳ ದೊಡ್ಡದಾಗಿ ಮಾಡಿಕೊಂಡು ತಿನ್ನಬಾರದು. ಪಾತ್ರೆಯಲ್ಲಿ ಬಿದ್ದ ಉಚ್ಚಿಷ್ಟವನ್ನು ತಿನ್ನಬಾರದು. ಹಾಗೆ ತಿಂದವನು ಎಂಜಲು ತಿಂದವನಾಗುತ್ತಾನೆ. ಸ್ವಲ್ಪ ತುತ್ತನ್ನು ತಿಂದು, ಮಿಕ್ಕದ್ದನ್ನು ಪಾತ್ರೆಯಲ್ಲಿಟ್ಟು, ಮತ್ತೆ ಹಾಗಿಟ್ಟದ್ದನ್ನು ತಿಂದವನು ಚಾಂದ್ರಾಯಣ ವ್ರತವನ್ನು ಮಾಡಬೇಕು. ಒಂದೇ ಪಾತ್ರೆಯಲ್ಲಿ ಇಷ್ಟರೊಡನೆ ಕೂಡಿ ತಿನ್ನಬಾರದೆಂದು ಕೆಲವರು ಹೇಳುತ್ತಾರೆ. ಉಪನಯನವಾಗದ ಬಾಲಕನೊಡನಾಗಲೀ, ವಿವಾಹವಾಗದ ಕನ್ಯೆಯೊಡನಾಗಲೀ ಏಕಪತ್ರ ಭೋಜನವು ದೋಷವಲ್ಲ. ಪದಾರ್ಥಗಳನ್ನು ಸ್ವಲ್ಪ ಮಿಗಿಸಿ ತಿನ್ನಬೇಕು. ತುಪ್ಪ ಸೇರಿಸಿದ ಪಾಯಸವನ್ನು ನಿಶ್ಶೇಷವಾಗಿ ತಿನ್ನಬೇಕು. ಉಪ್ಪನ್ನು, ತುಪ್ಪವನ್ನು ಮಿಗಿಸಬಾರದು. ಮೊದಲು ಭೋಜನ ಪಾತ್ರೆಯನ್ನು ಎಡಕೈಯಲ್ಲಿ ಎತ್ತಿ ಹಿಡಿದು ಊಟ ಪೂರ್ತಿಯಾಗುವವರೆಗೂ ಕೆಳಗಿಡಬಾರದು. ಹಾಗೆ ಹಿಡಿದಿದ್ದ ಪಾತ್ರೆಯನ್ನು ಕೆಳಗಿಟ್ಟರೆ ಮತ್ತೆ ಅದರಿಂದ ತಿನ್ನಬಾರದು. ಇಲ್ಲದಿದ್ದರೆ ಪಾತ್ರೆಯನ್ನು ಮೊದಲೇ ಕೈಯಲ್ಲಿ ಹಿಡಿಯಬಾರದು. ಅದರಿಂದ ಯಾವ ದೋಷವೂ ಇಲ್ಲ. ತಲೆಯ ಮೇಲೆ ಬಟ್ಟೆ ಹೊದ್ದುಕೊಂಡು ತಿನ್ನಬಾರದು. ಪಾದರಕ್ಷೆಗಳನ್ನು ಎದುರಿಗಿಟ್ಟುಕೊಂಡು ತಿನ್ನಬಾರದು. ಎಡಕಾಲಿನ ಮೇಲೆ ಕೈಯ್ಯೂರಿಕೊಂಡು ತಿನ್ನಬಾರದು. ಹಾಗೆ ಮಾಡಿದರೆ ಆ ಅನ್ನವನ್ನು ರಾಕ್ಷಸರು ತಿನ್ನುತ್ತಾರೆ. ಬಲಗಾಲಿನ ಮೇಲೆ ಕೈಯಿಟ್ಟು ಊಟಮಾಡುವವನು ರೋಗಿಯಾಗುತ್ತಾನೆ. ಕೈಬೆರಳುಗಳನ್ನು ಬಿಡಿಸಿಟ್ಟುಕೊಂಡು ತಿನ್ನುವವನೂ ರೋಗಿಯಾಗುತ್ತಾನೆ. ಕೈಬೆರಳುಗಳನ್ನು ಚಾಚಿಕೊಂಡು ತಿನ್ನುವವನು ಮಾಂಸಭಕ್ಷಣ ದೋಷವನ್ನು ಹೊಂದುತ್ತಾನೆ. ಕುದುರೆ ಅಥವಾ ಆನೆಯ ಮೇಲೆ ಕೂತು ಅಥವಾ ದೇವಾಲಯದಲ್ಲಿ ಕೂತು ಊಟ ಮಾಡಬಾರದು. ಶ್ಮಶಾನದಲ್ಲಿ, ನಿದ್ರಿಸುವ ಜಾಗದಲ್ಲಿ ಊಟ ಮಾಡಬಾರದು. ಕೈಯಲ್ಲಿಟ್ಟುಕೊಂಡು ಅನ್ನವನ್ನು ತಿನ್ನಬಾರದು. ಒದ್ದೆಬಟ್ಟೆಯುಟ್ಟೂ ಊಟಮಾಡಬಾರದು. ಕೈಗಳನ್ನು ಹೊರಗೆ ಹರಡಿಕೊಂಡು ಊಟ ಮಾಡಬಾರದು. ಜನಿವಾರವನ್ನು ಸವ್ಯದಲ್ಲಿಟ್ಟುಕೊಂಡೇ ಊಟ ಮಾಡಬೇಕು. ಪಾದರಕ್ಷೆಗಳನ್ನು ಧರಿಸಿ ಊಟ ಮಾಡಬಾರದು. ಅನ್ನದ ಮುದ್ದೆ, ನೀರು, ಕಂದಮೂಲಗಳು, ಸ್ವಲ್ಪ ತಿಂದು ಮಿಕ್ಕಿದ್ದನ್ನು ಇಟ್ಟು ಮತ್ತೆ ಅದನ್ನು ತಿನ್ನುವವನು ಉಚ್ಚಿಷ್ಟವನ್ನು ತಿಂದವನಾಗುತ್ತಾನೆ. ಸ್ನಾನ ಮಾಡದೆ ಊಟ ಮಾಡಬಾರದು. ಸ್ನಾನವಿಲ್ಲದವನು ಹೋಮವನ್ನೂ ಮಾಡಬಾರದು. ರೋಗವಿಲ್ಲದೆ, ಸ್ನಾನಮಾಡದೆ ಊಟ ಮಾಡುವವನು ಕೀಟಕಗಳನ್ನು ತಿಂದವನಾಗುತ್ತಾನೆ. ಎಲೆಯ ಹಿಂಭಾಗದಲ್ಲಿ ಅನ್ನವಿಟ್ಟುಕೊಂಡು ತಿನ್ನಬಾರದು. ದೀಪವನ್ನು ಬೆಳಗಿಸದೆ ಅಂಧಕಾರದಲ್ಲಿಯೇ ಊಟ ಮಾಡುವ ಆರೋಗ್ಯವಂತನು ಹುಳುಗಳನ್ನು ತಿನ್ನುವವನೇ! ಊಟದ ಮಧ್ಯೆ ದೀಪ ಆರಿಹೋದರೆ ಸೂರ್ಯನನ್ನು ಸ್ಮರಿಸಿ, ಮತ್ತೆ ದೀಪವನ್ನು ಹಚ್ಚಿ, ನಂತರವೇ ಊಟ ಮಾಡಬೇಕು. (ತನ್ನ)ಪಾತ್ರೆಯಲ್ಲಿರುವ ಅನ್ನವನ್ನೇ ತಿನ್ನಬೇಕು. ಇನ್ನೊಂದು ಪಾತ್ರೆಯಲ್ಲಿರುವ ಅನ್ನವನ್ನು ತೆಗೆದುಕೊಂಡು ತಿನ್ನುವವನು ದೋಷಯುಕ್ತನಾಗುತ್ತಾನೆ. ಅನ್ನದಲ್ಲಿ ಕೂದಲು ಕಾಣಿಸಿದರೆ ಆ ಅನ್ನವನ್ನು ಬಿಟ್ಟುಬಿಡಬೇಕು. ಊಟ ಮಾಡುತ್ತಾ ಕಥೆಗಳನ್ನು ಹೇಳಬಾರದು. ದಿಕ್ಕುಗಳನ್ನೂ, ಆಕಾಶವನ್ನೂ ನೋಡಬಾರದು. ಹೆಂಡತಿಗೆ ಮಿಗಿಸದೇ ಊಟ ಮಾಡುವುದು ದೋಷವು. ಶೂನ್ಯಗೃಹದಲ್ಲಿ ಊಟ ಮಾಡಬಾರದು. ನೀರಿನ ಸಮೀಪದಲ್ಲಿ ಸಂಧ್ಯಾಸಮಯದಲ್ಲಿ ಊಟ ಮಾಡಬಾರದು. ಕಲ್ಲಿನ ಮೇಲೆ ಪಾತ್ರೆಯಿಟ್ಟು ಎಂದಿಗೂ ಊಟ ಮಾಡಬಾರದು. ಊಟ ಮಾಡುವವನು ಬಡಿಸುವ ಸ್ತ್ರೀಯ ಮುಖವನ್ನು ನೋಡಬಾರದು. ಒಂದೇ ಮನೆಯಲ್ಲಿ, ಒಂದೇ ಸಮಯದಲ್ಲಿ ಹೆಂಡತಿಯೊಡನೆ ಊಟ ಮಾಡುವ ಮಾನವನು, ಮತ್ತೊಂದು ಪಾತ್ರೆಯಲ್ಲಿ ಊಟ ಮಾಡಿದರೂ, ಉಚ್ಚಿಷ್ಟ ದೋಷವನ್ನು ಹೊಂದುತ್ತಾನೆ. ಬಟ್ಟೆಯಿಂದ ನೀರು ಕುಡಿಯುವವನಿಗೆ ನಿಶ್ಚಯವಾಗಿಯೂ ದೋಷ ಬರುತ್ತದೆ. ಬಟ್ಟೆಯಲ್ಲಿ ಊಟ ಮಾಡಿದರೂ ಘೋರ ನರಕವನ್ನು ಹೊಂದಿ ನಾಯಿಯಾಗಿ ಜನಿಸುತ್ತಾನೆ. ಶಬ್ದ ಮಾಡುತ್ತಾ ನೀರು ಕುಡಿಯುವುದು, ಫೂತ್ಕಾರಗಳೊಡನೆ ಪಾಯಸಾದಿಗಳನ್ನು ತಿನ್ನುವುದೂ ಸುರಾಪಾನಕ್ಕೆ ಸಮಾನ. ನಿಂತು ನೀರು ಕುಡಿಯುವುದು, ನೀರಿನಲ್ಲಿ ಪ್ರವೇಶಿಸಿ ಬಾಯಿಂದ ನೀರು ಕುಡಿಯುವುದು ಮದ್ಯಪಾನಕ್ಕೆ ಸಮಾನವು. ಹಾಗೆಯೇ ಬೊಗಸೆ ಹಿಡಿದು ನೀರು ಕುಡಿಯುವುದೂ ಮದ್ಯಪಾನಕ್ಕೆ ಸಮಾನ. ಎಡಕೈಯಲ್ಲಿ ಪಾತ್ರೆ ಹಿಡಿದು ನೀರು ಕುಡಿಯುವುದೂ ಮದ್ಯಪಾನದಂತಹುದೇ! ಬೇರೆ ಬೇರೆ ಪಾತ್ರೆಗಳಲ್ಲಿ ಅನ್ನವನ್ನು ಇಡಬಾರದು. (ಊಟ ಮಾಡುವಾಗ) ರಜಸ್ವಲೆಯರನ್ನು ನೋಡಬಾರದು. ಭೋಜನ ಸಮಯದಲ್ಲಿ ನಾಯಿ, ಚಂಡಾಲ, ಹೀನ ಜಾತಿಯವರನ್ನು ಕೂಡಾ ನೋಡಬಾರದು. ಊಟದ ಸಮಯದಲ್ಲಿ ಅಂತಹವರನ್ನು ನೋಡಿದರೂ, ಅವರ ಶಬ್ದ/ಮಾತು ಕೇಳಿಸಿದರೂ, ಬಾಯಲ್ಲಿದ್ದ ಅನ್ನವನ್ನು ಉಗುಳಿ ಊಟ ಬಿಟ್ಟು ಏಳಬೇಕು.

ಬೀಸುವ ಕಲ್ಲು, ರುಬ್ಬುಗುಂಡು, ಒರಳುಕಲ್ಲು ಮುಂತಾದುವುಗಳ ಶಬ್ದ ಕೇಳಿ ಬಂದಾಗ, ಶಬ್ದ ಕೇಳಿಸುತ್ತಿರುವವರೆಗೂ ಊಟ ಮಾಡಬಾರದು. ಜಗಳ ಬಂದಾಗ ಅಪಶಬ್ದಗಳು (ಬೈಗಳು) ಕೇಳಿಸುತ್ತಿರುವವರೆಗೂ ಊಟ ನಿಲ್ಲಿಸಬೇಕು. ಪಂಕ್ತಿಯಲ್ಲಿ ಅಪರಿಚಿತ ವ್ಯಕ್ತಿ ಕಂಡುಬಂದರೆ ಎಂದಿಗೂ ಅಲ್ಲಿ ಕುಳಿತು ಊಟ ಮಾಡಬಾರದು. ಅಜ್ಞಾತ ವ್ಯಕ್ತಿಯೊಡನೆ ಸಹಪಂಕ್ತಿಯಿಂದ ಬರುವ ದೋಷವನ್ನು ಹೋಗಲಾಡಿಸುವುದಕ್ಕೆ ಭಸ್ಮದಿಂದ ಪಂಕ್ತಿಯನ್ನು ಬೇರೆ ಮಾಡಬೇಕು. ದ್ವಾರಮಾರ್ಗವನ್ನು ಏರ್ಪಡಿಸಿಕೊಂಡು, ಸ್ತಂಭವನ್ನು ಅಡ್ಡವಿಟ್ಟುಕೊಂಡು, ನೀರಿನ ಧಾರೆಯಿಂದ ಪಂಕ್ತಿಯನ್ನು ಬೇರ್ಪಡಿಸಿ ಊಟ ಮಾಡಬೇಕು. ಪಂಕ್ತಿ ಬೇಧ ಮಾಡಿದರೆ ಇಂತಹ ದೋಷ ಸಂಭವಿಸದು. ಕಪ್ಪು ಸೀರೆಯುಟ್ಟ ಸ್ತ್ರೀ ಅನ್ನವನ್ನು ಬಡಿಸಿದರೆ ಆ ಅನ್ನವು ದೋಷವನ್ನುಂಟುಮಾಡುತ್ತದೆ. ಕಚ್ಚೆಹಾಕದೆ ಸೀರೆಯುಟ್ಟು ಬಡಿಸಿದರೂ ಅನ್ನವು ಉಚ್ಚಿಷ್ಟದಂತಹುದೇ ಆಗುತ್ತದೆ. ಹೀಗೆ ಎಲ್ಲ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು/ವಿಮರ್ಶಿಸಿಕೊಂಡು ವಿದ್ವಾಂಸನಾದವನು ಉತ್ತಮವಾದ ಭೋಜನವನ್ನು ಮಾಡಬೇಕು. "ವಿಕಿರಿದ ವಿಲೋಹಿತ_______"ಎನ್ನುವ ರುದ್ರ ಮಂತ್ರದಿಂದ ಉಚ್ಚಿಷ್ಟ ಶೇಷವನ್ನು ಅಭಿಮಂತ್ರಿಸಬೇಕು. ಎಲ್ಲ ಮಂತ್ರಗಳಿಗೂ ಋಷಿ, ಛಂದಸ್ಸು, ದೇವತೆ, ಮಂತ್ರವಿನಿಯೋಗಗಳನ್ನು ಸ್ಮರಿಸಿ ಕರ್ಮವಾಚರಿಸಬೇಕು. ಮಂತ್ರಿತವಾದ ಅನ್ನವನ್ನು ಪಾತ್ರೆಯ ಹೊರಗೆ, ಭೂಮಿಯಮೇಲೆ, ಉಚ್ಚಿಷ್ಟವನ್ನು ಪಡೆಯುವ ಜೀವಿಗಳಿಗಾಗಿ ಹಾಕಿ, ನಂತರ ಉತ್ತರಾಪೋಶನ ತೆಗೆದುಕೊಳ್ಳಬೇಕು. ಉತ್ತರಾಪೋಶನಕ್ಕೆ ತೆಗೆದುಕೊಂಡ ನೀರಿನಲ್ಲಿ ಸ್ವಲ್ಪ ಉಚ್ಚಿಷ್ಟಾನ್ನದ ಮೇಲೆ ಹಾಕಬೇಕು. ಇದಕ್ಕೆ "ರೌರವೇ ಅಪುಣ್ಯ ನಿಲಯೇ__________" ಎನ್ನುವ ಮಂತ್ರವನ್ನು ಹೇಳಬೇಕು. ಹೊರಗೆ ಹೋಗಿ ಪುಕ್ಕಳಿಸಿ ಕೈ ತೊಳೆದುಕೊಳ್ಳಬೇಕು. ಮೊದಲು ಗಂಡೂಷ(ಪುಕ್ಕಳಿಸುವುದು)ಮಾಡದೆ ಕೈ ತೊಳೆದುಕೊಳ್ಳುವುದು ಆತ್ಮಹತ್ಯೆಯೇ!

ಮುಖಪ್ರಕ್ಷಾಳನ ಮಾಡಿಕೊಳ್ಳುವಾಗ ತೋರುಬೆರಳಿನಿಂದ ಬಾಯಿ ಶುಭ್ರ ಮಾಡಬಾರದು. ಮಧ್ಯದ ಬೆರಳಿನಿಂದ ಶುಭ್ರಪಡಿಸಬೇಕು. ಇಲ್ಲದಿದ್ದರೆ ರೌರವ ನರಕವೇ! ಕೈಗಳನ್ನು ಚೆನ್ನಾಗಿ ತೊಳೆದು, ಹಲ್ಲುಗಳನ್ನು ಶುಭ್ರವಾಗಿ ತೊಳೆಯಬೇಕು. ಕೈಯಿಂದ ಪವಿತ್ರವನ್ನು ತೆಗೆದು ನೈರುತ್ಯ ದಿಕ್ಕಿನಲ್ಲಿ ಹಾಕಬೇಕು. ನಂತರ ಪಾದಗಳನ್ನು ಶುಭ್ರ ಮಾಡಿಕೊಂಡು, ಆಚಮನ ಮಾಡಿ, ಕೈಯಿಂದ ಎತ್ತಿದ ನೀರನ್ನು, "ಅಂಗುಷ್ಠ______" ಎನ್ನುವ ಮಂತ್ರದಿಂದ ಜಪಿಸಿ ಎರಡೂ ಕಣ್ಣುಗಳಲ್ಲಿ ಚುಮುಕಿಸಕೊಳ್ಳಬೆಕು. ಹೀಗೆ ಮಾಡದವನಿಗೆ ಕಣ್ಣು ಬೇನೆ ಬರುವುದು. ಕೈನೀರನ್ನು ಕಣ್ಣುಗಳ ಮೇಲೆ ಚುಮುಕಿಸಿಕೊಳ್ಳುವವನು ಸುದರ್ಶನ (ಚೆನ್ನಾಗಿ ನೋಡುವವನು) ಆಗುತ್ತಾನೆ. ಅನಂತರ ಎರಡುಬಾರಿ ಆಚಮನ ಮಾಡಿ, "ಅಯಂಗೌಃ_______" ಎನ್ನುವ ಮಂತ್ರವನ್ನು ಯಥೋಕ್ತವಾಗಿ ಜಪಿಸಬೇಕು. "ದುಪದಾದಿ____" ಎಂದೂ, ಪ್ರಾಣಾನಾಂ ಗ್ರಂಥಿರಸಿ______" ಎಂದೂ, ಎರಡು ಮಂತ್ರಗಳನ್ನು ಕೂಡಾ ಜಪಿಸಬೇಕು. ಈ ಮಂತ್ರಗಳನ್ನು ಜಪಿಸಿ, ದ್ವಿಜೋತ್ತಮನು ಕೂತು ನಾಭಿಯನ್ನು ಸ್ಪರ್ಶಿಸಬೇಕು. ಆ ನಂತರ ಎರಡುಸಲ ಆಚಮನ ಮಾಡಿ, ಅಗಸ್ತ್ಯ, ಕುಂಭಕರ್ಣ, ಬಡಬಾಗ್ನಿ, ವಾತಾಪಿಯರನ್ನು ಸ್ಮರಿಸಿ, "ಶರ್ಯಾತಿಂ_________" ಎನ್ನುವ ಮಂತ್ರವನ್ನು ದ್ವಿಜನು ಜಪಿಸಬೇಕು. ನಂತರ ತಂದೆ ಬದುಕಿರುವವನು ಎರಡೂ ಕೈಗಳನ್ನು ಅಗ್ನಿಯ ಮೇಲೆ ಹಿಡಿದು ಕಾಯಿಸಿಕೊಳ್ಳಬೇಕು. ದೊಡ್ಡಣ್ಣನಾದರೆ ವಸ್ತ್ರದಿಂದ ಒರೆಸಿಕೊಳ್ಳಬೇಕು. ಅದಾದನಂತರ ಶ್ರೀಗುರುವು, ಕುಲದೈವಗಳನ್ನು ಸ್ಮರಿಸಬೇಕು. ಬ್ರಾಹ್ಮಣರಿಗೆ ಭೋಜನ ವಿಧಾನವಿದು." ಎಂದು ಶ್ರೀಗುರುವು ಬ್ರಾಹ್ಮಣನಿಗೆ ಹೇಳಿದರು. ಹಾಗೆ ಹೇಳಿದ ಗುರೂಪದೇಶವನ್ನು ಕೇಳಿದ ಆ ಬ್ರಾಹ್ಮಣ, "ಭೋಜನ ವಿಧಿಯನ್ನು ಕೇಳಿದೆ. ನಿಷಿದ್ಧಾನದ ವಿಷಯವನ್ನು ಹೇಳಬೇಕೆಂದು ಕೋರುತ್ತೇನೆ." ಎನ್ನಲು, ಸಂತುಷ್ಟನಾಗಿ ಶ್ರೀಗುರುವು ಹೇಳಿದರು.

"ವೈಶ್ವದೇವ ಮಾಡದ ಅನ್ನ, ಉಪ್ಪು ಖಾರಗಳನ್ನು ಹೆಚ್ಚಾಗಿ ಹಾಕಿದ ಪದಾರ್ಥಗಳಿಂದ ಕೂಡಿದ ಅನ್ನ, ಒಂದೇಕಡೆಯಲ್ಲಿ ಬಹಳ ಜನಕ್ಕಾಗಿ ಮಾಡಿದ ಅಡಿಗೆ ಇವನ್ನು ಬಿಟ್ಟುಬಿಡಬೇಕು. ಬಿಳಿಬದನೆ, ಬೆಳ್ಳುಳ್ಳಿ, ಈರುಳ್ಳಿ, ಅಣಬೆಗಳನ್ನು ಉಪಯೋಗಿಸಿ ಮಾಡಿದ ಅಡಿಗೆ, ನೀಚರು ಮಾಡಿದ ಅಡಿಗೆ, ಇವು ನಿಷಿದ್ಧವು. ಮೂರು ದಿನಗಳವರೆಗೂ ಹೊಸ ನೀರು, ಹಸು, ಮೇಕೆ ಮುಂತಾದವು ಕರುಹಾಕಿದ ಹತ್ತು ದಿನಗಳವರೆಗೂ ಅವುಗಳ ಹಾಲು, ಸೀದುಹೋದ ಅನ್ನ ಇವನ್ನೂ ವರ್ಜಿಸಬೇಕು. ಉಗುರು/ಕೂದಲುಗಳಿಂದ ಕೂಡಿದ ಅನ್ನ, ಹದ್ದು, ಕೋಳಿ, ಕಾಗೆ, ಬೆಕ್ಕು ಇವುಗಳು ಮುಟ್ಟಿದ ಅನ್ನ ಇವನ್ನೂ ವರ್ಜಿಸಬೇಕು. ಹಸು, ಇಲಿಗಳು ಮುಟ್ಟಿದ ಅನ್ನ, ಕೆಳಗೆ ಬಿದ್ದ ಅನ್ನ, ಉಚ್ಚಿಷ್ಟ ತಗುಲಿದ ಅನ್ನ, ಇವನ್ನೂ ಬಿಡಬೇಕು. ಸೌಟಿನಲ್ಲಿ ಬಡಿಸಬೇಕಾದ್ದನ್ನು ಕೈಯಲ್ಲಿ ಬಡಿಸಿದರೆ ಅದನ್ನೂ ಬಿಟ್ಟುಬಿಡಬೇಕು. ತುಪ್ಪ ಕಲಿಸಿದ, ಎಣ್ಣೆ,ತುಪ್ಪ, ಹಾಲುಗಳಿಂದ ಮಾಡಿದ ಪದಾರ್ಥಗಳಾದರೂ ರಾತ್ರಿ ಇಟ್ಟಿದ್ದರೆ ಅವು ವರ್ಜ್ಯವು. ಬ್ರಾಹ್ಮಣನು ಮಾರಿದ ಹಾಲನ್ನು ಬಿಡಬೇಕು. ಅಗ್ನಿಯಲ್ಲಿ ಸುಟ್ಟ ಅನ್ನ ಕೆಲಸಕ್ಕೆ ಬರುವುದಿಲ್ಲ. ಉದ್ದಿನಿಂದ ಮಾಡಿದ ಪದಾರ್ಥ, ವಡೆ, ಅರಳು, ಹುರಿಹಿಟ್ಟು ಪರ್ಯುಷಿತಗಳಲ್ಲ. ಮಿಕ್ಕ ಪರ್ಯುಷಿತಗಳು ನಿಷಿದ್ಧ. ಕಂದಮೂಲಗಳು, ಬೆಲ್ಲ ಮುಂತಾದವುಗಳೊಡನೆ ಸೇರಿಸಿ ಬೇಯಿಸಿದ ಪರಮಾನ್ನವು ರಾತ್ರಿ ಕಳೆದಮೇಲೆ ಉಪಯೋಗಕ್ಕೆ ಬರುವುದಿಲ್ಲ. ಪರ್ಯುಷಿತದೋಷಗಳಿಲ್ಲದಿರುವವನ್ನು ಜಾಗ್ರತೆಯಾಗಿ ಕಾಪಾಡಬೇಕು. ಅಶುಚಿ ಸೋಕಿದ ಪದಾರ್ಥವನ್ನು ಬಿಡಬೇಕು. ಎಣ್ಣೆ ಕಲಸಿ ಮಾಡಿದ ಭಕ್ಷ್ಯಾದಿಗಳನ್ನು ಹಗಲು ಮಾತ್ರ ತಿನ್ನಬೇಕು. ರಾತ್ರಿಹೊತ್ತು ಎಣ್ಣೆ ಮಿಶ್ರಿತಾನ್ನವನ್ನು ವಿಸರ್ಜಿಸಬೇಕು. ನೆಲ್ಲಿಕಾಯಿ, ಕುಂಬಳ, ಪಡವಲಕಾಯಿ, ಗೆಡ್ಡೆಗೆಣಸು ಪಾಡ್ಯಮಿಯಂದು ತಿನ್ನಬಾರದು. ಸ್ವರ್ಗ-ಮೋಕ್ಷಗಳನ್ನು ಕೋರುವವನು ಅತ್ತಿಹಣ್ಣನ್ನು ಅಷ್ಟಮಿಯಂದು ತಿನ್ನಬಾರದು. ನೆಲ್ಲಿಕಾಯಿ ರಾತ್ರಿಹೊತ್ತಿನಲ್ಲಿ, ಸಪ್ತಮಿಯಂದು, ಭಾನುವಾರದಂದು, ತಿನ್ನಬಾರದು. ಬಿಲ್ವದ ಹಣ್ಣು ಶುಕ್ರವಾರದಂದು, ನೇರಳೆಹಣ್ಣು ಶನಿವಾರದಂದು ತಿನ್ನುವವನಿಂದ ಲಕ್ಷ್ಮಿ ದೂರವಾಗುತ್ತಾಳೆ. ರಾತ್ರಿಯಲ್ಲಿ ನೆಲ್ಲಿಕಾಯಿ ತಿಂದವನ ಪ್ರಜ್ಞೆ ನಾಶವಾಗುತ್ತದೆ. ಸಪ್ತಮಿ, ಭಾನುವಾರಗಳಂದು ನೆಲ್ಲಿಕಾಯಿ ತಿಂದರೆ ವೀರ್ಯನಾಶವಾಗುವುದು. ಬ್ರಾಹ್ಮಣನಿಗೆ ತಾಂಬೂಲ, ಅಡಿಕೆ ಹೋಳು, ಸುಣ್ಣವನ್ನು ಸೇರಿಸಿ ಕೊಟ್ಟು, ನಂತರ ತಾನು ತಿನ್ನಬೇಕು. ಒಂದು ಅಡಿಕೆ ಕೊಟ್ಟರೆ ಸುಖ. ಎರಡು ಕೊಟ್ಟರೆ ನಿಷ್ಫಲ. ಮೂರು ಮಹಾಭಾಗ್ಯದಾಯಕವು. ನಾಲ್ಕು ಕೊಟ್ಟರೆ ದುಃಖದಾಯಕವು. ಐದು ಕೊಟ್ಟರೆ ಆಯುರ್ವೃದ್ಧಿ. ಆರು ಕೊಟ್ಟರೆ ಮೃತ್ಯುಪ್ರದವು. ವಿಳ್ಳೇದೆಲೆಯ ಮೂಲವನ್ನು ತೆಗೆಯದೆ ತಿಂದರೆ ವ್ಯಾಧಿಕರವು. ಕೊನೆಯನ್ನು ತಿಂದರೆ ಪಾಪವುಂಟಾಗುವುದು. ಭಿನ್ನವಾದ/ಅಪೂರ್ಣ ಎಲೆಯನ್ನು ತಿಂದರೆ ಹಾನಿಕರವು. ಎಲೆಯ ಹಿಂಭಾಗದ ನಾರನ್ನು ತೆಗೆಯದೆ ತಿಂದರೆ ಬುದ್ಧಿನಾಶ. ಎರಡು ಎಲೆಗಳಿಂದ ಮಾಡಿದ ತಾಂಬೂಲದಿಂದ ಐಶ್ವರ್ಯ ನಾಶ. ಎಲೆಯಿಲ್ಲದೆ ಬರಿಯ ಅಡಿಕೆ ಬಾಯಲ್ಲಿ ಹಾಕಿಕೊಂಡವನು (ತಿಂದವನು) ಸುಖವಂಚಿತನಾಗುತ್ತಾನೆ. ಅದರಿಂದ ಏಳು ಜನ್ಮಗಳಲ್ಲಿ ದಾರಿದ್ರ್ಯ, ಕೊನೆಗೆ ಅಜ್ಞಾನ ಬರುತ್ತದೆ. ಯತಿ, ಬ್ರಹ್ಮಚಾರಿ, ವಿಧವೆ, ರಜಸ್ವಲೆಯಾದವಳು ತಾಂಬೂಲವನ್ನು ತಿಂದರೆ ಮಾಂಸತಿಂದರೆ/ಮದ್ಯಪಾನಮಾಡಿದರೆ ಉಂಟಾಗುವ ದೋಷಕ್ಕೆ ಸಮಾನವಾದ ದೋಷ ಉಂಟಾಗುತ್ತದೆ.

ನಂತರ ಪುರಾಣಾದಿಗಳ ಶ್ರವಣ ಮಾಡಿ ಸಂಧ್ಯಾವಂದನೆ ಮಾಡಬೇಕು. ಸೂರ್ಯಾಸ್ತಮಯಕ್ಕೆ ಮುಂಚೆಯೇ, ಕೂತು, ಮೂರುಸಲ, ಅರ್ಘ್ಯ ಕೊಡಬೇಕು. ಕಾಲಾತೀತವಾದರೆ ನಾಲ್ಕನೆಯ ಅರ್ಘ್ಯ ಕೊಡಬೇಕು. ಬ್ರಾಹ್ಮಣನು ಗಾಯತ್ರಿ ಜಪಮಾಡಿ ವರುಣನ ಮಂತ್ರಗಳಿಂದ ಉಪಸ್ಥಾನ ಮಾಡಬೇಕು. ಹಿಂದಿನಂತೆ ಗುರುಗಳಿಗೆ ಅಭಿನಂದನ ಮಾಡಿ ಯಥಾವಿಧಿಯಾಗಿ ಹೋಮಮಾಡಿ, ಇಷ್ಟವಾದರೆ ಭುಜಿಸಬೇಕು. ರಾತ್ರಿಯಲ್ಲಿ ಕ್ಷೀರಮಿಶ್ರಿತ ಅನ್ನ ಉತ್ತಮವು. ಹಿಂದಿನಂತೆಯೇ "ಋತುತ್ವಾ_______" ಎನ್ನುವ ಮಂತ್ರದಿಂದ ಪರಿಷೇಚನ ಮಾಡಿ ಬ್ರಾಹ್ಮಣನು ಹಿಂದೆ ಹೇಳಿದಂತೆ ಊಟ ಮಾಡಬೇಕು. ದ್ವಿಜನಾದವನು ರಾತ್ರಿ ಒಂದು ಝಾಮದವರೆಗೂ ವೇದಾಭ್ಯಾಸ ಮಾಡಬೇಕು. ಅನಂತರ ಎಲ್ಲವನ್ನೂ ಶ್ರೀಹರಿಗೆ ಅರ್ಪಣಮಾಡಿ ಶಯನ ಮಾಡಬೇಕು.

ಶಯನ ವಿಧಾನವನ್ನು ಹೇಳುತ್ತೇನೆ. ನಿರ್ಮಲವಾದ ಮಂಚವನ್ನು ಹಾಕಿಕೊಳ್ಳಬೇಕು. ಮೂರು ಕಾಲಿನ ಮಂಚ, ಮುರಿದ ಮಂಚಗಳು ಉಪಯೋಗಿಸಬಾರದು. ಅತ್ತಿ, ಆಲ, ಮರದಿಂದ ಮಾಡಿದ ಮಂಚವು ನಿಂದ್ಯವು. ಘಟ್ಟಿಯಾದ ಮರದಿಂದ ಮಂಚ ಮಾಡಬೇಕು. ನೇರಳೆಯ ಮರ ದೂಷ್ಯ. ಆನೆಯ ದಂತಗಳು ಇಲ್ಲವೇ ಮೂಳೆಗಳಿಂದ ಮಾಡಿದ ಮಂಚ, ಶಿಥಿಲವಾದ ಮರದಿಂದ ಮಾಡಿದ ಮಂಚ ನಿಂದ್ಯವು. ಸುಮುಹೂರ್ತದಲ್ಲಿ ಶುಭ ಸಮಯದಲ್ಲಿ ಮಂಚವನ್ನು ಮಾಡಿಸಬೇಕು. ಧನಿಷ್ಠ, ಭರಣಿ, ಮೃಗಶಿರ ನಕ್ಷತ್ರಗಳಲ್ಲಿ ಮಂಚ ಮಾಡಿಸಬಾರದು. ಭಾನುವಾರ ಮಂಚ ಮಾಡಿಸುವುದರಿಂದ ಮಹಾಲಾಭವು. ಸೋಮವಾರ ಸುಖ. ಮಂಗಳವಾರ ಮಹಾದುಃಖ. ಬುಧವಾರ ಮಹಾಪೀಡೆ. ಗುರುವಾರ ಆರು ಪುತ್ರರ ಲಾಭ ಎಂದು ಮುನಿಗಳು ಹೇಳಿದ್ದಾರೆ. ಶುಕ್ರವಾರವೂ ಪುತ್ರ ಲಾಭವೇ! ಶನಿವಾರ ಮೃತ್ಯು ಎಂದಿದ್ದಾರೆ. ಮನೆಯಲ್ಲಿ ಪೂರ್ವದಿಕ್ಕಿಗೆ ತಲೆಯಿಟ್ಟು ನಿದ್ರಿಸಬೇಕು. ಅತ್ತೆಯ ಮನೆಯಲ್ಲಿ ಉತ್ತರ ದಿಕ್ಕಿಗೆ ಕಾಲುಗಳಿಟ್ಟು ಮಲಗಬೇಕು. ಪ್ರವಾಸ ಮಾಡುವಾಗ ಪಶ್ಚಿಮಕ್ಕೆ ತಲೆಯಿಟ್ಟು ಮಲಗಬೇಕು. ಇದು ಶಯನವಿಧಿ. ಎಂದಿಗೂ ದಕ್ಷಿಣಕ್ಕೆ ಕಾಲಿಟ್ಟು ಮಲಗಬಾರದು. ಮೂಲೆಗಳಿಗೆ ಪಾದಗಳು ತೋರುವಂತೆಯೂ ಕೂಡಾ ಮಲಗಬಾರದು. ತಲೆಯ ಹತ್ತಿರ ಮಂಗಳದ್ರವ್ಯ ಸಹಿತವಾದ ನೀರು ಪಾತ್ರೆ ಇಡಬೇಕು. ರಾತ್ರಿಸೂಕ್ತವನ್ನು ಪಠಿಸಿ, ಭಯವನ್ನು ಹೋಗಲಾಡಿಸುವ ವಿಷ್ಣು ಸ್ಮರಣೆ ಮಾಡಬೇಕು. ಅಗಸ್ತ್ಯ, ಮಾಧವ, ಮುಕುಂದ, ಆಸ್ತಿಕ, ಕಪಿಲರನ್ನೂ ಕೂಡಾ ಸ್ಮರಿಸಿ, ಆ ನಂತರ ಸರ್ಪಸ್ತುತಿ ಮಾಡಬೇಕು. ನಿದ್ರೆಗೆ ನಿಷಿದ್ಧವಾದ ಸ್ಥಾನಗಳನ್ನು ಕುರಿತು ಹೇಳುತ್ತೇನೆ, ಕೇಳು. ಜೀರ್ಣಗೃಹ, ವೃಕ್ಷದಲ್ಲಿ (ನೆರಳು), ಜೀರ್ಣದೇವಾಲಯಗಳಲ್ಲಿ, ಮಲಗಬಾರದು. ದೇವರ ಎದುರಿಗೆ, ನಾಲ್ಕು ದಾರಿಗಳು ಸೇರುವ ಸ್ಥಳದಲ್ಲಿ, ತಂದೆತಾಯಿಗಳು ಮಲಗುವ ಸ್ಥಳದಲ್ಲಿ, ಹುತ್ತದ ಹತ್ತಿರ, ನೀರಿನ ಹತ್ತಿರ, ಕೆರೆಗೆ ಎದುರಾಗಿ, ನದಿಗಳಲ್ಲಿ(ಹತ್ತಿರ), ಭಯಂಕರ ಸ್ಥಳಗಳಲ್ಲಿ ಕೂಡಾ ಮಲಗಬಾರದು. ಸಿಹಿತಿಂಡಿಗಳ ಹತ್ತಿರ, ಧಾನ್ಯದಲ್ಲಿ, ಭಗ್ನಗೃಹದಲ್ಲಿ, ಗುರುಗಳ ಸಮೀಪದಲ್ಲಿ ಮಂಚದ ಮೇಲೆ ಮಲಗಬಾರದು. ದಿಗಂಬರನಾಗಿ, ತಲೆಗೆ ಬಟ್ಟೆ ಸುತ್ತಿಕೊಂಡು, ಒದ್ದೆಬಟ್ಟೆ ಉಟ್ಟು, ಆಕಾಶದ ಕೆಳಗೆ (ಬಟ್ಟ ಬಯಲಿನಲ್ಲಿ), ದೀಪದ ಹತ್ತಿರ ಮಲಗಬಾರದು. ರಾತ್ರಿ ಮೊದಲನೆಯ ಝಾಮದಲ್ಲಿ, ಕೊನೆಯ ಝಾಮದಲ್ಲಿ ರಜಸ್ವಲೆಯಾದವಳ ಎದುರಿಗೆ ಮಲಗಬಾರದು. ನಾಲ್ಕನೆಯ ಝಾಮದಲ್ಲಿಯೂ ಕೂಡಾ ಶಯನ ನಿಷಿದ್ಧ. ಜನಿವಾರವನ್ನು ಎಡ ಭುಜದ ಮೇಲೆ ಹಾಕಿಕೊಂಡು ನಿದ್ರಿಸಬೇಕು. ಸ್ತ್ರೀ ಅವಯವ ದರ್ಶನದಿಂದ ಆಯುಕ್ಷಯವು. ಆದ್ದರಿಂದ ದ್ವಿಜನು ಶಯನಕಾಲದಲ್ಲಿ ದೀಪ ಆರಿಸಿ ಮಲಗಬೇಕು. ನೀಲವಸ್ತ್ರ ಧರಿಸಿದ ಸ್ತ್ರೀಗೆ ಪಿಂಡೋತ್ಪತ್ತಿಯಾದರೆ ಆ ಪಿಂಡವು ಚಂಡಾಲಸಮವಾದದ್ದು. ಆದ್ದರಿಂದ ಬಿಳಿಯ ವಸ್ತ್ರ ಧರಿಸಿ ಮಲಗುವುದು ಮೇಲು. ರಜೋದರ್ಶನವಾಗದೆ ಸಂಗಮವು ಪ್ರಯೋಜನವಿಲ್ಲ. ರಜಸ್ವಲೆಯಾಗದೆ, ಸಂಸ್ಕಾರಮಾಡಿ, ಭಾರ್ಯಗಮನ ಮಾಡಿದರೆ ದೋಷವುಂಟಾಗುತ್ತದೆ. ಕನ್ಯೆ ರಜಸ್ವಲೆಯಾಗುವುದು ಹತ್ತು ವರ್ಷಗಳಾದ ನಂತರ. ಕನ್ಯಾ ವಿವಾಹ ಅದಕ್ಕಿಂತ ಮುಂಚೆಯೇ ಮಾಡುವುದು ಸರ್ವ ಋಷಿಸಮ್ಮತ. ಋತುಕಾಲವನ್ನು ದಾಟಿದ ನಂತರ, ಗ್ರಾಮಾಂತರಗಳಿಗೆ ಹೋಗುವ ದ್ವಿಜನು ಭ್ರೂಣಹತ್ಯಾದೋಷಕ್ಕೆ ಗುರಿಯಾಗುತ್ತಾನೆ. ಬಂಜೆ, ಬಹುಪುತ್ರಳು, ವೃದ್ಧಳಾದ ಭಾರ್ಯೆಯೊಡನೆ ಋತುಕಾಲಾತಿಕ್ರಾಂತ ದೋಷವು ಇಲ್ಲ. ಸಂಸಾರ ವಿರಕ್ತನಿಗೆ ಅಂತಹ ದೋಷವಿಲ್ಲ. ನಾಲ್ಕನೆಯ ದಿನ ಸಂಗಮದಿಂದ ಅಲ್ಪಾಯುವಾದ ಪುತ್ರ ಹುಟ್ಟುತ್ತಾನೆ. ಐದನೆಯ ದಿನ ಕನ್ಯೆ, ಆರನೆಯ ದಿನ ಪುತ್ರ ಹುಟ್ಟುತ್ತಾರೆ. ಬೆಸದಿನಗಳಲ್ಲಿ ಕನ್ಯೆ. ಸರಿದಿನಗಳಲ್ಲಿ ಪುತ್ರ. ಸ್ತ್ರೀಗೆ ಹದಿನಾರು ದಿನಗಳು ಋತುಕಾಲ. ಆ ದಿನಗಳಲ್ಲಿ ಚಂದ್ರಬಲವನ್ನು ತಿಳಿದುಕೊಳ್ಳಬೇಕು. ಬುಧನು ಮೂಲ, ಮಘ, ರೇವತಿ ನಕ್ಷತ್ರಗಳಲ್ಲಿದ್ದರೆ ಸ್ತ್ರೀ ಸಂಗವನ್ನು ವರ್ಜಿಸಬೇಕು. ಇಬ್ಬರೂ ಕೋಪಗೊಳ್ಳಬಾರದು. ಇಬ್ಬರೂ ಸಂತೋಷವಾಗಿರುವುದು ಮಹಾಫಲದಾಯಕ. ಗರ್ಭದಾನ ಸಮಯದಲ್ಲಿ ಮನಸ್ಸು ಯಾವರೀತಿ ಇರುತ್ತದೆಯೋ ಪಿಂಡವೂ ಅಂತಹುದೇ ಆಗಿರುತ್ತದೆ. ಆದ್ದರಿಂದ ಒಳ್ಳೆಯದಾಗುವುದಕ್ಕೆ ಇಬ್ಬರೂ ಸತ್ವಗುಣ ಪೂರಿತರಾಗಿರಬೇಕು. ಅಂತಹ ಆಚಾರವಂತನು ದೇವತೆಗಳಿಗೂ ವಂದ್ಯನಾಗಿರುತ್ತಾನೆ. ಅವನ ಮನೆಯಲ್ಲಿ ಕಾಮಧೇನು ವಾಸಿಸುತ್ತಾಳೆ. ಅಖಂಡವಾದ ಲಕ್ಷ್ಮಿಯಿಂದೊಡಗೂಡಿ, ಪುತ್ರಪೌತ್ರಾದಿಗಳಿಂದ ಕೂಡಿ, ಆಚಾರಪರನಾದವನು, ಆನಂದಿಸುತ್ತಾನೆ. ಆಚಾರದಿಂದ ಬ್ರಾಹ್ಮಣನು ಶತಾಯುಷಿಯಾಗುತ್ತಾನೆ. ಅವನ ದೋಷಗಳೆಲ್ಲವೂ ಅಶೇಷವಾಗಿ ನಾಶವಾಗುತ್ತವೆ. ಅವನಿಗೆ ಕಲಿಕಾಲ ಭಯವಿರುವಿದಿಲ್ಲ. ಕ್ರಮಕ್ರಮವಾಗಿ ಅವನು ಜ್ಞಾನಿಯಾಗುತ್ತಾನೆ. ಅವನಿಗೆ ಅಪಮೃತ್ಯುವು ಎಂದಿಗೂ ಬರುವುದಿಲ್ಲ. ಸಕಾಲ ಮೃತ್ಯುವೇ ಸಂಭವಿಸುವುದು. ಆದ್ದರಿಂದ, ಹೇ, ದ್ವಿಜಶ್ರೇಷ್ಠ, ಸದಾಚಾರವನ್ನು ಪಾಲಿಸು" ಎಂದು ಹೇಳಿದ ಶ್ರೀಗುರುವಿನ ಮಾತುಗಳನ್ನು ಕೇಳಿ, ಆ ಬ್ರಾಹ್ಮಣ, "ಹೇ ಕೃಪಾಸಾಗರ, ಸದ್ಗುರು, ನಿನ್ನ ಉಪದೇಶವು ನನಗೆ ಲಭ್ಯವಾಯಿತು. ನಿನ್ನ ಭಕ್ತರನ್ನು ಉದ್ಧರಿಸಲು ಈ ಭೂಮಿಯಲ್ಲಿ ನೀನು ಅವತರಿಸಿದ್ದೀಯೆ." ಎಂದು ಹೇಳುತ್ತಾ, ಶ್ರೀಗುರುವಿನ ಪಾದಗಳನ್ನು ಹಿಡಿದು ಅಭಿನಂದಿಸಿದನು. ಸಂತುಷ್ಟನಾದ ಶ್ರೀಗುರುವು ಅವನಲ್ಲಿ ಪ್ರಸನ್ನನಾಗಿ, " ಅಯ್ಯಾ, ದ್ವಿಜೋತ್ತಮ, ನಿನಗೆ ಆಚಾರಗಳ ವಿಷಯವನ್ನು ಸವಿಸ್ತಾರವಾಗಿ ಹೇಳಿದ್ದೇನೆ. ಪರಾನ್ನವನ್ನು ಬಿಟ್ಟು, ಆಚಾರಗಳನ್ನು ಪಾಲಿಸುತ್ತಾ, ಸುಖವನ್ನು ಪಡೆ. ಆಗ ನಿನ್ನ ಕೋರಿಕೆಗಳೆಲ್ಲವೂ ನೆರವೇರುತ್ತವೆ. ಕನ್ಯೆಯರು, ಪುತ್ರರೊಡಗೂಡಿ ಸುಖವಾಗಿದ್ದು ನಂತರ ಮೋಕ್ಷ ಪಡೆಯುತ್ತೀಯೆ." ಎಂದು ಅನುಗ್ರಹಿಸಿದರು. ಆ ವಿಪ್ರನು ತನ್ನ ಮನೆಗೆ ಹಿಂದಿರುಗಿ, ಶ್ರೀಗುರುವು ಹೇಳಿದಂತೆ ಆಚಾರಗಳನ್ನು ಪಾಲಿಸುತ್ತಾ, ಸಕಲಾಭೀಷ್ಟಗಳನ್ನೂ ಪಡೆದನು.

ಇಂತಹ ಶ್ರೀಗುರುಚರಿತ್ರೆ ಪವಿತ್ರವಾದದ್ದು. ಇದನ್ನು ಕೇಳಿದವನು ತ್ವರೆಯಾಗಿ ಬ್ರಹ್ಮಜ್ಞಾನಿಯಾಗಬಲ್ಲನು. ಹೇ, ನಾಮಧಾರಕ, ಈ ಕಥೆ ಮನೋಹರವಾದದ್ದು. ಅಜ್ಞಾನವೆನ್ನುವ ಅಂಧಕಾರದಲ್ಲಿ ಸಿಕ್ಕಿಹಾಕಿಕೊಂಡಿರುವವರಿಗೆ ಈ ಚರಿತ್ರೆ ಬೆಳಕನ್ನು ಕೊಡುತ್ತದೆ. ಇದನ್ನು ಕೇಳಿದ ಮಾತ್ರಕ್ಕೇ ಕೋರಿಕೆಗಳೆಲ್ಲವೂ ನೆರವೇರುತ್ತವೆ. 

ಇಲ್ಲಿಗೆ ಮುವ್ವತ್ತೇಳನೆಯ ಅಧ್ಯಾಯ ಮುಗಿಯಿತು. 



Friday, June 28, 2013

||ಶ್ರೀಗುರುಚರಿತ್ರೆ - ಮುವ್ವತ್ತಾರನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| ||ಶ್ರೀಗುರುಭ್ಯೋನಮಃ||

ಶಿಷ್ಯನಾದ ನಾಮಧಾರಕನು ಸಿದ್ಧಮುನಿಯನ್ನು, "ಹೇ ಸಿದ್ಧಮುನಿಯೇ, ನೀನೇ ಭವಸಾಗರತಾರಕನು. ಬ್ರಹ್ಮಜ್ಞಾನಿಯು. ಮಾಯೆಯಿಂದ ಧೃಢವಾಗಿ ಮುಚ್ಚಿ ಹೋಗಿದ್ದ ನನ್ನನ್ನು ಶ್ರೀಗುರುಲೀಲೆಗಳೆಂಬ ಮಹಾಭೇರಿಯಿಂದ ಸುಬೋಧೆ ಮಾಡಿ ಎಬ್ಬಿಸಿದೆ. ಅಜ್ಞಾನಾಂಧಕಾರಕ್ಕೆ ಭಾಸ್ಕರನು ನೀನು. ಸದ್ಗುರುರೂಪದಲ್ಲಿ ನನಗೆ ಸಂಗಾತಿಯಾಗಿ ನನ್ನನ್ನು ದಡಕ್ಕೆ ಸೇರಿಸಿದೆ" ಎಂದು ಭಕ್ತಿಯಿಂದ ಸ್ತುತಿಸಿದನು. ಸಿದ್ಧಮುನಿಯು ಹರ್ಷಗೊಂಡು, ಸಾಕ್ಷಾತ್ತು ಗುರುವೇ ಆಗಿ ಅಭಯ ನೀಡಿದನು. ನಂತರ ಶಿಷ್ಯನು ಮುಂದಿನ ಕಥೆಯನ್ನು ಹೇಳಬೇಕೆಂದು ಪ್ರಾರ್ಥಿಸಿದನು.

ಆಗ ಸಿದ್ಧಮುನಿಯು, "ನಾಮಧಾರಕ, ಮುಂದಿನ ಕಥೆಯನ್ನು ಹೇಳುತ್ತೇನೆ. ಕೇಳು. ಶ್ರೀಗುರುವು ಗಂಧರ್ವಪುರದಲ್ಲಿ ವಾಸಮಾಡುತ್ತಿದ್ದಾಗ, ಶ್ರೀಹರಿಯ ಮಹಿಮೆ ಬಹಳ ಹಿರಿದಾಗಿತ್ತು. ಅದರಲ್ಲಿ ಸಾರಭೂತವಾದದ್ದನ್ನು ನಾನು ಹೇಳುತ್ತೇನೆ. ಸಾಕ್ಷಾತ್ತು ವಿಷ್ಣು ಅವತಾರವಾದ ಶ್ರೀಗುರುವಿನ ಲೀಲೆಗಳನ್ನು ಹೇಳಬಲ್ಲಂತಹ ಸಮರ್ಥನಾರು? ಗಂಧರ್ವನಗರದಲ್ಲಿ ಒಬ್ಬ ವೈದಿಕ ಬ್ರಾಹ್ಮಣನಿದ್ದನು. ಅವನು ಬಹುಶ್ರುತನು. ವಿರಕ್ತನು. ಆದರೂ ಅವನು ಕರ್ಮಮಾರ್ಗ ವಿಶಾರದನು. ಅವನು ಎಂದೂ ದಾನವನ್ನು ಸ್ವೀಕರಿಸುತ್ತಿರಲಿಲ್ಲ. ಪರಾನ್ನವನ್ನು ತಿನ್ನುತ್ತಿರಲಿಲ್ಲ. ಅಸತ್ಯವನ್ನು ನುಡಿಯುತ್ತಿರಲಿಲ್ಲ. ಭಿಕ್ಷಾವೃತ್ತಿಯಿಂದಲೇ ಜೀವನ ಸಾಗಿಸುತ್ತಾ ಸಂತೋಷದಿಂದಿದ್ದನು. ಆವನು ಭಿಕ್ಷುಕವೃತ್ತಿಯನ್ನೇ ಆಚರಿಸುತ್ತಿದ್ದರೂ ಅತಿಥಿಗಳಿಲ್ಲದೆ ತಾನು ಊಟಮಾಡುತ್ತಿರಲಿಲ್ಲ. ಆದರೆ ಅವನ ಹೆಂಡತಿಗೆ ಗಂಡನ ಈ ಚರ್ಯೆಗಳು ಸಹನೆಯಾಗುತ್ತಿರಲಿಲ್ಲ.

ಆ ಗ್ರಾಮದಲ್ಲಿ ಪ್ರತಿದಿನವೂ ಬ್ರಾಹ್ಮಣರಿಗೆ ಮೃಷ್ಟಾನ್ನ ಭೋಜನವಾಗುತ್ತಿತ್ತು. ಜನರೆಲ್ಲರೂ ಆ ಭೋಜನಗಳನ್ನೇ ಕುರಿತು ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯವು ಆ ಬ್ರಾಹ್ಮಣನ ಹೆಂಡತಿಯ ಕಿವಿಗೆ ಬಿತ್ತು. ದೀನಳಾದ ಅವಳು ಖಿನ್ನ ಮನಸ್ಕಳಾಗಿ, "ಹೇ ದೈವವೇ, ಪರಮೇಶ್ವರ, ಸ್ವಪ್ನದಲ್ಲಿಯೂ ಕೂಡ ನಾನು ಅಂತಹ ಮೃಷ್ಟಾನ್ನವನ್ನು ಕಾಣಲಾಗದು. ನಾನೆಂತಹ ದುರದೃಷ್ಟವಂತಳು! ವಿಪ್ರರೆಲ್ಲರೂ ತಮ್ಮ ತಮ್ಮ ಹೆಂಡಂದಿರೊಡನೆ ಪ್ರತಿದಿನವೂ ಮೃಷ್ಟಾನ್ನ ಭೋಜನ ಮಾಡುತ್ತಿದ್ದಾರೆ. ಅವರು ಪುಣ್ಯ ಮಾಡಿದ್ದರು. ಹಿಂದಿನ ಜನ್ಮಗಳಲ್ಲಿ ಮಾಡಿದ್ದ ಪುಣ್ಯದಿಂದಲೇ ಅವರಿಗೆ ಇಂತಹುದು ಲಭ್ಯವಾಗಿದೆ. ನನ್ನ ಗಂಡ ಅದೃಷ್ಟಹೀನನು. ಕರೆದರೂ ಅವನು ಅಂತಹ ಸ್ಥಳಗಳಿಗೆ ಹೋಗುವುದಿಲ್ಲ" ಎಂದು ಚಿಂತಾಕ್ರಾಂತಳಾಗಿದ್ದಳು.

ಒಂದು ದಿನ ಮಹಾಧನಿಕನಾದ ಬ್ರಾಹ್ಮಣನೊಬ್ಬನು ಅವಳನ್ನು ಗಂಡನ ಜೊತೆಯಲ್ಲಿ ಸಂತರ್ಪಣೆಯ ಊಟಕ್ಕೆ ಬರಬೇಕೆಂದು ಕರೆದನು. ಅವಳು ಅದರಿಂದ ಅತೀವ ಸಂತಸಗೊಂಡು, ತನ್ನ ಗಂಡನ ಬಳಿಗೆ ಹೋಗಿ, "ನಿನ್ನೊಡನೆ ನನ್ನನ್ನು ಊಟಕ್ಕೆ ಕರೆದಿದ್ದಾರೆ. ಭೂರಿಭೋಜನವಿಟ್ಟು, ದಕ್ಷಿಣೆ, ಅಮೂಲ್ಯವಾದ ವಸ್ತ್ರಗಳು ಕೂಡಾ ಕೊಡುತ್ತಾರಂತೆ. ಈ ಆಹ್ವಾನವನ್ನು ಸ್ವೀಕರಿಸು. ಇಲ್ಲದಿದ್ದರೆ ನಾನಾದರೂ ಹೋಗಲು ಅನುಮತಿ ಕೊಡು" ಎಂದು ಅವನನ್ನು ಬಲವಂತ ಪಡಿಸಿದಳು. ಗಂಡನು ಅವಳು ಹೋಗಲು ಅನುಮತಿ ಕೊಡಲು, ಅಬಲೆಯೂ, ಮೂಢಳೂ ಆದ ಆ ಹೆಂಗಸು ಆ ಧನಿಕ ಬ್ರಾಹ್ಮಣ ಬಳಿಗೆ ಹೋಗಿ, "ನನ್ನ ಗಂಡ ಬರಲಾರ. ನಾನು ಬರುತ್ತೇನೆ" ಎಂದು ಹೇಳಲು, ಅವನು, "ಅಮ್ಮ, ನಾನು ದಂಪತಿಗಳ ಅರ್ಚನೆ ಮಾಡಬೇಕೆಂದು ಸಂಕಲ್ಪಿಸಿಕೊಂಡಿದ್ದೇನೆ. ಆದ್ದರಿಂದ ನಿನ್ನ ಗಂಡ ಬಂದರೆ ಮಾತ್ರ ನೀನು ನಮ್ಮ ಮನೆಗೆ ಊಟಕ್ಕೆ ಬರಬಹುದು’ ಎಂದು ಹೇಳಲು, ಅವಳು ಖಿನ್ನಳಾಗಿ, "ಅಯ್ಯೋ, ನಾರಾಯಣ, ನಾನೇನು ಮಾಡಲಿ? ಇದೆಲ್ಲವೂ ನನ್ನ ದುರದೃಷ್ಟವೇ! ಗಂಡನ ದುರ್ಯೋಗದಿಂದ ನನಗೆ ರುಚಿಕರವಾದ ಊಟ ಸ್ವಪ್ನದಲ್ಲೂ ದುರ್ಲಭವಾಗಿದೆ" ಎಂದು ಕೊಳ್ಳುತ್ತಾ, ಶ್ರೀಗುರು ನೃಸಿಂಹ ಸರಸ್ವತಿಯವರ ಬಳಿಗೆ ಹೋಗಿ, "ಸ್ವಾಮಿ, ಆ ಬ್ರಾಹ್ಮಣನ ಮನೆಯ ಊಟಕ್ಕೆ ಹೋಗುವಂತೆ ನನ್ನ ಗಂಡನಿಗೆ ಹೇಳಿ. ಆ ಬ್ರಾಹ್ಮಣ ದಂಪತಿಗಳನ್ನು ಮಾತ್ರ ಆಹ್ವಾನಿಸುತ್ತಿದ್ದಾನೆ. ನನ್ನ ಗಂಡ ನನ್ನ ಮಾತು ಕೇಳುವುದಿಲ್ಲ. ನಾನೇನು ಮಾಡಲಿ? ಪರಾನ್ನವನ್ನು ನನ್ನ ಗಂಡ ಎಂದೂ ತಿನ್ನುವುದಿಲ್ಲ. ಸ್ವಾಮಿ, ನನ್ನ ಮೇಲೆ ದಯೆತೋರಿ, ಏನಾದರೂ ಮಾಡಿ ನನ್ನ ಗಂಡ ಅಲ್ಲಿಗೆ ಬರುವಂತೆ ಮಾಡಿ. ಇದು ಒಳ್ಳೆಯ ಆಹ್ವಾನ. ಒಳ್ಳೆಯ ವಸ್ತ್ರಗಳು, ರುಚಿಕರವಾದ ಊಟ ಎಲ್ಲವೂ ಸಿಕ್ಕುತ್ತದೆ" ಎಂದು ಪ್ರಾರ್ಥಿಸಿಕೊಂಡಳು.

ಆಕೆಯ ಮಾತುಗಳನ್ನು ಕೇಳಿದ ಶ್ರೀಗುರುವು ನಗುತ್ತಾ, ಆಕೆಯ ಗಂಡನನ್ನು ಕರೆದು, "ಅಯ್ಯಾ, ಬ್ರಾಹ್ಮಣ, ನಿನ್ನನ್ನು ಅಹ್ವಾನಿಸಿರುವ ದ್ವಿಜನ ಮನೆಗೆ ಊಟಕ್ಕೆ ಹೋಗು. ಅದು ನಿನ್ನ ಹೆಂಡತಿಯ ಅಭೀಷ್ಟ. ಗಂಡನಾದವನು ಹೆಂಡತಿಯ ಅಭೀಷ್ಟವನ್ನು ಪೂರೈಸಬೇಕು. ಕುಲಸ್ತ್ರೀಯ ಮನಸ್ಸನ್ನು ನೋಯಿಸಬಾರದು" ಎಂದು ಹೇಳಿದರು. ಅದಕ್ಕೆ ಆ ಬ್ರಾಹ್ಮಣ ಶ್ರೀಗುರುವಿಗೆ ನಮಸ್ಕರಿಸಿ, "ಪರಾನ್ನವನ್ನು ಗ್ರಹಿಸಬಾರದು ಎನ್ನುವುದು ನನ್ನ ನಿಯಮ. ಆದರೂ ಗುರುವಾಕ್ಯವನ್ನು ಪಾಲಿಸದವನು ರೌರವ ನರಕಕ್ಕೆ ಹೋಗುತ್ತಾನೆ ಆಲ್ಲವೇ? ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ ಪರಗೃಹಕ್ಕೆ ಊಟಕ್ಕೆ ಹೋಗುತ್ತೇನೆ" ಎಂದು ಶ್ರೀಗುರುವಿನಲ್ಲಿ ಬಿನ್ನವಿಸಿಕೊಂಡನು. ಅವನ ಹೆಂಡತಿ ಸಂತಸಗೊಂಡಳು. ಅದರಂತೆ ಅವರಿಬ್ಬರೂ ಬ್ರಾಹ್ಮಣನ ಮನೆಗೆ ಊಟಕ್ಕೆ ಹೋದರು. ಆ ಹೆಂಗಸು ಊಟದ ಸಮಯದಲ್ಲಿ ಒಂದು ವಿಪರೀತವಾದದ್ದನ್ನು ಕಂಡಳು. ಅವಳಿಗೆ ತನ್ನ ಎಲೆಯಲ್ಲಿ ತನ್ನ ಜೊತೆಗೆ ನಾಯಿಗಳು, ಹಂದಿಗಳು ತಿನ್ನುತ್ತಿರುವಂತೆ ಅವಳಿಗೆ ಕಾಣಿಸಿತು. ಅವಳು ಎದ್ದುಹೋಗಿ ಊಟಮಾಡುತ್ತಿದ್ದ ಬ್ರಾಹ್ಮಣರಿಗೆ ತಾನು ಕಂಡ ವಿಪರೀತವನ್ನು ಗಟ್ಟಿಯಾಗಿ ಕೂಗಿ ಹೇಳಿ, ತನ್ನ ಗಂಡನ ಹತ್ತಿರಕ್ಕೆ ಬಂದು ಅವನಿಗೂ ಆ ವಿಷಯವನ್ನು ಗಟ್ಟಿಯಾಗಿ ಹೇಳಿದಳು. "ಇದು ನಾಯಿಗಳು ಹಂದಿಗಳು ತಿಂದು ಉಚ್ಚಿಷ್ಟ ಮಾಡಿದ ಆನ್ನ" ಎಂದು ಅವಳು ಹೇಳಲು, ಅವಳ ಗಂಡ, "ನಿನ್ನಿಂದ ನನ್ನ ಭಾಗ್ಯವೆಲ್ಲಾ ಹಾಳಾಯಿತು. ಪರಾನ್ನವನ್ನು ಬಿಟ್ಟರೂ ಈಗ ನಾಯಿ ಎಂಜಲನ್ನು ತಿಂದೆನಲ್ಲವೇ?" ಎಂದು ಹೇಳುತ್ತಾ ಎದ್ದು, ಹೆಂಡತಿಯನ್ನು ಕರೆದುಕೊಂಡು ಶ್ರೀಗುರುವಿನ ಬಳಿಗೆ ಹೋದನು. ಅಲ್ಲಿ ಶ್ರೀಗುರುವಿಗೆ ಪರಮಭಕ್ತಿಯಿಂದ ನಮಸ್ಕರಿಸಿದನು. ನಾಮಧಾರಕ, ಶ್ರೀಗುರುವು ಅವನ ಹೆಂಡತಿಯನ್ನು ನೋಡಿ, "ನೀನು ಪರಾನ್ನದಿಂದುಂಟಾದ ಸುಖವನ್ನು ನೋಡಿದೆಯಲ್ಲವೇ? ನೀನು ಸದಾ ನಿನ್ನ ಗಂಡನನ್ನು ಪೀಡಿಸುತ್ತಿದ್ದೆ. ನಿನ್ನ ಕೋರಿಕೆ ಇಂದು ತೀರಿತು" ಎಂದು ಹೇಳಲು, ಅವಳು ಶ್ರೀಗುರುವಿನ ಪಾದಗಳಲ್ಲಿ ಬಿದ್ದು, ಕೈಜೋಡಿಸಿ, ದೀನಳಾಗಿ, "ಸ್ವಾಮಿ, ಪರಾನ್ನಕ್ಕೆಂದು ನನ್ನ ಗಂಡನನ್ನು ಬಲಾತ್ಕಾರವಾಗಿ ಕರೆದುಕೊಂಡು ಹೋದೆ. ನನ್ನ ತಪ್ಪನ್ನು ಕ್ಷಮಿಸಿ" ಎಂದು ಬೇಡಿಕೊಂಡಳು. "ಸ್ವಾಮಿ, ನನ್ನ ಪೂಜ್ಯವಾದ ವ್ರತ ಭಂಗವಾಯಿತು. ಪರಾನ್ನವನ್ನು ಗ್ರಹಿಸಬಾರದು ಎನ್ನುವ ನನ್ನ ಸಂಕಲ್ಪ ಇವಳಿಂದ ಭಗ್ನವಾಯಿತು. ನಾನು ಬಹು ದೋಷಗಳನ್ನು ಮಾಡಿದವನಾದೆ" ಎಂದು ಬಹು ಪರಿತಪ್ತನಾಗಿ ಹೇಳಿಕೊಂಡ ಆ ಬ್ರಾಹ್ಮಣನಿಗೆ ಶ್ರೀಗುರುವು, "ಅಯ್ಯಾ, ಈಕೆಯ ಕೋರಿಕೆ ತೀರಿತಲ್ಲವೇ? ಈಕೆಗೆ ಈಗ ತೃಪ್ತಿಯಾಗಿದೆ. ಪರಾನ್ನವನ್ನು ತಿನ್ನಬಾರದೆನ್ನುವ ನಿನ್ನ ಸಂಕಲ್ಪವು ಸತ್ಯವಾಗಿದೆ. ದುಃಖಿಸಬೇಡ. ಇದು ದೋಷವಲ್ಲ. ಇನ್ನೂ ಒಂದು ಮಾತು ಹೇಳುತ್ತೇನೆ. ಅದು ಸಹಜ ಧರ್ಮವೇ! ಪರಾನ್ನವನ್ನು ತಿನ್ನುವುದಿಲ್ಲ ಎಂದರೆ ಪಿತೃಕಾರ್ಯಗಳಿಗೆ ವಿಪ್ರರಾರೂ ಸಿಕ್ಕುವುದಿಲ್ಲ, ಅಲ್ಲವೇ? ಕರ್ಮಲೋಪವಾಗದಿದ್ದಲ್ಲಿ ಅಂತಹ ಕಡೆಗಳಿಗೆ ಹೋಗಿ ಊಟಮಾಡು" ಎಂದು ನಗುತ್ತಾ ಹೇಳಿದ ಶ್ರೀಗುರುವಿನ ಮಾತುಗಳನ್ನು ಕೇಳಿ ಆ ಬ್ರಾಹ್ಮಣನು ಶ್ರೀಗುರುವನ್ನು ಕೇಳಿದನು.

"ಸ್ವಾಮಿ, ಯಾರ ಅನ್ನವನ್ನು ಪರಿಗ್ರಹಿಸಬಹುದು? ದೋಷಗಳು ಯಾವಾಗ ಉಂಟಾಗುತ್ತವೆ? ಯಾರ ಮನೆಯ ಬಾಗಿಲಿಗೆ ಹೋಗಬಾರದು? ಇದೆಲ್ಲವನ್ನು ನನಗೆ ವಿಸ್ತಾರವಾಗಿ ಹೇಳಿ" ಎಂದು ಕೇಳಿದ ಬ್ರಾಹ್ಮಣನ ಮಾತುಗಳನ್ನು ಕೇಳಿ ಶ್ರೀಗುರುವು ಹೇಳಿದರು. "ಅಯ್ಯಾ ಬ್ರಾಹ್ಮಣ, ಗ್ರಹಿಸಬಹುದಾದಂತಹ ಅನ್ನವನ್ನು ಹೇಳುತ್ತೇನೆ, ಕೇಳು. ಶಿಷ್ಯನು ಗುರುವಿನ ಮನೆಯಲ್ಲಿ ನಿಸ್ಸಂಶಯವಾಗಿ ಅನ್ನವನ್ನು ಪರಿಗ್ರಹಿಸಬಹುದು. ವಿದ್ವಾಂಸನು, ವೈದಿಕನು, ಸೋದರಮಾವ, ಮಾವ, ಸಾಧುಗಳು, ಸೋದರರ ಮನೆಯಲ್ಲಿ ಅನ್ನವನ್ನು ಗ್ರಹಿಸಬಹುದು. ಬ್ರಾಹ್ಮಣರ ಅಭಾವದಿಂದ ಕರ್ಮ ಲೋಪವುಂಟಾದಾಗ, ಅನ್ನವನ್ನು ಸ್ವೀಕರಿಸಬಹುದು. ನಂತರ ಗಾಯತ್ರಿ ಜಪದಿಂದ ಅದರಿಂಟಾದ ದೋಷವು ಕಳೆಯುವುದು. ಮಾತಾಪಿತರ ಮನೆಯ ಹತ್ತಿರ ಸೇವೆ ಮಾಡುವವರ ಮನೆಯಲ್ಲಿ, ಲೋಭಿಗಳ ಮನೆಯಲ್ಲಿ ಅನ್ನ ಸ್ವೀಕಾರವನ್ನು ಹೇಗಾದರೂ ಮಾಡಿ ಬಿಡಬೇಕು. ಹೆಂಡತಿ ಮಕ್ಕಳನ್ನು ಪೀಡಿಸಿ ಧರ್ಮ ಮಾಡುವವರ ಮನೆಯಲ್ಲಿ ಅನ್ನವನ್ನು ತಿಂದರೆ ಮಹಾ ದೋಷವುಂಟಾಗುತ್ತದೆ. ಗರ್ವಿಷ್ಠನ ಮನೆಯಲ್ಲಿ, ಮಲ್ಲಯುದ್ಧದಲ್ಲಿ ಆಸಕ್ತಿಯುಳ್ಳವನ ಮನೆಯಲ್ಲಿ, ವಾದ್ಯಗಳಲ್ಲಿ ಅತಿ ಹೆಚ್ಚಿನ ಆಸಕ್ತಿಯುಳ್ಳವರ ಮನೆಯಲ್ಲೂ ಊಟಮಾಡಬಾರದು. ಬಹಿಷ್ಕೃತನಾದ ಬ್ರಾಹ್ಮಣ ಮನೆಯಾಲಿ, ಯಾಚನಾ ಜೀವಿಯ ಮನೆಯಲ್ಲಿ, ವೈಶ್ವದೇವವನ್ನಿಡದಿರುವವರ ಮನೆಯಲ್ಲಿ, ಅನ್ನ ತಿನ್ನಬಾರದು. ಒಂದೇ ಕಡೆಯಲ್ಲಿ ಬಹಳ ಜನರ ಊಟಕ್ಕೆಂದು ಮಾಡಿದ ಅನ್ನದಿಂದ ಬೇರೆಯಾಗಿ ವೈಶ್ವದೇವ ಮಾಡಲು ಸಾಧ್ಯವಾಗದು. ಆದ್ದರಿಂದ ಅಂತಹ ಅನ್ನವನ್ನು ವರ್ಜಿಸಬೇಕು. ಧನದಾಸೆಯಿಂದ ಮಂತ್ರ ಹೇಳುವವರ ಮನೆಯಲ್ಲಿ, ಶಿಷ್ಯ ಸಂಗ್ರಹದಲ್ಲಿ ಇಚ್ಛೆಯುಳ್ಳವರ ಮನೆಯಲ್ಲಿಯೂ ಅನ್ನವು ವರ್ಜನೀಯವೇ! ಕ್ರೋಧಿ, ಬ್ರಾಹ್ಮಣ ದ್ವೇಷಿ, ಕುಲಸ್ತ್ರೀಯನ್ನು ಬಿಟ್ಟವನ ಮನೆಯಲ್ಲಿಯೂ ಅನ್ನವನ್ನು ಪರಿತ್ಯಜಿಸಬೇಕು. ಗಂಡನನ್ನು, ಮಕ್ಕಳನ್ನು ಬಿಟ್ಟುಬಿಟ್ಟ ಬ್ರಾಹ್ಮಣ ಸ್ತ್ರೀಯ ಮನೆಯಲ್ಲೂ ಅನ್ನವನ್ನು ಬಿಡಬೇಕು. ವಿಪ್ರನಾದರೂ, ಸ್ವರ್ಣಕಾರಿಯ ಮನೆಯಲ್ಲಿ, ಯಾಚಕನ ಮನೆಯಲ್ಲಿ, ಹೆಂಗಸಿನಿಂದ ಸೋಲಿಸಲ್ಪಟ್ಟವನ ಮನೆಯಲ್ಲಿ ಅನ್ನವನ್ನು ವರ್ಜಿಸಬೇಕು. ಕಳ್ಳ, ಪರದಾರರತ, ಅಶ್ವ ವಿಕ್ರಯ ಮಾಡುವವನು, ಅಂತಹವನು ಬ್ರಾಹ್ಮಣನಾದರೂ ಅವನ ಮನೆಯಲ್ಲಿ ಊಟ ಮಾಡಬಾರದು. ಧನದಾಸೆಯಿಂದ ವೇದ ಹೇಳುವವನು, ದ್ಯೂತಕಾರಿ, ನಿಷ್ಠೂರವಾಗಿ ಮಾತನಾಡುವವನು, ಸ್ನಾನಮಾಡದೆ ಊಟ ಮಾಡುವವನು, ಭಗವತ್ಕೀರ್ತನೆ ಮಾಡದವನು, ಅಂತಹವರ ಮನೆಯಲ್ಲಿಯೂ ಊಟ ಮಾಡಬಾರದು. ಸಂಧ್ಯಾವಂದನೆ ಮಾಡದವನ, ದಾನ ಮಾಡದವನ, ಪಿತೃಕರ್ಮ ಮಾಡದವನ ಮನೆಯಲ್ಲಿ ಊಟಮಾಡಬಾರದು. ಧನದಾಸೆಯಿಂದ ಮಂತ್ರಜಪ ಮಾಡುವವನ, ಡಂಭ ಪ್ರದರ್ಶನಕ್ಕೋಸ್ಕರ ಜಪ ಮಾಡುವವನ, ಸಾಲಕೊಟ್ಟು ಹಣ ಸಂಪಾದಿಸುವವನ, ಮನೆಯಲ್ಲಿಯೂ ಅನ್ನವನ್ನು ತಿನ್ನಬಾರದು.

ವಿಶ್ವಾಸಘಾತುಕ, ಪಕ್ಷಪಾತಿ, ಅನೀತಿಪರ, ಸ್ವಧರ್ಮವನ್ನು ಬಿಟ್ಟವನು, ಇವರ ಮನೆಯಲ್ಲಿಯೂ ಅನ್ನವು ವರ್ಜ್ಯವು. ಸಾಧುಗಳನ್ನು ದ್ವೇಷಿಸುವವನು, ಗುರುನಿಂದಕನು, ಕುಲದೈವವನ್ನು ಬಿಟ್ಟವನು, ಇವರ ಮನೆಯಲ್ಲೂ ಅನ್ನ ವರ್ಜ್ಯವು. ಗೋ-ವಿಪ್ರ-ಸ್ತ್ರೀ ಘಾತುಕ, ತನ್ನ ಅನ್ನವನ್ನೇ ದೂಷಿಸುವವನ, ಪರಾನ್ನವನ್ನು ಹೊಗಳುವವನ ಮನೆಯಲ್ಲಿಯೂ ಅನ್ನ ವರ್ಜ್ಯವು. ಆಶಾಬದ್ಧನ, ಒಂದೇ ಮನೆಯಲ್ಲಿ ಸದಾಕಾಲ ಇರುವವನ, ದಾತನನ್ನು ಅಪಹರಿಸುವವನ ಅನ್ನವೂ ನಿಷಿದ್ಧವು. ಎಲ್ಲರನ್ನೂ ಶರಣು ಬೇಡುವವನು ಚಂಡಾಲನಾಗುತ್ತಾನೆ. ಅವನ ಅನ್ನ ತಿನ್ನಬಾರದು. ಸರ್ವವನ್ನೂ ತಿನ್ನುವವನ ಅನ್ನವು ವರ್ಜ್ಯವು. ಮಗಳು-ಅಳಿಯರನ್ನು ಭಯಪಡಿಸುವವನ, ಪುತ್ರಹೀನನ ಅನ್ನವು ತ್ಯಾಜ್ಯವು. ವಿವಾಹದ ನಂತರ ಹೋಮಾದಿಗಳನ್ನು ಮಾಡದೆ ಸದಾ ಪರಗೃಹದಲ್ಲಿ ಊಟ ಮಾಡುವವನ, ಅನ್ನವು ದೋಷಪೂರಿತವು. ಆಶ್ರಮ ಧರ್ಮಗಳನ್ನನುಸರಿಸದೆ ಅದ್ವೈತಾನುಭವವಿಲ್ಲದೆ ಇರುವವನ ಅನ್ನವು ನಿಂದ್ಯವು. ಹೊಟ್ಟೆಬಾಕನ ಅನ್ನವನ್ನು ತಿನ್ನುವುದರಿಂದ ಅಂಧತ್ವ, ಆಯುರ್ದಾಯ ಹಾನಿ, ಕಿವುಡು, ಸ್ಮೃತಿ, ಬುದ್ಧಿ, ಧೈರ್ಯಗಳಿಗೆ ಹಾನಿಯುಂಟಾಗುವುದು. ಪರಗೃಹದಲ್ಲೇ ನಿತ್ಯವೂ ಇರುತ್ತಾ ಅಲ್ಲಿಯೇ ಊಟ ಮಾಡುವವನು ತಾನು ಆರ್ಜಿಸಿದ ಪುಣ್ಯವನ್ನೆಲ್ಲಾ ಯಜಮಾನನಿಗೆ ಕೊಟ್ಟವನಾಗುತ್ತಾನೆ. ಆ ಯಜಮಾನನ ದೋಷಗಳನ್ನು ತಾನು ಪಡೆದುಕೊಳ್ಳುತ್ತಾನೆ. ಪರಾನ್ನದಿಂದ ಉಂಟಾಗುವ ದೋಷ, ಪರಸ್ತ್ರೀ ಸಂಗದಿಂದ ಉಂಟಾಗುವ ದೋಷ, ಗೋವು, ಭೂಮಿ, ಸ್ವರ್ಣ, ಗಜ, ರತ್ನ, ಕುದುರೆಗಳಂತಹವನ್ನು ಸ್ವೀಕರಿಸುವುದರಿಂದ ಉಂಟಾಗುವ ದೋಷಗಳು ಅಧಿಕವಾದದ್ದು. ದಿನವೂ ಪರಗೃಹದಲ್ಲಿ ವಾಸಿಸುವವನನ್ನು ಲಕ್ಷ್ಮಿ ಬಿಟ್ಟು ಹೋಗುತ್ತಾಳೆ. ಅಮಾವಾಸ್ಯೆಯಂದು ಪರಾನ್ನವನ್ನು ತಿನ್ನುವುದರಿಂದ ಆ ಮಾಸದಲ್ಲಿ ಮಾಡಿದ ಪುಣ್ಯವೆಲ್ಲವೂ ಬಿಟ್ಟು ಹೋಗುವುದು. ಊಟಕ್ಕೆಂದು ಆಹ್ವಾನ ಬಂದರೆ ಹೋಗಬಹುದು. ಆಹ್ವಾನ ಬರದಿದ್ದರೆ ಆಪತ್ತಿನಲ್ಲಲ್ಲದೇ ಹೋಗಬಾರದು. ದ್ವಿಜರ ಮನೆಗಳಿಗೆ ಆಹ್ವಾನವಿಲ್ಲದೆ ಹೋಗಬಾರದು. ಸೇವಕನ ಮೂಲಕ ಆಹ್ವಾನ ಬಂದರೆ ದ್ವಿಜಗೃಹಕ್ಕೂ ಹೋಗಬಾರದು.

ಮಗಳಿಗೆ ಮಗನು ಹುಟ್ಟುವವರೆಗೂ ಅವಳ ಮನೆಯಲ್ಲಿ ಊಟಮಾಡಬಾರದು. ಮೊಮ್ಮಗನಾದಮೇಲೆ ಈ ದೋಷವಿರುವುದಿಲ್ಲ. ಸೂರ್ಯ ಚಂದ್ರ ಗ್ರಹಣ ಸಮಯದಲ್ಲಿ, ಪುರುಡುಂಟಾದಾಗ, ಅಶೌಚವಾದಾಗ, ತೀರ್ಥಾದಿಗಳಲ್ಲಿ, ದಾನ ಸ್ವೀಕಾರಮಾಡಬಾರದು. ದುಷ್ಟನಾದ ರಾಜ, ಸೇವಕ, ಅಗಸರವನು, ಕಮ್ಮಾರ, ಸೌದೆ ಮಾರುವವನು, ಚಿನ್ನ ಕದ್ದವನು, ಶೂದ್ರ ಸ್ತ್ರೀ, ಮದ್ಯವ್ಯಸನಿ, ಇವರೆಲ್ಲರ ದಾನಗಳನ್ನು ವರ್ಜಿಸಬೇಕು. ಈ ಧರ್ಮಗಳ ವಿಷಯವಾಗಿ ತಮ್ಮ ತಮ್ಮ ಆಚಾರಗಳನ್ನು, ಇಷ್ಟವಿಲ್ಲದಿದ್ದರೂ, ಆಚರಣೆಯಲ್ಲಿಟ್ಟ ಬ್ರಾಹ್ಮಣರಿಗೆ ದೈನ್ಯವೆಂಬುದಿರುವುದಿಲ್ಲ. ಅವರು ಸುಖಾನುಭವಿಗಳಾಗಿರುತ್ತಾರೆ. ಅಂತಹವರ ಮನೆಯಲ್ಲಿ ದೇವತೆಗಳು ಕಾಮಧೇನುವು ವಾಸಮಾಡುತ್ತಾರೆ. ಅಷ್ಟಸಿದ್ಧಿಗಳು ಅವರ ಮನೆಯಲ್ಲಿ ಸದಾ ಇರುತ್ತವೆ. ಮದಾಂಧರಾಗಿ ಸ್ವಧರ್ಮಾಚಾರಗಳನ್ನು ಬಿಟ್ಟ ಬ್ರಾಹ್ಮಣರು ಪಾಪಗಳಿಂದಾಗಿ, ದರಿದ್ರರೂ, ದೀನರೂ ಆಗಿ ಪತನ ಹೊಂದುತ್ತಾರೆ". 

ಹೀಗೆ ಶ್ರೀಗುರುವು ಬೋಧಿಸಲಾಗಿ, ಆ ಬ್ರಾಹ್ಮಣ, "ಸ್ವಾಮಿ, ಸ್ವ ಆಚಾರಗಳನ್ನು ಹೇಳಬೇಕೆಂದು ಕೋರುತ್ತೇನೆ. ನೀವು ತ್ರಿಮೂರ್ತಿಗಳ ಅವತಾರವು. ಶ್ರೀಗುರುವು, ಕರುಣಾಕರನು, ನೀವೇ!" ಎಂದು ಕೋರಲು, ಶ್ರೀಗುರುವು ಬ್ರಾಹ್ಮಣನಿಗೆ, "ಅಯ್ಯಾ ಬ್ರಾಹ್ಮಣ, ನೀನು ಒಳ್ಳೆಯದನ್ನೇ ಕೇಳಿದೆ. ಋಷಿಗಳು ಹಿಂದೆ ಹೇಳಿದ ಸದಾಚಾರಗಳನ್ನು ಹೇಳುತ್ತೇನೆ. ಕೇಳು. ಹಿಂದೆ ನೈಮಿಶಾರಣ್ಯದಲ್ಲಿ, ಪರಾಶರಮುನಿಯು ಮುನಿಗಳಿದ್ದ ಕಡೆಗೆ ಅನಿರೀಕ್ಷಿತವಾಗಿ ಬಂದನು. ಮುನಿಗಳು ಹಾಗೆ ಬಂದ ವೃದ್ಧ ಮಹರ್ಷಿಗೆ, ಆದರದಿಂದ ಸತ್ಕಾರಮಾಡಿ, ಅಭಿವಂದಿಸಿ, ಆಚಾರಗಳನ್ನೆಲ್ಲಾ ತಿಳಿಸಬೇಕೆಂದು ಕೋರುತ್ತಾ, "ನೀನು ಬ್ರಹ್ಮರ್ಷಿ. ನಿನ್ನ ಉಪದೇಶವು ಶ್ರೇಷ್ಠವು. ಗುರುವಿಲ್ಲದೆ ಆಚಾರಗಳನ್ನಾಗಲೀ, ಮಂತ್ರಗಳನ್ನಾಗಲೀ ಸ್ವೀಕರಿಸಬಾರದು. ನಮಗೆ ಆಚಾರಗಳನ್ನೆಲ್ಲಾ ಉಪದೇಶಿಸು" ಎಂದು ಪ್ರಾರ್ಥಿಸಿದರು. ಹಾಗೆ ಅವರಿಂದ ಪ್ರಾರ್ಥಿಸಲ್ಪಟ್ಟ ಪರಾಶರ ಮಹರ್ಷಿ, ಅವರಿಗೆ ಉಪದೇಶಿಸಿದನು.

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಭಕ್ತಿಯಿಂದ ಗುರುಸ್ಮರಣೆ ಮಾಡಬೇಕು. ಬ್ರಹ್ಮ, ವಿಷ್ಣು, ಮಹೇಶ್ವರರ ಧ್ಯಾನ ಮಾಡಬೇಕು. ಸನಕ, ಸನಂದನ, ಸನತ್ಕುಮಾರ, ಸನಾತನ, ನಾರದ, ಸಿದ್ಧರು, ಯೋಗಿಗಳು, ಪಿತೃದೇವತೆಗಳನ್ನು ಸ್ಮರಿಸಬೇಕು. ಸಪ್ತ ಸಮುದ್ರಗಳಿಗೆ, ಸಪ್ತದ್ವೀಪಗಳಿಗೆ, ಸಪ್ತರ್ಷಿಗಳಿಗೆ, ನಮಸ್ಕರಿಸಬೇಕು. ನಂತರ ಹಾಸಿಗೆಯಿಂದೆದ್ದು ಮೂತ್ರವಿಸರ್ಜನಾದಿ ಕಾರ್ಯಗಳನ್ನು ಮುಗಿಸಿ, ಆಚಮನ ಮಾಡಬೇಕು. ಸ್ನಾನಕ್ಕೆ ಮುಂಚೆ, ಸ್ನಾನವಾದ ಮೇಲೆ, ಅಧೋವಾಯುವನ್ನು ಬಿಟ್ಟಾಗ, ಮಲಗಿ ಎದ್ದ ಮೇಲೆ, ಯಥಾವಿಧಿಯಾಗಿ ಕೂತು, ಬ್ರಾಹ್ಮಣನಾದವನು ಆಚಮನ ಮಾಡಬೇಕು. ಊಟಕ್ಕೆ ಮುಂಚೆ, ಊಟವಾದಮೇಲೆ, ಕೆಮ್ಮಿದಾಗ, ಆವಳಿಸಿದಾಗ, ಮಲಮೂತ್ರ ವಿಸರ್ಜನೆ ಮಾಡಿದಮೇಲೆ, ದ್ವಿಜನಾದವನು ಆಚಮನ ಮಾಡಬೇಕು. ಅಪಾನ ವಾಯುವು ಹೊರಬಂದಾಗ, ದುಷ್ಟ ಶಬ್ದಗಳನ್ನುಚ್ಚರಿಸಿದಾಗ, ಕೆಟ್ಟದ್ದನ್ನು ನೋಡಿದಾಗ, ಕರ್ಮಾರಂಭ ಅಂತ್ಯಗಳಲ್ಲೂ ಆಚಮನ ಮಾಡಬೇಕು. ಅಂತಹ ಸಂದರ್ಭಗಳಲ್ಲಿ ಆಚಮನ ಮಾಡಲು ನೀರು ಸಿಕ್ಕದಿದ್ದರೆ ಕಿವಿಗಳನ್ನು ಸ್ಪರ್ಶಿಸಬೇಕು. ಬಲಕಿವಿಯಲ್ಲಿ ಸಪ್ತ ದೇವತೆಗಳಿದ್ದಾರೆ. ಆದ್ದರಿಂದ ಅದನ್ನು ಮುಟ್ಟಿಕೊಂಡರೆ ಆಚಮನವಾಗುತ್ತದೆ. ಅಗ್ನಿ, ಜಲ, ವಾಯು, ವರುಣ, ಸೂರ್ಯ, ಚಂದ್ರ, ಇಂದ್ರ ಇವರು ವಿಪ್ರನ ದಕ್ಷಿಣ ಕರ್ಣದಲ್ಲಿ ದಿನವೂ ಇರುತ್ತಾರೆ. ಮೂತ್ರೋತ್ಸರ್ಜನದ ನಂತರ ಶುಚಿಯಾಗಿ ಮಾನಸ ಸ್ನಾನ ಮಾಡಿ ಅರುಣೋದಯದವರೆಗೂ, ಗಾಯತ್ರಿಯನ್ನು ಬಿಟ್ಟು, ಜಪ ವೇದ ಪಠನಗಳನ್ನು ಮಾಡಬೇಕು. ಅರುಣೋದಯದ ನಂತರ ಹೊರಗೆ ಹೋಗಿ ಮಲ ವಿಸರ್ಜನೆ ಮಾಡಬೇಕು. ಉಪವೀತವನ್ನು ಹಿಂದಕ್ಕೆ (ಬೆನ್ನಮೇಲೆ) ಹಾಕಿಕೊಂಡು, ನೈರುತ್ಯದಿಕ್ಕಿನಲ್ಲಿ ಕೂತು, ಮುಖವನ್ನು ಕೆಳಕ್ಕೆ ಬಾಗಿಸಿ, ತಲೆಯಮೇಲೆ ಬಟ್ಟೆ ಹಾಕಿಕೊಂಡು, ಬೆಳಗ್ಗೆ ಉತ್ತರಾಭಿಮುಖವಾಗಿ, ರಾತ್ರಿಯ ಹೊತ್ತು ದಕ್ಷಿಣಾಭಿಮುಖವಾಗಿ, ಮೌನದಿಂದ, ಸುತ್ತಮುತ್ತ ನೋಡದೆ, ಸೂರ್ಯ ಚಂದ್ರ ನಕ್ಷತ್ರಗಳು ಜನರನ್ನು ನೋಡದೆ, ದ್ವಿಜನಾದವನು ಮಲಮೂತ್ರ ವಿಸರ್ಜನೆ ಮಾಡಬೇಕು. ನಿಂತು ಮೂತ್ರ ವಿಸರ್ಜನೆ ಮಾಡುವ ವಿಪ್ರನು ಅವನ ಮೈಮೇಲೆ ಎಷ್ಟು ಕೂದಲುಗಳಿವೆಯೋ ಅಷ್ಟು ವರ್ಷಗಳು ನರಕದಲ್ಲಿರುತ್ತಾನೆ. ಕೌಪೀನವನ್ನು ಬಿಚ್ಚದೆ ಮೂತ್ರ ವಿಸರ್ಜನೆ ಮಾಡಿದರೂ, ಶೌಚ ಮಾಡದೆಯೇ ಕೌಪೀನವನ್ನು ಹಾಕಿಕೊಂಡರೂ ಮೇಲೆ ಹೇಳಿದಂತೆ ನರಕವಾಸಿಯಾಗುತ್ತಾನೆ. ಯಾವಾಗಲಾದರೂ ಜಲಾಭಾವವಾದರೆ ಗಂಗೆಯನ್ನು ಸ್ಮರಿಸಿ ಮಣ್ಣು ಮುಂತಾದುವುಗಳಿಂದ ಶೌಚವಾಚರಿಸಬೇಕು. ಭೂಮಿಯ ಮೇಲಾಗಲೀ, ಹುಲ್ಲಿನ ಮೇಲಾಗಲೀ ಮಲ ವಿಸರ್ಜನೆ ಮಾಡಬಾರದು. ಒಣಗಿದ ಎಲೆಗಳ ಮೇಲೆ ಮಲ ವಿಸರ್ಜನೆ ಮಾಡಬೇಕು. ನಂತರ ಶುಚಿಯಾಗದೆ ಏನನ್ನೂ ತಿನ್ನಬಾರದು. ಪವಿತ್ರವಾದ ವೃಕ್ಷಗಳ, ದೇವಸ್ಥಾನಗಳ ಹತ್ತಿರದಲ್ಲಿ ಮಲ ವಿಸರ್ಜನೆ ಮಾಡಬಾರದು. ನೀರಿರುವ ಕಡೆಗೆ ಹೋಗಿ ಶೌಚಾದಿಗಳನ್ನು ಮಾಡಿಕೊಳ್ಳಬೇಕು. ಶೌಚ ಮಾಡಿಕೊಳ್ಳಲು ಮಣ್ಣು ತೆಗೆದುಕೊಳ್ಳಬೇಕು. ಹುತ್ತದ ಮಣ್ಣು, ಇಲಿತೋಡಿದ ಮಣ್ಣು, ನದಿ ಮಧ್ಯದ ಮಣ್ಣನ್ನು ಉಪಯೋಗಿಸಬಾರದು. ದಾರಿಯಲ್ಲಿ ಬಿದ್ದಿರುವ ಮಣ್ಣು, ಗಿಡದ ಕೆಳಗಿರುವ ಮಣ್ಣು, ದೇವಸ್ಥಾನದ ಪ್ರದೇಶಗಳಲ್ಲಿರುವ ಮಣ್ಣು, ತೀರ್ಥಾದಿಗಳಲ್ಲಿರುವ ಮಣ್ಣು, ಶೌಚಕ್ಕೆ ನಿಷಿದ್ಧವು. ಭಾವಿ, ಕೆರೆ, ಕಾಲುವೆಗಳಲ್ಲಿರುವ ಮಣ್ಣು ಪ್ರಶಸ್ತವಾದದ್ದು. ಶೌಚಕ್ಕಾಗಿ ನೀರು ಚುಮುಕಿಸಿ ಮಣ್ಣನ್ನು ಶೇಖರಿಸಬೇಕು. ಎಂದು ತಿಳಿದವರು ಹೇಳುತ್ತಾರೆ. ಒಂದು ಹಸಿರು (ಬೆಟ್ಟದ) ನೆಲ್ಲಿಕಾಯಿಯ ಪ್ರಮಾಣದಷ್ಟು ಮಣ್ಣನ್ನು ಲಿಂಗದ ಮೇಲಿಡಬೇಕು. ಐದು ಕಾಯಿಗಳ ಪ್ರಮಾಣದಷ್ಟು ಮಣ್ಣನ್ನು ಗುದದ್ವಾರದಲ್ಲಿ, ಮೂರು ಕಾಯಿಗಳಷ್ಟು ಉಂಡೆ ಮಾಡಿ ಎರಡೂ ಕೈಗಳಲ್ಲಿ, ಹಾಗೆಯೇ ಎರಡು ಪಾದಗಳ ಮೇಲೂ, ಮೂತ್ರ ಶೌಚಕ್ಕೆ ಉಪಯೋಗಿಸಬೇಕು. ಮಲ ವಿಸರ್ಜನೆ ಮಾಡಿದಾಗ ಮೇಲೆ ಹೇಳಿದ್ದಕ್ಕೆ ಎರಡರಷ್ಟು, ವೀರ್ಯ ವಿಸರ್ಜನಾನಂತರ ಮೂರರಷ್ಟು ಮಣ್ಣನ್ನು ಉಪಯೋಗಿಸಬೇಕು.

ಮೇಲೆ ಹೇಳಿದ ಶೌಚವಿಧಿ ಗೃಹಸ್ಥರಿಗೆ. ಇದರ ಎರಡರಷ್ಟು ಬ್ರಹ್ಮಚಾರಿಗಳಿಗೆ. ವನವಾಸಿಗಳಿಗೆ, ಮೂರರಷ್ಟು. ಯತಿಗಳಿಗೆ ನಾಲ್ಕರಷ್ಟು ಶೌಚವಿಧಿ ಎಂದು ಹೇಳಲಾಗಿದೆ. ರಾತ್ರಿಯಲ್ಲಾದರೆ ಇದರಲ್ಲಿ ಅರ್ಧದಷ್ಟು ಸಾಕು. ಶೌಚ ಆಚರಿಸುವುದರಿಂದ ಮಾನವರಿಗೆ ಶೀಘ್ರವಾಗಿ ಧರ್ಮಸಿದ್ಧಿಯಾಗುತ್ತದೆ. ಉಪನಯನವಾದ ನಂತರ ದ್ವಿಜನು ಈ ಆಚಾರವನ್ನು ಪಾಲಿಸಬೇಕು. ಸ್ತ್ರೀಯರು, ಶೂದ್ರಬಾಲರಿಗೆ ವಾಸನೆ ಹೋಗುವವರೆಗೆ ಶೌಚವಿಧಿ ಮಾಡಿದರೂ ಸಾಕು. ಬ್ರಾಹ್ಮಣನು ಶೌಚಾನಂತರ ಎಂಟುಸಲ ಗಂಡೂಷ (ಪುಕ್ಕಳಿಸುವುದು) ಮಾಡಬೇಕು. ಕ್ಷತ್ರಿಯರು ಆರುಸಲ, ವೈಶ್ಯರು ನಾಲ್ಕುಸಲ. ಶೂದ್ರರು ಎರಡುಸಲ, ಗಂಡೂಷ ಮಾಡಬೇಕು. ಪುಕ್ಕಳಿಸಿದ ನೀರನ್ನು ಎಡಗಡೆಗೆ ಬಿಡಬಾರದು (ಉಗುಳಬಾರದು). ಪುಕ್ಕಳಿಸಿದ ಮೇಲೆ ಶುಚಿಸ್ಥಾನದಲ್ಲಿ ಎರಡುಸಲ ಕುಲದೈವವನ್ನು ಸ್ಮರಿಸಬೇಕು. 

ಇನ್ನು ದ್ವಿಜರಿಗೆ ಆಚಮನ ಪದ್ಧತಿಯನ್ನು ಹೇಳುತ್ತೇನೆ. ಕೇಳಿ. ವಿಪ್ರನ ಬಲಗೈಯಲ್ಲಿ ತೀರ್ಥಪಂಚಕಗಳಿವೆ(ಐದು ತೀರ್ಥಗಳು). ಕೈ ಮಧ್ಯದಲ್ಲಿ ವಹ್ನಿ(ಅಗ್ನಿ)ತೀರ್ಥ, ಹಸ್ತ ಮೂಲದಲ್ಲಿ ಬ್ರಹ್ಮ ತೀರ್ಥ, ತರ್ಜನಿ ಅಂಗುಷ್ಠಗಳ ನಡುವೆ ಪಿತೃತೀರ್ಥ, ಅಂಗುಷ್ಠದ ಕೊನೆಯಲ್ಲಿ ದೇವ ತೀರ್ಥ, ಕನಿಷ್ಠಿಕ(ಕಿರುಬೆರಳು)ದ ಮೂಲದಲ್ಲಿ ಆರ್ಷತೀರ್ಥಗಳಿವೆ. ಈ ತೀರ್ಥಗಳಿಂದ ಪ್ರತಿಗ್ರಹ, ಆಚಮನ, ಪಿತೃದೇವತೆಗಳ ಅರ್ಚನೆ, ದೇವತಾರ್ಚನೆ, ಋಷಿಪೂಜೆಗಳನ್ನು ಮಾಡಬೇಕು.

ಬ್ರಹ್ಮತೀರ್ಥದಿಂದ ಕೇಶವ, ನಾರಾಯಣ, ಮಾಧವ ಎಂಬ ಮೂರು ನಾಮಗಳಿಂದ ನೀರು ಕುಡಿಯಬೇಕು. ಗೋವಿಂದ, ವಿಷ್ಣು ಎಂದು ಹೇಳುತ್ತಾ ಎರಡೂ ಕೈಗಳನ್ನು ತೊಳೆದುಕೊಂಡು, ಮಧುಸೂದನ, ತ್ರಿವಿಕ್ರಮ ಎಂದು ಹೇಳುತ್ತಾ ಅಂಗುಷ್ಠಮೂಲದಿಂದ ತುಟಿಗಳನ್ನು ಒರೆಸಿ, ವಾಮನ, ಶ್ರೀಧರ ಎನ್ನುತ್ತಾ ಮುಖದ ಎಡಗಡೆ ಮುಟ್ಟಿ, ಹೃಷೀಕೇಶ ಎನ್ನುತ್ತಾ ಪಾದಗಳನ್ನು ಮುಟ್ಟಿ, ಪದ್ಮನಾಭ ಎನ್ನುತ್ತಾ ಕೆಳಗೆ ಮುಟ್ಟಿ, ದಾಮೋದರ ಎನ್ನುತ್ತಾ ಶಿರಸ್ಸನ್ನು ಮುಟ್ಟಿ, ಮೂರುಬೆರಳುಗಳನ್ನು ಒಟ್ಟಿಗೇ ಸೇರಿಸಿ ಸಂಕರ್ಷಣ ಎನ್ನುತ್ತಾ ಮುಖವನ್ನು ಮುಟ್ಟಿ, ಹೆಬ್ಬೆರಳು ತರ್ಜನಿ ಸೇರಿಸಿ ವಾಸುದೇವ ಎನ್ನುತ್ತಾ ಮೂಗು ಮುಟ್ಟಿ, ಪ್ರದ್ಯುಮ್ನ ಎನ್ನುತ್ತಾ ಹೆಬ್ಬೆರಳು ಅನಾಮಿಕ ಸೇರಿಸಿ ಕಣ್ಣುಗಳನ್ನು ಮುಟ್ಟಿ, ಅನಿರುದ್ಧ, ಪುರುಷೋತ್ತಮ ಅಧೋಕ್ಷಜ, ನೃಸಿಂಹ ಎನ್ನುತ್ತಾ ನಾಭಿಯನ್ನು ಮುಟ್ಟಿ, ಅಚ್ಯುತನಾಮದಿಂದ ಹೆಬ್ಬೆರಳಿನಿಂದ ಹೃದಯವನ್ನು ಕೈಮೂಲದಿಂದ ಮುಟ್ಟಿ, ಜನಾರ್ದನ, ಉಪೇಂದ್ರ ಎನ್ನುತ್ತಾ ಎಲ್ಲ ಬೆರಳುಗಳಿಂದ ತಲೆಯನ್ನು ಮುಟ್ಟಿಕೊಳ್ಳಬೇಕು. ಹರೆ, ಕೃಷ್ಣ ಎನ್ನುತ್ತಾ ಬಾಹುಮೂಲಗಳನ್ನು ಕೈಮೂಲದಿಂದ ಮುಟ್ಟಬೇಕು. ಉಪನಯನವಾದ ದ್ವಿಜಾದಿಗಳಿಗೆ ಇದು ಆಚಮನವಿಧಿ. 

ಇದೇ ರೀತಿಯಲ್ಲಿ ಸಂಧ್ಯಾವಂದನೆ, ಹೋಮ, ಮತ್ತಿತರ ಕರ್ಮಗಳಲ್ಲಿ ಕೇಶವಾದಿ ನಾಮಗಳಿಗೆ ಚತುರ್ಥಿವಿಭಕ್ತಿಯನ್ನು ಸೇರಿಸಿ, ಸಂಬೋಧನಾ ಪ್ರಥಮವಿಭಕ್ತಿಯಲ್ಲಾಗಲೀ (ಕೇಶವಾಯ ಅಥವ ಕೇಶವ) ನಮಃ ಎಂಬುವ ಪದವನ್ನು ಕೊನೆಯಲ್ಲಿ ಸೇರಿಸಿ ಇಪ್ಪತ್ತನಾಲ್ಕು ನಾಮಗಳೊಂದಿಗೆ ಆಚಮನವನ್ನು ಎರಡುಸಲ ಆಚರಿಸಿದರೆ ದ್ವಿರಾಚಮನವಾಗುತ್ತದೆ. ಕರ್ಮಪ್ರಾರಂಭ-ಅಂತ್ಯಗಳಲ್ಲಿ ದ್ವಿರಾಚಮನ ಮಾಡಬೇಕು. ಅದು ಅಸಂಭವವಾದರೆ ಕೇಶವಾದಿ ಮೂರುನಾಮಗಳಿಂದ ನೀರು ಕುಡಿದು, ಎರಡುಸಲ ಕೈತೊಳೆದುಕೊಳ್ಳಬೇಕು. ನಂತರ ಕಿವಿ ಮುಟ್ಟಿಕೊಳ್ಳಬೇಕು. ಹೀಗೆ ಸಂಧ್ಯೆಗಳಿಗೆ ಇತರ ವಿಧಾನಗಳೂ ಹೇಳಲ್ಪಟ್ಟಿವೆ. ಶೂದ್ರಾದಿಗಳನ್ನು ಮುಟ್ಟಿಸಿಕೊಂಡಾಗ, ವಾಂತಿಯಾದಾಗ, ಸ್ನಾನಮಾಡಿದಾಗ, ಊಟ ತಿಂಡಿ ಸ್ವೀಕರಿಸಿದಾಗ, ನೀರುಕುಡಿದಾಗ, ಸ್ಮಶಾನದಿಂದ ಹಿಂತಿರುಗಿದಾಗ, ತನ್ನ ಪಾದಗಳನ್ನಲ್ಲದೆ ಇತರರ ಪಾದಗಳನ್ನು ತೊಳೆದಾಗ, ದ್ವಿರಾಚಮನವನ್ನು ಮಾಡಬೇಕು. ನೀರು ಸಿಕ್ಕದಿರುವ ಕಡೆಗಳಲ್ಲಿ ಕಿವಿಗಳನ್ನು ಸ್ಪರ್ಶಮಾಡಿಕೊಳ್ಳಬೇಕು. ಇತರ ಕರ್ಮಗಳನ್ನೂ ಕೂಡ ಹೀಗೆಯೇ ಮಾಡಬೇಕು. ಆಚಮನವಿಧಿಯನ್ನು ಭಕ್ತಿಯಿಂದ ಮಾಡುವವನಿಗೆ ದೈನ್ಯವೆಂಬುದಿರುವುದಿಲ್ಲ.

ಇನ್ನು ಬಾಯೊಳಗಿನ ದುರ್ಗಂಧವನ್ನು ನಿವಾರಿಸಲು ಮಾಡಬೇಕಾದ ದಂತಧಾವನ ವಿಧಾನವನ್ನು ಹೇಳುತ್ತೇನೆ. ಪರ್ವತಿಥಿಗಳು, (ಅಷ್ಟಮಿ, ಪೌರ್ಣಮಿ, ಅಮಾವಾಸ್ಯೆ), ಷಷ್ಠಿ, ಪಾಡ್ಯಮಿ, ನವಮಿ, ದ್ವಾದಶಿಗಳನ್ನೂ, ಆದಿ ಮಂಗಳವಾರಗಳನ್ನೂ, ಶ್ರಾದ್ಧ ದಿನವನ್ನೂ ಬಿಟ್ಟೂ ಮಿಕ್ಕ ದಿನಗಳಲ್ಲಿ ದಂತಧಾವನ ಮಾಡಿಕೊಳ್ಳಬೇಕು. ಮುಳ್ಳುಗಿಡ, ಕರ್ಜೂರ, ಕೇತಕಿ, ತೆಂಗಿನ ಕಡ್ಡಿಗಳಿಂದ ಹಲ್ಲು ಉಜ್ಜುವವನು ಚಂಡಾಲನಾಗುತ್ತಾನೆ. ಅತ್ತಿ, ಆಲ, ಉತ್ತರೇಣಿ, ಎಕ್ಕ, ಹೊಂಗೆ ಮತ್ತು ಅಂತಹುದೇ ಪುಣ್ಯಪ್ರದವಾದ ಕಡ್ಡಿಗಳಿಂದಲೇ ದಂತಧಾವನ ಮಾಡಿಕೊಳ್ಳಬೇಕು. ಬ್ರಾಹ್ಮಣನು ಹನ್ನೆರಡು ಅಂಗುಲ, ಕ್ಷತ್ರಿಯ ಒಂಭತ್ತು ಅಂಗುಲ, ವೈಶ್ಯ ಶೂದ್ರರು ಆರು ಅಂಗುಲ ಉದ್ದದ ಕಡ್ಡಿಗಳನ್ನು ಉಪಯೋಗಿಸಬೇಕು. "ಆಯುರ್ಬಿಲಂಚ_________" ಎನ್ನುವ ಮಂತ್ರದಿಂದ ಪ್ರಾರ್ಥಿಸಿ, ಮಂತ್ರ ಹೇಳುತ್ತಾ ಕಡ್ಡಿಯನ್ನು ಕೊಯ್ದು, ಅದರ ಕೊನೆಯನ್ನು ಮೃದುವಾಗಿ ಮಾಡಿ, ಹಲ್ಲು ಉಜ್ಜಬೇಕು. "ಮುಖ ದುರ್ಗಂಧಿ_______" ಎನ್ನುವ ಮಂತ್ರದಿಂದ ನೈರುತ್ಯ ಮೂಲೆಯಲ್ಲಿ ಕಡ್ಡಿಯನ್ನು ವಿಸರ್ಜಿಸಬೇಕು. ಹನ್ನೆರಡುಸಲ ಬಾಯಿ ಪುಕ್ಕಳಿಸಿ, ಎರಡುಸಲ ಆಚಮನ ಮಾಡಬೇಕು.

ನಂತರ ಸರ್ವಸಿದ್ಧಿಗಳೂ ಲಭಿಸುವುದಕ್ಕೆ ಪ್ರಾತಃಸ್ನಾನ ಮಾಡಬೇಕು. ಪ್ರಾತಃಸ್ನಾನದಿಂದ ಮಾನವರಿಗೆ ತೇಜಸ್ಸು, ಆಯುಸ್ಸು ವೃದ್ಧಿಯಾಗುತ್ತವೆ. ಪ್ರಜ್ಞೆ ಬೆಳೆಯುತ್ತದೆ. ದುಃಸ್ವಪ್ನ ಫಲಗಳು ನಾಶವಾಗುತ್ತವೆ. ಸರ್ವ ದೇವತೆಗಳೂ ವಶ್ಯರಾಗುತ್ತಾರೆ. ಸೌಭಾಗ್ಯ, ಸುಖ, ಪುಷ್ಟಿ, ಸಂತೋಷಗಳು ಲಭಿಸುತ್ತವೆ. ಸ್ನಾನವು ದಾರಿದ್ರ್ಯ ಚಿಂತನೆ, ಶೋಕಗಳನ್ನು ಹರಿಸುವುದು. ಪಾಪವನ್ನು ನಾಶಮಾಡುವುದು.

ಗೃಹಸ್ಥನು ನಿತ್ಯವೂ ಪ್ರಾತಃಕಾಲದಲ್ಲಿ, ಮಧ್ಯಾಹ್ನಕಾಲದಲ್ಲಿ ಸ್ನಾನಮಾಡಬೇಕು. ಯತಿ, ವ್ರತಮಾಡುವವನು, ವನವಾಸಿ, ತ್ರಿಕಾಲ ಸ್ನಾನವನ್ನಾಚರಿಸಬೇಕು. ಬ್ರಹ್ಮಚಾರಿ ಒಂದುಸಲ ಮಾತ್ರ ಸ್ನಾನ ಮಾಡಬೇಕು. ಸಂಕಟಬಂದಾಗ, ನೀರು ದೊರಕದಿದ್ದಾಗ, ಅಶಕ್ತಿಯಿಂದಿದ್ದಾಗ, ರೋಗದಿಂದಿರುವಾಗ, ವಾಯುಸ್ನಾನವನ್ನು ಗೋಧೂಳಿಯಿಂದ (ಆಗ್ನೇಯ ಭಸ್ಮ) "ಆಪೋಹಿಷ್ಠಾ_____-"ಎನ್ನುವ ಮೂರು ಮಂತ್ರಗಳನ್ನು ಹೇಳುತ್ತಾ ಮೂರುಸ್ನಾನಗಳನ್ನು ಮಾಡಬೇಕು. ಭೌಮ ಸ್ನಾನವೆನ್ನುವುದು ಮಣ್ಣಿನಿಂದ ಮಾಡಬಲ್ಲದಾದದ್ದು. ದಿವ್ಯಸ್ನಾನವು ಬಿಸಿಲುಕೂಡಿದ ಮಳೆಯಲ್ಲಿ ಮಾಡುವ ಸ್ನಾನವು. ಮೌನವಾಗಿ ವಿಷ್ಣುಧ್ಯಾನವನ್ನು ಮಾಡಿದರೂ, ಗುರುದರ್ಶನ ಮಾಡಿದರೂ, ತಂದೆತಾಯಿಗಳ ಪಾದಜಲವನ್ನು ಶರೀರದ ಮೇಲೆ ಚುಮುಕಿಸಿಕೊಂಡರೂ, ತೀರ್ಥಸ್ನಾನ ಫಲವು ಬರುವುದು. ಇವು ಗೌಣ ಸ್ನಾನಗಳು. ಸಂಕಟಪರಿಸ್ಥಿತಿಗಳಲ್ಲಿ ತಿಳಿದವರು ಇಂತಹ ಸ್ನಾನವನ್ನು ಮಾಡಬಹುದು. ಚಂಡಾಲನನ್ನು ತಾಕಿದರೆ ಜಲಸ್ನಾನದಿಂದ ಮಾತ್ರವೇ ಶುದ್ಧಿಯಾಗುತ್ತದೆ. ವಾಂತಿಯಾದಾಗ, ರತಿಕ್ರಿಯಾನಂತರ, ಜಲಸ್ನಾನದಿಂದಲೇ ಶುದ್ಧಿ. ಶೂದ್ರಸ್ಪರ್ಶವಾದರೆ ಮಂತ್ರಸ್ನಾನವನ್ನು ಮಾಡಬಹುದು. ಧೃಢಶರೀರಿಯಾದವನಿಗೆ ಅಂತಹ ಸಂದರ್ಭಗಳಲ್ಲಿ ಜಲಸ್ನಾನವೇ ಮುಖ್ಯ.

ರೋಗಿಗಳು, ಅಶಕ್ತರು ತಮ್ಮ ಶಕ್ತ್ಯಾನುಸಾರ ಗೌಣಸ್ನಾನವನ್ನು ಮಾಡಬಹುದು. ಅಂತಹವರು ಉಷ್ಣೋದಕದಲ್ಲೂ ಸ್ನಾನಮಾಡಬಹುದು. ಸ್ವತಃ ಪವಿತ್ರವೇ ಆದ ನೀರು ಅಗ್ನಿ ಸ್ಪರ್ಶದಿಂದ ವಿಶೇಷ ಪವಿತ್ರವಾಗಿ ಗೃಹಸ್ಥರಿಗೆ ಶ್ರೇಷ್ಠವಾದದ್ದು. ಮನೆಯಲ್ಲಿ ಉಷ್ಣೋದಕ ಸ್ನಾನ ಮಾಡಿದರೆ, ಆಚಮನ, ಅಘಮರ್ಷಣ, ಮಂತ್ರಪಠಣ, ಸಂಕಲ್ಪ, ತರ್ಪಣಗಳು, ಬಟ್ಟೆಯನ್ನು ಹಿಂಡುವುದು ಬೇಕಾಗಿಲ್ಲ. ತಣ್ಣೀರು ಬೆರೆಸಿದ ಬಿಸಿನೀರಿನಲ್ಲಿ ಸ್ನಾನಮಾಡುವುದಾದರೆ, "ಆಪೋಹಿಷ್ಠಾ_________" ಎನ್ನುವ ಮಂತ್ರದಿಂದ, ಗಾಯತ್ರಿ ಮಂತ್ರದಿಂದ ಅಭಿಮಂತ್ರಿಸಿ, ಸ್ನಾನಮಾಡಿ ಕೊನೆಯಲ್ಲಿ ಮಾರ್ಜನ ಮಾಡಿಕೊಳ್ಳಬೇಕು.(ನೀರು ತಲೆಯಮೇಲೆ ಚುಮುಕಿಸಿಕೊಳ್ಳಬೇಕು). ಪುತ್ರಜನನ ಕಾಲದಲ್ಲಿ, ಸಂಕ್ರಾಂತಿಯಂದು, ಅಶೌಚವಾದಾಗ, ಶ್ರಾದ್ಧದಿನದಂದು, ವ್ರತದೀಕ್ಷೆಮಾಡುವಾಗ, ಪರ್ವದಿನಗಳಲ್ಲಿ, ಬಿಸಿನೀರಿನಲ್ಲೂ, ಮಂಗಳ, ಉತ್ಸವಾದಿ ದಿನಗಳಲ್ಲಿ ತಣ್ಣೀರಿನಲ್ಲೂ ಸ್ನಾನ ಮಾಡಬಾರದು. ನದಿಯಲ್ಲಿ ಪ್ರವಾಹಕ್ಕೆದುರಾಗಿ, ಇಲ್ಲವೇ ಪೂರ್ವದಿಕ್ಕಿಗೆ ಮುಖಮಾಡಿ, ಪವಿತ್ರಧರಿಸಿ, ಶಿಖೆಯನ್ನು ಮುಡಿಯಂತೆ ಕಟ್ಟಿ, ಮೌನವಾಗಿ ಸ್ನಾನ ಮಾಡಬೇಕು. ಅಘಮರ್ಷಣ ಜಪ ಮಾಡಿ, ದೇವಾದಿಗಳಿಗೆ ತರ್ಪಣ ನೀಡಿ, ಮಂತ್ರವಿಧಿಯಾಗಿ ಆಚಮನ ಮಾಡಿ, ವಸ್ತ್ರ ಧರಿಸಿ, ಹರಿಸ್ಮರಣೆ ಮಾಡಬೇಕು. "ಅಪವಿತ್ರಃ ಪವಿತ್ರೋವಾ_________" ಎನ್ನುವ ಮಂತ್ರ ಹೇಳಿ, "ಆಪೋಹಿಷ್ಠಾ________" ಎನ್ನುವ ಮಂತ್ರದಿಂದ ತಲೆಯಮೇಲೆ ನೀರು ಚುಮುಕಿಸಿಕೊಳ್ಳಬೇಕು (ಮಾರ್ಜನ). ಭಾನುವಾರ ಅಭ್ಯಂಗನವು ನಿಷಿದ್ಧ. ಹಾಗೆ ಮಾಡಿದರೆ ಜ್ವರ. ಸೋಮವಾರ ಕಾಂತಿಹೀನತೆ. ಮಂಗಳವಾರ ಮರಣ ಪ್ರಾಪ್ತಿಯಾಗುತ್ತದೆ. ಬುಧವಾರ ಶ್ರೀಲಾಭ, ಗುರುವಾರ ಹಾನಿ, ಶುಕ್ರವಾರ ಪುತ್ರಹಾನಿ, ಶನಿವಾರ ಸಂಪತ್ ಲಾಭಗಳೂ ಉಂಟಾಗುವುವು. ಹೀಗೆ ವಿಶೇಷಗಳನ್ನರಿತುಕೊಂಡು ಪುಣ್ಯ ಸ್ತ್ರೀ ತಲೆಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಅಶಕ್ತನಾದರೆ, ನದಿಗೆ ಹೋಗಿ, ನದಿಯನ್ನು ಧ್ಯಾನಿಸಿ, ಬಟ್ಟೆಯನ್ನು ಒದ್ದೆ ಮಾಡಿಕೊಂಡು ಮೈ ಒರೆಸಿಕೊಳ್ಳಬೇಕು. ಅದರಿಂದಲೂ ಸ್ನಾನ ಮಾಡಿದ ಫಲವುಂಟಾಗುತ್ತದೆ. ಕಾಷಾಯಬಣ್ಣ, ರಕ್ತವರ್ಣ, ಮಾಸಿದ, ಹರಿದ, ಸುಟ್ಟ ವಸ್ತ್ರಗಳನ್ನು ಧರಿಸಿದರೂ, ಒಂದೇ ವಸ್ತ್ರವನ್ನು ಧರಿಸಿದರೂ ರಾಕ್ಷಸರು ಅಂತಹವನ ಪುಣ್ಯವನ್ನು ಅಪಹರಿಸುತ್ತಾರೆ. ಬ್ರಾಹ್ಮಣನಿಗೆ ಶ್ವೇತವಸ್ತ್ರವೇ ಮುಖ್ಯವಾದದ್ದು. ಅಂಗವಸ್ತ್ರವೂ ಬಿಳಿಯ ಬಣ್ಣದ್ದೇ ಆಗಿರಬೇಕು. ಅಂಗವಸ್ತ್ರವನ್ನು ಧರಿಸಿದ ನಂತರ ಭಸ್ಮಧಾರಣೆ ಮಾಡಬೇಕು.

ದ್ವಾರವತಿ ಮೃತ್ತಿಕೆಯು ದೊರೆಯದಿದ್ದರೆ ಗಂಗಾ ಮೃತ್ತಿಕೆಯನ್ನು ಭಸ್ಮವಾಗಿ ಧರಿಸಬೇಕು. ಊರ್ಧ್ವಪುಂಡ್ರ ಧಾರಣೆ ಮಾಡಬೇಕು. ಪುಷ್ಟಿಯನ್ನು ಕೋರುವವನು ಅಂಗುಷ್ಟದಿಂದ ವಿಷ್ಣುಸಾಯುಜ್ಯವನ್ನು ಕೊಡುವ ಮೃತ್ತಿಕೆಯನ್ನು ಧರಿಸಬೇಕು. ಆಯುಷ್ಯಕಾಮನು ಮಧ್ಯಮಾಂಗುಳಿಯಿಂದ, ಅನ್ನಕಾಮಿ ಅನಾಮಿಕದಿಂದ, ಮೋಕ್ಷಕಾಮಿ ತರ್ಜನಿಯಿಂದ ಧರಿಸಬೇಕು. ಉಗುರುಗಳಿಂದ ಧರಿಸಿದರೆ ಪಾಪವುಂಟಾಗುತ್ತದೆ. ಹತ್ತು ಅಂಗುಲ ಉದ್ದವಾಗಿರುವಂತೆ ಧರಿಸುವುದು ಉತ್ತಮವು. ಎಂಟು ಅಂಗುಲ ಮಧ್ಯಮ. ಆರು ಅಂಗುಲ ಕನಿಷ್ಠ. ತಮ್ಮ ತಮ್ಮ ಆಚಾರದಂತೆ ಮೃತ್ತಿಕಾಧಾರಣೆ ಮಾಡಬೇಕು. ಕೇಶವ ಎನ್ನುತ್ತಾ ಲಲಾಟದಲ್ಲಿ, ನಾರಾಯಣ ಎನ್ನುತ್ತಾ ನಾಭಿಯಲ್ಲಿ, ಮಾಧವ-ವಕ್ಷಸ್ಥಲ, ಗೋವಿಂದ-ಕಂಠ, ವಿಷ್ಣು ನಾಮದಿಂದ ದಕ್ಷಿಣ ಕುಕ್ಷಿಯಲ್ಲಿ, ಮಧುಸೂದನ ನಾಮದಿಂದ ದಕ್ಷಿಣ ಬಾಹು, ತ್ರಿವಿಕ್ರಮ ನಾಮದಿಂದ ದಕ್ಷಿಣ ಕರ್ಣ, ವಾಮನ ನಾಮದಿಂದ ವಾಮ ಕುಕ್ಷಿ, ಶ್ರೀಧರ ನಾಮದಿಂದ ವಾಮ ಬಾಹು, ಹೃಷೀಕೇಶ ಎಂದು ಎರಡನೆಯ ಕಿವಿ, ಪದ್ಮನಾಭ ಎಂದು ಪೃಷ್ಠ, ದಾಮೋದರ ಎಂದು ಮೂರ್ಧ್ನಿ: ಈ ರೀತಿಯಲ್ಲಿ ಶುಕ್ಲಪಕ್ಷದಲ್ಲಿ ಧರಿಸಬೇಕು. ಹಾಗೆಯೇ ಕೃಷ್ಣಪಕ್ಷದಲ್ಲಿ ಸಂಕರ್ಷಣಾದಿ ನಾಮಗಳಿಂದ ಊರ್ಧ್ವಪುಂಡ್ರವನ್ನು ಮೃತ್ತಿಕೆಯಿಂದ ಧರಿಸಿ, ನಂತರ ಭಸ್ಮವನ್ನೂ ಧರಿಸಬೇಕು. ಹರಿ-ಹರರನ್ನು ಸಂತೋಷಗೊಳಿಸಿದ್ದರಿಂದ ಭಕ್ತಿ-ಮುಕ್ತಿಗಳು ನಿಶ್ಚಯವಾಗಿಯೂ ಲಭಿಸುವುವು. 

ಶ್ರಾದ್ಧಾದಿಗಳು, ದೇವತಾಕಾರ್ಯಗಳಲ್ಲಿ, ವಿವಾಹಾದಿ ದಿನಗಳಲ್ಲಿ, ಶುಭವಾದ ಅಭ್ಯಂಗನವಾದಮೇಲೂ, ಪುರುಡು ದಿನಗಳಲ್ಲೂ ಮೃತ್ತಿಕಾ ಧಾರಣೆ ಮಾಡಬಾರದು. ಬ್ರಹ್ಮ ಯಜ್ಞದ ಸಮಯದಲ್ಲಿ, ತರ್ಪಣ ಕೊಡುವಾಗ, ಯಜ್ಞ ಸಮಯದಲ್ಲಿ, ಸಂಧ್ಯಾದಿ ಕರ್ಮ ಸಮಯಗಳಲ್ಲಿ ದರ್ಭೆಗಳನ್ನು ಸ್ವೀಕರಿಸಬೇಕು. ದರ್ಭೆಗಳಲ್ಲಿ - ಕುಶ, ಕಾಶ, ಯವ, ಉಶಿರ, ಗೋಧೂಮ, ವ್ರೀಹಿ, ಕುಂದರ, ತೃಣ, ಮುಂಜ, ದೂರ್ವ - ಎಂದು ಹತ್ತು ವಿಧ. ದೂರ್ವಗಳನ್ನು ಪ್ರತಿದಿನವೂ ಇಲ್ಲವೇ ಶ್ರಾವಣ ಅಮಾವಾಸ್ಯೆಯ ದಿನಗಳಲ್ಲಿ ತರಬೇಕು. ಅವು ಆಯಾತಯಾಮಗಳು (ಜಾಮ ಹುಟ್ಟುವುದಕ್ಕೆ ಮುಂಚೆ ತಂದವು). ಮಂತ್ರಪೂರ್ವಕವಾಗಿ ಅವನ್ನು ತಂದುಕೊಳ್ಳಬೇಕು. ವಿಪ್ರನು ನಾಲ್ಕು, ಕ್ಷತ್ರಿಯನು ಮೂರು, ವೈಶ್ಯನು ಎರಡು, ಶೂದ್ರನು ಒಂದು ದೂರ್ವೆಯಿಂದ ಪವಿತ್ರವನ್ನು ಮಾಡಿ ಕೈಯಲ್ಲಿ ಧರಿಸಬೇಕು. ದೂರ್ವಗಳ ಮಹಿಮೆ ಅಪಾರ. ಅದರ ಮೂಲದಲ್ಲಿ ರುದ್ರ, ಅಗ್ರದಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು ಇದ್ದಾರೆ. ದೂರ್ವಾ ಪವಿತ್ರವು ಪಾಪ ನಾಶಕರವು. ಕೈಯಲ್ಲಿ ಚಕ್ರ ಹಿಡಿದು ವಿಷ್ಣುವು ದೈತ್ಯರನ್ನು ನಾಶಮಾಡಿದಂತೆ ದೂರ್ವಾ ಪವಿತ್ರ ಧಾರಣೆಯಿಂದ ಪಾತಕಗಳು ನಿಶ್ಶೇಷವಾಗಿ ಪರಿಹರಿಸಲ್ಪಡುವುವು. ಅಗ್ನಿ ಸ್ಪರ್ಶದಿಂದ ತೃಣಪರ್ವತವು ಭಸ್ಮವಾಗಿ ಹೋಗುವಂತೆ ದೂರ್ವಾ ಪವಿತ್ರದಿಂದ ಪಾಪಗಳು ನಾಶವಾಗಿ ಹೋಗುತ್ತವೆ. ಗ್ರಂಥಿ (ಗಂಟು) ಹಾಕಿದ ಪವಿತ್ರವನ್ನು ಧರಿಸಿ ಬ್ರಹ್ಮಯಜ್ಞ, ಗಂಟು ಹಾಕದೆ ಇರುವ ಪವಿತ್ರವನ್ನು ಧರಿಸಿ ಊಟ ಮಾಡಬೇಕು. ಬ್ರಾಹ್ಮಣನು ಎರಡು ಕೈಗಳಲ್ಲಿ ಭಕ್ತಿಯಿಂದ ಪವಿತ್ರ ಧಾರಣೆ ಮಾಡಬೇಕು. ಕರ್ಪೂರವನ್ನು ಬೆಂಕಿ ಸುಟ್ಟಂತೆ, ಪವಿತ್ರವು ಪಾಪ ಸಮೂಹವನ್ನು ಕ್ಷಣದಲ್ಲಿ ಸುಟ್ಟುಹಾಕುವುದು. ಸುಮಾರು ನಾಲ್ಕಂಗುಲ ಉದ್ದವಿರುವ ಎರಡು ದರ್ಭೆಗಳ ಪವಿತ್ರವು ಕರ್ಮಕಾಲದಲ್ಲಿ ವಿಹಿತವು. ದಾನ ಮಾಡುವಾಗ, ಜಪ ಮಾಡುವಾಗ, ಸ್ವಾಧ್ಯಾಯ ಸಮಯದಲ್ಲಿ, ಹೋಮ ಮಾಡುವಾಗ, ಪವಿತ್ರವಾದ ಕರ್ಮಗಳನ್ನು ಮಾಡುವಾಗ ದರ್ಭೆ ಮುದ್ರೆ ಕೂಡಿದ ಬಂಗಾರದ ಪವಿತ್ರಗಳನ್ನು ಧರಿಸಬೇಕು. ದೇವ ಕಾರ್ಯಗಳಲ್ಲಿ ಬಂಗಾರ ಮುದ್ರೆಯಿರುವ ಪವಿತ್ರವನ್ನು, ಪಿತೃಕರ್ಮಗಳಲ್ಲಿ ಬೆಳ್ಳಿ ಮುದ್ರೆಯಿರುವ ಪವಿತ್ರವನ್ನು ಧರಿಸಬೇಕು. ಅನಾಮಿಕದಲ್ಲಿ ಸುವರ್ಣ ಪವಿತ್ರವನ್ನು, ತರ್ಜನಿಯಲ್ಲಿ ಬೆಳ್ಳಿಯ ಪವಿತ್ರವನ್ನು ತೆಗೆದುಕೊಳ್ಳಬೇಕು. ಖಡ್ಗ ಮುದ್ರೆಯದನ್ನು ಕನಿಷ್ಠಿಕೆಯಲ್ಲಿ ಧರಿಸಬೇಕು. ಜೀವಂತ ತಂದೆ ಇರುವವನು ಖಡ್ಗ ಮುದ್ರೆಯದನ್ನು ಹಾಕಿಕೊಳ್ಳಬಾರದು. ಯೋಗ ಪಟ್ಟ, ಉತ್ತರೀಯ, ತರ್ಜನಿಯಲ್ಲಿ ರಜತ ಮುದ್ರಿಕೆ, ಗಯಾಶ್ರಾದ್ಧ ಪಾದುಕೆಗಳನ್ನು ಜೀವಂತ ಪಿತೃವಾದವನು ಧರಿಸಬಾರದು. ಗಯಾ ಶ್ರಾದ್ಧ ಮಾಡಬಾರದು. ನವರತ್ನಗಳ ಮುದ್ರಿಕೆಯನ್ನು ಧರಿಸುವವನಿಗೆ ಪಾತಕಗಳು ತಟ್ಟುವುದಿಲ್ಲ. ದ್ವಿಜನಾದವನು ಸದಾಕಾಲ ಒಂದು ರತ್ನವಿರುವ ಮುದ್ರಿಕೆಯನ್ನು ಧರಿಸಬೇಕು.

ಮುನಿಗಳೇ, ಇನ್ನು ಸಂಧ್ಯಾಕಾಲವನ್ನು ಕುರಿತು ಹೇಳುತ್ತೇನೆ. ಅದು ಮೂರು ವಿಧಗಳು. ನಕ್ಷತ್ರ ಸಹಿತ ಸಂಧ್ಯೆ ಉತ್ತಮವು. ನಕ್ಷತ್ರಗಳು ಅದೃಶ್ಯವಾದ ಸಂಧ್ಯೆ ಮಧ್ಯಮವು. ಸೂರ್ಯ ಸಹಿತವಾದ ಸಂಧ್ಯೆ ಅಧಮವು. ಹೀಗೆ ಪ್ರಾತಸ್ಸಂಧ್ಯೆ ಮೂರುವಿಧ. ಒಂದೂವರೆ ಜಾಮವಾದ ಮೇಲೆ ಸಾಯಂಕಾಲದವರೆಗೂ ಮಧ್ಯಾಹ್ನ ಸಂಧ್ಯೆ. ಶಾಸ್ತ್ರ ವಿಧಾಯಕವಾದ ಕಾಲಕ್ಕೆ ಮುಂಚೆ ಮಾಡುವ ಕರ್ಮಾಚರಣವು ವ್ಯರ್ಥವು. ಶಿಖೆಯನ್ನು ಮುಡಿಯಾಗಿ ಹಾಕಿ, ದರ್ಭಪಾಣಿಯಾಗಿ, ಎರಡು ಸಲ ಆಚಮನ ಮಾಡಿ, ಯಥಾ ವಿಧಿಯಾಗಿ, ಕನಿಷ್ಠಿಕ-ಅನಾಮಿಕ-ಅಂಗುಷ್ಠಗಳಿಂದ ಯತಿಯಾದವನು ಹಾಗೂ ಬ್ರಹ್ಮಚಾರಿಯಾದವನು, ಐದೂ ಬೆರಳುಗಳಿಂದ ಗೃಹಸ್ಥನು, ಮೂಗು ಹಿಡಿದು, ಮೆಲ್ಲಗೆ ಉಸಿರು ತೆಗೆದುಕೊಂಡು, ಕುಂಭನ ಮಾಡಿ, ಓಂಕಾರದಿಂದ ಕೂಡಿದ ವ್ಯಾಹೃತಿಗಳನ್ನು ಏಳು ಸಲ, ಸಶಿರವಾದ ಗಾಯತ್ರಿಯನ್ನು ಮೂರುಸಲ ಜಪಿಸಿ, ನಿಧಾನವಾಗಿ ಪಿಂಗಳೆಯಿಂದ ಹೊರಕ್ಕೆ ಬಿಡಬೇಕು. ಎಡಗೈಯಲ್ಲಿ ಚಿನ್ನ, ಬೆಳ್ಳಿ ಅಥವಾ ಮರದಿಂದ ಮಾಡಿದ ನೀರು ತುಂಬಿದ ಪಾತ್ರೆಯನ್ನು ತೆಗೆದುಕೊಂಡು ಮಾರ್ಜನ ಮಾಡಿಕೊಳ್ಳಬೇಕು. ಒಡೆದು ಹೋದ ಪಾತ್ರೆಯೂ ನಿಂದ್ಯವು. ಎರಡು ಮುಖಗಳಿರುವ ಮಣ್ಣಿನ ಪಾತ್ರೆಯೂ ವ್ಯರ್ಥವೇ! ವರಾಂತಗಳಿಂದ ಮೂರ್ಧ್ನಿಯಲ್ಲಿ; ನಾಂತಗಳಿಂದ ಪಾದಗಳಲ್ಲಿ; ಧಾಂತಗಳಿಂದ ಹೃದಯದಲ್ಲಿ; "ಆಪೋಹಿಷ್ಠಾ--------" ಎನ್ನುವ ಮಂತ್ರದಿಂದ ಮಾರ್ಜನ ಮಾಡಿಕೊಳ್ಳಬೇಕು. ಪ್ರಾತಃಕಾಲದಲ್ಲಿ "ಸೂರ್ಯಶ್ಚ---" ಎನ್ನುವ ಮಂತ್ರ, ಮಾಧ್ಯಾಹ್ನ ಕಾಲದಲ್ಲಿ "ಆಪಃ ಪುನಹ್----" ಎನ್ನುವ ಮಂತ್ರ, ಸಾಯಂಕಾಲದಲ್ಲಿ "ಅಗ್ನಿಶ್ಚ---" ಎನ್ನುವ ಮಂತ್ರದಿಂದ ಮಂತ್ರಾಚಮನ ಮಾಡಿ, ಮತ್ತೆ ಆಚಮನ ಮಾಡಬೇಕು. "ಆಪೋಹಿಷ್ಠಾ----" ಎನ್ನುವ ಸೂಕ್ತದಿಂದ ಮಾರ್ಜನ, "ಋತಂಚ-----"ಎಂದು ಅಘಮರ್ಷಣ ಮಾಡಿ, ಆಚಮನ ಮಾಡಿ, ಗಾಯತ್ರಿ ಮಂತ್ರದಿಂದ ಮೂರುಸಲ ಅರ್ಘ್ಯ ಕೊಡಬೇಕು. ಸೂರ್ಯನಿಗೆ, ಸುಮಾರು ಹನ್ನೆರಡು ಅಂಗುಲ ಮೇಲೆ ಎತ್ತಿ ಹಿಡಿದ ಅಂಜಲಿಯಿಂದ ನೀರು ಬಿಡುವುದು ಅರ್ಘ್ಯವು. ಕಾಲಾತಿಕ್ರಮಣವಾದರೆ ಹೆಚ್ಚಾಗಿ ಒಂದು ಅರ್ಘ್ಯವನ್ನು, ಎಂದರೆ ನಾಲ್ಕು ಅರ್ಘ್ಯಗಳನ್ನು ಕೊಡಬೇಕು. ಮಧ್ಯಾಹ್ನ, "ಹಗ್ಂಸಃ----"ಎನ್ನುವ ಮಂತ್ರದಿಂದ ಬಗ್ಗಿ ನಿಂತು ಒಂದು ಸಲ ಮಾತ್ರ ಅರ್ಘ್ಯ ಕೊಡಬೇಕು. ಸಾಯಂಕಾಲ ಕೂತು ಅರ್ಘ್ಯ ಕೊಡಬೇಕು. ಅರ್ಘ್ಯ ಕೊಡುವುದಕ್ಕೆ ಕಾರಣವನ್ನು ಹೇಳುತ್ತೇನೆ.

ಮಂದೇಹರೆಂಬ ಮುವ್ವತ್ತಮೂರು ಕೋಟಿ ರಾಕ್ಷಸರು ಇದ್ದಾರೆ. ಸೂರ್ಯೋದಯದಲ್ಲಿ ಅವರು ವಿಘ್ನವನ್ನುಂಟು ಮಾಡಿ ಸೂರ್ಯನನ್ನು ಉದಯಿಸಲು ಬಿಡುವುದಿಲ್ಲ. ಅದರಿಂದ ಕರ್ಮಲೋಪವಾಗುತ್ತದೆ. ದೇವತೆಗಳಿಗೆ ಉಪವಾಸವುಂಟಾಗುತ್ತದೆ. ಅದರಿಂದ ಜಗತ್ತು ನಾಶವಾಗುತ್ತದೆ. ಆ ಕಾರಣದಿಂದ ಅರ್ಘ್ಯವನ್ನು ನೀಡಬೇಕು. ಅವು ವಜ್ರಸಮಾನವಾದವು. ಆ ಅರ್ಘ್ಯಗಳು ಬ್ರಹ್ಮ ಕುಲದಿಂದ ಉದ್ಭವಿಸಿದ ದೈತ್ಯರನ್ನು ಪ್ರತಿ ದಿನವೂ ಸಂಹಾರ ಮಾಡುವುದು. ಆ ಬ್ರಹ್ಮಹತ್ಯಾ ಶಾಂತಿಗಾಗಿ ಭೂಪ್ರದಕ್ಷಿಣೆ ಕರ್ತವ್ಯವು. "ಅಸಾವಾದಿತ್ಯೋ ಬ್ರಹ್ಮ" ಎಂಬ ಮಂತ್ರದಿಂದ ಧ್ಯಾನಿಸಿ, ಪ್ರದಕ್ಷಿಣೆಯಾಗಿ ನೀರು ಚೆಲ್ಲಿದರೆ ಬ್ರಹ್ಮಹತ್ಯೆಯಿಂದ ಬ್ರಾಹ್ಮಣನು ಶುಚಿಯಾಗುತ್ತಾನೆ. ಈ ವಿಧದಲ್ಲಿ, ಮನೆಯಲ್ಲಿ ಮಾಡಿದರೆ ಒಂದು ಗುಣ, ಮನೆಯಿಂದಾಚೆ ಮಾಡಿದರೆ ಹತ್ತು ಗುಣ, ನದಿಯಲ್ಲಿ ಮಾಡಿದರೆ ನೂರುಗುಣ, ತೀರ್ಥ ಪುಷ್ಕರಣಿಗಳಲ್ಲಿ ಮಾಡಿದರೆ ಸಹಸ್ರಗುಣ, ಪುಣ್ಯಫಲ ಲಭಿಸುತ್ತದೆ. ಗಂಗೆಯು ಸುರ ನದಿಯಾದದ್ದರಿಂದ ಅಲ್ಲಿ ಸಂಧ್ಯಾವಂದನೆ ಮಾಡಿದರೆ ಅಮಿತವಾದ ಪುಣ್ಯವುಂಟಾಗುತ್ತದೆ. ಬಹಿಃ ಪ್ರದೇಶದಲ್ಲಿ ಸಂಧ್ಯಾವಂದನೆ ಮಾಡಿದರೆ ಹಗಲು ಹೊತ್ತು ರತಿ, ಸುರಾಪಾನ, ಅಸತ್ಯ ಭಾಷಣಗಳಿಂದ ಬರುವಂತಹ ಪಾಪಗಳು ನಾಶವಾಗುತ್ತವೆ. ಬಹಿಃ ಪ್ರದೇಶದಲ್ಲಿ ಮಾಡಿದ ಜಪವೂ ಫಲ ಕೊಡುತ್ತದೆ. ಗೃಹದಲ್ಲಿ ಒಂದು ಗುಣ, ನದಿಯಲ್ಲಿ ಮೂರು ಗುಣ, ವನದಲ್ಲಿ ದಶ ಗುಣ, ಗೋಶಾಲೆಯಲ್ಲಿ ಹಾಗೂ ಅಗ್ನಿಗೇಹದಲ್ಲಿ ನೂರು ಗುಣ, ತೀರ್ಥ-ದೇವಸನ್ನಿಧಿಗಳಲ್ಲಿ ಸಹಸ್ರ ಗುಣ, ಹರಿ ಹರ ಸಮೀಪದಲ್ಲಿ ಅನಂತವಾದ ಪುಣ್ಯ ಲಭಿಸುತ್ತದೆ. ಮರದ ಪೀಠದ ಮೇಲೆ ಕೂತು ಜಪ ಮಾಡಿದರೆ ದುಃಖ, ಯಶೋಹಾನಿ, ಋಣ ಉಂಟಾಗುತ್ತದೆ. ಚಿಗುರೆಲೆಯ ಮೇಲೆ ಕೂತು ಜಪ ಮಾಡಿದರೆ ದಾರಿದ್ರ್ಯ, ಕಲ್ಲಿನ ಮೇಲೆ ವ್ಯಾಧಿ, ಕುಶಾಸನದ ಮೇಲೆ ವಶೀಕರಣ, ರೋಗ ಪಾಪ ವಿನಾಶ ಉಂಟಾಗುತ್ತದೆ. ಪ್ರಜ್ಞೆ ಆಯುಸ್ಸು ವೃದ್ಧಿಯಾಗುತ್ತದೆ. ಭಸ್ಮದಿಂದ ವ್ಯಾಧಿ ನಾಶನ, ಕಂಬಳಿಯ ಮೇಲೆ ಸೌಖ್ಯ, ಅಲ್ಲದೆ ಪೀಠವೂ ಸುಖಕರವಾಗಿರುತ್ತದೆ. ಕೃಷ್ಣಾಜಿನದ ಮೇಲೆ ಮಾಡಿದ ಜಪ ಜ್ಞಾನದಾಯಕವು. ವ್ಯಾಘ್ರ ಚರ್ಮದ ಮೇಲೆ ಸಿರಿ, ಮೋಕ್ಷಗಳುಂಟಾಗುವುವು. ಆಸನದಲ್ಲಿ ಕುಳಿತು, ನಿಯಮವಾಗಿ ಭೂಪ್ರಾರ್ಥನೆ ಮಾಡಿ, ಭೂತೋಚ್ಛಾಟನೆ ಮಾಡಿ, ಅಂಗನ್ಯಾಸ ಪೂರ್ವಕವಾಗಿ ದೇವೀ ರೂಪವನ್ನು ಏಕಾಗ್ರ ಚಿತ್ತದಿಂದ ಭಾವಿಸಿಕೊಳ್ಳಬೇಕು. ಅಕ್ಷರ ಪೂರ್ವಕವಾದ ಆರ್ಷ ದೈವತ ಛಂದಸ್ಸುಗಳನ್ನು ಸ್ಮರಿಸುತ್ತಾ, ನ್ಯಾಸ ಮಾಡಿ, ತತ್ತ್ವ(ಸ್ವರೂಪ) ಮುದ್ರೆಗಳನ್ನು ಪ್ರದರ್ಶಿಸಿ, ಜಪದ ಪ್ರಧಾನ ದೇವತೆಯನ್ನು "ಬಾಲಬಾಲಾದಿತ್ಯ------"ಎನ್ನುವ ಮೂರು ಧ್ಯಾನ ಶ್ಲೋಕಗಳಿಂದ ತ್ರಿಕಾಲದಲ್ಲೂ ಧ್ಯಾನಿಸಿ, "ಅಮ್ಮ ವರದಾಯಿನಿ, ಬಾ" ಎಂದು, ಪೂರ್ವ ಮುಖನಾಗಿ ನಿಂತು, ಏಕಾಗ್ರ ಮನಸ್ಕನಾಗಿ, ಮಂತ್ರಾರ್ಥವನ್ನು ಅನುಸಂಧಾನ ಮಾಡಿಕೊಳ್ಳುತ್ತಾ, ಸಾವಧಾನವಾಗಿ ಜಪ ಮಾಡ ಬೇಕು. ಓಂಕಾರ ವ್ಯಾಹೃತಿಗಳಿಂದ ಗಾಯತ್ರಿ ಮಂತ್ರ ಪಾದಗಳನ್ನು ಬಿಡಿಸಿ, ಮಾಲೆ ಹಿಡಿದು, ವಸ್ತ್ರವನ್ನು ಹೊದೆಸಿ, ಸಮಾಧಾನ ಚಿತ್ತನಾಗಿ, ನಾಸಿಕಾಗ್ರದ ಮೇಲೆ ದೃಷ್ಟಿಯನ್ನು ನಿಲ್ಲಿಸಿ, ನಿಧಾನವಾಗಿ ಗಾಯತ್ರಿಯನ್ನು ಜಪಿಸಬೇಕು. ಜಪ ಪೂರ್ತಿಯಾದ ಮೇಲೆ ಮತ್ತೆ ಅಂಗ ಹೃದಯಾದಿ ನ್ಯಾಸ ಮಾಡಬೇಕು. ಮಕಾರವೆಂದರೆ ಮನಸ್ಸು ಎಂದೂ, ತ್ರ ಎಂದರೆ ತ್ರಾಣ(ರಕ್ಷಣೆ) ಎಂದೂ ಅರ್ಥ. ಈ ಮನೋ ರಕ್ಷಣೆಗಳಿಂದ ಮಂತ್ರವೆಂಬ ಅಕ್ಷರ ದ್ವಯವು ಏರ್ಪಾಡಾಗಿದ್ದು ಪಾಪ ತಾಪಗಳನ್ನು ಹರಿಸುವುದು. ಜಕಾರವು ಜನ್ಮವಿಚ್ಛೇದ ಮಾಡುವುದು. ಪಕಾರವು ಪಾಪ ನಾಶಕವು. ಈ ಎರಡು ಅಕ್ಷರಗಳು ಕಲೆಯುವುದರಿಂದ ಉಂಟಾದ ಜಪವು ಪಾಪ ಜನ್ಮವನ್ನು ನಿವರ್ತಿಸುವಂತೆ ಮಾಡಬಲ್ಲುದು. ಸರ್ವ ವೇದಗಳಿಗೂ ಮೂಲವು ಗಾಯತ್ರಿಯೇ! ಇದು ಸರ್ವ ಸಮ್ಮತವಾದದ್ದು. ಗಾಯತ್ರಿ ಜಪದಿಂದ ವೇದ ಪಾಠಫಲವು ಲಭಿಸುತ್ತದೆ. ಗಾಯತ್ರಿ ಜಪವನ್ನು ಮಾಡದವನ ಜನ್ಮ ಹಂದಿಯ ಜನ್ಮದಂತೆ ವ್ಯರ್ಥ. ಗಾಯತ್ರಿ ಜಪ ಮಾಡುವವರು ಅಭೀಷ್ಟ ಪಲಗಳನ್ನು ಹೊಂದ ಬಲ್ಲರು. ಗಾಯತ್ರಿ ಸಾರವು ಮಾತ್ರವೇ ಸಾರವಾಗುಳ್ಳ ಬ್ರಾಹ್ಮಣನು ಮಾಡಿದರೂ, ಮಾಡದಿದ್ದರೂ ಅದು ಬೇರೆಯ ವಿಷಯವೇ. ಅಂತಹವನು ಮೈತ್ರ ಬ್ರಾಹ್ಮಣನು. ನೀರಿನಲ್ಲಿ ಜಪ ಮಾಡುವವನಿಗೆ ಪ್ರಜ್ಞಾ ಹಾನಿ ಉಂಟಾಗುವುದು. ಶ್ರುತ್ಯುಕ್ತವಾದಂತೆ ಅಗ್ನಿತ್ರಯವು ವಿಶ್ವಕ್ಕೆ ಔಷಧಗಳಾಗಿ ನೀರಿನಲ್ಲಿವೆ. ದಕ್ಷಿಣಾಗ್ನಿ, ಗಾರ್ಹಪತ್ಯಾಗ್ನಿ, ಆಹವನೀಯಾಗ್ನಿ ಎನ್ನುವ ಮೂರು ಅಗ್ನಿಗಳು ಜಲದಲ್ಲಿವೆ. ಆದ್ದರಿಂದ ಅಂತಹ ಜಲದಲ್ಲಿ ಜಪ ಮಾಡಿದರೆ ಮಂತ್ರ ತೇಜಸ್ಸು ನಶಿಸಿ ಹೋಗುವುದು. ಆದ್ದರಿಂದಲೇ ನೀರಿನಲ್ಲಿ ಮಾಡಿದ ಜಪವು ವ್ಯರ್ಥ. ಶುಭಾಸನದಲ್ಲಿ ಕೂತು ನಾಭಿ ದೇಶದಲ್ಲಿ ಮಾಲಧಾರನಾಗಿ ಪ್ರಾತಃಕಾಲದಲ್ಲಿ ಮಂತ್ರ ಜಪ ಮಾಡಬೇಕು. ಮಧ್ಯಾಹ್ನ ಕಾಲದಲ್ಲಿ ಹೃದಯ ಸ್ಥಾನದಲ್ಲಿ ಜಪಮಾಲಾಧರನಾಗಿ ಜಪ ಮಾಡಬೇಕು. ಆಗ ನಿಂತು ಅಥವಾ ಕೂತು ಜಪ ಮಾಡಬೇಕು ಎನ್ನುವ ಎರಡು ಪಕ್ಷಗಳಿವೆ. ಸಾಯಂಕಾಲದಲ್ಲಿ ಕೂತು ವೃಕ್ಷಾಗ್ರವನ್ನು ನೋಡುತ್ತಾ, ವೃಕ್ಷಗಳಿಲ್ಲದಿದ್ದರೆ ನಾಸಾಗ್ರದಲ್ಲಿ ದೃಷ್ಟಿಯನ್ನಿಟ್ಟು ಜಪ ಮಾಡಬೇಕು. ಗೃಹಸ್ಥನು ನೂರೆಂಟು ಸಲ ತ್ರಿಕಾಲದಲ್ಲಿ ಜಪ ಮಾಡಬೇಕು. ವಾನಪ್ರಸ್ಥ, ಸನ್ಯಾಸಿಗಳು ತ್ರಿಕಾಲದಲ್ಲೂ ಸಹಸ್ರ ಗಾಯತ್ರಿ ಮಾಡಬೇಕು. ಆರ್ತನಾಗಿದ್ದರೂ ದ್ವಿಜನಾದವನು ನೂರೆಂಟು ಸಲ ಗಾಯತ್ರಿ ಮಾಡಬೇಕು. ಇಲ್ಲವೇ ಇಪ್ಪತ್ತೆಂಟು ಸಲ ಅಥವಾ ಶಕ್ತಿಯಿದ್ದರೆ ಅದಕ್ಕಿಂತ ಹೆಚ್ಚಾಗಿ ಮಾಡಬೇಕು. ಮಾನಸ ಜಪವು ಉತ್ತಮವು. ಮೆಲ್ಲಗೆ ಉಚ್ಚರಿಸುತ್ತಾ ಮಾಡುವ ಜಪವು ಮಧ್ಯಮವು. ಬೇರೆಯವರಿಗೆ ಕೇಳಿಸುವಂತೆ ಜೋರಾಗಿ ಹೇಳುತ್ತ ಮಾಡುವ ಜಪವು ಅಧಮವು. ವ್ಯಾಹೃತಿಗಳಿಂದ ಕೂಡಿದ ತ್ರಿಪದಿಯಾದ ಗಾಯತ್ರಿಯನ್ನು ಓಂಕಾರ ಸಹಿತವಾಗಿ ಜಪಿಸುವವನ ಮಹಾಪಾಪಗಳು ಎಲ್ಲವೂ ನಾಶವಾಗುತ್ತವೆ. ಪ್ರತಿಪಾದವನ್ನು ಉಚ್ಚರಿಸಿದ ಮೇಲೆ ನಿಲ್ಲಿಸಿ ಮತ್ತೆ ಮುಂದಿನ ಪಾದವನ್ನು ಉಚ್ಚರಿಸಿ ಭಕ್ತಿಯಿಂದ ಜಪ ಮಾಡುವವನ ಮಹಾದೋಷಗಳೂ ನಾಶವಾಗುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ವಿಪ್ರನು ಅವಶ್ಯವಾಗಿ ಗಾಯತ್ರಿ ಜಪವನ್ನು ಮಾಡಿದರೆ ಬ್ರಹ್ಮಹತ್ಯಾದಿ ಪಾತಕಗಳೂ ತೊಲಗಿ ಹೋಗಿ ಅನಂತ ಪುಣ್ಯವು ಲಭಿಸುವುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಜಪ ಮಾಡುವಾಗ ಕೈಕೊನೆ ಮುಟ್ಟುತ್ತಾ ಲೆಕ್ಕವಿಟ್ಟು ಮಾಡಿದರೆ ಏಕ ಗುಣ ಫಲವು. ಕೈಬೆರಳುಗಳ ಗಿಣ್ಣುಗಳನ್ನೆಣಿಸುತ್ತಾಮಾಡಿದರೆ ದಶ ಗುಣ ಫಲವು. ಶಂಖ ಅಥವಾ ಮಣಿಗಳನ್ನೆಣಿಸಿ ಮಾಡಿದರೆ ನೂರು ಗುಣ ಫಲವು. ಪಗಡೆಗಳಿಂದ ಮಾಡಿದ ಮಾಲೆಯಿಂದ ಎಣಿಸುತ್ತಾ ಮಾಡಿದರೆ ಸಹಸ್ರ ಗುಣ ಫಲವು. ಮುತ್ತುಗಳಿಂದ ಮಾಡಿದ ಮಾಲೆಯಿಂದ ಎಣಿಸುತ್ತಾ ಮಾಡಿದರೆ ಲಕ್ಷ ಗುಣ ಫಲ ಲಭ್ಯ. ಸ್ಫಟಿಕ ಮಣಿಗಳಿಂದ ಎಣಿಸಿದರೆ ಹತ್ತು ಸಾವಿರ ಗುಣ ಫಲ. ಪದ್ಮಗಳಿಂದ ಎಣಿಸಿದರೆ ಹತ್ತು ಲಕ್ಷ ಗುಣ ಫಲ. ಚಿನ್ನದ ಮಣಿಗಳಿಂದ ಕೋಟಿ ಗುಣ. ರುದ್ರಾಕ್ಷಿಗಳಿಂದ ಲೆಕ್ಕ ಮಾಡುತ್ತಾ ಜಪ ಮಾಡಿದರೆ ಅನಂತ ಪುಣ್ಯ ಫಲ ಲಭ್ಯ. ದರ್ಭೆಯ ಗಂಟುಗಳಿಂದ ಕೂಡಿದ ಮಾಲೆಯಿಂದ ಎಣಿಸಿ ಮಾಡಿದ ಜಪವೂ ಕೂಡಾ ಬಹು ಪುಣ್ಯ ಫಲದಾಯಕವು. ನಿಶ್ಚಲನಾಗಿ, ಮಾಲೆಯಿಂದ ಯಾವುದೇ ಶಬ್ದ ಬರದ ಹಾಗೆ ಜಪ ಮಾಡಬೇಕು. ಸರಿಯಾಗಿ ಪೋಣಿಸಿ ಮಾಡಿದ ಮಾಲೆಯನ್ನು ವಸ್ತ್ರದಿಂದ ಮುಚ್ಚಿ ಜಪ ಮಾಡಬೇಕು. ಹೆಬ್ಬೆರಳು ಮಧ್ಯದ ಬೆರಳುಗಳ ಮಧ್ಯೆ ಮಾಲೆಯನ್ನಿಟ್ಟು ಮಣಿಗಳನ್ನು ಒಂದೊಂದಾಗಿ ತಳ್ಳುತ್ತಾ ಮಂತ್ರ ಜಪ ಮಾಡಬೇಕು. ಮಾಲೆಯಲ್ಲಿರುವ ಮೇರು ಮಣಿಯನ್ನು ದಾಟಿ ಜಪ ಮಾಡಬಾರದು. (ಹಾಗೆ ದಾಟಿದರೆ) ಮೂರುಸಲ ಪ್ರಾಣಾಯಾಮ ಮಾಡಿದರೆ ಮೇರು ಮಣಿಯನ್ನು ದಾಟಿದುದರಿಂದ ಉಂಟಾದ ಪಾಪವು ನಾಶವಾಗುವುದು. ಮೂರುದಿನಗಳು ನಿಯಮದಿಂದ ಗಾಯತ್ರಿಜಪ ಮಾಡಿದರೆ ತ್ರಿವಿಧವಾದ ಪಾಪಗಳೂ ನಾಶವಾಗುವುವು. ಸಂಧ್ಯಾವಂದನೆಯ ಸಮಯದಲ್ಲಿ ಅಲ್ಲದೆ ಬೇರೆಯಾಗಿ ನೂರೆಂಟು ಗಾಯತ್ರಿ ಜಪ ಮಾಡಿದರೆ ಲಘು ಪಾಪಗಳು ನಾಶವಾಗುತ್ತವೆ. ಸಹಸ್ರ ಗಾಯತ್ರಿ ಜಪದಿಂದ ಉಪಪಾಪಗಳು ನಾಶವಾಗುತ್ತವೆ. ಕೋಟಿ ಗಾಯತ್ರಿ ಮಹಾದೇವಿ ಜಪದಿಂದ ಮಹಾಪಾಪಗಳೂ ನಾಶವಾಗುತ್ತವೆ. ಜಪ ಮಾಡಿದವನ ಕೋರಿಕೆಗಳೂ ಸಿದ್ಧಿಸುತ್ತವೆ. ಜಪಮಾಡಿ ಹಣ ಪಡೆಯುವವನಿಗೆ ಬಹಳ ದೋಷಗಳುಂಟಾಗುತ್ತವೆ. ದ್ರವ್ಯ ದಾನಕ್ಕಾಗಿ ಜಪ ಮಾಡುವವನು ಚಂಡಾಲ ಸ್ತ್ರೀಯಲ್ಲಿ ಹುಟ್ಟುತ್ತಾನೆ. ಜಪ ಮಾಡುವಾಗ ಅತ್ತಿತ್ತ, ಸುತ್ತ ಮುತ್ತ ನೋಡದೆ, ನಿಶ್ಚಲವಾದ ಮನಸ್ಸಿನಿಂದ ಜಪ ಮಾಡಬೇಕು. ಜಪ ಮಾಡುವಾಗ ಯಾರೊಡನೆಯೂ ಮಾತನಾಡಬಾರದು. ಶೂದ್ರಾದಿಗಳ ಸನ್ನಿಧಿಯಲ್ಲಿ ಜಪ ಮಾಡಬಾರದು. ಜಪ ಕಾಲದಲ್ಲಿ ಎಂದೂ ಉಗುಳುವುದು ಮುಂತಾದ್ದನ್ನು ಮಾಡಬಾರದು. ಅಜ್ಞಾನದಿಂದಾಗಿ ಜಪ ಕಾಲದಲ್ಲಿ ಏನಾದರೂ ಲೋಪವಾದರೆ, ಬಲಕಿವಿಯನ್ನು ಮುಟ್ಟಿ ವಿಷ್ಣುನಾಮ ಸ್ಮರಣೆ ಮಾಡಿದರೆ ದೋಷ ಪರಿಹಾರವಾಗುವುದು. ದಶದೇವತೆಗಳ ನಿವಾಸ ಸ್ಥಾನವಾದ ಬಲಕಿವಿಯನ್ನು ಮುಟ್ಟುವುದರಿಂದಲೇ ಬ್ರಾಹ್ಮಣನ ದೋಷಗಳು ನಾಶವಾಗುವುವು. ಜಪ ಮಾಡುವಾಗ ಚಂಡಾಲನು ದೃಷ್ಟಿಗೆ ಬಿದ್ದರೆ ದ್ವಿರಾಚಮನಗಳಿಂದ ಆ ದೋಷವು ಶುದ್ಧಿಯಾಗುತ್ತದೆ. ಪತಿತರೊಡನೆ ಸಂಭಾಷಣೆ ಮಾಡಿದರೆ ಸ್ನಾನ ಮಾಡುವುದರಿಂದ ಶುದ್ಧಿಯಾಗುತ್ತದೆ. ಆದ್ದರಿಂದ ಎಲ್ಲ ವಿಧದಿಂದಲೂ ಪ್ರಯತ್ನಪಟ್ಟು ಜಪ ಕಾಲದಲ್ಲಿ ಮೌನವಾಗಿರಬೇಕು. ಸ್ವಜಾತಿಯವರೊಡನೆ ಮಾತನಾಡಲೇ ಬೇಕಾದ ಸಂದರ್ಭ ಬಂದರೆ "ತದ್ವಿಷ್ಣೋಃ---------"ಎಂಬ ಮಂತ್ರವನ್ನು ಹೇಳಿಕೊಂಡರೆ / ಪಠಿಸಿದರೆ ಕರ್ಮ ಲೋಪವು ತಟ್ಟುವುದಿಲ್ಲ. ಜಪ ಸಮಯದಲ್ಲಿ ನಿದ್ರೆ ಬಂದರೂ ಅಥವಾ ಅಪಾನವಾಯು ಹೊರಗೆ ಬಂದರೂ ಇಲ್ಲವೇ ಆಕಳಿಕೆ ಬಂದರೂ, ಕೋಪ ಬಂದರೂ, ತಿಳಿದಾಗಲೀ ತಿಳಿಯದೆ ಆಗಲೀ ಏನಾದರೂ ದೋಷವುಂಟಾದರೆ ಶ್ರೋತ್ರಾಚಮನ ಮಾಡಿ ಶುಚಿಯಾಗಿ, ಸೂರ್ಯ/ಗೋವನ್ನು ನೋಡಿ, " ಇದಂ ವಿಷ್ಣುಃ ---------"ಎನ್ನುವ ಮಂತ್ರ ಪಠಣ ಮಾಡಿದರೆ ದೋಷ ನಾಶವಾಗುತ್ತದೆ ಎಂದು ಹಿಂದೆಯೇ ಹೇಳಲ್ಪಟ್ಟಿದೆ. ಈ ರೀತಿಯಲ್ಲಿ ಎಲ್ಲವನ್ನು ತಿಳಿದು ಜಪ ಮಾಡಿದರೆ ಸಿದ್ಧಿಗಳೆಲ್ಲವೂ ಕೈಗೂಡುತ್ತವೆ ಎಂದು ಋಷಿಗಳು ಹೇಳಿದ್ದಾರೆ. ಮೈತ್ರ ಮಂತ್ರಗಳನ್ನು ಪ್ರಾತಃಕಾಲ, ಸೌರಮಂತ್ರಗಳನ್ನು ಮಧ್ಯಾಹ್ನ, ವಾರುಣ ಮಂತ್ರಗಳನ್ನು ಸಾಯಂಕಾಲ, ಸಮಯಗಳಲ್ಲಿ ಸಂಧ್ಯೋಪಾಸನೆಯೊಡನೆ ಜಪಿಸಬೇಕು. ತಮ್ಮ ತಮ್ಮ ಸೂತ್ರಗಳಿಗೆ ವಿಹಿತವಾದ ಮಂತ್ರಗಳನ್ನು ಕೂಡಾ ಯಥಾ ವಿಧಿಯಾಗಿ ಋಷಿಗಳು ಮುಂತಾದವರನ್ನು ಸ್ಮರಿಸಿ ಜಪ ಮಾಡಬೇಕು. ಹಿರಿಯರ ಆಚಾರಗಳನ್ನು ಪ್ರಮಾಣವಾಗಿ ಸ್ವೀಕರಿಸಿ ಗುರುಗಳಿಗೆ ಅಭಿನಂದನೆ ಮಾಡಬೇಕು. ದಿಕ್ಕುಗಳಿಗೆ, ಆಯಾ ದಿಕ್ಪಾಲಕರಿಗೆ ಪ್ರದಕ್ಷಿಣೆ ಮಾಡಿ ದ್ವಿಜನಾದವನು ನಮಸ್ಕಾರ ಮಾಡಬೇಕು. ಗೋತ್ರ ಪ್ರವರಗಳನ್ನುಚ್ಚರಿಸಿ, ಶರ್ಮ/ವರ್ಮ ಮುಂತಾದ ಸಂಪ್ರದಾಯಗಳಿಗೆ ಸೇರಿದ ಹೆಸರು ಹೇಳಿ ನಮಸ್ಕರಿಸಬೇಕು.

ಹೀಗೆ ಸಂಧ್ಯೆಯನ್ನಾಚರಿಸಿ ಗೃಹಸ್ಥನು ಔಪಾಸನೆ/ಉಪಾಸನೆ ಮಾಡಬೇಕು. ವಿವಾಹಾನಂತರ ಪ್ರಾತಃಕಾಲದಲ್ಲಿ/ಸಾಯಂಕಾಲದಲ್ಲಿ ನಿತ್ಯ ನೈಮಿತ್ತಿಕ ಹೋಮಗಳನ್ನು ಮಾಡಬೇಕು. ಸಾಯಂಕಾಲದಲ್ಲಿ ಪ್ರಾರಂಭ ಮಾಡಿ ಎರಡುಸಲ ಹೋಮ ಮಾಡಬೇಕು. ಉದಿತ-ಅನುಪಾಕ ಎನ್ನುವ ಎರಡೂ ಪಕ್ಷಗಳಲ್ಲಿಯೂ ಬೆಳಗ್ಗೆ-ಸಾಯಂಕಾಲ ಎರಡೂ ಹೊತ್ತು ಎರಡುಸಲ ಹೋಮ ಮಾಡಬೇಕು. ನೆಲದ ಮೇಲಾಗಲೀ ಅಥವಾ ಹಲಗೆಯ ಮೇಲಾಗಲೀ ಇರುವ ಅಗ್ನಿಯಲ್ಲಿ ಹೋಮ ಮಾಡಬಾರದು. ಸ್ಥಂಡಿಲ ಅಥವಾ ಹೋಮ ಕುಂಡದಲ್ಲಿ ಅಗ್ನಿಯನ್ನು ಪ್ರತಿಷ್ಠಿಸಿ ಸುತ್ತಲೂ ಜಲಶುದ್ಧಿ ಮಡಿ ಹೋಮ ಮಾಡಬೇಕು. ಸೂರ್ಯೋದಯಕ್ಕೆ / ಸೂರ್ಯಾಸ್ತಮಯಕ್ಕೆ ಮುಂಚೆಯೇ ಅಗ್ನಿಯನ್ನು ಪ್ರಜ್ವಲಿಸಿ, ಸೂರ್ಯ ಉದಯ-ಅಸ್ತಮಾನಗಳಿಗೆ ಮುಂಚೆಯೇ ಉರಿಯುತ್ತಿರುವ ಅಗ್ನಿಯಲ್ಲಿ ಹೋಮ ಮಾಡಬೇಕು. ಮೊರದಿಂದ ಅಗ್ನಿಯನ್ನು ಪ್ರಜ್ವಲಿಸುವಂತೆ ಮಾಡಬಾರದು. ಎಲೆಗಳಿಂದ ಬೀಸಿದರೆ ವ್ಯಾಧಿ, ಮೊರದಿಂದ ಧನಕ್ಷಯ, ಕೈಯಲ್ಲಿ ಬೀಸಿದರೆ ಮೃತ್ಯು, ಮುಖದಿಂದ ಪ್ರಜ್ವಲಿಸಿದರೆ ಆಯು ಕ್ಷಯ ಉಂಟಾಗುವುವು. ಬಿದಿರಿನ ಕೊಳವೆಯಿಂದ ಊದಿ, ಇಲ್ಲದಿದ್ದರೆ ಬೀಸಣಿಗೆಯಿಂದ ಬೀಸಿ ಅಗ್ನಿಯನ್ನು ದೀಪ್ತಗೊಳಿಸಬೇಕು. ಒಣಗಿದ ಕಟ್ಟಿಗೆಯ ತುಂಡುಗಳನ್ನು ಹಾಕಿ ಜ್ವಾಲೆಯನ್ನು ಎಬ್ಬಿಸಿ (ಏಳುವಂತೆ ಮಾಡಿ) ಯಥಾವಿಧಿಯಾಗಿ ಧ್ಯಾನ ಮಾಡಿ, ಜ್ವಾಲೆಗಳು ಚೆನ್ನಾಗಿ ಉರಿಯುತ್ತಿರುವಾಗ ಹೋಮ ಮಾಡುವುದು ಸರಿಯಾದ ರೀತಿ. ಮೊದಲು ಸಮಿತ್ತುಗಳನ್ನು ಹೋಮ ಮಾಡಿ, ನಂತರ ಸಿದ್ಧ ಪಡಿಸಿದ ಹೋಮ ದ್ರವ್ಯಗಳನ್ನು ಹೋಮ ಮಾಡಬೇಕು. ಸಮಿತ್ತುಗಳು, ಪುಷ್ಪಗಳು, ದೂರ್ವೆಗಳು ಮುಂತಾದುವನ್ನು ಶೂದ್ರರು ತಂದಿದ್ದರೆ ಅದು ನಿಂದ್ಯವಾಗುತ್ತದೆ. ಕೊಂಡು ತಂದವೂ ನಿಂದ್ಯವಾದದ್ದೇ!

ಹೋಮಕ್ಕೆ ಬೇಕಾದ ದ್ರವ್ಯಗಳನ್ನು ಹೇಳುತ್ತೇನೆ. ನೀವಾರ, ಬತ್ತ (ಅರವತ್ತು ದಿನಗಳ ಬೆಳೆ-ಸಣ್ಣದಾಗಿರುವುದು), ಅದರಿಂದ ಸಿದ್ಧ ಪಡಿಸಿದ ಅಕ್ಕಿ ಶ್ರೇಷ್ಠ, ಗೋಧಿ, ಯವ, ಜವೆಗೋಧಿ, ಯಾವನಾಳ(ಜೋಳ)ವೂ ಶ್ರೇಷ್ಠ. ಗೋರಸ(ಹಾಲು), ಮಜ್ಜಿಗೆ ಮುಖ್ಯವಾದದ್ದು. ಅರವತ್ತು ದಿನಗಳಲ್ಲಿ ಬೆಳೆದು ಸಿದ್ಧವಾದ ಧಾನ್ಯವನ್ನು ಮೊದಲು ಹೋಮ ಮಾಡಬೇಕು. ತುಪ್ಪದಲ್ಲಿ ನೆನಸಿದ್ದು ಹೆಚ್ಚಾದರೂ ಪರವಾಗಿಲ್ಲ ಆದರೆ ಕಡಮೆಯಾಗದಂತೆ ಎರಡನೆಯ ಆಹುತಿ ಕೊಡಬೇಕು. ತುಪ್ಪವಿಲ್ಲದಿದ್ದಲ್ಲಿ ಎಳ್ಳೆಣ್ಣೆಯೂ ಪ್ರಶಸ್ತವೇ! ಎಳ್ಳು ಕೂಡಾ ಹೋಮ ಮಾಡುವಂತಹುದೇ. ಅದು ಕೂಡಾ ಹೋಮ ಯೋಗ್ಯತೆಯುಳ್ಳದ್ದು ಎಂದು ತಿಳಿದವರು ಹೇಳುತ್ತಾರೆ. ಉಪಸ್ಥಾನ (ಮಂತ್ರಪೂರ್ವಕ ಧ್ಯಾನವು) ಮಾಡಿ, ಮೇಲೆ ಹೇಳಿದಂತೆ ಹೋಮವನ್ನಾಚರಿಸಿ, ನಂತರ ಬ್ರಹ್ಮಯಜ್ಞವನ್ನು, ತರ್ಪಣವನ್ನು ಬಹಿಃ ಪ್ರದೇಶದಲ್ಲಿ ಮಾಡಬೇಕು. ಆ ತರ್ಪಣಾದಿಗಳು ಹೇಗೆ ಎಂಬುದನ್ನು ಹೇಳುತ್ತೇನೆ.

ಮಧ್ಯಾಹ್ನ ಸಂಧ್ಯೆಯಾದ ಮೇಲಾಗಲೀ, ಪ್ರಾತಃ ಹೋಮವಾದ ಮೇಲಾಗಲೀ, ವೈಶ್ವ ದೇವವನ್ನು ಮುಗಿಸಿದ ನಂತರವಾಗಲೀ, ಬ್ರಹ್ಮ ಯಜ್ಞವನ್ನು ಒಂದುಸಲ ಮಾಡಬೇಕು. ಜಲಾಶಯಕ್ಕೆ ಸಮೀಪದಲ್ಲಿ ಬ್ರಹ್ಮ ಯಜ್ಞ ಮಾಡುವುದು ಪ್ರಶಸ್ತವು. ಸ್ನಾನ, ಆಚಮನ, ಪ್ರಾಣಾಯಾಮ ಮಾಡಿ, "ವಿದ್ಯುದಸಿ____" ಎನ್ನುವ ಮಂತ್ರವನ್ನು ಜಪಿಸಬೇಕು. ಎಡ ತೊಡೆಯ ಮೇಲೆ ಬಲಪಾದವನ್ನಿಟ್ಟು ಕೂತು,ಎಡ ಕೈಯಲ್ಲಿ ದೂರ್ವೆ ಹಿಡಿದು, ಬ್ರಾಹ್ಮಣನು ಎರಡೂ ಕೈಗಳನ್ನು ಜೋಡಿಸಿ, ಎರಡನ್ನು ಬಲಪೃಷ್ಠದ ಮೇಲಿಟ್ಟು, ಭೂಮ್ಯಾಕಾಶಾದಿಗಳ ಸಂಧಿಯನ್ನು ನೋಡುತ್ತಾ, ಜಪಿಸಬೇಕು. ಓಂಕಾರವನ್ನು ವ್ಯಾಹೃತಿಗಳೊಡನೆ ಸೇರಿಸಿ ಗಾಯತ್ರಿ ಮಂತ್ರವನ್ನು ಮೂರುಸಲ ಜಪಿಸಬೇಕು. ಪಾದ ಕ್ರಮದಲ್ಲಿ, ಅರ್ಥ ಮಂತ್ರ ಕ್ರಮದಲ್ಲಿ, ಮಂತ್ರ ಕ್ರಮವನ್ನು ಸಾಂಗವಾದ ವೇದವನ್ನು ಕ್ರಮವಾಗಿ ಪಠಿಸಬೇಕು. ಸ್ವಾಧ್ಯಾಯ ದಿನಗಳಲ್ಲಿ ದ್ವಿಜನು ಯಥಾ ಶಕ್ತಿಯಾಗಿ ವೇದವನ್ನು ಜಪಿಸಬೇಕು. ಅನಧ್ಯಯನವು ಬಂದಾಗ ದ್ವಿಜನು ಸ್ವಲ್ಪವಾಗಿ ವೇದ ಜಪ ಮಾಡಬೇಕು. ಅಧ್ಯಾಯವನ್ನಾಗಲೀ, ಸೂಕ್ತವನ್ನಾಗಲೀ, ಅದಕ್ಕೂ ಶಕ್ತಿಯಿಲ್ಲದಿದ್ದರೆ ಋಕ್ಕುಗಳನ್ನಾಗಲೀ ಮಂತ್ರವನ್ನು ಮೂರು ಆವೃತ್ತಿ ಹೇಳಿ, ಕೊನೆಗೆ, "ನಮೋಬ್ರಹ್ಮಣೇ----" ಎನ್ನುವ ಮಂತ್ರವನ್ನೂ, "ವೃಷ್ಟಿರಪಿ-----" ಎನ್ನುವ ಮಂತ್ರವನ್ನೂ ಹೇಳಿ, ಅಂಜಲಿ ಬಿಡಬೇಕು. ಬ್ರಹ್ಮ ಯಜ್ಞವಾದ ಮೇಲೆ, ತರ್ಪಣ ಬಿಡಬೇಕು. ಅದರಲ್ಲಿ ಋಷಿಗಳು ಯಾರು ಯಾರು ಎಂಬುದನ್ನು ಹೇಳುತ್ತೇನೆ. ದೇವತೆಗಳು ವಾಸಿಸುವ ದರ್ಭೆಗಳು ಬ್ರಹ್ಮ ಯಜ್ಞದಲ್ಲಿ ಬಹು ಮುಖ್ಯವಾದವು. ಆ ದರ್ಭೆಗಳಿಂದಲೇ ವಸುಗಳು, ರುದ್ರರು, ಆದಿತ್ಯರು, ದೇವತೆಗಳು, ಪಿತೃ ದೇವತೆಗಳು ತೃಪ್ತಿಗೊಳ್ಳುತ್ತಾರೆ. ಬ್ರಹ್ಮ ಯಜ್ಞವನ್ನು ಹಗಲೇ ಮಾಡಬೇಕು. ಯಾವಾಗಲಾದರೂ ಅವಕಾಶವಿಲ್ಲದೇ ಹೋದರೆ ಗಾಯತ್ರಿಯನ್ನು ಮೂರುಸಲ ಪಠಿಸಿದರೆ ವೇದಪಾಠ ಫಲವು ಲಭಿಸುವುದು. ಕುಶಾಗ್ರಗಳಿಂದ ಜವೆಗೋಧಿ(ಯವ)ಯೊಡನೆ ನೀರು ಬಿಡುತ್ತಾ, ದೇವ ತೀರ್ಥದಿಂದ ದೇವತೆಗಳಿಗೆ, ಋಷಿ ತೀರ್ಥದಿಂದ ಋಷಿಗಳಿಗೆ, ಪಿತೃ ತೀರ್ಥದಿಂದ ಪಿತೃಗಳಿಗೆ, ತರ್ಪಣ ಕೊಡಬೇಕು. ದೇವ-ಋಷಿ-ಪಿತೃ ತೀರ್ಥಗಳೆಂದರೇನು ಎಂಬುದನ್ನು ಹಿಂದೆಯೇ ಹೇಳಲಾಗಿದೆ. ಪಾತ್ರೆಯಲ್ಲಿ, ಜಲಾಶಯದಲ್ಲಿ, ತರ್ಪಣ ಕೊಡಬಾರದು. ಭೂಮಿಯ ಮೇಲೆ, ಮನೆಯಲ್ಲಿಯೂ ಕೂಡಾ ತರ್ಪಣವು ನಿಷಿದ್ಧವೇ! ಭೂಮಿಯ ಮೇಲೆ ದರ್ಭೆಗಳನ್ನು ಹರಡಿ ಅದರ ಮೇಲೆ ತರ್ಪಣ ಕೊಡಬೇಕು. ನಾಮ ಗೋತ್ರಾದಿಗಳನ್ನು ಉಚ್ಚರಿಸಿ, ಭಕ್ತಿ ಪೂರ್ವಕವಾಗಿ ತರ್ಪಣ ಕೊಡಬೇಕು. ಪಿತೃಗಳಿಗೆ ತಿಲಾಂಜಲಿಯಲ್ಲಿ ತರ್ಪಣ ಕೊಡಬೇಕು. ಕಲ್ಲಿನ ಮೇಲೆ, ಮರದ ಪಾತ್ರೆಯಲ್ಲಿ, ಭೂಮಿಯ ಮೇಲೆ ತಿಲಗಳನ್ನು ಇಡಬಾರದು. ಕೂದಲುಗಳು ಮುಂತಾದುವು ತುಂಬಿರುವ ಸ್ಥಳಗಳಲ್ಲಿ ಇಟ್ಟ ತಿಲವು ಕ್ರಿಮಿಗಳಿಗೆ ಸಮಾನವು. ಆದ್ದರಿಂದ ಅವು ನಿಷಿದ್ಧ. ಮನೆಯಲ್ಲಿ ತರ್ಪಣ ಕೊಡುವಾಗ, ಮನೆಯಲ್ಲಿನ ಎಳ್ಳು ಎಂದೂ ತೆಗೆದುಕೊಳ್ಳಬಾರದು. ಹೊರಗಡೆ, ಜಲಾಶಯಗಳಲ್ಲಿ ದಿನವೂ ತಿಲ ತರ್ಪಣ ಮಾಡಬೇಕು. ಬಿಳಿಯ ಎಳ್ಳು ದೇವತೆಗಳಿಗೆ, ಧೂಮ್ರ ವರ್ಣದ್ದು ಋಷಿಗಳಿಗೆ, ಕರಿಯ ಎಳ್ಳು ಪಿತೃಗಳಿಗೆ ಪ್ರಶಸ್ತವಾದವು. ದೇವಕಾರ್ಯ ಮಾಡುವಾಗ ಜನಿವಾರ ದಿನವೂ ಹಾಕಿಕೊಳ್ಳುವ ಹಾಗೆ ಸವ್ಯ ರೀತಿಯಲ್ಲಿ ಇರಬೇಕು. ಋಷಿ ಕಾರ್ಯಗಳಿಗೆ ಮಾಲೆಯಂತೆ, ಪಿತೃ ಕಾರ್ಯಗಳಿಗೆ ಪ್ರಾಚೀನಾವೀತಿ(ಅಪಸವ್ಯ-ಬಲಭುಜದ ಮೇಲೆ ಇರುವ ಹಾಗೆ) ಹಾಕಿಕೊಂಡು ಮಾಡಬೇಕು. ದೇವತೆಗಳಿಗೆ ಒಂದು ಅಂಜಲಿ (ಬೊಗಸೆ), ಋಷಿಗಳಿಗೆ ಎರಡು, ಪಿತೃಗಳಿಗೆ ಮೂರು ಅಂಜಲಿಯಂತೆ ಬ್ರಾಹ್ಮಣನಾದವನು ತರ್ಪಣ ಕೊಡಬೇಕು. ಅನ್ಯಸ್ತ್ರೀಯರಿಗೆ ಒಂದು, ಮಾತೆಯರಿಗೆ ಮೂರು, ಆಚಾರ್ಯಪತ್ನಿಗೆ / ಮಲತಾಯಿಗೆ ಎರಡು ಅಂಜಲಿ ತರ್ಪಣ ಕೊಡಬೇಕು.

ದೇವತೆಗಳಿಗೆ, ಋಷಿಗಳಿಗೆ ತರ್ಪಣ ಮಾಡುವುದಕ್ಕೆ ಮುಖ್ಯವಾಗಿ ಅಕ್ಷತೆಗಳನ್ನೇ ತೆಗೆದುಕೊಳ್ಳಬೇಕು. ಪಿತೃತರ್ಪಣಕ್ಕೆ ಕರಿಎಳ್ಳು. ಇವು ಅಂತ್ಯವಿಲ್ಲದ ಪುಣ್ಯವನ್ನು ಕೊಡುವುದು. ಶುಕ್ರವಾರ, ಭಾನುವಾರ, ಮಂಗಳವಾರಗಳಲ್ಲಿ, ನಂದಾ ತಿಥಿಗಳಲ್ಲಿ, ಜನ್ಮ ನಕ್ಷತ್ರದಂದು, ಮಘಾ ನಕ್ಷತ್ರದಂದು ತಿಲತರ್ಪಣವನ್ನು ಮಾಡಬಾರದು. ವಿವಾಹ, ಉಪನಯನ, ಚೌಲಗಳನ್ನು ಮಾಡುವಾಗ, ತಂದೆ-ತಾತ-ಮುತ್ತಾತ ಅವರ ಸಪಿಂಡೀಖರಣವಾದ ಮೇಲೂ, ವರಸೆಯಾಗಿ ಮೂರುತಿಂಗಳು, ಆರು ತಿಂಗಳು, ವರ್ಷದವರೆಗೆ, ಶ್ರಾದ್ಧಾದಿಗಳನ್ನು ಬಿಟ್ಟು, ತಿಲತರ್ಪಣ ಮಾಡಬಾರದು. ವಿವಾಹದಲ್ಲಿ, ಜನ್ಮ ನಕ್ಷತ್ರದಲ್ಲಿ ತಿಲತರ್ಪಣ ಮಾಡಬಾರದು. ಎಳ್ಳು ನಿಷಿದ್ಧವಾದಾಗ ಜಲತರ್ಪಣ ಮಾಡಬೇಕು. ದರ್ಭೆ, ಪವಿತ್ರ, ಚಿನ್ನದ ಮುದ್ರಿಕೆಯನ್ನು ಕೈಯಲ್ಲಿ ಧರಿಸಿ ತರ್ಪಣ ಮಾಡಬೇಕು. ಕಾಲು ತೊಳೆಯದೆ ಸ್ನಾನ ಮಾಡಬಾರದು. ಎಳ್ಳಿಲ್ಲದ ತರ್ಪಣ, ದಕ್ಷಿಣೆಯಿಲ್ಲದ ಶ್ರಾದ್ಧ ನಿಷ್ಫಲವಾಗುವುದು. ಆದ್ದರಿಂದ ನಿಷೇಧಗಳಿಲ್ಲದ ದಿನಗಳಲ್ಲಿ ತಿಲತರ್ಪಣ ಮಾಡಬೇಕು. ದೀಪಾವಳಿಯ ದಿನ ಯಮನಿಗೆ ತಿಲತರ್ಪಣ ಕೊಡಬೇಕು. ಆಶ್ವಯುಜ ಕೃಷ್ಣ ಪಕ್ಷದಲ್ಲಿ ಚತುರ್ದಶಿಯಂದು ತಿಲತರ್ಪಣ ಕೊಡಬೇಕು. ಸವ್ಯವಾಗಿಯಾದರೂ, ಅಪಸವ್ಯವಾಗಿಯಾದರೂ ಯಮ ತರ್ಪಣ ಮಾಡಬಹುದು. ಯಮನ ಒಂದೊಂದು ಹೆಸರನ್ನೂ ಹೇಳುತ್ತಾ, ಬ್ರಾಹ್ಮಣನು ಮೂರು ಅಂಜಲಿ ಯಮ ತರ್ಪಣ ಕೊಡಬೇಕು. ಯಮನ ಹೆಸರುಗಳನ್ನು ಹೇಳುತ್ತೇನೆ ಕೇಳು. ಯಮಾಯ, ಧರ್ಮರಾಜಾಯ, ಮೃತ್ಯವೇ, ಅಂತಕಾಯ, ವೈವಸ್ವತಾಯ, ಕಾಲಾಯ, ಸರ್ವಭೂತಕ್ಷಯಾಯ, ಔದುಂಬರಾಯ, ದಘ್ನಾಯ, ನೀಲಾಯ, ಪರಮೇಷ್ಠಿನೇ, ವೃಕೋದರಾಯ, ಚಿತ್ರಾಯ, ಚಿತ್ರಗುಪ್ತಾಯ, ಎನ್ನುವ ಹೆಸರುಗಳಿಗೆ ತೇ ನಮಃ ಎನ್ನುವುದನ್ನು ಸೇರಿಸಿ, ಬೇರೆ ಬೇರೆಯಾಗಿ ಒಂದೊಂದು ನಾಮಕ್ಕೂ ಮೂರು ಅಂಜಲಿ ತರ್ಪಣ ಕೊಡಬೇಕು. ಈ ಯಮ ನಾಮಗಳನ್ನು ಮುನೀಶ್ವರರು ಕೀರ್ತಿಸಿದ್ದಾರೆ. ಒಂದೊಂದು ನಾಮದಿಂದಲೂ ನದೀ ತೀರಗಳಲ್ಲಿ ಯಮ ತರ್ಪಣ ಆಚರಿಸಬೇಕು. ಹಾಗೆ ತರ್ಪಣ ಮಾಡಿದರೆ, ಮಾಡಿದವರ ಪಾಪಗಳು ನಾಶವಾಗುತ್ತವೆ. ವ್ಯಾಧಿಗಳು ಅಂತಹವನನ್ನು ಪೀಡಿಸುವುದಿಲ್ಲ. ಅಪಮೃತ್ಯುಗಳು ಯಮ ತರ್ಪಣ ಕೊಟ್ಟವನ ಹತ್ತಿರವೂ ಸುಳಿಯುವುದಿಲ್ಲ. ಮಾಘ ಶುಕ್ಲ ಪಕ್ಷ ಅಷ್ಟಮೀ ತಿಥಿಯಲ್ಲಿ ರಾಜರ್ಷಿ ಶ್ರೇಷ್ಠನಾದ ಭೀಷ್ಮನಿಗೆ ತರ್ಪಣ ಕೊಟ್ಟರೆ ಸಂವತ್ಸರ ಪಾಪವು ನಾಶವಾಗುವುದು. ಬ್ರಹ್ಮ ಯಜ್ಞ ಮಾಡಿ ತರ್ಪಣ ಬಿಡಬೇಕು. ಮಧ್ಯಾಹ್ನ ಸಂಧೆಯಂದು ಯಥಾವಿಧಿಯಾಗಿ ಸೂರ್ಯನಿಗೆ ಅರ್ಘ್ಯಪ್ರದಾನ ಮಾಡಬೇಕು. 

ಹೀಗೆ ಸರ್ತ್ಕರ್ಮ ಯೋಗವನ್ನು ಶ್ರೀಗುರುವು ಬ್ರಾಹ್ಮಣನಿಗೆ ಹೇಳಿದರು ಎಂದು ಸಿದ್ಧಮುನಿಯು ನಾಮಧಾರಕನಿಗೆ ಉಪದೇಶ ಮಾಡಿದರು. 

ಇಲ್ಲಿಗೆ ಮುವ್ವತ್ತಾರನೆಯ ಅಧ್ಯಾಯ ಮುಗಿಯಿತು.